ವಿಷಯಕ್ಕೆ ಹೋಗಿ

ಬಳ್ಳಾರಿ ಕೆ ಶೋಲೆ!


ರೆಡ್ಡಿ/ಶ್ರೀರಾಮುಲು ಫೈಲ್:
ಖಾಸಗಿ ಫೈನಾನ್ಸ್ (Ennoble Savings and Investment India Pvt. Ltd) ಕಂಪೆನಿ ತೆಗೆದು ಬಳ್ಳಾರಿ ತುಂಬ ರೆಡ್ಡಿ (ಗಾಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ) ಶ್ರೀಮಂತಿಕೆಯ ಧೂಳು ಎಬ್ಬಿಸಿದ್ದರು. 200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಇಕ್ಕಟ್ಟಿಗೂ ಸಿಕ್ಕಿತ್ತು. ಈಗದು ಇತಿಹಾಸ. ಯಾವಾಗ ಚೀನಾಗೆ ಬಳ್ಳಾರಿಯ ಅದಿರು ಸಾಗತೊಡಗಿತೋ ಇವರ ನಸೀಬೇ ಚೇಂಜ್ ಆಯ್ತು. ಬಿಸಿಲು ನಾಡಿನ ರಸ್ತೆಯ ಮೇಲೇಳುತ್ತಿದ್ದ ಧೂಳು ಆಕಾಶಕ್ಕೆ ಟ್ರಾನ್ಸಫರ್ ಆಯ್ತು. ಅಕ್ರಮ ಅದಿರು ಸಾಗಾಣಿಕೆಯ ಆರೋಪದ ಹಿನ್ನೆಲೆಯಲ್ಲಿ ಇವರನ್ನು 'ಅದಿರುಗಳ್ಳರು' ಎಂದು ಟೀಕಿಸಲಾಗುತ್ತಿದೆ.
* * *
ಶ್ರೀರಾಮುಲು:
ಬಳ್ಳಾರಿ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು.
ಪ್ರಕರಣಗಳು:
1 ಕಾಂಗ್ರೆಸ್ ಅಭ್ಯರ್ಥಿ ಲಾಡ್ ಕಾರುಗಳನ್ನು ಸುಟ್ಟು ಹಾಕಿದ್ದು.
2 ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರಜ್ಞೆತಪ್ಪುವಂಥ ಸ್ಥಿತಿಗೆ ಬರುವ ಹಾಗೆ ಥಳಿಸಿದ್ದು.
ಇವೆರಡೂ ಪ್ರಕರಣಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ , ಶ್ರೀರಾಮುಲು ಬೆನ್ನಿಗೆ ನಿಂತುಕೊಂಡರು. ಗಣಿ ವ್ಯವಹಾರದಲ್ಲೂ ಇಬ್ಬರೂ ಸಾಥಿ. ಶ್ರೀರಾಮುಲು ಹಿಂದುಳಿದ ವರ್ಗಕ್ಕೆ ಸೇರಿದವರು. ರೆಡ್ಡಿ ಪ್ರಬಲ ಕೋಮಿನವರು. ಒಂದೇ ಪರಿವಾರದ ಸದಸ್ಯರಂತಿದ್ದಾರೆ. "ಶೋಲೆ" ಸಿನಿಮಾದ ಧರ್ಮೆಂದ್ರ ಮತ್ತು ಅಮಿತಾಬ್ ಜೋಡಿಯಂತೆ ಇವರು ಅನಿಸುತ್ತಾರೆ.

ಏ ದೋಸ್ತಿ ಹಮ್ ನಹೀ ಛೋಡೆಂಗೆ, ತೋಡೆಂಗೆ ದಮ್ ಮಗರ್ ತೇರಾ ಸಾಥ್ ನಾ ಛೋಡೆಂಗೆ... ಎಂದು ಒಂದೊಮ್ಮೆ ಬಳ್ಳಾರಿ ಗಲ್ಲಿ ಗಲ್ಲಿಗಳಲ್ಲಿ ಇಬ್ಬರೂ ಥೇಟು 'ಶೋಲೆ' ಸಿನಿಮಾದ ಜೋಡಿಯಂತೆ ದೋಸ್ತಿ ಹಾಡು ಹಾಡಿದ್ದಿದೆ.

ಸ್ವಲ್ಲ ಬಳ್ಳಾರಿ ಪಾಲಿಟಿಕ್ಸ್ ಮೇಲೊಂದು ಪ್ಯಾನ್.. :

ಬಳ್ಳಾರಿ ಇಡೀ ದೇಶದ ರಾಜಕೀಯ ಶಕ್ತಿ ಕೇಂದ್ರವೂ ಆಗಿದೆ. ಸೋನಿಯಾ ಗಾಂಧಿ ಇಲ್ಲಿ ಇಲೆಕ್ಷನ್ ನಿಂತರು. ಗೆದ್ದರು. ಸೋತ ಬಿಜೆಪಿಯ ಸುಷ್ಮಾ ಸ್ವರಾಜ್ ಬಿಜೆಪಿಯ "ಮಹಾಲಕ್ಷ್ಮಿ"ಯನ್ನು ಇಲ್ಲೇ ಪ್ರತಿಷ್ಠಾಪಿಸುವಲ್ಲಿ ತೊಡಗಿಕೊಂಡರು. ವರಮಹಾಲಕ್ಷ್ಮಿ ವೃತ ಮಾಡಿ, ಬಳ್ಳಾರಿಯ ನೆಲದಲ್ಲಿ 'ಮಹಾಲಕ್ಷ್ಮಿ ಕೃಪೆ'ಯಿಂದ ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಹರಕೆ ಹೊತ್ತಿದ್ದರೇನೋ! ಅಂತೂ 1999ರ ಲೋಕಸಭಾ ಚುನಾವಣೆಯಿಂದೀಚೆಗೆ ಬಿಜೆಪಿ ಗರಿಗೆದರಿತು.
ಇಲ್ಲಿ ಸುಷ್ಮಾ , ದಿವಾಕರ ಬಾಬು ಉತ್ತರಾಧಿಕಾರಿ ಎಂದೇ ಬಿಂಬಿತವಾದ ಶ್ರೀರಾಮುಲು 'ಮಹಾಲಕ್ಷ್ಮಿ'ಯ ಭಾರೀ ಕೃಪೆಯಿದ್ದರೂ ಸೋತರು ಎನ್ನುವುದು ಗಮನಾರ್ಹ. ಜನತೆ ಸೋನಿಯಾ 'ಕೈ' ಬಿಡಲಿಲ್ಲ. ಸೋತ ಸುಷ್ಮಾಗೆ ಸಿಕ್ಕಿದ್ದು ರೆಡ್ಡಿ  ಮತ್ತು ಶ್ರೀರಾಮುಲು ಎಂಬ ಮಾನಸ ಪುತ್ರರು. ಬಿಜೆಪಿ ಆಶಾಕಿರಣಗಳು!

2001ರ ಬಳ್ಳಾರಿ ಮುನ್ಸಿಪಲ್ ಎಲೆಕ್ಷನ್ ನಲ್ಲಿ ಬಿಜೆಪಿಯ 'ಮಹಾಲಕ್ಷ್ಮಿ' ಕರಾಮತ್ತು ಮಾಡಿಯೇಬಿಟ್ಟಳು. ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮುನ್ಸಿಪಲ್ ಅನ್ನು ರೆಡ್ಡಿ ಬ್ರದರ್ಸ್, ಶ್ರೀರಾಮುಲು ಅನಾಮತ್ತಾಗಿ ಕಿತ್ತು ಕಮಲದ ದಳದಲ್ಲಿ ಇಟ್ಟರು. ಬಿಜೆಪಿ 'ಮಹಾಲಕ್ಷ್ಮಿ' ಕಮಲದ ಮೇಲೆ ಆರಾಮಾಗಿ ತೇಲಲಾರಂಭಿಸಿದ್ದು ಆಗಲೇ. ಈ ಮಹಾಲಕ್ಷ್ಮಿ 2004ರ ವಿಧಾನಸಭಾ ಚುನಾವಣೆಯಲ್ಲಿ ಮತ್ತಷ್ಟು ಕಂಗೊಳಿಸಿದಳು. 1952ರಿಂದ ಕಾಂಗ್ರೆಸ್ಸಿಗೇ ಅಂಟಿಕೊಂಡಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು 'ಮಹಾಲಕ್ಷ್ಮಿ' ಬಿಜೆಪಿಗೆ ತಂದುಕೊಟ್ಟಳು. ರೆಡ್ಡಿ ಗೆದ್ದರು. ಜಿಲ್ಲಾ, ತಾಲೂಕು ಪಂಚಾಯತು, ಸ್ಥಳೀಯ ಚುನಾವಣೆಗಳೆಲ್ಲದರಲ್ಲಿ 'ಮಹಾಲಕ್ಷ್ಮಿ' ಬಿಜೆಪಿಗೆ ಗೆಲುವು ತರುತ್ತಲೇ ಸಾಗಿದಳು. ರೆಡ್ಡಿ ಬ್ರದರ್ಸ್, ಶ್ರೀರಾಮುಲು ಗೆಲುವಿನ ಗಾಲಿ ಉರುಳುತ್ತಲೇ ಸಾಗಿತು. ರೆಡ್ಡಿ-ಶ್ರೀರಾಮುಲು ಬಳ್ಳಾರಿಯ "ಶೋಲೆ"ಗಳಾದರು..
* * *



'ಶೋಲೆ' ಚಿತ್ರದ ಕಥೆ ಹೀಗಿದೆ:
ಪೊಲೀಸ್ ಅಧಿಕಾರಿ ಚೌಧರಿ ಢಾಕೂ ಗಬ್ಬರಸಿಂಗ್ ಜತೆ ಜಟಾಪಟಿಗೆ ಬೀಳುತ್ತಾನೆ. ಆತನಿಗೆ ಚೌಧರಿ ಜೈಲಿನ ರುಚಿ ಬೇರೆ ತೋರಿಸಿರುತ್ತಾನೆ. ಸೇಡಿನ ಭಾವದಿಂದ ಚೌಧರಿಯ ಕುಟುಂಬದ ಮೇಲೆ ಗಬ್ಬರ್ ದಾಳಿ ನಡೆಸಿ ಕುಟುಂಬವನ್ನೇ ಮುಗಿಸಿಹಾಕುತ್ತಾನೆ. ಪ್ರತಿಯಾಗಿ ಚೌಧರಿ ಅವನನ್ನು ಅಟ್ಟಾಡಿಸಿಕೊಂಡು ಹೋಗುತ್ತಾನೆ. ಗಬ್ಬರ್ ಈತನ ಕಟ್ಟಿಹಾಕಿ 'ಏ ಹಾಥ್ ಮುಝೆ ದೇದೇ ಠಾಕೂರ್' ಎಂದು ಕಿತ್ತುಕೊಂಡು ಬಿಡುತ್ತಾನೆ. ಸೋತು, ಕೈ ಕಳಕೊಂಡ ಚೌಧರಿ ಸೇಡು ತೀರಿಸಿಕೊಳ್ಳುವ ಒಂದೇ ಗುರಿಯಿಂದ ದಾರಿ ಹುಡುಕಾಡಲಾರಂಭಿಸುತ್ತಾನೆ. ಆಗ ನೆನಪಾದವರೇ ವೀರೂ ಮತ್ತು ಜೈ ಎನ್ನುವ ಮಹಾ ಕಿಲಾಡಿಗಳು. ಕಳ್ಳತನ, ಚಾಲಾಕಿತನದಿಂದ ಶ್ರೀಮಂತರಾಗಲು ಯತ್ನಿಸಿ ಆಗಾಗ ಜೈಲು ಸೇರುತ್ತಲೇ ಇದ್ದ ಇಬ್ಬರನ್ನು ಬಳಸಿಕೊಂಡು ತನ್ನ ಶತ್ರು ಬೇಟೆಗೆ ಚೌಧರಿ ಯೋಜನೆ ರೂಪಿಸುತ್ತಾನೆ. ಅವರ ಶ್ರಮ, ತಾಕತ್ತು ಮತ್ತು ಚಾಕಚಕ್ಯತೆಯನ್ನು ತನ್ನ ಕೇವಲ ಗುರಿ ಸಾಧನೆಗೆ ಬಳಸಿಕೊಳ್ಳುತ್ತಾನೆ. ಚೌಧರಿ ಅಣತಿಯಂತೆ ವೀರೂ ಮತ್ತು ಜೈ ತಮ್ಮ ಜೀವ ಲೆಕ್ಕಿಸದೇ ಶತ್ರು ಪಾಳಯದತ್ತ ಮುನ್ನುಗ್ಗತ್ತಲೇ ಸಾಗುತ್ತಾರೆ. ಕ್ಲೈಮ್ಯಾಕ್ಸ್ ನಲ್ಲಿ ಜೈ ಗೆಳೆಯನ ಜೀವ ಉಳಿಸಿ ವೀರಮರಣವನ್ನಪ್ಪುತ್ತಾನೆ. ಚೌಧರಿ ಗುರಿ ಈಡೇರಿಕೆಗೆ ವೀರೂ ನೆರವಾಗುತ್ತಾನೆ.
* * *


'ಬಳ್ಳಾರಿ ಕೆ ಶೋಲೆ' ಕಥೆ...
ಬಳ್ಳಾರಿ ಲೋಕಸಭಾ ಎಲೆಕ್ಷನ್ ನಲ್ಲಿ 'ಮಹಾಲಕ್ಷ್ಮಿ'ಯ ತಾವರೆಯಿಂದಲಂಕೃತ 'ಕೈ'ಗಳನ್ನು ಜನ ಕಿತ್ತುಕೊಂಡರು. ಚೌಧರಿಯಂತೆ ಸೋತು ಸುಣ್ಣವಾಗಿದ್ದ ಸುಷ್ಮಾ (ಪ್ರಧಾನಿ ಕನಸಿನ ಬ್ರಾಹ್ಮಣ ಕುಲದ ಹೆಣ್ಣು) ತಮ್ಮ ಕನಸಿನ ಸಾಕಾರಗಳಿಗಾಗಿ ಬಳ್ಳಾರಿಯ ಮಾನಸ ಪುತ್ರರನ್ನು ಬೆಳೆಸುವ, ಬಳಸಿಕೊಳ್ಳುವ ಕೈಂಕರ್ಯ ಶುರುವಿಟ್ಟುಕೊಂಡರು (ಇದು ವಿರೋಧ ಪಕ್ಷಗಳ ಟೀಕೆ ಕೂಡ). ಅದು ಒಳ್ಳೆಯ ಫಲಿತಾಂಶವನ್ನೇ ತರುತ್ತ ಸಾಗಿದೆ. ದಕ್ಷಿಣದಲ್ಲಿ ಬಿಜೆಪಿ ಸರ್ಕಾರ ರಚನೆಯಾದುದರಲ್ಲಿ ಬಳ್ಳಾರಿ "ಮಹಾಲಕ್ಷ್ಮಿ"ಯ ಪಾತ್ರ ದೊಡ್ಡದೇ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ 'ಬಳ್ಳಾರಿ ಕೆ ಶೋಲೆ'ಗಳನ್ನು ಚೆನ್ನಾಗೇ ಬಳಸಿಕೊಂಡರು. ಮತ್ತು ನೋಡಿಕೊಂಡರು.

(ಸುಷ್ಮಾ, ಯಡಿಯೂರಪ್ಪ ಕಂಡಾಗೆಲ್ಲ 'ಶೋಲೆ' ಚಿತ್ರದ ಸಂಜೀವಕುಮಾರ್ ನಿರ್ವಹಿಸಿದ ವಿಕಲಾಂಗ ಚೌಧರಿಯ ಪಾತ್ರ ನೆನಪಿಗೆ ಬರುತ್ತದೆ. ಚೌಧರಿ ಪಾತ್ರಕ್ಕೆ ಚಿತ್ರದಲ್ಲಿ ಬೇರೆಯದೇ ವೇಟೇಜ್ ಇದೆ. ಗುರಿ ಸಾಧನೆಗೆ ಇತರರನ್ನು ಬಳಸಿಕೊಳ್ಳುವ ಚಿತ್ರದಲ್ಲಿನ ಈ ತಂತ್ರವಷ್ಟೇ ಇಲ್ಲಿ ಮುಖ್ಯ. ಅದಕ್ಕಷ್ಟೇ ಈ ರೆಫರೆನ್ಸ್ ಅನ್ವಯ )

ದೆಹಲಿಯಲ್ಲಿದ್ದುಕೊಂಡು ಸುಷ್ಮಾ ಮಾಡೋದೇಲ್ಲ ಏನು? ಈ 'ಬಳ್ಳಾರಿ ಕೆ ಶೋಲೆ'ಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮತ್ತು ರಾಜ್ಯ ರಾಜಕಾರಣವನ್ನು ಒಟ್ಟೊಟ್ಟಿಗೆ ಅಲ್ಲಾಡಿಸುತ್ತಲೇ ಇರೋದಲ್ಲವೇ? ಇದಕ್ಕೆ 'ಕುಲಬಾಂಧವ' ಅನಂತಕುಮಾರ್ ಸಾಥ್ ಇದೆ ಎನ್ನುವ ವದಂತಿಗಳಿವೆ. ಯಾಕೆಂದರೆ ಬಿಜೆಪಿ ಹಿಂದೂತ್ವ ಮಂತ್ರ ಹೇಳಿಕೊಂಡು ಅಧಿಕಾರಕ್ಕೆ ಬಂತು ತಾನೆ? ಅದರ ಪಾಲನೆ ಅಂದುಕೊಂಡಂತೆ ಆಗುತ್ತಿಲ್ಲ. ಅಂದರೆ ಹಿಂದೂತ್ವದ ಮುಂಚೂಣಿ ನಾಯಕರಾದ ಬ್ರಾಹ್ಮಣರು ರಾಜ್ಯ ರಾಜಕೀಯದ ಮುಂಚೂಣಿಗೆ ಬರುತ್ತಿಲ್ಲ ಎನ್ನುವುದು ಬಿಜೆಪಿ ಒಳಗಿನ ಕೆಲವರ ಸಂಕಟ. ಇಂಥ ಹಲವರಿಗೆಲ್ಲಾ ಇರುವ ಒಳುರಿ ಏನು ಗೊತ್ತಾ? ಯಡಿಯೂರಪ್ಪ ಬ್ರಾಹ್ಮಣೇತರ. ಅಥವಾ ಹಿಂದೂ ಅಲ್ಲ ವೀರಶೈವ! (ಚಿಮೂ ಅಂಥವರು ವೀರಶೈವ ಅಥವಾ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮವಲ್ಲ ಎಂದು ನಿರೂಪಿಸಲೆತ್ನಿಸುತ್ತಾರೆ ಅದು ಬೇರೆ ವಿಚಾರ. ಈ ಟೆಕ್ನಿಕಲ್ ಪ್ರಾಬ್ಲಂ ನಿಂದ ತನ್ನ ಕುಲಬಾಂಧವರೊಬ್ಬರು ಸಿಎಂ ಆಗಿದ್ದಕ್ಕೆ ವೃತಾ ತಕರಾರುಗಳು ಏಳಬಾರದಲ್ಲ ಎಂದುಕೊಂಡು ಲಿಂಗಾಯತರು/ಬ್ರಾಹ್ಮಣೇತರರು 'ಮೌನಿ'ಯಾಗಿದ್ದಾರೆ.)

'ಬಳ್ಳಾರಿ ಕೆ ಶೋಲೆ' ಗೆ ಒಂದಷ್ಟು ಹೋಮದ ತುಪ್ಪ ಸುರಿದಾಗೆಲ್ಲ ಇಲ್ಲಿ ಸಿಎಂ ಉರಿ ಉರಿಯಾಗುತ್ತಾರೆ. ಕುರ್ಚಿ ಅಲುಗಾಡಲಾರಂಭಿಸುತ್ತದೆ. ಹೀಗೆ ತನ್ನೊಳಗಿರುವ ಶತ್ರುವಿನ ಮಸಲತ್ತುಗಳು ರಾಜ್ಯ ಬಿಜೆಪಿಗೆ ಸವಾಲಾಗಿ ನಿಂತಿವೆ. ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಯಡಿಯೂರಪ್ಪ ಕೂಡ ಹೊಂಚು ಹಾಕುತ್ತಲೇ ಇದ್ದರು. ಕಾಂಗ್ರೆಸ್ ಸಿಬಿಐ ತನಿಖೆಗೆ ಒಪ್ಪುವಂತೆ ಮಾಡುತ್ತಿರುವ ಪಾದಯಾತ್ರೆ ಯಡಿಯೂರಪ್ಪಗೆ ಪರೋಕ್ಷ ಚಾನ್ಸ್ ಆಗೇ ಕಾಣಿಸುತ್ತದೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ 'ಬಳ್ಳಾರಿ ಕೆ ಶೋಲೆ' ಮೇಲೆ ತನ್ನೀರು ಹಾಕುವ ಮೂಲಕವೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ. ಸುಷ್ಮಾ ಛೂಬಿಟ್ಟರೆನ್ನಲಾದ ವೀರೂ-ಜೈ (ರೆಡ್ಡಿ-ಶ್ರೀರಾಮುಲು) ಜೋಡಿ ಅಜೆಂಡಾ ಶುರುವಿಟ್ಟುಕೊಂಡಿದೆ. ಶ್ರೀರಾಮುಲು ತಲೆಬೋಳಿಸಿಕೊಂಡು ಯಾರದೋ ತಿಥಿ ಮಾಡಲು ಹೊರಟಂತೆ ಕಾಣಿಸುತ್ತಿದ್ದಾರೆ (ಬಚ್ಚೇಗೌಡರ ಕಮೆಂಟು ನೆನೆದು)! ಅಥವಾ ಸ್ವತಃ ರಾಜಕೀಯ ತಿಥಿ ಕಾಣಲು ಹೊರಟಿದ್ದಾರೋ? ಅಂತೂ ರೆಡ್ಡಿ ಬ್ರದರ್ಸ್ ಮೇಲಿನ ನಿಷ್ಠೆ, 'ಅಮ್ಮ' ಸುಷ್ಮಾ ಮೇಲಿನ ಕುರುಡು ಮಮತೆ ಅವರನ್ನು ಶೋಲೆ ಪಿಕ್ಚರಿನ ಜೈ ಹಾಗೆ ಮುನ್ನುಗ್ಗುವಂತೆ ಮಾಡಿದೆ.

ಇತ್ತ ಕಾಂಗ್ರೆಸ್ಸಿನಲ್ಲಿರುವ ಚೌಧರಿಗಳೇನೂ ಕಮ್ಮಿ ಇಲ್ಲ. "ಲೋಹಾ ಲೋಹೆ ಕೋ ಕಾಟತಾ ಹೈ" (ಮುಳ್ಳನ್ನು ಮುಳ್ಲಿಂದಲೇ ತೆಗೆಯಬೇಕು ಎನ್ನುವರ್ಥದಲ್ಲಿ) ಎಂದುಕೊಳ್ಳುತ್ತಾ ಸಿದ್ದರಾಮಯ್ಯ ಹೆಗಲ ಮೇಲೆ ತಮ್ಮ ಗುರಿಗಳನ್ನಿಟ್ಟು ಪಾದಯಾತ್ರೆಯಲ್ಲಿ ಸಂತರ ಹಾಗೆ ಹೆಜ್ಜೆ ಹಾಕುತ್ತಾ, ಡೋಲು ಬಾರಿಸುತ್ತಾ ಸಾಗಿದ್ದಾರೆ. ಅಕ್ರಮ ಗಣಿಗಾರಿಕೆ ಅಥವಾ ರೆಡ್ಡಿ ದರ್ಬಾರು ಅಂತ್ಯಕ್ಕಾಗಿ ಹೊರಟ ಪಾದಯಾತ್ರೆ ಈಗ ಸಿದ್ದರಾಮಯ್ಯ ವರ್ಸಸ್ ಶ್ರೀರಾಮುಲು ಜಂಗಿ ನಿಕಾಲಿ ಕುಸ್ತಿಯೂ ಆಗಿಹೋಗುತ್ತಿದೆ. ಹಾಗೆ ನೋಡಿದರೆ ರಾಜ್ಯದಲ್ಲಿ ಸಿದ್ದರಾಮಯ್ಯ-ಶ್ರೀರಾಮುಲು 'ಶೋಲೆ' ಪಿಕ್ಚರಿನ ವೀರೂ-ಜೈ ಜೋಡಿಯಂತಾಗಬೇಕಿತ್ತು. ಹಾಗಾಗಿದ್ದರೆ ಅಹಿಂದ ವರ್ಗಕ್ಕೊಂದು ಸಿಎಂ ಕುರ್ಚಿ ಸಲೀಸಾಗಿ ಒಲಿದುಬರುತ್ತಿತ್ತೇನೋ? ಶ್ರೀರಾಮುಲು ಕೂಡ ಕೆಳಸಮುದಾಯದಿಂದಲೇ ಬಂದವರು. ಸಿದ್ದರಾಮಯ್ಯ ಅವರಂಥ ಮುತ್ಸದ್ದಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಹಾಗಾಗಲು ಈ ರಾಜಕೀಯದೊಳಗಿನ "ಚೌಧರಿ"ಗಳು ಬಿಡಬೇಕಲ್ಲ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ