Thursday, February 4, 2010
Friday, January 29, 2010
ಜರ್ನಲಿಸಂ ಅಧ್ಯಯನ- ಅಲುಮ್ನಿ ಮೀಟ್., ತೋಬತೇಕ ಸಿಂಗ್ ನಾಟಕ. ಮಧುರ ನೆನಪುಗಳು ಮತ್ತು ಮಡುಗಟ್ಟಿರುವ ನೋವು
ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ...
ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ ಬರಲು ಪ್ರೇರಣೆಯಾಗಿದ್ದ ಗೆಳೆಯ ಎ.ವೈ. ಹಾದಿಮನಿ ಮತ್ತು ಹೊಸಮನಿ ಅವರನ್ನು ಹಾಗೂ ಒಬ್ಬ ಪ್ರೊಫೆಸರ್ ಗಿಂತ ಅಪಾರ ಜ್ಞಾನ ಹೊಂದಿದ್ದ ಮತ್ತು ಜರ್ನಲಿಸಂ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತಿದ್ದ ಮಹೇಶ್ ನಾವಳ್ಳಿ ಎನ್ನುವ ಗ್ರೇಟ್ ಸೋಲ್ ಅನ್ನು ಪ್ರೀತಿಯಿಂದ ನೆನೆಯುತ್ತೇನೆ). ಅದಕ್ಕೂ ಮುಂಚೆ ಎಂಎಸ್ಸಿ ಎರಡು ವರ್ಷ ಮಣ್ಣೆಳೆದು, ಏನೇನೋ ತಲೆಕೆಡಿಸಿಕೊಂಡು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಹಾಳುಮೂಳು ಓದಿ, ಬರೆದು ಸುಸ್ತಾಗಿ ಅದನ್ನು ಎಡಗಾಲಿಂದ ಒದ್ದು ಬಂದಿದ್ದೆ.
ಪ್ರಗತಿಪರ ಧೋರಣೆಯ ಚಿಂತನೆಗಳು ನಮ್ಮೊಳಗೆ ಉಸಿರಾಡುತ್ತಲೇ ಇದ್ದ ದಿನಗಳವು. ಈ ಸಮಾಜಕ್ಕೆ, ಜಗತ್ತಿಗೆ ಏನನ್ನಾದರೂ ಅರ್ಥಪೂರ್ಣವಾದುದನ್ನು ಕೊಡಬೇಕು. ಆ ಮೂಲಕ ನಾವೂ ಬೆಳೆಯಬೇಕು. ಹುಟ್ಟಿದ್ದು ಸಾರ್ಥಕ ಎನ್ನುವಂಥ ಕೆಲಸ ಮಾಡಬೇಕು ಅಂದುಕೊಂಡಂಥ ಗೆಳೆಯರ ಸಮರ್ಥ ಪಡೆಯೇ ಆಗಿತ್ತು. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ ಎಂದು ಖಚಿತವಾಗಿ ಹೇಳಬಲ್ಲೆ.
ನಾನಿನ್ನೂ ಡಿಗ್ರಿ (ಫಿಜಿಕ್ಸ್, ಎಲೆಕ್ಟ್ರಾನಿಕ್ಸ್) ಓದುತ್ತಿದ್ದೆ. ನಮ್ಮದೊಂದು ಮ್ಯಾಡ್ಸ್ (ಮ್ಯಾಥ್ಯೂ, ಆನಂದ್, ದಿಲ್, ಶ್ರೀಧರ್... ಈ ನಾಲ್ಕೂ ಹೆಸರಿನ ಮೊದಲ ಲೆಟರ್ ಸೇರಿ ಆಗಿದ್ದೇ ಮ್ಯಾಡ್ಸ್) ಗ್ಯಾಂಗ್ ಇತ್ತು. ಚರ್ಚೆ, ವಿಚಾರಸಂಕಿರಣ, ರೆಡಿಯೊ ಕಾರ್ಯಕ್ರಮ, ಬೀದಿನಾಟಕ, ಸ್ಟೇಜ್ ಶೋ... ಹೀಗೆಲ್ಲ ದೊಡ್ಡ ಹರವು ನಮ್ಮದು.
ಪ್ರತಿ ಶನಿವಾರ ಸಂಜೆ ನಾವೊಂದು ಗ್ರಾಮಕ್ಕೆ ತೆರಳುತ್ತಿದ್ದೆವು. ಬಸ್ ನಲ್ಲಿ ಹೋಗುವಾಗ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಮಗೆ ತೋಚಿದ ವಿಚಾರಗಳನ್ನು ಭಾಷಣ, ಚರ್ಚೆ ಮಾಡುತ್ತ ಸಾಗುತ್ತಿದ್ದೆವು. ಪ್ರಯಾಣಿಕರು ತುಂಬ ಕುತೂಹಲದಿಂದ ನಮ್ಮ ವಿಚಾರಗಳನ್ನು ಆಲಿಸುತ್ತಿದ್ದರು. ರಿಯಾಕ್ಟ್ ಮಾಡುತ್ತಿದ್ದರು.
ಸಂಜೆ ಹಳ್ಳಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೀದಿನಾಟಕದ ಶೋ ನೀಡುತ್ತಿದ್ದೆವು. ಬಡತನ, ಅನಕ್ಷರತೆ, ಲಂಚ, ಭ್ರಷ್ಟಾಚಾರ, ವಿಜ್ಞಾನ, ಮೂಢನಂಬಿಕೆ, ಕೋಮುವಾದ, ಏಯ್ಡ್ಸ್... ಹೀಗೆ ಎಲ್ಲದರ ಬಗ್ಗೆ ನಮ್ಮದೇ ಚಿಂತನೆಗಳನ್ನು ಹೇಳುವ ಬೀದಿನಾಟಕಗಳು, ವಿಚಾರಸಂಕಿರಣಗಳು... ಅದೆಷ್ಟು ಮಾಡಿದೆವೋ...
ಶ್ರೀಧರ್ ಎನ್ನುವ ಗೆಳೆಯ ಪ್ರತಿ ಭಾನುವಾರ ದಿ ಹಿಂದೂ ಪೇಪರ್ ಖರೀದಿಸುತ್ತಿದ್ದ. ಅದನ್ನು ಕೂತು ಎಲ್ಲರೂ ಪೇಜ್ ಹಂಚಿಕೊಂಡು ಓದುತ್ತಿದ್ದೆವು. ಸುಮಾರು ಹೆಚ್ಚೂ ಕಮ್ಮಿ ನಲವತ್ತು ಪುಟದಷ್ಟು ಬರುತ್ತಿದ್ದ ಆ ಪೇಪರ್ ಮುಗಿಯುವತನಕ ನಾವು ಆಜಾದ್ ಉಪವನ ಬಿಟ್ಟು ಕದಲುತ್ತಿರಲಿಲ್ಲ. ಆನಂದ ಆಗಲೇ ಟೈಂಸ್, ರೀಡರ್ಸ್ ಡೈಜೆಸ್ಟ್ ಚಂದಾದಾರನಾಗಿದ್ದ. ಆಗಾಗ ಫ್ರಂಟ್ ಲೈನ್.... ಏನೇನೋ ಮ್ಯಾಗಜೀನ್, ಏನೆಲ್ಲ ಹೊಸ ಪುಸ್ತಕಗಳನ್ನು ತರುತ್ತಿದ್ದ. ಅವನ್ನೆಲ್ಲ ಓದ್ತಾ ಇದ್ದೆವು. ಅಲ್ಲಿನ ಎಷ್ಟೊ ವಿಚಾರಗಳು ನಮ್ಮ ವಿಚಾರಕ್ಕೆ ಹೋಲುತ್ತವಲ್ಲಾ... ಎನ್ನುವ ಅಚ್ಚರಿಯೂ ನಮ್ಮೊಳಗಿತ್ತು.
ಎನ್ ಎಸ್ ಎಸ್ ನಮ್ಮ ಇಂಥ ವಿಚಾರಗಳಿಗೆ ಬಹುಮುಖ್ಯವಾದ ಪ್ಲ್ಯಾಟ್ ಫಾರಂ ಆಗಿತ್ತು ಎನ್ನುವುದು ನನ್ನ ಭಾವನೆ. ಸುಮಾರು ನೂರು ವಿದ್ಯಾರ್ಥಿಗಳ ಬ್ಯಾಚಿಗೆ ನಾನು ಲೀಡರ್. ಅದಕ್ಕಾಗಿ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದೆ. ನಾವು ಆಗ ಮಾಡಿದ ಅದೆಷ್ಟು ಕೆಲಸಗಳು ಜನಮೆಚ್ಚುಗೆ ಗಳಿಸಿಕೊಂಡಿದ್ದವು.
ಪ್ರತಿವಾರದ ಕ್ಯಾಂಪಸ್ ಚಟುವಟಿಕೆಗಳು ಮತ್ತು ಎನ್ ಎಸ್ ಎಸ್ ಬಗ್ಗೆ ನಾನೇ ಸ್ವತಃ ವರದಿ ತಯಾರಿಸಿ, ಅದಕ್ಕೆ ಫೋಟೊ (ಬ್ಲಾಕ್ ಅಂಡ್ ವೈಟ್) ಹೊಂದಿಸಿಕೊಂಡು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಕನ್ನಡಮ್ಮ, ನವನಾಡು, ವಿಶಾಲ ಕರ್ನಾಟಕ, ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್... ಪೇಪರುಗಳ ಹುಬ್ಬಳ್ಳಿ ಕಚೇರಿಗಳಿಗೆ ಕೊಟ್ಟು ಬರ್ತಿದ್ದೆ. ಸೋಮವಾರ ಅಷ್ಟೆಲ್ಲ ಪೇಪರುಗಳನ್ನು ಖರೀದಿಸಿ ವರದಿಗಳನ್ನು ಕತ್ತರಿಸಿ ಒಂದು ಡ್ರಾಯಿಂಗ್ ಶೀಟ್ ಮೇಲೆ ನೀಟಾಗಿ ಅಂಟಿಸಿ ಕಾಲೇಜಿನ ನೋಟಿಸ್ ಬೊರ್ಡಿಗೆ ಹಚ್ಚುತ್ತಿದ್ದೆ. ಬೆಳಿಗ್ಗೆ ಕ್ಯಾಂಪಸ್ ಹುಡುಗ, ಹುಡುಗಿಯರೆಲ್ಲ ಮುಗಿಬಿದ್ದು ನೋಡುತ್ತಿದ್ದರು. ಪ್ರತಿ ಸೋಮವಾರ ಎಲ್ಲರೂ ನೋಟಿಸ್ ಬೋರ್ಡ್ ನಿರೀಕ್ಷಿಸುವ ಹಾಗೆ ಮಾಡುತ್ತಿದ್ದುದು ನನಗೆ ತುಂಬ ಖುಷಿ ಕೊಡುತ್ತಿತ್ತು.
ವಾರ್ಷಿಕ ಎನ್ ಎಸ್ ಎಸ್ ವಿಶೇಷ ಶಿಬಿರಕ್ಕೆಂದು (ಒಂದು ತಿಂಗಳಿಗೂ ಹೆಚ್ಚು ಅವಧಿಯದ್ದು) ಹಳ್ಳಿಗೆ ತೆರಳುತ್ತಿದ್ದೆವು. ಆ ಹಳ್ಳಿಯಲ್ಲಿ ನಮ್ಮ ಇಡೀ ಕಾಲೇಜು ತಂಡ ಫೇಮಸ್ ಆಗಿತ್ತು. ನಾನಲ್ಲಿ ಹಲವಾರು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿದೆ. ನೂರಾರು ಕ್ರಾಂತಿ ಹಾಡುಗಳನ್ನು ಹಾಡಿದೆ. ಸಿದ್ದಲಿಂಗಯ್ಯನವರ 'ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ...' ಹಾಡು ಹೇಳುವಾಗಲಂತೂ ಮೈಕೂದಲು ನೆಟ್ಟಗಾಗುತ್ತಿದ್ದ ಉತ್ಸಾಹ, ಫೋರ್ಸ್ ಪುಟಿದೇಳುತ್ತಿದ್ದ ವಯಸ್ಸು ಅದು. ಅತ್ಯಂತ ಕಡಿಮೆ ಅವಧಿಯಲ್ಲೇ ಇಡೀ ಊರಿನ ಒಂದೊಂದು ಮನೆಗೂ ನಾವು ಅವರ ಮನೆಯ ಮಕ್ಕಳಂತೆ ಆಗಿಬಿಟ್ಟಿದ್ದೆವು.
ವಿಶೇಷ ಶಿಬಿರಕ್ಕೆ ಹಲವು ಗಣ್ಯರು ಬರುತ್ತಿದ್ದರು. ಕಾಲೇಜು ಪ್ರಿನ್ಸಿಪಾಲ್ ದೇವಧರ್ ತಪ್ಪದೇ ಬರುತ್ತಿದ್ದರು. ಪ್ರೊ ವಿಕ್ಟರ್ ನಿತ್ಯ ಬೈಬಲ್ ಓದಿ ಹೇಳುತ್ತಿದ್ದರು. ನಮಗೆಲ್ಲ ಪ್ರಾರ್ಥನೆ ಮಾಡಿಸುತ್ತಿದ್ದರು. ನಮಗ್ಯಾರಿಗೂ ಅದೊಂದು ಮುಜುಗರ ತರಲೇ ಇಲ್ಲ, ಬದಲಾಗಿ ಬೈಬಲ್ ದರ್ಶನವಾಯ್ತಲ್ಲ ಎನ್ನುವ ಭಾವನೆ ಬೆಳೆದಿತ್ತು. ಬಂದ ಗಣ್ಯರಿಗೆಲ್ಲ ಪ್ರಿನ್ಸಿಪಾಲ್ ನನ್ನನ್ನು ವಿಶೇಷವಾಗಿ ಪರಿಚಯಿಸಿ ನಮ್ಮ ಕಾಲೇಜಿನ ಹೆಮ್ಮೆಯ ಲೀಡರ್ ಎಂದು ಬೆನ್ನು ತಟ್ಟಿದ್ದನ್ನು ಮತ್ತು ಕಾಲೇಜಿನ ಸಾವನೀರ್ ನಲ್ಲಿ ಪ್ರಿನ್ಸಿಪಾಲ್ ಬರೆವ ಕಾಲೇಜಿನ ವಾರ್ಷಿಕ ವರದಿಯಲ್ಲಿ ನನ್ನ ಹೆಸರನ್ನೂ ಪ್ರಸ್ತಾಪ ಮಾಡಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಅದನ್ನು ನಾನೆಂದೂ ಮರೆಯಲಾರೆ ( ಇಂಥದೇ ಅಭಿಮಾನ ನಾನು ಎಂಎಸ್ಸಿ ಓದುತ್ತಿದ್ದಾಗ ವಿಭಾಗದ ವಾರ್ಷಿಕ ವರದಿಯಲ್ಲಿ ನನಗೆ ಒಲಿದಿತ್ತು). ಶಿಬಿರ ಮುಗಿದಾಗ ಸಮಾರೋಪ ಸಮಾರಂಭದ ನಂತರ ಮಂಡಿಹಾಳ ಊರ ಜನರೆಲ್ಲ ಸೇರಿ ನನಗೊಂದು ಸನ್ಮಾನ ಮಾಡಿದರು. ದೊಡ್ಡ ಹಾರ ಹಾಕಿ, ಕೈಗಷ್ಟು ಹೋಗುಚ್ಛ ನೀಡಿ, ಸಣ್ಣ ಕಾಣಿಕೆಯೊಂದನ್ನು ಕೊಟ್ಟು ಕೆಲವರು ಬೆನ್ನು ತಟ್ಟಿ, ಹಣೆಗೆ ಮುತ್ತನ್ನಿಟ್ಟು ತೋರಿದ ಅಕ್ಕರೆ, ಕೆಲಸ ಗುರುತಿಸಿ ನೀಡಿದ ಮನ್ನಣೆ ನನ್ನ ನೆನಪಿನಲ್ಲಿ ಸದಾ ಹಸಿರು. ಆ ಕ್ಷಣಗಳನ್ನು ನಾನೆಂದೂ ಮರೆಯಲಾರೆ.
'ಶಿಬಿರವಾಣಿ'
ಶಿಬಿರಕ್ಕೆ ಬಂದವರ ಭಾಷಣ, ವಿಚಾರ ಕೇಳಿಸಿಕೊಂಡು ನಾನೇ ವರದಿ ಬರೆಯುತ್ತಿದ್ದೆ. ಈ ಸಲ ಅವನ್ನು ಪತ್ರಿಕೆಗೆ ಕೊಡುವುದರ ಜತೆಗೆ ನಾನೇ ಒಂದು ಪುಟ್ಟ ಪತ್ರಿಕೆ ರೂಪಿಸಿ ಅದರಲ್ಲಿ ಪ್ರಕಟಿಸುವುದನ್ನು ಪ್ರಾರಂಭಿಸಿದೆ. ಅದೆಂಥ ಪತ್ರಿಕೆ ಗೊತ್ತಾ... ಒಂದಷ್ಟು ಡ್ರಾಯಿಂಗ್ ಶೀಟುಗಳು, ಅದರ ಮೇಲೆ ನೀಟಾಗಿ ಇಂಡಿಯನ್ ಇಂಕ್ ನಿಂದ ವರದಿ ಬರೆಯುತ್ತಿದ್ದೆ. ನನ್ನಣ್ಣ ತಂದುಕೊಟ್ಟ ಒಂದು ಪುಟ್ಟ ಕ್ಯಾಮೆರಾ ಇತ್ತು. ಅದರಿಂದ ತೆಗೆದ ಫೊಟೊಗಳನ್ನು ಧಾರವಾಡಕ್ಕೆ ತೆರಳಿ, ಡೆವಲಪ್ ಮಾಡಿಸಿ, ಪ್ರಿಂಟ್ ಹಾಕಿಸಿಕೊಂಡು ಬರುತ್ತಿದ್ದೆ. ಅವೇ ಫೊಟೊಗಳನ್ನು ಕ್ಯಾಪ್ಷನ್ ಸಮೇತ ವರದಿಗಳ ನಡುವೆ ಅಂಟಿಸುತ್ತಿದ್ದೆ. ಜತೆಗೆ ಕಿರುಕಥೆ, ಕವಿತೆ, ಚುಟುಕು, ಜನರಲ್ ನಾಲೆಡ್ಜ್, ಕಾರ್ಟೂನ್ ಇತ್ಯಾದಿ ವಿಶೇಷವೂ ಪತ್ರಿಕೆಯಲ್ಲಿ ಇರುತ್ತಿತ್ತು. ಶಿಬಿರಾರ್ಥಿಗಳು ಬೆಳಿಗ್ಗೆ ಕಣ್ಣೊರೆಸಿಕೊಳ್ಳುವಷ್ಟೊತ್ತಿಗೆ ನೋಟಿಸ್ ಬೊರ್ಡ್ ಮೇಲೆ ಅದು ಪ್ರಕಾಶನಗೊಳ್ಳುತ್ತಿತ್ತು. ಆ ಪತ್ರಿಕೆ ಹೆಸರು 'ಶಿಬಿರವಾಣಿ' . ಲೋಗೊ ಶಾಂತಿ ಸಂದೇಶ ಸಾರುವ ಪಾರಿವಾಳ ಮತ್ತು ಎಲ್ಲ ಧರ್ಮಗಳ ಸಿಂಬಲ್ ಪ್ರತಿನಿಧಿಸುವ ಒಂದು ಚಿತ್ರ. ಹೀಗೆ ನನ್ನ ಕಲ್ಪನೆಯ ಜರ್ನಲಿಸಂ ಆಗಲೇ ಗರಿಗೆದರಿತ್ತು.
ವಿದ್ಯಾ ಸಮಾಚಾರ
ನನ್ನ ಪುಟಾಣಿ ಜರ್ನಲಿಸಂ ಕನಸಿಗೆ ಕವಿವಿ ದೊಡ್ಡ ಹರವು ಕೊಟ್ಟೀತೆಂಬ ನಿರೀಕ್ಷೆಯಿಂದಲೇ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಸೇರಿಕೊಂಡೆ. ಅಲ್ಲಿನ ಸಿಲಬಸ್ ನನಗೇನು ಅಂಥ ಭಾರಿ ಅನಿಸಲೇ ಇಲ್ಲ. ಮಾಸ್ ಮೀಡಿಯಾ, ಕಮ್ಯುನಿಕೇಷನ್ ವಿಷಯದ ಸಾರ ನನಗಂತೂ ಹೊಸದು ಅನ್ನಿಸಲೇ ಇಲ್ಲ. ಯಾಕೆಂದರೆ ಪ್ರ್ಯಾಕ್ಟಿಕಲ್ ರೂಪವನ್ನು ನಾನಾಗಲೇ ಅನುಭವಿಸಿಯಾಗಿತ್ತು. ಆದರೆ, ಥಿಯರಿಗೆ ಅದರದೇ ಆದ ಸ್ವರೂಪ ಇದ್ದೇ ಇರುತ್ತೆ. ಅದನ್ನು ತುಂಬ ಪ್ರೀತಿಯಿಂದಲೇ ಓದುತ್ತಿದ್ದೆ. ಕಮ್ಯುನಿಕೇಷನ್ ಥಿಯರಿ, ಜರ್ನಲಿಸಂ, ಕಮ್ಯುನಿಕೇಷನ್ ಮಾಡೆಲ್ಸ್, ಜಾಹಿರಾತು ತುಂಬ ಮೆಚ್ಚಿನ ವಿಷಯಗಳಾಗಿದ್ದು ಸಹಜವೇ ಆಗಿತ್ತು ನನ್ನ ಮಟ್ಟಿಗೆ. ಆದರೆ ವಿಭಾಗದ ಮುಖ್ಯಸ್ಥರಿಗೆ ಇಂಗ್ಲಿಷ್ ಮಾತನಾಡುವ ಮತ್ತು ಬರೆಯುವವರ ಬಗ್ಗೆ ಹೆಚ್ಚು ಒಲವಿತ್ತು. ನಾವೂ ಇಂಗ್ಲಿಷ್ ನಲ್ಲೇ ಪರೀಕ್ಷೆಗಳನ್ನು ಬರೆದವರು ಆ ಮಾತು ಬೇರೆ. ಇಂಗ್ಲಿಷ್ ನಲ್ಲಿ ಅವರು ಸಾಧಾರಣ ವಿಚಾರ ಹೇಳಿದರೂ ಅದು ಎಚ್ ಒ ಡಿ ದೃಷ್ಟಿಯಲ್ಲಿ ಗ್ರೇಟ್ ಅನಿಸುತ್ತಿತ್ತು. ಕನ್ನಡದಲ್ಲಿ ಸ್ವಲ್ಪ ಅರ್ಥಪೂರ್ಣ ಮಾತುಗಳನ್ನಾಡಿದರೆ ಹ್ಞೂ ಹ್ಞೂ ಪರವಾಗಿಲ್ಲ ಎನ್ನುವ ಎಂಥದೋ ಅಸಡ್ಡೆ ಇತ್ತು. ಅದು ಅವರ ಸೂಪಿರಿಯಾರಿಟಿ ಕಾಂಪ್ಲೆಕ್ಸೊ, ಮಿತಿಯೋ ನನಗಂತೂ ಕನಫ್ಯೂಸ್ ಆಗ್ತಿತ್ತು.
ವಿದ್ಯಾ ಸಮಾಚಾರ ದೊಡ್ಡ ತಲೆನೋವಿನ ಸಂಗತಿ ಎಂದು ಬಹುಜನ ಭಾವಿಸಿದ್ದರು. ನನಗೆ ಅದು ಅಂಥ ಮಹಾ ಅನ್ನಿಸಿರಲೇ ಇಲ್ಲ. ಆದರೆ, ಅದರ ಮುದ್ರಣದ ಕೆಲಸ ಮಾತ್ರ ತಲೆನೋವಿನದ್ದಾಗಿತ್ತು. ಅದು ವಿವಿ ವ್ಯವಸ್ಥೆ. ಮೀಡಿಯಾ ಸ್ಟಡೀಸ್ ದೃಷ್ಟಿಯಿಂದ ಅತ್ಯಂತ ಕೆಟ್ಟ ವ್ಯವಸ್ಥೆಯಾಗಿತ್ತು. ಆ ತಾಂತ್ರಿಕ ಕಾರಣಗಳಿಗಾಗಿ ನಾವೆಲ್ಲ ಎಚ್ ಒ ಡಿ ಕಡೆ ಉಗಿಸಿಕೊಳ್ಳಬೇಕಾಗುತ್ತಿತ್ತು. ಹಾಗೆ ನೋಡಿದರೆ ಇಂಥ ಕೆಟ್ಟ ವ್ಯವಸ್ಥೆ ಇಟ್ಟುಕೊಂಡಿದ್ದಕ್ಕೆ ನಾವೇ ಉಗೀಬೇಕಾಗಿತ್ತು. ಆ ವಿಷಯ ಬೇರೆ.
ವಿದ್ಯಾಸಮಾಚಾರದಲ್ಲಿ ಹೊಸ ಕಾಲಂ ಗಳ ಸಂಪ್ರದಾಯ ನಮ್ಮಿಂದಲೇ ಶುರುವಾಗಿತ್ತು. ರಂಗಭೂಮಿ, ಕಲೆ, ಸಾಹಿತ್ಯ... ಎಲ್ಲದರ ಬಗ್ಗೆ ವಿಮರ್ಶೆ ಅದರಲ್ಲಿ ಪ್ರಕಟಿಸುತ್ತಿದ್ದೆವು. ಕೆಲವು ಲೊಗೊ ನಾನೇ ಮಾಡಿದ್ದೆ. ನಮ್ಮ ಪಾಳಿ ಬಂದಾಗೆಲ್ಲ ಅವನ್ನು ಬಳಸಿಕೊಂಡಿದ್ದಿದೆ. ನಾನಾಗಲೇ ಧಾರವಾಡದ ರಂಗಭೂಮಿಯ ವಿಮರ್ಶೆಗಳನ್ನು ಬರೆಯುತ್ತಿದ್ದೆ. ಸಂಯುಕ್ತ ಕರ್ನಾಟಕ, ಕನ್ನಡಮ್ಮ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದುದರಿಂದ ಫೇಮಸ್ ಆಗಿದ್ದೆ. ಹಿಂದೂಸ್ತಾನಿ ಸಂಗೀತದ ಭಯಂಕರ ಹುಚ್ಚಿನಿಂದ ಆಗ ನಡೆಯುತ್ತಿದ್ದ ರೆಹಮತ್ ಸಂಗೀತ ಸಮಾರೋಹ, ರಾಜಗುರು, ಸವಾಯಿ ಗಂಧರ್ವ, ಕುಂದುಗೋಳ ಸಂಗೀತ ಸಮಾರೋಹಗಳಿಗೆಲ್ಲ ಅಹೋರಾತ್ರಿ ರಂಗಗೆಳೆಯರ ಜತೆ ಹಾಜರಾಗುತ್ತಿದ್ದೆ. ಕೆಲವು ಸಂಗೀತ ಸಮಾರಂಭಗಳ ರಿವ್ಯೂ ಕೂಡ ಬರೆದಿದ್ದೇನೆ.
ರಂಗದೀಪ್ತಿ ಪ್ರಶಸ್ತಿ ಮತ್ತು ನ್ಯಾಷನಲ್ ಲೇವಲ್ ಯೂತ್ ಫೆಸ್ಟಿವಲ್ ಗೆ ನನ್ನ ನಾಟಕ ತೋಬತೇಕ್ ಸಿಂಗ್
ರಂಗದೀಪ್ತಿ ಪ್ರಶಸ್ತಿ ನಮ್ಮ ವಿವಿಯ ಬಹುಪ್ರತಿಷ್ಠಿತ ಪ್ರಶಸ್ತಿ ಆಗಿಹೋಗಿತ್ತು. ಈ ಹಿಂದಿನ ಕೆಲ ಸ್ಪರ್ಧೆಯಲ್ಲಿ ಅದು ಮಿಸ್ ಆಗಿತ್ತು. ಒಂದು ಸಲ ಕೂದಲೆಳೆಯಲ್ಲಿ ಕಳಕೊಂಡಿದ್ದೆ. ಕೆಲ ಸಾಂಸ್ಕೃತಿಕ ರಾಜಕಾರಣ ನನ್ನ ನಾಟಕಕ್ಕೆ ಆ ಪ್ರಶಸ್ತಿಯನ್ನು ತಪ್ಪಿಸಿ ರನರ್ ಅಪ್ ಪ್ರಶಸ್ತಿಗೆ ಸೀಮಿತಗೊಳಿಸಿತ್ತು. ಮುಂದಿನ ವರ್ಷದಲ್ಲೇ ತೋಬತೇಕ್ ಸಿಂಗ್ (ಸಾದತ್ ಹಸನ್ ಮಾಂಟೊ ಅವರ ಸಣ್ಣ ಕಥೆ ಆಧರಿಸಿ ನಾನೇ ಸ್ಕ್ರಿಪ್ಟ್ ಬರೆದು, ನನ್ನದೇ ಅಂದಾಜಿನ ಸಂಗೀತ ಸಂಯೋಜಿಸಿ ಗೀತಾ ಮೆಂಡೀಗೇರಿ, ನೀತಾ ಕುಲಕರ್ಣಿ ಅವರ ಆಲಾಪಗಳನ್ನು ಬಳಸಿಕೊಂಡು ನಾಟಕವಾಗಿಸಿದ್ದೆ.) ನಾಟಕ ರಂಗದೀಪ್ತಿಯನ್ನು ಎತ್ತಿಹಿಡಿಯಿತು. ಹತ್ತಿರ ಸಾವಿರ ವಿದ್ಯಾರ್ಥಿಗಳು ಗಾಂಧೀಭವನದಂಥ ಕೆಟ್ಟ ಅಡಿಟೋರಿಯಂನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಮೋಡ್ ನಲ್ಲಿ ಕುಳಿತು ವೀಕ್ಷಿಸಿದ್ದರು. ಅವರೆಲ್ಲ ಕಣ್ಣಾಲಿಗಳನ್ನು ಹಸಿಗೊಳಿಸಿಕೊಂಡಿದ್ದು ನನ್ನ ದಿಲ್ ನೊಳಕ್ಕೆ ನೆನಪಾಗಿ ಹಾಗೇ ಉಳಿದಿದೆ. ಆ ಕೊನೆಯ ಸೀನ್ ಗೆ ಬಿದ್ದ ಚಪ್ಪಾಳೆಗಳು, ಹೆಣ್ಣು, ಗಂಡು ಭೇದವಿಲ್ಲದೇ ತೊಟ್ಟಿಕ್ಕಿದ ಆ ಕಣ್ ಹನಿಗಳು ನನಗೆ ಈಗಲೂ ಅದೇ ಫ್ರೇಮನಲ್ಲಿ ಭದ್ರವಾಗಿ ಚಿತ್ತಭಿತ್ತಿಯಲ್ಲಿದೆ. ಸೌತ್ ಇಂಡಿಯಾ ಕಾಂಪಿಟಿಷನ್ ನಲ್ಲಿ ಎನ್ ಎಸ್ ಡಿ, ನೀನಾಸಂ ಹುಡುಗರೆಲ್ಲ ಮಾಡಿಸಿದ ನಾಟಕಗಳನ್ನು ಬದಿಗೊತ್ತಿ ನ್ಯಾಷನಲ್ ಲೇವಲ್ ಗೆ ಆಯ್ಕೆಯಾದ ನನ್ನ 'ತೋಬತೇಕ್ ಸಿಂಗ್' ಗೆ ಬಹುತೇಕ ವಿವಿ ಹುಡುಗರು, ಅವರ ತಂಡಗಳ ಮ್ಯಾನೇಜರ್ ಗಳೇ ಫ್ಯಾನ್ ಆಗಿದ್ದರು. ಮತ್ತು ಕಣ್ಣು ಹಸಿ ಮಾಡಿಕೊಂಡು ಬಂದು ನಮ್ಮೆಲ್ಲರ ಪರಿಚಯ ಮಾಡಿಕೊಂಡ ಅದೆಷ್ಟು ಹುಡುಗಿಯರು, ಮ್ಯಾಡಂಗಳನ್ನು ನೆನಪಿಸಿಕೊಳ್ಳಲಿ...! ಓಹ್ ಗಾಡ್. ಅದೊಂದು ಅವಿಸ್ಮರಣೀಯ ಕ್ಷಣ. ನಮ್ಮ ಹುಡುಗರೆಲ್ಲ ನನ್ನ ಎತ್ತಿಕೊಂಡು ಕುಣಿದಾಡಿದರು. ಮುತ್ತುಗಳ ಮಳೆಗರೆದರು. ನಮ್ಮ ಕ್ಯಾಂಪಸ್ ನಲ್ಲಿ ದೊಡ್ಡ ಮೆರವಣಿಗೆ. ಇಷ್ಟಲಿಂಗ ಸಿರ್ಸಿ, ಇಮ್ತಿಯಾಜ್, ಗರುಡ, ಸಂಜೂ ಮಾಲಗತ್ತಿ, ನೀಲಗುಂದ, ಹಿರೇಮಠ, ದೀಪ್ತಿ, ಸುಧಾಕರ್, ಪ್ರೀತಿ, ಜೋತ್ಸ್ನಾ, ಬಸಂತಿ ಇವರೆಲ್ಲ ಸಂಭ್ರಮಿಸಿದ ರೀತಿ ಅಬ್ಬಾ... ಆಸ್ಕರ್ ಪ್ರಶಸ್ತಿ ಸಿಕ್ಕಷ್ಟು ಸಂಭ್ರಮಪಟ್ಟಿದ್ದರು. ನ್ಯಾಷನಲ್ ಲೇವಲ್ ತಯಾರಿ ನಡೆಯುತ್ತಿದ್ದ ಸಂದರ್ಭ ಕುಲಪತಿ ಮತ್ತು ರೆಜಿಸ್ಟ್ರಾರ್ ಪೂರ್ವಭಾವಿ ಪ್ರದರ್ಶನದ ಆಸಕ್ತಿ ತೋರಿದರು. ತೋಬತೇಕ್ ಸಿಂಗ್ ಅವರೆಲ್ಲರ ಕಣ್ಣಾಲಿಗಳ ಹಸಿಗೊಳಿಸಿಬಿಟ್ಟ. ನಾವಿದ್ದ ಎರಡು ವರ್ಷದಲ್ಲಿ ಒಮ್ಮೆ ಮತ್ತು ಆ ನಂತರದ ವರ್ಷ ನಾನೇ ನಾಟಕ ನಿರ್ದೇಶಿಸಿದ್ದೆ. ಆ ಮೂರೂ ವರ್ಷ ನಮ್ಮ ವಿಭಾಗವೇ ಜನರಲ್ ಚಾಂಪಿಯನ್! (ನಾನು ಎಂಎಸ್ಸಿ ಓದುವಾಗಲೂ ಜನರಲ್ ಚಾಂಪಿಯನ್ ಆಗಿದ್ದೆವು.)
ಮೊದಲ ವರ್ಷ ಜನರಲ್ ಚಾಂಪಿಯನ್ ಆಗಿದ್ದಾಗ ಬೃಹತ್ ಗಾತ್ರದ ಪಾರಿತೋಷಕ ಎತ್ತಿಕೊಂಡು ವಿಭಾಗಕ್ಕೆ ಹೋದೆವು. ನಾನು ಮೊದಲೇ ಹೇಳಿದ್ದೆ ಎಚ್ ಒ ಡಿ ಗೆ ಮಾಧ್ಯಮ ಅಂದರೆ ವರದಿ, ಲೇಖನ, ಅದೇ ಭಾಷೆ, ಕಾಗುಣಿತ ಅಷ್ಟೇ ಕಣೋ... ಇದೆಲ್ಲ ಅವರ ತಲೆಗೆ ಹೋಗಲ್ಲ ಎಂದೆ ನಮ್ಮ ಹುಡುಗರಿಗೆ. ಕೇಳಲಿಲ್ಲ. ಸಯೀದ್ ಸನದಿ, ನೌಶಾದ್, ಶಿವಕುಮಾರ್... ಎಲ್ಲರೂ ಚೇಂಬರ್ ಹೊಕ್ಕರು. ಎಚ್ ಒ ಡಿ ಏನು ಹೇಳಿದರು ಗೊತ್ತಾ... ಆಯ್ತರಯ್ಯಾ ಟ್ರೋಫಿ ಅಲ್ಲೇ ಎಲ್ಲಾದರೂ ಜಾಗ ಸಿಕ್ಕರೆ ಇಡಿ, ವಿದ್ಯಾ ಸಮಾಚಾರ ಎಲ್ಲಿಗೆ ಬಂತ್ರಯ್ಯ ಎಂದೆಲ್ಲ ಉಗಿದು ಕಳುಹಿಸಿದ್ರು. ನಾನು ಹೊರಗೆ ಮುಸಿ ಮುಸಿ ನಗುತ್ತಾ ನಿಂತಿದ್ದೆ ಇದನ್ನೆಲ್ಲ ಮೊದಲೇ ಗ್ರಹಿಸಿದ್ದೆ...
ತೋಬತೇಕ ಸಿಂಗ್ ನಾಟಕ ನ್ಯಾಷನಲ್ ಲೇವಲ್ಗೆ ಸೆಲೆಕ್ಟ್ ಆದಾಗಲೇ ಎಚ್ ಒ ಡಿ ಗೆ ಮಾಧ್ಯಮದ ವಿಸ್ತಾರದಲ್ಲಿ ಪತ್ರಿಕೋದ್ಯಮ ಒಂದು ಪ್ರಕಾರವಷ್ಟೇ ಮತ್ತು ಅದಷ್ಟೇ ಮಾಧ್ಯಮ ಹರವು ಅಲ್ಲ ಅಂತ ಗೊತ್ತಾಗಿರಬೇಕು. ನಮ್ಮ ಹುಡುಗರಿಗೆ ಟ್ರೀಟ್ ಕೊಟ್ರು. ಹೆಮ್ಮೆಯಿಂದ ಹೇಳಿಕೊಂಡರು.
ನ್ಯೂಸ್ ಪೇಪರ್, ಮ್ಯಾಗಜೀನ್ ಆಗಲಿ ಅಥವಾ ಸಿನಿಮಾ, ಥಿಯೇಟರ್ ಆಗಲಿ... ಹೇಳುವ ವಿಷಯ ಮತ್ತು ಅದನ್ನು ಮುಟ್ಟಿಸುವ ವಿಧಾನ ಮುಖ್ಯ. ಅದಕ್ಕೆ ಬೇಕಾದ ಸೆನ್ಸಿಬಿಲಿಟಿ, ಸೆನ್ಸಿಟಿವಿಟಿ, ಕ್ರಿಯೇಟಿವಿಟಿ, ಆಳವಾದ ಜ್ಞಾನ ಮುಖ್ಯ. ಭಾಷೆ, ಬೊಗಳೆ, ಸಾಹಿತ್ಯ ಮುಖ್ಯವಲ್ಲ. ಲೇಖನಗಳನ್ನು ಒಬ್ಬ ಪೋಸ್ಟ್ ಮ್ಯಾನ್, ಬೀಡಾ ಅಂಗಡಿಯವ ಕೂಡ ಬರೆಯಬಲ್ಲ. ಬರೆಯುವುದನ್ನು ಕಲಿತ, ಯೋಚಿಸುವ ತಲೆ ಇದ್ದ ಎಲ್ಲರೂ ಬರೆಯಬಲ್ಲ ಒಂದು ಬರವಣಿಗೆಯ ಪ್ರಕಾರ ಅಷ್ಟೇ. ಅಲ್ಲಿ ಭಾಷೆ, ಕಾಗುಣಿತ, ಮಣ್ಣು ಮಸಿ ಎಲ್ಲ ಮುಖ್ಯವಲ್ಲ. ಅದರ ವಿಚಾರ ಮುಖ್ಯ. ಬರವಣಿಗೆಯೇ ಜರ್ನಲಿಸಂ ಎಂದು ಯಾವ ಮುಠ್ಠಾಳ ಹೇಳಿದ್ದಾನೋ...! ಇಷ್ಟು ಸಾಮಾನ್ಯ ಜ್ಞಾನ ಇರದವರೂ ಈ ಮಾಧ್ಯಮ ದುನಿಯಾದಲ್ಲಿದ್ದಾರೆ. ಇಂದು ಪತ್ರಿಕಾಜಗತ್ತು ಅಂದರೆ ವಿಫಲ ಸಾಹಿತಿಗಳ ಪುನರ್ವಸತಿ ಕೇಂದ್ರಗಳಾಗುತ್ತಿವೆ ಅನಿಸುತ್ತಿದೆ. ಪರಿಕಲ್ಪನೆಗಳಿಗಿಂತ ಬರೆವಣಿಗೆಯ ಸಿದ್ಧಮಾದರಿ, ಪರಿಕರಗಳು, ವ್ಯಾಕರಣ ಮುಖ್ಯವಾಗುತ್ತಿದೆ. ಲಿಟರರಿ ಸೆನ್ಸಿಬಿಲಿಟಿ ಸೋಗಿನಿಂದ, ಶಬ್ದ ಸೊಕ್ಕಿನಿಂದ ಮುದ್ರಣ ಮಾಧ್ಯಮ ಹೊರಬರಬೇಕು ಎನ್ನುವುದು ನನ್ನ ಆಶಯ, ಕಾಳಜಿ.
ತೋಬತೇಕ ಸಿಂಗ್ ನಾಟಕದ ನ್ಯಾಷನಲ್ ಲೇವಲ್ ಕಾಂಪಿಟಿಷನ್ ತಯಾರಿ ಹೊತ್ತಲ್ಲೇ ನನಗೆ ಕೆಲಸ ಸಿಕ್ಕಿದ್ದು. ಅಲ್ಲಿಯತನಕ ನನ್ನ ಮನಸು ತುಂಬ ಮುಂಬೈ ಬಾಲಿವುಡ್, ನವದೆಹಲಿಯ ಎನ್ ಎಸ್ ಡಿ ಕನಸುಗಳದ್ದೇ ದರ್ಬಾರು ನಡೀತಿತ್ತು. ಬೆಂಗಳೂರಿಗೆ ಹೊರಡುವಷ್ಟು ದುಡ್ಡು ಕೂಡ ನನ್ನಲ್ಲಿರಲಿಲ್ಲ. ಮುಂಬೈ ನ್ಯಾಷನಲ್ ಯೂತ್ ಫೆಸ್ಟಿವಲ್ ಗೆ ಕೆಲವೇ ದಿನ ಬಾಕಿ ಇರುವಾಗ ನನಗೆ ಕೆಲಸ ಸಿಕ್ಕ ಬಗ್ಗೆ ಹುಡುಗರಿಗೆ ತಿಳಿದಿದ್ದು. ಅವರೆಲ್ಲ ಸೇರಿ ನನಗೊಂದು ಲಕೋಟೆ ನೀಡಿದರು. ಸರ್ ಇದನ್ನು ಬಸ್ ಹತ್ತಿದ ಮೇಲೆ ತೆಗೆದು ನೋಡಬೇಕೆಂದು ಕಂಡೀಷನ್ ಹಾಕಿದ್ದರು. ಅಂತೂ ನಾನು ಬೆಂಗಳೂರಿಗೆ ಬಸ್ ಹತ್ತಿದೆ. ನನ್ನ ಕಳುಹಿಸಲು ಇಡೀ ತಂಡವೇ ಬಂದಿತ್ತು. ಕನಿಷ್ಠ 40 ವಿದ್ಯಾರ್ಥಿಗಳು ಬಸ್ ನತ್ತ ಕೈಬೀಸಿದ್ದನ್ನು ಹೇಗೆ ಮರೆಯಲಿ... ಲಕೋಟೆ ತೆರೆದು ನೋಡಿದರೆ ನನ್ನ ಖರ್ಚಿಗೆ ಸಾಕಾಗುವಷ್ಟು ದುಡ್ಡಿತ್ತು!
ಮರೆಯಲಾಗದ ಕ್ಷಣಗಳು ಮತ್ತಷ್ಟು...
ಇಂಟರ್ನಶಿಪ್ ಮಾಡಿದ್ದು ಉದಯವಾಣಿಯಲ್ಲಿ. ಆಗ ಭಟ್ಟರೊಬ್ಬರು ಅದರ ಸಂಪಾದಕರಾಗಿದ್ದರು. ನನ್ನೊಂದಿಗೆ ಇನ್ನೂ ಇಬ್ಬರು ಜೂನಿಯರ್ಸ್ ಕೂಡ ಇಂಟರ್ನಶಿಪ್ ಗಾಗಿ ಸೇರಿಕೊಂಡಿದ್ದರು. ನಾನಾಗ ಮಾಡಿದ ಕೆಲಸ ಅಬ್ಬಾ! ಯಾವ ಸೀನಿಯರ್ ಕೂಡ ಅಷ್ಟು ಮಾಡಿರಲಿಕ್ಕಿಲ್ಲ. ವರದಿಗೆ ಸಂಬಂಧಿಸಿದಂತೆ ಜನರಲ್, ವಿಧಾನಮಂಡಲ ಕಲಾಪ, ಕ್ರೈಂ ಮತ್ತು ರಂಗಭೂಮಿ, ನೃತ್ಯ, ಯಕ್ಷಗಾನ ರಿವ್ಯೂ, ಸಿನಿಮಾ ಬಗ್ಗೆ, ಇನ್ನಿತರ ಹಲವಾರು ಲೇಖನಗಳನ್ನು, ವರದಿಗಳನ್ನು ಇಂಡಿಪೆಂಡೆಂಟ್ ಆಗೇ ಬರೆದೆ. ಪತ್ರಿಕೆ ವಿನ್ಯಾಸದಲ್ಲೂ ಗಮನಹರಿಸಿದೆ. ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದೆನೆಂದರೆ ಇಂಟರ್ನಶಿಪ್ ಮುಗಿದ ಮೇಲೆ ಭಟ್ಟರು ಊರಿಗೆ ಹೋಗದಂತೆ ತಾಕೀತು ಮಾಡಿದರು. ಸದ್ಯ ಕೆಲಸಕ್ಕೆ ಸೇರಿಸಿಕೊಳ್ಳುತ್ತೇನೆ. ಇಲ್ಲೇ ಇನ್ನಷ್ಟು ದಿನ ಟ್ರೈಲ್ ಬೇಸ್ ಮೇಲೆ ಕೆಲಸ ಮಾಡಿ, ನಂತರ ಖಾಯಂ ಮಾಡ್ತೀನಿ ಎಂದರು. ಕೆಲವು ಕಂತ್ರಿ ಭಟ್ಟರು ನನ್ನ ವಿರುದ್ಧ ಕತ್ತಿ ಮಸೆದರು. ಸಾಲದ್ದಕ್ಕೆ ಅಲ್ಲಿನ ಗುರಾಯಿಸುವ ಆಂಟಿ ಕೂಡ ಭಟ್ಟರ ತಲೆಗೆ ಏನನ್ನೋ ರವಾನಿಸಿದ್ದಳು ಅನಿಸುತ್ತದೆ. ಅದೇ ಟೈಮಿಗೆ ಅದಾವುದೊ ಪುಟಗೋಸಿ ಭರತನಾಟ್ಯ ಡಾನ್ಸರ್ ಒಬ್ಬಳು ತನ್ನ ಪ್ರೊಫೈಲ್ ಗಾಗಿ ನನ್ನ ಭೇಟಿ ಮಾಡಿದ್ದು ಮತ್ತು ಆಕೆಯ ಸುಂದರ ದನಿಯ ಫೋನುಗಳ ರಿಂಗಣವೇ ದೊಡ್ಡದಾಯಿತು ಆ ಸಂಪಾದಕರಿಗೆ! ಹಾಗೆ ಗಾಸಿಪ್ ಮಾಡಿದ್ದಳೇನೋ ಆ ಆಂಟೀ... ನೀನಿಷ್ಟು ಫೇಮಸ್ ಆಗಿಬಿಟ್ಟಿದಿಯಾ... ಕರಾವಳಿ ಸುಂದರಿಯರ ತಲೆ ಕೆಡಿಸುವಷ್ಟು ಫೇಮಸ್ ಫಿಗರ್ ಆಗಬಹುದು ನೀನು... ಅಂದುಕೊಂಡರೇನೋ! ಹಾ, ಹೂ... ಎಂದೆಲ್ಲ ರೇಗಿಬಿಟ್ಟರು. ನಾನಾಗಲೇ ಡಿಸೈಡ್ ಮಾಡಿಬಿಟ್ಟೆ. ಬೇರೆ ಏನಾದರೂ ಮಾಡುವಾ, ಜಾಬ್ ಮಡೋದೇ ಆದರೆ ನಾನು ಇದೇ ಬೆಂಗಳೂರಿನಲ್ಲಿ ಜಾಬ್ ಮಾಡ್ತಿನಿ. ಇದೆಲ್ಲಕ್ಕೂ ತಲೆಕೆಡಿಸಿಕೊಳ್ಳಲ್ಲ... ಆದರೆ ನನ್ನ ತಾಯಾಣೆ ಯಾವ ಅಂಥ ಚಿಲ್ಲರೆ ಕನಸುಗಳು ನನ್ನೊಳಕ್ಕಿರಲಿಲ್ಲ. ಈಗಲೂ ಅಷ್ಟೇ. ನನಗಿರೋದೊಂದೇ ಕನಸು ಈ ಬದುಕು ಸಾರ್ಥಕ ಎನಿಸುವಂಥ ಕೆಲಸ ಮಾಡಬೇಕು ಅನ್ನೋದು ಎಂದು ಹೇಳಿ ಮತ್ತೆ ದೂಸರಾ ಮಾತಾಡದೇ ಹೊರಕ್ಕೆ ಬಂದೆ. ಜೋರು ಮಳ ಸುರೀತಿತ್ತು. ಮಳೆಯಲ್ಲಿ ನಡಕೊಂಡೇ ಶಿವಾಜಿನಗರ ಬಸ್ ಸ್ಟಾಪ್ ಗೆ ಬಂದೆ. ಮತ್ತೆ ನಾನೆಂದೂ ಆ ಕಡೆ ತಲೆ ಹಾಕಲಿಲ್ಲ.
ಆದರೆ ಇಂಟರ್ನಶಿಪ್ ಮುಗಿದ ದಿನ ಕೊಟ್ಟ ಪತ್ರ ಮಾತ್ರ ಅದ್ಭುತವಾಗಿತ್ತು. ಈ ಹುಡುಗ ಆಗಲೇ ಪರಿಪೂರ್ಣ ಪತ್ರಕರ್ತ ಆಗಿದ್ದಾನೆ, ಸೊಗಸಾಗಿ ಬರೀತಾನೆ, ವಿನ್ಯಾಸವನ್ನೂ ಮಾಡ್ತಾನೆ ಎಂದೆಲ್ಲ ವಿಶೇಷವಾಗಿ ಹೊಗಳಿದ್ದರು. ಆದರೆ ಮಾರ್ಕು ಮಾತ್ರ ಹುಡುಗಿಯರಿಗಿಂತ ಕಮ್ಮಿ ಕೊಟ್ಟಿದ್ದರು!
ಒಂದು ದಿನ ವಿಭಾಗದ ಎಚ್ ಒ ಡಿ ಗೆ ಲೆಟರ್ ಕೊಟ್ಟು, ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳೋಣ ಅಂತ ಹೋದೆ. ಎಚ್ ಒ ಡಿ ಕೇಳಿದರು. ಏನಪ್ಪಾ ನಿನ್ನ ಹೆಸರು? ಅಪ್ಲಿಕೇಶನ್ ಬೇಕಿತ್ತಾ? ಅಂದರು. ಇಲ್ಲಾ ನಾನು ಆಗಲೇ ಇಲ್ಲೇ ಎಂಎ ಕೋರ್ಸ್ ಮುಗಿಸಿದೆ. ಮಾರ್ಕ್ಸ್ ಕಾರ್ಡ್ ಬೇಕಿತ್ತು ಅದಕ್ಕೆ ಬಂದೆ ಎಂದೆ. ಓಹ್, ಏನು ಹೆಸರು ನಿಮ್ಮದು? ಯಾವ ಬ್ಯಾಚ್? ಎಂದರು. ಸಾವಿರಾರು (ನಾವಿದ್ದದ್ದೇ 13 ಜನ ವಿದ್ಯಾರ್ಥಿಗಳು)! ವಿದ್ಯಾರ್ಥಿಗಳಲ್ಲಿ ನನ್ನನ್ನೆಲ್ಲಿ ನೆನಪಿಟ್ಟಿರಬೇಕು ಪಾಪ... ಎಂದುಕೊಂಡು ಒಂದು ಬಿಳಿ ಹಾಳೆಯ ಮೇಲೆ ನನ್ನ ಪೂರ್ತಿ ಹೆಸರು, ಬ್ಯಾಚ್ ವಿವರ, ಇಸವಿ ಎಲ್ಲ ಬರೆದು ಟೇಬಲ್ಲಿಗಿಟ್ಟೆ.
ಮೂರೇ ತಿಂಗಳಲ್ಲಿ ನನ್ನ ಕೆಲಸ ಮೆಚ್ಚಿ, ಇಡೀ ಕಚೇರಿಯ ಸಿಬ್ಬಂದಿ ಮುಂದೆ ನನ್ನ ಹೊಗಳಿ ಇದ್ದರೆ ಇರಬೇಕು ಇಂಥ ಟ್ಯಾಲೆಂಟ್ ಎಂದೆಲ್ಲ ಹೊಗಳಿ ಕೆಲಸಕ್ಕೆ ನೀನಿಲ್ಲೇ ಸೇರಿಕೋಬೇಕು ಎಂದೆಲ್ಲ ಮಾತಾಡಿ ಮತ್ತೆ ಜುಜುಬಿ ಹುಡುಗಿಯೊಬ್ಬಳ ಫೋನ್ ಕಾಲ್ ಗೆ ಗರಂ ಆಗಿ ನನ್ನ ಮೇಲೆ ರೇಗಾಡಿ ಅಷ್ಟರೊಳಗೆ ಅತಿಯಾಗಿ ಗುರುತಿಸಿದ ಈ ಸಂಪಾದಕರೆಲ್ಲಿ? ಎರಡು ವರ್ಷ ನಮಗೆ ಕಲಿಸಿ ಅದೂ ಕಮ್ಯುನಿಕೇಷನ್, ಜರ್ನಲಿಸಂ ಹೇಳಿಕೊಟ್ಟು, ಬೀಳ್ಕೊಡುವ ಸಮಾರಂಭದಲ್ಲಿ ವಿಶೇಷವಾಗಿ ನನ್ನ ಹೆಸರನ್ನೂ ಪ್ರಸ್ತಾಪಿಸಿ ಇಂಥ ಹೆಮ್ಮೆಯ ವಿದ್ಯಾರ್ಥಿಗಳು ನಮ್ಮ ವಿಭಾಗದಲ್ಲಿದ್ದುದು ಖುಷಿ ಕೊಟ್ಟಿತು ಎಂದೆಲ್ಲ ಹೇಳಿದ ಎಚ್ ಒ ಡಿ ಕಡೆಗೆ ಗುರುತೇ ಹಿಡಿಯದಷ್ಟು ನಾನು ಬದಲಾಗಿಬಿಟ್ಟಿದ್ದೆನಾ? ಎನಿಸಿತು. ಈ ಪರಿಯ ಕಮ್ಯುನಿಕೇಷನ್ ನ ದೊಡ್ಡ ಪಾಠ ನನ್ನ ಬುತ್ತಿಯೊಳಗಿಟ್ಟ ವಿಷದಂತಿದೆ.
ಇದಕ್ಕೂ ದೊಡ್ಡ ವಿಷದ ವಿಷಯವೆಂದರೆ ತಾರತಮ್ಯ!
ನನಗೆ ಗೊತ್ತಿದ್ದ ಹಾಗೆ ಒಂದೆರಡು ಬ್ಯಾಚ್ ಗಳಲ್ಲಿ ಗೋಲ್ಡ್ ಮೆಡಲ್ ನೀಡುವುದಕ್ಕೆ ಸಂಬಂಧಿಸಿದಂತೆ ಘೋರ ಅನ್ಯಾಯವೇ ನಡೆದಿದೆ ಎನ್ನುವ ಅನುಮಾನ. ಒಬ್ಬ ವಿದ್ಯಾರ್ಥಿ ಫೈನಲ್ ಈಯರ್ ನಲ್ಲಿ ಕ್ಯಾಂಪಸ್ ಗೆ, ಕ್ಲಾಸಿಗೆ ಬಂದಿದ್ದು ಅಪರೂಪ. ಫೈನಲ್ ಈಯರ್ ಓದು ಆರಂಭಗೊಂಡ ಸ್ವಲ್ಪ ದಿನಗಳಲ್ಲೇ ಆತನಿಗೆ ದೂರದ ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು. ಪರೀಕ್ಷೆಗೆ ಸುಲಭವಾಗೇ ಕುಳಿತ. ಆದರೆ ಒಂದೆರಡಷ್ಟೇ ಅಟೆಂಡೆನ್ಸ್ ಶಾರ್ಟ್ ಇದ್ದವರು ಅದೆಷ್ಟು ಉಗಿಸಿಕೊಂಡರು. ಆ ಹುಡುಗನಿಗೆ ಪರೀಕ್ಷೆ ಬರೆದದ್ದಷ್ಟೇ ಅಲ್ಲ ಮೆಡಲ್ ಗಳು ಕೂಡ ಅವನ ಕೊರಳು ಅಲಂಕರಿಸಿದವು! ಆತನ ಹಿಂದೆ ಕ್ಲೋಸ್ ರೇಸ್ ನಲ್ಲಿದ್ದ ಮತ್ತು ಮೊದಲ ವರ್ಷದಲ್ಲೇ ಸ್ವಲ್ಪ ಮುನ್ನಡೆ ಹೊಂದಿದ್ದ ಕುರುಬರ ಹುಡುಗನಿಗೇಕೆ ಅದು ಒಲಿಯಲಿಲ್ಲ? ಆತನಿಗೆ ನ್ಯಾಯವಾಗಿ ದಕ್ಕಬೇಕಿದ್ದ ಮೆಡಲ್ ಕೆಲವೇ ಮಾರ್ಕುಗಳಲ್ಲಿ ತಪ್ಪಿತು. ಯಾವ ಘನಂದಾರಿ ಸಾಧನೆ ಮಾಡಿತು ಶಿಕ್ಷಣ ವ್ಯವಸ್ಥೆ? (ಇದೆಲ್ಲ ನನ್ನ ಅಸಮಧಾನ, ಭಾವನೆಗಳು ಅಷ್ಟೇ. ಆರೋಪವಲ್ಲ)
ನಮ್ಮ ಬ್ಯಾಚ್ ವಿಷಯದಲ್ಲೂ ಇಷ್ಟೇ ಆಗಿದ್ದು. ಅದಾವುದೋ ಕೀನ್ಯಾ ಹುಡುಗನಿಗೆ ಮೆಡಲ್. ಆತ ಕ್ಲಾಸಿಗೇ ಬರಲಿಲ್ಲ ನೆಟ್ಟಗೆ. ಆತ ವಿದ್ಯಾಸಮಾಚಾರ ಕೆಲಸವನ್ನಾಗಲಿ, ಡಿಸರ್ಟೇಷನ್ ಆಗಲಿ ಸೀರಿಯಸ್ ಆಗಿ ಮಾಡಿದನೋ ಅಥವಾ ಯಾರದೋ ಕೃಪೆಯಿಂದ ಅವನ್ನೆಲ್ಲ ನಿಭಾಯಿಸಿದ್ದನೊ ಗೊತ್ತಿಲ್ಲ.. ಆತನ ಹಿಂದೆ ರೇಸ್ ನಲ್ಲಿ ಬ್ರಾಹ್ಮಣರ ಹುಡುಗನ (ಆತ ಕೆಲವು ಇಂಟರ್ನಲ್ ಎಕ್ಸಾಮ್ ಅಥವಾ ಕಡ್ಡಾಯ ಟೆಸ್ಟ್ ತಪ್ಪಿಸಿಕೊಂಡು ಹಿಂದೆ ಬಿದ್ದಿದ್ದ.) ಜತೆ ನಾವು ಕೆಲವು ಮುಸಲ್ಮಾನ ಹುಡುಗರಿದ್ದೆವು.!..
ಸ್ಟಡಿ ಟೂರಿಗೆ ಹೋಗಿದ್ದೆವು. ನಮ್ಮ ಜತೆ ಬಂದ ಶಿಕ್ಷಕ ಮಹಾಶಯರು ಚೆಲ್ಲಾಟಕ್ಕೆ ಹರಿಸಿದಷ್ಟು ಗಮನ ಬೇರೆ ವಿಷಯದಲ್ಲಿ ವಹಿಸಲೇ ಇಲ್ಲ. ಅವರೊಂದಿಗೆ ನಮ್ಮ ಕೆಲ ಕೋತಿ ವಿದ್ಯಾರ್ಥಿಗಳು ಸೇರಿಕೊಂಡಿದ್ದರು. ಇವರೆಲ್ಲ ಚಟ ಬಿಟ್ಟು ಬೇರೆನನ್ನೂ ಟೂರ್ ನಲ್ಲಿ ಮಾಡಿಲ್ಲ. ನಾನು ಮತ್ತು ಕೆಲವರು ತುಂಬ ಸೀರಿಯಸ್ ಆಗಿ ತೊಡಗಿಕೊಂಡಿದ್ದೆವು. ನನ್ನ ಟೂರ್ ರಿಪೋರ್ಟ್ ಜಬರ್ದಸ್ತ್ ಆಗಿತ್ತು. ಸ್ವತಃ ಈ ಶಿಕ್ಷಕರೇ ಕ್ಯಾಂಪಸ್ ನ ಒಂದು ರಸ್ತೆಯಲ್ಲಿ ಕಾರು ನಿಲ್ಲಿಸಿ ನನ್ನ ರಿಪೋರ್ಟ್ ಬಗ್ಗೆ ತುಂಬ ಹೇಳಿದ್ದರು ಮೆಚ್ಚಿಕೊಂಡಿದ್ದರು. ಅದ್ಭುತ ಎಂದಿದ್ದರು. ಕೆಲವರಂತೂ ನೆಪಮಾತ್ರದ ವರದಿ ನೀಡಿ, ಇವರೊಂದಿಗೆ ಇಡೀ ಟೂರ್ ತುಂಬ ಹರಟಿದ್ದರು. ಆದರೆ ವರದಿಗೆ ಮಾರ್ಕು ಮಾತ್ರ ನನಗೆ ಕಮ್ಮಿ ಬಂದಿತ್ತು.
ನಮ್ಮ ಬಗ್ಗೆ ಮುಂಚೆ ಕೋಪ ಇಟ್ಟುಕೊಂಡಿದ್ದ ಮತ್ತು ಫೈನಲ್ ಬಂದಾಗ ಆತ್ಮೀಯರಾಗಿದ್ದ ಒಬ್ಬ ಪ್ರೊಫೆಸರ್ ಮಾತ್ರ ಪ್ರೀತಿ ತೋರಿದ್ದು. ಅಕ್ಕರೆಯಿಂದ ಕಂಡಿದ್ದು. ಒಳ್ಳೆಯ ಕೆಲಸಕ್ಕೆ ಷಹಬ್ಬಾಸ್ ಎಂದು ಬೆನ್ನು ತಟ್ಟಿದ್ದು.
ಅಲುಮ್ನಿ ಮೀಟ್ ನೆವದಲ್ಲಿ ಇಷ್ಟೆಲ್ಲ ನೆನಪುಗಳು ಬಿಚ್ಚಿಕೊಂಡವು. ಗೆಳೆಯರು , ಜತೆಯಲ್ಲಿ ಓದಿದವರೊಂದಿಗೆ ನೆನಪು ಹಂಚಿಕೊಳ್ಳಲು ಅಲುಮ್ನಿ ಮೀಟ್ ಒಳ್ಳೆಯ ನೆವ. ಆದರೆ, ಕೆಲವರಿಗೆಂದೇ ಸೃಷ್ಟಿಯಾದಂತಿರುವ, ಕೆಲವರ ಜ್ಞಾನವನ್ನೇ ಶ್ರೇಷ್ಠವೆಂದು ಭಾವಿಸಿದಂತಿರುವ, ಅವರಿಗೇ ಮನ್ನಣೆ, ಗೌರವ ನೀಡುವ, ಅವರಿಗೆಂದೇ ಗೋಲ್ಡ್ ಮೆಡಲ್ ಗಳನ್ನು ರೂಪಿಸಿಟ್ಟುಕೊಂಡಂತಿರುವ, ಅವರಿಗೇ ಹೇಗಾದರೂ ಅವನ್ನು ತಲುಪಿಸುವ, ಅಥವಾ ತಮಗಿಷ್ಟವಾದವರ ಕೊರಳಿಗೇ ಅದು ಬೀಳುವಂತೆ ಮಾಡುವ, ಇನ್ನು ಕೆಲವರಿಗಂತೂ ಅದರ ಕನಸೂ ಕಾಣದಂತಾಗಿಸುವ, ಅಥವಾ ಅದನ್ನು ಅಸಾಧ್ಯವಾಗಿಸುವ ಮನೋಧರ್ಮದ ಮತ್ತು ಕೆಲವರ ಮೇಲೆ ಅನಗತ್ಯ ಕನಿಕರ, ಮೆಹರ್ಬಾನಗಿ ತೋರುವಂಥ ವರ್ತನೆ ಹೊಂದಿರುವಂತಿದೆ ಎನಿಸುವ ಶಿಕ್ಷಣ ವ್ಯವಸ್ಥೆ ಮತ್ತು ಅದರ ನಿರ್ವಹಣೆಯಲ್ಲಿ ತೊಡಗಿದವರ ಗುರುತಿಸುವಲ್ಲಿನ ಅಸಡ್ಡೆ, ಉಡಾಫೆ, ತರತಮ ನೀತಿ ನನ್ನೊಳಗೊಂದು ತಿರಸ್ಕಾರದ ಭಾವನೆ ಮೂಡಿಸಿದೆ. ದೊಡ್ಡ ನೋವು ಅದು. ಹೀಗಾಗಿ ನಾನು ಮೀಟ್ ನಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಆದರೆ ಕೆಲ ಗೆಳೆಯರ ಒಡನಾಟದ ನೆನಪು, ಜತೆಯಲ್ಲಿ ಓದಿದ ಹೆಮ್ಮೆಯ ಮುಂದೆ ನನ್ನ ಮುನಿಸದೆಂಥದು... ಮೀಟ್ ಗೆ ಬರಲಾಗಿದ್ದಕ್ಕೆ ಕ್ಷಮೆ ಇರಲಿ. ನೆನಪಿರಲಿ ನಿಮಗೆಲ್ಲಾ: ಕೆಚ್ಚೆದೆ, ಪ್ರತಿಭಟನಾ ಮನೋಧರ್ಮ, ನೈತಿಕತೆ, ಧೈರ್ಯ ಇರಲಿ. ಜರ್ನಲಿಸಂ ಗೆ ಅದು ಬೇಕು. ಪಿಆರ್ ಥರ ಬರಿಯ ಡಿಪ್ಲೊಮ್ಯಾಟಿಕ್ ಮನೋಧರ್ಮ ಅಲ್ಲ.
ಶಾಲ್ಮಲೆಯಲ್ಲಿ ಬಹುಶಃ ಹೊಸ ನೀರು ಹರಿದಿರಬಹುದು... ಕೊಂಚ ಎಲ್ಲದರಲ್ಲಿ ಸುಧಾರಣೆ ಬಂದಿರಲೂಬಹುದು. ನ್ಯಾಯಯುತವಾದ ಮನ್ನಣೆ ಅರ್ಹರಿಗೇ ದಕ್ಕಿದ್ದಲ್ಲಿ ಅವರಿಗೆ ನನ್ನ ದಿಲ್ ಪೂರ್ವಕ ಶುಭಾಶಯಗಳು.
'ಫಲಾನುಭವಿ'ಗಳನ್ನು ಹೊರತುಪಡಿಸಿ, ಹಾಗೇ ವಿಶಾಲ ಮನೋಧರ್ಮ, ಯಾವುದೋ ಭಾವುಕತೆ, ಭ್ರಮೆಯನ್ನೇ ಪ್ರಧಾನ ಎಂದುಕೊಂಡು ಮೀಟ್ ನಲ್ಲಿ ಪಾಲ್ಗೊಂಡ ಮುಗ್ಧ ಅಲುಮ್ನಿಗಳಿಗೆ, ಗೆಳೆಯರಿಗೆ ನನ್ನ ನಮನಗಳು.
Monday, January 25, 2010
ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ
ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ.
ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್ತಿರುವ ಚರ್ಚ್ ಮೇಲಿನ ಹಲ್ಲೆಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ.
ಏಸು ಜನ್ಮದ ಸಂದರ್ಭದಿಂದ ಹಿಡಿದು ಈತನಕದ ಮಾನವ ಇತಿಹಾಸದಲ್ಲಿ ಇದೆಲ್ಲ ಹೊಸದೇನೂ ಅಲ್ಲ. ಸ್ವತಃ ಏಸು ಕೂಡ ಕಲ್ಲೇಟು ಎದುರಿಸಿದವನು. ನಾಗರಿಕತೆ ಬೆಳೆದು ಬಂದಂತೆ ಅದರ ಜತೆಗೆ ಬದುಕಿನ ಹೊಸ ಮೌಲ್ಯಗಳೂ ಹುಟ್ಟಿಕೊಳ್ಳುತ್ತಲೇ ಬಂದವು. ಆಯಾ ನೆಲದ ಗುಣ, ಪರಿಸರ ಮತ್ತು ಆ ಕಾಲದ ಅಗತ್ಯಗಳಿಗನುಗುಣವಾಗಿ ನಾಗರಿಕತೆಗಳು ರೂಪುಗೊಂಡವು. ಜೀವನ ಶೈಲಿ, ಬದುಕಿನ ಮೌಲ್ಯಗಳ ಹೆಚ್ಚಿಸಲು ಧರ್ಮಗಳು, ಪಂಥಗಳು, ವಿವಿಧ ಸಂಸ್ಕೃತಿ ಹುಟ್ಟಿಕೊಂಡವು. ಆಯಾ ಜನರು ತಮ್ಮ ಬದುಕಿನ ಆಶಯಗಳು ಮತ್ತು ಕನಸುಗಳಿಗೆ ಸಂಬಂಧಿಸಿದಂತೆ ಅನುಕೂಲಕರವಾದ ಸಂಸ್ಕೃತಿಯೊಂದನ್ನು ಒಪ್ಪಿ, ಅನುಸರಿಸಿಕೊಂಡು ಬರುವ ಪ್ರಕ್ರಿಯೆ ಕೂಡ ಹೊಸದೇನೂ ಅಲ್ಲ. ನಂಬಿಕೆಗಳ ಆಧಾರದಲ್ಲೇ ನಡೆಯುವ ದೈವತ್ವದ ಕಲ್ಪನೆ ಮತ್ತು ಆದರ್ಶದ ಬದುಕು ವೈಯಕ್ತಿಕ ನಿರ್ಧಾರ ಅಷ್ಟೇ. ಅಂಥವರ ಸಂಖ್ಯೆ ಹೆಚ್ಚುತ್ತ ಸಾಗಿದಂತೆ ಅದರ ಪ್ರಭಾವವೂ ವಿಸ್ತಾರಗೊಳ್ಳುತ್ತ ಸಾಗುತ್ತದೆ. ನಂತರ ಅದೊಂದು ಸಾಂಘಿಕ ಮನೋಧರ್ಮವನ್ನೂ ರೂಪಿಸುತ್ತದೆ.
ಸಾಂಘಿಕ ಮನೋಧರ್ಮ ಒಂದು ಬೃಹತ್ ಶಕ್ತಿಗಣವಾದಾಗಲೇ ಸವಾಲುಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳ ಪ್ರಭಾವ ವ್ಯಾಪಕವಾದಂತೆ, ಜೀವನಶೈಲಿಯಲ್ಲಿ ಸುಧಾರಣೆ ಕನಸು ಗರಿಗೆದರಿದಂತೆ ಮನುಷ್ಯನಲ್ಲಿ ಸ್ಥಿತ್ಯಂತರದ ಮನೋಭಾವನೆ ಮೂಡುವುದು ಸಹಜ. ಹೀಗೆ ಮತಾಂತರದ ಪ್ರಕ್ರಿಯೆ ಸಹಜವಾಗೇ ಶುರುವಾಗುತ್ತದೆ. ಕ್ರೈಸ್ತರ ವಿಷಯಕ್ಕೆ ಬಂದಾಗ ಏಸು ಅಥವಾ ಮೇರಿ ಮೇಲಿನ ಮಮತೆ, ನಂಬಿಕೆ ಹೀಗೆ ಗಟ್ಟಿಗೊಳ್ಳುತ್ತಲೇ ಬಂದಿದ್ದು ಗಮನಕ್ಕೆ ಬರುತ್ತದೆ. ಅದರಲ್ಲಿ ಕಂಡುಕೊಳ್ಳುವ ಒಬ್ಬರ ನೆಮ್ಮದಿ ಮತ್ತೊಬ್ಬರಿಗೂ ಪ್ರೇರಣೆಯಾಗಲು ಸಾಧ್ಯವಿದೆ. ಇದು ಮತಾಂತರಕ್ಕೆ ಉಳಿದವರನ್ನು ಸೆಳೆಯುವ ಸಾಧ್ಯತೆಯೂ ಸಹಜವಾಗೇ ಸೃಷ್ಟಿಯಾಗುತ್ತದೆ. ಇದೇಕೆ ಕ್ರೈಸ್ತರಲ್ಲದವರ ಹೊಟ್ಟೆ ಉರಿಸಬೇಕು?
ಶಿವಾಜಿನಗರದ ಸಂತ ಮೇರಿ ಜಾತ್ರೆ ಈಚೆಗೆ ಭರ್ಜರಿಯಾಗೇ ನಡೆಯಿತು. ಹಿಂದೆ ಈ ಜಾತ್ರೆಗೆ ಕೆಲವೇ ಲಕ್ಷ ಜನ ಸೇರುತ್ತಿದ್ದರು. ಈಗದು ಲಕ್ಷಾಂತರಕ್ಕೆ ಹಬ್ಬಿದೆ. ಇದು ಇಡೀ ಬೆಂಗಳೂರಿನಲ್ಲಿ ಕ್ರೈಸ್ತರ ಮೇಲೆ ಇತರರ ಕಣ್ಣು ಕೆಂಪಾಗಿಸಿದೆ. ಅದರಲ್ಲೂ ಸ್ಥಳೀಯ ಸರ್ಕಾರದ ರಾಜಕೀಯ ಪಕ್ಷ ಮತ್ತದರ ಸಂಘಟನೆಗಳ ನಿದ್ದೆಗೆಡಿಸಿದೆ.
ಒಂದೆಡೆ ಮುಸಲ್ಮಾನರು ಪವಿತ್ರ ರಂಜಾನ ಮಾಸಾಚರಣೆಯಲ್ಲಿ ಮತ್ತಿತರ ಆಚರಣೆಗಳಲ್ಲಿ ಧಾರ್ಮಿಕವಾಗೇ ಪಾಲ್ಗೊಳ್ಳುತ್ತಾರೆ. ಮತ್ತೆ ಅವರು ಒಟ್ಟಾಗಿ ಸೇರಿ ಆಚರಿಸುವ ಹಬ್ಬಗಳೇ ಬೆರಳೆಣಿಕೆಯಷ್ಟು. ಸಾಂಘಿಕ ಶಕ್ತಿ, ತಮ್ಮದೇ ಧಾರ್ಮಿಕ ವಿಧಾನ, ಸ್ಪಷ್ಟ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಅವರೆಲ್ಲ ನೆಮ್ಮದಿ ಕಂಡುಕೊಂಡಿದ್ದಾರೆ. ಅವರ ಈ ನಡಾವಳಿ, ಸಂಸ್ಕೃತಿ ಇತರರಿಗೂ ಆಕರ್ಷಣೀಯವಾಗುವ ಸಾಧ್ಯತೆ ಇದೆ. ಅವರಂತೆ ನಾವ್ಯಾಕಾಗಬಾರದು ಎನ್ನುವ ಸಣ್ಣ ಆಶಯ ಇತರರಲ್ಲಿ ಮೂಡುವುದು ಸಹಜ. ಹೀಗೆ ಕ್ರೈಸ್ತರು ಮತ್ತು ಮುಸಲ್ಮಾನರು ತಮ್ಮ ಜೀವನಶೈಲಿ, ವೈವಿಧ್ಯತೆಯಲ್ಲಿ, ಸಾಂಘಿಕ ಶಕ್ತಿಯಲ್ಲಿ ಇತರರಿಗಿಂತ ಭಿನ್ನರಾಗಿ ಕಾಣಿಸುತ್ತಾರೆ. ಈ ಭಿನ್ನತೆ ಆಕರ್ಷಣೀಯವಾಗುತ್ತಿರುವುದೇ ಬಹುದೊಡ್ಡ ಸಂಕಟದ ಸ್ಥಿತಿಯನ್ನು ಕೆಲವರಲ್ಲಿ ರೂಪಿಸಿದೆ. ಇದು ಚರ್ಚ್ ಮೇಲಿನ ದಾಳಿಯಂಥ ಯಡವಟ್ಟುಗಳಿಗೆ ಪ್ರೇರೇಪಿಸುತ್ತದೆ.
ಕರಾವಳಿಯ ಈ ಕೆಟ್ಟ ಸಂಪ್ರದಾಯ ಇಡೀ ನಾಡಿಗೆ ಹಬ್ಬುತ್ತಿರುವುದು ಬಹಳ ನಾಚಿಕೆಗೇಡಿನ ಬೆಳವಣಿಗೆ. ಇದನ್ನು ಮಟ್ಟಹಾಕಬೇಕು ಎನ್ನುವುದು ನಮ್ಮ ದೇಶದ ಸಂವಿಧಾನದ ಮೂಲ ಗುರಿಯೂ ಆಗಿದೆ. ಬಹುಸಂಸ್ಕೃತಿಯನ್ನು ಒಪ್ಪಿಕೊಂಡ ನಮ್ಮ ಸಂವಿಧಾನಕ್ಕೆ ಇಂಥ ಬೂಟಾಟಿಕೆಯನ್ನು ತಡೆಯುವ ಮತ್ತು ಶಿಕ್ಷಿಸುವ ತಾಕತ್ತಿದೆ. ಇಡೀ ರಾಜ್ಯವನ್ನು ರೋಗಗ್ರಸ್ಥವಾಗಿಸುವ ಇಂಥ ಬೆಳವಣಿಗೆಗಳು ಸರ್ಕಾರದ ಕೃಪಾಪೋಷಿತ ಕೃತ್ಯಗಳಾಗದಂತೆ ತಡೆಯಬೇಕಾದ ಕೆಲಸ ಮೊದಲು ಆಗಬೇಕು. ಇಲ್ಲಿ ಬಿಜೆಪಿ ಅಥವಾ ಇನ್ನಾವುದೋ ಪಕ್ಷಗಳ ಆಡಳಿತ ಬರಲಿ. ಅವೆಲ್ಲ ಭಾರತದ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕು. ಅದು ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುವ ಲಿಖಿತ ಸಂವಿಧಾನ ಎನ್ನುವುದನ್ನು ಯಾರೂ ಮರೆಯಲೇಬಾರದು.
ಚರ್ಚ್ ಮೇಲಿನ ದಾಳಿಯಂಥ ಕೃತ್ಯಗಳನ್ನು ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಳ್ಳುವ ಹಾಗೂ ಕಂಡಲ್ಲಿ ಗುಂಡಿಕ್ಕುವ ಆದೇಶಗಳ ಮೂಲಕ ಮಾತ್ರ ತಡೆಯಬಹುದೆನ್ನುವುದು ಕೇವಲ ಭ್ರಮೆ. ಬದುಕುವ ಹಕ್ಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಶಯಗಳನ್ನು ಗಟ್ಟಿಗೊಳಿಸುವ ಅಭಿವೃದ್ಧಿ ಯೋಜನೆಗಳ ಮೂಲಕ ಮಾಡಬೇಕಾದ ಕೆಲಸವಿದು. ಸರ್ಕಾರ ಅಭಿವೃದ್ಧಿಯ ಫಲವನ್ನು ಎಲ್ಲ ಸಮೂದಾಯಗಳಲ್ಲಿ ಸಮನಾಗಿ ಹಂಚುವ ಮೂಲಕವಷ್ಟೇ ಇದು ಸಾಧ್ಯ.
ಆದರೆ ಈ ನೆಲದ ಸಾಮರಸ್ಯದ, ಬಹುಮುಖಿ ಸಂಸ್ಕೃತಿಯ, ಜಾತ್ಯತೀತದ ಕಾನೂನು ಯಾಕೋ ಸಡಿಲಗೊಳ್ಳುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲಿ ಕೆಲವರಿಗೆ ಬದುಕೇ ಹಿಂಸೆಯಾಗುವ ಅಪಾಯ ಕಾಣಿಸುತ್ತಿದೆ. ನಾಗರಿಕ ಸಮಾಜಕ್ಕೆ ಇಂಥ ದುರವಸ್ಥೆ ಎಂದೂ ಬರಬಾರದಲ್ಲವೇ?
ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
Tuesday, January 12, 2010
ಗೂಡು ಕಳಕೊಂಡ ಗುಬ್ಬಚ್ಚಿಗಳು...!
ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು. Monday, January 4, 2010
ಪೊನ್ನಪ್ಪ ಅವರ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...
Conflicts between conscience and law, in which the true Christian will feel bound to honour the man who follows his own conscience rather than the dictates of the law...
ಹೀಗೆ ಒಂದಷ್ಟು ಕ್ರೈಸ್ತ ನಂಬಿಕೆಗಳನ್ನಿಟ್ಟುಕೊಂಡು ಬರ್ಟ್ರಂಡ್ ರಸೆಲ್ ಕುಟುಂಬ ಕಲ್ಪನೆಯ ಬಗ್ಗೆ ಪುಸ್ತಕವೊಂದರಲ್ಲಿ ಚರ್ಚಿಸಿದ್ದಾನೆ. ಮದುವೆ ಮತ್ತು ಆದರ್ಶ ಕಲ್ಪನೆಯ ಬಗ್ಗೆ ಅರ್ಥಪೂರ್ಣ ಪ್ರಸ್ತಾಪ ಮಾಡಿದ್ದಾನೆ. ಅವನ ಒಟ್ಟು ಉದ್ದೇಶ ಹೇಗೆ ಕುಟುಂಬ ಕಲ್ಪನೆಗಳು ಮತ್ತು ಅದರ ಮೇಲೆ ಧರ್ಮದ ಹಿಡಿತಗಳು ಆದರ್ಶದ ಹೆಸರಲ್ಲಿ ಕಟ್ಟಲ್ಪಡುತ್ತವೆ, ಪುರಾತನ ನಂಬಿಕೆಗಳು ಮತ್ತು ಆಧುನಿಕ ಧೋರಣೆಗಳ ನಡುವಿನ ಸಂಘರ್ಷಗಳು ಹೇಗೆ ಒಂದಕ್ಕೊಂದು ತಿಕ್ಕಾಟ ನಡೆಸುತ್ತವೆ... ಎಂದು ಅದರಲ್ಲಿ ವಿವರಿಸುವ ಯತ್ನ ಮಾಡಿದ್ದಾನೆ.
ಧರ್ಮ ಮತ್ತು ಸಂಪ್ರದಾಯಗಳ ಸೀಮಿತ ಕಟ್ಟಳೆಗಳನ್ನು ಮೀರಿ ಮನುಷ್ಯ ತನ್ನ ಅಂತಃಪ್ರೇರಣೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಅವನ ವ್ಯಕ್ತಿತ್ವ ಪ್ರಖರಗೊಳ್ಳುತ್ತಾ ಸಾಗುತ್ತದೆ ಎನ್ನುವುದು ಮಾತ್ರ ಸ್ಪಷ್ಟ. ಪುರಾತನ ಕಾಲದ ಕ್ರೈಸ್ತರು ಧರ್ಮದ ಕಟ್ಟಳೆಗಳಿಗೆ ಮಹತ್ವ ಕೊಡುತ್ತ ಬಂದಿದ್ದರು. ಅದಕ್ಕೂ ಹಿಂದೆ ಯಾವ ಮಿತಿಗಳೂ ಇರಲಿಲ್ಲ. ಆಗಿನ ಭೀಕರ ಸ್ಥಿತಿಯಿಂದ ಒಂದಷ್ಟು ಪ್ರಗತಿ ಸಾಧನೆಗೆ ಆ ಥರದ ಧರ್ಮ ಬಳಕೆಯಾಯ್ತಾದರೂ ಕಾಲಾ ನಂತರದಲ್ಲಿ ಅದರ ಮಿತಿಗಳೂ ಪ್ರಶ್ನಾರ್ಹ ಎನಿಸಿಕೊಂಡವು. ಅಂತೆಯೇ ಅದನ್ನು ಮೀರುವ ಕ್ರಾಂತಿಕಾರಕ ನಿರ್ಧಾರಗಳು ಮುಂದಿನ ತಲೆಮಾರುಗಳ ಅಟಿಟ್ಯೂಡ್ ಅಥವಾ ಆದರ್ಶಗಳಾಗಿ ಮೂಡಿಬಂದವು. ವಿಶೇಷವಾಗಿ ಪಶ್ಚಿಮ ರಾಷ್ಟ್ರಗಳಲ್ಲಿ. ಇದು ಏಷ್ಯದ ಇಸ್ಲಾಂ ಮತ್ತಿತರ ಧರ್ಮೀಯರಲ್ಲೂ ಆಗುವಂಥದೇ. ಆಗುತ್ತಿದೆ... !
'ನಮ್ಮಂತೆಯೇ ನಮ್ಮ ಮಕ್ಕಳೂ ಸಹ ಇಂಥದೇ ಮಾರ್ಗದಲ್ಲಿ ಸಾಗುವಂತಾಗಲಿ' ಎಂದು ಹೆಚ್ಚಿನ ಪಾಲಕರು ಅಥವಾ ಪೋಷಕರು ಆಶಿಸುತ್ತಾರೆ. ಅದಕ್ಕಾಗಿ ಯತ್ನಿಸುತ್ತಾರೆ. ನಮ್ಮ ಬಹುಪಾಲು ಕುಟುಂಬ ಕಲ್ಪನೆಯಲ್ಲಿ ಇದೇ ದೊಡ್ಡ ಆದರ್ಶ ಅಥವಾ ಸಂಪ್ರದಾಯವಾಗಿ ಬೆಳೆದು ಬಂದಿದೆ. ಎಲ್ಲೋ ಕೆಲವರು ಇದನ್ನು ಮೀರಲು ನೋಡುತ್ತಾರೆ.ಮಗ ಅಥವಾ ಮಗಳು ಸೀಮಿತ ಚೌಕಟ್ಟನ್ನು ಮೀರಲು ನಿಂತಾಗ ಕುಟುಂಬಗಳಲ್ಲಿ ದೊಡ್ಡ ಸಂಘರ್ಷವೇ ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಬಹುಪಾಲು ಕುಟುಂಬದ ಯಜಮಾನರು ಮಕ್ಕಳ ಕನಸುಗಳಿಗೆ ವಿರುದ್ಧವಾಗೇ ವರ್ತಿಸಿಬಿಡುತ್ತಾರೆ.
ಸಂಪ್ರದಾಯಸ್ಥರಂತೆ ಎಷ್ಟೋ ಪ್ರಗತಿಪರರೂ, ಬಂಡಾಯಗಾರರು ಇಂಥ ಪ್ರವೃತ್ತಿಯನ್ನು ಬೆಳೆಸಿಕೊಂಡ ಬೇಕಾದಷ್ಟು ಉದಾಹರಣೆಗಳಿವೆ. ಅಂತಸ್ತು ಅಥವಾ ಜಾತಿ, ಧರ್ಮದ ಸೀಮಿತ ವಲಯದಲ್ಲೇ ಸಂಬಂಧಗಳನ್ನು ಕಾಣುವ ಸಂಕುಚಿತ ಮನಸ್ಥಿತಿ ಇಂಥವರಲ್ಲಿರುತ್ತದೆ. ಇದೂ ಸಮಾಜದ ಅಂಧಕಾರಕ್ಕೆ, ಅಶಾಂತಿಗೆ, ಹಿಂಸೆಗೆ ಮೂಲ ಕಾರಣವಾಗಿರುವುದನ್ನು ಇವರು ಒಪ್ಪುವುದೇ ಇಲ್ಲ. ತಮ್ಮ ವಾದ, ಪ್ರತಿವಾದಗಳಿಂದ ಅಥವಾ ಹರಿತ ಬೌದ್ಧಿಕ ಪಿತೂರಿಗಳಿಂದ ಎಲ್ಲವನ್ನು ಸಮರ್ಥಿಸಿಕೊಂಡುಬಿಡುತ್ತಾರೆ.
ಅಜ್ಜ, ಅಜ್ಜಿ, ತಾತ, ಮುತ್ತಾತ, ಅಪ್ಪ, ಅಮ್ಮ, ಮಕ್ಕಳು, ಮೊಮ್ಮಕ್ಕಳು... ಎನ್ನುವ ದೊಡ್ಡ ಹರವು ಕುಟುಂಬ ಕಲ್ಪನೆಯಲ್ಲಿತ್ತು. ಅದೀಗ ಕೇವಲ ಅಪ್ಪ, ಅಮ್ಮ ಮತ್ತು ಮಕ್ಕಳವರೆಗೆ ಮಾತ್ರ ಸೀಮಿತಗೊಂಡಿದೆ. ಇದು ಕಾಲದ ಒತ್ತಡ ಎಂದು ಬೇಕಾದರೆ ಅನ್ನಿ. ಇದೇ ಕಾಲದ ವಿಶೇಷತೆ ಎಂದರೆ, ಮಕ್ಕಳೂ ತಮ್ಮದೇ ಕುಟುಂಬ ಕಲ್ಪನೆಗಳನ್ನು (ಜಾತಿ, ಧರ್ಮ, ವರ್ಣ, ದೇಶ, ಪ್ರದೇಶ, ಅಂತಸ್ತು, ವಯಸ್ಸು.. ಮಿತಿ ಇಲ್ಲದ) ರೂಪಿಸಿಕೊಳ್ಳಲು ಹಾತೊರೆಯುತ್ತಿರುವುದು. ಈಗಿನ ಬಹುಪಾಲು ಯುವಕರಲ್ಲಿ ಇಂಥ ಸಾಹಸಿ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಾರ್ಹ.
ಹೊಸ ವರ್ಷದ ಮೊದಲ ಭಾನುವಾರ (3 ಜನವರಿ 2009), ಬೆಂಗಳೂರಿನಲ್ಲಿ ನಮ್ಮ ಪತ್ರಿಕಾರಂಗದ ಹಿರಿಯರಾದ ಎಂ.ಎ. ಪೊನ್ನಪ್ಪ ಅವರ ಮಗಳ ರಿಸೆಪ್ಷನ್ ನಡೆಯಿತು. ಬನ್ನೇರುಘಟ್ಟ ರಸ್ತೆಯಲ್ಲಿರುವ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಬಹಳ ಅದ್ದೂರಿಯಾಗೇ ಸಮಾರಂಭ ನಡೆಯಿತು. ಕೊಡವ ಸಂಸ್ಕೃತಿಯಲ್ಲಿ ಬೆಳೆದ ಪೊನ್ನಪ್ಪ ಅವರ ಪುತ್ರಿ ತನ್ನ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿದ್ದು ಸಪ್ತಸಾಗರದಾಚೆಗಿನ ಸಂಸ್ಕೃತಿಯವನನ್ನು. ಅಪ್ಪಟ ವಿದೇಶಿಯೊಬ್ಬನನ್ನು ಪ್ರೀತಿಸಿ, ಅವನನ್ನೇ ಬಾಳಸಂಗಾತಿಯಾಗಿಸಿಕೊಳ್ಳುವ ಮಗಳ ನಿರ್ಧಾರವನ್ನು ತಂದೆಯಾಗಿ ಪೊನ್ನಪ್ಪ ಅವರು ಪ್ರೋತ್ಸಾಹಿಸಿದ ಮತ್ತು ಅದನ್ನು ಮನಸಾರೆ ಸ್ವಾಗತಿಸಿದ ರೀತಿಗೆ ಸಲಾಂ ಹೇಳಬೇಕೆನಿಸಿತು.
ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥರಾಗಿ ಅವರು ಕಂಡ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟ್ ಅನ್ನು ನಿಜ ಬದುಕಿನಲ್ಲಿ ತಂದ ರೀತಿ ಅದ್ಭುತ ಎನಿಸಿತು. ನಾವು ಮಾಡುವ ಕೆಲಸ ಮತ್ತು ಪರ್ಸನಲ್ ಲೈಫಿನಲ್ಲಿ ನಾವಿರುವ ಸಾಮಾಜಿಕ, ಧಾರ್ಮಿಕ ಸ್ಥಿತಿಯ ನಂಬಿಕೆಗಳಿಂದ ಒಂದು ನಿರ್ಧಿಷ್ಟ ದೂರ ಕಾಯ್ದುಕೊಳ್ಳುವ ಪ್ರವೃತ್ತಿಯೇ ನಮ್ಮಲ್ಲಿ ಹೆಚ್ಚಿರುತ್ತದೆ. ನಾವು ಮಾಡುವ ಕೆಲಸ ಸಾಮಾಜಿಕ ಸಾಮರಸ್ಯ, ಜಾತ್ಯತೀತ, ನಿಷ್ಪಕ್ಷಪಾತ ಮನೋಧರ್ಮ ಬಯಸುತ್ತಿರುತ್ತದೆ. ಆದರೆ ನಿಜ ಜೀವನದಲ್ಲಿ ಅದ್ಯಾವುದೂ ನಮ್ಮ ಎಷ್ಟೋ ಜನರ ಮನೋಧರ್ಮವೇ ಆಗಿರುವುದಿಲ್ಲ. ಪೂರ್ವಗ್ರಹೀತ ಮನಸ್ಥಿತಿಯೇ ನಮ್ಮ ಕೆಲಸದಲ್ಲೂ ಪ್ರಭಾವ ಮಾಡತೊಡಗಿರುತ್ತದೆ. ಒಟ್ಟಾರೆ ಆಶಯಗಳೆಲ್ಲ ತೀವ್ರ ಹಾನಿಯನ್ನು ಅನುಭವಿಸುವುದು ಈ ಹಿನ್ನೆಲೆಯಿಂದಲೇ. ಹೀಗಾಗಿ ಕರ್ತವ್ಯ, ಕೆಲಸವೆನ್ನುವುದು ಯಾಂತ್ರಿಕಗೊಳ್ಳುತ್ತ ಸಮಾಜದ ಸಮಷ್ಠಿಪರ ಆಶಯಗಳೆಲ್ಲ ಸೊರಗತೊಡಗುತ್ತವೆ.
ಎಷ್ಟೋ ಪ್ರಗತಿಪರರು (ಎಲ್ಲರೂ ಅಂತೇನಲ್ಲ) ಭಾಷಣ, ಕಾವ್ಯ, ಲೇಖನಗಳಿಗೆ ಮಾತ್ರ ಆದರ್ಶಗಳನ್ನು ಸೀಮಿತಗೊಳಿಸಿಕೊಂಡಿದ್ದಿದೆ. ಸಾಮಾಜಿಕ ಬದಲಾವಣೆ ತರುವ ಬರಿಯ ಸೋಗಲಾಡಿತನವನ್ನು ಹೊಂದಿದ ಬೇಕಾದಷ್ಟು ಉದಾಹರಣೆಗಳಿವೆ. ಆದರೆ, ಇದೆಲ್ಲವನ್ನು ಮೀರಿ ಸದ್ದಿಲ್ಲದೇ ಅಪ್ಪಟ ಪ್ರಗತಿಪರ ಧೋರಣೆಯನ್ನು ಮೆರೆದ ಪೊನ್ನಪ್ಪ ಅವರ ದಿಟ್ಟತನ, ತಂದೆಯಾಗಿ ಸಂಪ್ರದಾಯಗಳಿಗೆ ಶರಣಾಗದೇ, ಮಗಳ ಕನಸು, ಆಶಯಗಳನ್ನೇ ಮುಖ್ಯವೆಂದು ಭಾವಿಸಿದ ಪರಿ ಅಭಿಮಾನ ಮೂಡಿಸುವಂಥದು. ಎಷ್ಟೋ ಪ್ರಗತಿಪರ ಸೋಗಿನವರು ತಮ್ಮ ಸಣ್ಣ ಜಾತಿ, ಅಂತಸ್ತಿನ ಮಿತಿಯನ್ನೇ ಮೀರುವ ಧೈರ್ಯ ತೋರುವುದಿಲ್ಲ. ಅಂಥದರಲ್ಲಿ ಮಗಳ ಸೀಮೋಲ್ಲಂಘನ ಸಾಹಸಕ್ಕೆ ತಂದೆಯಾಗಿ ಪೊನ್ನಪ್ಪ ಚಪ್ಪಾಳೆ ತಟ್ಟಿ 'ಷಹಬ್ಬಾಸ್ ಮಗಳೇ' ಎಂದಿದ್ದು ನೋಡಿ ಖುಷಿಯಾಯಿತು. ನಾನು ಭಾಗವಹಿಸಿದ ಮೊತ್ತ ಮೊದಲ ಇಂಥ ಸಮಾರಂಭ ಇದಾದ್ದರಿಂದ ತುಂಬ ಖುಷಿ ಎನಿಸಿತು. ಇದನ್ನೂ ಮೀರಿದ ಸಾಹಸ ಮಾಡಿದವರೂ ಇರಬಹುದು. ಇದನ್ನು ಮೀರಿದ ಜಂಟಲ್ ಮನ್ಶಿಪ್ ಮೆರೆದವರೂ ಇರಬಹುದು. ಆದರೆ ನನ್ನ ಮಟ್ಟಿಗೆ ಇದು ಗ್ರೇಟ್. ನಮ್ಮ ನಡುವಿನ ಹಿರಿಯ ಸಹೋದ್ಯೋಗಿಯೊಬ್ಬರು ಹೊಸ ತಲೆಮಾರಿನ ಆಶಯಗಳಿಗೆ ಇಂಥ ದೊಡ್ಡ ಮಾನ್ಯತೆ ಕೊಡುವ ಮನೋಧರ್ಮ ವ್ಯಕ್ತಪಡಿಸಿದ್ದು ನಿಜಕ್ಕೂ ಹೆಮ್ಮೆ ಮೂಡಿಸುವಂಥದು. ಇದು ನನ್ನ ಪ್ರಾಮಾಣಿಕ ಭಾವನೆ.
ಪೊನ್ನಪ್ಪ ಅವರಂಥ ಹಿರಿಯ ಜೀವಿಯ ಇಂಥ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...
Wednesday, December 30, 2009
ಸಾವಿನ ಬಗ್ಗೆ ಗಿಬ್ರಾನ್ ಸಾಲುಗಳು...
ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು?
ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,
ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...!
ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ?
ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,
ಅದು ಲೀನವಾಗಲಿ ಬದುಕಿನ ಶರೀರದೊಳಗೆ...
ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ.
ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ.
ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ
ವಸಂತದ ಕನಸು ಕಾಣುತ್ತಿರುತ್ತದೆ.
ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ,
ಅನಂತದೆಡೆಗೆ ತೆರಕೊಳ್ಳುವ ಹಾದಿಗೆ!
ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ?
ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು,
ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು
ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ?
ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು!
ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು...
ಭೂಮಿ ಪ್ರತಿ ಅಂಗಾಂಗಗಳ ತಟ್ಟಿದಾಗಲೇ ನಿಮ್ಮ ನಿಜವಾದ ನೃತ್ಯ ಶುರುವಾಗೋದು...!
ಮೂಲ: ಖಲೀಲ್ ಗಿಬ್ರಾನ್.
'ಮಂಡೆ ಬಿಸಿ' ಮಾಡುವ ಟಿವಿ ಜನ ಮತ್ತು ಗಿಬ್ರಾನ್ ಸಾಲುಗಳ ನೆನಪು...
ನಮ್ಮ ಮಾಧ್ಯಮ ಜಗತ್ತು ಸಾವಿನಂಥ ವಾರ್ತೆಯನ್ನೂ ಬಿಕರಿಗೆ ಬಳಸಿಕೊಳ್ಳುವುದನ್ನು ಕಂಡಾಗ ದಿಲ್ ನಾರಾಜ್ ಆಯ್ತು. ಈ ವರ್ಷದ ಕೊನೆಯ ಮೂರು ದಿನಗಳಲ್ಲಿ (28, 29, 30) ರಾಜ್ಯದ ಜನತೆಗೆ ಮೃತ್ಯು ಎನ್ನುವುದು ಯಾಕೊ ಕಸಿವಿಸಿ ಮೂಡಿಸಿತು. ಜನಪ್ರಿಯತೆಯನ್ನೇ ನೆಚ್ಚಿ ಬದುಕಿದ್ದ ಇಬ್ಬರು ಗ್ಲ್ಯಾಮರ್ ಜಗದ ತಾರೆಯರು (ಗಾಯಕ ಸಿ. ಅಶ್ವಥ್ ಮತ್ತು ನಟ ವಿಷ್ಣುವರ್ಧನ್) ಇದೇ ಅವಧಿಯಲ್ಲಿ ಇಹಲೋಕ ತ್ಯಜಿಸಿದರು.
ಅವರ ಬಗ್ಗೆ ಅಭಿಮಾನ ಮತ್ತು ಅವರು ಪ್ರತಿನಿಧಿಸುತ್ತಿದ್ದ ಕಲೆಯ ಮೂಲಕ ನೀಡಿದ ಮನರಂಜನೆಯನ್ನು 'ಅಮಲಾಗಿಸಿಕೊಂಡಂತಿದ್ದ ಅಭಿಮಾನಿ' (ಎಲ್ಲರೂ ಅಲ್ಲ) ಬಳಗದ ಪ್ರೀತಿ ಮತ್ತು ಹುಚ್ಚಾಟಗಳನ್ನೇ ಟಿವಿ ಮಾಧ್ಯಮ ದೊಡ್ಡದು ಮಾಡಿ, ಇಡೀ ದಿನ ಬಿಟ್ಟೂ ಬಿಡದೇ ಅದನ್ನೇ ಬಿತ್ತರಿಸಿದ್ದು ಅತಿರೇಕವೆನಿಸಿತು. ನಡುವೆ ಲಾಭ ತಂದುಕೊಡಬಲ್ಲ ಜಾಹೀರಾತುಗಳ ಭಾರಿ ಪೈಪೋಟಿ.
ಮುಗ್ಧ ಜನರಿಗೆ ಅನಗತ್ಯವಾಗಿ ಈ ವಿಷಯಗಳ ಹುಚ್ಚು ಹಿಡಿಸುವಂಥ, ಅವರನ್ನು ಪ್ರವೋಕ್ ಮಾಡುವಂಥ ಮತ್ತು ಬೇಕೆಂದೇ ಸೆನ್ಸೇಷನ್ ಹುಟ್ಟು ಹಾಕುವಂಥ ಟಿವಿ ಮಾಧ್ಯಮಗಳ ಪ್ರವೃತ್ತಿ ಈಗ್ಯಾಕೊ ಅತಿಯಾಗುತ್ತಿದೆ. ಮತ್ತು ಇಲ್ಲಿ ಸಾಯುವ ವ್ಯಕ್ತಿಯ ಜಾತಿ, ಧರ್ಮ, ಪ್ರದೇಶವೂ ಮುಖ್ಯವಾಗುತ್ತಿರುವುದು ಇನ್ನೂ ಅಸಹ್ಯದ ಸಂಗತಿ. ಬೇಕೆಂದೇ ಕೆಲವರ ವೈಭವೀಕರಣ, ಮತ್ತವರ ನಂಬಿಕೆ, ಆಚರಣೆ, ಸಿದ್ಧಾಂತಗಳ ಅನಗತ್ಯ ಪ್ರಚಾರ, ಕೆಲವರ ಬಗ್ಗೆ ಉದ್ದೇಶಪೂರ್ವಕ ಎನಿಸದಂತೆಯೂ ಉದ್ದೇಶಪೂರ್ವಕವಾಗೇ ಮಾಡುವ ಕ್ಯಾರೆಕ್ಟರ್ ಅಸ್ಯಾಸಿನೇಷನ್, ಇನ್ನು ಕೆಲವರ ನೆಗ್ಲೆಕ್ಟ್ ಮಾಡುವ ಯತ್ನಗಳು ಅಸಹ್ಯ ಹುಟ್ಟಿಸುತ್ತಿವೆ.
ಇದೆಲ್ಲ ಯೋಚಿಸಿ ದಿಲ್ ಯಾಕೊ ಬೇಸರಗೊಂಡಿತು. ಲೆಬೆನಾನ್ ನ ದಾರ್ಶನಿಕ ಕವಿ ಖಲೀಲ್ ಗಿಬ್ರಾನ್, ಸಾವಿನ ಮತ್ತು ಒಟ್ಟಾರೆ ಮನುಷ್ಯ ಬದುಕಿನ ಸಾರದ ಬಗ್ಗೆ 'ಪ್ರೊಫೆಟ್' ಪುಸ್ತಕದಲ್ಲಿ ಬರೆದ ಸಾಲುಗಳು ನೆನಪಾದವು. ಅವನ ಆ ಸಾಲುಗಳನ್ನು ನಾನು ಮೇಲಿನಂತೆ ಅರ್ಥಮಾಡಿಕೊಂಡೆ ಅಷ್ಟೇ.
Sunday, December 27, 2009
ದಿಲ್ ಏಕ್ ಮಂದಿರ್ ಹೈ...
ನೋಡಿ ಇಂಟರ್ ನೆಟ್ ಎನ್ನುವ ಮಾಯಾಂಗನೆ ಅದೆಂಥ ಮಾಟ ಮಾಡಿದಳು! ಯಾವುದೋ ಒಂದು ಖಾಲಿ ಭಾವದ ಹೊತ್ತಲ್ಲಿ ಆರ್ಕುಟ್, ಟ್ವಿಟರ್ ಎನ್ನುವ ಸೋಶಿಯಲ್ ತಾಣಗಳಲ್ಲಿ ಹರಿದಾಡಿದ ಮನಸುಗಳಿಗೆ ಎಂಥ ಅದೃಷ್ಟು ಖುಲಾಯಿಸಿತು! ತನ್ನ ಗೆಳತಿಯೊಬ್ಬಳು ನೀಡಿದ ಸಲಹೆಗೆ ಈ ಹುಡಗಿ ಒಂದು ಚಾನ್ಸ್ ನೋಡೋಣ ಎಂದು ಸಂದೇಶ ರವಾನಿಸಲು ಶುರುವಿಟ್ಟುಕೊಂಡಳು. ಆ ಕಡೆಯಿಂದ ಹುಡುಗ ಒಳ್ಳೆಯ ಸ್ಪಂದನೆ ನೀಡಿದ. ಪ್ರೇಮ ಲೋಕ ತೆರಕೊಳ್ಳಲು ಅದೆಷ್ಟು ಸಮಯ ಬೇಕು? ಆನ್ ಲೈನ್ ಪ್ರಣಯದ ಕ್ಷಣಗಳು ಹಾಗೇ ಗರಿಬಿಚ್ಚಿ ನಲಿದಾಡಲು ಆರಂಭಿಸಿದವು. ಆ ಕ್ಷಣಗಳಿಗೆ ಅದೆಂಥ ಮೋಡಿ ಇತ್ತೊ ಅಂತೂ ಒಂದು ಬಂಧ ಗಟ್ಟಿ ಬುನಾದಿ ಪಡಕೊಂಡಿತು.
ಹುಡುಗ ಮುಂಬೈನಲ್ಲಿ ಕಂಪೆನಿಯೊಂದರ ಕಾಲ್ ಸೆಂಟರ್ ಉದ್ಯೋಗಿ. ಹುಡುಗಿ ನಾಡಿನ ಹೆಸರಾಂತ ಇಂಗ್ಲಿಷ್ ದೈನಿಕದ ಪತ್ರಕರ್ತೆ. ದೂರದ ಪಶ್ಚಿಮ ಬಂಗಾಳದವಳು. ಒಂದು ದಿನ ಹುಡುಗಿಯನ್ನು ಕಾಣಲು ಹುಡುಗ ಮುಂಬೈನಿಂದ ಬೆಂಗಳೂರಿಗೆ ಬಂದ. ಹುಡುಗಿಗೆ ಏನು ಮಾಡಬೇಕೊ ತೋಚದಾಯಿತು. ಬಂಧ ಗಟ್ಟಿಗೊಳ್ಳುವ ಈ ಪರಿಯ ಸ್ಪೀಡ್ ಗೆ ಆಕೆ ದಿಗಿಲಿಗೊಂಡಿರಬೇಕು. ವಿಷಯ ನನಗೂ ಮನದಟ್ಟು ಮಾಡಿಕೊಟ್ಟಳು. ಬೆಂಗಳೂರಿನಲ್ಲಿ ತನ್ನ ವಿಧವೆ ತಾಯಿಯೊಬ್ಬಳನ್ನು ಬಿಟ್ಟರೆ ಬೇರಾರನ್ನೂ ಅಷ್ಟು ಹತ್ತಿರದಿಂದ ಬಲ್ಲವಳಲ್ಲ ಈ ಹುಡುಗಿ. ಆಕೆಗೆ ಕೊಂಚ ನಾನೇ ಹತ್ತಿರದವ. ಆಕೆಯ ತಾಯಿಗೂ ನನ್ನ ಮೇಲೆ ಅದೇನೋ ಅಕ್ಕರೆ, ಪ್ರೀತಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ಬಂಧು ಎನ್ನುವಂಥ ದೊಡ್ದ ನಂಬಿಕೆ.
ಮೊದಲ ಸಲ ತನ್ನ ಹುಡುಗನನ್ನು ಭೇಟಿ ಆಗುವ ದಿನದಂದು ಹುಡುಗಿ ನನ್ನ ಕರೆದಳು. ಇಬ್ಬರನ್ನು ಎಂ.ಜಿ ರಸ್ತೆಯ ಎಂ.ಜಿ ಹೋಟೇಲಿನಲ್ಲಿ ಕೂರಿಸಿಕೊಂಡು ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮಾಡಿಸಿ ಪ್ರೀತಿ ಹರಟೆ ಕಟ್ಟೆಗೆ ಅವರನ್ನೆಳೆದೆ. ಹುಡುಗನ ಮನಸು ಕಟ್ಟೆಯಲ್ಲಿ ತುಂಬ ಪ್ರಾಂಜಲವಾಗಿ ತೆರಕೊಂಡಿತು. ಅದರಲ್ಲಿ ಅವನ ನಯ, ವಿನಯ ಹೆಚ್ಚಾಗಿ ಅವನ ಬದ್ಧತೆ ನನ್ನ ಸೆಳೆಯಿತು. ಅವಳಿಗೆ ಹೇಳಿದೆ. ಪ್ರೀತಿ ಒಂದು ದೊಡ್ಡ ಅದೃಷ್ಟ, ದೇವರ ಕಾಣಿಕೆ ಎಂದು ನೀನು ನಂಬೋದಾದರೆ ಇವನ ಪ್ರೀತಿ ಬಟ್ಟಲನ್ನು ಎತ್ತಿಕೊಂಡುಬಿಡು ಎಂದೆ. ಅವಳು ಒಂದರೆಕ್ಷಣ ನನ್ನ ಕಣ್ಣುಗಳನ್ನೇ ನೋಡಿದಳು. ಅವಳಿಗೆ ಅಲ್ಲಿ ಪ್ರಾಮಾಣಿಕ ಅಭಿಪ್ರಾಯದ ಬೆಳಕು ಕಂಡಿತು. ಆಕೆ ಮುಖವನ್ನರಳಿಸಿ ಅವನತ್ತ ನೋಡಿದಳು. ಅವನು ಧನ್ಯ ಧನ್ಯ...
ಹುಡುಗ ಬೆಂಗಳೂರಿನಲ್ಲಿ ಆಕೆಯೊಂದಿಗೆ ಕಳೆದ ಮೊದಲ ಒಂದಷ್ಟು ದಿನಗಳಲ್ಲೇ ಅವಳನ್ನು ತನ್ನ ಬಾಳ ಸಂಗಾತಿಯಾಗಿಸಿಕೊಳ್ಳುವ ನಿರ್ಧಾರ ಮಾಡಿಬಿಟ್ಟ. ಅವಳ ಜನ್ಮದಿನ ಕೂಡ ಆಗಲೇ ಇತ್ತು. ಅವಳ ಆಫೀಸಿನಲ್ಲಿ ಎಲ್ಲರೆದುರು ಮಂಡಿಯೂರಿ ಕೈಯಲ್ಲಿ ಹೂಗುಚ್ಛ ಹಿಡಿದು ಪ್ರಪೋಸ್ ಮಾಡಿಯೇಬಿಟ್ಟ. ಎಲ್ಲರೆದುರು ಆಫೀಸಿನಲ್ಲಿ ಕೇಕ್ ಕತ್ತರಿಸಿ ಅವಳ ಜತೆ ಖುಷಿ ಹಂಚಿಕೊಂಡ. ಹೊರ ಬಂದವನೇ ನನ್ನ ಕೈಹಿಡಿದು, 'ದಿಲ್ ಭಾಯ್ ಈ ಪ್ರೇಮ ಕ್ಷಣಗಳಿಗೆ ನೀವೇ ದೊಡ್ಡ ಸಾಕ್ಷಿ. ನಮ್ಮಿಬ್ಬರ ಮದುವೆ ಮಾಡಿಸುವ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಮುಂಚೂಣಿಯಲ್ಲಿ ನಿಂತು ಮಾತುಕತೆ ಮುಂದುವರಿಸಬೇಕು' ಎಂದ.
ಅವಳೂ ಅಷ್ಟೇ. 'ದಿಲ್, ನನಗೆ ಬೇರಾರೂ ಬಂಧುಗಳಿಲ್ಲ. ನಿನ್ನ ಮೇಲೆ ನನಗೆ ಭರವಸೆ, ಪ್ರೀತಿ, ನಂಬಿಕೆ ಇದೆ. ನನ್ನ ಪರವಾಗಿ ನೀನೇ ಹುಡುಗನ ಮನೆಯಲ್ಲಿ ಮಾತುಕತೆ ನಡೆಸಬೇಕು' ಎಂದಳು. ಅವಳ ತಾಯಿಯೂ ಇದೇ ಮಾತನ್ನು ಹೇಳಿದರು. ನನಗೆ ಇದಕ್ಕಿಂತ ಪುಣ್ಯ ಬೇಕೆ? ಎಂದುಕೊಂಡೆ.
Thursday, December 24, 2009
An Important Issue: MUST READ
An Important Issue!
Salary & Govt. Concessions for a Member of Parliament (MP)
Monthly Salary : Rs. 12,000/-
Expense for Constitution per month : Rs. 10,000/-
Office expenditure per month : Rs. 14,000/-
Traveling concession (Rs. 8 per km) : Rs. 48,000/-
(eg. For a visit from South India to Delhi & return : 6000 km)
Daily DA TA during parliament meets :
Rs. 500/day
Charge for 1 class (A/C) in train : Free (For any number of times)
(All over India )
Charge for Business Class in flights :
Free for 40 trips / year (With wife or P...A.)
Rent for MP hostel at
Delhi : Free.
Electricity
costs at home : Free up to 50,000 units.
Local phone call charge : Free up to 1, 70,000 calls..
TOTAL expense for a MP
[having no qualification] per year : Rs.32, 00,000/-
[i.e.. 2.66 lakh/month]
TOTAL expense for 5 years :
Rs. 1, 60, 00,000/-
For 534 MPs, the expense for 5 years :
Rs. 8,54,40,00,000/-
Nearly 855 crores
AND THE PRIME MINISTER IS ASKING THE HIGHLY QUALIFIED, OUT PERFORMING CEOs TO CUT DOWN THEIR SALARIES......
This is how all our tax money is been swallowed and price hike on our regular commodities.........
And this is the present condition of our country :
& FORWARD THIS MESSAGE TO ALL REAL CITIZENS OF INDIA !!
Wednesday, December 23, 2009
ಪ್ರೀತಿ ಎನ್ನುವ ದೊಡ್ಡ ಬಾಂಬ್!
ಉದ್ದುದ್ದ ಬೋರ್ ಹೊಡಿಸುವ ವಿಷಯಗಳನ್ನು ಚಚ್ಚುವ ಬಹುತೇಕ ಭಾಷಣಕಾರರು ಇಂಥ ಸಮಾರಂಭಗಳಲ್ಲಿ ಕಿರಿ ಕಿರಿ ಹುಟ್ಟಿಸಿ ಭಾಷಣಕಾರರ ಬಗ್ಗೆ ಭಯ ಹುಟ್ಟಿಸಿಟ್ಟಿದ್ದಾರೆ. ಇನ್ನು ಕೆಲವರು ಜೋಕುಗಳ ಮೂಲಕ, ಚಾಣಾಕ್ಷ ಮಾತುಗಳ ಮೂಲಕ ಪ್ರೇಕ್ಷಕರಿಗೆ ಸರ್ಕಸ್ ಜೋಕರ್, ಪ್ರಾಣಿಗಳ ಕೌಶಲ್ಯದಂತೆ ಪ್ರತಿಭೆ ಮೆರೆದು ಟೈಂ ಪಾಸ್, ಎಂಟರ್ಟೇನ್ಮೆಂಟ್ ಮಟ್ಟಕ್ಕೆ ಭಾಷಣಗಳನ್ನು ಇಳಸಿಬಿಟ್ಟಿದ್ದಾರೆ. ಇನ್ನು ಕೆಲವರು ಬಿಟ್ಟಿ ಪ್ರವಚನ ಹೇಳಿ ದೇವಾಂಶ ಸಂಭೂತರಂಥ, ಡಿಪ್ಲೋಮೆಸಿಯಂಥ ಬರಿಯ ಸೋಗು ಮೆರೆದಿದ್ದಾರೆ.
ಹೀಗಾಗಿ ಇದೆಲ್ಲ ನೆನಪಿಸಿಕೊಂಡು ನನಗೂ ಭಾಷಣ ಎಂದರೆ ಒಂದು ರೀತಿಯ ಭಯ ಹುಟ್ಟಿಕೊಂಡಿದ್ದು ಒಂದು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ. ಇದರಲ್ಲಿ ನನಗೂ ಪಾಲ್ಗೊಳ್ಳುವ ಸಂದರ್ಭವೊಂದು ಒದಗಿ ಬಂದಾಗ.
ಬೆಂಗಳೂರಿನ ಆರ್.ಪಿ.ಸಿ ಲೇಔಟ್ ನ ಸೇಂಟ್ ಮೈಕಲ್ ಸ್ಕೂಲ್ ವಾರ್ಷಿಕೋತ್ಸವ (23-12-2009) ಸಮಾರಂಭವದು. ನಾನು ವೇದಿಕೆ ಏರುವ ಮುನ್ನವೇ ಕಾರ್ಯಕ್ರಮ ಆರಂಭಗೊಂಡಿತ್ತು. ನನಗಿಂತ ಮುಂಚೆಯೇ ಬಂದಿದ್ದ ಮತ್ತೊಬ್ಬ ಅತಿಥಿ ಕವಿ, ಕಾಲೇಜು ಶಿಕ್ಷಕ ಎಲ್.ಎನ್. ಮುಕುಂದರಾಜ್ ಆಗಲೇ ಭಾಷಣಕ್ಕೆ ಅಣಿಯಾಗಿದ್ದರು. ಅವರು ಕನ್ನಡಪ್ರೇಮ, ಕನ್ನಡ ಸಾಹಿತ್ಯ, ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದರ ಹೆಮ್ಮೆಯ ಬಗ್ಗೆ, ಪಂಪನ ಆದಿ ಪುರಾಣದ ಬಗ್ಗೆ, ವಿಜಯನಗರ ಮತ್ತು ಹಂಪಿಯ ನೆನಪಿಗಾಗಿ ಆರ್.ಪಿ.ಸಿ ಲೇಔಟ್ ಗೆ ಹಂಪಿ ನಗರ ಎಂದು ಹೆಸರಿಟ್ಟಿದ್ದರ ಬಗ್ಗೆ.... ಚಚ್ಚಿದರು.
ನನ್ನ ಸರದಿ ಬಂದಾಗ, ಡಯಾಸ್ ಮೇಲೆ ನಿಂತು ಸಭಿಕರ ಮೇಲೆ ಒಂದಷ್ಟು ಕಣ್ಣಾಡಿಸಿದೆ. ಹೆಂಗಸರ ಮುಖಗಳು ಇಷ್ಟಗಲ ಅರಳಿದ್ದವು. ಮಕ್ಕಳು ವೋ ಎಂದು ಅವಾಜ್ ಮಾಡುತ್ತಿದ್ದರು. ಪುಂಡ ಹುಡುಗರು, ಚಾಲೂ ಹುಡುಗಿಯರು ಶಿಳ್ಳೆ ಹಾಕುತ್ತ ಹಾಯ್ ಬಾಯ್ ಎಂದು ಚೀರುತ್ತಿದ್ದರು. ನನ್ನ ಉದ್ದನೆಯ ಕೂದಲು, ಜಡೆಯಂತೆ ಕೂದಲು ಕಟ್ಟಿಕೊಂಡಿದ್ದನ್ನು ಕಂಡು ಹಾಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಹಾಗೆ ನಾನದನ್ನು ಗ್ರಹಿಸಿದೆ. ಮತ್ತು ಅದು ನಿಜವಾಗಿತ್ತು. ತಲೆ ತೋರಿಸಿ ಸುಮ್ಮನೇ ನಕ್ಕೆ. ಬಹುತೇಕ ಹೆಂಗಸರು ಮುಖ ಮತ್ತಷ್ಟು ಅರಳಿಸಿದರು. ತಲೆ ಖಾಲಿ ಮಾಡಿಕೊಂಡ ಗಂಡಸರು ಕೈಯಾಡಿಸಿಕೊಂಡು ನನ್ನ ದುರುಗುಟ್ಟಿದರು. ಹುಡುಗಿಯರು ವೋ ಎಂದರು. ನನ್ನ ಕೂದಲನ್ನೇ ಒಂದು ಜೋಕ್ ಮಾಡಿಕೊಂಡು ಸಣ್ಣದಾಗಿ ನಗಿಸುತ್ತಲೇ ಮಾತು ಆರಂಭಿಸಿದೆ.
ಏನು ಮಾತನಾಡಲಿ? ಜಾತಿ ಜಗಳ, ಧರ್ಮ ನಿಂದನೆ, ದ್ವೇಷಗಳ ಬಗ್ಗೆ? ನಾಳೆ ಇನ್ನಾವ ಚರ್ಚ್, ಮಸೀದಿ, ಮಂದಿರಗಳು ಧ್ವಂಸಗೊಳ್ಳಲಿವೆಯೋ ಹೇಡಿಗಳಿಂದ ಎನ್ನುವ ಆತಂಕದ ಬಗ್ಗೆ ಹೇಳಲೇ? ಗೋಮಾಂಸ, ಕುರಿ ಮಾಂಸ, ಹಂದಿ ಮಾಂಸ ಎಸೆದು ದಾಂಧಲೆ ಎಬ್ಬಿಸುವ ಬಗ್ಗೆ ಹೇಳಿ ನಿಮ್ಮನ್ನೆಲ್ಲಾ ಕಂಗಾಲಾಗಿಸಲೇ? ಗ್ಲೋಬಲ್ ವಾರ್ಮಿಂಗ್ ಬಗ್ಗೆ, ಕ್ಲೈಮೇಟ್ ಚೇಂಜ್ ಬಗ್ಗೆ, ಬೆಂಗಳೂರು ಬರಿದಾಗುತ್ತಿರುವ ಬಗ್ಗೆ... ಸಸ್ಪೆನ್ಸ್ ಥ್ರಿಲರ್ ಥರ ಮಜಾ ಕೊಡುವ, ಕುತೂಹಲ ಕೆರಳಿಸುವ, ರಾಷ್ಟ್ರಭಕ್ತಿಯನ್ನು ಉಕ್ಕಿಸುವ, ಉನ್ಮತ್ತಗೊಳಿಸುವ ಮತ್ತು ಒಂದು ಧರ್ಮದ ಬಗ್ಗೆ ಮತ್ತೊಂದು ಧರ್ಮದವರು ವಿಷಕಾರಲು ಸಹಾಯ ಮಾಡಬಲ್ಲ ಭಯೋತ್ಪಾದನೆ, ಟೆರರಿಸಂ ಬಗ್ಗೆ ಮಾತನಾಡಲೇ? ಶೌರ್ಯ, ಪರಾಕ್ರಮಗಳನ್ನು ಕೊಚ್ಚಿಕೊಳ್ಳುವ, ಮನುಷ್ಯರ ಹೆಣಗಳ ರಾಶಿಯ ಮೇಲೆ ಜಯದ ಕೇಕೆ ಹಾಕುವ ಯುದ್ಧಗಳ ಬಗ್ಗೆ ಮಾತನಾಡಲೇ?...
ಮತ್ತೆ ನನ್ನ ಕೂದಲುಗಳನ್ನೆ ದುರುಗುಟ್ಟುತ್ತಿದ್ದೀರಲ್ಲವೇ? ತಲೆ ಮುಖ್ಯ. ಕೂದಲುಗಳಲ್ಲ... ಅದೆಲ್ಲದಕ್ಕು ಅತ್ಯಂತ ಮುಖ್ಯವಾದ್ದು ಮನುಷ್ಯನಲ್ಲಿರಬೇಕಾದ್ದು ಯಾವುದು ಗೊತ್ತಾ?... ಮನಸು. ಅದರ ತುಂಬ ಪ್ರೀತಿ. ಆ ಪ್ರೀತಿ ನನ್ನ ಬಹುದೊಡ್ಡ ಕಾಳಜಿ.
ನೋಡಿ ಜಗತ್ತು ಇಂದು ಬರಿಯ ವಸ್ತುಗಳಿಂದ ತುಂಬಿ ಹೋಗಿದೆ. ಬಾಂಬ್, ಬಂದೂಕುಗಳ ಗಾಯಗಳಿಂದ ಜಖಂಗೊಂಡಿದೆ. ಭಯೋತ್ಪಾದನೆ ಒಂದು ಕೋಡ್ ವರ್ಡ್. ಅದರ ಮೂಲಕ ಮುಸ್ಲಿಂ ನಂಬಿಕೆಗಳಿಂದ ಜನರನ್ನು ಡಿಟ್ಯಾಚ್ ಮಾಡುವ ಹುನ್ನಾರದ್ದು. ಮತ್ತು ಅಂಥ ಯತ್ನದ ಮೂಲಕ ವ್ಯಾಪಾರದ ಮಾರ್ಗವನ್ನು ಸೃಷ್ಟಿಸುವ, ವಸ್ತುಗಳನ್ನು ಮಾರುವ ಸಾಧ್ಯತೆಗಳನ್ನು ಸೃಷ್ಟಿಸುವುದು ಅದರ ಹಿಂದಿನ ಉದ್ದೇಶ. ಅಭದ್ರತೆ, ಅಸುರಕ್ಷತೆ ಎನ್ನುವ ದೊಡ್ಡ ಭಯ ಹುಟ್ಟಿಸಿ ಇಡೀ ದೇಶಕ್ಕೆ ಭದ್ರತೆ ಒದಗಿಸುವ ಸೆಕ್ಯುರಿಟಿ ಟೆಕ್ನಾಲಜಿ ಮಾರಾಟ ಮಾಡುವ ತಂತ್ರ. ಆ ಮೂಲಕ ಹಣ ಲೂಟಿ ಮಾಡುವ ದಗಾಕೋರುತನ. ವಸ್ತುಗಳು ನಮ್ಮ ಜೀವ ರಕ್ಷಿಸಬಲ್ಲವು. ನಮ್ಮನ್ನು ನಿಶ್ಚಿಂತೆಯಿಂದಿರಸಬಲ್ಲವು. ಒಟ್ಟಾರೆ ರಕ್ಷಣೆ ಒದಗಿಸಬಲ್ಲವು ಎಂದು ನಮ್ಮನ್ನು ನಂಬಿಸೋದು ಭಯೋತ್ಪಾದನೆ ಎನ್ನುವ ಕಾನ್ಸೆಪ್ಟ್ ನಿಂದ ಸಾಧ್ಯವಿದೆ. ಅದನ್ನೇ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಮಾಡುತ್ತಿರುವುದು. ಒಂದು ಬಾಂಬ್ ಸಿಡಿದಾಗ, ಭಯೋತ್ಪಾದನಾ ದಾಳಿಗಳು ನಡೆದಾಗೆಲ್ಲ ಅಮೆರಿಕಕ್ಕೆ ಅವಕಾಶಗಳ ಬುಲಂದ್ ದರವಾಜಾ ತೆರಕೊಳ್ಳುತ್ತದೆ. ಅದು ದೇಶವನ್ನು ಮತ್ತು ನಮ್ಮನ್ನೆಲ್ಲ ಗ್ರಾಹಕರನ್ನಾಗಿಸಿಬಿಡುತ್ತದೆ.
ವಸ್ತುಗಳನ್ನು ಕೊಳ್ಳಲೆಂದೇ ನಾವೆಲ್ಲ ಹೆಚ್ಚು ಹೆಚ್ಚು ಸಂಪಾದನೆಗಿಳಿಯುತ್ತಿರುವುದು. ಯುದ್ಧ ಕೂಡ ಇಂಥದೇ ವ್ಯಾಪಾರದ ಸರಕು. ಇಡೀ ರಾಷ್ಟ್ರ ಕೇವಲ ಬಾಂಬ್, ಬಂದೂಕು ಖರೀದಿಯಲ್ಲೇ ಮುಳುಗಿ ಹೋಗುವಂತೆ ಮಾಡುವುದು ಈ ಯುದ್ಧ ಎನ್ನುವ ತಂತ್ರಕ್ಕೆ ಸಾಧ್ಯವಿದೆ. ಅದಕ್ಕೇ ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಾಗ ಕಿಡಿ ಹೊತ್ತಿಸಲಾಗುತ್ತದೆ.
ನಾವೆಲ್ಲ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಂದು ಸಂಘರ್ಷಕ್ಕಿಳಿದು, ಯುದ್ಧದಂಥ ಸ್ಥಿತಿಗೆ ಬಂದು ನಿಂತು, ಅವರ ಬಾಂಬ್, ಬಂದೂಕು ಕೊಂಡು ಪರಸ್ಪರ ಹೆಣಗಳ ಉರುಳಿಸುತ್ತ ಕೂರುವುದೇ?
ಮೊಬೈಲ್ ಕೊಡುವ ಸುಖಗಳಿಗೆ ಹಾತೊರೆಯುತ್ತ, ಹೆಚ್ಚು ಸಂಪಾದನೆಯಿಂದ ಹೆಚ್ಚು ವಸ್ತುಗಳನ್ನು ಕೊಂಡು ಅದರಲ್ಲೇ ಸುಖವನ್ನರಸುತ್ತ, ಮಕ್ಕಳ ಕನಸುಗಳ ಬಗ್ಗೆ, ಅವರ ಬದುಕಿನ ಬಗ್ಗೆ ನಿಷ್ಕಾಳಜಿ ವಹಿಸುತ್ತ ಅವರ ಕೈಗೂ ಒಂದಷ್ಟು ವಸ್ತುಗಳನ್ನು ಕೊಟ್ಟು ಟೈಂ ಪಾಸ್ ಮಾಡಿ ಎಂದು ಹೇಳುತ್ತ, ಜಾಬ್, ಪ್ರಮೋಷನ್, ಗಳಿಕೆ, ಮೈಥುನ, ಎಕ್ಸ್ಟ್ರಾ ಮ್ಯಾರಿಟಲ್ ಅಫೇರ್ ಗಳಲ್ಲಿ ಮುಳುಗಿ ಹೋಗುವ ಪಾಲಕರು ಅದೆಷ್ಟು ಕ್ವಾಲಿಟಿ ಟೈಂ ಮಕ್ಕಳಿಗೆ ಕೊಡುತ್ತಿದ್ದೀರಿ?
ಹೆಗಲಿಗೆ ಹಾಕುವ ಬ್ಯಾಗ್, ಒಂದಷ್ಟು ಪುಸ್ತಕಗಳ ರಾಶಿ, ಮೊಬೈಲ್, ಕಂಪ್ಯೂಟರ್ ಇವನ್ನಷ್ಟೇ ಮಕ್ಕಳಿಗೆ ಒದಗಿಸಲು ಸಾಧ್ಯವಾಗಿದೆ ನಿಮಗೆ ಮತ್ತು ನಿಮ್ಮ ಗಳಿಕೆಗೆ. ಮಕ್ಕಳಿಗೆ ನೀವು ಕೊಡಬೇಕಾದ್ದನ್ನೇ ಕೊಡುತ್ತಿಲ್ಲ. ಅದೆಷ್ಟು ತಾಯಂದಿರು ಬೆಳೆದ ನಿಮ್ಮ ಮಗ ಅಥವಾ ಮಗಳನ್ನು ಬಿಗಿದಪ್ಪಿ, ಚುಂಬಿಸಿ ಅಕ್ಕರೆ ತೋರಿಸುತ್ತೀರಿ ದಿನ ನಿತ್ಯ? ಅವರ ಕನಸು, ಗುರಿ, ಆಶಯ, ಟೇಸ್ಟ್, ತುಡಿತಗಳ ಬಗ್ಗೆ ಅದೆಷ್ಟು ಅಪ್ಪಂದಿರು ಮಕ್ಕಳ ಕೈ ಹಿಡಿದು ಭರವಸೆ, ಧೈರ್ಯ ಮೂಡಿಸಿದ್ದೀರಿ. ದಣಿದ ಮನಸುಗಳಿಗೆ ಸಮಾಧಾನ , ಸಾಂತ್ವನ ಹೇಳುತ್ತೀರಿ... ಪ್ರೀತಿಯಿಂದ?
ಈ ಪ್ರೀತಿ ಕೊರತೆಯಿಂದಲೇ ಇಂದು ವಿಶ್ವ ಬಡವಾಗುತ್ತಿರುವುದು. ಯಾರಿಗೋ ಏನನ್ನೋ ಕಳಕೊಳ್ಳುವ ಮತ್ತು ವಂಚಿತರಾಗುತ್ತಿರುವ ಅಸಮಾಧಾನ. ಈ ದೊಡ್ಡ ಅಸಮಾಧಾನ, ಕೊರತೆ ಅಸಹನೀಯ ಎನಿಸಿದಾಗ? ಹುಟ್ಟೋದೇ ಸೈಕ್, ಸ್ಯಾಡಿಸಂ... ಅದೇ ಯುದ್ಧ, ಭಯೋತ್ಪಾದನೆಯಂಥ ಕಾನ್ಸೆಪ್ಟ್ ಗಳು. ಇಂಥ ರಾಕ್ಷಸಿ ಅಪಾಯಗಳಿಂದ ಒಂದಿಡೀ ಜನರೇಶನ್ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಪಾಲಕರೇ.
ಅಸಮಾನತೆಯಿಂದ ನರಳುತ್ತಿರುವ ಮತ್ತು ಹತಾಶೆಯಿಂದ ಕಂಗೆಟ್ಟಿರುವ ಇಡೀ ವಿಶ್ವ ತಾಪದಿಂದ ಕುದಿಯುತ್ತಿದೆ. ಭಯೋತ್ಪಾದನೆ, ಯುದ್ಧದ ಕಾನ್ಸೆಪ್ಟ್ ಗಳು ನಮ್ಮನ್ನೆಲ್ಲ ಹಿಂಡುತ್ತಿವೆ. ಹೇಗೆ ಶಮನಗೊಳಿಸುವುದು? ಹೇಗೆ ಇದರಿಂದ ಬಚಾವಾಗೋದು? ಇದಕ್ಕೊಂದೇ ಪರಿಹಾರ. ಪ್ರೀತಿ.
ನಮ್ಮ ನಡುವಿನ ಜಾತಿ, ಧರ್ಮಗಳ ತಪ್ಪು ಗ್ರಹಿಕೆಗಳಿಂದ ಹುಟ್ಟಿದ ಸಂಶಯದ ಗೋಡೆಗಳ ಕಿತ್ತೊಗೆಯುವ ಮೂಲಕ ಇದು ಸಾಧ್ಯವಿದೆ. ನಾಳೆ ನಿಮ್ಮ ಮಕ್ಕಳಿಗೆ ಬ್ಯಾಗಿನಲ್ಲಿ ಪುಸ್ತಕಗಳ ಜತೆ ಇಡುವ ಊಟ, ತಿಂಡಿಯ ಡಬ್ಬಿಗಳಲ್ಲಿ ನೀವೂ ಬಾಂಬ್ ಇಟ್ಟು ಕಳಿಸಿ. ಯಾವ ಬಾಂಬ್? ಪ್ರೀತಿಯ ಬಾಂಬ್!
ಈ ಪ್ರೀತಿ ಎನ್ನುವ ಬಾಂಬಿನ ಮುಂದೆ ಬೇರೆ ಯಾವ ಬಾಂಬಿನ ಕರಾಮತ್ತು ನಡೆಯೋದಿಲ್ಲ. ಇಡೀ ದೇಶ, ರಾಜ್ಯ, ವಿಶ್ವ ಸುರಕ್ಷಿತವಾಗಿರಲು ಈ ಪ್ರೀತಿ ಬಾಂಬ್ ಹೊಂದಬೇಕಾಗಿದೆ. ನಿಮ್ಮ ಮಗುವನ್ನು ಹೆಚ್ಚು ಪ್ರೀತಿಸಿ, ಇತರ ಮಾನವರ ಬಗ್ಗೆ ಮನುಷ್ಯ ಪ್ರೀತಿ ಮೂಡುವಂತೆ ಅವರನ್ನು ಬೆಳೆಸಿ. ಈ ಜಗದ ತುಂಬ ಪ್ರೀತಿ ಉಳಿಯಲಿ. ಮನುಷ್ಯನೂ, ಮನುಷ್ಯ ಪ್ರೀತಿಯೂ ಉಳಿಯಲಿ.
ನಮಸ್ಕಾರ
Friday, December 18, 2009
ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!
Wednesday, December 9, 2009
ತಾಯ್ತನದ ಸಂಭ್ರಮಕ್ಕೆ ತಿಪ್ಪಣ್ಣ ದಂಪತಿ ಕೊಟ್ಟ ಅರ್ಥಪೂರ್ಣ ಕಳೆ..
ಹೀಗೆ ಹೆಸರಾಂತ ಬುದ್ಧಿಜೀವಿ ಜೆ. ಕೃಷ್ಣಮೂರ್ತಿ ವಿಚಾರ ಲಹರಿ ಸಾಗುತ್ತದೆ.
ಸಂಬಂಧವೆಂದರೇನು? ಸಂಬಂಧವಿರುವುದು ಎಂದರೇನು?
ಸಂಬಂಧವೆಂದರೆ ಮತ್ತೊಬ್ಬ ಮನುಷ್ಯ ಜೀವಿಯೊಡನೆ ಸಂಪರ್ಕ. ಒಟ್ಟಾಗಿ ಇರುವುದು, ಅವನ ಎಲ್ಲ ಕಷ್ಟ, ಸಮಸ್ಯೆ, ಕಾರ್ಪಣ್ಯ, ಕಳವಳಗಳೊಡನೆ ಅವು ನಿಮ್ಮವೇ ಎಂಬಂತೆ ತತ್ ಕ್ಷಣ ಸಂಪರ್ಕ ಕಲ್ಪಿಸಿಕೊಳ್ಳೋದು.
ಕೃಷ್ಣಮೂರ್ತಿ ಅವರಂತೆ ಅನೇಕರು ಇಂಥ ವಿಚಾರಗಳ ಬಗ್ಗೆ ಮಾತಾಡಿದ್ದಾರೆ.
ನನಗೆ ಅನಿಸೋದು ಇಷ್ಟು.
ಮನುಷ್ಯ ಇಂಡಿಪೆಂಡೆಂಟ್ ಅಲ್ಲವೇ ಅಲ್ಲ. ಆತ ಇಂಟರ್ ಡಿಪೆಂಡೆಂಟ್ ಎಂದು ಹೇಳಬಹುದು. ಹೌದು, ಆತನಿಗೆ ಇತರರ ಜತೆಗಿನ ಸಾಂಗತ್ಯ, ಒಡನಾಟ ಇಲ್ಲದಿದ್ದರೆ ಬದುಕೇ ಕಷ್ಟ. ಏಕಾಂಗಿಯಾಗಿರಲು ಸಾಧ್ಯವೇ ಇಲ್ಲ. ಕಡೆಪಕ್ಷ ತನ್ನ ಜತೆಗೆ ತಾನಾದರೂ ಮಾತಾಡಬೇಕು. ಅಂದರೆ ತನ್ನೊಳಗಿನ ಅವನು ಮತ್ತು ಅವನಿಂದ ಕಳಚಿಕೊಂಡು ಎಲ್ಲೊ ಅಲೆದಾಡುತ್ತಿರುವ ಇವನು ಪರಸ್ಪರ ಸ್ಪಂದಿಸಲೇಬೇಕು. ಮಾತಾಡಿಕೊಳ್ಳಲೇಬೇಕು. ಕಲ್ಪಿಸಿಕೊಂಡ ವ್ಯಕ್ತಿತ್ವ ಮತ್ತು ಒಳಗೇ ಇರುವ ಬೈ ಡಿಫಾಲ್ಟ್ ವ್ಯಕ್ತಿತ್ವಗಳೆರಡರ ನಡುವಿನ ತಿಕ್ಕಾಟ ಇರಲೇಬೇಕು. ಸ್ಪಿರಿಚ್ಯುಯಲ್ ಅಂದರೆ ಇದೇ. ತನ್ನ ಜತೆ ತಾನು ಮಾತಾಡಿಕೊಳ್ಳುವುದು, ತನ್ನನ್ನು ತಾನು ಅರಿತುಕೊಳ್ಳೋದು... ಇದು ಒಂದು ಅತ್ಯಂತ ಪ್ರಮುಖ ಹಂತ.
ಇನ್ನು ಸಹಜವಾದ ಸಾಮಾಜಿಕ ಬದುಕು ಕೂಡ ಅತ್ಯಂತ ಮುಖ್ಯವಾದುದು. ಮನುಷ್ಯ ಏಕಕಾಲಕ್ಕೆ ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಬದುಕುತ್ತಾನೆ. ನಮ್ಮೆಲ್ಲ ಯತ್ನಗಳು ವೈಯಕ್ತಿಕ ಗುರಿ ಸಾಧನೆಗಳಿಗೇ ಹೆಚ್ಚಾಗಿ ನಡೆಯುತ್ತವೆ. ಈ ದಾರಿಯಲ್ಲಿ ಎಷ್ಟೊ ಸಾರಿ ನಮ್ಮಿಂದ ನಮಗೇ ಹಿಂಸೆಯಾಗುತ್ತದೆ. ಲಾಭ, ನಷ್ಟಗಳ ಲೆಕ್ಕಾಚಾರದಲ್ಲಿ ಮಾನಸಿಕ ನೆಮ್ಮದಿ ದೂರವಾಗಿರುತ್ತದೆ. ನಡುವೆಲ್ಲ ಕಂಡುಂಡ ನೋವು, ನಲಿವುಗಳ ಅನುಭವ ಹಂಚಿಕೊಳ್ಳಲಾದರೂ ಯಾರೋ ಬೇಕೆನಿಸುತ್ತದೆ. ಅತ್ಯಂತ ಹತ್ತಿರದ ಕೆಲವು ಸಂಬಂಧಗಳಲ್ಲಿ ಇದೆಲ್ಲವನ್ನು ಯಥಾರೀತಿ ಬಿಚ್ಚಿಡುವ ಸಾಧ್ಯತೆಗಳೂ ಕಡಿಮೆ. ಇವುಗಳಾಚೆಗಿನ ಸಂಬಂಧಗಳಲ್ಲಿ ಹೇಳಿಕೊಂಡು ಹಗುರಾಗುವ ಮಾರ್ಗ ಬಿಟ್ಟು ಇನ್ನಾವುದೇ ಮಾರ್ಗಗಳಿರೋದಿಲ್ಲ.
ಹೀಗೆ ಅನಿವಾರ್ಯತೆಗಾದರೂ ಸಂಬಂಧ ಬೇಕೆನಿಸುತ್ತದೆ. ಆದರೆ, ಇಂಥ ಕೃತಕ ಸಂಬಂಧಗಳಲ್ಲಿ ಮಾನಸಿಕ ನೆಮ್ಮದಿ ಅತ್ಯಂತ ಸಹಜವಾಗಿರೋದಿಲ್ಲ. ಇದು ತೂಕ ಇಳಿಸುವುದಕ್ಕೆ ಅನಿವಾರ್ಯವಾಗಿ ಮಾಡುವ ಮಾರ್ನಿಂಗ್ ವಾಕ್ ಥರ ಆಗಿ ಹೋಗುತ್ತದೆ.
ನಿಜವಾದ ಸಂಬಂಧಗಳು ಗಟ್ಟಿಯಾಗೋದು ಯಾವುದೋ ಸ್ವಾರ್ಥದ ನಿರೀಕ್ಷೆಗಳಿಲ್ಲದ ಮನುಷ್ಯ ಸಹಜ ಪ್ರೀತಿಯ ಬುನಾದಿಯಲ್ಲಿ ರೂಪುಗೊಂಡ ಸ್ಪಂದನೆಗಳಿಂದ. ಸಂವೇದನೆಗಳಿಂದ. ಮನುಷ್ಯ ಅಂತಃಕರಣ ಅನ್ನೋದು ನಮ್ಮೊಳಗಿನ ಜೀವಜಲದಂತೆ. ಅದಕ್ಕೂ ಯಾವುದೇ ಶೇಪ್ ಇಲ್ಲ. ಬಣ್ಣವಿಲ್ಲ. ಅದಕ್ಕೆ ಭಾವನೆಗಳಿವೆ. ಇಂಥದೂ ಒಂದು ಭಾವುಕ ಜಗತ್ತು ನಮ್ಮ ಜೀವಜಲವನ್ನು, ಪ್ರೀತಿಯನ್ನು ಕಾಪಾಡಬಲ್ಲುದು. ಮನುಷ್ಯ ಜೀವನದ ಸಾರ್ಥಕತೆ ಇರೋದೇ ಇಂಥ ಸಂಬಂಧಗಳ ಹೊಂದುವುದರಲ್ಲಿ. ಬೆಳೆಸಿಕೊಳ್ಳೋದರಲ್ಲಿ.
ಕಳೆದ ಕೆಲ ದಿನಗಳ ಹಿಂದಷ್ಟೇ ತಿಪಟೂರಿನ ಗೆಳೆಯರ ತುಂಬ ಅರ್ಥಪೂರ್ಣ ಸಂತೋಷ ಕೂಟಕ್ಕೆ ಹೋಗಿದ್ದೆ. ಅದು ತಾಯ್ತನದ ಸಂಭ್ರಮಕ್ಕೆಂದು ಏರ್ಪಡಿಸಿದ್ದ ತುಂಬ ಆತ್ಮೀಯರ ಪ್ರೀತಿಯೂಟ. ಗೆಳೆಯ ಶ್ರೀಕಾಂತ್ ಹೆಂಡತಿ ಒಡಲಲ್ಲಿ ಹೊಸ ಜೀವವೊಂದು ಈ ಜಗತ್ತಿಗೆ ಬರಲು ಕಾತರಿಸುತ್ತಿರುವ ಹೊತ್ತಲ್ಲಿ, ಬದುಕಿಗೆ ಅದು ಕಣ್ಣು ತೆರಕೊಳ್ಳುವ ಮುನ್ನ ಮನುಷ್ಯ ಪ್ರೀತಿ, ಅಂತಃಕರಣದ ಪ್ರೀತಿ ಜೋಗುಳ ಕೇಳಿಸುವ ಮನಸು ನಮ್ಮ ಆತ್ಮೀಯ ಗೆಳೆಯ ತಿಪ್ಪಣ್ಣ ಅವರದು.
ಜಿ. ತಿಪ್ಪೇಸ್ವಾಮಿ (ನಮ್ಮೆಲ್ಲರ ಪ್ರೀತಿಯ ತಿಪ್ಪಣ್ಣ) ತಿಪಟೂರು ಕಲ್ಪತರು ಕಾಲೇಜಿನ ಹಿರಿಯ ಗ್ರಂಥಪಾಲಕರು. ತಮ್ಮ ಮಗಳಂತೆ ಲೈಬ್ರರಿಯ ಅಸಂಖ್ಯಾತ ಪುಸ್ತಕಗಳನ್ನೂ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವ ತಾಯ್ತನದ ಜೀವವದು. ಅದೆಷ್ಟು ಅಹೋರಾತ್ರಿ ಲೈಬ್ರರಿಯ ತುಂಬ ಓಡಾಡಿಕೊಂಡು ಮಗುವಿನ ತಲೆ, ಕೆನ್ನೆ ಸವರುವ ತಾಯಿಯಂತೆ ಪುಸ್ತಕಗಳ ನೇವರಿಸುತ್ತ, ಅವುಗಳ ಇರವನ್ನು ಅರ್ಥಪೂರ್ಣಗೊಳಿಸುವ ಮಹಾ ಜೀವಪ್ರೀತಿಯ ಮನುಷ್ಯ.
ಗೆಳೆಯ ಶ್ರೀಕಾಂತ್ ಬದುಕಲ್ಲಿ ಇನ್ನೇನು ಹೊಸಬೆಳಕು ಮೂಡಲಿದೆ! (ಇತ್ತೀಚೆಗಷ್ಟೇ ಶ್ರೀಕಾಂತ್ ಮನೆಯ ಒಂದು ದೀಪದ ಬೆಳಕು ಮಹಾಬೆಳಕಿನತ್ತ ಪಯಣ ಬೆಳೆಸಿತು. ತಂದೆ ಕಾಲನ ಗರ್ಭಕ್ಕೆ ಸೇರಿಹೋದರು. ಈಗ ಅದೇ ಬೆಳಕು ಹೊಸಬೆಳಕಾಗಿ ಬರಲಿದೆ. ಮನುಷ್ಯ ಜನ್ಮವೆಂದರೆ ಇಷ್ಟೇ ತಾನೆ. ಹಾಗೆ ಹೋಗಿ ಮತ್ತೆ ಹೀಗೆ ಹಿಂದಿರುಗೋದು?) ಅದನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿರುವ ಶ್ರೀಕಾಂತ್ ಗೆ ಶುಭ ಕೋರುವ ಮತ್ತು ಆ ಹೊಸಬೆಳಕನ್ನು ಈ ಜಗತ್ತಿಗೆ ಕರುಣಿಸಲಿರುವ ತಾಯಿಯ ಒಡಲಿಗೊಂದು ಕೃತಜ್ಞತೆ ಸೂಚಿಸಲು ತಿಪ್ಪಣ್ಣ ತಮ್ಮ ಮನೆಯಲ್ಲಿ ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಶ್ರೀಕಾಂತ್ ದಂಪತಿಗೆ ಊಟ ಇಟ್ಟುಕೊಂಡಿದ್ದರು. ಅದಕ್ಕೆ ನಾನೂ ಸಾಕ್ಷಿಯಾಗುವ ಭಾಗ್ಯ ಪಡಕೊಂಡೆ. ತುಂಬ ಖುಷಿ ಕೊಟ್ಟ ಘಳಿಗೆಯದು. ಗೆಳೆಯ ವಿಷ್ಣುಕುಮಾರ್ ಮತ್ತು ಆತನ ಸಂಗಾತಿ ಹರ್ಷಿತಾ, ಮನೋಹರ್ ಪಟೇಲ್, ತಿಪ್ಪಣ್ಣ ಅವರ ಆತ್ಮೀಯ ಗೆಳೆಯ ಚಾಮುಂಡಿ ಕೂಡ ಅಲ್ಲಿದ್ದರು.
ಹಾಗೆ ಒಂದು ಊಟದ ನೆವದಲ್ಲಿ ಸೇರಿದ ನಾವೆಲ್ಲ ಅಂದು ಹಂಚಿಕೊಂಡ ಪ್ರೀತಿ ಮತ್ತು ಅಪ್ಪಟ ಮಾನವೀಯ ಅನುಭವಗಳೇ ಆ ಮಗುವಿಗೆ ಹಾರೈಕೆಗಳು. ತಿಪ್ಪಣ್ಣ ದಂಪತಿ ಅವತ್ತು ಮಾಡಿದ ಅಡುಗೆಯಲ್ಲಿ ಅವರ ಪ್ರೀತಿಯ ರುಚಿಕಟ್ಟಿತ್ತು. ಮಗಳು ನಿಕ್ಕಿ (ಅವರ ಪಾಲಿನ ಗಿಣಿ) ಮನೆತುಂಬ ಓಡಾಡಿಕೊಂಡಿರೋದು ಅಪ್ಪಟ ಗಿಣಿಯಂಥ ಕಲರವ ಮೂಡಿಸಿತ್ತು. ಗೆಳೆಯ ವಿಷ್ಣುವಿನ ಜೀವಪ್ರೀತಿ ಉಕ್ಕಿಸುವ ಸೆನ್ಸ್ ಆಫ್ ಹ್ಯೂಮರ್ ಅವತ್ತಿನ ಊಟದ ಸವಿ ಹೆಚ್ಚಿಸಿತ್ತು. ಸಹಜ, ಸರಳ ನಡೆ ನುಡಿಯ ಸಜ್ಜನ ಚಾಮುಂಡಿಯ ಮುಗ್ಧ ನಗೆಯ ಮಿಂಚಿತ್ತು. ಪರಿಸರದ ಕಾಳಜಿಗಳನ್ನೇ ಸೂಸುವ ಮನೋಹರ್ ಪಟೇಲ್ ಶಾಂತಮೂರ್ತಿಯಂತೆ ಕೂತು ಉಣ್ಣುವ ರೀತಿಯಲ್ಲಿ ಬುದ್ಧನದೇ ಕಳೆ ಇತ್ತು. ಎಲ್ಲರ ತಟ್ಟೆಗಳಲ್ಲಿ ತಿಪ್ಪಣ್ಣ ದಂಪತಿಯ ಪ್ರೀತಿಸಾಂಬಾರಿನ ಘಮಘಮವಿತ್ತು... ಊಟದ ನಡುವೆಲ್ಲ ಚಿಮ್ಮುವ ನಗೆಯಲ್ಲಿ ಬದುಕಿನ ಬೆಳಕಿತ್ತು...
ಆ ತಾಯಿಯ ಉಡಿ ತುಂಬ ಹೂವು, ಹಣ್ಣು, ಕಾಯಿ...
ಏನಿದೆಲ್ಲ?
ಆ ಊಟದ ರುಚಿಕಟ್ಟು ಯಾವುದರ ಸಂಕೇತ? ಜೀವರಸದ ಸಂಕೇತ. ನಮ್ಮ ಜೀವರಸ ಅಷ್ಟು ರುಚಿಕಟ್ಟಾಗಿರಲಿ ಎನ್ನುವುದು ಅದರ ಆಶಯ. ಊಟದ ರುಚಿ ಬರಿಯ ಎಂಟಿಆರ್ ಮಸಾಲೆಯಲ್ಲಿದೆ ಅನ್ನೋದು ಒಂದು ಭ್ರಮೆ. ನಿಜವಾದ ಪ್ರೀತಿ ಪಾಕ ಅದಕ್ಕೆ ಸೇರಿದಾಗಲೇ ಊಟ ರುಚಿಕಟ್ಟಾಗೋದು. ತುಂಬ ಪ್ರೀತಿಯ ಮನಸ್ಸಿನಿಂದ ಮತ್ತು ಅದು ಆತ್ಮದ ಸಂದೇಶಗಳಿಗೆ ಸ್ಪಂದಿಸುತ್ತ ಮಾಡಿದಾಗಲೇ ಅದು ಅಡುಗೆ. ಮನಸು ಸ್ವಚ್ಛವಾಗಿಟ್ಟುಕೊಂಡವರು ಮಾತ್ರ ರುಚಿಕಟ್ಟಾದ ಅಡುಗೆ ಮಾಡಬಲ್ಲರು. ಅಂಥ ರುಚಿ ಆ ಮಗುವಿನ ಬದುಕಿಗಿರಲಿ ಎನ್ನುವುದು ಇದರ ಒಟ್ಟು ಆಶಯ.
ದಿಲ್ ದಾರ್ ಮಾತ್ರ ನಗಬಲ್ಲ, ನಗಿಸಬಲ್ಲ. ಮತ್ತೊಬ್ಬರ ನೋವ ಮರೆಸಿ ನಗೆಯ ಬುಗ್ಗೆ ಉಕ್ಕಿಸಬಲ್ಲ. ವಿಷ್ಣು ಉಕ್ಕಿಸಿದ ನಗೆಯ ಬುಗ್ಗೆಗಳೆಲ್ಲ ಬದುಕಿನ ಉತ್ಸಾಹದ ಸಂಕೇತ. ಅಂಥ ಉತ್ಸಾಹ ಹೊತ್ತುಕೊಂಡೇ ಆ ಜೀವ ಹೊರಬರಲಿ ಎನ್ನುವುದು ಕಾಳಜಿ.
ಸರಳತೆ, ಸಜ್ಜನಿಕೆ, ಸಹಜತೆ, ಮುಗ್ಧತೆ... ಇವೇ ಮನುಷ್ಯನ ಜೀವಂತಿಕೆಯ ಲಕ್ಷಣಗಳು. ಚಾಮುಂಡಿಯವರ ಮುಗ್ಧ ನಗೆಯಲ್ಲಿ ಬುದ್ಧನ ಶಾಂತಚಿತ್ತವಿದೆ. ನೆಲ್ಸನ್ ಮಂಡೇಲಾನ ಗೆಲುವಿದೆ.. ಅಂಥ ಗುಣಗಳೂ ಮಗುವಿನ ವ್ಯಕ್ತಿತ್ವಕ್ಕಿರಲಿ ಎನ್ನುವುದು ಅಭಿಲಾಷೆ.
ಮನುಷ್ಯನೆಂದರೆ ಈ ಪರಿಸರದ ಬಹು ಜವಾಬ್ದಾರಿಯುತ ಜೀವ. ಇಡೀ ಜೀವಸಂಕುಲವನ್ನು ತನ್ನ ಅಣತಿಗೆ ತಕ್ಕಂತೆ ಕಬಳಿಸುವ ಕ್ರೂರ ಪ್ರಾಣಿಯಲ್ಲ. ನಿಸರ್ಗದ ಎಲ್ಲ ಸವಲತ್ತುಗಳನ್ನು ಭೋಗಿಸುವುದಷ್ಟೇ ಅವನ ಗುರಿಯಲ್ಲ. ಇಡೀ ಭೂಮಿಯನ್ನು ತನ್ನ ತಾಯಿಯಂತೆ ಕಾಣಬೇಕು. ಅವಳ ಪ್ರೀತಿ ಉಣ್ಣುವುದಷ್ಟೇ ನಮ್ಮ ಕೆಲಸವಲ್ಲ. ಅವಳ ಋಣ ತೀರಿಸುವುದೂ ನಮ್ಮ ಬಹುಮುಖ್ಯ ಹೊಣೆಗಾರಿಕೆ. ತಾನೂ ಬಾಳಿ ಬದುಕಿ ಇತರರನ್ನೂ ಇತರ ಜೀವಸಂಕುಲವನ್ನೂ ಬಾಳಿಸುವ ಮನೋಧರ್ಮ ಮನುಷ್ಯನದು. ಮನೋಹರ್ ಪಟೇಲ್ ಅವರಂಥ ಪರಿಸರ ಕಾಳಜಿಯ ಜೀವಕ್ಕೆ ಇಂಥದೇ ಹತ್ತಾರು ಕಾಳಜಿಗಳು. ಜತೆಯಲ್ಲಿ ಶ್ರೀಕಾಂತ್ ಗೂ ಇಂಥದೇ ಕನಸುಗಳು. ಈ ಕನಸುಗಳು ಆ ಮಗುವಿಗೂ ಇರಲಿ...
ಜ್ಞಾನ, ಅರಿವು, ಹೃದಯ ವಿಶಾಲತೆ ಇರುವ ಮನುಷ್ಯನಲ್ಲಿ ಸೂಜಿಗಲ್ಲಿನಂಥ ಸೆಳೆಯುವ ವ್ಯಕ್ತಿತ್ವವಿರುತ್ತದೆ. ಬಂದೆಲ್ಲ ಸವಾಲುಗಳಿಗೆ ಎದೆಯೊಡ್ಡಿ ಆತ್ಮವಿಶ್ವಾಸದ ಅಸ್ತ್ರದಿಂದಲೇ ಎಲ್ಲ ಗೆಲ್ಲಬಲ್ಲ ಛಾತಿ ಇರುತ್ತದೆ. ನಗುತ್ತಲೇ ತನ್ನ ಬಳಿ ಬರುವ ಎಲ್ಲ ಜೀವಗಳ ಲೇಸನ್ನೇ ಬಯಸುವ, ಸಾಧನೆಯ ಹಂಬಲದ ಮನಸುಗಳಿಗೆ ಒತ್ತಾಸೆಯಾಗಿ ನಿಲ್ಲುವ ಮನೋಧರ್ಮ ಪರಿಪಕ್ವ ವ್ಯಕ್ತಿತ್ವದ ಸಂಕೇತ. ಮನುಷ್ಯ ಪ್ರೀತಿಯನ್ನೇ ಶ್ರೇಷ್ಠ ಎಂದು ಭಾವಿಸುವ ಮನೋಧರ್ಮ ದಾರ್ಶನಿಕ ವ್ಯಕ್ತಿತ್ವದ ಸಂಕೇತ. ಅಂಥ ಗೆಳೆಯ, ಚಿಂತಕ, ದಾರ್ಶನಿಕ ವ್ಯಕ್ತಿತ್ವದ ತಿಪ್ಪೇಸ್ವಾಮಿ ಅಪ್ಪಟ ಮನುಷ್ಯ ಜೀವಿ. ಇದೇ ಅಲ್ಲವೇ ಮನುಷ್ಯ ಸಾಧಿಸಬೇಕಾದ ಗುರಿ. ಅಂಥದೊಂದು ಗುರಿ ಇರಲಿ ಆ ಕಂದನಿಗೆ....
ತಿಪ್ಪಣ್ಣ ಅವರ ಶ್ರೀಮತಿಯ ಸರಳತೆ, ತಾಯಿ ಪ್ರೀತಿ, ನಿಕ್ಕಿಯ ಗಿಣಿ ಮಾತುಗಳ ಕಲರವ, ಉತ್ಸಾಹ... ಮಗುವಿಗಿರಲಿ. ಅವರು ತಾಯಿಯ ಉಡಿತುಂಬ ಹಾಕಿದ ಹೂವಿನ ಪರಿಮಳ, ಹಣ್ಣಿನ ಸವಿ, ಕಾಯಿಯ ಒಳಗೆಲ್ಲೊ ಕಾಯ್ದಿಟ್ಟುಕೊಳ್ಳುವ ಜೀವಜಲದ ಗುಣ... ಆ ಜೀವಕ್ಕೂ ದಕ್ಕಲಿ...
ಜೀವಜಗತ್ತಿಗೆ ಬರಲು ಸಜ್ಜಾಗಿ ನಿಂತ ಹೊಸ ಕುಡಿಗೆ ಮನುಷ್ಯ ಪ್ರೀತಿಯ ಇಂಥ ಜೋಗುಳ ರೂಪದ ಫೀಡ್ ಅವಶ್ಯಕ. ಒಟ್ಟು ಇಂಥ ಕಾಳಜಿಗಳ ಸಂಕೇತವೇ ತಿಪ್ಪಣ್ಣ ಅವರು ಹಮ್ಮಿಕೊಂಡ ಅಂದಿನ ಕಾರ್ಯಕ್ರಮ.
ಕೊನೆಗೊಂದು ಮಾತು: ಒಂದು ಹೊಸ ಜನ್ಮ ಕೊಡುವ ತಾಯಿಯ ಭಾಗ್ಯ ಹೆಣ್ಣಿಗೆ ಮಾತ್ರ. ಗಂಡಸಿಗೆ ಅದರ ತಂದೆ ಎನ್ನುವ ಧಿಮಾಕು ಅಷ್ಟೇ.
Wednesday, November 18, 2009
ಮನುಷ್ಯ ಜಾತಿ ತಾನೊಂದೇ ವಲಂ...
ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ (ರಥೈಸ್ತಾ), ವೈಶ್ಯ (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.
ಅವಧಿಯ ಮೋಹನ್ ಸರ್ ಗೆ ದಿಲ್ ಸೇ ಸಲಾಂ...
'ಅವಧಿ'ಯಂಥ ಸುಂದರ, ಅರ್ಥಪೂರ್ಣ ಯತ್ನಗಳು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ಬಹುಮುಖ್ಯ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ. ಇಂಥ ಹೊಸ ಸಾಧ್ಯತೆಯ ಮತ್ತು ಅವಕಾಶಗಳ ಬಾಗಿಲುಗಳನ್ನು ತೆರೆದಿಡುವ ತಮ್ಮ ಸುಂದರ ಯತ್ನಕ್ಕೆ 'ದಿಲ್ ಸೇ' ಸಲಾಂ.
Monday, November 16, 2009
ನಾನು ನೀನಾಸಂ ಪದವೀಧರನಲ್ಲ...
ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.
Sunday, November 8, 2009
ಆ ಕನಸಿನ ಬಣ್ಣಗಳು... ಹಾಲ್ಕುರಿಕೆ ಥಿಯೇಟರ್ ಮೂಡಿಸಿದ ಅದ್ಭುತ ರಂಗಹಾದಿ
ಬದುಕು ತುಂಬ ಸಂಕೀರ್ಣತೆಗಳಿಂದ ಕೂಡಿರುವಂಥದು. ಯಾವುದೂ ಅಷ್ಟು ಸರಳವಲ್ಲ. ಹಾಗೆ ನೋಡಿದರೆ ಮನುಷ್ಯ ಪ್ರೀತಿ ಮತ್ತು ಒಟ್ಟಾರೆಯಾಗಿ ಬದುಕು ಅತ್ಯಂತ ಸರಳ ಹಾಗೂ ಸಹಜತೆಯಿಂದ ಕೂಡಿರಬೇಕಿತ್ತು. ಹಾಗಾಗುತ್ತಿಲ್ಲ. ಬದುಕು ಇತ್ತೀಚೆಗಂತೂ ತುಂಬ ಸಂಕೀರ್ಣಗೊಳ್ಳುತ್ತ ಸಾಗಿದೆ. ಅದು ಮುಂಚಿನ ಸಹಜ ಸಂಭ್ರಮಗಳಿಂದ ದೂರವಾಗಿ, ಮೈಗೂಡಿಸಿಕೊಂಡ ಚಟ ಮತ್ತು ಖಯಾಲಿಗಳಿಂದ ನರಳುತ್ತಿದೆ.
ಮಟಿರಿಯಲಿಸ್ಟಿಕ್ ಜಗತ್ತು ವಸ್ತುಗಳಲ್ಲಿ ಸುಖವನ್ನು ತೋರಿಸುತ್ತಿದೆ. ಅದನ್ನು ಕೊಂಡುಕೊಳ್ಳುವುದಕ್ಕೇ ನಾವೆಲ್ಲ ಇಷ್ಟು ದುಡಿಯೋದು ಮತ್ತು ಸಂಪಾದಿಸೋದು ಎಂದು ಜಾಹಿರಾತುವಿನ ಮೂಲಕ, ಸೀರಿಯಲ್, ಸಿನಿಮಾ ಮೂಲಕ ಹೇಳುತ್ತಿದೆ. ನಾವದನ್ನು ನಂಬಿ ಕೂತಿದ್ದೇವೆ. ಹೆಚ್ಚು ಸಂಪಾದನೆ ಅಂದರೆ ಹೆಚ್ಚೆಚ್ಚು ಚಾಯ್ಸ್! ವಸ್ತು ಹೊಂದುವುದಕ್ಕೆ ಚಾಯ್ಸ್ ಹೇಗೋ ಸುಖಕ್ಕೂ ವಿವಿಧ ನಮೂನೆಗಳು... ಹಣ ಎಲ್ಲವನ್ನು ತಂದುಕೊಡಲ್ಲ ಎಂದು ನಾವೆಲ್ಲ ಹೇಳಿಕೊಳ್ಳುತ್ತಿದ್ದೆವು. ಆದರೆ, ಇಂದು ಹಣ ಎಲ್ಲವನ್ನು ಸಾಧ್ಯವಾಗಿಸುತ್ತಿದೆಯಲ್ಲ!
ಸೆಕ್ಸ್ ಕೂಡ ಎರಡು ಆರ್ಗನ್ ನಡುವಿನ ಸಂಬಂಧ, ಎರಡೂ ಲಿಂಗಗಳಿಗೆ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರ ಮುಖ್ಯವಾಗಿದೆ. ಅದು ವಿಜಾತಿ ಮತ್ತು ಸಜಾತಿ ಎರಡೂ ಆದೀತು. ಅದೂ ಸಿಕ್ಕದಿದ್ದರೆ ನೇರವಾಗಿ ನಿಮ್ಮದೇ ಒಂದನ್ನು ಸಿದ್ಧಪಡಿಸಿಕೊಂಡರಾಯ್ತು! ಇಷ್ಟು ಸಿಂಪಲ್ ಆಗಿದೆ ಸುಖದ ಕಲ್ಪನೆ!
ದೇಹ ಸಂಬಂಧ ಮತ್ತು ಪ್ರೀತಿ ಎರಡಕ್ಕೂ ಅಂಥ ಸಂಬಂಧವೇನೂ ಇಲ್ಲ. ಸೆಕ್ಸ್ ಎಂದರೆ ಒಬ್ಬರನ್ನು ಸೇರಿ ನಮ್ಮದಷ್ಟು ಅವರಿಗೆ ಮತ್ತು ಅವರಿಂದ ಸಾಕಷ್ಟನ್ನು ನಾವು ಪಡಕೊಳ್ಳುವ ಹಂಬಲವಾಗಿದೆ. ಎಲ್ಲೋ, ಹೇಗೋ ಸೇರಿದಾಗ ಒಂದಿಷ್ಟು ಸುಖಿಸುವುದರಲ್ಲಿ ತಪ್ಪೇನಿದೆ? ಕೆಲಸದ ಧಾವಂತದಲ್ಲಿ, ಸಂಪಾದನೆಯ ಗುಂಗಿನಲ್ಲಿ ಒಂದು ಜಾಗೆಯಿಂದ ಮತ್ತೊಂದು ಜಾಗೆಗೆ ಹಾಗೇ ಎಲ್ಲೆಡೆ ಸರಿದಾಡುತ್ತಲೇ ಇರುವ ನಾವು ಸದಾ ನಮ್ಮವರ ಜತೆಯಲ್ಲೇ ಎಲ್ಲಿ ಇರೋಕಾಗುತ್ತೆ? ದಿನ ದುಡಿದು ಸುಸ್ತಾದ ಜೀವಕ್ಕೆ ಏನೋ ಬೇಕೆನಿಸುವಂತೆ ದೇಹಕ್ಕೂ ಬೇಕಲ್ಲ?!... ಇಲ್ಲೇ ರಂಗೀಲಾ, ಮಟಿರಿಯಲಿಸ್ಟಿಕ್ ಜಗತ್ತು ನಮ್ಮನ್ನು ಕೊಡವಿ ಹಾಕೋದು. ನಮ್ಮ ಅನೈತಿಕ ಭಾವನೆಗಳ ಉನ್ಮತ್ತಲೋಕ ಸೆಳೆದುಬಿಡೋದು. ಈ ಕಾಲದ ಬಹುದೊಡ್ಡ ಅವಕಾಶಗಳ ಬೆಟ್ಟವೆಂದರೆ ಇದೇ. ಇಲ್ಲಿ ನಾವೆಲ್ಲ ತಂಗಲು ಹಾತೊರೆಯುತ್ತಿದ್ದೇವೆ.
ಹಾದರ ಅನ್ನೋದು ನಮ್ಮ ಜನಪದರಲ್ಲಿ ರಸಿಕತೆ, ಶೃಂಗಾರ ರಸಕ್ಕಷ್ಟೇ ಸೀಮಿತಗೊಂಡಿತ್ತು. ಬಿತ್ತನೆ ಮತ್ತು ರಾಶಿಯ ಸಂಭ್ರಮದಲ್ಲಿ ಕಳೆದುಹೋಗಲು ಮತ್ತು ಆದ ದಣಿವು ಆರಿಸಿಕೊಳ್ಳಲು ಕೆಲ ಉನ್ಮತ್ತ ಕ್ಷಣಗಳಿಗಾಗಿ ಅವರಲ್ಲೂ ತಹತಹಿಕೆ ಇತ್ತು. ಆಗಲೇ ಅವರಲ್ಲಿ ರಸಿಕನೊಬ್ಬ ಹುಟ್ಟಿಕೊಳ್ಳುತ್ತಿದ್ದ, ಹಾದರದ ಅಗ್ನಿಕುಂಡ ಹೊತ್ತಿ ಉರಿಯುತ್ತಿತ್ತು. ಮತ್ತು ತನ್ನ ಮೈಯಲ್ಲೆಲ್ಲ ಕೆನ್ನಾಲಗೆ ಚಾಚಿದ ಅಗ್ನಿ ಶಮನಕ್ಕೆ ಮಳೆಗಾಗಿ ಕಾತರಿಸುವ ಮಣ್ಣಿನಂಥ ಹೆಣ್ಣು ಯಾವಾಗಲೂ ಇದ್ದಾಳೆ. ಹೀಗಾಗಿ ಹಾದರ ಮನುಷ್ಯ ಚರಿತ್ರೆಯ ಒಂದು ಭಾಗವೇ ಆಗಿದೆ.
ಅದು ಬರಿಯ ಈ ಕಾಲದ ತಲ್ಲಣ ಎಂದೇನಲ್ಲ. ಆಗದು ಸಹಜ ಬಯಕೆ ಅನ್ನಿಸಿಕೊಂಡಿತ್ತು. ತಣಿದಾಗ ಪಾಪ ಪ್ರಜ್ಞೆಯಿಂದಲೂ ನರಳುವಂಥ ಸಹಜತೆ ಆಗಿತ್ತು. ಆದರೆ ಈಗದು ಚಟವಾಗಿದೆ. ಸ್ಟೈಲ್, ಅಹಮಿಕೆಯ ವಿಷಯವಾಗಿದೆ. ಕಾಲದ ಇಂಥದೂ ಒಂದು ಸೊಬಗಿನಲ್ಲಿ ಕಳೆದುಹೋಗುವ ಬಯಕೆಯಿಂದ ಯಾರು ಮುಕ್ತವಾಗಿದ್ದಾರೆ? ಪಾಪ ಪ್ರಜ್ಞೆಯಿಂದ ನರಳುವವರು ಚರ್ಚ್ ಒಳಗೆ ಪಾಪನಿವೇದನೆ ಮಾಡಿಕೊಳ್ಳುವಂತೆ ಈಗಿನ ಮನೋವೈದ್ಯರು ಮತ್ತು ಲೈಂಗಿಕ ತಜ್ಞರ ಸಾಂತ್ವನ ಕೇಳಿದರೂ ಸಾಕು...
ಎಲ್ಲ ನನ್ನ ಸುತ್ತ ಸುತ್ತಬೇಕು. ನನ್ನ ಸೇರುವ ಹಂಬಲ ಹೊಂದಬೇಕು. ಬಯಸಿದ್ದೆಲ್ಲ ಈ ಸೌಂದರ್ಯಕ್ಕೆ, ಸಂಪತ್ತಿಗೆ ದಕ್ಕಬೇಕು. ಎನ್ನುವ ಉಮೇದಿ ಬಹುತೇಕರಲ್ಲಿ ನಿತ್ಯ ಇಂಚಿಂಚು ಹೆಚ್ಚುತ್ತಲೇ ಇದೆ. ಒಬ್ಬ ಝೋಪಡಪಟ್ಟಿಯವ ಕೂಡ ತನ್ನ ಮಗ ಅಥವಾ ಮಗಳಿಗೆ ಉಳ್ಳವರ ಮನೆಯಿಂದ ಸಂಬಂಧ ಬಯಸುತ್ತಿದ್ದಾನೆ. ಹಸಿವಿನ, ನೋವಿನ, ದುಡಿಮೆಯ ರುಚಿಯನ್ನು ಅವನೂ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಮಹಾನಗರಗಳಿಗೆ ಫ್ಲೈ ಓವರ್, ಮೆಟ್ರೊ ಕಾಮಗಾರಿಗೆ ಬರುವ ದೂರದ ಹಳ್ಳಿಯ ರೈತ ಬರಿಯ ಹೊಟ್ಟೆಗೆ ಗಂಜಿ ಕಾಣಲು ಮತ್ತು ಬರದಿಂದ ಭಯಗೊಂಡು ಬಂದದ್ದಲ್ಲ. ಅವನಲ್ಲೂ ಸಂಪಾದನೆಯ ಗುಂಗು ಹಿಂಡಿಹಾಕುತ್ತಿದೆ. ಬರದಿಂದ ತತ್ತರಿಸಿದ ಉತ್ತರ ಪ್ರದೇಶದ ಕೆಲ ಹಳ್ಳಿಗಳಲ್ಲಿನ ಹೆಣ್ಣುಗಳು ಅವರ ಗಂಡಂದಿರಿಂದಲೇ ಮಾರಲ್ಪಡುತ್ತಿವೆ. ಮಹಿಳೆಯೇ ಮುಖ್ಯಮಂತ್ರಿ ಆಗಿರುವ ನಾಡಿನ ಎಷ್ಟೋ ಬಡ ಹೆಣ್ಣುಗಳು ಹೊಟ್ಟೆ ಹೊರೆದುಕೊಳ್ಳಲು ಬಾಡಿಗೆ ತಾಯಿಗಳಾಗುತ್ತಿವೆ!
ಯುದ್ಧ ಅನ್ನೋದು ಸಮರಕಲೆಯಂತೆ ಮೋಜು ಕೊಡುತ್ತಿದೆ. ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ. ವ್ಯಾಪಾರದ ಸರಕಾಗಿದೆ. ರೊಟ್ಟಿ, ಬೆಣ್ಣೆ ತರುವುದಲ್ಲ... ಬಾಂಬ್, ಗನ್ ಮತ್ತು ಒಟ್ಟು 'ರಕ್ಷಣೆ' ಅನ್ನೋದನ್ನೇ ಮಾರಾಟ ಮಾಡುವ ವ್ಯಾಪಾರದ ಸೆನ್ಸೇಶನಲ್ ಜಾಹಿರಾತಾಗಿದೆ. ಭಯದ ವಾತಾವರಣ ಸೃಷ್ಟಿಸಿ ರಕ್ಷಣೆಯ ಪುಕ್ಕಲುತನ ಬೆಳೆಸುತ್ತಿದೆ. ವಸ್ತುಗಳು ಸೂಕ್ತ ರಕ್ಷಣೆ ನೀಡಬಲ್ಲವು, ತಂತ್ರಜ್ಞಾನ ಜೀವ ಕಾಪಾಡಬಲ್ಲವು ಎಂದು ನಂಬಿಸಲು ಯುದ್ಧಗಳು ನಡೆಯುತ್ತವೆ. ಅಲ್ಲಿ ಸಿಡಿಯುವ ಪ್ರತಿ ಬಾಂಬ್ ಜೀವವನ್ನು ಉಳಿಸಿಕೊಳ್ಳಲು ಬಂದೂಕಿನ, ಅಸ್ತ್ರ, ಶಸ್ತ್ರಗಳ ನೆರವು ಪಡೆದುಕೊಳ್ಳಿ ಎಂದು ದೇಶ ದೇಶಗಳಿಗೆ ಸಾರುತ್ತಿದೆ. ಸೆಕ್ಯುರಿಟಿ ಟೆಕ್ನಾಲಜಿ ಮಾರಾಟವಾಗುತ್ತಿರುವುದು ಈ ಕಾರಣದಿಂದಲೇ. ದೇಶವೊಂದು ರಕ್ಷಣೆಗಾಗಿ ಕೊಲ್ಲುವ ಉಪಾಯಗಳನ್ನು, ತಂತ್ರಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅಣುಶಕ್ತಿ, ಕ್ಷಿಪಣಿ ಅಭಿವೃದ್ಧಿ ಎನ್ನುವ ಸಾವಿನ ಸರಕುಗಳ ತಯಾರಿಕೆಗೆ ವಿಜ್ಞಾನಿಗಳನ್ನು ಸೃಷ್ಟಿಸಲಾಗುತ್ತದೆ. ಕೊಲ್ಲುವ ಏಜೆಂಟರಂತೆ ಸೈನ್ಯ ಬಳಸಿಕೊಳ್ಳಲಾಗುತ್ತದೆ....
ಹೀಗೆ ಹೆಣ್ಣು ಮತ್ತು ದೇಶವನ್ನು ಭೋಗಿಸುವವರ ತೆವಲಿಗೆ ಇಡೀ ಮನುಷ್ಯ ಬದುಕು ನರಳಬೇಕಾಗಿದೆ.
ನಮ್ಮ ನಡುವಿನ ತಪ್ಪು ಗ್ರಹಿಕೆಗಳು, ಪ್ರೀತಿ ಮತ್ತು ವಿಶ್ವಾಸದ ಕೊರತೆಯಿಂದ ಎದ್ದ ಅಪನಂಬಿಕೆಗಳು ಒಂದು ಸುಂದರ ಸಂಬಂಧದ ನಡುವೆ ಮಲಗಿಬಿಡುತ್ತವೆ. ನೆಮ್ಮದಿ ಜಾಡಿಸಿ ಒದ್ದು ಹೊರಕ್ಕೆ ಹೋಗಿಬಿಡುತ್ತದೆ. ಅಂದುಕೊಂಡ ಬಣ್ಣಗಳು, ಬೆರಗು ಹುಟ್ಟಿಸಿದ ಬಣ್ಣಗಳೆಲ್ಲ ಮಾಸತೊಡಗುತ್ತವೆ. ಜತೆಯಲ್ಲಿ ಆಗಲೇ ಒಂದಿಷ್ಟು ಕಲ್ಪಿಸಿಕೊಂಡ ಕನಸಿನ ಬಣ್ಣಗಳು ಕಾಡತೊಡಗುತ್ತವೆ. ಹತಾಶೆ ಸೆಟೆದೆದ್ದು ನಿಲ್ಲುತ್ತದೆ. ಯಾವ ಸಾಂತ್ವನಗಳೂ ಮುರಿದ ಮನಸುಗಳಿಗೆ ಮದ್ದು ತಂದುಕೊಡಲ್ಲ...
ರಂಗಗೆಳೆಯ ಹಾಲ್ಕುರಿಕೆ ಶಿವಶಂಕರ್ ಶುಕ್ರವಾರ (6-11-2009 ಸಂಜೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಾತ್ಮಕ ಪ್ರಯೋಗ ಆ ಕನಸಿನ ಬಣ್ಣಗಳು ಪ್ರದರ್ಶನಗೊಂಡಿತು ) ಕೆಲವು ಪಾತ್ರಗಳ ಮೂಲಕ ಇಂಥ ಹಲವು 'ಆಘಾತಕಾರಿ' ಕನಸುಗಳ ಬಣ್ಣಗಳನ್ನು ತಮ್ಮ ವಿಶಿಷ್ಠ ರಂಗಪ್ರಯೋಗ ಮತ್ತು ರಂಗಭಾಷೆಯ ಸೊಗಡಿನಿಂದ ರಂಗದ ಮೇಲೆ ಹಿಂಡಿಹಾಕಿದರು. ಎಷ್ಟೊಂದು ಹಿಂಸೆ ಮತ್ತು ಭ್ರಮೆಗಳು ಆ ಬಣ್ಣಗಳಲ್ಲಿ!... ಒಂದು ಕಾಲದ ಜೀವನಶೈಲಿಯ ಬೆಚ್ಚಿಬೀಳಿಸುವ ಅನೇಕ ಸತ್ಯಗಳನ್ನು ಶಿವಶಂಕರ್ ತುಂಬ ಬೋಲ್ಡ್ ಆಗಿ ಹೇಳಿದ್ದಾರೆ.
ಅವರ ಎಲ್ಲ ಪಾತ್ರಗಳು ತಮ್ಮೆಲ್ಲ ಕನಸು ಮತ್ತು ಭ್ರಮೆಗಳ ಜತೆ ಮನಸಿನ ವಿಕಾರಗಳನ್ನು ಹೊರ ಹಾಕಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವು. ರಂಗದ ಮೇಲೆ ನಡೆದ ಇಂಥ ಅನಾವರಣಕ್ಕೆ ನಾಟಕಕಾರ ಮತ್ತು ನಿರ್ದೇಶಕ, ಅಲ್ಲೇ ಪರಿಹಾರ ಹುಡುಕುವ ಯತ್ನ ನಡೆಸದೇ ಮನೋವಿಜ್ಞಾನ ಮತ್ತು ಫಿಲಾಸಫಿ ಅನ್ನು ಕೂಡ ಅಸಹಾಯಕ ಸ್ಥಿತಿಗೆ ನೂಕಬಲ್ಲ ಈ ಕಾಲದ ತಲ್ಲಣಗಳಿವು, ಸಮಸ್ಯೆ, ಸಂಕೀರ್ಣತೆಗಳಿವು ಎಂದು ನಿರೂಪಿಸಿದರು. ತಾವೇ ಅಥವಾ ನಾಟಕದ ಅಂತಿಮ ಉದ್ದೇಶ ಪ್ರವಚನಕ್ಕೆ ನಿಲ್ಲೋದು ಬೇಡ ಎನ್ನುವ ತೀರ್ಮಾನವನ್ನೂ ಪ್ರಕಟಿಸಿದರು. ರಂಗದ ಮೇಲೆ ಅವರ ಒಂದೊಂದು ಪಾತ್ರಗಳು ತಮ್ಮೊಳಗಿನದೆಲ್ಲ ಅನಾವರಣಗೊಳಿಸಿದಂತೆಲ್ಲ ನಟರ ಮತ್ತು ಪ್ರೇಕ್ಷಕರ ನಡುವಿನ ಅನುಸಂಧಾನ ನಡೆದೇ ಇತ್ತು.
ನಾಟಕ ನೋಡುತ್ತಿದ್ದಂತೆ ನನ್ನಲ್ಲೂ ಹಲವು ಪ್ರಶ್ನೆಗಳು, ಆತಂಕಗಳು, ತಲ್ಲಣಗಳು ಇಣುಕಿದವು, ಕೆಣಕಿದವು. ನಾಟಕದ ವಿಚಾರಗಳು ನನ್ನಲ್ಲೂ ಪ್ರವಹಿಸಲು ನಿಂತವು. ಅಂತೆಯೇ ಇಷ್ಟೆಲ್ಲವನ್ನು ನನಗೂ ಮನವರಿಕೆ ಮಾಡಿಕೊಟ್ಟವು. ಒಂದಷ್ಟನ್ನು ಯೋಚಿಸುವಂತೆ, ಹೊರಹಾಕುವಂತೆ ಮಾಡಿದವು.
ಎಲ್ಲೆಡೆ ಸಿದ್ಧ ಮಾದರಿಗಳೇ ಚಲಾವಣೆಯಲ್ಲಿರೋದು. ಸಿದ್ಧ ಉಡುಪು, ಸಿದ್ಧ ಆಹಾರ, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡ ಈಗಿನ ಜನರೇಶನ್ ಹೊಸದೊಂದು ಬೆರಗು ಮೂಡಲೆಂದು ಕಾತರಿಸುತ್ತಿದ್ದ ಹೊತ್ತಲ್ಲಿ ಹಾಲ್ಕುರಿಕೆ ಶಿವಶಂಕರ್ ಎಂಥ ಅದ್ಭುತ ಬೆರಗು ಮೂಡಿಸಿಬಿಟ್ಟರು. ಚಿಂತನೆಯ ಹೊಸ ಹರವನ್ನು ಕಟ್ಟಿಕೊಟ್ಟರು!
ಕಡೇ ಮಾತು:
ಟಿವಿ ಮಾಧ್ಯಮ ರಿಯಾಲಿಟಿ ಶೋ ಮತ್ತು ಲೈವ್ ಪ್ರಸಾರದ ಮೂಲಕ ಜೀವಂತ ರಂಗಮಂಚವೊಂದರ ಅಸ್ತಿತ್ವಕ್ಕೇ ಚೆಕ್ ಕೊಟ್ಟು ಕೂತಿದೆ. ನಾಟಕ ನೋಡಲು ಜನಾ ಬರ್ತಿಲ್ಲ ಎಂಬ ಗೊಣಗಾಟ ನಡೆದ ಹೊತ್ತಲ್ಲಿ, ಹಾಲ್ಕುರಿಕೆ ಶಿವಶಂಕರ್ ತಮ್ಮ ಹೊಸ ಪ್ರಯೋಗದ ಮೂಲಕ ಎಷ್ಟೊಂದು ಪ್ರೇಕ್ಷಕರನ್ನು ಸೆಳೆದುಬಿಟ್ಟರು!.. ಕಲಾಕ್ಷೇತ್ರದ ನಾಟಕಗಳಿಗೆ ಮಾಮೂಲಾಗಿ ಸೇರುತ್ತಿದ್ದ ಹಳಸಲು ಮುಖಗಳ್ಯಾವೂ ಅಲ್ಲಿ ಕಾಣಿಸಲಿಲ್ಲ. ಎಲ್ಲ ಫ್ರೆಶ್ ಮುಖಗಳು! ನಾಟಕ ಮುಗಿಯುವ ತನಕ ತಾವೂ ಪಾತ್ರಗಳ ಆತಂಕಗಳಲ್ಲಿ ತಮ್ಮವಷ್ಟನ್ನೂ ಕಂಡರು. ಹೊಸ ನಾಟಕ ಭಾಷೆ, ಪ್ರಯೋಗದ ಹೊಸ ಸೂತ್ರ... ಹೀಗೆಲ್ಲ ಇಡೀ ರಂಗಭೂಮಿಗೆ ಹೊಸದನ್ನು ಅದೆಷ್ಟು ಸರಳವಾಗಿ ಒಪ್ಪಿಸಿಬಿಟ್ಟರು!... ಇಟ್ಸ್ ಅಮೇಜಿಂಗ್...
Wednesday, November 4, 2009
ಯಡಿಯೂರಪ್ಪ ಮತ್ತು 'ಮ್ಯಾಕ್ ಬೆತ್'
ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ ...
ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ:
ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ।
ಮ್ಯಾಕ್ ಬೆತ್ ಕಥೆ ಇಟ್ಟುಕೊಂಡು ಒಮ್ಮೆ ರಾಜ್ಯ ರಾಜಕಾರಣದತ್ತ ನೋಡೋಣ..
ಒಂದು ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಸ್ಪಷ್ಟ ಜನಾದೇಶ ನೀಡುವುದಿಲ್ಲ। ಅಂಥ ಸ್ಥಿತಿಯಲ್ಲಿ ಹಗಲುಗನಸು ಕಾಣುವವರೆಲ್ಲ ರಾಜನಾಗುವ ಕನಸು ಕಾಣುತ್ತಾರೆ। ಯಾರೋ ಒಬ್ಬರಿಗೆ ಅದೃಷ್ಟ ಒಲಿದು ಬಿಡುತ್ತೆ ಅಥವಾ ಅದೃಷ್ಟವನ್ನು ಹೇಗಾದರೂ ಒಲಿಸಿಕೊಳ್ಳುವವರೂ ಇರುತ್ತಾರೆ। ಹಾಗೊಂದು ಸ್ಥಿತಿಯಲ್ಲಿ ಕುಮಾರಸ್ವಾಮಿ ತಮ್ಮ ಕೆಲ ಶಾಸಕ ಮಿತ್ರರ ಮನವೊಲಿಸಿ ರೆಸಾರ್ಟ್ ಸೇರಿಕೊಂಡು ರಾಜ್ಯಭಾರದ ಕಿರೀಟ ಹೊತ್ತುಕೊಂಡೇ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರೆ। ಅಧಿಕಾರ ಹಂಚಿಕೊಳ್ಳುವ ಪೂರ್ವ ಷರತ್ತಿನಂತೆ ನಡೆದುಕೊಳ್ಳದೇ ಅನೈತಿಕ ರಾಜಕೀಯ ಯಕ್ಷಿಣಿಯ ಚೆಲ್ಲಾಟಕ್ಕೆ ಬಲಿಯಾಗುತ್ತಾರೆ।
ಮುಂದೆ ಹಸಿದ ಹೆಬ್ಬುಲಿಯಂತಿದ್ದ ಯಡಿಯೂರಪ್ಪ ಆ ಅನ್ಯಾಯವನ್ನೇ ಎಲ್ಲೆಡೆ ಮಠಾಧೀಶರು/ಜಾತಿವಾದಿಗಳ ಮೂಲಕ ಘರ್ಜಿಸುತ್ತ ಅಧಿಕಾರದ ಗದ್ದುಗೆ ತಲುಪಿದರು। ಹಾಗೆ ಪಡಕೊಂಡ ಕುರ್ಚಿ ಭದ್ರಪಡಿಸಲು ಬೇಕಾದ ಸಂಖ್ಯೆಗಾಗಿ ರಾಜಕೀಯ ಕೊಲೆಗೆ ನಿಂತರು (ಪಕ್ಷಾಂತರ ಎಂದರೆ ಅದೊಂದು ನೈಜ ರಾಜಕಾರಣದ ಕೊಲೆಯೇ ಆಗುತ್ತದೆ)। ಒಂದನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಹಾಗೇ ಒಂದಷ್ಟು ರಾಜಕೀಯ ಕೊಲೆಗಳು ನಡೆದವು। ಅನೈತಿಕ ರಾಜಕೀಯ/ಮಠಾಧೀಶರು/ಜಾತಿವಾದಿ ಎನ್ನುವ ಯಕ್ಷಿಣಿಗಳು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮವರಿಗೇ (ಮಂತ್ರಿವರ್ಯರು, ಕಾರ್ಯಕರ್ತರು) ಸರ್ವಾಧಿಕಾರಿಯಂತಾದರು। ಇದೆಲ್ಲವನ್ನು ಮ್ಯಾಕ್ ಡೆಫ್ ನಂತೆ ಕಾಯುತ್ತಲೇ ಇದ್ದ ಜನಾರ್ಧನ ರೆಡ್ಡಿ (ಶೆಟ್ಟರ್ ಅವರನ್ನಿಟ್ಟುಕೊಂಡು) ಸಮಯ ಸಾಧಿಸಿ ದಂಡಯಾತ್ರೆಗೆ ನಿಂತು ಕೋಟೆಯನ್ನೇ ಹೊಕ್ಕಿಬಿಟ್ಟರು।
ನಿದ್ರೆಯಲ್ಲಿ ಕಾವಲುಗಾರರ ಮುಖ, ಕೈಗಳಿಗೆ ಮತ್ತು ಖಡ್ಗ, ಭರ್ಚಿಗಳಿಗೆ ರಕುತ ಮೆತ್ತಿ ಕೊಲೆ ಕೊಲೆ ಎಂದು ಚೀರಿ ಅವರೆಚ್ಚರಗೊಂಡಾಗ ಅವರನ್ನೂ ಚಚ್ಚಿ ಒಳಗಿನ ರಾಜನನ್ನು ಅಡ್ಡ ಮಲಗಿಸಿ ಅದರ ಕಳಂಕವನ್ನೆಲ್ಲ ಇವರಿಗೆ ಮೆತ್ತಿ ತಾನು ಅಧಿಕಾರ ವಹಿಸಿಕೊಳ್ಳುವ ಕ್ರೂರ ಸೇನಾಧಿಪತಿಯಂತೆ ಯಡಿಯೂರಪ್ಪ ರಾಜ್ಯದಲ್ಲಿ ವರ್ತಿಸತೊಡಗಿದ್ದರು। ಯಾವ್ಯಾವುದೋ ಆಮಿಷ, ಆಶ್ವಾಸನೆಗಳನ್ನು ನೀಡಿ ಯಾವ್ಯಾವುದೋ ಪಾರ್ಟಿಯಿಂದ ಜನರನ್ನು ಜಾತಿ ಹೆಸರಲ್ಲಿ ಸೆಳೆದು ಮಠಾಧೀಶರಿಂದ ಮನವೊಲಿಸಿ ಪಕ್ಷಾಂತರವನ್ನು ಅಧಿಕೃತವಾಗಿ ಮಾಡಿ ಗೆಲುವಿನ ಕೇಕೆಯನ್ನೂ ಹಾಕಿದರು। ರಾಜಕೀಯ ನಾಟಕದ ಮೊದಲ ಅಂಕಗಳಲ್ಲೆಲ್ಲ ಯಡಿಯೂರಪ್ಪ ಇಂಥ ಬೇಟೆಗಳಿಂದ ಗೆಲುವು ದಾಖಲಿಸುತ್ತಲೇ ಸಾಗಿದರು।
'ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕು..' ಎನ್ನುವ ಮಾತು ಕಾರ್ನಾಡರ ಒಂದು ನಾಟಕದಲ್ಲಿ ಬರುತ್ತದೆ। ಹಾಗೆ ಯಡಿಯೂರಪ್ಪ ದರ್ಬಾರಿನ ಕೆಲ ಉನ್ನತ ಅಧಿಕಾರಿಗಳು, ಆಪ್ತ ಸಚಿವೆಯ ಕೆಲ ವರ್ತನೆಗಳು ಇಡೀ ವ್ಯವಸ್ಥೆಯನ್ನು ಕ್ರೂರವನ್ನಾಗಿಸಿದವು। ಇಂಥ ವ್ಯವಸ್ಥೆ ಯಡಿಯೂರಪ್ಪ ಅವರನ್ನು ಸರ್ವಾಧಿಕಾರಿ ಧೋರಣೆಗೆ ಎಳೆದು ತಂದಿತು। ತಮ್ಮ ಒಳಗಿನ ಮತ್ತು ತಮಗೆ ಸಾಕಷ್ಟು ನೆರವಾದವರ ವಿರುದ್ಧ ಯಾವುದೋ ಕಾರಣಕ್ಕೆ ಅಥವಾ ಕೆಲ ಹಿತಾಸಕ್ತಿಗಳನ್ನು ಖುಷಿಪಡಿಸಲು ಸೇಡಿನ ಮನೋಭಾವ ಪ್ರದರ್ಶಿಸಿದರು। ಅದಿರು ಲಾರಿಗಳ ಮೇಲೆ ಭಾರಿ ಸುಂಕ ವಿಧಿಸುವ ಹೆಸರಲ್ಲಿ ಗಣಿ ಧಣಿಗಳ ದೊಡ್ಡ ಹೊಟ್ಟೆಗಳ ಮೇಲೆ ಕಾಲಿಡಲು ನಿರ್ಧರಿಸಿದರು। ಇಲ್ಲೇ ಯಡವಟ್ಟಾಗಿದ್ದು। ಈ ಮೂಲಕ ಅವರು ಭಾರಿ ಪೈಲ್ವಾನ್ ಎನಿಸಿಕೊಳ್ಳಲೆತ್ನಿಸಿದ್ದರು। ಆದರೆ ಅದೆಲ್ಲ ಉಲ್ಟಾ ಆಯಿತು। ರೆಡ್ಡಿಗಳು ತಿರುಗಿಬಿದ್ದರು।
ರೆಡ್ಡಿಗಳು ತುಂಬ ದಿಟ್ಟವಾದ ಮತ್ತು ವ್ಯವಸ್ಥಿತವಾದ ಆಕ್ರಮಣಕ್ಕಿಳಿದಿದ್ದಾರೆ। ಹೀಗಾಗಿ ಥೇಟು ಅಂತಿಮ ಯುದ್ಧದ ವಾತಾವರಣ ಸೃಷ್ಟಿಯಾಗಿದೆ। ಇದರ ಅಂತ್ಯ ಬಹುಶಃ ಮ್ಯಾಕ್ ಬೆತ್ ನಾಟಕದ ಕೊನೆಯ ದೃಶ್ಯದಂತೆ ಆಗಬಹುದೇ?
ಮ್ಯಾಕ್ ಬೆತ್ ನಾಟಕದ ಕಡೆಯ ದೃಶ್ಯ ಹೀಗಿದೆ:
ಮ್ಯಾಕ್ ಬೆತ್: ನಾನ್ಯಾಕೆ ನಿಮ್ಮ ಜತೆ ವ್ಯರ್ಥವಾಗಿ ಹೋರಾಡಬೇಕು? ನನ್ನದೇ ಕತ್ತಿಯಿಂದ ಇರಿದುಕೊಂಡು ಸಾಯಬೇಕು?
ಮ್ಯಾಕ್ ಡೆಫ್: ನಿಲ್ಲು ನಿಲ್ಲು ದೂರ್ತ।
ಮ್ಯಾಕ್ ಬೆತ್: ನಿನ್ನನ್ನು ಕೊಲ್ಲದೆ ಬೇಕೆಂದೇ ಸುಮ್ಮನೇ ಬಿಟ್ಟಿದ್ದೇನೆ। ನಿನ್ನವರ ರಕ್ತದಿಂದ ಆಗಲೇ ನನ್ನಾತ್ಮ ಕಲೂಷಿತಗೊಂಡಿದೆ। ಸುಮ್ಮನೇ ತೊಲಗಾಚೆ।
ಮ್ಯಾಕ್ ಡೆಫ್: ವಿವರಿಸಲಿಕ್ಕೂ ಆಗದ ನೀಚ ನೀನು। ರಕ್ತಪಿಪಾಸು ಪಾಪಾತ್ಮ ನೀನು। ನನ್ನ ಕತ್ತಿಯಿಂದಲೇ ನಿನಗೆ ಉತ್ತರ ನೀಡುತ್ತೇನೆ।
ಮ್ಯಾಕ್ ಬೆತ್: ವ್ಯರ್ಥವಾಗಿ ಹೀಗೇಕೆ ಕತ್ತಿ ಝಳಪಿಸುವೆ। ನನ್ನ ಮುಗಿಸುವ ನಿನ್ನ ಯತ್ನ ಫಲ ನೀಡದು। ನಾನು ಅಮರಜೀವಿ। ನನ್ನ ಹಿಂದೆ ಅಭಯ ಹಸ್ತಗಳಿವೆ। ಯಾರೂ ನನ್ನನೇನೂ ಮಾಡಲಾರರು। ನೀಚ, ನನ್ನ ಕತ್ತಿಗೆ ನಿನ್ನ ರಕ್ತದ ರುಚಿ ಉಣ್ಣಿಸುವೆ।
ಮ್ಯಾಕ್ ಡೆಫ್: ಮೂರ್ಖ ಆ ಗತಿಯನ್ನು ನಿನಗೇ ಕಾಣಿಸಲಿದೆ ನನ್ನೀ ಕತ್ತಿ। ನೀನು ಆರಾಧಿಸುವ ಆ ಯಕ್ಷಿಣಿಗಳಿದಾವಲ್ಲ ಅವೇ ಹೇಳಲಿ ನೀನು ತಾಯಿ ಹೊಟ್ಟೆಯಿಂದ ಬಂದವನಲ್ಲ, ಹೊಟ್ಟೆ ಸೀಳಿ ಹೊರಬಂದವನೆಂದು।
ಮ್ಯಾಕ್ ಬೆತ್: ನನ್ನ ಅಧೀರನನ್ನಾಗಿಸುತ್ತಿರುವ ಮಾತುಗಳನ್ನಾಡುತ್ತಿರುವ ನಿನ್ನ ನಾಲಗೆ ಸೇದಿ ಹೋಗಲಿ। ನಾ ನಿನ್ನ ಜತೆ ಯುದ್ಧ ಮಾಡಲಾರೆ।
ಮ್ಯಾಕ್ ಡೆಫ್: ಹಾಗಾದರೆ ಶರಣಾಗೋ ಹೇಡಿ।
ಮ್ಯಾಕ್ ಬೆತ್: ನಾನು ನಿನ್ನಂತೆ ಹೊಂಚು ಹಾಕಿ ನುಗ್ಗಿದವನಲ್ಲ। ಪಿತೂರಿಗಳನ್ನಷ್ಟೇ ನಂಬಿದವನಲ್ಲ। ಬಾ ನನ್ನ ಕೆಣಕಿದವನೆ, ಯುದ್ಧಕ್ಕೆ ಅಣಿಯಾಗು।
(ಇಬ್ಬರೂ ಕತ್ತಿ ಝಳಪಿಸುತ್ತಾರೆ। ಕೆಲ ಕಾಲ ಸಂಘರ್ಷ ನಡೆಯುತ್ತದೆ। ಸಮಯ ನೋಡಿ ಮ್ಯಾಕ್ ಬೆತ್ ಓಡಿ ಹೋಗಲು ನೋಡುತ್ತಾನೆ। ಮ್ಯಾಕ್ ಡೆಫ್ ಕತ್ತಿಯಿಂದ ಬಲವಾಗಿ ಮ್ಯಾಕ್ ಬೆತ್ ನನ್ನು ಇರಿಯುತ್ತಾನೆ)
ಕಡೆಗೆ ಮಾಲ್ಕಂ ಗೆ ಪಟ್ಟಾಭಿಷೇಕ ನಡೆಯುತ್ತದೆ.
...... ...... ..... .......
ಮ್ಯಾಕ್ ಬೆತ್ ನಾಟಕದ ಮೊದಲ ಅಂಕಗಳಲ್ಲಿ ಮ್ಯಾಕ್ ಬೆತ್ ಗೆಲ್ಲುತ್ತಾನೆ। ನಂತರದ ಅಂಕಗಳು ಆತನ ಸೋಲಿನೊಂದಿಗೆ ಮುಗಿಯುತ್ತವೆ. ತನ್ನ ಆಲೋಚನೆಗಳಿಗೆ ತಾನೇ ಹೆದರುವ ಮ್ಯಾಕ್ ಬೆತ್ ನ ಸ್ವಗತಗಳಂತೆ ಯಡಿಯೂರಪ್ಪ ಮಾಧ್ಯಮಗಳ ಜತೆ ಮಾತನಾಡಿಕೊಳ್ಳುತ್ತಿದ್ದಾರೆ। ಅವು ತಮಗೆ ತಾವೇ ಹೇಳಿಕೊಳ್ಳುವ ಮತ್ತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವಂತೆ ಅನಿಸುತ್ತಿವೆ।
ಕಡೆಗೆ ಮಾಲ್ಕಂ ಆಗೋರು ಯಾರು? ಆ 'ಜಗದೀಶ'ನೇ ಬಲ್ಲ।
Friday, October 30, 2009
ಪರ್ಯಾಯ: ಗೌಡರತ್ತ ಎಲ್ಲರ ಚಿತ್ತ!
ಹಣ ಮತ್ತು ಜಾತಿ, ಇವೆರಡಕ್ಕೇ ರಾಜ್ಯದ ಹಣೆಬರಹ ಬರೆಯುವ ಶಕ್ತಿ ಇದೆ! ಎಂಥಾ ದುರವಸ್ಥೆ ಪ್ರಜಾತಂತ್ರದ್ದು? ಹಣ ಬಲದಿಂದ ಗಣಿಧಣಿಗಳು ಏನು ಬೇಕಾದರೂ ಮಾಡಬಲ್ಲ ತಾಕತ್ತು ಹೊಂದಿದ್ದಾರೆ। ಜಾತಿ ಬಲ ಒಂದರಿಂದಲೇ ರಾಜ್ಯ ನಿಯಂತ್ರಿಸಬಲ್ಲೆ ಎಂದು ಯಡಿಯೂರಪ್ಪ ಕೂತಂತಿದೆ। ಎರಡೂ ಅತಿರೇಕಕ್ಕೆ ಏನು ಹೇಳುವುದು?
ಪಕ್ಷಗಳಲ್ಲಿ ಅಥವಾ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸಹಜವೇ। ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಚನಾತ್ಮಕ ಕಾರ್ಯಕ್ಕೆ ಸಂಘಟಿತರಾಗುವುದು ಯಾವುದೇ ಸಂಘಟನೆಗೆ ಅನಿವಾರ್ಯದ ಸೌಹಾರ್ದತೆ। ಕನಿಷ್ಠ ಮಟ್ಟದ ಸೌಹಾರ್ದತೆ ಸಾಧ್ಯವಾಗದಂಥ ಸ್ಥಿತಿಗೆ ಬಂದಾಗ ಸಂಧಾನ, ರಾಜಿ ಮಾರ್ಗ ಹಿಡಿಯುವುದು ಹಾಸ್ಯಾಸ್ಪದವಾಗುತ್ತದೆ। ಪರಸ್ಪರ ಆತಂಕ ಮತ್ತು ಅಭದ್ರತೆಯ ನಡುವೆ ಕೂಡಿ ಬಾಳೋದು ದುಸ್ತರವೇ। ಹಾಗೆ ಅಸಮಾಧಾನಗಳ ನಿಗಿ ನಿಗಿ ಕೆಂಡಗಳನ್ನು ಸೆರಗಿನಲ್ಲಿಟ್ಟಕೊಂಡು ಬಹುದೂರ ಸಾಗಲು ಸಾಧ್ಯವೇ ಆಗುವುದಿಲ್ಲ।
ಎಲ್ಲಿ ಲಾಭವಿದೆಯೋ ಅಲ್ಲಿ ಸಂಘರ್ಷ ಇದ್ದದ್ದೇ। ಆರಂಭದಿಂದಲೂ ಕೇವಲ ವಸೀಲಿಬಾಜಿ, ಸಂಖ್ಯೆ ಹೊಂದಾಣಿಕೆಗೆ ಖರೀದಿ ತಂತ್ರ ಬಳಕೆ, ಕಡೆಗೆ ಸ್ಥಾನ ಭದ್ರ ಮಾಡಿಕೊಳ್ಳಲು ಆಪರೇಷನ್ ಕಮಲ್ ಎನ್ನುವ ಕೆಟ್ಟ ರಾಜಕೀಯ ಸಂಪ್ರದಾಯಕ್ಕೆ ಶರಣು... ಇಂಥ ಅತಿರೇಕದ ವರ್ತನೆಯಿಂದ ಸುದ್ದಿಯಲ್ಲೇ ಇದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಲ್ಲ ನಿರೀಕ್ಷಿತ ಬೆಳವಣಿಗೆಯೇ।
ಆಪರೇಷನ್ ಕಮಲ್ ಯಶಸ್ಸಿನ ಅಮಲಿನಲ್ಲಿ ಯಡಿಯೂರಪ್ಪ ಪಾವರ್ ಫುಲ್ ನಾಯಕರಾಗಲು ಯತ್ನಿಸಿದರು। ಬರ ಬರುತ್ತಾ ಅಧಿಕಾರದ ಮೇಲೆ ಭಾರಿ ಹಿಡಿತ ಸಾಧಿಸಲು ಸರ್ವಾಧಿಕಾರಿ ಮನೋಭಾವನೆ ತಾಳಿದರೆನ್ನುವುದು ಅವರದೇ ಪಕ್ಷದ ಸದಸ್ಯರ ಆರೋಪ। ಜನಾರ್ಧನ ರೆಡ್ಡಿಯವರಂತೂ ಓಪನ್ ಜಂಗಿ ನಿಕಾಲಿ ಕುಸ್ತಿ ಕಣಕ್ಕಿಳಿಯುವಂತೆ ಯಡಿಯೂರಪ್ಪನವರಿಗೆ ಪಂಥಾಹ್ವಾನವನ್ನೇ ನೀಡಿದ್ದಾರೆ। ರೆಡ್ಡಿಯವರದು ಹಟಮಾರಿ ನಿಲುವು, ದುಡ್ಡಿನ ದರ್ಪ ಎಂದೆಲ್ಲ ಟೀಕೆಗಳು ಹರಿದಾಡುತ್ತಿವೆ। ಆದರೆ, ಇದೇ ರೆಡ್ಡಿ ನಿಲುವು ಹಿಂದೆ ಬಿಜೆಪಿಗೆ ಅದೆಷ್ಟು ನೆರವಾಗಿತ್ತು ಎನ್ನುವುದನ್ನು ಸ್ವತಃ ಯಡಿಯೂರಪ್ಪ ಅವರೇ ಚೆನ್ನಾಗಿ ಬಲ್ಲರು।
ಜನಾರ್ಧನ ರೆಡ್ಡಿ, ರಾಮುಲು ಮತ್ತಿತರರ ಉತ್ಸಾಹ, ಹುಂಬುತನ ಮತ್ತು ದುಡ್ಡಿನ ದರ್ಪ ಕೆಲಸ ಮಾಡದೇ ಹೋಗಿದ್ದರೆ ಬಿಜೆಪಿ ಇವತ್ತು ಅಧಿಕಾರ ಅನುಭವಿಸುವ ಮಟ್ಟಕ್ಕೆ ಬರ್ತಾನೇ ಇರಲಿಲ್ಲ। ಅಂದರೆ ಯಡಿಯೂರಪ್ಪ ಕುರ್ಚಿ ಕಾಲು ಗಟ್ಟಿಯಾಗುಳಿಯಲು ರೆಡ್ಡಿ, ರಾಮುಲು ಗಣಿ ದುಡ್ಡು ನೀರಿನಂತೆ ಖರ್ಚಾಗಿತ್ತು. ಇದರ ಋಣದಲ್ಲೆ ಬಿಜೆಪಿ ಸರ್ಕಾರ ಕೆಲವು ಕಾಲ ಬಾಳಿತು। ಇದು ಅತ್ಯಂತ ಕೆಟ್ಟ ಸತ್ಯ... ಎಂದೆಲ್ಲ ಪ್ರತಿಪಕ್ಷಗಳು ಟೀಕಿಸುತ್ತಿರುವುದು ಸಹಜವೇ।
ಈ ಒಟ್ಟಾರೆ ಹೈ ಡ್ರಾಮಾದಲ್ಲಿ ಎಲ್ಲರೂ ಬಹುಮುಖ್ಯ ಪಾತ್ರಧಾರಿಗಳೇ ಆಗಿದ್ದಾರೆ। ನಾಟಕದ ಮಹತ್ವದ ತಿರುವಿಗೆ ಕೆಲವರ ಸ್ಪೇಶಲ್ ಅಪೀಯರನ್ಸ್ ಆಗಬೇಕಿದೆ। ದೇವೇಗೌಡರು ಎಲ್ಲಾ ರೀತಿಯಲ್ಲಿ ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ। ಇಂಥ ಸಂದಿಗ್ಧ ಸ್ಥಿತಿಯಲ್ಲಿ ಏನಾದರೊಂದು ಮಾಸ್ಟರ್ ಪ್ಲ್ಯಾನ್ ಮಾಡಬಲ್ಲ ರಾಜಕೀಯ ತಾಕತ್ತು ಇರೋದು ಸದ್ಯ ಅವರಿಗೆ ಮಾತ್ರ।
ದೇವೇಗೌಡರು ಏನು ಮಾಡಬಹುದು?
ಒಂದೆಡೆ ಯಡಿಯೂರಪ್ಪ ತಮ್ಮ ಮತ್ತು ಮಕ್ಕಳ ಪರಮ ವೈರಿ। २०+२० ಲೆಕ್ಕಾಚಾರದ ಹೊಂದಾಣಿಕೆ ರಾಜಕೀಯದಲ್ಲಿ ದೇವೇಗೌಡರು ಯಡಿಯೂರಪ್ಪ ಅವರಿಗೆ ಕೈಕೊಟ್ಟಿದ್ದರು। ಅದನ್ನೇ ಮುಂದುಮಾಡಿ, ಗೌಡರ ವಚನ ಭ್ರಷ್ಟ ನೀತಿ ಮತ್ತು ಕುತಂತ್ರದ ರಾಜಕಾರಣ, ಅಪ್ಪ ಮಕ್ಕಳ ಪಾರ್ಟಿ ಎಂದೆಲ್ಲ ಜೆಡಿ ಎಸ್ ಅನ್ನು ಹಿಗ್ಗಾ ಮುಗ್ಗಾ ಜರಿದು, ತಮ್ಮ ಅಧಿಕಾರಕ್ಕೆ ಅಡ್ಡಲಾದವರನ್ನು ಚುನಾವಣೆಯಲ್ಲಿ ಅಡ್ಡ ಮಲಗಿಸಿ ಎಂದು ಜನರ ಸಿಂಪತಿ ಗಳಿಸುವ ಮೂಲಕವೇ ಯಡಿಯೂರಪ್ಪ ಮುಖ್ಯಮಂತ್ರಿ ಆದರು। ದೇವೇಗೌಡರು ಇದನ್ನೆಲ್ಲ ಈತನಕ ಒಳಗೇ ನುಂಗಿ ಕುಳಿತುಕೊಂಡಿದ್ದರು। ಆಪರೇಷನ್ ಕಮಲ್ ಮೂಲಕ ಕುರ್ಚಿ ಗಟ್ಟಿ ಮಾಡಿಕೊಳ್ಳುವ ಮೂಲಕ ಪಾವರ್ ಫುಲ್ ಮುಖ್ಯಮಂತ್ರಿ ಅನಿಸಿಕೊಳ್ಳುವ ಸನ್ನಾಹದಲ್ಲಿದ್ದ ಯಡಿಯೂರಪ್ಪ ಚತುರತೆಗೆ ಅವರೂ ಮೂಕ ವಿಸ್ಮಿತರಾದಂತಿದ್ದರು, ಸೇಡು ತೀರಿಸಿಕೊಳ್ಳಲು ಹವಣಿಸುತ್ತಲೇ ಇದ್ದರು।
ಈಗ ಬೇಟೆ ತಾನಾಗೇ ಖೇಡ್ಡಾಕ್ಕೆ ಜಾರಿದೆ।- ಯಡಿಯೂರಪ್ಪ ಇಟ್ಟುಕೊಂಡು ರಾಜಕೀಯ ಮಾಡಲು ಇದು ಗೌಡರಿಗೆ ಸೂಕ್ತ ಸಂದರ್ಭದಂತೇ ಗೋಚರಿಸುತ್ತಿದೆ।
ಮತ್ತೊಂದೆಡೆ ತಮ್ಮ ಪುತ್ರ ಕುಮಾರಸ್ವಾಮಿಗೆ ಭಾರಿ ಸವಾಲಾಗಿರುವ ಜನಾರ್ಧನ ರೆಡ್ಡಿ ಮೇಲೆ ಗೌಡರದೊಂದು ನಜರ್ ಯಾವತ್ತೂ ಇತ್ತು। ಈಗಂತೂ ರೆಡ್ಡಿ ಭಾರಿ ಗುಡುಗುತ್ತಿದ್ದಾರೆ। ಹೀಗೇ ಬಿಟ್ಟರೆ ನಾಳೆ ಇವರೆಲ್ಲ ನುಂಗಲಾರದ ತುತ್ತಾಗುತ್ತಾರೆ ಎನ್ನುವ ಭೀತಿಯೂ ಗೌಡರಿಗಿದೆ। ಹೇಗಾದರೂ ಮಾಡಿ ರೆಡ್ಡಿ ಗ್ಯಾಂಗ್ ವಾರ್ ತಡೆಯಲು ತಂತ್ರ ಹೊಸೆಯಬೇಕಾದ ಅನಿವಾರ್ಯತೆಯನ್ನು ಬಹುಶಃ ಅವರೂ ಮನಗಾಣುತ್ತಿದ್ದಾರೆ।
ಒಂದೊಮ್ಮೆ ಗೌಡರು ಯಡಿಯೂರಪ್ಪ ಅವರನ್ನು ಮಾಫ್ ಮಾಡಬಹುದು, ಆದರೆ, ರೆಡ್ಡಿ ಅವರನ್ನು ಸಹಿಸಿಕೊಳ್ಳಲು ಗೌಡರಿಗೆ ಕಷ್ಟವಾಗುತ್ತದೆ। ನಾಳೆ ಇವರೆಲ್ಲ ಕುಮಾರಸ್ವಾಮಿ ಮತ್ತು ರೇವಣ್ಣ ರಾಜಕೀಯ ಭವಿಷ್ಯಕ್ಕೆ ಪ್ರಬಲ ಪೈಪೋಟಿಗಳಾಗುತ್ತಾರೆ ಎನ್ನುವ ಆತಂಕವೂ ಗೌಡರಿಗೆ ಇರುವ ಸಾಧ್ಯತೆ ಇದೆ।
ಬಿಸಿರಕ್ತದ ಮತ್ತು ದುಡ್ಡು, ಜನಪ್ರಿಯತೆಯಲ್ಲಿ ಭಾರಿ ಕುಳಗಳೇ ಆಗಿರುವ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಇವರಿಗೆಲ್ಲ ರಾಜಕೀಯ ಭವಿಷ್ಯವಿದೆ. ತಂತ್ರಗಾರಿಕೆಯಲ್ಲಿ ತಾವ್ಯಾರಿಗೂ ಕಮ್ಮಿ ಇಲ್ಲ ಎನ್ನುವಂಥ ರಾಜಕೀಯ ಧೈರ್ಯವನ್ನು ಅವರೀಗಾಗಲೇ ಪ್ರದರ್ಶಿಸಿದ್ದಾರೆ. ಅವರು ಎಸೆದ ಹಟಾತ್ ಬಾಂಬ್ ಗೆ ಇಡೀ ರಾಜ್ಯ ರಾಜಕೀಯ ತತ್ತರಿಸಿ ಹೋಗಿದೆ. ಇದೇ ಗೌಡರ ನಿದ್ದೆಗೆಡಿಸಿರಬಹುದು.
ರೆಡ್ಡಿಗಳದ್ದು ಲಿಂಗಾಯತ್ ವಿರೋಧಿ ಧೋರಣೆ ಅಲ್ಲ. ಶೆಟ್ಟರ್ ಅವರನ್ನು ನಾಯಕ ಎಂದು ಹೇಳುವ ಮೂಲಕ ಅದನ್ನು ರುಜುವಾತು ಪಡಿಸುವುದು ಅವರ ಸದ್ಯದ ತಂತ್ರ. ಆ ಮೂಲಕ ಪ್ರಬಲ ಕೋಮಿನ ದೃಷ್ಟಿಯಲ್ಲಿ ಅವರದು ರಾಜಕೀಯವಾಗಿ ಸೂಕ್ತ ಕ್ರಮ. ಶೆಟ್ಟರ್ ಅವರನ್ನು ಮುಂದಿಡುವ ಮೂಲಕ ಉತ್ತರ ಕರ್ನಾಟಕದ ಗಮನವನ್ನೂ ಸೆಳೆಯಬಹುದು ಎನ್ನುವುದು ರೆಡ್ಡಿಗಳ ತರ್ಕ.
ಮತ್ತೆ ರೆಡ್ಡಿಗಳದ್ದು ಹಿಂದುಳಿದ ವರ್ಗಗಳ ಪರ ದನಿ। ಶ್ರೀರಾಮುಲು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ। ಅವರು ನಿಜವಾದ ಹುಲಿ ಎಂದೆಲ್ಲ ಹೇಳುವ ಮೂಲಕ ಹಿಂದುಳಿದವರ ಮನಗೆಲ್ಲುವುದು ತಂತ್ರಗಾರಿಕೆಯ ಮತ್ತೊಂದು ಭಾಗ। ಹೀಗೆ ಅತ್ಯಂತ ಚಾಣಾಕ್ಷ ರಾಜಕೀಯ ಚತುರತೆಯನ್ನು ಗಣಿಧಣಿಗಳು ಪ್ರದರ್ಶಿಸಿದ್ದಾರೆ। ಇದೇ ಅಂಶ ಗೌಡರನ್ನು ಕಂಗೆಡಿಸಲು ಸಾಧ್ಯವಿದೆ। ರೆಡ್ಡಿಗಳ ಕಾರ್ಯತಂತ್ರ ವಿಫಲಗೊಳಿಸಲು ದೇವೇಗೌಡರು ಈಗ ಯಡಿಯೂರಪ್ಪ ಅವರ ಕೈ ಹಿಡಿಯಬೇಕಾಗುತ್ತದೆ। ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಹೊರಕ್ಕೆಳೆದು ಪ್ರತ್ಯೇಕ ಗುಂಪು ರೂಪಿಸಿ ಹೊರಗಿನಿಂದ ಬೆಂಬಲ ನೀಡುವುದು ಒಂದು ತಂತ್ರ। ಅಥವಾ ಯಡಿಯೂರಪ್ಪ ಮತ್ತು ರೆಡ್ಡಿ ವಿರೋಧಿ ಬಣವನ್ನು ಗುರುತಿಸಿ ಸೂಕ್ತ ಸಂಖ್ಯೆಯ ಸದಸ್ಯರನ್ನು ಬಿಜೆಪಿಯಿಂದ ಹೊರಕ್ಕೆಳೆದು ಪ್ರತ್ಯೇಕ ಗುಂಪು ರೂಪಿಸಿ ಕಾಂಗ್ರೆಸ್ ಅನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರ್ಯಾಯ ವ್ಯವಸ್ಥೆ ಮಾಡುವುದು ಮತ್ತೊಂದು ತಂತ್ರ। ರೇವಣ್ಣಗೆ ಉಪ ಮುಖ್ಯಮಂತ್ರಿ ಸ್ಥಾನ ಮಾತ್ರ ಮಸ್ಟ್ ಷರತ್ತು ಆಗಬಹುದು.
ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಜೆಡಿಎಸ್ ಮತ್ತು ದೇವೇಗೌಡ ಬಳಗ ಒಂದಾಗುವಂಥ ಸ್ಥಿತಿ ರೂಪಿಸುವುದು ಕೂಡ ಒಂದು ತಂತ್ರಗಾರಿಕೆ ಆಗಬಹುದು। ಆದರೆ, ಈಚೆಗಿನ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ತುಂಬ ಉತ್ಸಾಹದಲ್ಲಿದೆ। ಮತ್ತೆ ಚುನಾವಣೆ ಎದುರಿಸುವುದಕ್ಕೆ ಅದಕ್ಕೆ ಯಾವುದೇ ಅಳುಕು ಇರಲಿಕ್ಕಿಲ್ಲ। ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಾಥ್ ಮಿಲಾವ್ ಸಾಧ್ಯತೆ ಕಡಿಮೆ। ಹಾಗಿದ್ದಾಗ ದೇವೇಗೌಡರು ಯಡಿಯೂರಪ್ಪ ಅವರನ್ನು ಹಿಡಿದುಕೊಂಡೇ ಬಿಜೆಪಿ, ಕಾಂಗ್ರೆಸ್ ಮತ್ತು ರೆಡ್ಡಿ ಮೇಲಿನ ದ್ವೇಷವನ್ನು ಏಕಕಾಲಕ್ಕೆ ನಿಭಾಯಿಸುವ ನಿರ್ಧಾರಕ್ಕೆ ಬರಬಹುದು। ಕೇಂದ್ರದಲ್ಲಿ ತಾವು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಮತ್ತು ಬಿಜೆಪಿ ನಡೆದುಕೊಂಡ ರೀತಿ ಮತ್ತು ಸರ್ಕಾರ ಕೆಡವಲು ಕಾಂಗ್ರೆಸ್ ಅನುಸರಿಸಿದ ತಂತ್ರದ ಆಘಾತದಿಂದ ಗೌಡರು ಇನ್ನೂ ಹೊರಬಂದಿಲ್ಲ। ಆ ಸೇಡು ಹಾಗೇ ಉಳಿದುಕೊಂಡಿದೆ। ಇಂಥ ಸಮಯ ಬಂದಾಗೆಲ್ಲ ದೇವೇಗೌಡರು ಕಾಂಗ್ರೆಸ್ ಹಣಿಯುವುದಕ್ಕೆ ಮುಂದಾಗಲು ಯಾವುದೇ ಮುಲಾಜು ತೋರಲಾರರು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ರಾಜಕೀಯ ಅನುಭವ।
ಯಡಿಯೂರಪ್ಪ ಬಗ್ಗೆ ತುಂಬ ಅನುಕಂಪ ತೋರುವವರಂತೆ ಹೇಳಿಕೆ ನೀಡಿರುವ ದೇವೇಗೌಡರು ಒಂದು ಹಂತದ ರಾಜಕೀಯ ಸುಳಿವು ನೀಡಿದ್ದಾರೆ। ಹೀಗಾಗಿ ಯಡಿಯೂರಪ್ಪ ಅವರನ್ನೇ ಇಟ್ಟುಕೊಂಡು ಪರ್ಯಾಯಕ್ಕಾಗಿ ವ್ಯವಸ್ಥೆ ಮಾಡುವುದು ದೇವೇಗೌಡರ ಕಾರ್ಯತಂತ್ರವಾಗುವ ಸಾಧ್ಯತೆ ಇದೆ। ಈ ಮೂಲಕ ಲಿಂಗಾಯತರ ಮನಗೆಲ್ಲುವ ಅವಕಾಶವೂ ಗೌಡರಿಗಿದೆ। ರಾಜಕೀಯವಾಗಿ ತುಂಬ ಚತುರ ಎನಿಸಿಕೊಂಡಿರುವ ಗೌಡರತ್ತ ಈಗ ಎಲ್ಲರ ಚಿತ್ತ ಕೇಂದ್ರೀಕೃತಗೊಂಡಿದೆ.
Thursday, October 8, 2009
ಸೊಳ್ಳೆ ಮತ್ತು ಹಿಂಸೆ
ಜೋಗುಳ ೨೦೦; ತಾಯ್ತನದ ಸಂಭ್ರಮ ಮತ್ತು ಇತರ ನೆನಪುಗಳು

ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ!
ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ...
ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ...
ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು ಹುಡುಕುತ್ತ ಹೋದಂತೆ ವಾಸ್ತವ ಚಿತ್ರಣ ದಕ್ಕುತ್ತ ಹೋಯಿತು. ಇದರ ಮಾನವೀಯ ಮುಖದ ದರ್ಶನವಾಯಿತು. ಈ ಕಾಲದ ಬಹುದೊಡ್ಡ ತಲ್ಲಣ ಇದೆನಿಸಿತು.
ಮನುಷ್ಯ ಬದುಕಿನ ಇಂಥದೊಂದು ವಿಲಕ್ಷಣ ಮುಖ ಮತ್ತೊಂದರ್ಥದಲ್ಲಿನ ಮಾನವೀಯ ಮುಖ... ಕಥೆಯಾಗಿ, ದೃಶ್ಯವಾಗಿ, ಚಿತ್ತಾರವಾಗಿ, ಕಾವ್ಯವಾಗಿ ಬರೋದು ಹೇಗೆ... ? ಕಿರುತೆರೆಯ ಸೂಕ್ಷ್ಮ ಸಂವೇದನೆಯ ನಿರ್ದೇಶಕ ವಿನು ಬಳಂಜ ಇಂಥದೊಂದು ಸಾಹಸಕ್ಕೆ ಕೈಹಾಕಿದ್ದರು. ಬಹುಕಾಲದ ಒಡನಾಡಿ, ರಂಗಸಂಗಾತಿ ನರೇಶ್ ನನ್ನನ್ನು ಬಳಂಜ ಅವರಿಗೆ ಪರಿಚಯಿಸಿದ. ಆ ಮೂಲಕ ಹೊಸ ಗೆಳೆಯನತ್ತ ಮತ್ತು ಒಂದು ಅರ್ಥಪೂರ್ಣ ಸೃಜನಶೀಲ ಚಟುವಟಿಕೆಯತ್ತ ಮತ್ತೆ ನನ್ನ ಸೆಳೆದ. ಥ್ಯಾಂಕ್ಸ್ ನರೇಶ್.
ನಚಿಕೇತ (ಝೀ ಚಾನೆಲ್ ನ ಕಥಾ ವಿಭಾಗದ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ) ನೀಡಿದ ಒಂದು ಸಣ್ಣ ಕಥಾ ಎಳೆ ಹಿಡಿದು ಕುಳಿತಿದ್ದರು ವಿನು ಬಳಂಜ. ಸ್ಕ್ರಿಪ್ಟ್, ಸಂಭಾಷಣೆ ಕೆಲಸ ಸತ್ಯಮೂರ್ತಿ ಆನಂದೂರ್ ಮಾಡುತ್ತಿದ್ದರು. ಪ್ರಭಾಕರ್ ಕ್ಯಾಮೆರಾ ಕನ್ಯೆಯ ಪಾಲಾಗಿದ್ದರು. ಅದರ ಹರವನ್ನು ವಿಸ್ತರಿಸುವ ಕೆಲಸದಲ್ಲಿ ವಿನು, ಸತ್ಯ, ನರೇಶ್ ಅವರುಗಳ ಜತೆ ನಾನೂ ಸೇರಿಕೊಂಡೆ. ಕಥಾ ವಿಸ್ತರಣೆಯಲ್ಲಿ ನನಗೂ ಜವಾಬ್ದಾರಿ ಸಿಕ್ಕಿದ್ದು ಖುಷಿ ಕೊಟ್ಟಿತು.
ಬಾಡಿಗೆ ತಾಯಿ ಎನ್ನುವುದೊಂದು ಧಂಧೆಯಾಗಿ ಹೋಗಿದೆ ಎನ್ನುವ ನನ್ನ ಜರ್ನಲಿಸ್ಟ್ ಬುದ್ಧಿಯ ಜತೆಗೆ ತಾಯ್ತನದ ಜೀವಪ್ರೀತಿಯ ಸೆಳೆತವೂ ನನಗಿತ್ತು. ಕೆಲವು ಸಂದರ್ಭಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ. ನನ್ನ ಸಹೋದರಿ (ಅವಳ ಹೆಸರು ಷಹನಾಜ್) ಮೊದಲ ಮಗುವಿಗೆ ಜನ್ಮವಿತ್ತಾಗ, ಅದೇ ಸಮಯದಲ್ಲಿ ಸಹೋದರನ (ಝಕೀರ್) ಹೆಂಡತಿಯೂ ಮೊದಲ ಬಾರಿಗೆ ತಾಯಿ ಆದಾಗ ಮನೆಯ ಟೆರೇಸ್ ಮೇಲೊಂದು 'ತಾಯ್ತನದ ಸಂಭ್ರಮ' ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ನನ್ನ ಅಮ್ಮ (ಮುಮ್ತಾಜ್) ಮತ್ತು ನಮ್ಮೆಲ್ಲ ಬಳಗಕ್ಕೆ, ಸ್ನೇಹಿತರಿಗೆ ಅದೊಂದು ಟಚಿ ಈವೆಂಟ್ ಅನಿಸಿತ್ತು. ಅವತ್ತು ನಾನು ಮತ್ತು ಚಿಕ್ಕ ತಂಗಿ (ಅಮೀರಜಾನ್) ಸೇರಿ ಅದ್ಭುತ ಸ್ಟೇಜ್ ರೂಪಿಸಿದ್ದೆವು. ನೂರಾರು ಬಲೂನು, ಕ್ಯಾಂಡೆಲ್ ಮತ್ತು ಹಣತೆ ಬಳಸಿ ಒಂದು ಪುಟ್ಟ ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದೆವು. ಅವತ್ತು ಇಬ್ಬರೂ ತಾಯಂದಿರಿಗೆ ಪುಷ್ಟವೃಷ್ಟಿ! ಜತೆಗೆ ಹೊಸ ವಸ್ತ್ರ, ಪುಟ್ಟ ಚಿನ್ನದ ದಿಲ್, ಫ್ಲಾವರ್ ಬುಕೇ, ನೆನಪಿನ ಪತ್ರ, ತಾಯ್ತನ ಮತ್ತು ಪ್ರೀತಿಯ ಬಗ್ಗೆ ಎರಿಕ್ ಫ್ರಾಂ ಬರೆದ ಕೆಲವು ಸಾಲುಗಳ ಜತೆ ನನ್ನದೂ ಒಂದಷ್ಟು ಸಾಲುಗಳನ್ನು ಹೊಂದಿದ ಮತ್ತು ಕೊನೆಯ ಕೆಲ ಪುಟಗಳಲ್ಲಿ ಕಂದಮ್ಮಗಳ ತಾಯಂದಿರು, ಅಜ್ಜ, ಅಜ್ಜಿಯರು, ಅಪ್ಪ, ನನ್ನಮ್ಮ ಉರ್ದುವಿನಲ್ಲಿ ಬರೆದ ಶುಭಾಶಯಗಳು ಹಾಗೂ ಅಂದು ಬಂದ ನೂರಾರು ಬಂಧು ಮಿತ್ರರ ಶುಭಾಶಯಗಳನ್ನು ಅವರಿಂದಲೇ ದಾಖಲಿಸಿ ಒಂದು ಪುಸ್ತಕ ರೂಪಿಸಿದ್ದೆ. ಹ್ಯಾಂಡ್ಮೇಡ್ ಕಾಗದ ಬಳಸಿ ಮಾಡಿದ ಆ ಪುಸ್ತಕವನ್ನು ನನ್ನ ಅಮ್ಮ ಅಪ್ಪ ಮತ್ತು ಅತ್ತಿಗೆಯ ಅಮ್ಮ ಅಪ್ಪ ಹಾಗೂ ಸಹೋದರಿಯ ಅತ್ತೆ-ಮಾವ ಅವರುಗಳ ಮೂಲಕ ಇಬ್ಬರೂ ತಾಯಂದಿರ ಉಡಿಯಲ್ಲಿಟ್ಟಾಗ ನೆರೆದವರ ಕಣ್ಣಾಲಿಗಳು ಹಸಿಗೊಂಡಿದ್ದವು, ಮುಖಗಳಲ್ಲಿ ಪ್ರೀತಿಯ ಹಾರೈಕೆಗಳ ಲಾಸ್ಯವಿತ್ತು... ನನ್ನಮ್ಮ ಮುಮ್ತಾಜ್ ಆದ ಸಂತಸಕ್ಕೆ ಗಳ ಗಳನೇ ಅತ್ತುಬಿಟ್ಟಿದ್ದಳು...
ಮತ್ತೊಂದು ಸಂದರ್ಭ. ಗೆಳೆಯ, ಸಹೋದ್ಯೋಗಿ ರೋನಾಲ್ಡ್ ಮತ್ತು ಹೂಮನದ ರೋಹಿಣಿ ಪುತ್ರಿ ಮುದ್ದು ಋತು ಮೂರನೇ ವಸಂತಕ್ಕೆ ಕಾಲಿಟ್ಟ ಸಂತಸದ ಘಳಿಗೆಯಂದು ಹೆಗಡೆ ನಗರದಲ್ಲಿನ ಅವರ ನಿವಾಸದ ಟೆರೇಸ್ ಮೇಲೆ ಒಂದು ಸುಂದರ ಸಮಾರಂಭ ಮಾಡಿದ್ದೆವು. ಋತು ಅಪ್ಪ ಅಮ್ಮನಿಗೆ ಪುಷ್ಪವೃಷ್ಟಿಯ ಸ್ವಾಗತದ ಮೂಲಕ, ನೂರಾರು ಬಲೂನು, ನೂರು ಕ್ಯಾಂಡೆಲ್ ಬೆಳಕಿನ ನಡುವೆ ಋತುಗೆ ಶುಭಾಶಯ ಹೇಳಿದ ಅರ್ಥಪೂರ್ಣ ಘಳಿಗೆಯದು. ರೋಹಿಣಿ ಮುಖದಲ್ಲಿನ ತಾಯ್ತನದ ಸಂಭ್ರಮ ಕಳೆಕಟ್ಟಿದ ರೀತಿ ಇನ್ನೂ ನನ್ನ ನೆನಪಲ್ಲಿ ಹಸಿರಾಗೇ ಇದೆ.
ತಾಯ್ತನ ಮತ್ತು ಹೆಣ್ಣಿನ ಬದುಕಿಗೆ ಹೀಗೆ ನನ್ನೊಳಗೊಂದು ಹೆಮ್ಮೆಯ ಅಭಿಮಾನದ ವಿಶಾಲ ಜಾಗೆಯಿತ್ತು. ಅದು ಮತ್ತೆ ವಿಸ್ತಾರಗೊಂಡಂತೆನಿಸಿದ್ದು ಜೋಗುಳ ಧಾರಾವಾಹಿಯ ನಿರ್ಮಾಣ ಕಾರ್ಯದಲ್ಲಿ ನಾನೂ ತೊಡಗಿಕೊಂಡಾಗ. ನಡುವೆಲ್ಲೊ ನನ್ನೊಳಗಿನ ಕೆಲವು ತುಮುಲಗಳಿಗೆ, ಸೂಕ್ಷ್ಮ ಸಂವೇದನೆಗಳಿಗೊಂದು ದೊಡ್ಡ ಏಟಾಗಿತ್ತು. ಪ್ರೀತಿಯ ಮೇಲಿನ ನಂಬಿಕೆ ಯಾಕೊ ಸಡಿಲಗೊಂಡಿದ್ದ ಹೊತ್ತು. ಕೊಂಚ ನೆಮ್ಮದಿ ಕಂಡುಕೊಳ್ಳುವ ಮತ್ತೆ ಬದುಕಿನ ಹೊನಲಿಗೆ ಬಂದು ನಿಲ್ಲುವ ಮನಸು ಮಾಡಿದ್ದ ಹೊತ್ತೂ ಆಗಿತ್ತು. ಅದೇ ಸಮಯಕ್ಕೆ ಜೋಗುಳದ ಹಾಡು ಮಾರ್ದನಿಸತೊಡಗಿತು. ಮತ್ತೆ ಸೃಜನಶೀಲ ಲೋಕಕ್ಕೆ ಎಳೆದು ತಂದಿತ್ತು ನನ್ನೊಳಗಿನ ಮಗು.
ಭೀಷ್ಮ ಸಹಾನಿ ಅವರ ಮಾಧವಿ ನಾಟಕ ಓದಿದ್ದೆ. ನನ್ನ ಮತ್ತೊಬ್ಬ ರಂಗಸಂಗಾತಿ ಧನಂಜಯ್ ಕುಲಕರ್ಣಿ ನಾಟಕ ಮಾಡಿಸುವುದಕ್ಕೆ ಓಡಾಡುತ್ತಿದ್ದ. ಅದರೊಳಗಿನ ಗಾಲವ ಪಾತ್ರ ನನ್ನಿಂದ ಮಾಡಿಸುವ ಮನಸೂ ಇತ್ತು ಆತನಿಗೆ. ನಾವು ಮಾಧವಿ ಪಾತ್ರಕ್ಕೆ ಹುಡಗಿಯೊಬ್ಬಳ ತಲಾಶ್ ನಡೆಸಿದೆವು. ಅದಕ್ಕೆ ಸೂಕ್ತವಾಗುವ ಒಬ್ಬ ಸುಂದರ ಹೆಣ್ಣು ಸಿಕ್ಕಿರಲಿಲ್ಲ. ಹೀಗಾಗಿ ಆ ಮಾಧವಿ ಮನದೊಳಗೇ ಉಳಿದುಬಿಟ್ಟಿದ್ದಳು.ವಿನು ಜತೆ ಜೋಗುಳದ ಕಥೆ ಚರ್ಚೆ ನಡೆಸುತ್ತಿದ್ದಾಗ ಮಾಧವಿ ಮತ್ತೆ ನೆನಪಾದಳು. ವಿನು ಜೋಗುಳದ ದೇವಕಿ ಪಾತ್ರಕ್ಕೂ ಮಾಧವಿಗೂ ಒಂದರ್ಥದ ಸಾಮ್ಯತೆ ಇದೆ ಎನಿಸಿತು. ಅದನ್ನೇ ವಿನುಗೆ ಹೇಳಿದೆ. ತಕ್ಷಣ ಮಾಧವಿಯನ್ನು ಜೋಗುಳಕ್ಕೆ ರಿಲೇಟ್ ಮಾಡುವ ನಿರ್ಧಾರವಾಯ್ತು. ಒಂದಷ್ಟು ಎಪಿಸೋಡ್ ಗಳಲ್ಲಿ ಮಾಧವಿ ಬಂದು ಹೋದಳು.
ಮಾಧವಿ ಕಥೆಯ ಒಟ್ಟು ಸಾರಾಂಶ...
ವಿಶ್ವಾಮಿತ್ರನಿಗೆ ಒಬ್ಬ ಶಿಷ್ಯ ಇರುತ್ತಾನೆ. ಆತನ ಹೆಸರು ಗಾಲವ. ವಿದ್ಯಾಭ್ಯಾಸ ಎಲ್ಲ ಮುಗಿದ ನಂತರ ಗಾಲವ ಗುರುವಿನ ಬಳಿ ತೆರಳಿ ಗುರುದಕ್ಷಿಣೆ ಕೊಟ್ಟೇ ತೀರುವೆ ಎಂದು ಹೇಳುತ್ತಾನೆ. ಶಿಷ್ಯನ ಗರ್ವಕ್ಕೆ ವಿಶ್ವಾಮಿತ್ರ ಕಠಿಣವಾದ ಗುರುದಕ್ಷಿಣೆಯನ್ನೇ ಕೇಳುತ್ತಾರೆ. ಎಂಟು ನೂರು ಅಶ್ವಮೇಧ ಕುದುರೆ ತಂದುಕೊಡು ಎಂದು ಗಾಲವನಿಗೆ ಆಜ್ಞಾಪಿಸುತ್ತಾರೆ. ಗಾಲವ ಒಪ್ಪಿಕೊಳ್ಳುತ್ತಾನೆ. ಅಷ್ಟು ದೊಡ್ಡ ಗುರುದಕ್ಷಿಣೆ ಹೊಂದಿಸುವಲ್ಲಿ ಸುಸ್ತಾದ ಗಾಲವ ಆತ್ಮಹತ್ಯೆಗೆಂದು ನದಿ ತೀರಕ್ಕೆ ಬಂದಿರುತ್ತಾನೆ. ಅಲ್ಲೊಬ್ಬ ಈತನಿಗೆ ಯಯಾತಿ ಮಹರಾಜನ ಬಗ್ಗೆ ಹೇಳುತ್ತಾನೆ. ದಾನದಲ್ಲಿ ದೊಡ್ಡ ಶೂರ ಎಂದೆಲ್ಲ ಹೆಸರು ಮಾಡಿರುವ ಯಯಾತಿ ಮಹಾರಾಜ ಯಾರು ಏನೇ ಕೇಳಿದರೂ ನೆರವಾಗುತ್ತಾನೆ ಎಂದೂ ಹೇಳುತ್ತಾನೆ. ಗಾಲವ, ಯಯಾತಿ ಮಹಾರಾಜನ ಆಸ್ಥಾನಕ್ಕೆ ತೆರಳಿ ತನ್ನ ಅಳಲನ್ನು ಹೇಳಿಕೊಳ್ಳುತ್ತಾನೆ. ತನ್ನ ಬಳಿ ಕೆಲವೇ ನೂರು ಕುದುರೆಗಳಿರುವುದಾಗಿ ಹೇಳಿದ ಮಹಾರಾಜ, ಅವನ್ನು ಕೊಟ್ಟುಬಿಡುತ್ತಾನೆ. ಆದರೆ, ಉಳಿದ ಕುದುರೆಗಳನ್ನು ವ್ಯವಸ್ಥೆ ಮಾಡಲು ತಾವೇ ನೆರವಾಗಬೇಕು ಎಂದು ಗಾಲವ ಮಹಾರಾಜರಿಗೆ ಅಂಗಲಾಚುತ್ತಾನೆ.
ಯಯಾತಿ ಮಹಾರಾಜನಿಗೆ ಒಬ್ಬ ಮಗಳಿರುತ್ತಾಳೆ. ಆಕೆ ವರಪುತ್ರಿ. ಆಕೆ ಯಾವಾಗ ಬೇಕೋ ಆಗ ಮತ್ತೆ ಕನ್ಯತ್ವ ಪಡೆದುಕೊಳ್ಳುವ ವಿಶಿಷ್ಠ ವರವೊಂದನ್ನು ಹೊಂದಿರುತ್ತಾಳೆ. ಅವಳ ಹೊಟ್ಟೆಯಿಂದ ಹುಟ್ಟುವ ಮಗು ಚಕ್ರವರ್ತಿ ಆಗುವನೆಂಬ ವರವು ಆಕೆಗಿರುತ್ತದೆ. ಅವಳೇ ಮಾಧವಿ. ಅವಳನ್ನೇ ಗಾಲವನಿಗೆ ನೀಡಿಬಿಡುತ್ತಾನೆ ಯಯಾತಿ ಮಹಾರಾಜ!
ವಿವಿಧ ರಾಜರುಗಳ ಬಳಿ ಇರುವ ಅಷ್ಟು ಇಷ್ಟು ಸಂಖ್ಯೆಯಲ್ಲಿರುವ ಅಶ್ವಮೇಧ ಕುದುರೆಗಳನ್ನು ಪಡೆದುಕೊಳ್ಳಲು ಮಾಧವಿಯನ್ನೇ ಬಳಸಿಕೊಳ್ಳುವಂತೆ ಯಯಾತಿ ಮಹಾರಾಜ ಗಾಲವನಿಗೆ ಸಲಹೆ ನೀಡುತ್ತಾನೆ!
ಚಕ್ರವರ್ತಿಯಾಗಬಲ್ಲ ಸಂತಾನವಿಲ್ಲದೇ ಕೊರಗುತ್ತಿದ್ದ ಹಲವು ರಾಜರುಗಳ ಬಳಿ ಮಾಧವಿ ತೆರಳುತ್ತಾಳೆ. ಅವರ ಅಂತಃಪುರದಲ್ಲಿ ಅವಳ ದೇಹ ಬಳಲಿಹೋಗುತ್ತದೆ. ಸಂತಾನ ಕೊಟ್ಟು ಒಡಲು ಬರಿದಾದಂತೆನಿಸಿರುತ್ತದೆ. ಈ ನಡುವೆ ಮಾಧವಿ ಮತ್ತು ಗಾಲವರ ನಡುವೆ ಪ್ರೇಮಾಂಕುರವಾಗಿರುತ್ತದೆ. ಪ್ರೇಮಿಯ ಗುರಿ ಮುಟ್ಟಿಸುವುದು ಈಗ ಅವಳ ಬದುಕಿನ ಸಹಜವಾದ ಗುರಿಯೇ ಆಗಿಬಿಟ್ಟಿರುತ್ತದೆ. ಪ್ರೇಮಕ್ಕಾಗಿ ಎಂಥ ತ್ಯಾಗಕ್ಕೂ ಆಕೆ ಸಜ್ಜಾಗಿರುತ್ತಾಳೆ.
ಅಂತೂ ಗಾಲವನಿಗೆ ಬೇಕಾದಷ್ಟು ಅಶ್ವಮೇಧ ಕುದುರೆಗಳನ್ನು ಮಾಧವಿ ಕೂಡಿಸಿಕೊಡುತ್ತಾಳೆ. ತನ್ನ ಶಿಷ್ಯನ ಗುರುದಕ್ಷಿಣೆ ಪಡೆಯಲು ವಿಶ್ವಾಮಿತ್ರ ದೊಡ್ಡ ಸಮಾರಂಭವನ್ನೇ ಏರ್ಪಡಿಸುತ್ತಾರೆ. ಅಂದು ಮಾಧವಿಯನ್ನು ವರಿಸುವುದು ಗಾಲವನ ನಿರ್ಧಾರವಾಗಿರುತ್ತದೆ. ಆದರೆ, ಗಾಲವ ತನ್ನ ಮಾಧವಿ ಮತ್ತೆ ಕೌಮಾರ್ಯ ಪಡೆದುಕೊಳ್ಳಬೇಕು ಎಂದು ಬೇಡಿಕೆ ಮುಂದಿಡುತ್ತಾನೆ. ನನ್ನನ್ನು ಈಗಿರುವ ಸ್ಥಿತಿಯಲ್ಲಿ ಒಪ್ಪುವುದಾದರೆ ಮಾತ್ರ ನಿನ್ನ ವರಿಸುವೆ ಗಾಲವ ಎಂದು ಮಾಧವಿ ಸ್ಪಷ್ಟವಾಗಿ ಹೇಳಿಬಿಡುತ್ತಾಳೆ. ಗಾಲವ ಇದನ್ನು ಒಪ್ಪುವುದಿಲ್ಲ. ಅತ್ತ ಸಮಾರಂಭದಲ್ಲಿ ಗುರುಗಳಿಂದ, ಹಿರಿಯರಿಂದ, ವಿವಿಧ ಗಣ್ಯರಿಂದ ಗಾಲವನ ಗುಣಗಾನ ನಡೆಯುತ್ತಿರುತ್ತೆ. ಗಾಲವ ಹೆಮ್ಮೆಯಿಂದ ಬೀಗುತ್ತಿರುತ್ತಾನೆ. ಇತ್ತ ತನ್ನ ಪ್ರೇಮಿಯಿಂದ ತಿರಸ್ಕರಿಸಲ್ಪಟ್ಟ ಹೆಣ್ಣು ಮಾಧವಿ ಕಾಡಿನಲ್ಲಿ ಮರೆಯಾಗುತ್ತಾಳೆ...
ಈ ಕಥೆ ಹೇಳಿದಾಗ ವಿನು ದಂಗಾದರು. ತಕ್ಷಣ ಇದನ್ನು ಜೋಗುಳದಲ್ಲಿ ತರುವ ನಿರ್ಧಾರವನ್ನೂ ಕೈಗೊಂಡರು. ಮಾಧವಿ ಪುಸ್ತಕ ಎಲ್ಲಿಂದಲೋ ನರೇಶ್ ತಂದೇಬಿಟ್ಟ. ಜೋಗುಳದ ವಿದ್ಯಾಧರ ಕ್ಯಾರೆಕ್ಟರ್ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಮಾಧವಿ ನಾಟಕ ಆಡಿಸುವ ಒಂದು ಸೀನ್ ಸಿದ್ಧಗೊಂಡಿತು. ಮಾಧವಿ ಪುಸ್ತಕ ದೇವಕಿ ಕೈಗೂ ಸಿಕ್ಕು ದೇವಕಿ ಅದರ ಮಾಧವಿಯ ಕ್ಯಾರೆಕ್ಟರ್ ಒಳಗಿಳಿಸಿಕೊಳ್ಳುವ ಸಿಕ್ವೆನ್ಸ್ ಭರ್ಜರಿಯಾಗೇ ಸಿದ್ಧವಾಯ್ತು. ತೆರೆಯ ಮೇಲೂ ಪ್ರೇಕ್ಷಕರು ಅದನ್ನು ಸ್ವೀಕರಿಸಿದರು... ಹೀಗೆ ಒಂದು ಧಾರಾವಾಹಿಯ ಮುಖ್ಯ ಪ್ರವಾಹಕ್ಕೆ ನಮ್ಮೆಲ್ಲರ ಆಶಯಗಳೂ ಅಂಡರ್ ಕರೆಂಟ್ ಆಗಿ ಸೇರಿಕೊಂಡು ಝೀ ಚಾನೆಲ್ ನಲ್ಲಿ ಜೋಗುಳ ಧುಮ್ಮಿಕ್ಕಿ ಹರಿಯಿತು. ಹೊಸ ಹೊಸ ತಿರುವುಗಳಿಂದ ಜೋಗುಳ ಅರ್ಥಪೂರ್ಣವಾಗಿ ಬೆಳೆಯುತ್ತಿದೆ.
ಇದೇ 2009 ಆಗಸ್ಟ್ 29ರಂದು ಅದರ 200ರ ಎಪಿಸೋಡ್ ದಾಟಿದ ಸಂಭ್ರಮ ಸಾಲಿಟೇರ್ ಹೊಟೇಲಿನಲ್ಲಿ ಕಳೆಕಟ್ಟಿತ್ತು. ಎಲ್ಲ ನೆನಪಾಯಿತು... ಕಳೆದ ಬಾಲ್ಯ, ಕಂಡುಂಡ ನೋವು, ನಲಿವುಗಳ ಭಾವಲೋಕದಲ್ಲಿ ಮತ್ತೆ ತೇಲಾಡಿದಂತಾಯಿತು. ಅದರಲ್ಲಿ ಮಿಂಚಿದವರ ಮುಖಗಳಲ್ಲಿನ ಒಬ್ಬೊಬ್ಬರ ನಗು ನನಗೊಂದು ದಿವ್ಯಬೆಳಕಾಗಿ ಕಾಡಿತು. ನನ್ನೊಳಗಿನ ದೇವಕಿ ಬಹುವಾಗೇ ಕಾಡಿದಳು... ನನ್ನೊಳಗೇ ಆವರಿಸಿದ ಕತ್ತಲಲ್ಲಿ ಕರಗಿಹೋದೆ...
ನನ್ನ ದಿಲ್ ಪೂರ್ವಕ ಸಲಾಂ ದೇವಕಿಯಂಥ ಹೆಣ್ಣಿಗೆ, ಗೆಳೆಯ ನರೇಶ್ ಗೆ ಮತ್ತು ಒಟ್ಟಾರೆ ಜೋಗುಳ ತಂಡದ ಪ್ರತಿ ಚೇತನಕೂ...
Tuesday, September 29, 2009
ಜಾತಿ ಆಧಾರಿತ ತಾರತಮ್ಯ: ಭಾರತಕ್ಕೆ ಸಮ್ಮತ ಸಿದ್ಧಾಂತ?
ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆಗೆ ತೆರಕೊಳ್ಳುವ ಇಂಗಿತ ಹೊಂದಿದ್ದನ್ನು ಸೂಚ್ಯವಾಗಿ ಹೇಳಿದಂತಾಗಿದೆ. ವರ್ಗ ಸಂಘರ್ಷದಿಂದ ನಲುಗಿ ಹೋಗಿರುವ ಯುರೋಪ್ ನಾಗರಿಕತೆಯಲ್ಲಿ ಮಾಸ್ಟರ್-ಸ್ಲೇವರ್ ಒಂದು ದೊಡ್ಡ ಪಿಡುಗೇ ಆಗಿದೆ. ಭಾರತದ ಚತುರ್ವರ್ಣ ವ್ಯವಸ್ಥೆ ಇದಕ್ಕೂ ಹೀನವಾಗಿರುವಂಥದು. ಯುರೋಪ್ ಇದರಿಂದ ಹೊರಬರಲು ಹವಣಿಸುವುದು ಗಮನಸೆಳೆಯುತ್ತದೆ.
ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಹೀನಾಯ ಸ್ಥಿತಿಗೆ ಮನುಷ್ಯ ಬದುಕನ್ನು ಎಳೆದೊಯ್ದ ಉದಾಹರಣೆಗಳಿವೆ. ಭಾರತದ ಗಾಂಧಿ, ಅಂಬೇಡ್ಕರ್ ಮತ್ತು ಆಫ್ರಿಕಾದ ನೆಲ್ಸನ್ ಮಂಡೆಲಾ ಇದರ ರಾಕ್ಷಸಿ ರೂಪವನ್ನು ಕಂಡವರು. ಇದಕ್ಕೆ ದೊಡ್ಡ ಪ್ರತಿಭಟನೆ ವ್ಯಕ್ತಪಡಿಸಿದವರು. ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡವರು. ಮತ್ತೆ ಇಂಥ ಹೋರಾಟಗಳು ನಡೆಯಲೇಬೇಕಾದ ತುರ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಈ ಕ್ರಮ ಚಳವಳಿಯ ಸ್ವರೂಪ ಪಡಕೊಳ್ಳಬೇಕಿದೆ.
ಭಾರತದಲ್ಲಿನ ಸಾಮಾಜಿಕ ಸ್ಥಿತಿಯಲ್ಲಿ ಜಾತಿ ತಾರತಮ್ಯ ಮೇಲ್ವರ್ಗದ ಮತ್ತು ಅದರಲ್ಲೂ ಬ್ರಾಹ್ಮಣರ ಬಹುದೊಡ್ಡ ಅಸ್ತ್ರವಾಗಿದೆ. ಹುಟ್ಟಿನ ಕಾರಣಕ್ಕೆ ಶ್ರೇಷ್ಠ ಎನ್ನುವ ಬಿಟ್ಟಿ ಪಟ್ಟ ಅಲಂಕರಿಸುವ ಭಾರತದ ಬ್ರಾಹ್ಮಣರು ಇಡೀ ದೇಶವನ್ನು ದಟ್ಟ ದಾರಿದ್ರ್ಯಕ್ಕೆ ನೂಕಿದ್ದಾರೆ. ಈ ಚಾಳಿ ಇತರ ಮೇಲ್ವರ್ಗಕ್ಕೂ ವ್ಯಾಪಿಸಿದ್ದು ನಾಚಿಕೆ ಪಡುವಂಥ ಬೆಳವಣಿಗೆ. ಕೆಳಗಿನವರನ್ನು ಆದಷ್ಟು ಅದುಮುತ್ತಲೇ ಮೇಲಾಟವನ್ನು ಕಾಪಾಡಿಕೊಂಡು ಬಂದ ಮೇಲ್ವರ್ಗದ ದರ್ಪ ಕೊಂಚವಾದರೂ ಸಡಿಲಗೊಂಡಿದ್ದು ಅಂಬೇಡ್ಕರ್ ನಡೆಸಿದ ಹೋರಾಟದಿಂದ. ಆದರೆ, ಅದರ ಫಲಾನುಭವಿಗಳು (ಎಲ್ಲರೂ ಅಲ್ಲ ) ಮಾತ್ರ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಂತೆ ನವಬ್ರಾಹ್ಮಣರಾಗುತ್ತಿರುವುದು ವಿಷಾದಕರ.
ವೀರಶೈವ, ಲಿಂಗಾಯತರ ವಿಷಯದಲ್ಲೂ ಇದೇ ಸ್ಥಿತಿ. ಜಾತಿ ವಿನಾಶದ ಮೂಲ ಅಜೆಂಡಾ ಇಟ್ಟುಕೊಂಡು ಸಾಮಾಜಿಕ ಕ್ರಾಂತಿಯೊಂದನ್ನು ರೂಪಿಸಿದ ಬಸವಣ್ಣ ದೇವರ ಸ್ಥಾನಕ್ಕೆ ಏರಿದರು. ಅನುಯಾಯಿಗಳು ಜಾತಿ ವಿನಾಶದ ಬದಲು ಅವರೇ ಒಂದು ಜಾತಿಯಾಗಿ ಪ್ರಭುತ್ವ, ಅಧಿಕಾರಕ್ಕಾಗಿ ಮತ್ತದೇ ಶೋಷಣೆಯ ಮಾರ್ಗ ಹಿಡಿಯುತ್ತಿರುವುದು ಎಂಥ ವಿಪರ್ಯಾಸ!
ಇಂದು ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಢಾಳಾಗಿ ಕಾಣಿಸುವ ಸತ್ಯ. ಮೈಸೂರಿನ ಸುತ್ತೂರು ಮಠದಲ್ಲಿ, ಆರ್ ಎಸ್ ಎಸ್ ಪೌರೋಹಿತ್ಯದಲ್ಲಿ ಗೋಧ್ರಾ ನರಹತ್ಯೆಯ ರೂವಾರಿ ಎಂದೇ ಟೀಕೆಗೆ ಒಳಗಾದ ಮತ್ತು ಅಮೆರಿಕದಂಥ ರಾಷ್ಟ್ರಗಳ ವೀಸಾ ಪಡೆಯುವುದಕ್ಕೂ ಅನರ್ಹತೆ ಗಳಿಸಿಕೊಂಡ ನರೇಂದ್ರ ಮೋದಿಯಿಂದ ಇಡೀ ಕರ್ನಾಟಕ ಸರ್ಕಾರದ ಸಚಿವರು ಪ್ರವಚನ ಕೇಳುವ ಪರಿಸ್ಥಿತಿ! ಭಾರತದ ಪ್ರಜಾಪ್ರಭುತ್ವಕ್ಕೆ ಬಂದ ಇಂಥ ಗಂಡಾಂತರಕ್ಕೆ ಏನು ಹೇಳಬೇಕು?
ವಿಶ್ವದ ೨೦ ಕೋಟಿಗೂ ಹೆಚ್ಚು ಜನ ಜಾತೀಯ ತಾರತಮ್ಯದಿಂದ ನಲುಗುತ್ತಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಕರಡು ಸಿದ್ದಾಂತ ಮತ್ತು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನಿನ ಕಸುವು ತುಂಬಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿಗೆ ಯತ್ನಿಸುತ್ತಿದೆ.
ಜಾತಿ, ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯ ಮಾನವೀಯ ಮೌಲ್ಯ ಅಲ್ಲ ಎನ್ನುವುದು ಈ ಮೂಲಕ ವಿಶ್ವಕ್ಕೆ ಮನದಟ್ಟು ಮಾಡುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದ ಇತರ ರಾಷ್ಟ್ರಗಳು ಸಂಕಲ್ಪ ಮಾಡಿಕೊಂಡಲ್ಲಿ ಮಹತ್ತರ ಬದಲಾವಣೆಗೆ ದಾರಿಯಾಗುತ್ತದೆ.
ವಿಪರ್ಯಾಸವೆಂದರೆ ಭಾರತ ವಿಶ್ವದ ಈ ನಡೆಯನ್ನೇ ವಿರೋಧಿಸಿದೆ!
Tuesday, September 1, 2009
ನಾವೆಷ್ಟು ನಾಮರ್ದಗಳಾಗಿದ್ದೇವೆ?
ನಮ್ಮೆಲ್ಲ ಕನಸು, ಆಶಯಗಳ ಪ್ರತೀಕವಾಗಬೇಕಿದ್ದ ನಾವೇ ಆಯ್ಕೆ ಮಾಡಿದ ಸರ್ಕಾರಗಳು 'ಸೆಟ್-ಅಪ್' ಕಲ್ಚರಿಗೆ ಸರಿದು ನಿಂತಿವೆ. ಒಂದು ನಿರ್ಧಿಷ್ಟ ಕೋಮು, ಕಲ್ಟ್, ಜಾತಿ, ಧರ್ಮಕ್ಕೆ ಸೇರಿದವರು ಒಂದು ಗ್ಯಾಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಲಿಷ್ಠ ಕೋಮುಗಳ ಸ್ವಯಂಘೋಷಿತ ರಾಜ್ಯ-ರಾಷ್ಟ್ರೀಯ ಲೀಡರ್ ಗಳು ಪವರ್ ಡೀಲರ್ ಗಳಾಗಿದ್ದಾರೆ. ಅವರನ್ನೆಲ್ಲಾ ನಾವು ಜನನಾಯಕರೆಂದು ನಂಬುತ್ತೇವೆ.
ಬಾಟಾ ಬಾಟಿಯ ವ್ಯಾಪಾರಿ ಬುದ್ಧಿ ಇಂದಿನ ಪಾಲಿಟಿಕಲ್ ಕ್ವಾಲಿಫಿಕೇಷನ್ ಆಗಿಹೋಗಿದೆ. ಜಾತಿವಾರು ಲೆಕ್ಕಾಚಾರ, ಸಂಖ್ಯಾಬಲದ ಜೋಡಣೆಗೆ ಫ್ರಂಟ್ ಲೈನ್ ಲೀಡರ್ ಗಳು ಬ್ರೋಕರ್ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮ ಎನ್ನುವುದು ಇವರು ತೊಡುವ ಹವಾಯಿ ಚಪ್ಪಲಿಗಿಂತ ಕಡೆಯಾಗಿ ಹೋಗಿದೆ. ಯೂಸ್ ಅಂಡ್ ಥ್ರೋ ವಸ್ತುವಾಗಿದೆ. ಧಾರ್ಮಿಕ ನಾಯಕರೆಲ್ಲ ತಮ್ಮ ಅನುಯಾಯಿಗಳನ್ನು ರಾಜಕಾರಣಿಗಳ ಗುಲಾಮರನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹೀಗೆ ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರ ನಡುವೆ ಒಡಂಬಡಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ. ಯಾವ ಆಶಾಭಾವದಿಂದ ಇದನ್ನೆಲ್ಲ ಸಹಿಸಿಕೊಂಡಿರಬೇಕೋ...
ಇಂಥದೊಂದು ಸಾತ್ವಿಕ ಆಕ್ರೋಶ ಬಹುತೇಕ ಪ್ರಜ್ಞಾವಂತರಲ್ಲಿಯೂ ಮೂಡುತ್ತಿದೆ.
ಮತಾಂತರ ವಿರೋಧಿಸುವ ಪಕ್ಷದ ಸರ್ಕಾರ ಪಕ್ಷಾಂತರವನ್ನು ಆಪರೇಷನ್ ಕಮಲ್ ಎನ್ನುವ ಸೋಗಿನಲ್ಲಿ ನಡೆಸುತ್ತಿದೆ. ಯಾವ ನೈತಿಕ ನೆಲೆಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತೊ...
ಮತಾಂತರ ಮತ್ತು ಪಕ್ಷಾಂತರ
ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹ ಇರುವ ಸ್ಥಿತಿಯಿಂದ ಮತ್ತಷ್ಟು ಉತ್ತಮ ಸ್ಥಿತಿಗೆ ಏರಲು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬದಲಾಗೋದು ಮತಾಂತರದಿಂದ ಸಾಧ್ಯ ಎನ್ನೋದಾದರೆ ಅದು ಹೇಗೆ ತಪ್ಪಾಗುತ್ತದೆ?
ಹಾಗೇ, ಒಂದು ಪಕ್ಷದ ಅನಾನುಕೂಲಗಳಿಂದ ಬೇಸತ್ತು ಅನುಕೂಲ ಇರುವ ಮತ್ತೊಂದಕ್ಕೆ ಹಾರುವುದು ಸಹಜ. ಅಥವಾ ಸಿದ್ಧಾಂತಗಳು ಬೇಸರವಾದಾಗ, ಅಸಹನೀಯ ರಿಜಿಡಿಟಿ ಎನಿಸಿದಾಗ ಎದ್ದು ಹೊರಡುವುದು ಸಹಜವಲ್ಲವೇ?
ಆದರೆ, ಆ ಹೆಸರಲ್ಲಿ ಕೆಲವರನ್ನು ಬಲವಂತವಾಗಿ, ಅನಾಮತ್ತಾಗಿ ಎತ್ತಿಕೊಂಡು ಹೋಗುವುದು ಅಥವಾ ಹಾಗೆ ಅವರನ್ನು ಅಸಹಾಯಕರನ್ನಾಗಿಸುವುದು ಶುದ್ಧ ಅನಾಗರಿಕತೆ. ಇಂಥದೊಂದು ಅನಾಗರಿಕ ವರ್ತನೆ ನಮ್ಮ ರಾಜಕೀಯ ರಂಗದಲ್ಲಿ ನಡೀತಾನೇ ಇದೆ. ಎಂಥ ನಾಚಿಕೆಗೇಡು?
ಇಂಥದೇ ಅವಘಡಗಳು ಧರ್ಮದ ವಿಷಯದಲ್ಲೂ ನಡೆಯುತ್ತಿವೆ. ಅದು ಖಂಡನೀಯ. ಧರ್ಮಕ್ಕೆ ಅವುಗಳದ್ದೇ ಆದ ಕಟ್ಟು ಪಾಡುಗಳು, ನಂಬಿಕೆಗಳು, ಸಂಪ್ರದಾಯಗಳಿವೆ. ಅವು ಬಹುತೇಕ ಅಲಿಖಿತ ಸಂವಿಧಾನಕ್ಕೊಳಪಟ್ಟಂಥವು. ಅದನ್ನು ನಿಭಾಯಿಸುವಲ್ಲಿ ಧಾರ್ಮಿಕ ನಾಯಕರು ನಂಬಿಕೆಗಳ ಆಧಾರದಲ್ಲಿ ಮಾತ್ರ ಯತ್ನಿಸಬಹುದಾಗಿದೆ. ಅದನ್ನು ಕಾನೂನಾಗಿಸಲು ಅವರಿಗೆ ಅವಕಾಶಗಳಿಲ್ಲ. ಬಹಿರಂಗವಾಗಿ ಒತ್ತಡ ಹೇರುವುದಾಗಲಿ, ಒತ್ತಡ ತರುವುದಾಗಲಿ ಅದಕ್ಕೆ ನಾಗರಿಕ ಸಮಾಜದಲ್ಲಿ ಅವಕಾಶವಿಲ್ಲ. ಆದರೂ ಕೆಲವೆಡೆ ಇದು ನಡೆಯುತ್ತದೆ.
ಧರ್ಮವಾಗಲಿ ಇಲ್ಲವೇ ರಾಜಕೀಯ ಪಕ್ಷವಾಗಲಿ ಅದರ ನಾಯಕತ್ವಕ್ಕೆ ತನ್ನ ಅನುಯಾಯಿಗಳ ಬಗ್ಗೆ ಸ್ಪಷ್ಟವಾದ ನಿಲುವುಗಳನ್ನು ನೈತಿಕ ನೆಲೆಯಲ್ಲಿ ಇಟ್ಟುಕೊಳ್ಳುವುದು ಕನಿಷ್ಠ ಶಿಸ್ತು. ಸಮಾನ ಅವಕಾಶ ಕಲ್ಪಿಸುವ ಡೆಮಾಕ್ರೆಟಿಕ್ ವ್ಯವಸ್ಥೆ ಪಕ್ಷದಲ್ಲಿ ಅಥವಾ ಧರ್ಮದಲ್ಲಿ ಇಲ್ಲವೆಂದ ಮೇಲೆ ಯಾರು ತಾನೆ ಅದರಲ್ಲೇ ಕೊಳೆಯಲು ಇಷ್ಟಪಡುತ್ತಾರೆ? ಇಂಥ ಸಂದರ್ಭದಲ್ಲಿ ಮತಾಂತರ ಅಥವಾ ಪಕ್ಷಾಂತರ ನ್ಯಾಯಸಮ್ಮತ. ಅದು ವೈಜ್ಞಾನಿಕ ಕೂಡ.
ಆದರೆ, ಒಂದು ಪಕ್ಷದಲ್ಲಿದ್ದುಕೊಂಡು ಅದು ಅಧಿಕಾರದಲ್ಲಿದ್ದಾಗ ಅಧಿಕಾರ ಮತ್ತು ಸವಲತ್ತು ಅನುಭವಿಸಿ ಅದು ಸೋಲುಂಡಾಗ ಮತ್ತೊಂದು ಪಕ್ಷಕ್ಕೆ ಕೇವಲ ಅಧಿಕಾರಕ್ಕಾಗಿ ಹಾರುವುದು ನಮಕ್ ಹರಾಮ್ ಕೆಲಸವಾಗುತ್ತದೆ. ಹೀಗೆ ನಮಕ್ ಹರಾಮ್ ಕೆಲಸ ಮಾಡುವವರು ರಾಜಕೀಯ ಚತುರ ಎಂದೆನಿಸಿಕೊಳ್ಳುವುದೂ ಇದೆ. ಇದಕ್ಕೆಲ್ಲ ಅವರ ಬೆಂಬಲಿಗರೇ ಅವಕಾಶ ಮಾಡಿಕೊಡುವುದು ನಾಮರ್ದ್ ಗಿರಿ ಅಲ್ಲದೆ ಇನ್ನೇನು?
ಒಮ್ಮೊಮ್ಮೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಬುಡಮೇಲು ಆಗುವುದೂ ಇದೆ. ಇತ್ತೀಚೆಗಿನ ಉಪಚುನಾವಣೆ ಈ ಮಾತನ್ನು ರುಜುವಾತು ಪಡಿಸಿದೆ ಕೂಡ. ಜಾತಿಯೊಂದನ್ನು ನಂಬಿಕೊಂಡು ಮತದಾರರ ಅಭಿಪ್ರಾಯಗಳ ಜತೆ ಆಟವಾಡಲು ಹೋದರೆ ಎಂಥ ಶಾಸ್ತಿಯಾಗುತ್ತದೆ ಎನ್ನುವುದಕ್ಕೆ ಈ ಸಲದ ಉಪ ಚುನಾವಣೆ ದೊಡ್ಡ ಸಾಕ್ಷಿ. ಬೆಂಗಳೂರಿನ ಗೋವಿಂದರಾಜ ನಗರ ಉಪಚುನಾವಣೆ ಇದಕ್ಕೆ ತಾಜಾ ಉದಾಹರಣೆ. ಆಡಳಿದಲ್ಲಿರುವ ಪಕ್ಷದ ಜಾತಿವಾದ ಹೊಡೆಯಲು ಪ್ರತಿಪಕ್ಷ ಬಳಸಿದ್ದು ಕೂಡ ಜಾತಿವಾದವನ್ನೇ!
ಸದ್ಯಕ್ಕೆ ಹಣಬಲ ಕರಾಮತ್ತು ಮಾಡಬಲ್ಲ ಬಹುದೊಡ್ಡ ಅಸ್ತ್ರ. ಆಡಳಿತದಲ್ಲಿರುವ ಪಕ್ಷ ಆಡಳಿತ ಯಂತ್ರ ಮತ್ತು ಹಣವನ್ನು ಬಳಸಿಕೊಂಡು ಉಪಚುನಾವಣೆ ಗೆಲ್ಲುವುದು ಹೊಸದೇನೂ ಅಲ್ಲ. ಆದರೆ, ಜಾತಿ ಧ್ರುವೀಕರಣ ಈ ಪರಿಯಲ್ಲಿ ನಡೆದಿದ್ದು ಇದೇ ಮೊದಲು.
ನಮ್ಮ ಸಂವಿಧಾನದ ಆಶಯಗಳು ಈಗ ಬರಿಯ ಗ್ರಂಥಕ್ಕೆ ಸೀಮಿತಗೊಂಡಿವೆ. ಜಾತ್ಯತೀತ ಸ್ವರೂಪದ ನಮ್ಮ ದೇಶದ ಉನ್ನತ ಕಾನೂನಿನ ಉಲ್ಲಂಘನೆ ನಿರಂತರ ನಡೆಯುತ್ತಿದೆ. ಪ್ರಜಾಸತ್ತಾತ್ಮಕ ಕ್ರಮಗಳಲ್ಲೇ ಆಯ್ಕೆಗೊಂಡು ಸರ್ಕಾರ ರಚಿಸುವ ರಾಜಕೀಯ ಪಕ್ಷದ ನಾಯಕರಿಗೆ ಕನಿಷ್ಠ ಸಂವಿಧಾನದ ಜಾತ್ಯತೀತ ನಿಲುವಿನ ಕರ್ತವ್ಯಗಳು ನೆನಪಿರಬೇಕು. ಮುಖ್ಯಮಂತ್ರಿ ಅಥವಾ ಮಂತ್ರಿ ಪದವಿ ಹೊಂದಿದವರು ತಾವು ಮಾಡುವ ಬಹಿರಂಗ ನಡಾವಳಿಗಳು ಹೇಗಿರಬೇಕು ಎನ್ನುವುದು ಅವರಿಗೇ ಸ್ಪಷ್ಟವಾಗಿರಬೇಕು. ಜಾತ್ಯತೀತ ನಿಲುವಿನ ಅಧಿಕಾರ ಧರ್ಮನಿರಪೇಕ್ಷ ಆಗಿರಲೇಬೇಕು. ವೈಯಕ್ತಿಕವಾಗಿ ಅವರು ಯಾವ ಧರ್ಮ ಅಥವಾ ನಂಬಿಕೆಗಳಿಗೆ ಒಳಪಡಲಿ ಅದು ಮುಖ್ಯವಾಗೋದಿಲ್ಲ. ಆದರೆ ಅಧಿಕಾರದಲ್ಲಿದ್ದುಕೊಂಡು ಸರ್ಕಾರದ ಜವಾಬ್ದಾರಿಯುತ ಪ್ರತಿನಿಧಿಯಾಗಿ ಕಂಡ ಕಂಡ ದೇವಸ್ಥಾನಗಳು, ಚರ್ಚ್, ದರ್ಗಾಕ್ಕೆ ಭೇಟಿ ಕೊಡುವುದು, ಧಾರ್ಮಿಕ ನಾಯಕರುಗಳ, ಪೂಜ್ಯರ ಕಾಲಿಗೆರಗುವುದು ಯಾವ ಪ್ರಜಾಸತ್ತಾತ್ಮಕ ನಡಾವಳಿ? ಅದಾವ ಜಾತ್ಯತೀತ ನಿಲುವು...?
ಈ ಸಮಾಜದ ಧಾರ್ಮಿಕ ನಾಯಕರ ಸೇವಾ ಕ್ಷೇತ್ರವೇ ಬೇರೆ. ಧಾರ್ಮಿಕ ಬದುಕಿನ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಾದ್ದೇ ಅವರ ನಿಜಧರ್ಮ. ಆದರೆ, ಅವರು ಸರ್ಕಾರದ ರಚನೆಯಲ್ಲಿ, ಮತ್ತು ಅದನ್ನು ಉರುಳಿಸುವಲ್ಲಿ ಪರೋಕ್ಷ ಯತ್ನ ನಡೆಸುವಂಥ ಮಟ್ಟಕೆ ಬರಬಾರದು. ಹಾಗೆ ಯತ್ನಿಸಿದರೆ ಅದೇ ಅಧರ್ಮ.
ರಾಜಕೀಯದ್ದೂ ಒಂದು ಧರ್ಮವಿದೆ. ಅದು ಜನಪರ ಅಭಿವೃದ್ಧಿ. ಮಾನವೀಯ ಬದುಕನ್ನು ಮತ್ತಷ್ಟು ಎತ್ತರಕ್ಕೆ ಏರಿಸುವುದು ಮತ್ತು ಜನಗಳ ಆರ್ಥಿಕ, ಸಾಮಾಜಿಕ ಬದುಕನ್ನು ಮತ್ತಷ್ಟು ಉತ್ತಮಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸುವುದು. ಆಡಳಿತ ಯಂತ್ರದ ಮೂಲಕ ಅದನ್ನು ಕಾರ್ಯಗತಗೊಳಿಸುವುದು. ಯಾವುದೇ ಸೆಕ್ಟ್, ಜಾತಿ, ಧರ್ಮ ಭಾಷೆ ಮತ್ತು ಪ್ರಾಂತಗಳ ಮರ್ಜಿ ಕಾಯದೇ ಸಮಾನತೆಯ ಮನೋಧರ್ಮದಡಿ ಜನತೆಗೆ ಯೋಜನೆಗಳನ್ನು ಮುಟ್ಟಿಸುವುದೇ ನಿಜಧರ್ಮ ಅಲ್ಲವೇ?
ಒಬ್ಬ ಅಧಿಕಾರದಲ್ಲಿರುವುವನಿಗೆ ನಾಡಿನ ಪ್ರಜೆಗಳೆಲ್ಲ ಸಮಾನರು. ಅವರೆಲ್ಲರ ವೈವಿಧ್ಯಮಯ ಬದುಕು, ಸಂಸ್ಕೃತಿಗಳನ್ನು ಮತ್ತು ನಂಬಿಕೆಗಳನ್ನು ಸಮಾನಾಂತರದಿಂದ ಕಾಣಬೇಕಾಗುತ್ತದೆ. ಸಂವಿಧಾನದಲ್ಲಿ ಇರದ ವಿಷಯಗಳನ್ನು ಕಾರ್ಯರೂಪದಲ್ಲಿ ತರೋದು ಸಂವಿಧಾನಕ್ಕೆ ಬಗೆಯುವ ದ್ರೋಹವೇ ಆಗುತ್ತದೆ. ಸರ್ಕಾರದ ಮುಖ್ಯಸ್ಥರಾದವರು ಮಠಗಳಿಗೆ, ಸಾಧು ಸನ್ಯಾಸಿಗಳಿಗೆ, ದರ್ಗಾ, ಚರ್ಚ್ ಮುಖ್ಯಸ್ಥರಿಗೆ ತಲೆಬಾಗಿ ನಮಸ್ಕರಿಸಬೇಕು, ಅವರಿಗೆ ವಿಧೇಯರಾಗಿರಬೇಕು ಎಂದು ಎಲ್ಲಾದರೂ ಬರೆದಿದೆಯೇ_ ಹಾಗೆ ಮಾಡುವ ಮೂಲಕವೇ ವಿಧೇಯತೆಯನ್ನು ಪ್ರದರ್ಶಿಸುವ ಕಸರತ್ತಾದರೂ ಏಕೆ? ಸರ್ಕಾರದ ಮುಖ್ಯಸ್ಥನ ಹುದ್ದೆಯೂ ಪವಿತ್ರವೇ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದು ನಮ್ಮ ಮನೋಧರ್ಮವಲ್ಲವೇ?
ಸಾಮಾನ್ಯವಾಗಿ ನಮ್ಮ ನಾಯಕರು ಕಂಡ ಕಂಡ ದೇವಸ್ಥಾನಗಳು, ಚರ್ಚ್, ದರ್ಗಾ ಮತ್ತಿತರ ತಾಣಗಳಿಗೆ ಭೇಟಿ ಕೊಡುತ್ತಾರೆ. ಅಧಿಕೃತ ಭೇಟಿಯೂ ಆಗುವುದಿದೆ. ಹಲವಾರು ಧಾರ್ಮಿಕ ಆಚರಣೆಗಳಲ್ಲಿ ನೇರವಾಗಿ ಪಾಲ್ಗೊಳ್ಳುವುದೂ ಇದೆ. ದಸರಾದಂಥ ಆಚರಣೆಗಳಲ್ಲಿ ನಾಡಹಬ್ಬದ ಹೆಸರಲ್ಲಿ ಇಡೀ ಸರ್ಕಾರ ಪಾಲ್ಗೊಳ್ಳುವುದು ಅದು ಹೇಗೆ ಜಾತ್ಯತೀತ ಮನೋಧರ್ಮದ ಪ್ರತೀಕವಾಗುತ್ತದೆ? ಹಾಗಿದ್ದರೆ ಬೆಂಗಳೂರಿನಲ್ಲಿ ನಡೆಯುವ ಮೇರಿಯಮ್ಮ ಜಾತ್ರೆ ಮತ್ತು ಗುಲ್ಬರ್ಗದಲ್ಲಿ ನಡೆಯುವ ಖ್ವಾಜಾ ಬಂದೇನವಾಜ್ ಉರುಸು ಯಾಕೆ ನಾಡಹಬ್ಬದಂಥ ಆಚರಣೆಗಳಾಗೋದಿಲ್ಲ ?... ಅವುಗಳಲ್ಲೇಕೆ ಸರ್ಕಾರ ನೇರವಾಗಿ ಪಾಲ್ಗೊಳ್ಳುವುದಿಲ್ಲ?... ಅದರ ನಂಬಿಕೆಗಳಲ್ಲಿರುವ ಪ್ರಜೆಗಳು ಸರ್ಕಾರಕ್ಕೆ ಹೊರಗಿನವರಾಗುತ್ತಾರೇನು?... ಇದಾವ ಧರ್ಮನಿರಪೇಕ್ಷ ತತ್ವ ಸರ್ಕಾರಗಳದ್ದು... ?
ನಮ್ಮ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಕ್ಷ್ಮೀ, ಸರಸ್ವತಿ ಭಾವಚಿತ್ರಗಳು ರಾರಾಜಿಸುತ್ತವೆ. ಆಯಾ ಸಂದರ್ಭಗಳಲ್ಲಿ ಅವುಗಳ ಪೂಜೆ ಅಧೀಕೃತವಾಗೇ ನಡೆಯುತ್ತದೆ. ರಾಮನವಮಿ, ಬಲಿಪಾಡ್ಯಮಿ, ಗಣೇಶ ಹಬ್ಬ ಮತ್ತಿತರ ಸಂದರ್ಭಗಳಲ್ಲಿ ಸರ್ಕಾರಿ ಕಚೇರಿಗಳ ಆವರಣದಲ್ಲಿ ನೌಕರರಿಗೆ ಅಂಥ ಆಚರಣೆಗಳಿಗೆ ಅವಕಾಶ ನೀಡಲಾಗುತ್ತದೆ. ಅದೇ ಮುಸ್ಲೀಮರಿಗೆ ರಂಜಾನ್, ಕ್ರೈಸ್ತರಿಗೆ ಕ್ರಿಸ್ ಮಸ್ ಬಹಿರಂಗವಾಗೇ ಕಚೇರಿಗಳ ಆವರಣದಲ್ಲಿ ಆಚರಿಸೋದಕ್ಕೆ ಅವಕಾಶವಿದೆಯೇ...?
ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣೇಶ ಪೂಜೆ(ಮೊದಲು ಇದು ಉತ್ತರ ಕರ್ನಾಟಕದಲ್ಲಂತೂ ಅತಿಯಾಗಿತ್ತು), ಪಂಚಾಂಗ ಪಠಣ ಅದರಲ್ಲೂ ಹಿಂದೂ ಕ್ಯಾಲೆಂಡರ್ ಬಳಸುವ ಶುಕ್ಲ ಪಕ್ಷ, ಕೃಷ್ಣ ಪಕ್ಷ ಎಂದೆಲ್ಲ ಹೇಳುವುದು ಇದೆ. ಇದಕ್ಕೆಲ್ಲ ಅದು ಹೇಗೆ ಅವಕಾಶ ಮಾಡಿಕೊಡಲಾಗುತ್ತದೆ...?
ಶಾಲೆ, ಕಾಲೇಜುಗಳಲ್ಲಿ ಹಿಂದೂ ಗಳು ಹಣೆಗೆ ತಿಲಕ, ಕುಂಕುಮ, ನಾಮ, ವಿಭೂತಿ ಬಳಿದುಕೊಂಡು ಬರಬಹುದು. ಆದರೆ, ಮುಸ್ಲಿಂ ಹುಡುಗಿಯೊಬ್ಬಳು ತನ್ನ ಧರ್ಮದ ಬುರ್ಖಾ ಹಾಕಿಕೊಳ್ಳುವುದು ಹೆಚ್ಚು ಕೆಂಗಣ್ಣಿಗೆ ಗುರಿಯಾಗುತ್ತದೆ... ! ಇದನ್ನು ತಡೆಯಲೆಂದೇ ಡ್ರೆಸ್ ಕೋಡ್ ಎನ್ನುವ ಕಡಿವಾಣ ಜಾರಿಗೊಳ್ಳುತ್ತದೆ! ಎಲ್ಕೆಜಿ ಯುಕೆಜಿ ಗಳಲ್ಲಿ ಪುಟಾಣಿ ಮಕ್ಕಳಿಗೆ ಅವರು ಯಾವ ಧರ್ಮಕ್ಕಾದರೂ ಸೇರಿರಲಿ ಅವರಿಗೆ ಸಂಸ್ಕೃತ ಶ್ಲೋಕಗಳು, ಬಸವಣ್ಣನವರ ವಚನಗಳು ಮತ್ತು ತಾಯಿ ಶಾರದೆ ಸ್ತುತಿಸುವ ಹಾಡುಗಳನ್ನು ಕಲಿಸಲಾಗುತ್ತದೆ. ಬೈಬಲ್ಲಿನ ಶ್ಲೋಕ, ಕುರಾನ್ ಉಕ್ತಿಗಳನ್ನೂ ಕಲಿಸಬಹುದಿತ್ತಲ್ಲ?
ಜಾತ್ಯತೀತ ಸಂವಿಧಾನ ಅದರಲ್ಲೂ ಎಲ್ಲವೂ ಲಿಖಿತ ಡಾಕ್ಯುಮೆಂಟ್ ಇಟ್ಟುಕೊಂಡು ಮತ್ತು ಅದನ್ನು ಪಾಲಿಸುವುದಕ್ಕೆ ಕಾನೂನುಗಳನ್ನಿಟ್ಟುಕೊಂಡು ನಮ್ಮ ದೇಶದಲ್ಲಿ ಈಗಲೂ ಜಾತೀಯ ತಾರತಮ್ಯ, ಧರ್ಮದ ಆಧಾರದಲ್ಲಿ ತಾರತಮ್ಯ ನಡೆಯುತ್ತಿದೆ! ಪ್ರಜ್ಞಾವಂತರಾದ ನಾವೇ ಸಣ್ಣ ಲಾಭಗಳಿಗಾಗಿ ಇದನ್ನೆಲ್ಲ ಸಹಿಸಿಕೊಳ್ಳುತ್ತೇವೆ. ಮೌನಸಮ್ಮತಿ ಸೂಚಿಸುತ್ತೇವೆ. ಎಂಥ ನಾಮರ್ದಗಿರಿ!















