ವಿಷಯಕ್ಕೆ ಹೋಗಿ

ಸಾವು...

ಕವಿ ಜಿ.ಎಸ್. ಶಿವರುದ್ರಪ್ಪ ಕಾವ್ಯ ಕಟ್ಟಿದರು. ಅದನ್ನು ಎದೆ ತುಂಬಿ ಹಾಡಿದವರೆಷ್ಟೋ. ಅವರು ಪ್ರೇಮ, ಪ್ರೀತಿಯ ಮಾತು ಹೇಳಿದರು. ಅದೆಷ್ಟೋ ಮಾನವ ಪ್ರೇಮಿಗಳು ಎದೆಗಿಳಿಸಿಕೊಂಡರು. ಕಾವ್ಯ, ಹಾಡು, ಪ್ರೇಮ ... ನಿರಂತರ.   ಇವು ಎಂದೂ ನಿಲ್ಲದ ಧಾರೆಗಳು. ಕವಿತೆಗೆ ಸಾವಿಲ್ಲ, ಕವಿಗೂ...
* * *
 ಬದುಕಿನೊಟ್ಟಿಗಿನ ಸಂಬಂಧವನ್ನು ಪದ್ಯ, ಗದ್ಯಗಳಲ್ಲಿ ಹಿಡಿದಿಡುವ ಯತ್ನ ಮನುಷ್ಯ ಸೂಕ್ಷ್ಮದ ಸಹಜ ನಡೆ. ಅವನಿಟ್ಟ ಹೆಜ್ಜೆ, ಆಡಿದ ನುಡಿ, ಕನಸಿದ ಭಾವ  ಎಲ್ಲದರ ಪಡಿನೆರಳನ್ನು ಪದ ಪದಗಳಲ್ಲೂ ವಿಸ್ಮಯದಂತೆ ಮೂಡಿಸುವುದು ಕಾವ್ಯಕ್ಕೆ ಸಾಧ್ಯವಿದೆ. ಸಾಲು, ಸಾಲುಗಳ ನಡುವಿನುಸಿರು, ಪಸೆ ಮತ್ತು ಎಲ್ಲ ಎಲ್ಲದರ ಗುಟ್ಟನ್ನು ಒಡಲಲ್ಲಿಟ್ಟುಕೊಂಡ ಕುತೂಹಲ ಧಾರೆಯಂತೆ ಹರಿದು ನಮ್ಮೊಳಗೂ ಇಳಿದಾಗ ಆಗುವ ಅನುಭೂತಿ ...
ಭಾವುಕ ಜಗತ್ತನ್ನು ಕಲಾತ್ಮಕಗೊಳಿಸಿದ ಕವಿ ಜಿಎಸ್ಎಸ್ ಜೀವಪ್ರೀತಿಯನ್ನೇ ನೆಚ್ಚಿಕೊಂಡಿದ್ದರು. ಅಂತಃಕರಣ, ಸಹಜತೆ, ಸರಳತೆ ಮತ್ತು ಮುಗ್ಧತೆಯನ್ನು ಕಾವ್ಯಕ್ಕಿಳಿಸಿ ಮಾನವ ಪ್ರೇಮದ ಹೊನಲಾಗಿಸಿದರು.
ಕಾವ್ಯ ಒಳಗಿನದೆಲ್ಲವನು ಬಟಾಬಯಲುಗೊಳಿಸಿಕೊಳ್ಳುವ ಕ್ರಿಯೆಯೂ ಹೌದು. ತಮ್ಮ ಮನದಾಳದ ಮಾನವ ಪ್ರೇಮವನ್ನು ಅವರೆಂದೂ ಬಚ್ಚಿಟ್ಟುಕೊಂಡವರಲ್ಲ. ಧಾರೆ ಎರೆದವರು. 'ಪ್ರೀತಿ ಇಲ್ಲದ ಮೇಲೆ...' ಇಲ್ಲಾವುದೂ, ಏನೂ ಇಲ್ಲ  ಎನ್ನುವುದರಲ್ಲಿ ದೊಡ್ಡ ನಂಬಿಕೆ ಇಟ್ಟುಕೊಂಡೇ ಮೊನ್ನೆ ಹೊರಟು ಹೋದರು. ಕಾಣದ ಕಡಲಿನತ್ತ...
* * *

ವಿಷಾದವೆಂದರೆ ಅಷ್ಟು ಸಹಜ ಮತ್ತು ಸರಳತೆಯ ಮನುಷ್ಯನೊಬ್ಬ ಬದುಕಿನ ಜಾತ್ರೆ ಮುಗಿಸಿದಾಗ 'ಸಾವನ್ನು ಸಂಭ್ರಮಿಸುವ ರೀತಿಯಲ್ಲಿ' ಆತನ ಅಂತ್ಯಸಂಸ್ಕಾರ ನಡೆದದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಡೆಗೆ ಸೂಕ್ಷ್ಮ ಸಂವೇದನೆಯ ಕಲಾವಿದರು, ಬರಹಗಾರರು ಮತ್ತು ಬುದ್ಧಿಜೀವಿಗಳಿಂದ ದೊಡ್ಡ ವಿರೋಧವೇ ವ್ಯಕ್ತವಾಗಿದೆ. ಕಲಾಕ್ಷೇತ್ರ, ವಿಶ್ವವಿದ್ಯಾಲಯ ಇವೆಲ್ಲ ಯಾರನ್ನೂ ದೊಡ್ಡವರು, ಸಣ್ಣವರು ಎಂದು ನಿರ್ಧರಿಸುವ ತಾಣಗಳಲ್ಲ. ಲಿಖಿತ ಸಂವಿಧಾನ ಹೊಂದಿರುವ ಈ ದೇಶದ ಸರ್ಕಾರಗಳಿಗಂತೂ ಎಲ್ಲ ಸರಿ ಸಮಾನರು. ಯಾರೂ ಕೀಳಲ್ಲ, ಯಾರೂ ಮೇಲಲ್ಲ. ಧರ್ಮ, ದೈವತ್ವದ ನಂಬಿಕೆಗಳ ಪ್ರಕಾರವೂ ಮನುಷ್ಯ ಅತೀತನಲ್ಲ. ಮನುಷ್ಯ  ದೇವರಲ್ಲ..  ಕವಿ ಇದಕ್ಕೆ ಹೊರತಲ್ಲ.
ಸಾವು ಎಂದರೆ ಅದು ಸಾವೇ. ಕವಿಯಾಗಿದ್ದವ ಸತ್ತರೂ, ಹುಲು ಮಾನವ ಸತ್ತರೂ...
ಲೆಬನಾನಿನ ದಾರ್ಶನಿಕ ಕವಿ ಖಲೀಲ್ ಗಿಬ್ರಾನ್ ಸಾವಿನ ಬಗ್ಗೆ ಹೇಳುವ  ಈ ಅರ್ಥಪೂರ್ಣ ಮಾತುಗಳನ್ನು ಪುನರುಚ್ಛರಿಸಬೇಕೆನಿಸಿತು.


ನೀವು ಸಾವಿನ ರಹಸ್ಯ ತಿಳಿಯಲು ಸಂಶೋಧನೆ ನಡೆಸಬಹುದು.
ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು?
ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,
ಬೆಳಕಿನ ಬಣ್ಣಗಳ ರಹಸ್ಯವ ಅದು ಹೇಗೆ ಪ್ರಕಟಿಸೀತು...!

ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ?
ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,
ಅದು ಲೀನವಾಗಲಿ ಬದುಕಿನ ಶರೀರದೊಳಗೆ...
ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಸಾವು ಅಭಿನ್ನ.

ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ.
ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ
ವಸಂತದ ಕನಸು ಕಾಣುತ್ತಿರುತ್ತದೆ.
ಇಂಥ ಕನಸುಗಳ ಮೇಲೆ ನಂಬಿಕೆಯಿಡಿ;
ಏಕೆಂದರೆ, ಇಲ್ಲೇ ಇದೆ ದ್ವಾರ,
ಅನಂತದೆಡೆಗೆ ತೆರಕೊಳ್ಳುವ ಹಾದಿ ಸೇರಲು!

ಸಾಯುವುದರರ್ಥ ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ?
ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು,
ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು
ಸೃಷ್ಟಿಕರ್ತನ ಸೇರಿಕೊಳ್ಳುವುದು...
ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ?

ನೀವು ನಿಜವಾಗಲೂ ಹಾಡೋದು ಪ್ರಶಾಂತ ನದಿಯ ಜಲ ಕುಡಿದಾಗಲೇ !
ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು...

-ದಿಲ್
ಮೂಲ: ಖಲೀಲ್ ಗಿಬ್ರಾನ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...