ಎಡ್ಡ: ಮನ್ನಿ ‘ಮೊದಲು ಅರಿ ಆಮೇಲೆ ಇರಿ’ ಅಂತೆಲ್ಲಾ ಚಂಪಾ ಡೈಲಾಗ್ ಹೊಡದಿ. ಅಂಥ ಬಂಡಾಯದ ಬರಹಗಾರರು ಚಿಂತಕರು ಇಂಥಾ ಸಂದಿಗ್ಧ ಪರಿಸ್ಥಿತಿಯೊಳಗೂ ಮಂಕಾಗಿ ಕೂತಾರಲೇ ಏನ್ ಮಾಡೂನ ಇದಕ್ಕ.

ಎಡ್ಡ: ಸೈದ್ಧಾಂತಿಕ ಜಗಳದೊಳಗ ಹೆಚ್ಚು ಕಾಲ ಕಳದ ಚಂಪಾ ಸಾಹಿತ್ಯ ರಚನಾದಿಂದ ದೂರ ಸರದ ಭಾಳ ವರ್ಷನ ಆತು. ಅವ್ರ ಹೋರಾಟ, ಬಂಡಾಯದ ಮೊನಚು ಯಾಕೋ ಕಮ್ಮಿ ಆತು. ಅದ್ಭುತ ಅಸಂಗತ ನಾಟಕಗಳನ್ನ ಕೊಟ್ಟ ಮನಶ್ಯಾ ಸಾಹಿತ್ಯದೊಳಗ ಇನ್ನೂ ಎಂಥಾ ಅದ್ಭುತ ಸೃಷ್ಟಿ ಮಾಡಬಹುದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ, ಸ್ವಾಭಿಮಾನಿ ಕರ್ನಾಟಕ ಅಂತೆಲ್ಲ ಅವ್ರೂ ರಗಡ ಖಟಪಟಿ ಮಾಡಿದ್ರು ಖರೆ. ಏನಾತು? ಪಾಟೀಲ ಪುಟ್ಟಪ್ಪ ಅಂದ್ರ ನಮ್ ‘ಪಾಪು’ ಕಿತ್ತೂರ ಚೆನ್ನಮ್ಮ ಸರ್ಕಲ್ನಿಂದ ಹೆಂಗ್ ಆಚೆ ಬರಲೇ ಇಲ್ಲಲಾ, ಹಾಂಗ ಇವ್ರು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅನ್ನೂದ ಬಿಟ್ಟ ಬ್ಯಾರೆ ಏನೂ ಖಡಕ್ ಆಗಿ ಮಾಡಲೇ ಇಲ್ಲ.
ಗಿಡ್ಡ: ಅರ್ಧಾ ಜೀವನಾ ‘ಒಕ್ಕಣ್ಣಿನ ರಾಕ್ಷಸ’ ಅಂತ ಲಂಕೇಶ್ ಮ್ಯಾಲ ಲೇವಡಿ ಮಾಡೂದರಾಗ ಕಳೀತು. ಇನ್ನರ್ಧಾ ಜೀವನಾ ಕನ್ನಡ ಹೋರಾಟ. ಈ ಹೋರಾಟಕ್ಕರೇ ಸೀರಿಯಸ್ ಆಗಿ ಸರಿಯಾದ ದಿಕ್ಕು ದೆಸಿ ತೋರಿಸ್ಬಹುದಾಗಿತ್ತು. ಅದೂ ಮಾಡ್ಲಿಲ್ಲ. ಪ್ರಾಧಿಕಾರದೊಳಗಿದ್ದಾಗ ರಬ್ಬರ್ ಸ್ಟ್ಯಾಂಪ್ ಮುಟಗೋಲ ಹಾಕ್ಕೋಳ್ಳೂದು, ಇಂಗ್ಲಿಷ್ ಬೋರ್ಡಿಗೆ ಮಸಿ ಬಳಿಯೂದು ಇದಷ್ಟ ಸಾಧ್ಯಾತು. ರಾಜಕಾರಣಿ ವಾಟಾಳದ್ದ ಕನ್ನಡ ಓರಾಟ ಒಂದು ನಮೂನಿ ಸುಡಗಾಡ ಸಿದ್ರ ಆಟ ಆಗಿಹೋದ್ರ ಚಂಪಾ ಅವ್ರದು ಅರಣ್ಯರೋದನ. ಬೇಜಾರದ ವಿಷ್ಯ ಅಂದ್ರ ರಾಜ್ಯದ ಕನ್ನಡ ನಸೀಬಕ್ಕ ಇದ್ಯಾವುದೂ ಉಪಯೋಗಕ್ಕ ಬರಲಿಲ್ಲ.
ಗಿಡ್ಡ: ಕನ್ನಡದ ಕೆಲಸಾ ಮಾಡಾಕ ಚಂಪಾಗ ವಯಸ್ಸೂ ಆತು. ಈಗೇನಿದ್ರೂ ಕರವೇ, ಜಕ, ಕಸೇ... ಯುವಕರ ಬಿಸಿ ರಕ್ತ ಕನ್ನಡಕ್ಕಾಗಿ ಕೊತ ಕೊತ ಕುದಿಯಾಕಹತ್ತೈತಿ. ಮುಂದ ನೋಡಬೇಕ ಏನೇನಾಕ್ಕೈತೋ? ಅಲ್ರೀ ಭಾಷಾವಾರು ಪ್ರಾಂತ ರಚನಾ ಆದ್ರು ಯಾಕ್ ಮಾಡಬೇಕಿತ್ತು? ನಮ್ದು ಪ್ರಜಾಪ್ರಭುತ್ವ, ಸೋಶಿಯೋ ಡೆಮಾಕ್ರಟಿಕ್ ಸೆಟ್ ಅಪ್, ಒಕ್ಕೂಟ ವ್ಯವಸ್ಥೆ ಅಂತೆಲ್ಲ ಕೊಚ್ಚಿಕೋತೀವು. ಅದಕ್ಕೊಂದು ನೀತಿ. ನೇಮಾ ಬ್ಯಾಡಂತೀರೇನು?
ಎಡ್ಡ: ಭಾಷಾ ಅನ್ನದು ಮಾತಾಡಕ ಮತ್ ಬರಿಯಾಕ, ಓದಾಕ ಅಷ್ಟ ಅಂತ ತಿಳಕೊಂಡೀವು. ಅದ ನಮ್ ದೊಡ್ಡ ದಡ್ಡತನ. ಅದು ನಮ್ ಜೀವನ ಕ್ರಮಾ, ಅನ್ನದ ಮೂಲನೂ ಆಗುವಂಥದ್ದು. ಮತ್ ನಿಜದ ಸಂಸ್ಕೃತಿನೂ ಹೌದು ಅಂತನ್ನೋ ಕಲ್ಪನಾನ ನಮಗಿಲ್ಲ. ಭಕ್ತಿ ಅಂದರ ಏನು? ಕಾಯಕಾ ಅಂದ್ರ ಏನು? ಜಾತ್ಯತೀತ ಅಂದ್ರ ಏನು? ಅಂತೆಲ್ಲ ಬಸವಣ್ಣ, ವಚನಕಾರರು, ಸೂಫಿಗಳು ಸರಳ ಕನ್ನಡದೊಳಗ ಎಲ್ಲಾ ಹೇಳೀರು. ಅಂದ್ರ ಕಾಯಕದ ಭಾಷಾಕ್ಕನ ಅವ್ರು ಒತ್ತು ಕೊಟ್ರು. ನಾವು ಕಾಯಕದ ಭಾಷಾ ಮರತು ಬರೀ ಮಾತಾಡುವ, ಬರೆಯುವ ಮತ್ ಓದುವ ಭಾಷಾಕ್ಕ ಜೋತ್ ಬಿದ್ದ ಬಿಟ್ಟೀವಿ. ಪರಿಣಾಮ ಏನಾತು? ಅದಕ್ಕ ಬರೀ ಕಾಮಾ, ಫುಲ್ ಸ್ಟಾಪ್, ಅಲ್ಪ ಪ್ರಾಣ, ಮಹಾಪ್ರಾಣ ಮತ್ ಒತ್ತಕ್ಷರದೊಳಗ ಮುಳುಗಿಹೋದ್ವಿ. ಅದ್ರಾಗ ಗಿರಕಿ ಹೊಡಕೋತ ಅಕ್ಯಾಡೆಮಿ, ಪ್ರಶಸ್ತಿ, ಪುರಸ್ಕಾರ, ಜ್ಞಾನ ಪೀಠನ ನಮ್ ಅಂತಿಮ ಗುರಿ ಆಗಿಸಿಕೊಂಡವರ್ಹಂಗ ನಡಕೋಳಾಕ ಹತ್ತೀವು. ಸಾಹಿತ್ಯ ರಚನಾ ಒಂದರಿಂದ ಭಾಷಾ ಸಮಸ್ಯೆ ಮತ್ ಭಾಷಿಕರ ಅನ್ನದ ಸಮಸ್ಯೆ ಬಗೀ ಹರೀತೈತೇನಲೇ?
ಗಿಡ್ಡ: ಅಂಥ ದೊಡ್ಡ ಸಮಾಜೋ-ವೈಜ್ಞಾನಿಕ ಚಿಂತನೆ ಮಾಡೋರು ನಮ್ಮಲ್ಲಿ ಯಾರ ಅದಾರೀ?
ಎಡ್ಡ: ನೀ ಹೇಳೂದು ಖರೇ. ನಮ್ಮಲ್ಲಿ ಬರೀ ಸಂಸ್ಕೃತಿ ಚಿಂತಕರು ಅಂತ ಅದಾರು. ಅವ್ರು ವೈಜ್ಞಾನಿಕ ದೃಷ್ಟಿಕೋನ ಇಲ್ಲದ ಏನೇನೋ ಮಾತಾಡ್ತಾರು. ಇತಿಹಾಸದಿಂದ ಅರ್ಧಂಬರ್ಧ ತಗೊಂಡು ಒಳ್ಳೆಯ ಹಿಪೊಕ್ರೇಟ್ಸ್ ಥರಾ ಆಡ್ತಾರು. ಅವ್ರನ್ನ ನಾವ್ ನಂಬ್ಕೊಂಡೀವಿ. ಹಿಂಗಾಗಿ ಸಂ-ಶೋಧಕ ಛೀ ಮೂ ಏನ್ ಹೇಳ್ತಾರು ಅದ ಖರೇ.
ಗಿಡ್ಡ: ಮೊದ್ಲು ನಮ್ ಭಾಷಾ ಮಹಾರಾಷ್ಟ್ರ, ಆಂಧ್ರ... ಮತ್ತಿನ್ನೆಲ್ಲೆಲ್ಲೋ ಇತ್ತಂತಲ್ರೀ. ಛೀ ಮೂ ಇದರ ಮ್ಯಾಲ ಭಾಳ ಮಾತಾಡ್ತಾರ್ ಬಿಡ್ರಿ.
ಎಡ್ಡ: ಹೌದು. ಆಗ ಅವ್ರ ಕಣ್ಣು ಶಾರ್ಪ್ ಇದ್ವು. ಬೆಂಗಳೂರಿನಿಂದ ಕಾಶ್ಮೀರ, ಮಧ್ಯಪ್ರಾಚ್ಯ ಹಂಗ ಮುಂದ ಯುರೋಪ್... ಮತ್ ಎಲ್ಲೆಲ್ಲಿ, ಎಷ್ಟು ದೂರ ದೃಷ್ಟಿ ಹರೀತಿತ್ತು ಅಷ್ಟ ದೂರಕ್ಕ ಕನ್ನಡನ ಕಾಣತಿತ್ತ ಅವ್ರಿಗೆ. ಅಮೇರಿಕಾ ಅಕ್ಕನ ಕಥೀ ಗೊತ್ತಲ್ಲ.
ಗಿಡ್ಡ: ಗೊತ್ತಲ್ರೀ ವರ್ಷಕ್ಕೊಮ್ಮೆ ಅಕ್ಕನ ಪಕ್ಕ ಕೂತ್ಕೊಳ್ಳಾಕ ದೊಡ್ಡ ಸರ್ಕಸ್ ನಡೀತೈತಲ್ರೀ.

ಗಿಡ್ಡ: ಅದ ಬಿಡ್ರಿ. ಹಳೀದ ತೊಗೊಂಡ ಹಿತ್ಲದಾಗ ಅತ್ರಂತ. ಹೊಸಾ ವಿಚಾರ ಅತಂದ್ರ ದೇವನೂರು ಮಹಾದೇವ್ರದು ನೋಡ್ರಿ. ಅಲ್ರೀ ಕನ್ನಡಾ ಮಿಡಿಯಂ ಕಂಪಲ್ಸರೀ ಮಾಡಲಿಲ್ಲಾ ಅಂತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ ಆಮಂತ್ರಣಾನ ಎಡಗಾಲಿಲೆ ಒದ್ದಬಿಟ್ಟರಲ್ರಿ ...
ಎಡ್ಡ: ಇಷ್ಟ ವರ್ಷದೊಳಗ ಎಂತಿಂಥ ಕನ್ನಡ ಸಾಹಿತಿ, ಉದ್ಧಾಮ ಪಂಡಿತರು ತೋರಿಸದ ಸ್ವಾಭಿಮಾನಾನ ಮಹಾದೇವ ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ರು. ಖರೇ ಗಂಡಗಬರೂ ಅಂದ್ರ ನಮ್ ದೇವನೂರು ಮಹಾದೇವ್! ಈ ಮನಷ್ಯಾನ ಮಾತಿಗಿಂತ ಕೃತಿ ಶಕ್ತಿಶಾಲಿ. ಮತ್ ಅವ್ರದು ವೈಜ್ಞಾನಿಕ ದೃಷ್ಟಿಕೋನ. ಮಹಾದೇವ ಅನ್ನೂ ಜಿಗಟ ಕನ್ನಡ ಬದುಕಿನ ಹದಾ ಹೆಚ್ಚಿಸೂದಷ್ಟ ಅಲ್ಲ, ಅದಕ್ಕೊಂದು ದೊಡ್ಡ ದಿಕ್ಕು ತೋರಿಸೂ ಸಾಧ್ಯತಾ ಅಂತೂ ನಿಕ್ಕೀ ಐತಿ. ಕನ್ನಡಿಗರು ಮತ್ತು ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...
ಕಾಮೆಂಟ್ಗಳು