ವಿಷಯಕ್ಕೆ ಹೋಗಿ

ದಿವ್ಯಾನುಭವ ನೀಡಿದ ಉಸಿರಿನಾಟ


Theatre Olympics 2018/Organised by: NSD Bengaluru Centre
Play (Nob-verbal): Caesarean Section. Essays on Suicide/Enacted by: ZAR Theatre Polland
Direction- Jarosław Fret


ಬದುಕು ಸಾವನ್ನೇ ದಿಟ್ಟಿಸುತ್ತಲಿರುವುದಲ್ಲ. ಜೀವ ದೇಹದಿಂದ ಅನಂತದೆಡೆಗೆ ಹಾರುವ ಕ್ಷಣದತನಕ ಒಳಗೇ ಇರುವ ಅದಾವುದೋ ಶಕ್ತಿ ಅಥವಾ ಚೇತನ ಮನಸು, ದೇಹ, ಜೀವ, ಆತ್ಮದ ಜೊತೆ ನಿರಂತರ ಅನುಸಂಧಾನದಲ್ಲಿರುತ್ತದೇನೋ.. ಬದುಕಿನ ಯಾವುದೋ ಹಂತದಲ್ಲಿ ದುರ್ಬಲಗೊಳ್ಳುವ ಮನಸು ಸಾವಿನ ಧ್ಯಾನಕ್ಕೆ , ಆತ್ಮಹತ್ಯೆಯಂಥ ಪ್ರವೃತ್ತಿಗಿಳಿವುದೇ! ಆಸೆ, ಪಡೆವ. ಕಳಕೊಳ್ಳುವ ಹಂಬಲ, ತುಡಿತ ... ಎಲ್ಲದರಲ್ಲೂ ಸೋತು ನಿಂತಾಗ, ಇಷ್ಟು ವಿಶಾಲ ಟೈಂ ಅಂಡ್‌ ಸ್ಪೇಸ್‌ನಲ್ಲಿ ತನ್ನದೇ ಸ್ಪೇಸ್‌ಗಾಗಿ ತಡಕಾಡಿ ನಿರಾಶಗೊಂಡಾಗ ಎಲ್ಲವನ್ನು ಶಾಶ್ವತವಾಗಿ ಮರೆಯಲು ಅಂಥದೊಂದು ಪ್ರವೃತ್ತಿ ಶುರುವಾಗುತ್ತದೆ. ಸೋಲುಗಳನ್ನೋ, ಅವಮಾನಗಳನ್ನೋ, ಹತಾಶಗಳನ್ನೋ, ನೋವುಗಳನ್ನೋ, ಮುಜುಗರಗಳನ್ನೋ... ಅದೇನೇನನ್ನೋ ಕಾರಣಗಳ ಮಾಡಿಕೊಳ್ಳಬಹುದು ಆ ಪ್ರವೃತ್ತಿ ! ಆತ್ಮ ಹತ್ಯೆಯ ನಿರ್ಣಾಯಕ ಕ್ಷಣದಲ್ಲಿ ಅದಾವುದೋ ನಮ್ಮೊಳಗಿನ ಚೇತನ ಮತ್ತೆ ರಚ್ಚೆ ಹಿಡಿದು ಹಿಂದಕ್ಕೆಳೆಯುತ್ತದೆ. ತನಗೆ ಈ ಕ್ಷಣ ನೀನು ಬೇಕೇ ಬೇಕೆನ್ನುವ ಹಟಕ್ಕೆ ಬಿದ್ದ ಪುಟ್ಟ ಕಂದ, ಅಮ್ಮನ ಸೆರಗು ಹಿಡಿದು ನಿಲ್ಲುವ ಹಾಗೆ. ಸ್ವಲ್ಪ ನಿಂತು ಬಿಡೋ, ಕತ್ತಲಾವರಿಸುತ್ತಿದೆ, ಮಳೆ ಜೋರು, ಗಾಳಿಯೂ ಬಿರು ಬೀಸುತ್ತಲಿದೆ, ಗುಡುಗು ಮಿಂಚೂ ಮೂಡುತ್ತಿದೆ, ಪ್ರಶಾಂತ ನದಿಯ ಅಲೆಗಳು ಯಾಕೋ ರೊಚ್ಚಿಗೆದ್ದಂತಿವೆ, ದೋಣಿ ಸಾಗದು, ಸ್ವಲ್ಪ ಸಮಯ ನಿಂತು ಬಿಡೋ... ಹೊರಟೇ ನಿಂತವರನ್ನು ತಡೆಯುವ ಅದಮ್ಯ ಪ್ರೇಮಿಯ ಗಜಲ್ ಹಾಡಿನ ಹಾಗೆ.
ದೇಹ ಗೂಡಲ್ಲಿ ಸ್ವಚ್ಛಂದವಾಗಿ ಹಾರಾಡುವ ಪ್ರಾಣ ಪಕ್ಷಿ ಅನಂತದೆಡೆ ರೆಕ್ಕೆ ಅಗಲಿಸಲು ತಾವು ತೊರೆಯುವುದಕ್ಕೆ ಸಜ್ಜಾಗುವುದಾದರೂ ಹೇಗೆನ್ನುವ ದಿಗಿಲು ನನ್ನದು! ಉಳಿಸಿಕೊಳ್ಳಲು ಅದರೊಂದಿಗೆ ಒಳಗಿನ ಚೇತನದ ಸೆಣಸಾಟ ಕಲ್ಪನೆಗೆ ಮೀರಿದ್ದು. ದಾರ್ಶನಿಕನಿಗೆ ದಕ್ಕಬಹುದಾದ ಇಂಥ ಅನುಭವವನ್ನು ರಂಗಮುಖೇನ ಅದ್ಭುತ ಬಹುಸ್ವರ ಸಂಗೀತದೊಂದಿಗೆ ಕಟ್ಟಿಕೊಟ್ಟ ಪೊಲೆಂಡ್‌ ನ ಝಾರ್‌ ತಂಡದ ಪ್ರತಿ ನಟ, ನಟಿ, ಸಂಗೀತ ಕಲಾವಿದರು, ನಾಟಕದ ವಸ್ತುವಿನ ಆತ್ಮದ ಬೆಳಕನ್ನೇ ರಂಗದ ಮೇಲೆ ಸೂಸಿದಂಥ ಬೆರಗು ಸೃಷ್ಟಿಸಿದ ಬೆಳಕು ವಿನ್ಯಾಸಕಾರ, ತಂತ್ರಜ್ಞರಿಗೆ ನಾನು ಫುಲ್‌ ಫಿದಾ. ಸಂಭಾಷಣೆಗಳಿಲ್ಲದೇ ಅಭಿನಯ, ಸಂಯೋಜನೆ, ಪ್ರತಿ ಪರಿಕರದ ಜೊತೆಗಿನ ನಟ, ನಟಿಯರ ಅನುಸಂಧಾನದಂಥ ತೀವ್ರ, ತೀಕ್ಷ್ಣ ಮೂವ್‌ಮೆಂಟ್‌ಗಳೊಂದಿಗೆ ತನಗೇ ದರ್ಶನವಾದಂತಿರುವ ಭಾವವನ್ನು ದೃಶ್ಯರೂಪದಲ್ಲಿ ಬಿಚ್ಚಿಟ್ಟ ನಿರ್ದೇಶಕನಿಗೆ ದಿಲ್‌ ಸೇ ಸಲಾಂ. ಇಂಥದೊಂದು ಅದ್ಭುತ ಅನುಭವ ಸವಿಯಲು ಥಿಯೇಟರ್‌ ಓಲಿಂಪಿಕ್ಸ್‌ ಮೂಲಕ ಅವಕಾಶ ಮಾಡಿಕೊಟ್ಟ ಸಿ. ಬಸವಲಿಂಗಯ್ಯ.. ಥ್ಯಾಂಕ್‌ ಯು.
ಚಿತ್ರ ಕೃಪೆ: Thai Lokesh

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...