ವಿಷಯಕ್ಕೆ ಹೋಗಿ

ಬಂದ್ ದರವಾಜಾ



ಸೂರ್ಯ ಕ್ಷಿತಿಜದ ಬಗಲಿನಿಂದ ಬಿಡಿಸಿಕೊಂಡ. ಮಗುವಿನ ಲಾಲನೆ ಪಾಲನೆ, ಆಹಾ... ಅದೊಂದು ಸ್ನಿಗ್ಧತೆ, ಲಾಲಿ, ಒಂದರ್ಥದ ಅಮಲು ಮತ್ತು ಬೆಳಕು. ನಾನು ಮುಖಮಂಟಪದಲ್ಲಿ ವಿರಾಜಮಾನನಾಗಿದ್ದೆ. ಮಗು ಬಾಗಿಲಿನಿಂದ ಇಣುಕಿತು.  ಮುಗುಳ್ನಕ್ಕು ಬಾ ಎಂದು ಸನ್ನೆ ಮಾಡಿದೆ. ಬಳಿ ಬಂದ ಮಗು ತೊಡೆಯೇರಿ ಕುಳಿತುಕೊಂಡಿತು. ಜೇಬಿನಿಂದ ಪೆನ್ನು ಜಗ್ಗೋದು, ಕಾಗದಕ್ಕೆ ಕೈಹಾಕೋದು.. ಹೀಗೆ ಅದರ ತಮಾಷೆಗಳು ಗರಿಗೆದರತೊಡಗಿದವು. ಮಗುವನ್ನು ಕೆಳಕ್ಕಿಳಿಸಿಬಿಟ್ಟೆ. ಪಾಪ ಅದು ಮೇಜಿನ ಒಂದು ಕಾಲು ಹಿಡಿದುಕೊಂಡು ನನ್ನನ್ನೇ ದಿಟ್ಟಿಸುತ್ತ ನಿಂತುಕೊಂಡಿತು. ಮನೆಯೊಳಕ್ಕೆ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!...
ಚಿಂವ್ ಚಿಂವ್ ಎನ್ನುತ್ತಾ ಗುಬ್ಬಿಯೊಂದು ಎದುರಿನ ಕಿಟಕಿ ಸರಳಿಗೆ ಹಾರಿ ಬಂತು. ಮಗುವಿಗೆ ಮನರಂಜನೆಯ ಹೊಸ ಆಟಿಗೆಯೊಂದು ಬಂದಂತೆ. ಖುಷಿಗೊಂಡ ಮಗು ಗುಬ್ಬಚ್ಚಿಯತ್ತ ಜೋರಾಗಿ ಕೈಬೀಸಿತು. ಗುಬ್ಬಚ್ಚಿ ಕೊಂಚವೂ ವಿಚಲಿತಗೊಳ್ಳಲಿಲ್ಲ. ಆಹಾ... ಗರಿಯಂಥ ಈ ಆಟಿಕೆ ವಸ್ತು ಇನ್ನು ನನ್ನ ಕೈಸೇರಿದಂತೆಯೇ ಎಂದುಕೊಂಡಿತು ಮಗು. ತನ್ನೆರಡೂ ಕೈಗಳನ್ನೆತ್ತಿ ಬ್ಬಾ ಬ್ಭಾ ಎಂದು ಗುಬ್ಬಚ್ಚಿಯನ್ನು ಹತ್ತಿರಕ್ಕೆ ಕರೆಯಲೆತ್ನಿಸಿತು. ಗುಬ್ಬಚ್ಚಿ ಚಿಂವ್ ಗುಟ್ಟುತ್ತ ಪುರ್ ಎಂದು ಹಾರಿ ಹೋಯಿತು. ನಿರಾಶಗೊಂಡ ಮಗು ಅಳತೊಡಗಿತು. ಬಾಗಿಲಿನತ್ತ ತಿರುಗಿಯೂ ನೋಡಲಿಲ್ಲ. ಬಾಗಿಲು ತೆರೆದೇ ಇತ್ತು!...
* * *
ಹಲ್ವಾದ ತಾಜಾ ತಾಜಾ ಸಿಹಿಗಾಳಿ ತೇಲಿ ಬಂತು. ಮಗುವಿನ ಮುಖ ಅರಳತೊಡಗಿತು. ಮಿಠಾಯಿ ಗಾಡಿಯವ ಹತ್ತಿರದ ಹಾದಿಯಲ್ಲಿ ಸಾಗುತ್ತಿದ್ದ. ಮಗು ವಿನಯದ ಕಂಗಳಲ್ಲಿ ನನ್ನನ್ನೇ ನೋಡತೊಗಿತು. ಮಿಠಾಯಿ ಗಾಡಿಯವ ದೂರ ದೂರ ಸಾಗುತ್ತಿದ್ದಂತೆ ಮಗುವಿನ ವಿನಯದ ಕಂಗಳು ರೋಷಕ್ಕೆ ತಿರುಗತೊಡಗಿದವು. ಮಿಠಾಯಿ ಗಾಡಿ ಮರೆಯಾಗುತ್ತಿದ್ದಂತೆ ಮಗುವಿನ ರೋಷದ ಕಂಗಳು ಸಿಡಿಯತೊಡಗಿದವು. ಮುಖದಲ್ಲಿ ಗಟ್ಟಿ ದನಿಯ ಬೇಡಿಕೆಯೊಂದು ಮಾರ್ದನಿಸತೊಡಗಿತು.
ಆದರೆ, ಹ್ಞೂ ಹ್ಞೂ  ನಾನು ಹಾದಿ ಬೀದಿಯ ಮಿಠಾಯಿಯನ್ನು ಮಕ್ಕಳಿಗೆ ಕೊಡೊದೇ ಇಲ್ಲ.  ಹೀಗಾಗಿ ಮಗುವಿನ ನಿವೇದನೆ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಮುಂದಿನದನ್ನು ಯೋಚಿಸುತ್ತಾ ಮತ್ತಷ್ಟು ವಿಚಲಿತನಾದೆ. ಈ ಬಗ್ಗೆ ಅಮ್ಮನ ನ್ಯಾಯಾಲಯದಲ್ಲಿ ಅಪೀಲು ಮಾಡುವ ಅವಶ್ಯಕತೆಯ ಬಗ್ಗೆ ಮಗು ಯೋಚಿಸಿತೋ ಏನೋ ನಾನರಿಯೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲೆಲ್ಲ ಮಕ್ಕಳು ಅಮ್ಮನ ಮುಂದೆ ಅಪೀಲು ಮಾಡುತ್ತವೆ. ಮಗು ಬಹುಶಃ ಫಿರ್ಯಾದು ನೀಡುವುದನ್ನು ಮುಂದೂಡಿರಬಹುದೆಂದುಕೊಂಡೆ. ಆದರೆ, ಅದು ಬಾಗಿಲಿನತ್ತ ಸಾಗುವ ಗೋಜಿಗೇ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!...
* * *
ಅಳುವ ಕಂದನ ಕಣ್ಣೊರೆಸುವ ಯೋಚನೆಯಿಂದ ಫೌಂಟೆನ್ ಪೆನ್  ಅನ್ನು ಮಗುವಿನ ಕೈಗಿತ್ತೆ.  ಸಂಭ್ರಮಗೊಂಡಿತು. ಜಗತ್ತಿನ ಸುಖದ ಗಣಿಯೇ ಕೈಸೇರಿತೇನೋ! ಅದರ ಇಂದ್ರಿಯಗಳೆಲ್ಲ ಹೊಸ ಸಮಸ್ಯೆಯ ಪರಿಹಾರಕ್ಕಾಗಿ ಸಾಂಘಿಕ ಯತ್ನಕ್ಕಿಳಿದಂತೆನಿಸಿತು. ಅಚಾನಕ್ ಬೀಸಿದ ಜೋರು ಗಾಳಿಗೆ ಬಾಗಿಲು ಧಡ್ ಅಂತ  ಮುಚ್ಚಿಕೊಂಡ ಭಾರಿ ಸದ್ದೊಂದು ಮಗುವಿನ ಕಿವಿಗಪ್ಪಳಿಸಿತು. ಬೆಚ್ಚಿದ ಮಗು ಬಾಗಿಲಿನೆಡೆ ಗಾಬರಿಯಿಂದ ನೋಡಿತು. ಅದರ ಸಂಭ್ರಮದ ಕ್ಷಣಗಳು ಕ್ಷಣಾರ್ಧದಲ್ಲೇ ಕಳೆದುಹೋದವು.
ಅದೀಗ ಫೌಂಟೆನ್ ಪೆನ್  ಅನ್ನು ಎಸೆದು ಜೋರಾಗಿ ಅಳುತ್ತ, ಗಾಬರಿಯಿಂದ ಬಾಗಿಲಿನತ್ತ ಧಾವಿಸಿತು.  ಯಾಕೆಂದರೆ ಬಾಗಿಲು ಮುಚ್ಚಿಕೊಂಡಿತ್ತು!
__________________________________________________________________________________
* ಮಗುವಿನ ತಾಯಿಪ್ರೇಮ ಬಯಕೆಯ ತೀವ್ರತೆಯನ್ನು ಧ್ವನಿಸುವ ಮುನ್ಶಿ ಪ್ರೇಮಚಂದರ ’ಬಂದ್ ದರವಾಜಾ’ ಸಣ್ಣ ಕಥೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...