ವಿಷಯಕ್ಕೆ ಹೋಗಿ

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ


ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.
  ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ ಹರಿಕುಮಾರ್‌ ಸರ್‌ ತಮ್ಮ ಆಪ್ತರ ಜೊತೆ ಚರ್ಚೆಯಲ್ಲಿ ಮಗ್ನರಾಗಿದ್ದರು. ಮಾತನಾಡಿಸುವ ಹಂಬಲ ತುಂಬ ಇತ್ತು. ಹತ್ತಾರು ಸಲ ಅವರ ಹತ್ತಿರಕ್ಕೆ ಹೋದೆನಾದರೂ ಮಾತನಾಡಿಸುವ ಧೈರ್ಯ ಬರಲಿಲ್ಲ. ಅದು ಹೆದರಿಕೆ ಅಲ್ಲ.  ಅಭಿಮಾನ ಪಡುವ, ತುಂಬ ಗೌರವಿಸುವ, ಆದರಿಸುವ ವ್ಯಕ್ತಿಯ ಬಗ್ಗೆ ಒಳಗೇ ಇರುವ ಮತ್ತು ಸದರದಿಂದ ವ್ಯಕ್ತಪಡಿಸಲು ಆಗದ ಬಹುದೊಡ್ಡ ಗೌರವ ಎಂದಷ್ಟೇ ಹೇಳಬಲ್ಲೆ. ಅವರಿಗೆ ಯಾವತ್ತೂ ದಿಲ್‌ ಪೂರ್ವಕ ಸಲಾಂ.
* * *
 ವಧು– ವರರಿಗೆ ಶುಭ ಕೋರಲು ಹೋದಾಗ ಶಾಂತಕುಮಾರ್‌ ಸರ್‌ ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಿ ನೂತನ ಜೋಡಿಗೆ ಪರಿಚಯಿಸಿದ ಸಹಜತೆ ತುಂಬ ಖುಷಿ ಕೊಟ್ಟಿತು. ತಮ್ಮ ಎಂದಿನ ಖದರಿನ ನಡುವೆಯೂ ಅತ್ಯಂತ ಸ್ನೇಹಪೂರ್ವಕವಾಗಿ ಆದರಿಸಿದ ಮತ್ತು ಊಟದ ಕೋಣೆಯಲ್ಲಿ ಎಲ್ಲರೊಂದಿಗೆ ಅತ್ಯಂತ ಸಹಜವಾಗಿ ಸಹಭೋಜನದಲ್ಲಿ ಪಾಲ್ಗೊಂಡ ಡೆಕ್ಕನ್‌ ಹೆರಲ್ಡ್‌ ಸಂಪಾದಕ ಕೆ.ಎನ್‌ ತಿಲಕ್‌ಕುಮಾರ್ ಸರ್‌ (ಕೆ.ಎನ್‌. ಶಾಂತಕುಮಾರ್‌ ಅವರ ಅಣ್ಣ) ಎಂದಿನಂತೆ ಗಂಭೀರವದನರಾಗಿರದೇ ತುಂಬ ಖುಷಿಯ ಮತ್ತು ಸಂಭ್ರಮದ ಮೂಡ್‌ನಲ್ಲಿದ್ದರು. ನನ್ನದೂ ಸೇರಿ ಎಲ್ಲರ ವಂದನೆಗಳಿಗೆ ಪ್ರತಿವಂದಿಸಿ ಮುಗುಳುನಗೆ ಬೀರಿದ್ದು ಖುಷಿ ಕೊಟ್ಟಿತು. ಅವರ ಜೊತೆ ಎದುರಿನ ಪಂಕ್ತಿಯಲ್ಲಿ ಕುಳಿತು ಮಾಡಿದ ಊಟ ಮತ್ತಷ್ಟು ರುಚಿಕಟ್ಟೆನಿಸಿತು.

ವೆಡ್ಡಿಂಗ್‌ ಹೆರಲ್ಡ್‌ 

ಒಂದು ಅದ್ಭುತ ಕಲ್ಪನೆ. ಟ್ಯಾಬ್ಲಾಯ್ಡ್‌  ಸೈಜಿನ ಅತ್ಯಂತ ಸೊಗಸಾದ ಪತ್ರಿಕೆ ಸಮಾರಂಭದ ಕಳೆ ಹೆಚ್ಚಿಸಿತು. ಇದರ ಸುಂದರ ಮುದ್ರಣ ಕುಟುಂಬದ ಸಮಗ್ರ ಮಾಹಿತಿ ಗಮನ ಸೆಳೆಯಿತು. ಬಳಸಿದ ಕ್ಯಾರಿಕೇಚರ್‌/ಇಲಸ್ಟ್ರೇಷನ್‌  ಸಾಧಾರಣ. ಅಂಥ ಕಲಾತ್ಮಕ ಅನ್ನಿಸಲಿಲ್ಲ. ಬಳಸುವ ಐಡಿಯಾ ಒಂದು ಉತ್ತಮ ಐಡಿಯಾ. ಒಟ್ಟಾರೆ ಪತ್ರಿಕೆ ಭಿನ್ನ ಮತ್ತು ಅರ್ಥಪೂರ್ಣ. ಇದು ಮುದ್ರಣ ಮಾಧ್ಯಮದ ಹೊಸ ಸಾಧ್ಯತೆ. ಮದುವೆ ಸಮಾರಂಭಕ್ಕೆ ಸುದ್ದಿ ಪತ್ರಿಕೆಯಂಥ ಸ್ಪರ್ಶ ನೀಡಿದ್ದು ಮಜವೆನಿಸಿತು. ಪತ್ರಿಕೆಯ ಸಂಸ್ಥಾಪಕರ ಕುಟುಂಬದ ಸಮಗ್ರ ನೋಟ ಕಟ್ಟಿಕೊಡುವ ಯತ್ನ ನಿಜಕ್ಕೂ ಅದ್ಭುತ. ಮೀಡಿಯಾ ಘರಾನಾದ ಬಗ್ಗೆ ಎಷ್ಟೋ ವಿಷಯ ತಿಳಿದುಕೊಳ್ಳುವ ಅವಕಾಶ ಮಾಧ್ಯಮದಲ್ಲಿ ಸಕ್ರಿಯರಾದವರಿಗೆ ದಕ್ಕಿತು. ಪತ್ರಿಕಾ ಲೋಕದಲ್ಲಿ ಬಹುದೊಡ್ಡ ಖಾನ್‌ದಾನ್‌ ಎಂದೇ ಹೆಸರಾದ ಗುರುಸ್ವಾಮಿ ಮತ್ತು ನೆಟ್ಟಕಲ್ಲಪ್ಪ ಅವರ ಕುಟುಂಬದ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಇದರ ಕೊರತೆಯನ್ನು ವೆಡ್ಡಿಂಗ್‌ ಹೆರಲ್ಡ್‌ ನೀಗಿಸಿದೆ. ಕುಟುಂಬವೊಂದರ ಮಾನವೀಯ ಸಂಬಂಧಗಳ ಸಮಗ್ರ ಮಾಹಿತಿಯನ್ನು ವೆಡ್ಡಿಂಗ್‌ ಹೆರಲ್ಡ್‌ ತುಂಬ ಸೊಗಸಾಗಿ ಕಟ್ಟಿಕೊಟ್ಟಿದೆ.
ಮುದ್ರಣ ಸಾಧ್ಯತೆಯ ಇಂಥದೊಂದು ಸಾಹಸವನ್ನು ಇದೇ ಮೊದಲ ಸಲ ನಾನು ನೋಡಿದ್ದು. ಹೆಚ್ಚೂ ಕಮ್ಮಿ ಇದೇ ಅವಧಿಯಲ್ಲಿ  ಮಾಜಿ ಸಚಿವ ಜನಾರ್ಧನ್‌ ರೆಡ್ಡಿ ಅವರ  ಮಗಳ ಅದ್ದೂರಿ ವಿವಾಹ ಸುದ್ದಿ ಮಾಡಿತು. ಅವರ ಡಿಜಿಟಲ್‌ ಮದುವೆ ಆಮಂತ್ರಣ ಪತ್ರಿಕೆ ಚಾನೆಲ್‌ಗಳಲ್ಲಿ ವಿಜೃಂಭಿಸಿತು. ಇದೂ ಒಂದು ಸಂವಹನ ಸಾಧ್ಯತೆ.  ಆದರೆ ‘ವೆಡ್ಡಿಂಗ್‌ ಹೆರಲ್ಡ್‌’  ಪತ್ರಿಕೆಯ ಉದ್ದೇಶ ಮನುಷ್ಯ ಸಂಬಂಧಗಳನ್ನು ಹೇಳುವುದಾಗಿದೆ.  ಗುರುಸ್ವಾಮಿ, ನೆಟ್ಟಕಲ್ಲಪ್ಪ ಅವರುಗಳಿಂದ ಮೊದಲುಗೊಂಡು ಒಟ್ಟಾರೆ ಕುಟುಂಬ ಆರಂಭದಿಂದ ಇಲ್ಲಿಯವರೆಗೆ ಮಾನವೀಯ ಸಂಬಂಧವನ್ನು ಜಾತ್ಯತೀತ, ಭಾಷಾತೀತ, ಧರ್ಮಾತೀತ, ಸೀಮಾತೀತ ಮತ್ತು ಮಾನವೀಯ ನೆಲೆಯಲ್ಲಿ ಕಟ್ಟಿಕೊಂಡು ಉಳಿಸಿಕೊಂಡು ಬಂದ ಬಗೆಯನ್ನು ವಿವರಿಸಿದೆ.  ಸಾಮರಸ್ಯದ ಬದುಕನ್ನು ಪ್ರತಿಪಾದಿಸುವುದು ಸರಳ. ಅದನ್ನು ಅಕ್ಷರಶಃ ಬಾಳುವುದಕ್ಕೆ, ಬದುಕುವುದಕ್ಕೆ ಬದ್ಧತೆಯೇ ಮುಖ್ಯ. ಅಂಥ ಬದುಕನ್ನು ಸಹಜವಾಗಿ ಮತ್ತು ಯಾವ ಆಡಂಬರವಿಲ್ಲದೇ ಈಗಲೂ ಬದುಕುತ್ತಿರುವ ಮತ್ತು ಆ ಬದ್ಧತೆಯನ್ನು  ಕಾಪಾಡಿಕೊಂಡು ಬಂದಿರುವ ಈ ಕುಟುಂಬಕ್ಕೆ ದಿಲ್‌ ಸೇ ಸಲಾಂ.
 ಮನುಷ್ಯ ಮನಸುಗಳು ಸಂಭ್ರಮವನ್ನು ಅತ್ಯಂತ ಸಹಜವಾಗಿ ಜೊತೆಯಾಗಿ ಸವಿಯುವುದು ಸಾಧ್ಯವಾಗಬೇಕು. ಅದನ್ನು ಸಾಧ್ಯವಾಗಿಸಿದ ಮತ್ತು ಯಾವ ಹಮ್ಮು ಬಿಮ್ಮುಗಳಿಲ್ಲದೇ ಸಮಾರಂಭಕ್ಕೆ ಬಂದ ಎಲ್ಲರೊಂದಿಗೆ ಮನಃಪೂರ್ವಕವಾಗಿ ಬೆರೆತ ಕುಟುಂಬ ಸದಸ್ಯರದು ಅತ್ಯಂತ ಹೃದ್ಯವಾದ ಮಾನವೀಯ ನಡೆ. ಮನುಷ್ಯ ಭಾವ ಒಳಗಿನಿಂದಲೇ ಶ್ರೀಮಂತವಾದಾಗ ಇದೆಲ್ಲ ಸಾಧ್ಯ ಎನ್ನುವುದು ನನ್ನ ನಂಬಿಕೆ. ಇದು ನನ್ನ ಬಹುಮುಖ್ಯವಾದ ಹುಡುಕಾಟ ಕೂಡ.  ಇಂಥದ್ದಕ್ಕೆ ಸಾಕ್ಷಿಯಾದಾಗಲೆಲ್ಲ ದಿಲ್‌ ಖುಷ್‌.
ನಿಖಿಲ್‌ ವೈವಾಹಿಕ ಬದುಕು ಸುಖಮಯವಾಗಿರಲಿ. ಅರ್ಥಪೂರ್ಣವಾಗಿರಲಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...