ಒಂದು ಟಿಪ್ಪಣಿ ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ. ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್. ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್ ಅಂಗಳದಲ್ಲಿ ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್(ಫುಲ್) ಮಿನಿಸ್ಟರ್ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್ ಪವರ್ ಆಜ್ಞಾಪಾಲಕರಂತೆ ತನಿಖಾ ದಳ ನಾಡಿ...