ವಿಷಯಕ್ಕೆ ಹೋಗಿ

ಈ ಬಂಧ, ಸಂಬಂಧ...

ಈಗ ಗಡಿಗಳೇ ಇಲ್ಲ. ಭಾವಸಮುದ್ರ ಎಲ್ಲೆಂದರಲ್ಲಿ ಆವರಿಸಿಕೊಂಡುಬಿಡುತ್ತದೆ. ಮಾಹಿತಿ ತಂತ್ರಜ್ಞಾನ ಇಡೀ ಜಗತ್ತನ್ನು ಒಂದು ಹಳ್ಳಿಯಂತಾಗಿಸಿದ್ದು ಹೌದು. ಆದರೆ, ಮನುಷ್ಯನ ಆಳದಲ್ಲೇ ಅಂತಃಕರಣ, ಬಂಧ, ಸಂಬಂಧ, ಸೆಳೆತಗಳ ಅಗಾಧ ಶಕ್ತಿ ಇದೆಯಲ್ಲ ಅದು ಎಂದಿನಿಂದ ಎಲ್ಲ ಮಿತಿ, ಬೇಲಿಗಳನ್ನು ಕಿತ್ತು ಬಿಸಾಕುತ್ತ ಸಾಗುತ್ತಿಲ್ಲವೇನು...
ಭಾಷೆ, ಜಾತಿ, ಬಣ್ಣಗಳ ಮಿತಿಯಲ್ಲಿ ಅಷ್ಟು ಸುಲಭಕ್ಕೆ ಕರಗಿ ಹೋಗುವಂಥದಲ್ಲ ಮನುಷ್ಯ ಪ್ರೀತಿ. ಕರಗುವುದಾದರೂ ಯಾಕೆ? ಮಲೆಗಳಲ್ಲಿ, ಮರದ ಕೊಂಬೆಗಳಲ್ಲಿ ಅಲೆದಾಡಿ, ನಲಿದಾಡಿ ಬೆಳೆದುಬಂದ ಮನುಷ್ಯ ಜೀವ ಹೊಸ ಹೊಸ ನಾಗರಿಕತೆಯ ಹೊಳೆಯಲ್ಲಿ ಈಜುತ್ತಲೇ ಇದೆ. ಕಾಡಿಂದ ನೆಲ, ನೆಲದಿಂದ ನೀರು, ಆಕಾಶ, ಬಾಹ್ಯಾಕಾಶ, ಚಂದ್ರ, ಮಂಗಳ... ಮಿತಿಯುಂಟೇ ಈ ನೆಗೆತಕ್ಕೆ!
ಸ್ವಿಜರಲ್ಯಾಂಡ್ ನ ಜ್ಯುರಿಚ್ ಗೆ ಪಯಣಿಸುತ್ತಿದ್ದೆ. ಸಹ ಪಯಣಿಗರಾಗಿ ನನ್ನ ಪಕ್ಕದ ಸೀಟ್ ನಲ್ಲಿ ನಾರ್ವೆ ದಂಪತಿ ಇದ್ದರು. ನಾನು ಆಕಾಶ ನೋಡುತ್ತಿದ್ದೆ. ಅಪರೂಪಕ್ಕೆ ಸೂರ್ಯ ಇಣುಕುತ್ತಿದ್ದ. ಕ್ಯಾಮೆರಾ ಕೊರಳಲ್ಲೇ ನೇತಾಡುತ್ತಿತ್ತು. ಎತ್ತಿಕೊಂಡು ಕ್ಲಿಕ್ಕಿಸುತ್ತಲೇ ಇದ್ದೆ. ಚಳಿ ಎನ್ನುವ ಛಿನಾಲಿಯಿಂದ ಬೇಸತ್ತ ದಿಲ್  ಸೂರ್ಯನ ಬಿಸಿಲಿಗೆ ಗುಲ್ ಮೊಹರಿನಂತೆ ಅರಳುತ್ತಿತ್ತು. ಆಕಾಶ ನಮ್ಮ ಮನಸುಗಳಂತೆ ತೆರಕೊಳ್ಳುತ್ತಲಿತ್ತು. ನಾನು ಮೋಡಗಳ ಜತೆ ಮೋಡವಾಗಿದ್ದೆ ಚಣ ಕಾಲ...
ಪಕ್ಕದ ಸೀಟ್ ನಲ್ಲಿ ಕುಳಿತ ಮಹಿಳೆ ನನ್ನ ಭುಜದ ಮೇಲೆ ಕೈ ಇಟ್ಟು, ಅದೆಷ್ಟು ಮುಳುಗಿಹೋಗುತ್ತೀರಿ ಮೋಡಗಳಲ್ಲಿ ನಮ್ಮ ನಾಡಿನ ಸೂರ್ಯನ ಹಾಗೆ... ಎಂದಳು. ಹೋ... ನಮಸ್ತೆ ಎಂದೆ. ಹಾಯ್ ಹಾಯ್ ಎಂದಳಾಕೆ. ಆರ್ ಯು ಗೋಯಿಂಗ್ ಟು ಇಂಡಿಯಾ... ಎಂದಳು. ನೋ.. ಐ ಆ್ಯಮ್ ಗೋಯಿಂಗ್ ಇನ್ ದಿ ನೆಕ್ಸ್ಟ್ ಮಂಥ್, ಸಿನ್ಸ್ ಫ್ರಾಮ್ ಲಾಸ್ಟ್ ಮಂಥ್ ಟ್ರಾವೆಲಿಂಗ್ ಸಮ್ ಪಾರ್ಟ್ಸ್ ಆಫ್ ಯುವರ್ ಯುರೋಪ್ ಎಂದೆ. ಇಟ್ಸ್ ನಾಟ್ ಮೈ ಯುರೋಪ್, ಇಟ್ಸ್ ಆಫ್ ಎವರಿ ಒನ್, ದಿಸ್ ವ್ಹೋಲ್ ವರ್ಲ್ಡ್ ಬಿಲಾಂಗ್ಸ್ ಟು ಎವೆರಿ ಒನ್... ಹಾ ಹಾ ಎಂದು ಮನಸು ತುಂಬಿ ನಕ್ಕಳು...
ನಾನು ಚಣ ಹೊತ್ತು ದಂಗಾದೆ. ಯುರೋಪಿಯನ್ನರಲ್ಲಿ ಈ ಪರಿಯ ಹೃದಯ ವಿಶಾಲ ಮನೋಭಾವನೆ ಇರುತ್ತಾ ಅನ್ನೋದು ನನ್ನ ಕುತೂಹಲವಾಗಿತ್ತು. ಹೇ ಡೋಂಟ್ ಮಿಸ್ಟೇಕ್ ಮಿ... ತಾನು ಮತ್ತು ತನ್ನ ಪತಿ ಇಂಡಿಯಾಕ್ಕೆ ಇದೇ ಮೊದಲ ಬಾರಿಗೆ ಹೋಗುತ್ತಿದ್ದದೇವೆ. ಐ ಆ್ಯಮ್ ಗೋಯಿಂಗ್ ಟು ಕೋಚಿ (ಕೇರಳದ ಕೊಚ್ಚಿ) ಟು ಅಟೆಂಡ್ ದಿ ಮ್ಯಾರೇಜ್ ಸೆರೆಮಾನಿ ಎಂದಳು. ಪಕ್ಕದಲ್ಲೇ ಒಬ್ಬನನ್ನು ತೋರಿಸಿ ಈತ ನನ್ನ ಚೈಲ್ಡಹುಡ್ ಫ್ರೆಂಡ್ ಎಂದು ಪರಿಚಯಿಸಿದಳು. ಅವರಿಬ್ಬರೂ ನಲವತ್ತು ವರ್ಷಗಳ ನಂತರ ಇದೇ ಮೊದಲ ಸಲ ಭೇಟಿ ಆಗುತ್ತಿರುವದಂತೆ! ಸ್ಕೂಲಿನಲ್ಲಿ ಅಕ್ಕಪಕ್ಕದ ಬೆಂಚು ಈಗ ಕಾಕತಾಳೀಯ ಎನ್ನುವಂತೆ ನಮ್ಮ ಪಕ್ಕದ ಸಾಲಿನ ಸೀಟೇ ಇವನಿಗೆ ಸಿಕ್ಕಿದ್ದು. ಅವನೇ ನನ್ನ ಗುರುತು ಹಿಡಿದು ಮಾತನಾಡಿಸಿದ. ಹೋ ದಿಸ್ ವರ್ಲ್ಡ ಈಸ್ ಸೋ ಸ್ಮಾಲ್ ಯು ನೋ... ಎಂದಳು.
ಇಂಡಿಯಾ ಎನ್ನುವಾಗಲೆಲ್ಲ ಅವಳು ಸಂಭ್ರಮಿಸುತ್ತಿದ್ದಾಳೆ ಎನಿಸುತ್ತಿತ್ತು.
ಇಂಡಿಯಾದ ಬಗ್ಗೆ ತುಂಬ ಕೇಳಿದ್ದೇನೆ, ಅದೊಂದು ಅದ್ಭುತ ಜಗತ್ತು ಎಂದೆಲ್ಲ ಮಗ ಹೇಳುತ್ತಿರುತ್ತಾನೆ. ಆತ ನವದೆಹಲಿಯಲ್ಲಿ ಎಕಾನಾಮಿಕ್ಸ್ ನಲ್ಲಿ ಪಿಜಿ ಓದುತ್ತಿದ್ದಾನೆ. ದೆಹಲಿ, ವಾರಾಣಸಿ, ಹಿಮಾಲಯ, ಕೇರಳದ ಬಗ್ಗೆ ತುಂಬ ಹೇಳಿದ್ದಾನೆ. ಅವನಿಗೆ ವಾರಾಣಸಿ ಅಂದರೆ ತುಂಬ ಇಷ್ಟವಂತೆ ನಮಗೆ ಅದನ್ನೇ ಮೊದಲಿಗೆ ತೋರಿಸಲಿದ್ದಾನೆ, ಆನಂತರವೇ ಕೇರಳಕ್ಕೆ ಹೋಗುವುದಂತೆ ಎಂದು ಟ್ರಿಪ್ ಪ್ಲಾನ್ ಹೇಳಿದಳು ನಗು ನಗುತ್ತ.
ಯಾಕೆ ವಾರಾಣಸಿ? ಎಂದೆ.
ಅವನಿಗೆ ಅಲ್ಲೇ ಮೊದಲ ಸಲ ತನ್ನ ಮನದ ಮಾತನ್ನು ಅವಳಿಗೆ ಹೇಳಿಬಿಡುವ ಧೈರ್ಯ ಬಂದಿದ್ದಂತೆ. ವಾರಾಣಸಿಯ ಆ ಸುಂದರ ಬೆಟ್ಟಗಳ ಇಳಿಜಾರಿನಲ್ಲಿ ಹೆಜ್ಜೆ ಹಾಕುತ್ತಿರುವಾಗ ತುಂಬ ಗಟ್ಟಿ ಮನಸು ಮಾಡಿ ಅವಳ ಕೈಹಿಡಿದು ಒಂದುಸುರಿನಲ್ಲಿ ಐ ಲವ್ ಯು, ಐ ವಾಂಟ್ ಟು ಮ್ಯಾರಿ ಯು ಎಂದು ಹೇಳಿಯೇಬಿಟ್ಟನಂತೆ. ಆಕೆ ನಾಚಿ ನೀರಾದಳಂತೆ... ಮೌನದಲೇ ಮಾತು ಗಟ್ಟಿಗೊಳಿಸಿಬಿಟ್ಟಳಂತೆ ಎಂದು ಅದೆಷ್ಟು ಸಂಭ್ರಮದಿಂದ ಹೇಳಿದಳು.
ಪ್ರೀತಿ ಅಲ್ಲಿಂದ ಬೆಳೆದು ಕೇರಳದ ಕಾಡು ಸೇರಿತಾ ಎಂದೆ ನಾನು.
ಆಕೆ ಮತ್ತೆ ಜೋರಾಗಿ ನಕ್ಕಳು.
ಕೇರಳದ ಕನ್ಯೆಯರು ಇಂಥ ಚಾನ್ಸ್ ಬಿಡುವುದುಂಟಾ...  ಎಂದೆ ಮೆಲ್ಲಗೆ.
ವ್ಹಾಟ್... ಎನ್ನುತ್ತಿರುವಾಗಲೇ, ಕೇರಳಾ ಗರ್ಲ್ಸ್ ಆರ್ ನೈಸ್ ಎಂದು ನಾನೂ ನಕ್ಕೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...