ವಿಷಯಕ್ಕೆ ಹೋಗಿ

ಇದು ನಾವು ಬದುಕುತ್ತಿರುವ ವ್ಯವಸ್ಥೆ... ನಮಗೇನು ಬೇಕು?

ನಮ್ಮದನ್ನು ಇನ್ನಾರೋ ಬಳಿಯಬೇಕು. ನಮ್ಮದಕ್ಕೆ ನಾವೇ ಮೂಗುಮುಚ್ಚಿಕೊಂಡರೂ ಅವರು ಮಾತ್ರ ಮೂಗು, ಬಾಯಿ ತೆರಕೊಂಡೇ ಎಲ್ಲ ಸಹಿಸಿಕೊಂಡು ಬಳಿಯಬೇಕು. ಹೇಲು, ಉಚ್ಚೆ ಬಳಿವ ಕೈಗಳಿಗೆ ಹಣ ದಕ್ಕುವುದಾದರೂ ಎಷ್ಟು? ಅದರ ವಾಸನೆ ಹೋಗುವಂತೆ ಕೈಗೆ ಬಳಿಯಬೇಕಾದ ಸಬಕಾರಕ್ಕೂ ಅದು ಸಾಲದು. ಇನ್ನು ಇವರ ನಂಬಿದವರ ಹೊಟ್ಟೆಗೆ?
ಸಾರ್ವಜನಿಕ ಸ್ಥಳಗಳನ್ನು ನಾವು ಬಳಸಿಕೊಳ್ಳುವ ಮತ್ತು ಅದರ ಬಗ್ಗೆ ನಮಗಿರುವ ಕಾಳಜಿಯ ಪರಿ ಇದು. ರೈಲುಗಳಲ್ಲಿ ಹೇಲುವುದಕ್ಕೆ, ಉಚ್ಚೆ ಹೊಯ್ಯುವುದಕ್ಕೆ ಒಂದು ನಮ್ಮದೇ ಮಿತಿ, ರೀತಿ, ರಿವಾಜುಗಳಿರಬೇಕು ಎಂದೆನಿಸುವುದೇ ಇಲ್ಲ. ಅದು ಹೇಳಿ ಕೇಳಿ ಬರುತ್ತದೆಯೇ ಎನ್ನುವ ಮಾತಲ್ಲಿ ಇರುವುದು ನಮ್ಮ ಉಡಾಫೆ ಅಷ್ಟೇ ಅನ್ನೋದು ನಮ್ಮರಿವಿಗೇ ಬರುವುದಿಲ್ಲ. ಅಥವಾ ಇಲಾಖೆಗಳು ಅದರ ನಿರ್ವಹಣೆಯ ಬಗ್ಗೆ ಹೊಸದಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಅದನ್ನು ಒಂದೆರಡು ಬೋಗಿಗೆ ಹೋಗಿ ಶೇಖರಣೆಯಾಗುವಂತೆ ನೋಡಿಕೊಳ್ಳುವ ಪೈಪಿಂಗ್ ವ್ಯವಸ್ಥೆ ಮತ್ತು ಅದನ್ನು ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವೂ ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಏನು?
ಹಸಿದವನಿಗೆ ರಸ್ತೆಯಾದರೇನು ರೈಲ್ವೆ ಟ್ರ್ಯಾಕ್ ಆದರೇನು... ಜನ ಸುತ್ತುವ ಜಾಗವೊಂದಿದ್ದರೆ ಆತ ಭಿಕ್ಷೆ ಬೇಡಿಯಾದರೂ ತನ್ನ ದಿನದ ತೊತ್ತಿನ ಚೀಲ ತುಂಬಿಸಿಕೊಂಡಾನು.. ನಮ್ಮೊಳಗಿನ ಈ ಮಾನವೀಯ ತುಡಿತವನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಬಡವರು ಮತ್ತು ಭಿಕ್ಷಾಟನೆ ಇದನ್ನು ಸಮೀಕರಿಸುವುದು ಬೇಡ. ಭಿಕ್ಷಾಟನೆ ನಮ್ಮಲ್ಲಿ ಒಂದು ದಂಧೆಯಾಗಿದೆ ಎನ್ನುವುದು ವಾಸ್ತವ. ಯಾರದೋ ಅಸಹಾಯಕತೆಯನ್ನು ಇನ್ನಾರೋ ಎನಕ್ಯಾಶ್ ಮಾಡಿಕೊಳ್ಳುವ ಅಸಹ್ಯಕರ ಪ್ರವೃತ್ತಿಯನ್ನು ಮೊದಲು ಡೀಲ್ ಮಾಡಬೇಕೇನೋ... "ನಾನ್ ಕಡವುಳ್" ಎನ್ನುವ ತಮಿಳು ಸಿನಿಮಾ ಕೊಂಚ ಈ ಸಬ್ಜೆಕ್ಟ್ ಅನ್ನು ಡೀಲ್ ಮಾಡಿದ್ದನ್ನು ನಾನು ಚಿತ್ರದಲ್ಲಿ ಗಮನಿಸಿದೆ.
ಇದಕ್ಕಿಂತ ಮುಖ್ಯವಾಗಿ ಈ ಫೊಟೊಗ್ರಾಪ್ ನಲ್ಲಿ ಗಮನಿಸಬೇಕಾದ್ದು, ರೈಲ್ವೆ ಕ್ರಾಸಿಂಗ್ ವ್ಯವಸ್ಥೆಯನ್ನು ನಾವು ಕಾಣುತ್ತಿರುವುದು ಎಷ್ಟು ಅಪಾಯಕಾರಿ ಮತ್ತು ಅಸಹನೀಯವೆನ್ನುವುದು. ರಾತ್ರೋರಾತ್ರಿ ಊರ ತುಂಬ ಫ್ಲೈ ಓವರ್ ಮಾಡಿಟ್ಟುಕೊಂಡ ನಾವು ಅದರ ಕೆಳಗಿನ ಪರಿಸ್ಥಿತಿಯನ್ನು ಅಸಹನೀಯಗೊಳಿಸಿಬಿಟ್ಟೆವು. ಕಾರು, ಮೋಟಾರು ಬೈಕುಗಳಿಗೆ ರಹದಾರಿ ಮಾಡಿಕೊಂಡ ನಾವು, ಸಾಮಾನ್ಯನ ಕೈಕಾಲುಗಳ ಬಗ್ಗೆ ಗಮನವನ್ನೇ ಕೊಡಲಿಲ್ಲ. ಅವರು ದೈತ್ಯ ಟ್ರೈನ್ ಮೇಲೆರಗುವ ಅಪಾಯವಿದ್ದರೂ ಅಂಗೈಯಲ್ಲಿ ಜೀವ ಹಿಡಕೊಂಡು ಹಳಿ ದಾಟಬೇಕು. ಬೈಕ್, ಕಾರ್, ಬಸ್ ಹಾರ್ನ್ ಗಳ ಧಿಮಾಕು ಸಹಿಸಿಕೊಂಡು, ಅದಕ್ಕೆ ಹೆದರಿಕೊಂಡೇ ರಸ್ತೆ, ಫ್ಲೈ ಓವರ್ ಕೆಳಕ್ಕೆ ಸಾಗಬೇಕು. ಈಗೀಗ ನಡೆದುಕೊಂಡು ಹೋಗುವುದೆಂದರೆ ಅತ್ಯಂತ ಅಸಹ್ಯಕರ ಮತ್ತು ಅವಮಾನದ ಸಂಗತಿಯಾಗಿ ನಮಗೆ ಕಾಣಿಸುತ್ತಿದೆ.

ನಮಗೆಲ್ಲ ವ್ಯವಸ್ಥೆ ಇದ್ದರೂ ಅದರ ನಿರ್ವಹಣೆಯಲ್ಲಿ ನಾವು ಸೋಲುತ್ತಿರುವುದಾದರು ಏಕೋ! ನಾವು ನಿತ್ಯ ಬಳಸುವ ಸಾರ್ವಜನಿಕ ವ್ಯವಸ್ಥೆ ನಮ್ಮ ಪಡಸಾಲೆಯಂತೆ ಒಪ್ಪವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಹೊಣೆ ಎಂದೆನಿಸುವುದೇ ಇಲ್ಲ. ಅದನ್ನು ಹಿತ್ತಲ ತಿಪ್ಪೆಗುಂಡಿಯಂತೆ ಕಂಡರೆನೇ ನಮಗೆ ಸಮಧಾನವೇನೋ...
ಯುರೋಪಿನಲ್ಲಿ ಕಂಡಲ್ಲೆಲ್ಲ ಸಾರ್ವಜನಿಕ ಸ್ಥಳಗಳು ಅತ್ಯಂತ ಸ್ವಚ್ಛ ಮತ್ತು ಸೂಕ್ತ ನಿರ್ವಹಣಾ ವಿಧಾನಗಳನ್ನು ಹೊಂದುವ ಮೂಲಕ ಜನರೇ ರೂಪಿಸಿಕೊಂಡಂಥ ಜನೋಪಯೋಗಿ ವ್ಯವಸ್ಥೆಯಾಗಿ ಕಾಣಿಸುತ್ತವೆ. ಅದನ್ನು ಜನರೇ ಅತ್ಯಂತ ಗೌರವಾದರದಿಂದ ಮತ್ತು ಜವಾಬ್ದಾರಿಯುತವಾಗಿ ಕಾಣುತ್ತಾರೆ. ತಮ್ಮೊಂದಿಗೆ ತರುವ ನಾಯಿ ಹೇತರೆ, ಗಲೀಜು ಮಾಡಿದರೆ ಅದನ್ನು ಅವರೇ ಬಳಿದುಕೊಂಡು, ಆ ಜಾಗವನ್ನು ನೀರಿನಿಂದ, ವೇಸ್ಟ್ ಪೇಪರಿನಿಂದ ಸ್ವಚ್ಛಗೊಳಿಸಿ, ಅದನ್ನೆಲ್ಲ ಕಚರಾ ಡಬ್ಬದಲ್ಲಿ ಭದ್ರವಾಗಿ ತುಂಬಿ ಮುಂದಕ್ಕೆ ಸಾಗುತ್ತಾರೆ. ನಾನಿದನ್ನು ಎಷ್ಟೋ ಕಡೆ ಕಣ್ಣಾರೆ ಕಂಡಿದ್ದೇನೆ.
ನಮಗೆ ಬೇಕಿರುವುದು ಇಂಥ ಮನೊಧರ್ಮದ ಪ್ರಗತಿ ಅಥವಾ ಅಭಿವೃದ್ಧಿ ಅಲ್ಲವೇ ಅಲ್ಲ.  ನಮ್ಮ ಸಾರ್ವಜನಿಕ ಸ್ಥಳಗಳು, ನಗರ ಸಾರಿಗೆ, ಲೋಕಲ್ ಟ್ರೈನ್ ವ್ಯವಸ್ಥೆ ಹೇಗಾದರೂ ಇದ್ದುಕೊಳ್ಳಲಿ ನಮಗೇನಿದ್ದರೂ ದಿಢೀರ್ ಆದೊಂದು "ಮೆಟ್ರೋ" ತರಹದ ಚಮತ್ಕಾರಿಕ ಬದಲಾವಣೆ, ಕಾಸ್ಮೆಟಿಕ್ ಚೇಂಜ್ ಬೇಕು ಅಷ್ಟೇ.

ಕಾಮೆಂಟ್‌ಗಳು

Ramakrishna hulikunteಹೇಳಿದ್ದಾರೆ…
e deshada katta kadeya manushanige nittusiru biduva kaala bandaga e deshada vyvastege onedu artha barutte

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...