ವಿಷಯಕ್ಕೆ ಹೋಗಿ

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.

















 ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇದನೆಯ ಹಾದಿ ತುಳಿದವರೆಷ್ಟೋ, ವಿಮುಖರಾಗಿ ಜನಪ್ರಿಯ ಧಾಟಿಯಲ್ಲಿ ವ್ಯವಸ್ಥೆ ಪರ ಸೋಗುಡುತ್ತಿರುವವರೆಷ್ಟೊ.. ಆದರೆ ಪ್ರತಿಭೆಗಳನ್ನು ರಂಗದತ್ತ ಸೆಳೆದ ಅವರ ಪರಿಯೇ ಅನನ್ಯವಾಗಿತ್ತು. ಅಂಥ ಮಹಾ ರಂಗಚೇತನದ ಸ್ಮರಣಾರ್ಥ ಅವರದೇ ಹೆಸರಿನಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಅವರಿಗೆ ಸಲ್ಲಿಸಬಹುದಾದ ಅರ್ಥಪೂರ್ಣ ಶ್ರದ್ಧಾಂಜಲಿ. ಅವರ ‘ರಂಗನಿರಂತರ’ ಸಂಸ್ಥೆಯಡಿ ಶಶಿಧರ ಅಡಪ, ಅಪ್ಪಯ್ಯ, ಸರ್ವೇಶ, ಗೋವಿಂದ ಸ್ವಾಮಿ, ರಷ್ಮಿ, ರಾಮಕೃಷ್ಣ ಬೆಳ್ತೂರ್‌, ಜಿಪಿಒ ಚಂದ್ರು, ಎಂ. ರವಿ, ಶಶಿಕಾಂತ ಯಡಹಳ್ಳಿ ಮತ್ತಿತರರು ಸೇರಿ ಪ್ರತಿ ವರ್ಷ ಸಿಜಿಕೆ ಹೆಸರಲ್ಲಿ ರಾಷ್ಟ್ರೀಯ ರಂಗೋತ್ಸವ ನಡೆಸುತ್ತಿದ್ದಾರೆ. ಪರ, ವಿರೋಧದ ಟೀಕೆಗಳ ನಡುವೆ ಸೃಜನಾತ್ಮಕವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
 ಈ ಸಲದ ರಂಗೋತ್ಸವದಲ್ಲಿ (ಡಾ. ವಿಜಯಾ ನಿರ್ದೇಶನದಲ್ಲಿ) ಪ್ರಯೋಗಗೊಂಡ ನಾಟಕಗಳು ಭಿನ್ನ ಎನಿಸಿದರೂ ಕೆಲವು ಮತ್ತದೇ ರಾಮಾಯಣ, ಮಹಾಭಾರತದ ಗುಂಗಿನಿಂದ ಹೊರಬಂದಂತೆನಿಸಲಿಲ್ಲ. ಏಕದಶಾನನ, ವಾಲಿವಧೆ, ಅಶ್ವತ್ಥಾಮ ವಾರ್‌ ಮಷೀನ್‌ ನಾಟಕಗಳ ವಸ್ತು ಹೆಚ್ಚೂ ಕಮ್ಮಿ ಎರಡು ಮಹಾಕಾವ್ಯಗಳನ್ನು ಆಧರಿಸಿದ್ದವು. ಭಾಷಾ ವೈವಿಧ್ಯತೆ ನೆಲೆಯಲ್ಲಿ ಮಲೆಯಾಳಿಯ ‘ಚಿಲ್ಲರೆ ಸಮರಂ’ ಹಿಂದಿ ಭಾಷೆಯ ‘ವೆಲ್‌ಕಂ ಜಿಂದಗೀ’ ಮತ್ತು ‘ದೋಹರಿ ಜಿಂದಗೀ’ ನಾಟಕಗಳು ಮಧ್ಯಮವರ್ಗವನ್ನು ಆವರಿಸಿರುವ ತಲ್ಲಣಗಳನ್ನು ಚರ್ಚಿಸಿ ಗಮನ ಸೆಳೆದವು.
 ಅಶ್ವತ್ಥಾಮ–ವಾರ್‌ ಮಶೀನ್‌ ಹೊಸ ಬಗೆಯ ವಿಶ್ಲೇಷಣೆಯಿಂದ ಮಹಾಭಾರತ ಕಾವ್ಯದಲ್ಲಿನ ಪಾತ್ರಗಳ ಹಿಂಸೆಯನ್ನು ಸಮಕಾಲೀನ ಸಂದರ್ಭಕ್ಕೆ ಸಂವಾದಿಯಾಗಿಸಲು ಯತ್ನಿಸಿತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂಸೆ, ಅದು ಇಂಡಿಯಾಕ್ಕೂ ತಳಕು ಹಾಕಿಕೊಂಡ ಪರಿ, ತಮ್ಮದೇ ಕುಡಿಗಳನ್ನು ಕತ್ತರಿಸಿ ಹಾಕುವ ಭಯೋತ್ಪಾದನಾ ಕೃತ್ಯದ ರಕ್ಕಸೀ ಪ್ರವೃತ್ತಿಯನ್ನು ವಿಶ್ಲೇಷಿಸುತ್ತ ಹಿಂಸೆ ಎನ್ನುವುದು ಯಾವುದೇ ಧರ್ಮ, ಕಾಲ, ದೇಶ ಮತ್ತು ಗಡಿಗಳಿಗೆ ಸೀಮಿತವಲ್ಲ ಎನ್ನುವ ಸೂಕ್ಷ್ಮ ಪ್ರತಿಪಾದಿಸಿತು. ದೃಶ್ಯಸಂಯೋಜನಾ ಕೌಶಲ, ಇಂಟರ್‌ಪ್ರಿಟೇಷನ್‌ನಿಂದ ಬಹುಕಾಲ ನೆನಪಲ್ಲುಳಿಯುವಂತೆ ಪ್ರಯೋಗ ಮೂಡಿಬಂದಿತು.
 ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಧರಿಸಿದ ‘ವಾಲಿವಧೆ’ ಪ್ರಯೋಗ ಕೃತಿಯ ಆಶಯದಿಂದ ಹೊರಕ್ಕೇ ನಿಂತಂತೆನಿಸಿತು. ಪಾಪ್ಯುಲಿಸ್ಟಿಕ್‌ ನೆಲೆಯಲ್ಲಿ ಮಹಾಕಾವ್ಯದ ಎರಡು ವಾನರ ಪಾತ್ರಗಳಾದ ವಾಲಿ ಮತ್ತು ಸುಗ್ರೀವ ಎನ್ನುವ ಅಣ್ಣ–ತಮ್ಮರ ಕಲಹವನ್ನು ಮ್ಯಾಜಿಕಲ್‌ ರಿಯಲಿಸಂ ತಂತ್ರಗಳಲ್ಲಿ ವೈಭವೀಕರಿಸಿ ಕರುಣಾ ರಸ ಉಕ್ಕಿಸುವ ಏಕಮಾತ್ರ ಉದ್ದೇಶ ಹೊಂದಿದಂತಿತ್ತು. ಪರಿಣಾಮದಲ್ಲಿ ರಾಮನ ನ್ಯಾಯದ ಬಾಣ ಅನ್ಯಾಯವಾಗಿ ವಾಲಿಯನ್ನು ಹೆಣವಾಗಿಸಿದ್ದರ ನ್ಯಾಯಪ್ರಶ್ನೆಯನ್ನೇ ನುಂಗಿ ಹಾಕಿತು. ದೃಶ್ಯ ಸಂಯೋಜನೆ, ಬೆಳಕಿನ ಮಾಯಾಲೋಕದಲ್ಲಿ ವಸ್ತುವಿನ ಅಸಲಿ ಬೆಳಕು ಮಾಯವಾಗಿ ಹಿಂಸೆಯೇ ವಿಜೃಂಭಿಸಿ ಬರಿಯ ಆತ್ಮಮರುಕ ಸೃಷ್ಟಿಸಲಷ್ಟೇ ಸಾಧ್ಯವಾಯಿತು.
 ಸಮಕಾಲೀನ ಸಂದರ್ಭದ ತಳಮಳ, ತಲ್ಲಣಗಳ ಮೇಲೆ ಗಮನ ಹರಿಸದ ಇಂಥ ಎರಡು ಮೂರು ನಾಟಕಗಳು ಮಹಾಕಾವ್ಯಗಳ ಆಶ್ರಯ ಹೋಗಿ ಅಭಿಜಾತ ಪ್ರಜ್ಞೆಯನ್ನಷ್ಟೇ ಸೂಸಲು ಸಾಧ್ಯವಾಯಿತು. ಸಿಜಿಕೆ ಸಮಕಾಲೀನ ತವಕ, ತಲ್ಲಣಗಳನ್ನು ರಂಗದ ಮೇಲೆ ತರುವುದನ್ನೇ ತಮ್ಮ ರಂಗಪ್ರಜ್ಞೆಯಾಗಿಸಿಕೊಂಡಿದ್ದು ನೆನಪಾಗಿ ಕಾಡಿತು.
 ‘ಚಿಲ್ಲರೆ ಸಮರಂ’ ಮಲೆಯಾಳಿ ನಾಟಕ ವರ್ತಮಾನದ ಆರ್ಥಿಕ ಚಿಂತನೆಗಳನ್ನು ಮಾನವೀಯ ನೆಲೆಯಲ್ಲಿ ಪ್ರಶ್ನಿಸುತ್ತ ಬಂಡವಾಳಷಾಹಿಗಳ ತರಾಟೆಗೆ ತೆಗೆದುಕೊಂಡು ಚಕಿತಗೊಳಿಸಿತು. ಸರಳ ದೃಶ್ಯ ಸಂಯೋಜನೆಗಳು, ನಟರ ಸಮಯಪ್ರಜ್ಞೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಬಳಸಿಕೊಂಡು ವಸ್ತುವನ್ನು ಅಚ್ಚುಕಟ್ಟಾಗಿ ನಿರೂಪಿಸಿತು.
 ತಂದೆ–ಮಗನ ಅಂತಃಸಂಬಂಧ ಮತ್ತು ಮಧ್ಯಮ ವರ್ಗದ ಕೌಟುಂಬಿಕ ನಾಜೂಕು ನಡೆಗಳ ಬಗ್ಗೆ ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಂಡ ‘ವೆಲ್‌ಕಂ ಜಿಂದಗೀ’ ಹಿಂದೀ ನಾಟಕ ಪ್ರೇಕ್ಷಕರ ಕಣ್ಣಾಲಿಗಳ ಹಸಿಗೊಳಿಸಿತು. ತನ್ನದೇ ಕನಸಿನ ಹಿಂದೆ ಎಡತಾಕುವ ವಯಸ್ಸಿಗೆ ಬಂದ ಮಗ, ಆತನೊಳಿತಿಗೆ ಒಳಗೇ ಸೂಕ್ಷ್ಮವಾಗಿ ತಳಮಳಿಸುವ ತಂದೆ, ಇಬ್ಬರ ನಡುವೆ ಜೀವ ಸೇತುವಾಗಿ ನಿಲ್ಲುವ ತಾಯಿ ಮತ್ತು ಹೆಂಡತಿ ಭೂಮಿಕೆ ನಿಭಾಯಿಸುವ ಹೆಣ್ಣು ಈ ಮೂರೂ ಪಾತ್ರಗಳ ನಡುವಿನ ಅಂತಃಸಂಬಂಧವನ್ನು ನವಿರಾಗಿ ಬಿಚ್ಚಿಟ್ಟ ನಾಟಕ ಆರಂಭದಲ್ಲಿ ಬೋರು ಹೊಡೆಸಿದರೂ ಕೊನೆಯ ದೃಶ್ಯದ ಭಾವನಾತ್ಮಕ ಸ್ಪರ್ಶದಿಂದ ಮನ ಕಲಕಿತು. ಸಂಭಾಷಣೆ ಮತ್ತು ನಟನೆಯ ಕೆಲ ಸೂಕ್ಷ್ಮಗಳನ್ನಷ್ಟೇ ಇಟ್ಟುಕೊಂಡು ಇಂಥ ರಿಯಲಿಸ್ಟಿಕ್‌ ನಾಟಕ ಕಟ್ಟಿಕೊಟ್ಟ ನಿರ್ದೇಶಕನಿಗೊಂದು ಸಲಾಂ.
ಜೊತೆಗೆ ಏಕವ್ಯಕ್ತಿ ಪ್ರದರ್ಶನಗಳು, ಬೀದಿ ನಾಟಕಗಳು, ರಂಗಗೌರವ ಮತ್ತು ಸಂವಾದ ಕಾರ್ಯಕ್ರಮಗಳು ವಿಶೇಷ ರಂಗಾನುಭವ ನೀಡಿದವು.ವಾತಾವರಣ ನಿರ್ಮಾಣದ ಭಾಗವಾಗಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಅಗಲಿದ ರಂಗಕರ್ಮಿಗಳ ಭಾವಚಿತ್ರಗಳ ಮುಂದೆ ದೀಪ ಹಚ್ಚಿ ಯುರೋಪ್‌ನಲ್ಲಿ ಸಮಾಧಿಗಳ ಅಲಂಕಾರ ಮಾಡುವ ಪದ್ಧತಿ ನೆನಪಿಸುವಂಥ ವಿನ್ಯಾಸ ರೂಪಿಸಿದ್ದು ಅಲ್ಲಿ ಸಿಜಿಕೆ ಮತ್ತಿತರರ ಅಣಕದಂಥ ಪ್ರಯೋಗ ನೀಡಿದ್ದು ಕೊಂಚ ಅತಿ ಎನಿಸಿತು.
 ಸಂಸ ಬಯಲು ರಂಗದಲ್ಲಿ ನಡೆದ ಉತ್ಸವದ ಕೊನೆಯ ಪ್ರಯೋಗ ‘ದೋಹರಿ ಜಿಂದಗೀ’ ಹೊಸ ಮತ್ತು ದಿಟ್ಟ ಪ್ರಯತ್ನ. ಇಬ್ಬರು ಹೆಣ್ಣುಗಳ ಸಲಿಂಗ ಸಂಬಂಧದ ವಸ್ತುವನ್ನು ರಾಜಸ್ಥಾನೀ ಜನಪದ ಕಥೆಯನ್ನಾಧರಿಸಿ ನಿರೂಪಿಸಿದ್ದು ಬೋಲ್ಡ್‌ ಎನ್ನಬಹುದಾದ ಪ್ರಯೋಗ. ಅರೆನಗ್ನವಾಗಿ  ಬೆನ್ನು ಮತ್ತು ಮೊಲೆತೊಟ್ಟುಗಳು ಕಾಣುವ ಹಾಗೆ ಬಟ್ಟೆ ಬದಲಾಯಿಸುವ ಮತ್ತು ಗಂಡು–ಹೆಣ್ಣು ಸಂಭೋಗ, ಹಸ್ತಮೈಥುನ ನಡೆಸುವಂಥ ಭ್ರಮೆ ಹುಟ್ಟಿಸುವ ದೃಶ್ಯ ಸಂಯೋಜನೆಗಳು ವಿಕೃತಿ ಎನಿಸದಂತೆ ಕಲಾತ್ಮಕವಾಗಿ ಮೂಡಿಬಂದವು. ನಾಟಕದ ವಸ್ತು ಬಯಸುವ ಈ ದೃಶ್ಯಗಳು ಒಟ್ಟು ನಿರೂಪಣೆಯಲ್ಲಿ ಅಶ್ಲೀಲದಂತೇನಿಸದೇ ವಸ್ತುವಿಗೆ ಪೂರಕ ಮತ್ತು ಅಗತ್ಯದಂತೆ ಧ್ವನಿಸಿದವು. ಬೋಲ್ಡ್‌ ವಸ್ತುವನ್ನು ನಿಭಾಯಿಸಿದ ಎರಡು ಹೆಣ್ಣು ಪಾತ್ರಗಳ ಕಲಾವಿದರ ದಿಟ್ಟತನಕ್ಕೆ ಪ್ರೇಕ್ಷಕರು ಮೂಕವಿಸ್ಮಿತ. ಪ್ರಯೋಗ ತಾರಕಕ್ಕೇರುವ ಹೊತ್ತಲ್ಲಿ ಮಳೆ ಸುರಿದು ಕಡೆಯ ಕೆಲವು ನಿಮಿಷಗಳ ಮುಂಚೆಯೇ ನಾಟಕ  ಮೊಟಕುಗೊಂಡಿದ್ದು ನಿರಾಶೆ ಮೂಡಿಸಿತು. ರಂಗಭೂಮಿಗೆ ಹೊಸದೇ ಎನ್ನಿಸುವ ಲೆಸ್ಬಿಯನಿಸಂ ವಸ್ತು ಮತ್ತು ಅಭಿನೇತ್ರಿಯರ ಬೋಲ್ಡ್‌ ಅಭಿನಯದ ‘ದೋಹರಿ ಜಿಂದಗೀ’ ಮುಂಚೆಯೇ ತೀವ್ರ ಕುತೂಹಲ ಕೆರಳಿಸಿತ್ತು. ವಿಶಿಷ್ಟ ರಂಗವಿನ್ಯಾಸ, ವಿನೂತನ ನಿರೂಪಣಾ ಶೈಲಿಯಿಂದ ಹಾಗೂ ಕೆಲವು ಬೋಲ್ಡ್‌ ಸನ್ನಿವೇಶಗಳಿಂದ  ಬೆರಗುಗೊಳಿಸಿತು. ಇಂಥ ಭಿನ್ನ ರಂಗಾನುಭವ ನೀಡಿದ ರಂಗೋತ್ಸವ ಸಂಘಟನೆಗೊಂದು ಥ್ಯಾಂಕ್ಸ್‌.
 ದೇಶವಷ್ಟೇ ಏಕೆ ಎಲ್ಲೆಡೆ ಭುಗಿಲೆದ್ದ ವಿಪರೀತ ದೇಶಭಕ್ತಿ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಲ್ಬಣಿಸುತ್ತಿರುವ ವಿಪರೀತ ಧರ್ಮ ಮೋಹದಂಥ ವಿದ್ಯಮಾನಗಳಿಂದ ಪ್ರಸಕ್ತ ಸಮಾಜದಲ್ಲಿ ವಿಷಮ ಗಾಳಿಯೇ ಬೀಸುತ್ತಿದೆ. ಅಮೆರಿಕ ಸೇರಿದಂತೆ ಎಲ್ಲೆಲ್ಲೂ ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಒಂದು ದಂಧೆಯಾಗುತ್ತಿರುವ ಕಾಲಘಟ್ಟದಲ್ಲಿ ರಂಗಭೂಮಿ ಸೇರಿದಂತೆ ಎಲ್ಲ ಸಾಂಸ್ಕೃತಿಕ ಚಳವಳಿಗಳು ಎಚ್ಚೆತ್ತುಕೊಳ್ಳಬೇಕಾಗಿರುವ ತುರ್ತು ಇದೆ. ಈ ಹಿನ್ನೆಲೆಯಲ್ಲಿ ಸಿಜಿಕೆಯವರಂಥ ಸಾಮಾಜಿಕ/ರಾಜಕೀಯ ಬದ್ಧತೆಯ ರಂಗ ಚಟುವಟಿಕೆ ಮತ್ತೆ ಕಳೆಕಟ್ಟಬೇಕಿದೆ. ಮುಂದಿನ ರಂಗೋತ್ಸವ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಿಜಿಕೆ ಸ್ಮರಿಸಿಕೊಳ್ಳುವಂತಾಗಲಿ.

Pics: Thai Lokesh

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...