ವಿಷಯಕ್ಕೆ ಹೋಗಿ

ಭಾರತೀಯ ರಂಗಭೂಮಿಯ ವಿಭಿನ್ನ ರಂಗಸಾಹಸಿ ಹುಸೇನ್

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ.

'ದಿ ಲೆಜೆಂಡ್ ಆಫ್ ರಾಮ'

ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅದೊಂದು ಚಿತ್ರಸಹಿತ ಪುರಾಣ, ಪ್ರವಚನದಂತೆ ಅನಿಸಿದ್ದು ಅದರ ದೊಡ್ಡ ಮಿತಿ. ಡ್ರಾಮ್ಯಾಟಿಕ್ ಎಲಿಮೆಂಟ್ಸ್ ರಿಚ್ ಆಗಿದ್ದ ಕಾರಣದಿಂದ ಹೆಚ್ಚು ಕಸರತ್ತಿನ ಅಗತ್ಯವೂ ದೃಶ್ಯ ಸಂಯೋಜನೆಗೆ ಬೇಕಾಗಲಿಲ್ಲ. ಕ್ಯಾಮೆರಾ ಮತ್ತಿತರ ತಂತ್ರಜ್ಞಾನದ ಯಥೇಚ್ಚ ನೆರವೂ ಇತ್ತು. ಹೀಗಾಗಿ ರಮಾನಂದ ಸಾಗರ್ ಕೆಲಸ ಸುಲಭವಿತ್ತು. ತಂತ್ರಜ್ಞಾನದ ಚಮತ್ಕಾರಕ್ಕೆ ಎಲ್ಲವೂ ದಕ್ಕಿಬಿಟ್ಟಿತ್ತು. ಆದರೆ ಅದೇ ಕಥೆ ರಂಗದ ಮೇಲೆ ತರಬೇಕಾದರೆ ದೃಶ್ಯದಲ್ಲಿ ಭವ್ಯತೆ ತರೋದು ತುಸು ತ್ರಾಸಿನ ಕೆಲಸವೇ.
ಇಂಥೆಲ್ಲ ಯೋಚನೆಗಳ ತಾಕಲಾಟದಿಂದ ರಂಗದ ಮೇಲೊಂದು ಭವ್ಯ ರಾಮಾಯಣ ಮೂಡಿಸುವ ಉಮೇದಿ ಹೊತ್ತ ದೆಹಲಿಯ ರಂಗಕರ್ಮಿಯೊಬ್ಬರು 'ದಿ ಲೆಜೆಂಡ್ ಆಫ್ ರಾಮ' ಪ್ರಯೋಗದ ಸಾಹಸಕ್ಕಿಳಿದರು. ಅದಕ್ಕೆ ಅವರು ಆಯ್ದುಕೊಂಡಿದ್ದು ಪ್ರೊಸೀನಿಯಂ ಥಿಯೇಟರ್ ಒಂದನ್ನಲ್ಲ. ಮೂರು ಎಕರೆ ಭೂಮಿಯನ್ನೇ ರಾಮಾಯಣದ ಬ್ಯಾಟಲ್ ಫೀಲ್ಡ್ ಆಗಿ ಮರುಸೃಷ್ಟಿ ಮಾಡುವ ಸಾಹಸಕ್ಕಿಳಿದರು. ಒಂದು ಬೃಹತ್ ಕಥಾಹಂದರವನ್ನು 19 ಸೆಟ್ ನಿರ್ಮಿಸಿ, 35 ಕ್ಯಾರೆಕ್ಟರುಗಳ ಮೂಲಕ ಕಟ್ಟಿಕೊಡುವ ಯತ್ನ ಮಾಡಿದರು. ಅದಕ್ಕೆ ಕನಿಷ್ಠ 100 ಮಂದಿ ರಂಗತಂತ್ರಜ್ಞರು ತಮ್ಮ ಸೃಜನಶೀಲತೆಯನ್ನು ಧಾರೆ ಎರೆದರು. ಅದರ ನೆರವಿನಿಂದಲೇ ಇಡೀ ಭಾರತ ಮತ್ತು ವಿಶ್ವವೇ ಹುಬ್ಬೇರಿಸುವಂಥ ಪ್ರಯೋಗ ನಡೆದೇ ಹೋಯಿತು. ಈ ಪ್ರಯೋಗ ಸಾಕಾರಗೊಂಡು ವರ್ಷಗಳೇ ಸಂದಿವೆ.

ಇದೇ ರಾಮನನ್ನು ರೈಲ್ವೆ ಟ್ರ್ಯಾಕ್ ಮೇಲೆ ತರುವ ಸಾಹಸವೂ ನಡೆಯಿತು. ವಿವಿಧ ಸೆಟ್ ಗಳು ರೈಲು ಹಳಿಗಳ ಮೇಲೆ ಚಲಿಸಿದವು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಫಿಜಿಕಲ್ ಆಗಿ ಶಿಫ್ಟ್ ಆಗುತ್ತಿದ್ದರು. ಆಸನದ ವ್ಯವಸ್ಥೆಯೂ ರೈಲುಗಳ ಹಳಿ ಮೇಲಿತ್ತು. ಇಂಥದೊಂದು ಸಾಹಸಕ್ಕೆ ಕೆಲ ಕೋಟಿ ರೂಪಾಯಿಗಳು ಖರ್ಚಾಗಿತ್ತು.

'ಷಹನಷಾನಾಮಾ'

ಇದೇ ರಂಗಕರ್ಮಿ ಮತ್ತೊಂದು ವಸ್ತುವನ್ನು ಎತ್ತಿಕೊಂಡರು. ಅದು ಭಾರತದ ಬಹುಮುಖ್ಯವಾದ ಇತಿಹಾಸ. 'ಷಹನಷಾನಾಮಾ' ಎನ್ನುವ ಮೊಘಲ್ ಸಾಮ್ರಾಜ್ಯದ ವೈಭವ, ದುರಂತ ಮತ್ತು ರಾಜಕೀಯ ಹೇಳುವ ನಾಟಕವದು. ಇಡೀ ಮೊಘಲ್ ಕಾಲದ ವಾತಾವರಣದ ಮರುಸೃಷ್ಟಿಯ ಕಠಿಣ ಸಾಹಸ ಅದಾಗಿತ್ತು. ಕೋಟೆ ಎಂದರೆ ಕೋಟೆಯೇ, ಸಿಂಹಾಸನವೆಂದರೆ ಆ ಕಾಲದ ಸಿಂಹಾಸನವೇ. ... ಎಲ್ಲ ಅದದೇ ಆಗಿ ಕಾಣಿಸುವ ದೊಡ್ಡ ಸಾಹಸ! ಒಂದು ನಾಟಕ ಯಾವುದೋ ಕಟ್ಟಡದ ಸೀಮಿತ ಜಾಗೆಯಲ್ಲಿ ಸಿಕ್ಕು ಸಾಂಕೇತಿಕವಾಗುವುದಕ್ಕಿಂತ ಹೀಗೆ ತಾನೇ ತಾನಾಗಿ ಒಂದುಕಡೆ ಮರುಸೃಷ್ಟಿಯಾಗಿ ಬಿಡೋದು ಈ ಥರದ ರಂಗಸಾಹಸದ ವೈಶಿಷ್ಠ್ಯ.

ದಿ ಫಿಫ್ಟಿ ಡೇ ವಾರ್

ಕಾರ್ಗಿಲ್ ಯುದ್ಧದ ಸಂದರ್ಭ ದೇಶಪ್ರೇಮ ಉಗ್ರ ಭಕ್ತಿಯ ಸ್ವರೂಪ ತಾಳಿದ್ದ ಸಮಯವದು. '1947ರ ನಂತರ ಇಡೀ ಭಾರತ ಒಗ್ಗಟ್ಟಾಗಿ ದೇಶಕ್ಕಾಗಿ ಬೆಂಬಲಕ್ಕೆ ನಿಂತಿದ್ದು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ' ಎನ್ನುವುದು ಈ ರಂಗಕರ್ಮಿಯ ವಾದ. ಇರಬಹುದು. ಯುದ್ಧದ ವಸ್ತುವನ್ನಿಟ್ಟುಕೊಂಡು ಪ್ರಾಣತೆತ್ತ ಯೋಧರ ಸ್ಮರಣೆಗಾಗಿ ರಂಗಪ್ರಯೋಗವೊಂದು ನಡೆಯಿತು. ಮೆಹ್ರೋಲಿಯಲ್ಲಿ ಆರು ಎಕರೆ ಪ್ರದೇಶ ಕಾರ್ಗಿಲ್ ಯುದ್ಧದ ಮರುಸೃಷ್ಟಿಗೆ ಸಜ್ಜಾಯಿತು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಸ್ಥಳಾಂತರಗೊಳ್ಳಲು ಟ್ರ್ಯಾಕ್ ರೂಪಿಸಲಾಯಿತು. ಅಲ್ಲಲ್ಲಿ ಹಿಮಾಲಯ ವರ್ವತವೇ ನಾಚುವಂಥ ಮಂಜಿನ ಪರ್ವತಗಳು ಸೃಷ್ಟಿಯಾದವು, ನಕಲಿ ಹೆಲಿಕಾಪ್ಟರ್ ಗಳು ಥೇಟು ಯುದ್ಧ ವಿಮಾನಗಳಂತೆ ಆರ್ಭಟಿಸಿದವು. ಗನ್ ಪೌಡರ್ ನಿಂದ ಮದ್ದು, ಗುಂಡು, ರಾಕೆಟ್ ಲಾಂಚರ್ ಗಳು ಅಬ್ಬರಿಸಿದವು. ಇಡೀ ರಂಗಭೂಮಿ ಯುದ್ಧಭೂಮಿಯ ರೌದ್ರಾವತಾರ ತಾಳಿತ್ತು. ಸೈನಿಕರ ವೀರಾವೇಶ, ಗಾಯಗೊಂಡ ಯೋಧರ ಆಕ್ರಂದನ, ಯುದ್ಧದ ಭೀಕರತೆ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿರಲೇಬೇಕು... ಹೀಗೆ 'ದಿ ಫಿಫ್ಟಿ ಡೇ ವಾರ್' ರಂಗಪ್ರಯೋಗ ನಡೆದು ಹಲವಾರು ಪ್ರದರ್ಶನಗಳನ್ನು ಅಲ್ಲೇ ಕಂಡಿತು.

ಇಂಥ ಅನೇಕ ಸಾಹಸಗಳನ್ನು ಮಾಡಿದ ದೆಹಲಿಯ ರಂಗಕರ್ಮಿ ಭಾರತೀಯ ರಂಗಭೂಮಿಯನ್ನು ಒಂದು ಹೊಸ ಆಯಾಮಕ್ಕೆ ಕೊಂಡೊಯ್ದರು. ಅವರೇ ಅಮೀರ್ ರಜಾ ಹುಸೇನ್.
ವಿಶೇಷವಾಗಿ ದೆಹಲಿ ರಂಗಭೂಮಿಗೆ ಅತ್ಯಂತ ಪರಿಚಿತ ಹೆಸರು. ನೂರಾರು ನಾಟಕಗಳನ್ನು ನಿರ್ದೇಶಿಸಿದ, ಸ್ವತಃ ನಾಟಕಕಾರರೂ ಆದ ಅಮೀರ್ ರಜಾ ಹುಸೇನ್ ಇಂಥ ಅದೆಷ್ಟು ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಹುಸೇನ್, ರಂಗಭೂಮಿಯನ್ನೇ ತಮ್ಮ ಬದುಕಿನ ಬಹುದೊಡ್ಡ ಕನಸಾಗಿಸಿಕೊಂಡಿದ್ದು, ಮಾರ್ಗವಾಗಿಸಿಕೊಂಡಿದ್ದೊಂದು ರೋಚಕ ಇತಿಹಾಸ. ಇವರು ಕೋಟಿ ಹುಸೇನ್ ಎಂದೇ ಭಾರತೀಯ ರಂಗಭೂಮಿಯಲ್ಲಿ ಪರಿಚಿತರು.

ನಮ್ಮ ನಾಡಿನ ಲೇಖಕ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ಒಂದು ದೊಡ್ಡ ಸಾಹಿತ್ಯ ಕೃತಿ. ಅದನ್ನು ರಂಗದ ಮೇಲೆ ಪಾತ್ರಗಳ ಮೂಲಕ ನಡೆದಾಡಲು ಬಿಡುವ ಸಾಹಸಕ್ಕೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರ ಸಿ. ಬಸವಲಿಂಗಯ್ಯ ಇಳಿದಿದ್ದಾರೆ.
ಹೊಸತನದ ಕೊರತೆಯಿಂದ ಕಳೆಗುಂದಿದ ನಮ್ಮ ರಂಗಭೂಮಿಗೆ ಇಂಥ ಸಾಹಸದ ಅಗತ್ಯ ಇತ್ತು. ಆದರೂ ಹುಸೇನ್ ಥರ ಕೋಟಿ ಕೋಟಿ ಸುರಿಯುವ ಕಾಸ್ಟ್ಲೀ ರಂಗಭೂಮಿ ಬೇಕಿತ್ತಾ? ಎನ್ನುವ ಪ್ರಶ್ನೆಯೂ ಅರ್ಥಪೂರ್ಣ ಮತ್ತು ಮಹತ್ವದ್ದೇ. ನಾಟಕ ನೋಡುವ ಮತ್ತು ಇಂಥ ರಂಗಸಾಹಸಗಳ ಬಗ್ಗೆ ಕುತೂಹಲ ನನಗೂ ಇದೆ. ನೋಡೋಣ. ಒಟ್ಟಾರೆ ಬಸು ಇಂಥದೊಂದು ಸಾಹಸಕ್ಕೆ ಕೈಹಾಕಿದ್ದು ಕೇಳಿದಾಗ ಅಮೀರ್ ರಜಾ ಹುಸೇನ್ ಸಾಹಸದ ರಂಗಭೂಮಿ ತಟ್ಟನೆ ನೆನಪಾಯ್ತು.
ಮಲೆಗಳಲ್ಲಿ ಮದುಮಗಳನ್ನು ಕಂಡು ಬರುತ್ತೇನೆ. ಸಾಧ್ಯವಾದರೆ ಪ್ರಯೋಗದ ಬಗ್ಗೆ ಇಲ್ಲಿ ಬರೀತೀನಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...