ವಿಷಯಕ್ಕೆ ಹೋಗಿ

ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

"ನಮ್ಮ ಮೆಟ್ರೊ" ಜನ ಒಪ್ಪಿದರೋ ಬಿಟ್ಟರೋ ಅಂತೂ ಹೊಸದೊಂದು ಅತ್ಯಾಧುನಿಕ (ನಮ್ಮ ಮಟ್ಟಿಗೆ) ಸಂಚಾರ ವ್ಯವಸ್ಥೆಗೆ ಇದೇ ಹೆಸರು ಬಂದುಬಿಟ್ಟಿತು. ಇದಕ್ಕೆ ಮೊದಲ ದಿನವೇ ದಕ್ಕಿದ ಸ್ಪಂದನೆ ನೋಡಿದರೆ ಈ ಹೆಸರು ನಿಜವಾದ ಅರ್ಥದಲ್ಲಿ ಅತ್ಯಂತ ಸೂಕ್ತವೆನಿಸಿತು. ಯುರೋಪ್ ಮತ್ತಿತರ ಮುಂದುವರಿದ ದೇಶದ ಜನರ ಹಾಗೆ ನಾವಿದನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ, ನಮ್ಮದಾಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ.

ಎಂಜಿ ರಸ್ತೆಯುದ್ದಕ್ಕೂ ಅವತ್ತು ಸೇರಿದ ಜನ ಅಬ್ಬಾ! ಟಿಕೆಟ್ ಗಾಗಿ ನಿಂತ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅವತ್ತು ರಾಜಕೀಯ ಮೈಕ್ ಗಳ ಭರಾಟೆ, ಮಾರುಕಟ್ಟೆ ಶಕ್ತಿಗಳಿಗೆಲ್ಲ ಹಬ್ಬ! ಬಹುತೇಕ ಅಂಗಡಿಗಳು ತಮ್ಮನ್ನು ತಾವು ಸಿಂಗರಿಸಿಕೊಂಡು ಹರೆಯದ ಹುಡುಗಿ ಕಾಮದೇವನ ಕಾದುನಿಂತಂತೆ ಕಾಣಿಸುತ್ತಿದ್ದವು. ಅರ್ಧ ಕುಂಡೆ ಕಾಣಿಸುವಂತೆ ಜೀನ್ಸ್ ತೊಟ್ಟ ಲಟಪಟ ಸುತ್ತುತ್ತಿದ್ದ ಸುಂದರಿಯರಂತೆ ಕಾಣಿಸುವ ಹೆಣ್ಣುಗಳು, ಮತ್ತವರ ಹಿಂದೆ ಕಣ್ಣು ಮಿಟುಕಿಸದೇ ಸುತ್ತುವ ಹಪಾಹಪಿ ಹರೆಯದ ಗಂಡುಗಳು... ಏನ್ ಮಜಾ ಅವರದು.
ಮತ್ತೆ, ಇದ್ದಬಿದ್ದ ಕೋಟು, ಸೂಟು ಹಾಕಿಕೊಂಡು ಎಂಜಿ ರಸ್ತೆಗಿಳಿದ ರಿಟೈರಮೆಂಟ್ ಹೊಸ್ತಿಲಲ್ಲಿರುವವರು , ಯೌವ್ವನದ ಬಿಡುಬೀಸನ್ನೆಲ್ಲ ಕಳಕೊಂಡರೂ ಚಮಕ್ ಬಿಟ್ಟುಕೊಡದ 40 ಪ್ಲಸ್ ಆಂಟಿಯರು ಮಗಳಿಗೂ ಕಾಂಪಿಟಿಷನ್ ಕೊಡುವವರಂತೆ ಸಿಂಗರಿಸಿಕೊಂಡು ಮೆಟ್ರೋ ರೈಲು ಟಿಕೆಟ್ ಗಾಗಿ ಕಾದಿದ್ದೇ ಕಾದಿದ್ದು.

ಇನ್ನು ಮೊದಲ ಬಾರಿಗೆ ಮೆಟ್ರೊ ಹತ್ತಿದವರದು ಏನ್ ಕೇಳ್ತಿರಾ! ಏಯ್ ಅಲ್ನೋಡು ಕಬ್ಬನ್ ಪಾರ್ಕು, ಕಿಡ್ಸ್ ಕೆಂಪ್, ಏಯ್ ಲಿನೊ ಥಿಯೇಟರ್... ಇಲ್ಲೇ ಅಲ್ವಾ ನಾವಿಬ್ಬರು ಮೊದಲ ಬಾರಿಗೆ ಆಫೀಸಿನವರ ಕಣ್ಣಿಗೆ ಮಣ್ಣೆರಚಿ ಸಿನಿಮಾ ನೋಡುತ್ತ ಲೊಚ ಲೊಚ ತುಟಿ ತುಂಡರಿಸಿಕೊಂಡಿದ್ದು ಎಂದು ಕನವರಿಸುವ ಓಲ್ಡ್ ಲವರ್ಸ್, ಛೇ, ನಾನವನ ಮೊದಲ ಬಾರಿ ಕೈಹಿಡಿದುಕೊಂಡು ಕೂತಿದ್ದು, ಅವನು ನನ್ನ ಹೆಗಲ ಮೇಲೆ ಕೈ ಹಾಕಿ ಕೆನ್ನೆ ಸವರಿದ್ದು, ಮೈತುಂಬ ಕಚಗುಳಿ ಇಟ್ಟಿದ್ದು, ಸಾಂಗ್ ಬಂದಾಗ ನಾ ಬೆಚ್ಚಗೆ ಅವನ ತಬ್ಬಿಕೊಂಡು ತೆಳುವಾದ ತುಟಿಗಳಿಂದ ಉಮ್ಮಾ ಎಂದಿದ್ದು ಈ ಪ್ಲಾಝಾ ಥಿಯೇಟರ್ ನಲ್ಲೇ ಅಲ್ಲವಾ! ಅರೇ ಇದೇನಿದು ಪ್ಲಾಝಾ ಮಂಗಮಾಯ! ನನ್ನ ಸುಂದರ ನೆನಪುಗಳನ್ನೆಲ್ಲಾ ಗುಡುಸಿಹಾಕಿಬಿಟ್ಟಿತಾ ಈ ಮೆಟ್ರೊ ಎಂದು ಇತಿಹಾಸದಿಂದಲೇ ಅಳಿದುಹೋದ ಥಿಯೇಟರ್ ಅವಶೇಷಗಳನ್ನು ನೋಡಿ ಮರುಗುವ ಭಗ್ನಪ್ರೇಮಿಕೆಯರು... ಹೋ ಇನ್ನು ನೀನು ಟ್ರಾಫಿಕ್ ನೆವ ಹೇಳಲಿಕ್ಕೇ ಇಲ್ಲಾ. ಸೀದಾ ಆಫೀಸು ಮುಗಿದು ಹತ್ತು ನಿಮಿಷದಲ್ಲಿ ಮನೇಲೇ ಇರಬೇಕು. ಇಲ್ಲಾಂದ್ರೆ ಡಿವೋರ್ಸ್ ಎನ್ನುವ ಹೊಸದಾಗಿ ಮದುವೆಯಾದ ಜೋಡಿಗಳು ತಮ್ಮಲ್ಲೇ ಒಣಜಗಳವಾಡಿದ್ದು... ಹೋ.. ಒಬ್ಬೊಬ್ಬರದು ಒಂದೊಂದು ತರಹದ ರೈಲುಗಳು ಮೆಟ್ರೊ ವೇಗದ ಜತೆ ಭರಗುಟ್ಟಿದವು.

ನಗರದ ರಸ್ತೆಯ ಮೇಲೆ ದೈತ್ಯನಂತೆ ಎದ್ದು ನಿಂತ ಪಿಲರ್ಸ್, ಎದೆಯ ಮೇಲೇ ಮಲಗಿದಂತೆನಿಸುವ ಸೇತುವೆ, ಅದರ ಮೇಲೆ ಕಾಲದ ಎಲ್ಲ ಜಡವನ್ನು ದರ ದರ ಎಳೆದೊಯ್ಯುವಂತೆನಿಸುವ ಮೆಟ್ರೊ ರೈಲು. ಕೆಳಗೆ ಮತ್ತದೇ ಆಟೊ, ಗಾಡಿ, ಕಾರು, ಬೈಕು ಟ್ರಾಫಿಕ್,  ಹಾರ್ನ್, ಪೊಲೀಸ್ ಸೀಟಿ, ಜನರ ಸದ್ದು ಗದ್ದಲ... ರಸ್ತೆ ದಾಟಲು ಪರದಾಡುತ್ತಲೇ ಇರುವ ಪಾಪದ ಪಾದಚಾರಿ...
ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...