ವಿಷಯಕ್ಕೆ ಹೋಗಿ

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ...



ಉಪಖಂಡದ ಮಹಾನ್ ಗಾಯಕನ ಬಗ್ಗೆ ಅವರ ಸೊಸೆ ಬರೆದ ಪುಸ್ತಕ ಓದಿದೆ.  ಅಬ್ಬಾ (ತಂದೆ ಎಂದರ್ಥ. ಸೊಸೆಗೆ ಮಾವ, ತಂದೆಯಾಗೋದು ಎಂಥ ಅದ್ಭುತ ಭಾವನೆ..) ಎಂದೇ  ಆ ಗಾಯಕನನ್ನು ಗೌರವಿಸುವ ಸೊಸೆಯ ಅಭಿಮಾನ, ಅಂತಃಕರಣದ ಮಾನವೀಯ ಪರಿ ನನಗಂತೂ ಖುಷಿಕೊಟ್ಟಿತು. ಇಡೀ ಪುಸ್ತಕದ ತುಂಬ ಅಬ್ಬಾ ನಸುನಕ್ಕಿದ್ದಾರೆ. ಹೆಮ್ಮೆಯ ಭಾವದಲ್ಲಿ ಕಾಣುತ್ತಾರೆ. ನನ್ನ ಅಮ್ಮೀಗೂ ಈ ಗಾಯಕನ ಹಾಡುಗಳೆಂದರೆ ಪ್ರಾಣ. ಆಕೆಯ ಬಾಯಿಂದ ಹಲವು ಹಾಡುಗಳನ್ನು ಕೇಳಿಸಿಕೊಂಡಿದ್ದೇನೆ. ಕಲಿತಿದ್ದೇನೆ. ನನ್ನ ದೊಡ್ಡ ಮಾಮ (ಮಾಸ್ಟರ್ ಮೊಹಮ್ಮದ್ ಅಲೀ ಮುದ್ನಾಳ್) ಇವರನ್ನು ಹತ್ತಿರದಿಂದ ಕಂಡಿದ್ದರ ಬಗ್ಗೆ ಕೇಳಿ ರೋಮಾಂಚಿತಗೊಂಡಿದ್ದೆ.
 ಆ ಅಪ್ರತಿಮ ಗಾಯಕನ ಹಳೆಯ ಹಾಡು ಹಾಡುತ್ತ, ಅನುವಾದ ಮಾಡುತ್ತ ಅಂತೂ ಆತನ ಒಂದಿಡೀ ಚರಿತ್ರೆಯನ್ನು ಕಣ್ಮುಂದೆ ಕಂಡೆ. ಆನಂದಿಸಿದೆ. ಅವಾಕ್ಕಾದೆ. ಅಭಿಮಾನಪಟ್ಟೆ. ಅದನ್ನು ಹೀಗೆ ಬರೆದು ಬಿಟ್ಟೆ. ಇಡೀ ಪುಸ್ತಕದ ಅನುವಾದ ಮಾಡುತ್ತಿದ್ದೇನೆ. ಅದರ ಆಯ್ದ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇಂದು ಗಾಯಕನ ಜನ್ಮದಿನ (ಡಿಸೆಂಬರ್ 24).



ಅಬ್ಬಾ...

ದೇಶ ವಿಭಜನೆಗೂ ಮುನ್ನ ಅಬ್ಬಾ ಕುಟುಂಬ ಲಾಹೋರಿನಲ್ಲಿತ್ತು. ಸ್ಥಿತಿವಂತ ಮತ್ತು ಧಾರ್ಮಿಕ ಸಂಪ್ರದಾಯಸ್ಥ ಕುಟುಂಬ ಅವರದ್ದಾಗಿತ್ತು. ಅಬ್ಬಾ ಹೊಂದಿದ್ದ ಲೈಫ್ ಸ್ಟೈಲ್ ಮತ್ತು ಗತ್ತು ಇದಕ್ಕೆ ಸಾಕ್ಷಿಯಂತೇ ಇತ್ತು. ತಂದೆ ಹಾಜಿ ಮೊಹಮ್ಮದ್ ಅಲೀ ಮತ್ತು ತಾಯಿ ಅಲ್ಲಾರಖೀ. ಈ ದಂಪತಿಗೆ ಒಟ್ಟು ಎಂಟು ಮಕ್ಕಳು. ಅದರಲ್ಲಿ ಆರು ಗಂಡು ಮಕ್ಕಳು. ಮೊಹಮ್ಮದ್ ಶಫೀ, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ದೀನ್, ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ರಫೀ ಮತ್ತು ಮೊಹಮ್ಮದ್ ಸಿದ್ದಿಖಿ. ಇಬ್ಬರು ಹೆಣ್ಣುಮಕ್ಕಳು. ರೇಷ್ಮಾ ಬೀಬಿ ಮತ್ತು ಚಿರಾಗ್ ಬೀಬಿ. ಹೆಣ್ಣು ಮಕ್ಕಳೆಲ್ಲ ಹೆಚ್ಚು ಕಾಲ ಬದುಕಲಿಲ್ಲ.

1948. ಅಬ್ಬಾಗೆ ಆಗ ಇಪ್ಪತ್ತರ ಹರೆಯ. ಆಗಲೇ ತಮ್ಮ ತಾಯಿಯನ್ನು ಕಳೆದುಕೊಂಡರು. ತಂದೆ ಹಾಜಿ ಮೊಹಮ್ಮದ್ ಅಲೀ ಅವರು ಲಾಹೋರಿನ ಭಾಟಿ ಗೇಟ್ ನಲ್ಲಿ ವಾಸವಾಗಿದ್ದರು. ಭರ್ಜರಿ ಕೇಟರಿಂಗ್ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದವರು. ರುಚಿಕಟ್ಟಾದ ಆಹಾರ ಸರಬರಾಜು ಮಾಡುವಲ್ಲಿ ಎತ್ತಿದ ಕೈ. ಹೀಗಾಗಿ ಇಡೀ ಪ್ರದೇಶದಲ್ಲಿ ಇವರದೇ ಹೆಸರಾಂತ ಕೇಟೆರಿಂಗ್ ಕಂಪೆನಿ.

ಅಬ್ಬಾ ಜನಿಸಿದ್ದು (1924, ಡಿಸೆಂಬರ್ 24) ಕೋಟ್ಲಾ ಸುಲ್ತಾನ್ ಸಿಂಗ್ ನಲ್ಲಿ. ಪಂಜಾಬ್ ನ ಅಮೃತಸರ ಸಮೀಪದ ಒಂದು ಪುಟ್ಟ ಹಳ್ಳಿ. ಅವರ ತಾಯಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲೆಂದು ಆಗಾಗ ಇಲ್ಲಿಗೆ ಬರುತ್ತಿದ್ದರಂತೆ. ಅಷ್ಟನ್ನು ಬಿಟ್ಟರೆ ಈ ಹಳ್ಳಿಯ ಜತೆಗಿನ ಅವರ ಒಡನಾಟ ಅಷ್ಟಕ್ಕಷ್ಟೇ. ಈ ಸಂಬಂಧಿಕರು ಯಾರು? ಇವರೆಲ್ಲ ಸುಲ್ತಾನ್ ಕೋಟ್‌ನಲ್ಲಿ ವಾಸಿಸುತ್ತಿದ್ದ ಮನೆ ಎಲ್ಲಿದೆ? ಅಲ್ಲಿ ಯಾರೆಲ್ಲ ಇರುತ್ತಿದ್ದರು?... ಇದಾವುದರ ವಿವರಗಳನ್ನು ಅಬ್ಬಾ ಯಾರ ಬಳಿಯೂ ಅಷ್ಟೊಂದಾಗಿ ಹೇಳಿಕೊಂಡಿದ್ದಿಲ್ಲ. ಸ್ವತಃ ಮಕ್ಕಳಲ್ಲೂ ಹೇಳಿಕೊಂಡಿಲ್ಲ.

ಹೀಗಾಗಿ ಅಬ್ಬಾ ಜನ್ಮದೂರಿನ ಬಗ್ಗೆ ಇಡೀ ಕುಟುಂಬದಲ್ಲಿ ಊಹಾಪೋಹಗಳೇ ತುಂಬಿಕೊಂಡಿದ್ದವು. ಕೋಟ್ಲಾ ಸುಲ್ತಾನ್ ಸಿಂಗ್ ತನ್ನ ಜನ್ಮಸ್ಥಳವೆಂದು ಅಬ್ಬಾ ಆಗಾಗ ಹೇಳುತ್ತಿದ್ದುದು ನನಗಿನ್ನೂ ನೆನಪಿದೆ. ಆದರೆ, ಲಾಹೋರಿನ ಭಾಟಿ ಗೇಟ್ ಅವರ ಜನ್ಮಸ್ಥಳ  ಎಂದು ಕುಟುಂಬ ಹೇಳಿಕೊಳ್ಳುತ್ತಿತ್ತು.

ಅಬ್ಬಾ ತಮ್ಮ  ಒಂಭತ್ತನೇ ವಯಸ್ಸಿನವರೆಗೆ ಆಡಿ ಬೆಳೆದಿದ್ದು ಇದೇ ಭಾಟಿ ಗೇಟ್ ನಲ್ಲಿ. ಆನಂತರದಲ್ಲಿ ಅವರ ಕುಟುಂಬ ಲಾಹೋರಿನ ಬಿಲಾಲ್ ಗಂಜ್ ಗೆ ಸ್ಥಳಾಂತರಗೊಂಡಿತು. ಬಾಲ್ಯದ ದಿನಗಳಿಂದ ಅವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ. 'ನನಗೆ ಮುಂಚಿನಿಂದಲೂ ಸಂಗೀತವೆಂದರೆ ಪ್ರಾಣ. ನನ್ನ ಮನಸು ಸಂಗೀತ ಬಿಟ್ಟು ಬೇರೇನನ್ನು ಬಯಸುತ್ತಿರಲಿಲ್ಲ. ಅಲ್ಲಾಹು ನನಗೆಂದೇ ಈ ವಿಶೇಷ ಪ್ರತಿಭೆ ಧಾರೆ ಎರೆದಿದ್ದಾನೆ ಎನ್ನುವುದು ನನ್ನ ಬಲವಾದ ನಂಬಿಕೆಯಾಗಿತ್ತು' ಎಂದು ಅಬ್ಬಾ ಎಷ್ಟೋ ಸಾರಿ ಹೇಳಿಕೊಂಡಿದ್ದಿದೆ.

ಇಡೀ ಚೌಧರಿ ಖಾನದಾನ್ ನಲ್ಲಿ ಯಾರಲ್ಲೂ ಸಂಗೀತದ ಹುಚ್ಚು ಇಷ್ಟು ತೀವ್ರವಾಗಿ ಆವರಿಸಿಕೊಂಡಿರಲಿಲ್ಲ. ಇದು ಅಬ್ಬಾ ಅವರದೇ ಸ್ವಯಂ ಪ್ರೇರಣೆಯ  ಆಸಕ್ತಿಯಾಗಿತ್ತು. ಆಗ ಅವರ ವಯಸ್ಸು ಇನ್ನೂ ಹತ್ತು. ಮೊಹಲ್ಲಾಗೆ ಆಗಾಗ ಒಬ್ಬ ಫಕೀರ  ಬರುತ್ತಿದ್ದ. ಫಕೀರನ ಹಾಡುಗಳು ಇವರನ್ನು ತುಂಬ ಸೆಳೆಯುತ್ತಿದ್ದವು. 'ಖೇದಾನೇ ದೇ ದಿನ್ ಚಾರ್...' ಎನ್ನುವ  ಫಕೀರನ  ಒಂದು ಹಾಡು ಅಬ್ಬಾ ಅವರನ್ನು ತೀವ್ರವಾಗಿ ಕಾಡಿತ್ತು. ಅವನಂತೆಯೇ ಹಾಡುವುದನ್ನು ಅಭ್ಯಾಸ ಮಾಡತೊಡಗಿದರು. ಮುಂದೆ ಫಕೀರ ಬಂದಾಗಲೆಲ್ಲ ಆತನ ಜತೆ ದನಿಗೂಡಿಸಿ ಹಾಡಲಾರಂಭಿಸಿದರು. ಅಬ್ಬಾ ಕಂಠಸಿರಿಗೆ ಮನಸೋಲುತ್ತಿದ್ದ ಫಕೀರ, ಬಳಿಗೆ ಕರೆದು ತಲೆ ನೇವರಿಸಿ ದುವಾ ಮಾಡುತ್ತಿದ್ದ.

ಫಕೀರನ  ಎಲ್ಲಾ ಹಾಡುಗಳನ್ನು ಗುನುಗುಟ್ಟುತ್ತಿದ್ದ ಅಬ್ಬಾ, ಕ್ರಮೇಣ ಸೊಗಸಾಗಿ ಹಾಡತೊಡಗಿದ್ದರು. ಫಕೀರನಂಥ ಅನುಭಾವಿಗಳ ದುವಾ ಅಂದರೆ ಅದೊಂದು ವರ. ಅಂಥವರ ಸೇವೆ ಮಾಡಿ, ಆದರಿಸಿದರೆ ಫಲ ಕಟ್ಟಿಟ್ಟ ಬುತ್ತಿ ಎನ್ನುವ ನಂಬಿಕೆ ಅವರಲ್ಲಿ ಬಲವಾಗಿತ್ತು. ಯಾರ ಮನಸಿಗೂ ನೋವಾಗದಂತೆ ಅವರು ನಡೆದುಕೊಳ್ಳುತ್ತಿದ್ದರು. ಕ್ರಮೇಣ ಇವರೊಬ್ಬ ಅಲ್ಲಾಹು ಕರುಣಿಸಿದ ಹಾಡುಗಾರ ಎಂದು ಮನೆಯವರೆಲ್ಲ ನಂಬತೊಡಗಿದರು. ಆದರೂ ಹಾಡು ಮತ್ತು ಸಂಗೀತವಾದ್ಯ ನುಡಿಸುವುದಕ್ಕೆ ಮನೆಯಲ್ಲಿ ತೀವ್ರ ವಿರೋಧವಿತ್ತು. ಕುಟುಂಬ ಪರಿಪಾಲಿಸುತ್ತಿದ್ದ ಧರ್ಮದ (ಇಸ್ಲಾಂ) ಪ್ರಕಾರ ಇದು ಹರಾಮ್. ನಿಷಿದ್ಧ. ಸಂಗೀತಾಭ್ಯಾಸಕ್ಕಂತೂ ಮನೆಯಲ್ಲಿ ಪ್ರೋತ್ಸಾಹದ ಸಾಧ್ಯತೆಯೇ ಇರಲಿಲ್ಲ. ಇದೆಲ್ಲ ಅಬ್ಬೇಪಾರಿಗಳಿಗೆ ಸೂಕ್ತವಾಗುವಂಥ ಕಲೆ ಎನ್ನುವುದು ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಸಂಗೀತಗಾರನಾಗುವ ಛಲವನ್ನು ಮಾತ್ರ ಅಬ್ಬಾ ಬಿಟ್ಟುಕೊಡಲಿಲ್ಲ. ಇವರ ಸಂಗೀತಾಸಕ್ತಿಗೆ ನೆರವಾಗಿ ನಿಂತವರು ಹಿರಿಯಣ್ಣ ಮೊಹಮ್ಮದ್ ದೀನ್ ಮಾತ್ರ. ಮೊಹಮ್ಮದ್ ದೀನ್ ಲಾಹೋರಿನಲ್ಲಿ ಹೇರ್ ಕಟಿಂಗ್ ಸಲೂನ್ ಇಟ್ಟುಕೊಂಡಿದ್ದರು. ಇದೇ ವೃತ್ತಿಯಲ್ಲಿ ತಮ್ಮನೂ ಮುಂದುವರಿಯಲಿ ಎನ್ನುವ ಉದ್ದೇಶದಿಂದ ಸಲೂನಿಗೆ ಜತೆಯಲ್ಲಿ ಕರೆದೊಯ್ಯುತ್ತಿದ್ದರು. ಆದರೆ ಅಬ್ಬಾ ಮನಸ್ಸು ಈ ವೃತ್ತಿಗೆ ಒಗ್ಗಿಕೊಳ್ಳುವಂಥದ್ದಿರಲಿಲ್ಲ. ಸಲೂನಿನಲ್ಲೂ ಹಾಡು ಮುಂದುವರಿಯಿತು. ಸಲೂನಿನ ಯಾವ ವಸ್ತುವೇ ಇರಲಿ, ಕೈಗೆ ಸಿಕ್ಕರೆ ವಾದ್ಯವಾಗಿಬಿಡುತ್ತಿತ್ತು. ಹಾಡುತ್ತಿದ್ದರು. ಒಟ್ಟಿನಲ್ಲಿ ಹಾಡು, ಹಾಡು ಮತ್ತು ಹಾಡು...

ಸಂಗೀತಗಾರನಾಗುವ ತಮ್ಮನ ದೃಢ ನಿಲುವನ್ನು ಮೆಚ್ಚಿಕೊಂಡ ಹಿರಿಯಣ್ಣ, ಆತನಿಗೆ ಏನಾದರೊಂದು ದಾರಿ ತೋರಿಸುವ ಸಂಕಲ್ಪ ಮಾಡಿಕೊಂಡರು. ಕುಟುಂಬದ ಸ್ನೇಹಿತ ತಾಜ್ ಮಲಿಕ್ ಕೂಡ ಕೈಜೋಡಿಸಿದರು. ಅಂತೂ ಅಬ್ಬಾಗೆ ಉಸ್ತಾದ್ ಬರ್ಕತ್ ಅಲೀ ಖಾನ್ ಸಾಹೇಬ್ ಬಳಿ ಸಂಗೀತದ ಮೊದಲ ಪಾಠ ಶುರುವಾಯಿತು. ಛೋಟೇ ಗುಲಾಂ ಅಲೀ ಬಳಿ ಅಭ್ಯಾಸದ ಅವಕಾಶವೂ ಲಭಿಸಿತು. ಕಿರಾಣಾ ಘರಾನಾದ ಉಸ್ತಾದ್ ಅಬ್ದುಲ್ ವಾಹೀದ್ ಖಾನ್ ಸಾಹೇಬ್, ಬಡೇ ಗುಲಾಂ ಅಲೀ ಖಾನ್ ಸಾಹೇಬ್, ಜೀವ್ ಲಾಲ್ ಮುಟ್ಟೋ ಮತ್ತವರ ಮಗ ಜವಾಹರ ಲಾಲ್ ಮುಟ್ಟೋ ಹಾಗೂ ಫಿರೋಜ್ ನಿಜಾಮಿ ಅವರಂಥ ದಿಗ್ಗಜರ ಸಾಂಗತ್ಯವೂ ದಕ್ಕಿತು. ಈ ದಿಗ್ಗಜರಿಂದಲೂ ಸಂಗೀತಾಭ್ಯಾಸದ ಭಾಗ್ಯ ದೊರಕಿತು.

ಹೀಗೆ ಸಂಗೀತಾಭ್ಯಾಸದ ಹಾದಿಯಲ್ಲಿ ಹಲವು ವರ್ಷಗಳು ಕಳೆದುಹೋದವು. ಗಾಯನ ಪಕ್ವಗೊಂಡಿತು. ಇನ್ನು ಹಾಡುವುದಕ್ಕೆ ಅವಕಾಶವಷ್ಟೇ ಬಾಕಿ. ತುಂಬ ಸಮಯ ಕಾಯುವ ಅಗತ್ಯವೇ ಇರಲಿಲ್ಲ. ಒಂದು ಬ್ರೇಕ್ ಬೇಕಿತ್ತು ಅಷ್ಟೇ.

ಅದು 1937. ಅಬ್ಬಾ ಜೀವನದಲ್ಲೊಂದು ಹೊಸ ತಿರುವು. ಅವರಿಗೆ ಆಗಿನ್ನೂ ಹದಿಮೂರರ ವಯಸ್ಸು. ಲಾಹೋರಿನಲ್ಲಿ ಪಾನ್-ಇಂಡಿಯಾ ಪ್ರದರ್ಶನ ನಡೆಯುತ್ತಿತ್ತು. ಅಲ್ಲಿ ಹೆಸರಾಂತ ಗಾಯಕರ ಸಂಗೀತ ಕಚೇರಿಯೂ ಆಯೋಜನಗೊಂಡಿತ್ತು. ಕುಂದನ್ ಲಾಲ್ ಸೈಗಲ್ ಮತ್ತು ಜೋಹ್ರಾಬಾಯಿ ಅಂಬಾಲೆವಾಲೀ ಅವರ ಗಾಯನದ ಕಾರ್ಯಕ್ರಮವಿತ್ತು. ಇವರೊಂದಿಗೆ ಹಲವಾರು ಉದಯೋನ್ಮಖರೂ ಹಾಡುವವರಿದ್ದರು. ಸಾವಿರಾರು ಸಂಗೀತ ಪ್ರೇಮಿಗಳು ಅಲ್ಲಿ ನೆರೆದಿದ್ದರು. ಕೆ.ಎಲ್. ಸೈಗಲ್ ಅಂದರೆ ಅಬ್ಬಾಗೂ ತುಂಬ  ಪ್ರಾಣ. ಕೆಎಲ್ ಹಾಡುವುದನ್ನು ಕೇಳುವ, ನೋಡುವ ಕಾತರ. ಅಂತೂ ಹಿರಿಯಣ್ಣನೊಂದಿಗೆ ಕಾರ್ಯಕ್ರಮಕ್ಕೆ ಹಾಜರ್. ಕೆ.ಎಲ್. ಸೈಗಲ್ ಹಾಡತೊಡಗಿದ್ದರು. ಇದ್ದಕ್ಕಿದ್ದಂತೆ ಕರೆಂಟ್ ಹೋಯ್ತು. ಧ್ವನಿವರ್ಧಕವಿಲ್ಲದೇ ಸೈಗಲ್ ಹಾಡು ಕೇಳುವುದು ಪ್ರೇಕ್ಷಕರಿಗೆ ದುಸ್ತರವೆನಿಸತೊಡಗಿತು. ಪ್ರೇಕ್ಷಕರಿಂದ ಚೀರಾಟ, ಕೂಗಾಟ, ಗದ್ದಲ ಶುರುವಾಯ್ತು. ಅದೇ ಸಮಯಕ್ಕೆ ಸರಿಯಾಗಿ ಯಾರೋ ಅಬ್ಬಾನನ್ನು ಸ್ಟೇಜ್ ಗೆ ಎಳೆತಂದರು. ಇಂಥದೊಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಅಬ್ಬಾ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ತಮ್ಮ ಅದ್ಭುತ ಕಂಠ ಸಿರಿಯಲ್ಲಿ ಪಂಜಾಬಿ ಜಾನಪದ ಹಾಡೊಂದನ್ನು ಪ್ರಸ್ತುತಪಡಿಸಿದರು. ಅಲ್ಲಿಯವರೆಗೆ ಕೂಗಾಟದಲ್ಲಿ ನಿರತವಾಗಿದ್ದ ಪ್ರೇಕ್ಷಕ ಸಮೂಹ, ಈ ಚಿನ್ನದ ದನಿಗೆ ಶರಣಾಯ್ತು. ಧ್ವನಿವರ್ಧಕವಿಲ್ಲದೇ ಹಾಡಿದ ಹಾಡಿಗೆ ಇಡೀ ಸಭಾಂಗಣ ಮೂಕ ವಿಸ್ಮಿತ. ಈ ಚಿನ್ನದ ದನಿಯ ಹುಡುಗನ ಹಾಡಿಗೆ ಸಭಾಂಗಣದ ತುಂಬ ಕರತಾಡನ, ಮೆಚ್ಚುಗೆಯ ಮಾತುಗಳು ರಿಂಗಣಿಸಿದವು.
ಕೆ.ಎಲ್. ಸೈಗಲ್ ಕೂಡ ಹುಡುಗನ ದನಿಗೆ ಮಾರುಹೋದರು. ಬೆನ್ನು ತಟ್ಟಿ ಭೇಷ್ ಎಂದರು. 'ಮುಂದೊಂದು ದಿನ ಈ ಹುಡುಗ ಅಪ್ರತಿಮ ಹಾಡುಗಾರನಾಗುತ್ತಾನೆ' ಎಂದು ಆಗಲೇ ಭವಿಷ್ಯ ನುಡಿದರು.
(ಮುಂದುವರಿಯುವುದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...