ವಿಷಯಕ್ಕೆ ಹೋಗಿ

‘ಬಲ’ಗೊಳ್ಳುತ್ತಿರುವ ರಾಹುಲ್‌


ನೆಹರೂ ನೇತೃತ್ವದ ಕಾಂಗ್ರೆಸ್‌ ತೊರೆದ ಇಂದಿರಾ ಗಾಂಧಿ ಹೊಸ ಕಾಂಗ್ರೆಸ್‌ ಕಟ್ಟಿಕೊಂಡರು. ರಾಜೀವ್‌ ಅದನ್ನೇ ಮುಂದುವರಿಸಿದರು. ಇಬ್ಬರೂ ಕೊಲೆಯಾದರು. ಅಲ್ಲಿಯವರೆಗೂ ಭವ್ಯವಾಗಿದ್ದ ಕಾಂಗ್ರೆಸ್‌ ಎನ್ನುವ ಮಹಲಿಗೆ ಮುದಿ ರಾಜಕಾರಣಿಯೊಬ್ಬ ಹೊಕ್ಕುಬಿಟ್ಟ. ಧ್ವಂಸದ ಅಧ್ಯಾಯ ಆರಂಭಿಸಿ, ‘ಬಳು ಹೊಕ್ಕ ಮನೀ ಅಳು’ ಎನ್ನುವಂತೆ ಕಾಂಗ್ರೆಸ್‌ ಅವಸಾನಕ್ಕೆ ನಾಂದಿ ಹಾಡಿದ. ಅಲ್ಲಿಂದಾಚೆಗೆ ಕಾಂಗ್ರೆಸ್‌  ಶೈತಾನ್‌ ಹೊಕ್ಕ ಮಹಲ್‌ ಆಗಿತ್ತು. ಅಕ್ಷರಶಃ ಭೂತ ಬಂಗಲೆಯಾಗಿತ್ತು.

 ತೀವ್ರ ಒತ್ತಡದಲ್ಲಿದ್ದ ಸೋನಿಯಾ ಅಳುಕುತ್ತಲೇ ಮಹಲು ಹೊಕ್ಕರು. ಗಾಂಧಿ ಮನೆತನದ ಸೊಸೆ, ಮೂಲ ಇಟಲಿಯ ಸಮಚಿತ್ತದ ಹೆಣ್ಣುಮಗಳು ಹಲ್ಲಿ, ಬಾವಲಿ, ಹಾವುಗಳಿಂದ ತುಂಬಿದ ಮಹಲನ್ನು ಸ್ವಚ್ಛಗೊಳಿಸಿ ಮತ್ತೆ ವಾಸ ಯೋಗ್ಯವಾಗಿಸಿಕೊಂಡರು. ಅಳಿದುಳಿದ ವಫಾದಾರ್‌ಗಳು ಕೋಠ್ರಿ ಹೊಕ್ಕರು. ಕೆಲವರು ಅಕ್ಷರಶಃ ಕಾವಲಾದರು. ಧ್ವಂಸದಲ್ಲಿ ಹೋದ ಮಹಲಿನ ಮಾನ ಉಳಿಸಿದರು. ರಾಜಕೀಯ ಮತ್ಸರಿಯರ ಮಸಲತ್ತುಗಳ ನಡುವೆಯೂ ಯಶಸ್ಸು ಕಾಲಬುಡಕ್ಕೇ ಬಂದಾಗ ಧಿಕ್ಕರಿಸಿ ಸರದಾರನೊಬ್ಬನಿಗೆ ದೇಶದ ಭವಿಷ್ಯ ಕಟ್ಟುವ ಕೆಲಸ ವಹಿಸಿ ಬೆನ್ನಿಗೆ ನಿಂತರು. ಮನೆಯ ಹಿರಿಯಕ್ಕನಂತೆ ನಿಂತು ಕುಸಿಯಲಿದ್ದ ಮಹಲನ್ನು ಹೆಗಲು ಕೊಟ್ಟು ತಡೆದರು.  ಹಗರಣದ ಆರೋಪ, ಪ್ರತ್ಯಾರೋಪಗಳ ಬೆಂಕಿಮಳೆಗೆ ಮಹಲು ಮತ್ತೆ ತುತ್ತಾಯಿತು.

  ದೇಶದ ಒಂದು ಮೂಲೆಯಲ್ಲಿ ಕೋಮು ಗಲಭೆ, ಹಿಂಸೆ. ಪ್ರತಿಹಿಂಸೆ ಎಬ್ಬಿಸಿ ಅದರ ಕಾವನ್ನು ಎಲ್ಲೆಡೆ ಹಬ್ಬಿಸಿದವರು ಈಗ ರಾಜಕೀಯವಾಗಿಯೂ ದೈತ್ಯಾಕಾರದಲ್ಲಿ ಎದ್ದು ನಿಂತಿದ್ದರು. ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರದಂಥ ಆ ಸಣ್ಣದೊಂದು ಅಲೆ ಕ್ರಮೇಣ ಅಬ್ಬರಿಸಿ ಸುತ್ತುವರಿದು ಇದೀಗ ಪುರಾನೀ ಮಹಲನ್ನೇ ಅಲ್ಲಾಡಿಸಿ ಭಾಗಶಃ ಕೆಡವಿ ಹಾಕಿತು. ಆಘಾತ ತಡಕೊಂಡು ಅಳುದುಳಿದ ಅವಶೇಷಗಳಿಂದ ಮತ್ತೆ ಮಹಲಿನ ರಿಪೇರಿ ಮಾಡುತ್ತ ಸುಸ್ತಾದ ಸೋನಿಯಾ, ಮಹಲಿನ ಜವಾಬುದಾರಿಯನ್ನು ಖಾನ್‌ದಾನಿನ ಕೊನೆಯ ಕುಡಿ ರಾಹುಲ್‌ಗೆ ವಹಿಸಲು ನಿರ್ಧರಿಸಿದರು. ಅದನ್ನು ತುಂಬ ಜವಾಬುದಾರಿಯಿಂದಲೇ ಸ್ವೀಕರಿಸಿರುವ ರಾಹುಲ್‌, ಇತ್ತೀಚೆಗಿನ ಉತ್ತರದ ಅಗ್ನಿಪರೀಕ್ಷೆಯಲ್ಲಿ ಯಾಕೋ ಬೆಂದುಹೋದ. ಮಸಲತ್ತುಗಳ ಮಹಾಪೂರಕ್ಕೆ ಕೊಚ್ಚಿ ಹೋದ. ಅಲ್ಲಿನ ಕಹಿಯಿಂದ ಪಾಠ ಕಲಿತು ಅಲೆಗೆ ಎದೆಯೊಡ್ಡಿ ನಿಲ್ಲುವ ತಾಕತ್‌ ಅನ್ನು ಕಡೆಗೂ ಕಂಡುಕೊಂಡ. ಅರಬೀ ಸಮುದ್ರಕ್ಕೆ ಎದುರುನಿಂತ. ರಭಸದ ಅಲೆಗಳಿಗೆ ಎದೆಯೊಡ್ಡಿದ. ಅದೂ ಏಕಾಂಗಿಯಾಗಿ.
 ಈ ನಲವತ್ತೇಳರ ಯುವಕ ತನ್ನ ಪೆಪ್ಪರ್‌ ಸಾಲ್ಟ್‌ ದಾಡಿ ಟ್ರಿಮ್‌ ಮಾಡಿಕೊಳ್ಳಲು ಟೈಮಿಲ್ಲದಂತೆ ಪೂರ್ವದ ಗುಜರಾತ್ ರಾಜ್ಯವನ್ನು ಸುತ್ತಿ ಪಕ್ಷವನ್ನು ಮತ್ತೆ ಬಲಪಡಿಸಿದ. ತನ್ನನ್ನು ತಾನು ಕಟ್ಟಿಕೊಂಡ. ಪಯಣದಲ್ಲಿ ಎದುರಾದ ಪಾಟೀದಾರ್ ಸಮಾಜದ ಹೋರಾಟಗಾರ ಹಾರ್ದಿಕ್‌ ಮತ್ತು ದಲಿತ ಲೋಕದ ಜಿಗ್ನೇಶ್‌ ಮೇವಾನಿ ಮತ್ತಿತರ ಉದಯೋನ್ಮುಖ ಆಶಾಕಿರಣಗಳನ್ನು ಜೋಡಿದಾರ್‌ ಆಗಿಸಿಕೊಂಡ. ದಲಿತ ಪ್ರಜ್ಞೆ ಮತ್ತು ಸುಸ್ಥಿಯಲ್ಲಿರುವ ಪಾಟೀದಾರ್ ಸಮುದಾಯದ ಮೀಸಲಾತಿ ದನಿ ಮತ್ತಿತರ ನಿರೀಕ್ಷೆಗಳನ್ನು ಸಮಚಿತ್ತ ಭಾವದಲ್ಲಿ ಕಂಡು ದಿಟ್ಟ ನಡೆಯನ್ನೇ ರೂಪಿಸಿದ. ಜನರ ಭಾವನೆಗಳಿಗೆ ಸ್ಪಂದಿಸಿದ. ಅವರ ಕಷ್ಟ ಸುಖ ಕೇಳಿದ. ಅವರಿಗೆ ಹತ್ತಿರವಾದ. ಗೆದ್ದೆತ್ತಿನ ಬಾಲ ಹಿಡಿವ ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ ನಡೆಯ ನಡುವೆಯೂ!
 ಎಲ್ಲಿ ನೋಡಿದಲ್ಲಿ ‘ಕಾಂಗ್ರೆಸ್‌ ಮುಕ್ತ’ ಎನ್ನುವ ಜಾಲಿಮುಳ್ಳುಗಳ ಬೇಲಿಗಳನ್ನೇ ಜಡಿಯಲಾಗಿತ್ತು. ಧೈರ್ಯದಿಂದ ಮುನ್ನುಗ್ಗಿದ ರಾಹುಲ್, ಬೇಲಿ ಭೇದಿಸಿ ಮರುಭೂಮಿಯಲ್ಲಿ ಹೊಸ ಭರವಸೆಯ ಹಸ್ತ ಬೀಸಿದ. ಭಾಯಿಚಾರಾದ ಗುಲಾಬಿಯನ್ನರಳಿಸುವ ಹಂಬಲವನ್ನು ಮತ್ತೆ  ಬಿತ್ತಿದ. ಇನ್ನೇನು ಫಸಲು ಕೈಗೆ ಬರುವ ಹೊತ್ತು. ಆಗಲೇ ಶಕುನದ ಹಕ್ಕಿಗಳು ರಾಹುಲ್‌ ಮಟ್ಟಿಗೆ ಅಪಶಕುನವನ್ನೇ ನುಡಿಯುತ್ತಿವೆ. ಫಲಿತಾಂಶ ಏನೇ ಬರಲಿ. ಒಂದೊಮ್ಮೆ ಸೋಲು ಕಂಡರೆ ಅದೊಂದು ವೀರೋಚಿತ ಸೋಲು. ಆದರೆ, ಮುಂಬರುವ ಮಹಾಚುನಾವಣೆಗೆ ಸಜ್ಜಾಗುವ ದೊಡ್ಡ ಭರವಸೆ ಮೂಡಿಸುವಷ್ಟರಮಟ್ಟಿಗೆ ಸಾಮರಸ್ಯದ ಶಕ್ತಿಗಳ ಬಲಪಡಿಸಿದ್ದು ದೊಡ್ಡ ಗೆಲುವೇ.

 ರಾಹುಲ್‌ ನಿಜಕ್ಕೂ ಮುಗ್ಧ. ಅಷ್ಟೇ ಅಗಾಧ ಕಾಳಜಿಯುಳ್ಳ ನೇತಾರ. ಆತನ ಮುಗ್ಧತೆಯಲ್ಲಿ ಕಪಟವಿಲ್ಲ. ತೀರ ಮಳ್ಳತನವಿಲ್ಲ. ಮಗುವಿನ ಮನಸಿದೆ. ಮಂದಿರ–ಮಸೀದಿ ಕಲ್ಪನೆಗಳ ಬಗ್ಗೆ ಮತಾಂಧತೆ ಇಲ್ಲ. ಆದರೂ ಪ್ರದೇಶದ ಪ್ರಭಾವದಿಂದ, ಕಾಲದ ಒತ್ತಡದಿಂದ ಮಂದಿರ, ದರ್ಗಾ ಸುತ್ತಿದ್ದಾನೆ. ಮಾಲೆ ಧರಿಸಿದ್ದಾನೆ. ಗರ್ಭಗುಡಿಗಳಿಗೆ ತಲೆಬಾಗಿದ್ದಾನೆ. ಮಂಡಿಯೂರಿದ್ದಾನೆ. ಮುಸ್ಲೀಮರ ನಿರ್ಲಕ್ಷ್ಯದ ದಿವ್ಯ ಮಂತ್ರವೊಂದು  ರಿಂಗಣಿಸಿದಾಗೆಲ್ಲ ಸುಮ್ಮನೇ ಆಲಿಸಿ ಮುಂದೆ ಸಾಗಿದ್ದಾನೆ. ಮೊಹಲ್ಲಾಗಳಿಗಿಂತ ಹೆಚ್ಚಾಗಿ ದಲಿತರ ಹಟ್ಟಿಗಳಿಗೆ, ಜೋಡಿದಾರ್‌ಗಳ ಸಮುದಾಯಗಳ ಝೋಪಡಿಗಳಿಗೆ ಎಡತಾಕಿದ್ದಾನೆ. ಇದಕ್ಕೆ ಅಸಹಾಯಕ ಎಂದು ತಮ್ಮನ್ನು ತಾವು ಯಾವತ್ತೂ ಭಾವಿಸದ ಮುಸ್ಲೀಮರೂ ಬೇಸರಿಸಿಲ್ಲ. ಏನೇ ಆಗಲಿ ರಾಹುಲ್‌ ಸಾಕಷ್ಟು ಬದಲಾಗಿದ್ದಾನೆ. ರಾಜಕಾರಣಿಯಾಗಿ ಪಕ್ವಗೊಳ್ಳುತ್ತಿದ್ದಾನೆ ಎಂದೇ ಎಲ್ಲ ಹರಸುತ್ತಿದ್ದಾರೆ.

 ಸಮರ್ಥ ನಾಯಕನಾಗಬಲ್ಲ ಎಲ್ಲ ಗುಣಗಳು ರಾಹುಲ್‌ನಲ್ಲಿವೆ. ತನ್ನೆಲ್ಲ ಶಕ್ತಿ ಒಂದುಮಾಡಿಕೊಂಡು ಎದ್ದು ನಿಲ್ಲಬೇಕಿತ್ತಷ್ಟೇ. ನಿಂತಿದ್ದಾನೆ. ಜೊತೆಯಲ್ಲಿ ಹೊಸ ಹುರುಪಿನ ಯುವ ನಾಯಕರ ಪಡೆ ರೂಪಿಸಿಕೊಳ್ಳುತ್ತಿದ್ದಾನೆ. ಅಜ್ಜಿ. ಅಪ್ಪ ಮತ್ತು ಅಮ್ಮ ಕಟ್ಟಿದ್ದ ಕಾಂಗ್ರೆಸ್‌ನಲ್ಲಿ ಈಗೀಗ ಉಳಿದಿತ್ತಾದರೂ ಏನು? ಮುದಿ ನಾಯಕರು, ತರಲೆಗಳು ಮತ್ತು ತಲೆಹಿಡುಕರಿಂದಲೇ ತುಂಬಿಹೋಗಿದ್ದ ಸೊರಗಿದ ಪಕ್ಷವಾಗಿತ್ತಷ್ಟೇ. ಅದನ್ನೇ ಬಳುವಳಿಯಾಗಿ ಪಡಕೊಂಡ ರಾಹುಲ್‌ಗೆ ಒಂದು ಜೀವಂತ ಆಪ್ತ ಪಡೆ, ಕ್ರಿಯಾಶೀಲ ಮನಸುಳ್ಳ ಕಾರ್ಯಕರ್ತರ ದಂಡು ಕಟ್ಟಿಕೊಳ್ಳುವ ದೊಡ್ಡ ಸವಾಲಿತ್ತು. ಸಮಾಧಾನದಿಂದಲೇ ಸವಾಲನ್ನು ಕೈಗೆತ್ತಿಕೊಂಡಿದ್ದಾನೆ. ಮುಜುಗರ, ಟೀಕೆ, ಅವಮಾನ, ಅಪಹಾಸ್ಯಗಳನ್ನು ಎದುರಿಸಿದ್ದಾನೆ. ಒಳಗೆಲ್ಲೊ ಮಿಸುಕಾಡುತ್ತಿದ್ದ ನಾಯಕತ್ವ ಗುಣಕ್ಕೆ ಇದೆಲ್ಲದರಿಂದ ಟಾನಿಕ್‌ ಪಡೆದುಕೊಂಡಿದ್ದಾನೆ.

 ಗುಜರಾತ್‌ ಚುನಾವಣೆ ರಾಹುಲ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಏನೋ ಹೌದು. EVM ಪ್ರಾಂಜಲವಾಗಿದ್ದಲ್ಲಿ ‘ಕಾಂಗ್ರೆಸ್‌ ಮುಕ್ತ’ದ ಮಾತು ಸಧ್ಯಕ್ಕೆ ಅಸಾಧ್ಯ ಎನ್ನುವ ಸಂದೇಶವನ್ನಾದರೂ ಈ ಫಲಿತಾಂಶ ಹೊತ್ತು ತರಲಿದೆ. ಪ್ರಚಂಡ ಬಹುಮತದ ಸರ್ಕಾರ ಯಾವ ಪಕ್ಷಕ್ಕೂ ಕಷ್ಟ. ಸರಳ ಬಹುಮತ ಸಾಧ್ಯವಾಗಬಹುದು ಅಷ್ಟೇ. ಇತರೆ ಸಂಖ್ಯೆಗಳು ವೃದ್ಧಿಯಾಗಿ, ಅವುಗಳ ನೆರವಿನಿಂದ ಒಂದು ಸರಳ ಬಹುಮತದ ಸರ್ಕಾರ ರೂಪಿಸುವ ಸಾಮರ್ಥ್ಯ ಉಭಯ ಪಕ್ಷಗಳಿಗೂ ಸಾಧ್ಯವಾಗಿಸುವ ಫಲಿತಾಂಶ ಬಂದರೇ?! ಹಾಗೆಯೇ ಆಗಲಿ ಎಂದು ಆಶಿಸೋಣ. Absolute majority ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ಸರ್ವಾಧಿಕಾರತ್ವಕ್ಕೆ ಹಾದಿ ರೂಪಿಸುತ್ತದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...