ವಿಷಯಕ್ಕೆ ಹೋಗಿ

ಗೂಡು ಕಳಕೊಂಡ ಗುಬ್ಬಚ್ಚಿಗಳು...!

ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು  ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು.
ಈ ಕಟ್ಟಡ ನಮ್ಮ ಬೆಂಗಳೂರು
ಇಂಟರ್ ನ್ಯಾಷನಲ್  ಏರ್ ಪೋರ್ಟ್...  ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ...  ಕೇಳಿಸುತ್ತಿತ್ತು...!  


                                                                                                                                                                                                                  
ಅದೆಷ್ಟು ಸ್ವಚ್ಚಂದವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳ ಗೂಡುಗಳಿಲ್ಲಿ ಮುರುಟಿಹೋಗಿವೆಯೋ? ನೂರಾರು ಎಕರೆ ಜಮೀನಿನಲ್ಲಿ  ಹೀಗೆ ಕಾಂಕ್ರೀಟ್ ಕಾಡೊಂದನ್ನು ಕಟ್ಟಿ ಅಲ್ಲಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಜಾಗ ಮಾಡಿಕೊಡಲು ಅದೆಷ್ಟು ಮರಗಳು ಉರುಳಿದವೋ.. ಅಲ್ಲೆಲ್ಲ ಗೂಡು ಕಟ್ಟಿ ಪ್ರೀತಿ, ಪ್ರಣಯ, ಮೈಥುನ, ಮರಿಗಳ ಆರೈಕೆಯಲ್ಲಿ ತೊಡಗಿದ್ದ  ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಕಳಕೊಂಡ ನೆಲೆಯಿಂದ ಅದೆಷ್ಟು  ಕಂಗಾಲಾದವೋ...

ಬಹುಶಃ ಈ ಗುಬ್ಬಚ್ಚಿಗಳು ತಾವು ಕಳಕೊಂಡ ಬದುಕನ್ನಿಲ್ಲೇ ಮತ್ತೆ ಹುಡುಕಿಕೊಳ್ಳಲು ಅಲೆಯುತ್ತಿರಬಹುದೇ? ಅಥವಾ ಕಟ್ಟುವ, ಕೆಡವುವ ಪ್ರಕ್ರಿಯೆಯಲ್ಲಿ ಪ್ರಾಣ ಕಳಕೊಂಡ ತಮ್ಮವರ, ಪೂರ್ವಜರ ಮರೆಯಲಾಗದೇ  ಇಲ್ಲೇ ಅವರಾತ್ಮಗಳ ಸ್ಮರಣೆಯಲ್ಲೇ ಕಾಲ ಕಳೆಯ ಬಂದಿರಬಹುದೇ... ತಮ್ಮ ಗೂಡುಗಳ ನೆನಪುಗಳಿಂದ ಜೀವ ತಡೆಯಲಾಗದೇ ಇಲ್ಲೇ ಬಿಕ್ಕಳಿಸುತ್ತ ಅಲೆಯುತ್ತಿರಬಹುದೇ.... ನಮ್ಮ ನೆಲೆ, ಅನ್ನದ ಮೂಲವನ್ನೇ ಕಿತ್ತುಕೊಂಡು ನಿಮ್ಮ ಲೋಹದ ಹಕ್ಕಿಗಳ ಹಾರಾಟ ನೋಡುತ್ತ ಮೋಜು ಮಾಡುತ್ತಿರುವ ಮನುಜರೇ ನಿಮ್ಮ ಬದುಕು ಇನ್ನಷ್ಟು ಸುಂದರವಾಗಿರಲಿ ಎಂದು ಉಲಿಯುತ್ತಿವೆಯೋ?... ನಮ್ಮ ಜಾಗೆ ನಮಗೆ ಕೊಟ್ಟುಬಿಡಿ ಎಂದೇನೂ ನಾವು ಕೇಳಲ್ಲ... ನಿಮ್ಮ ಹಾಗೆ ಪರಿಹಾರವನ್ನೂ ಕೇಳಲ್ಲ...? ಕೇಳುವುದಾದರೂ ಯಾರನ್ನ?... ಎಂದು ಚುಚ್ಚುತ್ತಿವೆಯೋ...!

 ನಾವೂ ನಿಮ್ಮ ಒಡನಾಡಿಯಾಗೇ ಅನಾದಿ ಕಾಲದಿಂದಲೂ ನಿಮ್ಮ ಜತೆಗೇ ಇದ್ದವರು. ನಾಡಲ್ಲಿ ನೀವು ಮರಗಳನ್ನೆಲ್ಲ ಕಡಿದು ಮನೆ ಕಟ್ಟಿಕೊಂಡಿರಿ...  ಕೆಲವು ಪುಣ್ಯವಂತರು ನೆಟ್ಟ ಪುಟ್ಟ ಮರಗಳಲ್ಲೇ ನಾವು ಹ್ಯಾಗೊ ಬದುಕ ಕಟ್ಟಿಕೊಂಡಿದ್ದೆವು. ನಿಮ್ಮ ಕಿವಿಗಳಿಗೆ ಚಿಂವ್ ಚಿಂವ್ ಸುಪ್ರಭಾತ ಹೇಳುತ್ತ ಮುಂಜಾವಿನ ಶುಭ ಸಂದೇಶ ಹೊತ್ತು ನಿಮ್ಮ ದಿನದ ಬದುಕಿಗೆ ಹಾರೈಸುತ್ತ ಇದ್ದೆವು... ಆದರೆ, ಮೆಟ್ರೊ, ರಸ್ತೆ ಅಗಲೀಕರಣ, ಬಹುಮಹಡಿ ಕಟ್ಟಡ, ಶಾಪಿಂಗ್ ಮಾಲ್ ಎಂದೆಲ್ಲ ನಮ್ಮನ್ನು ನಿಮ್ಮ ಬದುಕಿನಿಂದಲೇ ಕಿತ್ತು ಬಿಸಾಕಿದಿರಿ... ಈಗ ಊರಾಚೆ ಇಲ್ಲಾದರೂ ರೈತರ ಜತೆ ಒಡನಾಡಿಯಾಗಿರೋಣ ಎಂದರೆ ಲೋಹದ ಹಕ್ಕಿಗಳ ಸಾಕಿಕೊಂಡ ನೀವುಗಳು ಅವುಗಳ ಹಾರಾಟಕ್ಕೆ ಕೊನೆಗೆ ನಮ್ಮ ಗೂಡುಗಳನ್ನೇ ಕಿತ್ತುಕೊಂಡಿರಿ...  ಅಷ್ಟಾದರೂ ನಾವು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲಿಲ್ಲ... ನಿಮ್ಮನ್ನೆಲ್ಲ ಆ ಗ್ಲೋಬಲ್ ವಾರ್ಮಿಂಗ್ ಭೂತ ಎದ್ದಿದೆಯಲ್ಲ ಅದೇ ಬುದ್ಧಿ ಕಲಿಸುತ್ತದೆ...

ಆದರೂ ಸ್ವಾಮೀ... ಇಲ್ಲಿ ರೈತ ಬೆಳೆದ ಕಾಳುಗಳಲ್ಲಿ ನಾವೂ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಸಂತೋಷದಿಂದ ಹಾರಾಡಿಕೊಂಡದ್ದೆವು. ಈಗೆಲ್ಲಿ?  ಆ ಭೂಮಿ ಮೇಲೆ ನಿಮ್ಮ ಮಹಲು ನಿಂತಿದೆ. ವಿದೇಶಿಯರು ವಾ ವಾ ಎನ್ನುವಂಥ ಮಹಲು ಕಟ್ಟಿಕೊಂಡವರು ನೀವು.... ನಿಮ್ಮಲ್ಲೊಂದೇ ಮನವಿ. ನಿಮ್ಮ ಹಲ್ಲುಗಳ ಸಂದಿಯಷ್ಟೇ ಅಗಲವಾಗಿರುವ ನಮ್ಮ ಹೊಟ್ಟೆಗೆ ನೀವು ತಿಂದು ಎಸೆದ ಒಂದಗುಳ ಅನ್ನವಾದರೂ  ಕೊಡಿ ಸ್ವಾಮಿ.. ಎಂದು ಗುಬ್ಬಚ್ಚಿಗಳು ಚಿಂವ್ ಚಿಂವ್ ಗುಟ್ಟುತ್ತಿವೆಯೋ...  ಅಷ್ಟಕ್ಕೂ ಮನುಷ್ಯರ ಹಾಗೆ ಅವರದೂ ಒಂದು ಬದುಕಿದೆಯಲ್ಲವೇ..?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...