ವಿಷಯಕ್ಕೆ ಹೋಗಿ

ಪಾವಿತ್ರ್ಯ ಮತ್ತು ನಿಷೇಧ

ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು.

ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು  ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು.

ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು.

ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು!
ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್ ಜಗದೀಶಚಂದ್ರ ಭೋಸ್ ಹೇಳಿದ್ದಾರೆ. . ಗಿಡ, ಮರಗಳೂ ಪವಿತ್ರ. ಅವುಗಳ ಫಲ ಕಿತ್ತುಕೊಳ್ಳಬಾರದು. ಅದು ಜೀವದ ಹೊಸ ಜೀವ ತೆಗೆದ ಹಾಗೆ. ಕುಡುಗೋಲಿನಿಂದ, ಯಂತ್ರದಿಂದ ಜೋಳ, ಗೋಧಿ, ರಾಗಿಯ ತೆನೆ ಕತ್ತು ಕತ್ತರಿಸಿ ನೆಲಕ್ಕುರುಳಿಸಿ ಅದರ ಮೇಲೆ ದೊಡ್ಡ ಕಲ್ಲಿನ ರೋಲರ್ ಉರುಳಿಸಿ ಅಥವಾ ಯಂತ್ರದ ಚಕ್ರಕ್ಕೆ ಸಿಕ್ಕಿಸಿ ಕಾಳು ತುರಿಯಬಾರದು. ಗೋವಿನ ಮಾಂಸ ತೆಗೆಯಲು ಚರ್ಮ ಸುಲಿಯುವ ಹಾಗೆ, ಗಾಳಿಗೆ ಕಾಳುಗಳ ಮೇಲ್ಹೊದಿಕೆ (ತ್ವಾಟೆ) ತೂರಬಾರದು. ಅದೂ ಹಿಂಸೆಯೇ. ರಾಶಿಯನ್ನೂ ನಿಷೇಧಿಸಬೇಕು!


ಈ ನೆಲ ಭಾರತಮಾತೆಯಾದರೆ ಅದರೊಡಲ ಬಗೆಯುವುದನ್ನು ಮೊದಲು ನಿಲ್ಲಿಸಲೇಬೇಕು. ಮೆಟ್ರೋ ರೈಲು, ಹೈ ಸ್ಪೀಡ್ ರೈಲು, ಬಹುಮಹಡಿ ಕಟ್ಟಡಕ್ಕೆ, 'ಬಳ್ಳಾರಿ' ಅದಿರಿಗೆ ನೆಲ ಅಗೆಯುವುದನ್ನಂತೂ ನಿಲ್ಲಿಸಿಬಿಡಬೇಕು. ಒಟ್ಟಾರೆ ನೆಲ ಅಗೆಯುವುದನ್ನೇ ನಿಷೇಧಿಸಬೇಕು!

ಮಣ್ಣು ಪವಿತ್ರ. ಅದರ ಮೇಲೆ ಹೇಸಿಗೆ ಮಾಡಬಾರದು. ನೀರು ಪವಿತ್ರ. ಅದರಿಂದ ತಿಕ ತೊಳೆಯಬಾರದು. ಕಲ್ಲೂ ಪೂಜನೀಯ. ಕಲ್ಲಿನಿಂದ ಹೇಲು (ಈ ಪದ ನಿಷೇಧಕ್ಕೊಳಪಟ್ಟಂತಿದೆ. ಬಳಸಿದ್ದಕ್ಕೆ ಕ್ಷಮೆ ಇರಲಿ) ಒರೆಯಿಸಿಕೊಳ್ಳಬಾರದು. ಹೀಗಾಗಿ ಹೇಲುವುದನ್ನೂ  ನಿಷೇಧಿಸಬೇಕು!

ಎಷ್ಟೆಲ್ಲ ನಿಷೇಧಿಸಲಿಕ್ಕಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...