ವಿಷಯಕ್ಕೆ ಹೋಗಿ

ಗಡಿಯಾರ!

ಅದೊಂದು ಛೋಟೆಖಾನ್ ಸಾಹೇಬರ ಖಾನದಾನಿ ದುಕಾನು. ಅದರ ದರವಾಜಾದ ಮೇಲೆ ಅಜ್ಜನ ಕಾಲದ ದೊಡ್ಡದೊಂದು ಗಡಿಯಾರ. ಖಾನ್ ಸಾಹೇಬರು ಮುಂಜಾವಿನ ನಮಾಜಿಗೆ ಹೊರಡುವ ಹೊತ್ತಿಗೆ ಸರಿಯಾಗಿ,  ತನ್ನ ಪ್ರೇಯರ್ ಗೆಂದು ತೆರಳುತ್ತಿರುವ ಮತ್ತೊಬ್ಬ ವ್ಯಕ್ತಿ ಎದುರಾಗುತ್ತಿದ್ದ. ನಿತ್ಯ ದುಕಾನು ಮುಂದೆಯೇ ಹಾದುಹೋಗುತ್ತಿದ್ದ. ದುಕಾನಿನ ದೊಡ್ಡ ಗಡಿಯಾರ ನೋಡಿಕೊಂಡು ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದ. ನಿತ್ಯವೂ ಇದನ್ನು ತಪ್ಪದೇ ಮಾಡುತ್ತಿದ್ದನಾತ. ಛೋಟೆಖಾನ್ ಸಾಹೇಬರು ಇದನ್ನು ತುಂಬ ದಿನಗಳಿಂದ ಗಮನಿಸುತ್ತಲೇ ಇದ್ದರು. ವಿಚಿತ್ರ ಕುತೂಹಲ ಇವರ ತಲೆ ತಿನ್ನತೊಡಗಿತ್ತು. ಇವನ್ನ ತಡೆದು ಒಮ್ಮೆ ವಿಚಾರಿಸಿಕೊಳ್ಳಲೇಬೇಕು ಎಂದು ತೀರ್ಮಾನಕ್ಕೆ ಬಂದುಬಿಟ್ಟರು.
 ಎಂದಿನಂತೆ ಆ ವ್ಯಕ್ತಿ ದುಕಾನಿನೆದುರು ನಿಂತ. ಗಡಿಯಾರ ನೋಡಿ, ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳತೊಡಗಿದ. ಛೋಟೆಖಾನ್ ಸಾಹೇಬರು ಚಂಗನೆ ಆ ವ್ಯಕ್ತಿಯತ್ತ ನೆಗೆದು ಗಬಕ್ಕನೆ ಹಿಡಿದುಕೊಂಡುಬಿಟ್ಟರು. ಆತ ಗಾಬರಿಗೊಳ್ಳಲಿಲ್ಲ. ಸುಮ್ಮನೇ ನಿಂತುಬಿಟ್ಟ. ಅವನ ಸ್ಥಿತಪ್ರಜ್ಞೆಗೆ ಛೋಟೆಖಾನ್ ಸಾಹೇಬರು ದಂಗಾದರು.
 ಅಲ್ಲ ಮೀಯಾ, ನಿತ್ಯ ನಮ್ಮ ದುಕಾನಿನ ಗಡಿಯಾರ ನೋಡಿಕೊಂಡೇ ನಿನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿಯಲ್ಲಾ ಯಾಕೆ?
'ಖಾನ್ ಸಾಹೇಬರೆ ನಾನು ಮಿಲ್ ನಲ್ಲಿ ಫೋರಮನ್ ಆಗಿದ್ದೆ. ನಿತ್ಯ ಇದೇ ಸಮಯಕ್ಕೆ ಸೈರನ್ ಮೊಳಗುವಂತೆ ನೋಡಿಕೊಳ್ಳುವುದು ನನ್ನ ಜವಾಬುದಾರಿಯಾಗಿತ್ತು. ಈಗಲೂ ಅದು ಇದೇ ಸಮಯಕ್ಕೆ ಮೊಳಗುತ್ತಾ ಎನ್ನುವುದನ್ನು ಹೀಗೆ ಖಾತರಿ ಮಾಡಿಕೊಳ್ಳುತ್ತೇನಷ್ಟೇ' ಎಂದನಾತ.
 ತತ್ಥೇರಿಕೆ, ನಿಮ್ಮ ಮಿಲ್ ಸರಿ ಹೊತ್ತಿಗೆ ಕೂಗುವುದನ್ನು ಕೇಳಿಸಿಕೊಂಡೇ ನನ್ನ ದುಕಾನು ಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದೆನಲ್ಲಯ್ಯಾ... ಎಂದು ಗಡ್ಡ ಕೆರೆದುಕೊಂಡ ಖಾನ್ ಸಾಹೇಬರು ನಮಾಜಿಗೆ ಹೊರಡಲನುವಾದರು.
 ಎಲ್ಲ ಒಂದೇಯಾ, ನೀವು ನಮಾಜಿಗೆ ಹೊಗ್ತೀರಿ, ನಾನು ಪ್ರೇಯರ್ ಗೆ ಹೋಗ್ತೀನಿ, ಇದೂ ಹಾಗೇಯಾ ಎಂದನಾತ.
ಅದು ಹೇಗೆ ಎಂದರು ಖಾನ್ ಸಾಹೇಬರು.
ಆತ ಹೇಳಿದ- 'ಮಿಯಾ, ಅದು ನಿಮ್ಮದು ದೊಡ್ಡ ಗೋಡೆ ಗಡಿಯಾರ, ಅಷ್ಟೇ ದೊಡ್ಡದು ಚರ್ಚ್ ಗಡಿಯಾರ, ಇದು ನನ್ನ ಪುಟ್ಟ ಕೈಗಡಿಯಾರ. ಗಡಿಯಾರ ಬೇರೆ. ಆದರೆ ಸಮಯ ಒಂದೇಯಾ...'

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...