ವಿಷಯಕ್ಕೆ ಹೋಗಿ

ಆ ಕನಸಿನ ಬಣ್ಣಗಳು... ಹಾಲ್ಕುರಿಕೆ ಥಿಯೇಟರ್ ಮೂಡಿಸಿದ ಅದ್ಭುತ ರಂಗಹಾದಿ

ಥಿಯೇಟರ್ ಆಫ್ ಎಮೋಷನ್ಸ್...
ಬದುಕು ತುಂಬ ಸಂಕೀರ್ಣತೆಗಳಿಂದ ಕೂಡಿರುವಂಥದು. ಯಾವುದೂ ಅಷ್ಟು ಸರಳವಲ್ಲ. ಹಾಗೆ ನೋಡಿದರೆ ಮನುಷ್ಯ ಪ್ರೀತಿ ಮತ್ತು ಒಟ್ಟಾರೆಯಾಗಿ ಬದುಕು ಅತ್ಯಂತ ಸರಳ ಹಾಗೂ ಸಹಜತೆಯಿಂದ ಕೂಡಿರಬೇಕಿತ್ತು. ಹಾಗಾಗುತ್ತಿಲ್ಲ. ಬದುಕು ಇತ್ತೀಚೆಗಂತೂ ತುಂಬ ಸಂಕೀರ್ಣಗೊಳ್ಳುತ್ತ ಸಾಗಿದೆ. ಅದು ಮುಂಚಿನ ಸಹಜ ಸಂಭ್ರಮಗಳಿಂದ ದೂರವಾಗಿ, ಮೈಗೂಡಿಸಿಕೊಂಡ ಚಟ ಮತ್ತು ಖಯಾಲಿಗಳಿಂದ ನರಳುತ್ತಿದೆ.

 ಮಟಿರಿಯಲಿಸ್ಟಿಕ್ ಜಗತ್ತು ವಸ್ತುಗಳಲ್ಲಿ ಸುಖವನ್ನು ತೋರಿಸುತ್ತಿದೆ. ಅದನ್ನು ಕೊಂಡುಕೊಳ್ಳುವುದಕ್ಕೇ ನಾವೆಲ್ಲ ಇಷ್ಟು ದುಡಿಯೋದು ಮತ್ತು ಸಂಪಾದಿಸೋದು ಎಂದು ಜಾಹಿರಾತುವಿನ ಮೂಲಕ, ಸೀರಿಯಲ್, ಸಿನಿಮಾ ಮೂಲಕ ಹೇಳುತ್ತಿದೆ. ನಾವದನ್ನು ನಂಬಿ ಕೂತಿದ್ದೇವೆ. ಹೆಚ್ಚು ಸಂಪಾದನೆ ಅಂದರೆ ಹೆಚ್ಚೆಚ್ಚು ಚಾಯ್ಸ್! ವಸ್ತು ಹೊಂದುವುದಕ್ಕೆ ಚಾಯ್ಸ್ ಹೇಗೋ ಸುಖಕ್ಕೂ ವಿವಿಧ ನಮೂನೆಗಳು... ಹಣ ಎಲ್ಲವನ್ನು ತಂದುಕೊಡಲ್ಲ ಎಂದು ನಾವೆಲ್ಲ ಹೇಳಿಕೊಳ್ಳುತ್ತಿದ್ದೆವು. ಆದರೆ, ಇಂದು ಹಣ ಎಲ್ಲವನ್ನು ಸಾಧ್ಯವಾಗಿಸುತ್ತಿದೆಯಲ್ಲ!

ಸೆಕ್ಸ್ ಕೂಡ ಎರಡು ಆರ್ಗನ್ ನಡುವಿನ ಸಂಬಂಧ, ಎರಡೂ ಲಿಂಗಗಳಿಗೆ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರ ಮುಖ್ಯವಾಗಿದೆ. ಅದು  ವಿಜಾತಿ ಮತ್ತು ಸಜಾತಿ ಎರಡೂ ಆದೀತು. ಅದೂ ಸಿಕ್ಕದಿದ್ದರೆ ನೇರವಾಗಿ ನಿಮ್ಮದೇ ಒಂದನ್ನು ಸಿದ್ಧಪಡಿಸಿಕೊಂಡರಾಯ್ತು! ಇಷ್ಟು ಸಿಂಪಲ್ ಆಗಿದೆ ಸುಖದ ಕಲ್ಪನೆ!

ದೇಹ ಸಂಬಂಧ ಮತ್ತು ಪ್ರೀತಿ ಎರಡಕ್ಕೂ ಅಂಥ ಸಂಬಂಧವೇನೂ ಇಲ್ಲ. ಸೆಕ್ಸ್ ಎಂದರೆ ಒಬ್ಬರನ್ನು ಸೇರಿ ನಮ್ಮದಷ್ಟು ಅವರಿಗೆ ಮತ್ತು ಅವರಿಂದ ಸಾಕಷ್ಟನ್ನು ನಾವು ಪಡಕೊಳ್ಳುವ ಹಂಬಲವಾಗಿದೆ. ಎಲ್ಲೋ, ಹೇಗೋ ಸೇರಿದಾಗ ಒಂದಿಷ್ಟು ಸುಖಿಸುವುದರಲ್ಲಿ ತಪ್ಪೇನಿದೆ? ಕೆಲಸದ ಧಾವಂತದಲ್ಲಿ, ಸಂಪಾದನೆಯ ಗುಂಗಿನಲ್ಲಿ ಒಂದು ಜಾಗೆಯಿಂದ ಮತ್ತೊಂದು ಜಾಗೆಗೆ ಹಾಗೇ ಎಲ್ಲೆಡೆ ಸರಿದಾಡುತ್ತಲೇ ಇರುವ ನಾವು ಸದಾ ನಮ್ಮವರ ಜತೆಯಲ್ಲೇ ಎಲ್ಲಿ ಇರೋಕಾಗುತ್ತೆ? ದಿನ ದುಡಿದು ಸುಸ್ತಾದ ಜೀವಕ್ಕೆ ಏನೋ ಬೇಕೆನಿಸುವಂತೆ ದೇಹಕ್ಕೂ ಬೇಕಲ್ಲ?!... ಇಲ್ಲೇ ರಂಗೀಲಾ, ಮಟಿರಿಯಲಿಸ್ಟಿಕ್ ಜಗತ್ತು ನಮ್ಮನ್ನು ಕೊಡವಿ ಹಾಕೋದು. ನಮ್ಮ ಅನೈತಿಕ ಭಾವನೆಗಳ ಉನ್ಮತ್ತಲೋಕ ಸೆಳೆದುಬಿಡೋದು. ಈ ಕಾಲದ ಬಹುದೊಡ್ಡ ಅವಕಾಶಗಳ ಬೆಟ್ಟವೆಂದರೆ ಇದೇ. ಇಲ್ಲಿ ನಾವೆಲ್ಲ ತಂಗಲು ಹಾತೊರೆಯುತ್ತಿದ್ದೇವೆ.

 ಹಾದರ ಅನ್ನೋದು ನಮ್ಮ ಜನಪದರಲ್ಲಿ ರಸಿಕತೆ, ಶೃಂಗಾರ ರಸಕ್ಕಷ್ಟೇ ಸೀಮಿತಗೊಂಡಿತ್ತು. ಬಿತ್ತನೆ ಮತ್ತು ರಾಶಿಯ ಸಂಭ್ರಮದಲ್ಲಿ ಕಳೆದುಹೋಗಲು ಮತ್ತು ಆದ ದಣಿವು ಆರಿಸಿಕೊಳ್ಳಲು ಕೆಲ ಉನ್ಮತ್ತ ಕ್ಷಣಗಳಿಗಾಗಿ ಅವರಲ್ಲೂ ತಹತಹಿಕೆ ಇತ್ತು. ಆಗಲೇ ಅವರಲ್ಲಿ ರಸಿಕನೊಬ್ಬ ಹುಟ್ಟಿಕೊಳ್ಳುತ್ತಿದ್ದ, ಹಾದರದ ಅಗ್ನಿಕುಂಡ ಹೊತ್ತಿ ಉರಿಯುತ್ತಿತ್ತು. ಮತ್ತು ತನ್ನ ಮೈಯಲ್ಲೆಲ್ಲ ಕೆನ್ನಾಲಗೆ ಚಾಚಿದ ಅಗ್ನಿ ಶಮನಕ್ಕೆ ಮಳೆಗಾಗಿ ಕಾತರಿಸುವ ಮಣ್ಣಿನಂಥ  ಹೆಣ್ಣು ಯಾವಾಗಲೂ ಇದ್ದಾಳೆ. ಹೀಗಾಗಿ ಹಾದರ ಮನುಷ್ಯ ಚರಿತ್ರೆಯ ಒಂದು ಭಾಗವೇ ಆಗಿದೆ.

 ಅದು ಬರಿಯ ಈ ಕಾಲದ ತಲ್ಲಣ ಎಂದೇನಲ್ಲ. ಆಗದು ಸಹಜ ಬಯಕೆ ಅನ್ನಿಸಿಕೊಂಡಿತ್ತು. ತಣಿದಾಗ ಪಾಪ ಪ್ರಜ್ಞೆಯಿಂದಲೂ ನರಳುವಂಥ ಸಹಜತೆ ಆಗಿತ್ತು. ಆದರೆ ಈಗದು ಚಟವಾಗಿದೆ. ಸ್ಟೈಲ್, ಅಹಮಿಕೆಯ ವಿಷಯವಾಗಿದೆ. ಕಾಲದ ಇಂಥದೂ ಒಂದು ಸೊಬಗಿನಲ್ಲಿ ಕಳೆದುಹೋಗುವ ಬಯಕೆಯಿಂದ ಯಾರು ಮುಕ್ತವಾಗಿದ್ದಾರೆ? ಪಾಪ ಪ್ರಜ್ಞೆಯಿಂದ ನರಳುವವರು ಚರ್ಚ್ ಒಳಗೆ ಪಾಪನಿವೇದನೆ ಮಾಡಿಕೊಳ್ಳುವಂತೆ ಈಗಿನ ಮನೋವೈದ್ಯರು ಮತ್ತು ಲೈಂಗಿಕ ತಜ್ಞರ ಸಾಂತ್ವನ ಕೇಳಿದರೂ ಸಾಕು...

ಎಲ್ಲ ನನ್ನ ಸುತ್ತ ಸುತ್ತಬೇಕು. ನನ್ನ ಸೇರುವ ಹಂಬಲ ಹೊಂದಬೇಕು. ಬಯಸಿದ್ದೆಲ್ಲ ಈ ಸೌಂದರ್ಯಕ್ಕೆ, ಸಂಪತ್ತಿಗೆ ದಕ್ಕಬೇಕು. ಎನ್ನುವ ಉಮೇದಿ ಬಹುತೇಕರಲ್ಲಿ ನಿತ್ಯ ಇಂಚಿಂಚು ಹೆಚ್ಚುತ್ತಲೇ ಇದೆ. ಒಬ್ಬ ಝೋಪಡಪಟ್ಟಿಯವ ಕೂಡ ತನ್ನ ಮಗ ಅಥವಾ ಮಗಳಿಗೆ ಉಳ್ಳವರ ಮನೆಯಿಂದ ಸಂಬಂಧ ಬಯಸುತ್ತಿದ್ದಾನೆ.  ಹಸಿವಿನ, ನೋವಿನ, ದುಡಿಮೆಯ ರುಚಿಯನ್ನು ಅವನೂ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಮಹಾನಗರಗಳಿಗೆ ಫ್ಲೈ ಓವರ್, ಮೆಟ್ರೊ ಕಾಮಗಾರಿಗೆ ಬರುವ ದೂರದ ಹಳ್ಳಿಯ ರೈತ ಬರಿಯ ಹೊಟ್ಟೆಗೆ ಗಂಜಿ ಕಾಣಲು ಮತ್ತು ಬರದಿಂದ ಭಯಗೊಂಡು ಬಂದದ್ದಲ್ಲ. ಅವನಲ್ಲೂ  ಸಂಪಾದನೆಯ ಗುಂಗು ಹಿಂಡಿಹಾಕುತ್ತಿದೆ. ಬರದಿಂದ ತತ್ತರಿಸಿದ ಉತ್ತರ ಪ್ರದೇಶದ ಕೆಲ ಹಳ್ಳಿಗಳಲ್ಲಿನ ಹೆಣ್ಣುಗಳು ಅವರ ಗಂಡಂದಿರಿಂದಲೇ ಮಾರಲ್ಪಡುತ್ತಿವೆ. ಮಹಿಳೆಯೇ ಮುಖ್ಯಮಂತ್ರಿ ಆಗಿರುವ ನಾಡಿನ ಎಷ್ಟೋ ಬಡ ಹೆಣ್ಣುಗಳು ಹೊಟ್ಟೆ ಹೊರೆದುಕೊಳ್ಳಲು ಬಾಡಿಗೆ ತಾಯಿಗಳಾಗುತ್ತಿವೆ!

 ಯುದ್ಧ ಅನ್ನೋದು ಸಮರಕಲೆಯಂತೆ ಮೋಜು ಕೊಡುತ್ತಿದೆ. ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ. ವ್ಯಾಪಾರದ ಸರಕಾಗಿದೆ. ರೊಟ್ಟಿ, ಬೆಣ್ಣೆ ತರುವುದಲ್ಲ... ಬಾಂಬ್, ಗನ್ ಮತ್ತು ಒಟ್ಟು 'ರಕ್ಷಣೆ' ಅನ್ನೋದನ್ನೇ ಮಾರಾಟ ಮಾಡುವ ವ್ಯಾಪಾರದ ಸೆನ್ಸೇಶನಲ್ ಜಾಹಿರಾತಾಗಿದೆ. ಭಯದ ವಾತಾವರಣ ಸೃಷ್ಟಿಸಿ ರಕ್ಷಣೆಯ ಪುಕ್ಕಲುತನ ಬೆಳೆಸುತ್ತಿದೆ. ವಸ್ತುಗಳು ಸೂಕ್ತ ರಕ್ಷಣೆ ನೀಡಬಲ್ಲವು, ತಂತ್ರಜ್ಞಾನ ಜೀವ ಕಾಪಾಡಬಲ್ಲವು ಎಂದು ನಂಬಿಸಲು ಯುದ್ಧಗಳು ನಡೆಯುತ್ತವೆ. ಅಲ್ಲಿ ಸಿಡಿಯುವ ಪ್ರತಿ ಬಾಂಬ್ ಜೀವವನ್ನು ಉಳಿಸಿಕೊಳ್ಳಲು ಬಂದೂಕಿನ, ಅಸ್ತ್ರ, ಶಸ್ತ್ರಗಳ ನೆರವು ಪಡೆದುಕೊಳ್ಳಿ ಎಂದು ದೇಶ ದೇಶಗಳಿಗೆ ಸಾರುತ್ತಿದೆ. ಸೆಕ್ಯುರಿಟಿ ಟೆಕ್ನಾಲಜಿ ಮಾರಾಟವಾಗುತ್ತಿರುವುದು ಈ ಕಾರಣದಿಂದಲೇ. ದೇಶವೊಂದು ರಕ್ಷಣೆಗಾಗಿ ಕೊಲ್ಲುವ ಉಪಾಯಗಳನ್ನು, ತಂತ್ರಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅಣುಶಕ್ತಿ, ಕ್ಷಿಪಣಿ ಅಭಿವೃದ್ಧಿ ಎನ್ನುವ ಸಾವಿನ ಸರಕುಗಳ ತಯಾರಿಕೆಗೆ ವಿಜ್ಞಾನಿಗಳನ್ನು ಸೃಷ್ಟಿಸಲಾಗುತ್ತದೆ. ಕೊಲ್ಲುವ ಏಜೆಂಟರಂತೆ ಸೈನ್ಯ ಬಳಸಿಕೊಳ್ಳಲಾಗುತ್ತದೆ....
 ಹೀಗೆ ಹೆಣ್ಣು ಮತ್ತು ದೇಶವನ್ನು ಭೋಗಿಸುವವರ ತೆವಲಿಗೆ ಇಡೀ ಮನುಷ್ಯ ಬದುಕು ನರಳಬೇಕಾಗಿದೆ.

 ನಮ್ಮ ನಡುವಿನ ತಪ್ಪು ಗ್ರಹಿಕೆಗಳು,  ಪ್ರೀತಿ ಮತ್ತು ವಿಶ್ವಾಸದ ಕೊರತೆಯಿಂದ ಎದ್ದ ಅಪನಂಬಿಕೆಗಳು ಒಂದು ಸುಂದರ ಸಂಬಂಧದ ನಡುವೆ ಮಲಗಿಬಿಡುತ್ತವೆ. ನೆಮ್ಮದಿ ಜಾಡಿಸಿ ಒದ್ದು ಹೊರಕ್ಕೆ ಹೋಗಿಬಿಡುತ್ತದೆ. ಅಂದುಕೊಂಡ ಬಣ್ಣಗಳು, ಬೆರಗು ಹುಟ್ಟಿಸಿದ ಬಣ್ಣಗಳೆಲ್ಲ ಮಾಸತೊಡಗುತ್ತವೆ. ಜತೆಯಲ್ಲಿ ಆಗಲೇ ಒಂದಿಷ್ಟು ಕಲ್ಪಿಸಿಕೊಂಡ ಕನಸಿನ ಬಣ್ಣಗಳು ಕಾಡತೊಡಗುತ್ತವೆ. ಹತಾಶೆ ಸೆಟೆದೆದ್ದು ನಿಲ್ಲುತ್ತದೆ. ಯಾವ ಸಾಂತ್ವನಗಳೂ ಮುರಿದ ಮನಸುಗಳಿಗೆ ಮದ್ದು ತಂದುಕೊಡಲ್ಲ...

 ರಂಗಗೆಳೆಯ ಹಾಲ್ಕುರಿಕೆ ಶಿವಶಂಕರ್ ಶುಕ್ರವಾರ (6-11-2009 ಸಂಜೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಾತ್ಮಕ ಪ್ರಯೋಗ ಆ ಕನಸಿನ ಬಣ್ಣಗಳು ಪ್ರದರ್ಶನಗೊಂಡಿತು ) ಕೆಲವು ಪಾತ್ರಗಳ ಮೂಲಕ ಇಂಥ ಹಲವು 'ಆಘಾತಕಾರಿ' ಕನಸುಗಳ ಬಣ್ಣಗಳನ್ನು ತಮ್ಮ ವಿಶಿಷ್ಠ ರಂಗಪ್ರಯೋಗ ಮತ್ತು ರಂಗಭಾಷೆಯ ಸೊಗಡಿನಿಂದ ರಂಗದ ಮೇಲೆ ಹಿಂಡಿಹಾಕಿದರು. ಎಷ್ಟೊಂದು ಹಿಂಸೆ ಮತ್ತು ಭ್ರಮೆಗಳು ಆ ಬಣ್ಣಗಳಲ್ಲಿ!... ಒಂದು ಕಾಲದ ಜೀವನಶೈಲಿಯ ಬೆಚ್ಚಿಬೀಳಿಸುವ ಅನೇಕ ಸತ್ಯಗಳನ್ನು ಶಿವಶಂಕರ್ ತುಂಬ ಬೋಲ್ಡ್ ಆಗಿ ಹೇಳಿದ್ದಾರೆ.

 ಅವರ ಎಲ್ಲ ಪಾತ್ರಗಳು ತಮ್ಮೆಲ್ಲ ಕನಸು ಮತ್ತು ಭ್ರಮೆಗಳ ಜತೆ ಮನಸಿನ ವಿಕಾರಗಳನ್ನು ಹೊರ ಹಾಕಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವು. ರಂಗದ ಮೇಲೆ ನಡೆದ ಇಂಥ ಅನಾವರಣಕ್ಕೆ ನಾಟಕಕಾರ ಮತ್ತು ನಿರ್ದೇಶಕ, ಅಲ್ಲೇ ಪರಿಹಾರ ಹುಡುಕುವ ಯತ್ನ ನಡೆಸದೇ ಮನೋವಿಜ್ಞಾನ ಮತ್ತು ಫಿಲಾಸಫಿ ಅನ್ನು ಕೂಡ ಅಸಹಾಯಕ ಸ್ಥಿತಿಗೆ ನೂಕಬಲ್ಲ ಈ ಕಾಲದ ತಲ್ಲಣಗಳಿವು, ಸಮಸ್ಯೆ, ಸಂಕೀರ್ಣತೆಗಳಿವು ಎಂದು ನಿರೂಪಿಸಿದರು. ತಾವೇ ಅಥವಾ ನಾಟಕದ ಅಂತಿಮ ಉದ್ದೇಶ ಪ್ರವಚನಕ್ಕೆ ನಿಲ್ಲೋದು ಬೇಡ ಎನ್ನುವ ತೀರ್ಮಾನವನ್ನೂ ಪ್ರಕಟಿಸಿದರು. ರಂಗದ ಮೇಲೆ ಅವರ ಒಂದೊಂದು ಪಾತ್ರಗಳು ತಮ್ಮೊಳಗಿನದೆಲ್ಲ ಅನಾವರಣಗೊಳಿಸಿದಂತೆಲ್ಲ ನಟರ ಮತ್ತು ಪ್ರೇಕ್ಷಕರ ನಡುವಿನ ಅನುಸಂಧಾನ ನಡೆದೇ ಇತ್ತು.

ನಾಟಕ ನೋಡುತ್ತಿದ್ದಂತೆ ನನ್ನಲ್ಲೂ ಹಲವು ಪ್ರಶ್ನೆಗಳು, ಆತಂಕಗಳು, ತಲ್ಲಣಗಳು ಇಣುಕಿದವು, ಕೆಣಕಿದವು. ನಾಟಕದ ವಿಚಾರಗಳು ನನ್ನಲ್ಲೂ ಪ್ರವಹಿಸಲು ನಿಂತವು. ಅಂತೆಯೇ ಇಷ್ಟೆಲ್ಲವನ್ನು ನನಗೂ ಮನವರಿಕೆ ಮಾಡಿಕೊಟ್ಟವು. ಒಂದಷ್ಟನ್ನು ಯೋಚಿಸುವಂತೆ, ಹೊರಹಾಕುವಂತೆ ಮಾಡಿದವು.

ಎಲ್ಲೆಡೆ ಸಿದ್ಧ ಮಾದರಿಗಳೇ ಚಲಾವಣೆಯಲ್ಲಿರೋದು. ಸಿದ್ಧ ಉಡುಪು, ಸಿದ್ಧ ಆಹಾರ, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡ ಈಗಿನ ಜನರೇಶನ್ ಹೊಸದೊಂದು ಬೆರಗು ಮೂಡಲೆಂದು ಕಾತರಿಸುತ್ತಿದ್ದ ಹೊತ್ತಲ್ಲಿ ಹಾಲ್ಕುರಿಕೆ ಶಿವಶಂಕರ್ ಎಂಥ ಅದ್ಭುತ ಬೆರಗು ಮೂಡಿಸಿಬಿಟ್ಟರು. ಚಿಂತನೆಯ ಹೊಸ ಹರವನ್ನು ಕಟ್ಟಿಕೊಟ್ಟರು!

ಕಡೇ ಮಾತು:
 ಟಿವಿ ಮಾಧ್ಯಮ ರಿಯಾಲಿಟಿ ಶೋ ಮತ್ತು ಲೈವ್ ಪ್ರಸಾರದ ಮೂಲಕ ಜೀವಂತ ರಂಗಮಂಚವೊಂದರ ಅಸ್ತಿತ್ವಕ್ಕೇ ಚೆಕ್ ಕೊಟ್ಟು ಕೂತಿದೆ. ನಾಟಕ ನೋಡಲು ಜನಾ ಬರ್ತಿಲ್ಲ ಎಂಬ ಗೊಣಗಾಟ ನಡೆದ ಹೊತ್ತಲ್ಲಿ,  ಹಾಲ್ಕುರಿಕೆ ಶಿವಶಂಕರ್ ತಮ್ಮ ಹೊಸ ಪ್ರಯೋಗದ ಮೂಲಕ ಎಷ್ಟೊಂದು ಪ್ರೇಕ್ಷಕರನ್ನು ಸೆಳೆದುಬಿಟ್ಟರು!.. ಕಲಾಕ್ಷೇತ್ರದ ನಾಟಕಗಳಿಗೆ ಮಾಮೂಲಾಗಿ ಸೇರುತ್ತಿದ್ದ ಹಳಸಲು ಮುಖಗಳ್ಯಾವೂ ಅಲ್ಲಿ ಕಾಣಿಸಲಿಲ್ಲ. ಎಲ್ಲ ಫ್ರೆಶ್ ಮುಖಗಳು! ನಾಟಕ ಮುಗಿಯುವ ತನಕ ತಾವೂ ಪಾತ್ರಗಳ ಆತಂಕಗಳಲ್ಲಿ ತಮ್ಮವಷ್ಟನ್ನೂ ಕಂಡರು. ಹೊಸ ನಾಟಕ ಭಾಷೆ, ಪ್ರಯೋಗದ ಹೊಸ ಸೂತ್ರ... ಹೀಗೆಲ್ಲ ಇಡೀ ರಂಗಭೂಮಿಗೆ ಹೊಸದನ್ನು ಅದೆಷ್ಟು ಸರಳವಾಗಿ ಒಪ್ಪಿಸಿಬಿಟ್ಟರು!... ಇಟ್ಸ್ ಅಮೇಜಿಂಗ್...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...