ವಿಷಯಕ್ಕೆ ಹೋಗಿ

ಜಾತಿ ಆಧಾರಿತ ತಾರತಮ್ಯ: ಭಾರತಕ್ಕೆ ಸಮ್ಮತ ಸಿದ್ಧಾಂತ?

ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸುವ ಮಹತ್ವದ ಚಿಂತನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಇದೊಂದು ಅತ್ಯಂತ ಶ್ರೇಷ್ಠ ಹೆಜ್ಜೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಮ್ಮೇಳನ ಇಂಥದೊಂದು ದಿಟ್ಟ ಕ್ರಮಕ್ಕೆ ಯೋಚಿಸುತ್ತಿರುವುದು ಇಡೀ ವಿಶ್ವವನ್ನು ಆರೋಗ್ಯಕರ ಬದುಕಿನತ್ತ ಕೊಂಡೊಯ್ಯುವಂಥದು.
ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆಗೆ ತೆರಕೊಳ್ಳುವ ಇಂಗಿತ ಹೊಂದಿದ್ದನ್ನು ಸೂಚ್ಯವಾಗಿ ಹೇಳಿದಂತಾಗಿದೆ. ವರ್ಗ ಸಂಘರ್ಷದಿಂದ ನಲುಗಿ ಹೋಗಿರುವ ಯುರೋಪ್ ನಾಗರಿಕತೆಯಲ್ಲಿ ಮಾಸ್ಟರ್-ಸ್ಲೇವರ್ ಒಂದು ದೊಡ್ಡ ಪಿಡುಗೇ ಆಗಿದೆ. ಭಾರತದ ಚತುರ್ವರ್ಣ ವ್ಯವಸ್ಥೆ ಇದಕ್ಕೂ ಹೀನವಾಗಿರುವಂಥದು. ಯುರೋಪ್ ಇದರಿಂದ ಹೊರಬರಲು ಹವಣಿಸುವುದು ಗಮನಸೆಳೆಯುತ್ತದೆ.
ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಹೀನಾಯ ಸ್ಥಿತಿಗೆ ಮನುಷ್ಯ ಬದುಕನ್ನು ಎಳೆದೊಯ್ದ ಉದಾಹರಣೆಗಳಿವೆ. ಭಾರತದ ಗಾಂಧಿ, ಅಂಬೇಡ್ಕರ್ ಮತ್ತು ಆಫ್ರಿಕಾದ ನೆಲ್ಸನ್ ಮಂಡೆಲಾ ಇದರ ರಾಕ್ಷಸಿ ರೂಪವನ್ನು ಕಂಡವರು. ಇದಕ್ಕೆ ದೊಡ್ಡ ಪ್ರತಿಭಟನೆ ವ್ಯಕ್ತಪಡಿಸಿದವರು. ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡವರು. ಮತ್ತೆ ಇಂಥ ಹೋರಾಟಗಳು ನಡೆಯಲೇಬೇಕಾದ ತುರ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಈ ಕ್ರಮ ಚಳವಳಿಯ ಸ್ವರೂಪ ಪಡಕೊಳ್ಳಬೇಕಿದೆ.
ಭಾರತದಲ್ಲಿನ ಸಾಮಾಜಿಕ ಸ್ಥಿತಿಯಲ್ಲಿ ಜಾತಿ ತಾರತಮ್ಯ ಮೇಲ್ವರ್ಗದ ಮತ್ತು ಅದರಲ್ಲೂ ಬ್ರಾಹ್ಮಣರ ಬಹುದೊಡ್ಡ ಅಸ್ತ್ರವಾಗಿದೆ. ಹುಟ್ಟಿನ ಕಾರಣಕ್ಕೆ ಶ್ರೇಷ್ಠ ಎನ್ನುವ ಬಿಟ್ಟಿ ಪಟ್ಟ ಅಲಂಕರಿಸುವ ಭಾರತದ ಬ್ರಾಹ್ಮಣರು ಇಡೀ ದೇಶವನ್ನು ದಟ್ಟ ದಾರಿದ್ರ್ಯಕ್ಕೆ ನೂಕಿದ್ದಾರೆ. ಈ ಚಾಳಿ ಇತರ ಮೇಲ್ವರ್ಗಕ್ಕೂ ವ್ಯಾಪಿಸಿದ್ದು ನಾಚಿಕೆ ಪಡುವಂಥ ಬೆಳವಣಿಗೆ. ಕೆಳಗಿನವರನ್ನು ಆದಷ್ಟು ಅದುಮುತ್ತಲೇ ಮೇಲಾಟವನ್ನು ಕಾಪಾಡಿಕೊಂಡು ಬಂದ ಮೇಲ್ವರ್ಗದ ದರ್ಪ ಕೊಂಚವಾದರೂ ಸಡಿಲಗೊಂಡಿದ್ದು ಅಂಬೇಡ್ಕರ್ ನಡೆಸಿದ ಹೋರಾಟದಿಂದ. ಆದರೆ, ಅದರ ಫಲಾನುಭವಿಗಳು (ಎಲ್ಲರೂ ಅಲ್ಲ ) ಮಾತ್ರ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಂತೆ ನವಬ್ರಾಹ್ಮಣರಾಗುತ್ತಿರುವುದು ವಿಷಾದಕರ.
ವೀರಶೈವ, ಲಿಂಗಾಯತರ ವಿಷಯದಲ್ಲೂ ಇದೇ ಸ್ಥಿತಿ. ಜಾತಿ ವಿನಾಶದ ಮೂಲ ಅಜೆಂಡಾ ಇಟ್ಟುಕೊಂಡು ಸಾಮಾಜಿಕ ಕ್ರಾಂತಿಯೊಂದನ್ನು ರೂಪಿಸಿದ ಬಸವಣ್ಣ ದೇವರ ಸ್ಥಾನಕ್ಕೆ ಏರಿದರು. ಅನುಯಾಯಿಗಳು ಜಾತಿ ವಿನಾಶದ ಬದಲು ಅವರೇ ಒಂದು ಜಾತಿಯಾಗಿ ಪ್ರಭುತ್ವ, ಅಧಿಕಾರಕ್ಕಾಗಿ ಮತ್ತದೇ ಶೋಷಣೆಯ ಮಾರ್ಗ ಹಿಡಿಯುತ್ತಿರುವುದು ಎಂಥ ವಿಪರ್ಯಾಸ!
ಇಂದು ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಢಾಳಾಗಿ ಕಾಣಿಸುವ ಸತ್ಯ. ಮೈಸೂರಿನ ಸುತ್ತೂರು ಮಠದಲ್ಲಿ, ಆರ್ ಎಸ್ ಎಸ್ ಪೌರೋಹಿತ್ಯದಲ್ಲಿ ಗೋಧ್ರಾ ನರಹತ್ಯೆಯ ರೂವಾರಿ ಎಂದೇ ಟೀಕೆಗೆ ಒಳಗಾದ ಮತ್ತು ಅಮೆರಿಕದಂಥ ರಾಷ್ಟ್ರಗಳ ವೀಸಾ ಪಡೆಯುವುದಕ್ಕೂ ಅನರ್ಹತೆ ಗಳಿಸಿಕೊಂಡ ನರೇಂದ್ರ ಮೋದಿಯಿಂದ ಇಡೀ ಕರ್ನಾಟಕ ಸರ್ಕಾರದ ಸಚಿವರು ಪ್ರವಚನ ಕೇಳುವ ಪರಿಸ್ಥಿತಿ! ಭಾರತದ ಪ್ರಜಾಪ್ರಭುತ್ವಕ್ಕೆ ಬಂದ ಇಂಥ ಗಂಡಾಂತರಕ್ಕೆ ಏನು ಹೇಳಬೇಕು?
ವಿಶ್ವದ ೨೦ ಕೋಟಿಗೂ ಹೆಚ್ಚು ಜನ ಜಾತೀಯ ತಾರತಮ್ಯದಿಂದ ನಲುಗುತ್ತಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಕರಡು ಸಿದ್ದಾಂತ ಮತ್ತು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನಿನ ಕಸುವು ತುಂಬಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿಗೆ ಯತ್ನಿಸುತ್ತಿದೆ.
ಜಾತಿ, ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯ ಮಾನವೀಯ ಮೌಲ್ಯ ಅಲ್ಲ ಎನ್ನುವುದು ಈ ಮೂಲಕ ವಿಶ್ವಕ್ಕೆ ಮನದಟ್ಟು ಮಾಡುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದ ಇತರ ರಾಷ್ಟ್ರಗಳು ಸಂಕಲ್ಪ ಮಾಡಿಕೊಂಡಲ್ಲಿ ಮಹತ್ತರ ಬದಲಾವಣೆಗೆ ದಾರಿಯಾಗುತ್ತದೆ.
ವಿಪರ್ಯಾಸವೆಂದರೆ ಭಾರತ ವಿಶ್ವದ ಈ ನಡೆಯನ್ನೇ ವಿರೋಧಿಸಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...