ವಿಷಯಕ್ಕೆ ಹೋಗಿ

ತಪಸ್ಸು! ಹೀಗೂ ಒಂದು ಬಂಡಾಯ

ಅಂಗೀ ತೆಗೆದು
ಅಂಗಾತಾಗಿ ಮಲಗಿದ್ದ
ಸಂಗಾತಿಯನ್ನು
ಕಂಡು
ಸಂಗೀತವಾದಳು ಅವಳು
ಕಾಮ್ರೇಡ್, ಕಾಮ್ರೇಡ್
ಅನ್ನುತ್ತ... ಕಾಮಾಗಿ
ರೇಡ್
ಮಾಡಿದಳು

ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ,  ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ  ಇದೀನಿ' ಅಂದ್ರು.  ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ.

ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು.
-ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು.
ಸ್ವಾಮೀಜಿ ಇಲ್ಲೇ ಯಾಕೆ ತಪಸ್ಸು? ಎಂದು ಕುತೂಹಲದಿಂದ ಕೇಳಿದೆ.
 ಸ್ವಾಮೀಜಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ, ರಸ್ತೆಯಲ್ಲಿ ಕಾರಿನ ಎದುರು ಬಸವಣ್ಣನೇ ಬಂದು ನಿಂತಂತೆನಿಸಿತಂತೆ. ಕೆಳಕ್ಕಿಳಿದರೆ ಸುಂದರ ಬೆಟ್ಟ! ಬೆಟ್ಟದ ಸುತ್ತ ಬಸವಣ್ಣ ನಡೆದಾಡುವುದು ಕಾಣಿಸಿತಂತೆ... ಹೀಗಾಗಿ ಬೆಟ್ಟದ ಮೇಲೆ ಪುಟ್ಟದಾಗಿ ಕಟ್ಟಿದ ಗುಡಿಯಲ್ಲಿ ಸ್ವಾಮಿಗಳು ತಪಸ್ಸು ಕೂತರಂತೆ. ಅವರು ತಪಸ್ಸಿನಲ್ಲಿ ಏನೇನು ಕಾಣ್ತಿದಾರೋ! ಅಂತೂ ಸ್ವಾಮೀಜಿ ಕಾಣಲು ಜನ  ಸೇರುತ್ತಿದ್ದಾರಂತೆ... ಎಂದು ಗೌಡರು ನಕ್ಕರು.
 ಸ್ವಾಮೀಜಿಗೆ ಬಸವಣ್ಣ ಕಂಡರೋ ಇಲ್ಲವೋ ಗೊತ್ತಿಲ್ಲ. ಆ ಬೆಟ್ಟ ಮಾತ್ರ ಪ್ರಶಸ್ತ ಜಾಗ!
ಸ್ವಾಮೀಜಿ ಬೆಳಗಾವಿಗೆ ಹತ್ತಿರದವರು. ಲೋಕಕಲ್ಯಾಣಕ್ಕೆ ಆಯ್ದುಕೊಂಡ ಜಾಗ, ತಪಸ್ಸಿನ ಮಾರ್ಗವೂ ಸೂಕ್ತವಾಗೇ ಇದೆ.
 ಅಲ್ಲಾ ಗೌಡರೆ, ಬೆಟ್ಟಗಳು, ಗುಡ್ಡಗಳ ಮೇಲೆ ಎಷ್ಟೆಲ್ಲ ಜನಾ ಕಣ್ಣು ಹಾಕ್ತಾರೆ... ಕಲ್ಲು, ಅದಿರು, ಗ್ರಾನೈಟ್ ಅಂತೆಲ್ಲ ಎಂಥಿಂಥ ಮಹಾತ್ಮರು ಬೆಟ್ಟ, ಗುಡ್ಡ ನುಂಗ್ತಿದಾರೆ..  ಪಾಪ ಈ ಸ್ವಾಮೀಜಿ ಜಪ, ತಪದ ನೆಪದಲ್ಲಾದರೂ ಹಿಗೂ ಬೆಟ್ಟ ರಕ್ಷಣೆ ಮಾಡ್ತಾರೆ ಬಿಡಿ. ಬಳ್ಳಾರಿ, ಸೊಂಡೂರು, ಗದಗ ಕಪ್ಪತಗುಡ್ಡದಂಥ ನೂರಾರು ಬೆಟ್ಟ ಗುಡ್ಡಗಳತ್ತಲೂ ಸ್ವಾಮೀಜಿ ಕಣ್ಣು ಹಾಯಿಸಲಿ. ಅಲ್ಲೂ  ಬಸವಣ್ಣ ಕಂಡಾನು... ಅಲ್ಲೂ ಜಪ, ತಪ ಮಾಡಲಿ... ಕನಿಷ್ಠ ಅಳಿದುಳಿದ ಕೆಲ ಬೆಟ್ಟಗಳಾದರೂ ಗಣಿಚೋರರಿಂದ ರಕ್ಷಣೆಯಾದರೂ ಪಡಕೋತಾವೆ ಎಂದೆ ನಾನು.
ಬಳ್ಳಾರಿ ಬೆಟ್ಟಗಳ ಮೇಲೆ ಸ್ವಾಮೀಜಿ ಕಣ್ಣು ಹಾಕಿದ್ರಂತ ಇಟ್ಕೊ, ಗಣಿಧಣಿಗಳು ಸುಮ್ಮನೇ ಬಿಡ್ತಾರಾ ಅಂದ್ರು ಗೌಡ್ರು.
ಅದೂ ನಿಜಾನೇ. ಆಗಲೇ ಅಗೆದು ಹಾಕಿದ ಜಾಗದಲ್ಲಿ ದೊಡ್ಡ ಕಂದರಗಳಿದಾವಲ್ಲ, ಅಲ್ಲಿ ಕಣ್ಣು ಹಾಕಿದವರನ್ನೆಲ್ಲಾ ಲಿಂಗೈಕ್ಯ ಮಾಡಿಸಿಬಿಡ್ತಾರಂತೀರೇನು? ಅಂದೆ.
ಗೌಡ್ರು ಮತ್ತೆ ನಕ್ಕರು. ಆದ್ರೂ ಬಂಡೆಗಳ ಮೇಲೆ ಸ್ವಾಮೀಜಿಗಳದು ಹೀಗೂ ಒಂದು ಬಂಡಾಯ ಚಿಗುರಲಿ ಇದೂ ಒಳ್ಳೆಯ ಐಡಿಯ ಅಲ್ವೇನ್ರಿ ಗೌಡರೆ ಅಂದೆ.
ಹೌದು ತಾಳು. ಇದಕ್ಕೇನಾರೂ ಒಂದು ಮಾಡೋಣ ಅಂದ್ರು ಗೌಡರು.
ನನಗೆ ಚಂಪಾ ಅವರ ಈ 'ಹಣಿ'ಯುವ ಕವಿತೆ ನೆನಪಾಯ್ತು. 


'ನಾವು ಬಂಡೆಗಳ ಮೇಲೆ
ಚಿಗುರಬೇಕಾಗಿದೆ'
-ಎಂದು ಬಂಡಾಯ ಕವಿಯೊಬ್ಬ
ಚೀರಿಕೊಂಡ.
ನಮ್ಮ ಅಗ್ರಹಾರದ
ಅನಂತಮುಖೀ ಭಟ್ಟ
ಬೋಳು ತಲೆ ಮೇಲೆ ನಿಗುರಿ ನಿಂತ
ಚಂಡಿಕೆ ನೇವರಿಸುತ್ತ,
'ನಾವೂ ಹೀಗೇ ಚಿಗುರಿದ್ದು'
-ಎಂದುಕೊಂಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರ...