ವಿಷಯಕ್ಕೆ ಹೋಗಿ

ಗಡಿಯಾರ!

ಅದೊಂದು ಛೋಟೆಖಾನ್ ಸಾಹೇಬರ ಖಾನದಾನಿ ದುಕಾನು. ಅದರ ದರವಾಜಾದ ಮೇಲೆ ಅಜ್ಜನ ಕಾಲದ ದೊಡ್ಡದೊಂದು ಗಡಿಯಾರ. ಖಾನ್ ಸಾಹೇಬರು ಮುಂಜಾವಿನ ನಮಾಜಿಗೆ ಹೊರಡುವ ಹೊತ್ತಿಗೆ ಸರಿಯಾಗಿ,  ತನ್ನ ಪ್ರೇಯರ್ ಗೆಂದು ತೆರಳುತ್ತಿರುವ ಮತ್ತೊಬ್ಬ ವ್ಯಕ್ತಿ ಎದುರಾಗುತ್ತಿದ್ದ. ನಿತ್ಯ ದುಕಾನು ಮುಂದೆಯೇ ಹಾದುಹೋಗುತ್ತಿದ್ದ. ದುಕಾನಿನ ದೊಡ್ಡ ಗಡಿಯಾರ ನೋಡಿಕೊಂಡು ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದ. ನಿತ್ಯವೂ ಇದನ್ನು ತಪ್ಪದೇ ಮಾಡುತ್ತಿದ್ದನಾತ. ಛೋಟೆಖಾನ್ ಸಾಹೇಬರು ಇದನ್ನು ತುಂಬ ದಿನಗಳಿಂದ ಗಮನಿಸುತ್ತಲೇ ಇದ್ದರು. ವಿಚಿತ್ರ ಕುತೂಹಲ ಇವರ ತಲೆ ತಿನ್ನತೊಡಗಿತ್ತು. ಇವನ್ನ ತಡೆದು ಒಮ್ಮೆ ವಿಚಾರಿಸಿಕೊಳ್ಳಲೇಬೇಕು ಎಂದು ತೀರ್ಮಾನಕ್ಕೆ ಬಂದುಬಿಟ್ಟರು.
 ಎಂದಿನಂತೆ ಆ ವ್ಯಕ್ತಿ ದುಕಾನಿನೆದುರು ನಿಂತ. ಗಡಿಯಾರ ನೋಡಿ, ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳತೊಡಗಿದ. ಛೋಟೆಖಾನ್ ಸಾಹೇಬರು ಚಂಗನೆ ಆ ವ್ಯಕ್ತಿಯತ್ತ ನೆಗೆದು ಗಬಕ್ಕನೆ ಹಿಡಿದುಕೊಂಡುಬಿಟ್ಟರು. ಆತ ಗಾಬರಿಗೊಳ್ಳಲಿಲ್ಲ. ಸುಮ್ಮನೇ ನಿಂತುಬಿಟ್ಟ. ಅವನ ಸ್ಥಿತಪ್ರಜ್ಞೆಗೆ ಛೋಟೆಖಾನ್ ಸಾಹೇಬರು ದಂಗಾದರು.
 ಅಲ್ಲ ಮೀಯಾ, ನಿತ್ಯ ನಮ್ಮ ದುಕಾನಿನ ಗಡಿಯಾರ ನೋಡಿಕೊಂಡೇ ನಿನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿಯಲ್ಲಾ ಯಾಕೆ?
'ಖಾನ್ ಸಾಹೇಬರೆ ನಾನು ಮಿಲ್ ನಲ್ಲಿ ಫೋರಮನ್ ಆಗಿದ್ದೆ. ನಿತ್ಯ ಇದೇ ಸಮಯಕ್ಕೆ ಸೈರನ್ ಮೊಳಗುವಂತೆ ನೋಡಿಕೊಳ್ಳುವುದು ನನ್ನ ಜವಾಬುದಾರಿಯಾಗಿತ್ತು. ಈಗಲೂ ಅದು ಇದೇ ಸಮಯಕ್ಕೆ ಮೊಳಗುತ್ತಾ ಎನ್ನುವುದನ್ನು ಹೀಗೆ ಖಾತರಿ ಮಾಡಿಕೊಳ್ಳುತ್ತೇನಷ್ಟೇ' ಎಂದನಾತ.
 ತತ್ಥೇರಿಕೆ, ನಿಮ್ಮ ಮಿಲ್ ಸರಿ ಹೊತ್ತಿಗೆ ಕೂಗುವುದನ್ನು ಕೇಳಿಸಿಕೊಂಡೇ ನನ್ನ ದುಕಾನು ಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದೆನಲ್ಲಯ್ಯಾ... ಎಂದು ಗಡ್ಡ ಕೆರೆದುಕೊಂಡ ಖಾನ್ ಸಾಹೇಬರು ನಮಾಜಿಗೆ ಹೊರಡಲನುವಾದರು.
 ಎಲ್ಲ ಒಂದೇಯಾ, ನೀವು ನಮಾಜಿಗೆ ಹೊಗ್ತೀರಿ, ನಾನು ಪ್ರೇಯರ್ ಗೆ ಹೋಗ್ತೀನಿ, ಇದೂ ಹಾಗೇಯಾ ಎಂದನಾತ.
ಅದು ಹೇಗೆ ಎಂದರು ಖಾನ್ ಸಾಹೇಬರು.
ಆತ ಹೇಳಿದ- 'ಮಿಯಾ, ಅದು ನಿಮ್ಮದು ದೊಡ್ಡ ಗೋಡೆ ಗಡಿಯಾರ, ಅಷ್ಟೇ ದೊಡ್ಡದು ಚರ್ಚ್ ಗಡಿಯಾರ, ಇದು ನನ್ನ ಪುಟ್ಟ ಕೈಗಡಿಯಾರ. ಗಡಿಯಾರ ಬೇರೆ. ಆದರೆ ಸಮಯ ಒಂದೇಯಾ...'

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...