ನಾ ತುಕಾರಾಂ ಅಲ್ಲ
ಮೂಲ: ಹೆರ್ಬ್ ಗಾರ್ಡನರ್ ಅವರ ಐ ಯಾಮ್ ನಾಟ್ ರಾಪಪೋರ್ಟ್
ಕನ್ನಡಕ್ಕೆ: ಸುರೇಂದ್ರನಾಥ್
ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ.
ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು.
ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರೆ ಕೊಟ್ಟ ಕಾಸಿಗೆ ಮೋಸವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದೇನೋ.
ನಾಟಕದಲ್ಲಿ ಅಷ್ಟಾಗಿ ನಾಟಕೀಯ ಘಟನೆಗಳೇ ಘಟಿಸುವುದಿಲ್ಲ. ಅಂಥ ತಿರುವುಗಳೂ ಇಲ್ಲಿ ಸಂಭವಿಸುವುದಿಲ್ಲ. ಇದ್ದರೂ ಅವು ತುಂಬ ಸಾಂಕೇತಿಕವಾಗಿವೆ.
ಮಧ್ಯದಲ್ಲಿ ಒಬ್ಬ ಹುಡುಗಿ ಬರ್ತಾಳೆ. ತನ್ನ ಪಾಡಿಗೆ ತಾನು ಪಾರ್ಕನಲ್ಲಿ ಕೂತು ನಂತರ ಮಾಯವಾಗುತ್ತಾಳೆ. ಒಬ್ಬ ಮುದುಕನ ಕಚೇರಿಯ ಅಧಿಕಾರಿ ವಾಕ್ ಗೆಂದು ಬಂದು ಹೋಗುತ್ತಾನೆ. ಮತ್ತೊಮ್ಮೆ ಆಟೊ ಡ್ರೈವರ್ ಬರ್ತಾನೆ, ಕೊನೆಗೆ ಮತ್ತೊಬ್ಬ ಮುದುಕನ ಮಗಳು ಬರ್ತಾಳೆ... ಇವೆಲ್ಲ ಬಂದು ಹೋಗುವ ಪಾತ್ರಗಳೇ. ಇವುಗಳ ಜತೆಗಿನ ಒಡನಾಟ ಈ ಎರಡೂ ಪಾತ್ರಗಳಿಗೆ ಅಷ್ಟಕ್ಕಷ್ಟೇ. ತಂದೆ-ಮಗಳ ದೃಶ್ಯ ಸೆಂಟಿಮೆಂಟಲ್ ದೃಷ್ಟಿಯಿಂದ ಪ್ರೇಕ್ಷಕರ ಚಣಕಾಲ ಹಿಡಿದು ಕೂರಿಸಿತಷ್ಟೇ. ಅಲ್ಲೂ ಬರಿಯ ಮಾತುಗಳು. ಹೀಗಾಗಿ ಎಲ್ಲವನ್ನು ಮಾತುಗಳಲ್ಲೇ ಕಟ್ಟಿಕೊಡುವ ಮಿತಿಗೆ ಇಡೀ ಪ್ರಯೋಗ ಒಳಪಡುತ್ತದೆ. ಪ್ರೇಕ್ಷಕರು ಪಾತ್ರಗಳ ಮಾತಿನ ಮೂಲಕವೇ ಆದ ಘಟನೆಗಳನ್ನು ಕಣ್ಮುಂದೆ ತಂದುಕೊಳ್ಳಬೇಕು. ಭಾಷೆಯ ಧ್ವನಿ ಮತ್ತು ಸಂಭಾಷಣೆಯ ಶಾರ್ಪನೆಸ್ ಗ್ರಹಿಸಬಲ್ಲವರು ಕೊಂಚ ಭಿನ್ನವಾಗಿ ಪ್ರಯೋಗದ ನಾಟಕ ವಸ್ತುವನ್ನು ಒಳಕ್ಕಿಳಿಸಿಕೊಳ್ಳಬಲ್ಲರೇನೋ!..
ದೃಶ್ಯ ಜೋಡಣೆಗಂತೂ ನಾಟಕದಲ್ಲಿ ಅವಕಾಶ ಕಮ್ಮಿ. ಹೀಗಾಗಿ ಇದು ತುಂಬ ಸರಳವಾದ ಪ್ರಯೋಗ. ಇಂಥದ್ದಕ್ಕೆ ನಿರೂಪಣೆ ಸರಳವೆನಿಸಿದರೂ ನಟರ ಪ್ರಬುದ್ಧತೆಯನ್ನೇ ಇಡೀ ಪ್ರಯೋಗ ಆಶ್ರಯಿಸಬೇಕಾಗುವುದು ಅನಿವಾರ್ಯ.
ದೃಶ್ಯದಿಂದ ದೃಶ್ಯಕ್ಕೆ ನಾಟಕ ಬೆಳೆಯುತ್ತ ಹೋದಂತೆ ಅದರ ಭಾವನೆಗಳೂ ವಿಸ್ತಾರಗೊಳ್ಳುತ್ತ ಸಾಗುತ್ತವೆ. ಈ ಭಾವ ಪ್ರಪಂಚದಲ್ಲಿ ಪ್ರೇಕ್ಷಕರೂ ಕೂಡ ನಿಧಾನವಾಗಿ ಹರಿದಾಡುತ್ತಾರೆ. ತಮ್ಮ ಭಾವಕೋಶದಲ್ಲಿ ಇದನ್ನು ಇಟ್ಟುಕೊಂಡು ಕೊಂಚ ಚಡಪಡಿಸುತ್ತಾರೆ, ನಿರಾಳರಾಗುತ್ತಾರೆ, ನಗುತ್ತಾರೆ, ಮರುಗುತ್ತಾರೆ, ಮನರಂಜನೆಗೂ ಹಾತೊರೆಯುತ್ತಾರೆ. ಇದೆಲ್ಲ ನಾಟಕೀಯ ಅಂಶಗಳ ಮೂಲಕ ಪ್ರೇಕ್ಷಕರಿಗೆ ಸಂದಾಯವಾಗುವಂಥದು. ಇಂಥ ರಂಗಕ್ರಿಯೆ ಅತ್ಯಂತ ಮುಖ್ಯವಾಗುತ್ತದೆ. ನಾಟಕೀಯ ಘಟನೆಗಳಲ್ಲಿ ಪ್ರೇಕ್ಷಕರು ತಮ್ಮದೂ ಒಂದನ್ನು ಕಲ್ಪಿಸಿಕೊಳ್ಳುವುದಕ್ಕೆ ಇದೆಲ್ಲ ನೆರವಾಗುತ್ತದೆ. ಆದರೆ, ಈ ನಾಟಕದಲ್ಲಿ ಇಂಥ ರಂಗಕ್ರಿಯೆಗೆ ಅವಕಾಶ ಕಮ್ಮಿ ಎನ್ನುವುದೇ ಒಂದು ದೊಡ್ಡ ಕೊರತೆ.
ಇಲ್ಲಿ ಬರಿಯ ಮಾತುಗಳು ಇರೋದರಿಂದ ಭಾಷೆಯ ಸೊಗಸಿಗಿನಿಂದ ಮತ್ತು ವಿಷಯವನ್ನು ತೇಲಿಸಿಬಿಟ್ಟ ಪರಿಯಿಂದಾಗಿ ಪ್ರೇಕ್ಷಕರಲ್ಲಿ ಆಸಕ್ತಿ ಆರಂಭಕ್ಕೆ ಕೆರಳಿಸಬಹುದೇನೋ. ಮುಂದೆ ಕ್ರಮೇಣ ಅದೇ ಏಕತಾನವಾಗಿ ನಾಟಕದ ಮಾತುಗಳು ಪ್ರವಚನದ ಹಾದಿ ಹಿಡಿಯತೊಡಗುತ್ತವೆ.
ಇಲ್ಲಿನ ಎರಡು ಪಾತ್ರಗಳು ಓಲ್ಡ್ ಏಜ್ ಸಮಸ್ಯೆಗಳನ್ನು ಪ್ರತಿನಿಧಿಸುವಂಥವು. ಒಂದು ವೃದ್ಧಾಪ್ಯವನ್ನು ಸಹಜ ಎಂಬಂತೆ ಸ್ವೀಕರಿಸಿದ್ದರೆ ಮತ್ತೊಂದು ವೃದ್ಧಾಪ್ಯ ಅನ್ನೋದು ಅಷ್ಟು ಭಾರ ಯಾಕಾಗಬೇಕು? ಯೌವನದಲ್ಲಿದ್ದಂತೆ ಈಗಲೂ ಇರಬಹುದಲ್ಲ ಎನ್ನುವ ಮನಸ್ಥಿತಿಯದು. ಎರಡೂ ಕಳೆದು ಹೋದ ಮಧುರ ನೆನಪುಗಳನ್ನು ಪ್ರಜ್ಞಾಪೂರ್ವಕವಾಗಿ ತಾಜಾ ಮಾಡಿಕೊಳ್ಳಲೆತ್ನಿಸದೇ, ಅದರ ವಿಸ್ಮೃತಿಯಲ್ಲಿ ಕಳೆದು ಹೋಗಲೆತ್ನಿಸುವಂಥವು. ಈ ಕಳೆದುಹೋಗುವಿಕೆಗೆ ಅಂಥ ಅಧ್ಯಾತ್ಮದ ಸ್ಪರ್ಶವಿಲ್ಲ. ಅದೇ ಮನುಷ್ಯ ಸಹಜ ಬಯಕೆಗಳ ಕಾಡಲ್ಲಿ ಕಂಡಷ್ಟು ದೂರ ಕ್ರಮಿಸುತ್ತ, ಎಲ್ಲೋ ಒಂದೆಡೆ ವಿಶ್ರಾಂತಿಗಾಗಿ ಹಂಬಲಿಸುತ್ತ ಕಡೆಗೆ ಪಯಣವೇ ಸಾಕೆಂದು ಸುಸ್ತಾಗಿ ಸಿಕ್ಕ ದಿಬ್ಬದ ಮೇಲೆ ಕುಳಿತುಕೊಳ್ಳುವ ಹೈರಾಣಾದ ಜೀವಗಳಿವು. ಈತನಕ ಕ್ರಮಿಸಿದ ಹಾದಿಯನ್ನು ನೆನಪಿಸಿಕೊಳ್ಳುತ್ತ ಗತಜೀವನಕ್ಕೆ ಹೋಗಿ ನಿಂತು ಒಂದಷ್ಟು ಹುಮ್ಮಸ್ಸು ತಂದುಕೊಳ್ಳಲೆತ್ನಿಸುವ ಸಾಧಾರಣ ಜೀವಿಗಳು.
ಇದರಲ್ಲಿನ ಒಂದು ಪಾತ್ರ ಕ್ರಾಂತಿಕಾರಕ ಪ್ರಜ್ಞೆಯನ್ನೇನೋ ಹೊರಸೂಸುತ್ತದೆ. ಆದರೆ, ಅದು ತನ್ನ ಈಗಿನ ಸ್ಥಿತಿಗಿಂತ ಹಿಂದಿನ ಸ್ಥಿತಿಯ ಸಂಭ್ರಮಗಳನ್ನು ಹೆಕ್ಕಿ ಹೆಕ್ಕಿ ಬಿಚ್ಚಿಡಲು ನೋಡುತ್ತದೆ. ಆ ಮೂಲಕ ತಾನೆಷ್ಟು ಪರಾಕ್ರಮಿ ಆಗಿದ್ದೆ, ಕಾರ್ಮಿಕ ವರ್ಗದ ಹಿತಾಸಕ್ತಿಗೆ ಹೋರಾಟ ನಡೆಸುತ್ತಿದ್ದೆ... ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಸಂತೋಷ ಕಾಣಲು ಹಾತೊರೆಯುತ್ತದೆ. ಮತ್ತೊಂದು ಜೀವ, ಸ್ವಾಮಿನಿಷ್ಠೆಯನ್ನೇ ಜೀವನಾದರ್ಶ ಎಂದುಕೊಳ್ಳುವ ಮತ್ತು 'ಯಾಕೆ ನಮಗೆ ಉಸಾಬರಿ'... ಎನ್ನುವ ಸೇಫ್ ಝೋನ್ ಬಯಸುವ ಮನೋಧರ್ಮದ್ದು. ಈ ದೇಹವೆಂಬ ಚೀಲವನ್ನು ಹ್ಯಾಗೊ ತುಂಬಿಸಿಕೊಂಡು ಕಡೆಗೊಮ್ಮೆ 'ಗೋವಿಂದಾ' ಅಂದರಾಯಿತು ಎನ್ನುವ ಮನಸ್ಥಿತಿಯದು.
ಒಟ್ಟಾರೆ ಎರಡು ಪ್ರಮುಖ ಪಾತ್ರಗಳ ಮೂಲಕ ಜೀವನದ ಸಂಜೆ ಹೊತ್ತಲ್ಲಿರುವ ಹಿರಿಯ ಜೀವಗಳು, ಗತಕಾಲದ ಮೆಲುಕು ಹಾಕುತ್ತ, ವರ್ತಮಾನದ ಹಂಗು ತೊರೆಯುತ್ತ ಹೇಗೆ ಇಡೀ ಬದುಕಿನ ಬಗ್ಗೆ ನಿರ್ಲಿಪ್ತತೆಗೆ ಜಾರುತ್ತಾರೆ... ಮತ್ತು ತಮಗಾಗುತ್ತಿರುವ ನೋವಿನ ಬಗ್ಗೆ ಮರುಕಪಡುವ ಇಲ್ಲವೇ, ಉದಾಸೀನ ಮನೋಭಾವ ತೋರುವ ಭಾವುಕ ಜೀವಿಗಳಾಗೇ ಉಳಿದುಬಿಡುತ್ತಾರೆ... ಜತೆಗೆ ಅಂಥದೊಂದು ಅನಿವಾರ್ಯ ಸ್ಥಿತಿಗೆ ಅವರೇಕೆ ಬಂದು ನಿಲ್ಲುತ್ತಾರೆ... ಯಂಗ್ ಜನರೇಶನ್ ಅಸಡ್ಡೆ ಇದಕ್ಕೆ ಕಾರಣವೇ? ಅನ್ನೋದು 'ನಾ ತುಕಾರಾಂ ಅಲ್ಲ' ನಾಟಕದ ಒಳನೋವು.
ರಂಗಭೂಮಿಯ ಮೇರುನಟ ನಟರಾಜ್ ಏಣಗಿ ಮಾತ್ರ ಪೋಷಕ ಪಾತ್ರವಾದರೂ ಕೆಲವೇ ಡೈಲಾಗ್ ಗಳ ಮೂಲಕ ಇಡೀ ಪ್ರಯೋಗವನ್ನು ತಮ್ಮ ಹತೋಟಿಗೆ ಎಳಕೊಂಡುಬಿಡುತ್ತಾರೆ. ನಾಟಕದುದ್ದಕ್ಕೂ ಡಾಮಿನೇಟ್ ಮಾಡಲು ಹವಣಿಸುತ್ತಲೇ ಇದ್ದ ಬಿ.ಸುರೇಶ್ (ನಾಟಕದ ಪ್ರಮುಖ ಪಾತ್ರ) ಕಡೆಗೆ ಏಣಗಿ ಮಾತುಗಳ (ಸಂಭಾಷಣೆ) ಮೊನಚಿನ ಮುಂದೆ ಮಂಕಾಗಿಬಿಡುತ್ತಾರೆ. ಹೆರ್ಬ್ ಗಾರ್ಡನರ್ ರಚಿಸಿದ 'ಐ ಯಾಮ್ ನಾಟ್ ರಾಪಪೋರ್ಟ್' ಎನ್ನುವ ಮೂಲಕೃತಿಯಿಂದ ವಸ್ತು ಆಯ್ದುಕೊಂಡ ಸುರೇಂದ್ರನಾಥ್ ಅದನ್ನು ಕನ್ನಡಕ್ಕೆ ಒಗ್ಗಿಸುವ ಯತ್ನ ಮಾಡಿದ್ದಾರೆ. ಅವರ ಸ್ಕ್ರಿಪ್ಟ್ ಕುಸುರಿ ಸೊಗಸಾಗಿದೆ ಮತ್ತು ನಾಟಕದ ಕೆಲ ಮಾತುಗಳಲ್ಲಿ ತೂಕವಿದೆ. ಇದೇ ತೂಕ ಒಟ್ಟಾರೆ ಪ್ರಯೋಗಕ್ಕೆ ಇನ್ನಷ್ಟು ದಕ್ಕಬೇಕಿತ್ತು.
ಮೂಲ: ಹೆರ್ಬ್ ಗಾರ್ಡನರ್ ಅವರ ಐ ಯಾಮ್ ನಾಟ್ ರಾಪಪೋರ್ಟ್
ಕನ್ನಡಕ್ಕೆ: ಸುರೇಂದ್ರನಾಥ್
ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ.
ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು.
ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರೆ ಕೊಟ್ಟ ಕಾಸಿಗೆ ಮೋಸವಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬಹುದೇನೋ.
ನಾಟಕದಲ್ಲಿ ಅಷ್ಟಾಗಿ ನಾಟಕೀಯ ಘಟನೆಗಳೇ ಘಟಿಸುವುದಿಲ್ಲ. ಅಂಥ ತಿರುವುಗಳೂ ಇಲ್ಲಿ ಸಂಭವಿಸುವುದಿಲ್ಲ. ಇದ್ದರೂ ಅವು ತುಂಬ ಸಾಂಕೇತಿಕವಾಗಿವೆ.
ಮಧ್ಯದಲ್ಲಿ ಒಬ್ಬ ಹುಡುಗಿ ಬರ್ತಾಳೆ. ತನ್ನ ಪಾಡಿಗೆ ತಾನು ಪಾರ್ಕನಲ್ಲಿ ಕೂತು ನಂತರ ಮಾಯವಾಗುತ್ತಾಳೆ. ಒಬ್ಬ ಮುದುಕನ ಕಚೇರಿಯ ಅಧಿಕಾರಿ ವಾಕ್ ಗೆಂದು ಬಂದು ಹೋಗುತ್ತಾನೆ. ಮತ್ತೊಮ್ಮೆ ಆಟೊ ಡ್ರೈವರ್ ಬರ್ತಾನೆ, ಕೊನೆಗೆ ಮತ್ತೊಬ್ಬ ಮುದುಕನ ಮಗಳು ಬರ್ತಾಳೆ... ಇವೆಲ್ಲ ಬಂದು ಹೋಗುವ ಪಾತ್ರಗಳೇ. ಇವುಗಳ ಜತೆಗಿನ ಒಡನಾಟ ಈ ಎರಡೂ ಪಾತ್ರಗಳಿಗೆ ಅಷ್ಟಕ್ಕಷ್ಟೇ. ತಂದೆ-ಮಗಳ ದೃಶ್ಯ ಸೆಂಟಿಮೆಂಟಲ್ ದೃಷ್ಟಿಯಿಂದ ಪ್ರೇಕ್ಷಕರ ಚಣಕಾಲ ಹಿಡಿದು ಕೂರಿಸಿತಷ್ಟೇ. ಅಲ್ಲೂ ಬರಿಯ ಮಾತುಗಳು. ಹೀಗಾಗಿ ಎಲ್ಲವನ್ನು ಮಾತುಗಳಲ್ಲೇ ಕಟ್ಟಿಕೊಡುವ ಮಿತಿಗೆ ಇಡೀ ಪ್ರಯೋಗ ಒಳಪಡುತ್ತದೆ. ಪ್ರೇಕ್ಷಕರು ಪಾತ್ರಗಳ ಮಾತಿನ ಮೂಲಕವೇ ಆದ ಘಟನೆಗಳನ್ನು ಕಣ್ಮುಂದೆ ತಂದುಕೊಳ್ಳಬೇಕು. ಭಾಷೆಯ ಧ್ವನಿ ಮತ್ತು ಸಂಭಾಷಣೆಯ ಶಾರ್ಪನೆಸ್ ಗ್ರಹಿಸಬಲ್ಲವರು ಕೊಂಚ ಭಿನ್ನವಾಗಿ ಪ್ರಯೋಗದ ನಾಟಕ ವಸ್ತುವನ್ನು ಒಳಕ್ಕಿಳಿಸಿಕೊಳ್ಳಬಲ್ಲರೇನೋ!..
ದೃಶ್ಯ ಜೋಡಣೆಗಂತೂ ನಾಟಕದಲ್ಲಿ ಅವಕಾಶ ಕಮ್ಮಿ. ಹೀಗಾಗಿ ಇದು ತುಂಬ ಸರಳವಾದ ಪ್ರಯೋಗ. ಇಂಥದ್ದಕ್ಕೆ ನಿರೂಪಣೆ ಸರಳವೆನಿಸಿದರೂ ನಟರ ಪ್ರಬುದ್ಧತೆಯನ್ನೇ ಇಡೀ ಪ್ರಯೋಗ ಆಶ್ರಯಿಸಬೇಕಾಗುವುದು ಅನಿವಾರ್ಯ.
ದೃಶ್ಯದಿಂದ ದೃಶ್ಯಕ್ಕೆ ನಾಟಕ ಬೆಳೆಯುತ್ತ ಹೋದಂತೆ ಅದರ ಭಾವನೆಗಳೂ ವಿಸ್ತಾರಗೊಳ್ಳುತ್ತ ಸಾಗುತ್ತವೆ. ಈ ಭಾವ ಪ್ರಪಂಚದಲ್ಲಿ ಪ್ರೇಕ್ಷಕರೂ ಕೂಡ ನಿಧಾನವಾಗಿ ಹರಿದಾಡುತ್ತಾರೆ. ತಮ್ಮ ಭಾವಕೋಶದಲ್ಲಿ ಇದನ್ನು ಇಟ್ಟುಕೊಂಡು ಕೊಂಚ ಚಡಪಡಿಸುತ್ತಾರೆ, ನಿರಾಳರಾಗುತ್ತಾರೆ, ನಗುತ್ತಾರೆ, ಮರುಗುತ್ತಾರೆ, ಮನರಂಜನೆಗೂ ಹಾತೊರೆಯುತ್ತಾರೆ. ಇದೆಲ್ಲ ನಾಟಕೀಯ ಅಂಶಗಳ ಮೂಲಕ ಪ್ರೇಕ್ಷಕರಿಗೆ ಸಂದಾಯವಾಗುವಂಥದು. ಇಂಥ ರಂಗಕ್ರಿಯೆ ಅತ್ಯಂತ ಮುಖ್ಯವಾಗುತ್ತದೆ. ನಾಟಕೀಯ ಘಟನೆಗಳಲ್ಲಿ ಪ್ರೇಕ್ಷಕರು ತಮ್ಮದೂ ಒಂದನ್ನು ಕಲ್ಪಿಸಿಕೊಳ್ಳುವುದಕ್ಕೆ ಇದೆಲ್ಲ ನೆರವಾಗುತ್ತದೆ. ಆದರೆ, ಈ ನಾಟಕದಲ್ಲಿ ಇಂಥ ರಂಗಕ್ರಿಯೆಗೆ ಅವಕಾಶ ಕಮ್ಮಿ ಎನ್ನುವುದೇ ಒಂದು ದೊಡ್ಡ ಕೊರತೆ.
ಇಲ್ಲಿ ಬರಿಯ ಮಾತುಗಳು ಇರೋದರಿಂದ ಭಾಷೆಯ ಸೊಗಸಿಗಿನಿಂದ ಮತ್ತು ವಿಷಯವನ್ನು ತೇಲಿಸಿಬಿಟ್ಟ ಪರಿಯಿಂದಾಗಿ ಪ್ರೇಕ್ಷಕರಲ್ಲಿ ಆಸಕ್ತಿ ಆರಂಭಕ್ಕೆ ಕೆರಳಿಸಬಹುದೇನೋ. ಮುಂದೆ ಕ್ರಮೇಣ ಅದೇ ಏಕತಾನವಾಗಿ ನಾಟಕದ ಮಾತುಗಳು ಪ್ರವಚನದ ಹಾದಿ ಹಿಡಿಯತೊಡಗುತ್ತವೆ.
ಇಲ್ಲಿನ ಎರಡು ಪಾತ್ರಗಳು ಓಲ್ಡ್ ಏಜ್ ಸಮಸ್ಯೆಗಳನ್ನು ಪ್ರತಿನಿಧಿಸುವಂಥವು. ಒಂದು ವೃದ್ಧಾಪ್ಯವನ್ನು ಸಹಜ ಎಂಬಂತೆ ಸ್ವೀಕರಿಸಿದ್ದರೆ ಮತ್ತೊಂದು ವೃದ್ಧಾಪ್ಯ ಅನ್ನೋದು ಅಷ್ಟು ಭಾರ ಯಾಕಾಗಬೇಕು? ಯೌವನದಲ್ಲಿದ್ದಂತೆ ಈಗಲೂ ಇರಬಹುದಲ್ಲ ಎನ್ನುವ ಮನಸ್ಥಿತಿಯದು. ಎರಡೂ ಕಳೆದು ಹೋದ ಮಧುರ ನೆನಪುಗಳನ್ನು ಪ್ರಜ್ಞಾಪೂರ್ವಕವಾಗಿ ತಾಜಾ ಮಾಡಿಕೊಳ್ಳಲೆತ್ನಿಸದೇ, ಅದರ ವಿಸ್ಮೃತಿಯಲ್ಲಿ ಕಳೆದು ಹೋಗಲೆತ್ನಿಸುವಂಥವು. ಈ ಕಳೆದುಹೋಗುವಿಕೆಗೆ ಅಂಥ ಅಧ್ಯಾತ್ಮದ ಸ್ಪರ್ಶವಿಲ್ಲ. ಅದೇ ಮನುಷ್ಯ ಸಹಜ ಬಯಕೆಗಳ ಕಾಡಲ್ಲಿ ಕಂಡಷ್ಟು ದೂರ ಕ್ರಮಿಸುತ್ತ, ಎಲ್ಲೋ ಒಂದೆಡೆ ವಿಶ್ರಾಂತಿಗಾಗಿ ಹಂಬಲಿಸುತ್ತ ಕಡೆಗೆ ಪಯಣವೇ ಸಾಕೆಂದು ಸುಸ್ತಾಗಿ ಸಿಕ್ಕ ದಿಬ್ಬದ ಮೇಲೆ ಕುಳಿತುಕೊಳ್ಳುವ ಹೈರಾಣಾದ ಜೀವಗಳಿವು. ಈತನಕ ಕ್ರಮಿಸಿದ ಹಾದಿಯನ್ನು ನೆನಪಿಸಿಕೊಳ್ಳುತ್ತ ಗತಜೀವನಕ್ಕೆ ಹೋಗಿ ನಿಂತು ಒಂದಷ್ಟು ಹುಮ್ಮಸ್ಸು ತಂದುಕೊಳ್ಳಲೆತ್ನಿಸುವ ಸಾಧಾರಣ ಜೀವಿಗಳು.
ಇದರಲ್ಲಿನ ಒಂದು ಪಾತ್ರ ಕ್ರಾಂತಿಕಾರಕ ಪ್ರಜ್ಞೆಯನ್ನೇನೋ ಹೊರಸೂಸುತ್ತದೆ. ಆದರೆ, ಅದು ತನ್ನ ಈಗಿನ ಸ್ಥಿತಿಗಿಂತ ಹಿಂದಿನ ಸ್ಥಿತಿಯ ಸಂಭ್ರಮಗಳನ್ನು ಹೆಕ್ಕಿ ಹೆಕ್ಕಿ ಬಿಚ್ಚಿಡಲು ನೋಡುತ್ತದೆ. ಆ ಮೂಲಕ ತಾನೆಷ್ಟು ಪರಾಕ್ರಮಿ ಆಗಿದ್ದೆ, ಕಾರ್ಮಿಕ ವರ್ಗದ ಹಿತಾಸಕ್ತಿಗೆ ಹೋರಾಟ ನಡೆಸುತ್ತಿದ್ದೆ... ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಸಂತೋಷ ಕಾಣಲು ಹಾತೊರೆಯುತ್ತದೆ. ಮತ್ತೊಂದು ಜೀವ, ಸ್ವಾಮಿನಿಷ್ಠೆಯನ್ನೇ ಜೀವನಾದರ್ಶ ಎಂದುಕೊಳ್ಳುವ ಮತ್ತು 'ಯಾಕೆ ನಮಗೆ ಉಸಾಬರಿ'... ಎನ್ನುವ ಸೇಫ್ ಝೋನ್ ಬಯಸುವ ಮನೋಧರ್ಮದ್ದು. ಈ ದೇಹವೆಂಬ ಚೀಲವನ್ನು ಹ್ಯಾಗೊ ತುಂಬಿಸಿಕೊಂಡು ಕಡೆಗೊಮ್ಮೆ 'ಗೋವಿಂದಾ' ಅಂದರಾಯಿತು ಎನ್ನುವ ಮನಸ್ಥಿತಿಯದು.
ಒಟ್ಟಾರೆ ಎರಡು ಪ್ರಮುಖ ಪಾತ್ರಗಳ ಮೂಲಕ ಜೀವನದ ಸಂಜೆ ಹೊತ್ತಲ್ಲಿರುವ ಹಿರಿಯ ಜೀವಗಳು, ಗತಕಾಲದ ಮೆಲುಕು ಹಾಕುತ್ತ, ವರ್ತಮಾನದ ಹಂಗು ತೊರೆಯುತ್ತ ಹೇಗೆ ಇಡೀ ಬದುಕಿನ ಬಗ್ಗೆ ನಿರ್ಲಿಪ್ತತೆಗೆ ಜಾರುತ್ತಾರೆ... ಮತ್ತು ತಮಗಾಗುತ್ತಿರುವ ನೋವಿನ ಬಗ್ಗೆ ಮರುಕಪಡುವ ಇಲ್ಲವೇ, ಉದಾಸೀನ ಮನೋಭಾವ ತೋರುವ ಭಾವುಕ ಜೀವಿಗಳಾಗೇ ಉಳಿದುಬಿಡುತ್ತಾರೆ... ಜತೆಗೆ ಅಂಥದೊಂದು ಅನಿವಾರ್ಯ ಸ್ಥಿತಿಗೆ ಅವರೇಕೆ ಬಂದು ನಿಲ್ಲುತ್ತಾರೆ... ಯಂಗ್ ಜನರೇಶನ್ ಅಸಡ್ಡೆ ಇದಕ್ಕೆ ಕಾರಣವೇ? ಅನ್ನೋದು 'ನಾ ತುಕಾರಾಂ ಅಲ್ಲ' ನಾಟಕದ ಒಳನೋವು.
ರಂಗಭೂಮಿಯ ಮೇರುನಟ ನಟರಾಜ್ ಏಣಗಿ ಮಾತ್ರ ಪೋಷಕ ಪಾತ್ರವಾದರೂ ಕೆಲವೇ ಡೈಲಾಗ್ ಗಳ ಮೂಲಕ ಇಡೀ ಪ್ರಯೋಗವನ್ನು ತಮ್ಮ ಹತೋಟಿಗೆ ಎಳಕೊಂಡುಬಿಡುತ್ತಾರೆ. ನಾಟಕದುದ್ದಕ್ಕೂ ಡಾಮಿನೇಟ್ ಮಾಡಲು ಹವಣಿಸುತ್ತಲೇ ಇದ್ದ ಬಿ.ಸುರೇಶ್ (ನಾಟಕದ ಪ್ರಮುಖ ಪಾತ್ರ) ಕಡೆಗೆ ಏಣಗಿ ಮಾತುಗಳ (ಸಂಭಾಷಣೆ) ಮೊನಚಿನ ಮುಂದೆ ಮಂಕಾಗಿಬಿಡುತ್ತಾರೆ. ಹೆರ್ಬ್ ಗಾರ್ಡನರ್ ರಚಿಸಿದ 'ಐ ಯಾಮ್ ನಾಟ್ ರಾಪಪೋರ್ಟ್' ಎನ್ನುವ ಮೂಲಕೃತಿಯಿಂದ ವಸ್ತು ಆಯ್ದುಕೊಂಡ ಸುರೇಂದ್ರನಾಥ್ ಅದನ್ನು ಕನ್ನಡಕ್ಕೆ ಒಗ್ಗಿಸುವ ಯತ್ನ ಮಾಡಿದ್ದಾರೆ. ಅವರ ಸ್ಕ್ರಿಪ್ಟ್ ಕುಸುರಿ ಸೊಗಸಾಗಿದೆ ಮತ್ತು ನಾಟಕದ ಕೆಲ ಮಾತುಗಳಲ್ಲಿ ತೂಕವಿದೆ. ಇದೇ ತೂಕ ಒಟ್ಟಾರೆ ಪ್ರಯೋಗಕ್ಕೆ ಇನ್ನಷ್ಟು ದಕ್ಕಬೇಕಿತ್ತು.
ಕಾಮೆಂಟ್ಗಳು