ವಿಷಯಕ್ಕೆ ಹೋಗಿ

ಪ್ರಭುತ್ವದ ಹಣಾಹಣಿ ಪ್ರಜೆಗಳಿಗೆ ಮೋಜು..

ಒಂದು ಟಿಪ್ಪಣಿ

ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ.
ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್‌ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್‌.
ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್‌ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್‌ ಅಂಗಳದಲ್ಲಿ  ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್‌(ಫುಲ್‌) ಮಿನಿಸ್ಟರ್‌ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್‌ ಪವರ್‌ ಆಜ್ಞಾಪಾಲಕರಂತೆ ತನಿಖಾ ದಳ ನಾಡಿನ ಮೂಲೆ ಮೂಲೆ ಮೂಸಿ ಹೋಯಿತು. ಸುರಕ್ಷಿತ ಕಲಿಗಳು ಗುಜರಾತಿನ ವಿಧಾನಸಭೆಯಲ್ಲಿ ನಿಷ್ಠೆ ಸಾಬೀತುಪಡಿಸಿದರು. ಒಂದಷ್ಟು ಹರಾಂಖೋರತನದ ಪ್ರದರ್ಶನವೂ ಆಯಿತು. ಆಯೋಗ ‘ಕೈ’ ಕೈಮೇಲೆತ್ತಿತು. ಮದಗಜಗಳ ಕಾದಾಟದಿಂದ ರಾಜಕೀಯ ಎನ್ನುವುದು ‘ಡಬ್ಲುಡಬ್ಲುಎಫ್‌’ ಆಟದಂತೆ ರೋಚಕವಾಗಿತ್ತು.
ಹಿಂದೂತ್ವ ವಿರೋಧಿ ಈಗ ನಾಡಧೋರಣೆಯಾದಂಥ ವಾತಾವರಣವಿದೆ. ಇದರ ದಿಕ್ಕೆಡಿಸಿ ತನ್ನದೊಂದು ಹವಾ ಸೃಷ್ಟಿಸಲು ಸರ್ವಜನಾಂಗದ ಶಾಂತಿತೋಟ ಲಾಲ್‌ಬಾಗ್‌ಗೆ ಗುಜರಾತಿನ ರಾಜಕೀಯ ಗೂಳಿಯೊಂದು ನುಗ್ಗಿ ಬಂದಿದೆ. ಹರಕತ್ತುಗಳ ಶುರು ಹಚ್ಚಿಕೊಂಡಿದೆ.
 ಕಾಂಗ್ರೆಸ್‌ನ ಏಕೈಕ ಆಶಾಕಿರಣ ‘ಆಖರೀ ಗಾಂಧಿ’ ಬೃಹತ್‌ ಸಮಾವೇಶ ಸಾಗಿದ ಹೊತ್ತಲ್ಲಿ ಸದ್ಯದ ಕರ್ನಾಟಕ ‘ಅಹಿಂದ ರಾಜಕೀಯ ಕಣ್ಮಣಿ’ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅದರ ಸಂಭ್ರಮ ಚಳಿಯಲ್ಲಿರುವ ಮಾಧ್ಯಮವನ್ನು ಬಿಸಿಯಪ್ಪುಗೆಗೆಳೆದಿದೆ.
 ಈ ನಡುವೆ ಕಲೆಯ ಕರಾಮತ್ತುಗಳೆಲ್ಲ ಮುಗಿದುಹೋದ ನಟನೊಬ್ಬ ಕಣಕ್ಕೆ ಕಣ್ಣಿಟ್ಟಿದ್ದಾನೆ. ಹತಾಶರು ರಾಜಕೀಯ ಗಮನ ಬೇರೆಡೆ ತಿರುಗಿಸಲು ರೂಪಿಸಿದ ತಂತ್ರಗಾರಿಕೆಯ ಒಂದು ಭಾಗವಾಗಲು ಸಜ್ಜಾಗುತ್ತಿದ್ದಾನೆ. ವಿಷಮಗೊಂಡ ಕರಾವಳಿಯ ರಾಜಕಾರಣದಲ್ಲಿ ಮುಖ ಕಳಕೊಂಡವರು ಇಂಥ ಗ್ಲ್ಯಾಮರ್‌ ಮುಖದ ಹಿಂದೆ ನಿಲ್ಲುವ ತಂತ್ರ ಹೂಡಿದ್ದಾರೆ. ಎಂದಿನಂತೆ ಕರಾವಳಿಗರಿಂದಲೇ ತುಂಬಿರುವ ಚಾನೆಲ್‌ಗಳು ತಮಗ್ಹತ್ತಿರದವನ ಬಾಯಿಯಾಗಲಿವೆ. ಒಂದಷ್ಟು ಯುವಕರು ಗ್ಲ್ಯಾಮರ್‌ ಹಿಂದೆ ಬೀಳಬಹುದು. ಒಟ್ಟಿನಲ್ಲಿ ಕೆಲವು ಮುಖ ಉಳಿಸಿಕೊಳ್ಳಲು ಸೃಷ್ಟಿಸಲ್ಪಟ್ಟ ರಾಜಕೀಯದ ‘ನೈಟ್‌ ವಾಚಮನ್‌’ (ಕ್ರಿಕೆಟ್‌ ಪರಿಭಾಷೆಯಲ್ಲಿ)  ತರಹದ ನಮೂನಾವೇ ಇದು ಎನ್ನುವ ಅನುಮಾನ.
ಈ ಗದ್ದಲದಲ್ಲಿ ದೊಡ್ಡ ಕಾರ್ಯಕ್ರಮವಿಲ್ಲದೆ ಸೊರಗಿದ ಪ್ರಾದೇಶಿಕ ಪಕ್ಷವೊಂದರ ಏಕೈಕ ಆಶಾಕಿರಣ ’ಅಣ್ಣ’ ಸಿಂಗಪುರ್‌ಗೆ ಕಳ್ಳಬೆಕ್ಕಿನಂತೆ ಹಾರಿದ್ದಾರೆ. ಅಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ದೇಶ–ರಾಜ್ಯ ರಾಜಕೀಯದ ಆರೋಗ್ಯವೂ ಹದಗೆಟ್ಟಿದ್ದರಿಂದ ಮತ್ತು ಸದ್ಯದ ಅಖಾಡದಲ್ಲಿ ಆಟಕ್ಕಿಳಿಯಲು ಪ್ಲೇಸ್‌ಮೆಂಟ್‌ ಇದ್ದೂ ತಾಲೀಮು ಸಾಕಾಗಲಿಲ್ಲವೇನೋ.. ಸಿಂಗಪುರದಲ್ಲೇ ಇದ್ದು ಒಂದಷ್ಟು ತಾಲೀಮು ಮತ್ತು ಸಂಝೋತಾ ವ್ಯವಸ್ಥೆ ಮಾಡಿಕೊಂಡೇ ವಾಪಸ್‌ ಆಗಬಹುದೇನೋ.
ಒಟ್ಟಿನಲ್ಲಿ ರಾಜಕೀಯ ಅಖಾಡ ಕಲಿಗಳ ಫೈಟ್‌ಗೆ ಭರ್ಜರಿ ಸಜ್ಜಾಗಿದೆ. ರೋಮಾಂಚನದ ನಿರೀಕ್ಷೆ ಹುಟ್ಟಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳ ಹಣಾಹಣಿ ಒಂದು ಮೋಜಿನಾಟದಂತಾಗಿದೆ. ಅನುಭವಿಸುವ ಎಂದಿನ ಅವಕಾಶ ಪ್ರಜೆಗಳದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...