ವಿಷಯಕ್ಕೆ ಹೋಗಿ

ಅತ್ಯಾಚಾರವೂ ಒಂದು ಅಸ್ತ್ರ!


ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ.
ಆದರೆ...




 "1998ರಲ್ಲಿ ಪುನರ್ ರೂಪಿಸಿದ ನನ್ನ ಆಸ್ಪತ್ರೆಗೆ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅವಳೇ ಆಸ್ಪತ್ರೆಯ ಮೊತ್ತಮೊದಲ ಹೊರರೋಗಿ. ಅತ್ಯಾಚಾರಿಗಳು ಆ ಹೆಣ್ಣು ದೇಹವನ್ನು ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ..
* * *
 ಈ ಪ್ರದೇಶದಲ್ಲಿ ಆಗಾಗ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳು ನಡೆಯುತ್ತಲೇ ಇದ್ದವು. ಇವುಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಒಂದು ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ಒಂದು ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಕೆಲವೇ ತಿಂಗಳಲ್ಲಿ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು.
* * *
 ಬರೋಬ್ಬರಿ ಮೂರು ತಿಂಗಳು ನಂತರ ಅದಕ್ಕೂ ಬರ್ಬರವಾದ ಪ್ರಕರಣವೊಂದು ನನ್ನ ಕಂಗೆಡಿಸಿತು. ಅದು ಸಾಮೂಹಿಕ ಅತ್ಯಾಚಾರದ ಪ್ರಕರಣ. ಅತ್ಯಾಚಾರಕ್ಕೊಳಗಾದ 45 ಹೆಂಗಸರು ಒಂದೇ ದಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರೇ ಹೇಳಿದ್ದು ಇಷ್ಟು- 'ನಾವೆಲ್ಲ ಒಂದೇ ಗ್ರಾಮದವರು. ಇಡೀ ಗ್ರಾಮದ ಯಾವ ಹೆಂಗಸು, ಮಗುವನ್ನು ಬಿಡದೆ ಯುದ್ಧಕೋರರು ಅತ್ಯಾಚಾರ ಮಾಡಿದರು'.
* * *
 ಆಘಾತದ ಅಂಶವೆಂದರೆ ಈ ಎಲ್ಲ 45 ಹೆಂಗಸರ ಮರ್ಮಾಂಗಗಳ ಮೇಲೆ ಸುಟ್ಟ ಗಾಯಗಳಿದ್ದವು. ಇದೇನು!? ಎಂದು ನೋಡಿದಾಗ, ಅದು ಸುರಿಯಲ್ಪಟ್ಟ ಕೆಮಿಕಲ್ ನಿಂದ ಆದ ಗಾಯ ಎನ್ನುವುದು ತಿಳಿಯಿತು.  ಅತ್ಯಾಚಾರಿಗಳು ಹೆಣ್ಣುಗಳನ್ನು ಬಲಾತ್ಕಾರ ಮಾಡಿ, ಅವರ ಮರ್ಮಾಂಗಗಳ ಮೇಲೆ ಕೆಮಿಕಲ್ ಸುರಿದುಬಿಟ್ಟಿದ್ದರು!
* * *
 ಈ ಪ್ರಕರಣಗಳು ನನ್ನ ಆತ್ಮಾವಲೋಕನಕ್ಕೆ ಒಳಪಡಿಸಿಬಿಟ್ಟವು. ಇದು ಬರಿಯ ಯುದ್ಧದ ಬರ್ಬರತೆ ಅಷ್ಟೇ ಅಲ್ಲ.  ಒಂದು ಯುದ್ಧದ ಭಯಾನಕ ತಂತ್ರ. ಯುದ್ಧಕೋರರು/ದಾಳಿಕೋರರು ಅತ್ಯಾಚಾರವನ್ನೂ ಒಂದು ಪ್ರಬಲ ಅಸ್ತ್ರವಾಗಿ ಬಳಸುತ್ತಿರುವ ಹೀನ ಪರಿ ಎನ್ನುವ ಅಂಶ ನನ್ನ ಗಮನಕ್ಕೆ ಬಂದಿತು.
* * *
 ಇಡೀ ಹಳ್ಳಿಯ ಹೆಣ್ಣುಗಳನ್ನು ಎಲ್ಲರ ಮುಂದೆ ಸಾಮೂಹಿಕ ಅತ್ಯಾಚರಕ್ಕೊಳಪಡಿಸಿ ಜನರಲ್ಲಿ ಭೀತಿ ಹುಟ್ಟಿಸುವ ತಂತ್ರವಿದು. ಈ ಬರ್ಬರತೆಗೆ ಹೆದರಿ ಹಳ್ಳಿಗರೆಲ್ಲ ತಮ್ಮ ಮನೆ, ತೋಟ, ಗದ್ದೆ ಮತ್ತು ಬದುಕಿನ ನೆಲೆಗಳನ್ನೆಲ್ಲ ಬಿಟ್ಟು ಗುಳೆ ಹೋಗುವಂತೆ ಮಾಡುವ ವ್ಯವಸ್ಥಿತ ತಂತ್ರವಿದು ಅನಿಸಿ ತುಂಬ ಹಿಂಸೆಯಾಯಿತು.
 ಆಗಲೇ ನನ್ನ ಒಟ್ಟು ಕಾರ್ಯಾಚರಣೆ ಬೇರೆಯದೇ ದಿಕ್ಕಿನತ್ತ ಸಾಗಬೇಕೆನಿಸಿತು. ಇಂಥದಕ್ಕೊಂದು ಅಂತ್ಯ ಹಾಡುವಂತೆ ವಿಶ್ವಸಮುದಾಯವನ್ನು ಪ್ರೇರೇಪಿಸುವುದು ಮುಖ್ಯ ಗುರಿಯಾಯ್ತು. ನನ್ನ ದೃಷ್ಟಿಕೋನ ಸಮಗ್ರ ಪರಿಹಾರಗಳತ್ತ ನೆಟ್ಟಿತ್ತು.
* * *
 ಹೀಗಾಗೇ ಮೊದಲು ಅತ್ಯಾಚಾರಕ್ಕೊಳಗಾದ ಹೆಣ್ಣುಗಳಲ್ಲಿ ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಪುಟಿದೇಳುವ ಹುಮ್ಮಸ್ಸು ಇದೆಯಾ ಎನ್ನುವುದರ ಮನೋವೈಜ್ಞಾನಿಕ ಪರೀಕ್ಷೆ ನನಗೆ ಮುಖ್ಯವೆನಿಸಿತು. ಮುಂದಿನ ಹಂತದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯತ್ತ ಗಮನ ಹರಿಸುವುದು. ಮೂರನೇಯ ಹಂತವಾಗಿ ಅವರ ಸಮಾಜೋ-ಆರ್ಥಿಕ ಆಯಾಮಗಳ ಮೇಲೆ ಗಮನ ವಹಿಸುವುದು ಮುಖ್ಯವೆನಿಸಿತು. ಏಕೆಂದರೆ ಆಸ್ಪತ್ರೆ ಸೇರುವಾಗ ಎಷ್ಟೋ ಮಹಿಳಾ ರೋಗಿಗಳ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ.! ಅವರನ್ನು ಒಂದಷ್ಟು ಕಾಲ ನೋಡಿಕೊಳ್ಳಬೇಕು. ಅವರಿಗೆ ಅನ್ನ, ಆಹಾರ, ಬಟ್ಟೆ ಒದಗಿಸಬೇಕು. ಇದರ ಜತೆಗೆ ಮುಖ್ಯವಾಗಿ ಚೇತರಿಸಿಕೊಂಡವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡುವಷ್ಟೊತ್ತಿಗೆ ಅವರಲ್ಲಿ  ಬದುಕು/ಸಮಾಜವನ್ನು ಎದುರಿಸುವ ಮಾನಸಿಕ ಸ್ಥೈರ್ಯ ತುಂಬಬೇಕು.
 ನಾಲ್ಕನೆಯ ಹಂತವಾಗಿ ತಮ್ಮ ಮೇಲೆ ಆಕ್ರಮಣ ಮಾಡಿದವರನ್ನು ಗುರುತಿಸಬಲ್ಲವರಾಗಿದ್ದರೆ ಅಂಥ ಆಕ್ರಮಣಕೋರರ ಮೇಲೆ ಕಾನೂನುಬದ್ಧ ಹೋರಾಟ ನಡೆಸುವುದಕ್ಕೆ ಅವರಿಗೆ ಕಾನೂನು ನೆರವು ಒದಗಿಸುವುದು ಕೂಡ ಆಗಬೇಕು...
* * *
 ಹೀಗೆ ನನ್ನ ಆಲೋಚನೆಗಳು ಕಾರ್ಯರೂಪಕ್ಕಿಳಿದು ಯಶಸ್ವಿಯಾದವು. ಅಂತೂ 2011 ರಲ್ಲಿ ಇಂಥ ಅತ್ಯಾಚಾರದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತ ಬಂದಿತು. ಹಲವು ಶಾಂತಿ ಸಂಧಾನಗಳಿಂದ ಇದೆಲ್ಲ ಸಾಧ್ಯವಾಗಿತ್ತು. ಇಡೀ ಪ್ರದೇಶದ ತುಂಬ ನೆಮ್ಮದಿ ನೆಲೆಗೊಳ್ಳತೊಡಗಿದೆ ಎನ್ನುವಾಗಲೇ ಮತ್ತಷ್ಟು ಅತ್ಯಾಚಾರದ ಪ್ರಕರಣಗಳು ಕಳೆದ ವರ್ಷ (2012) ಹೆಡೆಬಿಚ್ಚಿಕೊಂಡವು. ಮತ್ತೆ ಅದನ್ನು ಯುದ್ಧ ಸಂಬಂಧಿ ವಿದ್ಯಮಾನಗಳೆಂದು, ಜನಾಂಗಿಕ ಕಲಹಗಳ ಪರಿಣಾಮವೆಂದು ವ್ಯಾಖ್ಯಾನಿಸುವುದು ನಡೆಯಿತು.  ಈಗಲೂ ಹಾಗೇ ವ್ಯಾಖ್ಯಾನಿಸಲಾಗುತ್ತಿದೆ.
* * *
 ವಾಸ್ತವಾಗಿ ಇದು ದೇಶಗಳ ನಡುವಿನ ಯುದ್ಧವಲ್ಲ. ಧರ್ಮಗಳ ನಡುವಿನ ಸಂಘರ್ಷವಂತೂ ಅಲ್ಲವೇ ಅಲ್ಲ. ಇದು ಆರ್ಥಿಕ ಹಿತಾಸಕ್ತಿಗಳು ಕಲಹ ಸೃಷ್ಟಿಸಿ, ಸಂಘಟಿಸುತ್ತಿರುವ ಯುದ್ಧ! ಹೆಣ್ಣು ದೇಹಗಳ ಮೇಲೆ ಅತ್ಯಾಚಾರದ ಅಸ್ತ್ರಗಳು ನರ್ತಿಸುವಂತೆ ಮಾಡುವ ಮೂಲಕ ನಡೆಸಲ್ಪಡುತ್ತಿರುವ ಆರ್ಥಿಕ ಹಿತಾಸಕ್ತಿಯ ಯುದ್ಧ! ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈಗಲೂ ಇಂಥ ಯುದ್ಧ ಜಾರಿಯಲ್ಲಿದೆ."
* * *
-ಇದು ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಹೆಸರಾಂತ ಗೈನೊಕಾಲಜಿಸ್ಟ್ ಡಾ. ಡೆನಿಸ್ ಮುಕ್ವೇಜ್ ಬಿಚ್ಚಿಟ್ಟ ಕಾಂಗೋದ ಜ್ವಲಂತ ಚಿತ್ರಣ. ಈ ಡಾ. ಡೆನಿಸ್ ಮುಕ್ವೇಜ್ ತಮ್ಮ ತಂಡದೊಂದಿಗೆ ಈತನಕ ಅತ್ಯಾಚಾರಕ್ಕೊಳಗಾದ 30 ಸಾವಿರ ಹೆಣ್ಣುಗಳಿಗೆ ಚಿಕಿತ್ಸೆ ನೀಡಿದವರು. "ಕಳೆದ 16 ವರ್ಷಗಳಿಂದ ಕಾಂಗೋದಲ್ಲಿ ನಡೆಯುತ್ತಿರುವ ಈ ಹಿಂಸೆಗೆ ಮೂಕಪ್ರೇಕ್ಷಕವಾದ ವಿಶ್ವಸಮೂದಾಯಕ್ಕೆ ಏನೆಂದು ಹೇಳಲಿ?" ಎಂದು ವಿಶ್ವಸಂಸ್ಥೆಯ 2012ರ ಸಭೆಯಲ್ಲಿ ಗುಡುಗಿದ್ದೂ ಇದೇ ಡಾ. ಡೆನಿಸ್ ಮುಕ್ವೇಜ್.
* * *
ನಮ್ಮ ದೆಹಲಿಯಲ್ಲಿ, ದೇಶದ ತುಂಬ ಮತ್ತು ಮನೆ ಮನೆಗಳಲ್ಲಿ ಹೆಣ್ಣುಗಳ ಮೇಲೆ, ಅಮಾಯಕ ಬಾಲೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಯಾವ ಮುಖವಿದೆ? ಅದಕ್ಕೆ ಯಾವ ಪ್ರೇರಣೆ? ಆರ್ಥಿಕದ್ದಾ? ಮಾನಸಿಕ ಅಧೋಗತಿಯದಾ?  ಅಹಂಕಾರದ್ದಾ?
ನಮ್ಮಲ್ಲಿ ಇಂಥ ಅಮಾನವೀಯ ಕೃತ್ಯಗಳ ಹಿಂದಿನ ಕಾರಣಗಳ ಹುಡುಕಾಟಗಳಾಗಲಿ, ಅಧ್ಯಯನಗಳಾಗಲಿ ನಡೆಯುತ್ತವಾ? ಹುಡುಕಿದರೂ ಇಂಥದ್ದರ ವಿರುದ್ಧ ಅರ್ಥಪೂರ್ಣ ಮರುಯುದ್ಧ ಸಾರಬಲ್ಲ  ಡಾ. ಡೆನಿಸ್ ಮುಕ್ವೇಜ್ ಅಂಥ ಒಬ್ಬನಾದರೂ ಸಿಕ್ಕುತ್ತಾರಾ?
(ಇದು ಒಂದೆಡೆ ಓದಿದ್ದು. ಅದನ್ನಿಲ್ಲಿ ಹಂಚಿಕೊಂಡೆನಷ್ಟೇ.)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...