ವಿಷಯಕ್ಕೆ ಹೋಗಿ

'ನಾರ್ವೆ ರಾಜಕುಮಾರ' ಬೆಂಗಳೂರಿಗೆ ಬಂದ ಹೊತ್ತು!


ಹೊಕ್ಕಳುಹುರಿ ಕತ್ತರಿಸ ಹೊರಟ ಡಾಕ್ಟರ್ ಕತ್ತರಿಯನ್ನೇ ಗಟ್ಟಿಯಾಗಿ ಹಿಡಿದುಕೊಂಡ ಕೈಗಳಿವು! ಈ ಪೋರ ಜಗತ್ತಿಗೆ ಕಣ್ಬಿಟ್ಟು ಮೂರೇ ಮೂರು ತಾಸಾಗಿತ್ತು. ಆಗಲೇ ಇವನ ದರ್ಶನ ಮಾಡಿದ್ದೆ. ಇದೇ ಕೈಗಳನ್ನು ಅಭಿಮಾನದಿಂದ ಹಿಡಿದಿದ್ದೆ. ಇವು ಅಂತಿಂಥ ಕೈಗಳಲ್ಲ. ಹೊಕ್ಕಳುಹುರಿ ಕತ್ತರಿಸ ಹೊರಟಿದ್ದ ವೈದ್ಯರ ಕತ್ತರಿಯನ್ನೇ ಬಿಗಿಯಾಗಿ ಹಿಡಿದು ತನ್ನ ತಾಯ ಒಡಲಿನ ಪ್ರೀತಿ, ಬೆಚ್ಚಗಿನ ಭಾವಕ್ಕೆ ತನ್ನ ಜೀವನಿಷ್ಠೆಯನ್ನು ಸಾರಿ ಕಣ್ತೆರೆದ ಭೂಪನ ಕೈಗಳಿವು. 

 ಬೆಂಗಳೂರು ಇಂಟರನ್ಯಾಷನ್ ಏರಪೋರ್ಟಿನಲ್ಲಿ ಮೊನ್ನೆ ಬಂದಿಳಿದ ಈ ನಾರ್ವೆ ರಾಜಕುಮಾರ ನನ್ನ ಕುತೂಹಲದಿಂದ ದುರುಗುಟ್ಟುತ್ತಲೇ ಇದ್ದ. ಯಾಕೋ, ಅದೇನು ಹಂಗೆ ನೋಡ್ತಿಯಾ ಅಂದೆ. ನೀನೇ ಅಲ್ವಾ ನನ್ನ ಅಮ್ಮನ ಮಡಿಲಿಂದ ಹೊರಬಂದ ದಿನ ನೋಡಿ ಕೈ ಹಿಡಿದು ಅಮ್ಮನಿಗೊಂದು ಸೆಲ್ಯುಟ್ ಹೊಡಿಯೊ ನನ್ನ ಪರವಾಗಿ ಅಂದಿದ್ದು... ಎನ್ನುವಂತೆ ದುರುಗುಟ್ಟಿ ಹಂಗೇ ತುಟಿಯರಳಿಸಿದ. ಏರ್ ಪೋರ್ಟಿನಲ್ಲಿ  ಮೊನ್ನೆ ಇವನ ರಿಸೀವ್ ಮಾಡಲು ಅದೆಷ್ಟು ತಾಸಿನಿಂದ ಕಾದಿದ್ದೆವು.  ನಮ್ಮೆಲ್ಲರನ್ನು ನೋಡಿ ಒಮ್ಮೆ ನಕ್ಕ. ನನ್ನ ನೋಡಿದವನೇ ದುರುಗುಟ್ಟುತ್ತಲೇ ಇದ್ದ. ಒಂದಷ್ಟು ನಗು, ಅಳು...



 ನಾರ್ವೆಯಿಂದ ನಾನು ಮರಳಿ ಬರುವ ದಿನವೇ ಇವನ ಜನನವಾಗಿತ್ತು. ಆಸ್ಪತ್ರೆಯಲ್ಲಿ ಕಾದು ಇವನ ದರ್ಶನ ಮಾಡಿಕೊಂಡು ಬಂದಿದ್ದೆ. ಇವನ ತಾಯಿ ಅಂದರೆ ನನ್ನ ತಂಗಿಯನ್ನು ಭೇಟಿ ಮಾಡಿ ಶುಭಾಶಯ ಹೇಳುವುದಕ್ಕೆ ಅವತ್ತು ಅವಕಾಶವಿರಲಿಲ್ಲ. ರಾತ್ರಿಯಾಗಿತ್ತು. ಬೆಳಿಗಿನ ಜಾವ ನನ್ನ ರಿಟರ್ನ್ ಫ್ಲೈಟ್ ಇತ್ತು. ಅವಳನ್ನು ಭೇಟಿ ಮಾಡದೇ ಹೊರಡುವ ಒಂಚೂರೂ ಇರಾದೆ ನನಗಿರಲಿಲ್ಲ. ಟಿಕೆಟ್ ಕ್ಯಾನ್ಸಲ್ ಮಾಡಿ ಮುಂದಿನ ದಿನಾಂಕಕ್ಕೆ ನಿಗದಿ ಮಾಡಲೆತ್ನಿಸಿದ್ದೆ. ಕೊನೆಯ ಕ್ಷಣದವರೆಗೂ ಟ್ರೈ ಮಾಡಿದ್ದೆ, ಆಗಿರಲಿಲ್ಲ. ಅಲ್ಲಿಯತನಕ ಬಂದು ಒಂದೂವರೆ ತಿಂಗಳು ಜತೆಯಲ್ಲಿದ್ದು ಅವಳು ತಾಯಿಯಾಗುವ ಸಂಭ್ರಮದ ಕ್ಷಣವನ್ನು ಕಣ್ಣಾರೆ ನೋಡಿ ಆನಂದಿಸುವ ಅವಕಾಶವೊಂದು ತಪ್ಪಿದ್ದಕ್ಕೆ ಅದೆಷ್ಟು ಬೇಸರಪಟ್ಟುಕೊಂಡಿದ್ದೆ. ಆದರೆ ಈ ಪೋರನ ಮುಖ ನೋಡಿದ ಮೇಲೆ ನನಗೊಂದು ಸಮಾಧಾನವಾಗಿತ್ತು. ಆಕೆ ಅದೆಷ್ಟು ಸಂಭ್ರಮಪಟ್ಟಿರಬಹುದೆನ್ನುವುದಕ್ಕೆ ಇವನ ಮುಖಕಾಂತಿಯಲ್ಲಿ ಅದೆಷ್ಟು ಸಾಕ್ಷಿಗಳಿದ್ದವು...

 ಸಿಜೇರಿಯನ್ ಆದ ಮೇಲೆ ಅವಳಿಗೆ ಪ್ರಜ್ಞೆ ಬರುವಷ್ಟೊತ್ತಿಗೆ ಮಗುವನ್ನು ಇತರ ವೈದ್ಯಕೀಯ ಪರೀಕ್ಷೆಗಳಿಗೆಂದು ನರ್ಸ್ ತಮ್ಮ ತಹಬಂದಿಗೆ ತೆಗೆದುಕೊಂಡುಬಿಟ್ಟಿದ್ದರು. ಹೀಗಾಗಿ ಅವಳು ಇವನನ್ನ ಇನ್ನೂ ನೋಡಿರಲೇ ಇಲ್ಲ. ಅವಳಿಗೂ ಮುನ್ನ ಇವನ ತಂದೆಯೇ ಮೊದಲು ನೋಡಿದ್ದು. ಆನಂತರ ನೋಡಿದ್ದೇ ನಾನು... ನನಗೋಸ್ಕರ ಇವನ ತಂದೆ ದರ್ಶನದ ಏರ್ಪಾಡು ಮಾಡಿದ್ದರು.

 

 ಹ್ಯಾಗೆ ದುರುಗುಟ್ಟುತ್ತಿದ್ದಾನೆ ನೋಡಿ!

 ಈ ರಾಜಕುಮಾರನ ಸ್ವಾಗತಕ್ಕೆ ಹೊಚ್ಚ ಹೊಸ ಕಾರು ಕಾದು ನಿಂತಿತ್ತು. ಹೊಸ ಕಾರು! ಹೀಗಾಗಿ ಇವರಪ್ಪನ ಅಪ್ಪ ಮತ್ತು ತಂಗಿಯ ಬಳಗ ಹೊಸ ಕಾರು ಸಮೇತ ಕಾದಿದ್ದರು. ನಾನು ಸದಾ ನನ್ನ ತಂಗಿ-ಭಾವನನ್ನು ರಿಸೀವ್ ಮಾಡಲು ಒಯ್ಯುತ್ತಿದ್ದ ಬಾಡಿಗೆ ಕಾರನ್ನೇಕೆ ಅವ ಹತ್ತಿಯಾನು? ಮಗ ಹುಟ್ಟಿದ ಸಂಭ್ರಮಕ್ಕೆ ಇವನಪ್ಪ ಅಲ್ಲಿಂದಲೇ ಹೊಸ ಕಾರೊಂದನ್ನು ಬುಕ್ ಮಾಡಿಸಿಟ್ಟಿದ್ದರು. ಇಂಡಿಯಾಗೆ ಕಾಲಿಡುವಷ್ಟೊತ್ತಿಗೆ ಅದು ಬಾಗಿಲು ತೆರೆದುಕೊಂಡು ಮುಂದೆ ನಳನಳಿಸುತ್ತಿರಬೇಕು ಎಂದುಕೊಂಡಿದ್ದರು. ಅಂದುಕೊಂಡಂತೆ ಆಯ್ತು ಅನ್ನಿ. ಬೆಳಗಿನ ಜಾವದ ತುಸು ಚಳಿಯ ಹೊತ್ತಲ್ಲಿ ಚಳಿಯನ್ನೇ ಹೊತ್ತು ಬಂದವನಂತಿದ್ದ ಈ ಪೋರ ಮೊದಲ ಪಾದವನ್ನಿಟ್ಟಿದ್ದು ಹೊಸ ಕಾರಿನಲ್ಲೇ. ನೆಲಕ್ಕೆ ಕಾಲಿಟ್ಟಿದ್ದು ಮನೆ ಸೇರಿದಾಗಲೇ. ಅಲ್ಲೂ ಟೈಲ್ಸ್! ದಾದನಟ್ಟಿ ಎನ್ನುವ ಕುಗ್ರಾಮದ ಮಣ್ಣ ಮೇಲೆ ಕಾಲಿಟ್ಟನೆಂದು ಕೇಳಿದೆ...
 ಹೊಸ ತಲೆಮಾರಿಗೊಂದು ಹೊಸ ಬದುಕಿನ ಮಾರ್ಗವೇ ತೆರಕೊಂಡಂತಿದೆ. ನಾವೆಲ್ಲ ಚಿಕ್ಕವರಿದ್ದಾಗ ನಮ್ಮ ಪಾದ ನೆಲದ ಮೇಲೇ ಇಡಬೇಕಾಗಿತ್ತಲ್ಲವೇ? ಅಮ್ಮನ ತೋಳಿನಲ್ಲಿ ಬದುಕಿನ ಮೊದಲ ಜೋಕಾಲಿ ಆಡಬೇಕಿತ್ತಲ್ಲವೇ? ಅವಳ ಬೆನ್ನು ನಮಗದೇ ಬೈಕು, ಅವಳ ಜಡೆ ಹಿಡಿದು ಕುಳಿತರೆ ಅದೇ ಕಾರು... ದೊಡ್ಡವರಾಗುವುದು ಎಂದರೆ ಕತ್ತೆಗಳಾಗುವುದೆಂದೇ ಅರ್ಥವೇನೋ? ನಾವೀಗ ಕತ್ತೆಗಳು... ಹಾಗೆ ನೋಡಿದರೆ ಈಗ ನಮಗವರೇ ಮಕ್ಕಳಾಗಬೇಕಾದ್ದು. ಆದರೆ ತಾಯಿಯಾಗುವ ಅರ್ಹತೆ ನಾವು ಪಡಕೊಳ್ಳಬೇಕಷ್ಟೇ. ಏಯ್ ಪೋರ, ನಾಳೆ ನೀನು ಕತ್ತೆಯಾಗುತ್ತಿಯಲ್ಲಾ! ಎಂದರೆ ಇವ ಮುಖ ದುರುಗುಟ್ಟಿ ನೋಡಿ ಸ್ಮೈಲ್ ಕೊಟ್ಟ. ನಿನಗಿಂತ ಚೆನ್ನಾಗಿ ನಾನು ನನ್ನಮ್ಮನ ನೋಡ್ಕೋತೀನೋ ಎನ್ನುವ ಹಾಗೆ ಪಾ ಪಾ ಮಾ ಮಾ... ಎಂದು ಉಲಿದಾಡುತ್ತಲೇ ಇದ್ದ. ಇವನಮ್ಮ ಮುಂಚೆ ನಮ್ಮನ್ನೆಲ್ಲ ನೋಡಿದರೆ ಮಕ್ಕಳನ್ನು ನೋಡಿ ಖುಷಿಪಡುವ ಅವ್ವನಂತಾಗುತ್ತಿದ್ದ ಜೀವ. ಇನ್ನವಳ ಮಡಿಲು ತುಂಬ ಇವನದೇ ಕಿಲ ಕಿಲ... ಅವಳ ದುನಿಯಾ ತುಂಬ ಈಗ ಇವನದೇ ಜಗತ್ತು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...