ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ.ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ ಪವಾಡ ಎನ್ನುವಂಥ ಭ್ರಮೆಯನ್ನಾಗಿಸಿ ಜನರನ್ನು ಹುಚಪ್ಯಾಲಿ ಮಾಡುವ ಕಾಯಕಕ್ಕೆ ಇಳಿದುಬಿಡುತ್ತಾನೆ. ತಾನು ಮದುವೆಯಾಗಿದ್ದ ಹೆಣ್ಣನ್ನು ನೋಡಲು ಅತ್ತೆ ಮನೆಗೆ ಹೋದಾಗ ಈತನ ಪವಾಡ ದೊಡ್ಡ ಹರವನ್ನೇ ಪಡೆದುಕೊಳ್ಳುತ್ತದೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಕಡೆಗೆ ಅವಳನ್ನು ಮರೆತೇ ಹೋಗುವ ಈತ ವೆಂಕಟೇಶನಾಗಿ ಅವತಾರಿ ಪುರುಷನೇ ಆಗಿ ‘ನಮೋ ವೆಂಕಟೇಶ’ನಾಗುತ್ತಾನೆ. ನಾಡ ಅರಸನಿಗೂ ಪವಾಡದ ಮಂಕು ಬೂದಿ ಎರಚಿ ರಾಜಕುಮಾರಿಯನ್ನೇ ವರಿಸುತ್ತಾನೆ. ಅಂದರೆ ಅಧಿಕಾರ ಎನ್ನುವ ಮೋಹಿನಿಯನ್ನು ವರಸಿ ರಾಜನೇ ಆಗುತ್ತಾನೆ. ಆ ಕ್ಷಣದಿಂದ ಈತನ ಪವಾಡ ಮೇಲ್ದರ್ಜೆಗೇರುತ್ತಲೇ ಸಾಗುತ್ತದೆ. ಜನರನ್ನು ಹುಚಪ್ಯಾಲಿ ಮಾಡುವುದಕ್ಕೆ ಅಧಿಕೃತ ಲೈಸನ್ಸದಾರನಂತೆ ವಿಜೃಂಭಿಸ ತೊಡಗುತ್ತಾನೆ. ಇದು ರಾಜಸ್ಥಾನೀ ಜಾನಪದೀಯ ಕಥೆ. ಇದನ್ನು ಸಮಕಾಲೀನ ಸಮಾಜೋ-ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳ ಸಂದರ್ಭಕ್ಕೆ ಹೋಲಿಸಿ ನೋಡಿದರೆ ನಮ್ಮ ನಡುವೆಯೂ ಇಂಥ ಒಬ್ಬ ‘ನಮೋ’ ಸೃಷ್ಟಿಯಾಗಿದ್ದಾನೆ ಮತ್ತು ಇಂಥದೇ ಪವಾಡದ ಪುಡಿ, ಹುಡಿ ಚೆಲ್ಲಿ ಗೆಲುವಿನ ನಗೆ ಬೀರುತ್ತಿದ್ದಾನೆ,.. ಒಟ್...