ವಿಷಯಕ್ಕೆ ಹೋಗಿ

ಯಡಿಯೂರಪ್ಪ ಮತ್ತು 'ಮ್ಯಾಕ್ ಬೆತ್'

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ ...
ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ:

ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ।

ಮ್ಯಾಕ್ ಬೆತ್ ಕಥೆ ಇಟ್ಟುಕೊಂಡು ಒಮ್ಮೆ ರಾಜ್ಯ ರಾಜಕಾರಣದತ್ತ ನೋಡೋಣ..

ಒಂದು ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಸ್ಪಷ್ಟ ಜನಾದೇಶ ನೀಡುವುದಿಲ್ಲ। ಅಂಥ ಸ್ಥಿತಿಯಲ್ಲಿ ಹಗಲುಗನಸು ಕಾಣುವವರೆಲ್ಲ ರಾಜನಾಗುವ ಕನಸು ಕಾಣುತ್ತಾರೆ। ಯಾರೋ ಒಬ್ಬರಿಗೆ ಅದೃಷ್ಟ ಒಲಿದು ಬಿಡುತ್ತೆ ಅಥವಾ ಅದೃಷ್ಟವನ್ನು ಹೇಗಾದರೂ ಒಲಿಸಿಕೊಳ್ಳುವವರೂ ಇರುತ್ತಾರೆ। ಹಾಗೊಂದು ಸ್ಥಿತಿಯಲ್ಲಿ ಕುಮಾರಸ್ವಾಮಿ ತಮ್ಮ ಕೆಲ ಶಾಸಕ ಮಿತ್ರರ ಮನವೊಲಿಸಿ ರೆಸಾರ್ಟ್ ಸೇರಿಕೊಂಡು ರಾಜ್ಯಭಾರದ ಕಿರೀಟ ಹೊತ್ತುಕೊಂಡೇ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರೆ। ಅಧಿಕಾರ ಹಂಚಿಕೊಳ್ಳುವ ಪೂರ್ವ ಷರತ್ತಿನಂತೆ ನಡೆದುಕೊಳ್ಳದೇ ಅನೈತಿಕ ರಾಜಕೀಯ ಯಕ್ಷಿಣಿಯ ಚೆಲ್ಲಾಟಕ್ಕೆ ಬಲಿಯಾಗುತ್ತಾರೆ।

ಮುಂದೆ ಹಸಿದ ಹೆಬ್ಬುಲಿಯಂತಿದ್ದ ಯಡಿಯೂರಪ್ಪ ಆ ಅನ್ಯಾಯವನ್ನೇ ಎಲ್ಲೆಡೆ ಮಠಾಧೀಶರು/ಜಾತಿವಾದಿಗಳ ಮೂಲಕ ಘರ್ಜಿಸುತ್ತ ಅಧಿಕಾರದ ಗದ್ದುಗೆ ತಲುಪಿದರು। ಹಾಗೆ ಪಡಕೊಂಡ ಕುರ್ಚಿ ಭದ್ರಪಡಿಸಲು ಬೇಕಾದ ಸಂಖ್ಯೆಗಾಗಿ ರಾಜಕೀಯ ಕೊಲೆಗೆ ನಿಂತರು (ಪಕ್ಷಾಂತರ ಎಂದರೆ ಅದೊಂದು ನೈಜ ರಾಜಕಾರಣದ ಕೊಲೆಯೇ ಆಗುತ್ತದೆ)। ಒಂದನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಹಾಗೇ ಒಂದಷ್ಟು ರಾಜಕೀಯ ಕೊಲೆಗಳು ನಡೆದವು। ಅನೈತಿಕ ರಾಜಕೀಯ/ಮಠಾಧೀಶರು/ಜಾತಿವಾದಿ ಎನ್ನುವ ಯಕ್ಷಿಣಿಗಳು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮವರಿಗೇ (ಮಂತ್ರಿವರ್ಯರು, ಕಾರ್ಯಕರ್ತರು) ಸರ್ವಾಧಿಕಾರಿಯಂತಾದರು। ಇದೆಲ್ಲವನ್ನು ಮ್ಯಾಕ್ ಡೆಫ್ ನಂತೆ ಕಾಯುತ್ತಲೇ ಇದ್ದ ಜನಾರ್ಧನ ರೆಡ್ಡಿ (ಶೆಟ್ಟರ್ ಅವರನ್ನಿಟ್ಟುಕೊಂಡು) ಸಮಯ ಸಾಧಿಸಿ ದಂಡಯಾತ್ರೆಗೆ ನಿಂತು ಕೋಟೆಯನ್ನೇ ಹೊಕ್ಕಿಬಿಟ್ಟರು।

ನಿದ್ರೆಯಲ್ಲಿ ಕಾವಲುಗಾರರ ಮುಖ, ಕೈಗಳಿಗೆ ಮತ್ತು ಖಡ್ಗ, ಭರ್ಚಿಗಳಿಗೆ ರಕುತ ಮೆತ್ತಿ ಕೊಲೆ ಕೊಲೆ ಎಂದು ಚೀರಿ ಅವರೆಚ್ಚರಗೊಂಡಾಗ ಅವರನ್ನೂ ಚಚ್ಚಿ ಒಳಗಿನ ರಾಜನನ್ನು ಅಡ್ಡ ಮಲಗಿಸಿ ಅದರ ಕಳಂಕವನ್ನೆಲ್ಲ ಇವರಿಗೆ ಮೆತ್ತಿ ತಾನು ಅಧಿಕಾರ ವಹಿಸಿಕೊಳ್ಳುವ ಕ್ರೂರ ಸೇನಾಧಿಪತಿಯಂತೆ ಯಡಿಯೂರಪ್ಪ ರಾಜ್ಯದಲ್ಲಿ ವರ್ತಿಸತೊಡಗಿದ್ದರು। ಯಾವ್ಯಾವುದೋ ಆಮಿಷ, ಆಶ್ವಾಸನೆಗಳನ್ನು ನೀಡಿ ಯಾವ್ಯಾವುದೋ ಪಾರ್ಟಿಯಿಂದ ಜನರನ್ನು ಜಾತಿ ಹೆಸರಲ್ಲಿ ಸೆಳೆದು ಮಠಾಧೀಶರಿಂದ ಮನವೊಲಿಸಿ ಪಕ್ಷಾಂತರವನ್ನು ಅಧಿಕೃತವಾಗಿ ಮಾಡಿ ಗೆಲುವಿನ ಕೇಕೆಯನ್ನೂ ಹಾಕಿದರು। ರಾಜಕೀಯ ನಾಟಕದ ಮೊದಲ ಅಂಕಗಳಲ್ಲೆಲ್ಲ ಯಡಿಯೂರಪ್ಪ ಇಂಥ ಬೇಟೆಗಳಿಂದ ಗೆಲುವು ದಾಖಲಿಸುತ್ತಲೇ ಸಾಗಿದರು।

'ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕು..' ಎನ್ನುವ ಮಾತು ಕಾರ್ನಾಡರ ಒಂದು ನಾಟಕದಲ್ಲಿ ಬರುತ್ತದೆ। ಹಾಗೆ ಯಡಿಯೂರಪ್ಪ ದರ್ಬಾರಿನ ಕೆಲ ಉನ್ನತ ಅಧಿಕಾರಿಗಳು, ಆಪ್ತ ಸಚಿವೆಯ ಕೆಲ ವರ್ತನೆಗಳು ಇಡೀ ವ್ಯವಸ್ಥೆಯನ್ನು ಕ್ರೂರವನ್ನಾಗಿಸಿದವು। ಇಂಥ ವ್ಯವಸ್ಥೆ ಯಡಿಯೂರಪ್ಪ ಅವರನ್ನು ಸರ್ವಾಧಿಕಾರಿ ಧೋರಣೆಗೆ ಎಳೆದು ತಂದಿತು। ತಮ್ಮ ಒಳಗಿನ ಮತ್ತು ತಮಗೆ ಸಾಕಷ್ಟು ನೆರವಾದವರ ವಿರುದ್ಧ ಯಾವುದೋ ಕಾರಣಕ್ಕೆ ಅಥವಾ ಕೆಲ ಹಿತಾಸಕ್ತಿಗಳನ್ನು ಖುಷಿಪಡಿಸಲು ಸೇಡಿನ ಮನೋಭಾವ ಪ್ರದರ್ಶಿಸಿದರು। ಅದಿರು ಲಾರಿಗಳ ಮೇಲೆ ಭಾರಿ ಸುಂಕ ವಿಧಿಸುವ ಹೆಸರಲ್ಲಿ ಗಣಿ ಧಣಿಗಳ ದೊಡ್ಡ ಹೊಟ್ಟೆಗಳ ಮೇಲೆ ಕಾಲಿಡಲು ನಿರ್ಧರಿಸಿದರು। ಇಲ್ಲೇ ಯಡವಟ್ಟಾಗಿದ್ದು। ಈ ಮೂಲಕ ಅವರು ಭಾರಿ ಪೈಲ್ವಾನ್ ಎನಿಸಿಕೊಳ್ಳಲೆತ್ನಿಸಿದ್ದರು। ಆದರೆ ಅದೆಲ್ಲ ಉಲ್ಟಾ ಆಯಿತು। ರೆಡ್ಡಿಗಳು ತಿರುಗಿಬಿದ್ದರು।

ರೆಡ್ಡಿಗಳು ತುಂಬ ದಿಟ್ಟವಾದ ಮತ್ತು ವ್ಯವಸ್ಥಿತವಾದ ಆಕ್ರಮಣಕ್ಕಿಳಿದಿದ್ದಾರೆ। ಹೀಗಾಗಿ ಥೇಟು ಅಂತಿಮ ಯುದ್ಧದ ವಾತಾವರಣ ಸೃಷ್ಟಿಯಾಗಿದೆ। ಇದರ ಅಂತ್ಯ ಬಹುಶಃ ಮ್ಯಾಕ್ ಬೆತ್ ನಾಟಕದ ಕೊನೆಯ ದೃಶ್ಯದಂತೆ ಆಗಬಹುದೇ?

ಮ್ಯಾಕ್ ಬೆತ್ ನಾಟಕದ ಕಡೆಯ ದೃಶ್ಯ ಹೀಗಿದೆ:

ಮ್ಯಾಕ್ ಬೆತ್: ನಾನ್ಯಾಕೆ ನಿಮ್ಮ ಜತೆ ವ್ಯರ್ಥವಾಗಿ ಹೋರಾಡಬೇಕು? ನನ್ನದೇ ಕತ್ತಿಯಿಂದ ಇರಿದುಕೊಂಡು ಸಾಯಬೇಕು?

ಮ್ಯಾಕ್ ಡೆಫ್: ನಿಲ್ಲು ನಿಲ್ಲು ದೂರ್ತ।

ಮ್ಯಾಕ್ ಬೆತ್: ನಿನ್ನನ್ನು ಕೊಲ್ಲದೆ ಬೇಕೆಂದೇ ಸುಮ್ಮನೇ ಬಿಟ್ಟಿದ್ದೇನೆ। ನಿನ್ನವರ ರಕ್ತದಿಂದ ಆಗಲೇ ನನ್ನಾತ್ಮ ಕಲೂಷಿತಗೊಂಡಿದೆ। ಸುಮ್ಮನೇ ತೊಲಗಾಚೆ।

ಮ್ಯಾಕ್ ಡೆಫ್: ವಿವರಿಸಲಿಕ್ಕೂ ಆಗದ ನೀಚ ನೀನು। ರಕ್ತಪಿಪಾಸು ಪಾಪಾತ್ಮ ನೀನು। ನನ್ನ ಕತ್ತಿಯಿಂದಲೇ ನಿನಗೆ ಉತ್ತರ ನೀಡುತ್ತೇನೆ।

ಮ್ಯಾಕ್ ಬೆತ್: ವ್ಯರ್ಥವಾಗಿ ಹೀಗೇಕೆ ಕತ್ತಿ ಝಳಪಿಸುವೆ। ನನ್ನ ಮುಗಿಸುವ ನಿನ್ನ ಯತ್ನ ಫಲ ನೀಡದು। ನಾನು ಅಮರಜೀವಿ। ನನ್ನ ಹಿಂದೆ ಅಭಯ ಹಸ್ತಗಳಿವೆ। ಯಾರೂ ನನ್ನನೇನೂ ಮಾಡಲಾರರು। ನೀಚ, ನನ್ನ ಕತ್ತಿಗೆ ನಿನ್ನ ರಕ್ತದ ರುಚಿ ಉಣ್ಣಿಸುವೆ।

ಮ್ಯಾಕ್ ಡೆಫ್: ಮೂರ್ಖ ಆ ಗತಿಯನ್ನು ನಿನಗೇ ಕಾಣಿಸಲಿದೆ ನನ್ನೀ ಕತ್ತಿ। ನೀನು ಆರಾಧಿಸುವ ಆ ಯಕ್ಷಿಣಿಗಳಿದಾವಲ್ಲ ಅವೇ ಹೇಳಲಿ ನೀನು ತಾಯಿ ಹೊಟ್ಟೆಯಿಂದ ಬಂದವನಲ್ಲ, ಹೊಟ್ಟೆ ಸೀಳಿ ಹೊರಬಂದವನೆಂದು।

ಮ್ಯಾಕ್ ಬೆತ್: ನನ್ನ ಅಧೀರನನ್ನಾಗಿಸುತ್ತಿರುವ ಮಾತುಗಳನ್ನಾಡುತ್ತಿರುವ ನಿನ್ನ ನಾಲಗೆ ಸೇದಿ ಹೋಗಲಿ। ನಾ ನಿನ್ನ ಜತೆ ಯುದ್ಧ ಮಾಡಲಾರೆ।

ಮ್ಯಾಕ್ ಡೆಫ್: ಹಾಗಾದರೆ ಶರಣಾಗೋ ಹೇಡಿ।

ಮ್ಯಾಕ್ ಬೆತ್: ನಾನು ನಿನ್ನಂತೆ ಹೊಂಚು ಹಾಕಿ ನುಗ್ಗಿದವನಲ್ಲ। ಪಿತೂರಿಗಳನ್ನಷ್ಟೇ ನಂಬಿದವನಲ್ಲ। ಬಾ ನನ್ನ ಕೆಣಕಿದವನೆ, ಯುದ್ಧಕ್ಕೆ ಅಣಿಯಾಗು।

(ಇಬ್ಬರೂ ಕತ್ತಿ ಝಳಪಿಸುತ್ತಾರೆ। ಕೆಲ ಕಾಲ ಸಂಘರ್ಷ ನಡೆಯುತ್ತದೆ। ಸಮಯ ನೋಡಿ ಮ್ಯಾಕ್ ಬೆತ್ ಓಡಿ ಹೋಗಲು ನೋಡುತ್ತಾನೆ। ಮ್ಯಾಕ್ ಡೆಫ್ ಕತ್ತಿಯಿಂದ ಬಲವಾಗಿ ಮ್ಯಾಕ್ ಬೆತ್ ನನ್ನು ಇರಿಯುತ್ತಾನೆ)

ಕಡೆಗೆ ಮಾಲ್ಕಂ ಗೆ ಪಟ್ಟಾಭಿಷೇಕ ನಡೆಯುತ್ತದೆ.

...... ...... ..... .......

ಮ್ಯಾಕ್ ಬೆತ್ ನಾಟಕದ ಮೊದಲ ಅಂಕಗಳಲ್ಲಿ ಮ್ಯಾಕ್ ಬೆತ್ ಗೆಲ್ಲುತ್ತಾನೆ। ನಂತರದ ಅಂಕಗಳು ಆತನ ಸೋಲಿನೊಂದಿಗೆ ಮುಗಿಯುತ್ತವೆ. ತನ್ನ ಆಲೋಚನೆಗಳಿಗೆ ತಾನೇ ಹೆದರುವ ಮ್ಯಾಕ್ ಬೆತ್ ನ ಸ್ವಗತಗಳಂತೆ ಯಡಿಯೂರಪ್ಪ ಮಾಧ್ಯಮಗಳ ಜತೆ ಮಾತನಾಡಿಕೊಳ್ಳುತ್ತಿದ್ದಾರೆ। ಅವು ತಮಗೆ ತಾವೇ ಹೇಳಿಕೊಳ್ಳುವ ಮತ್ತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವಂತೆ ಅನಿಸುತ್ತಿವೆ।

ಕಡೆಗೆ ಮಾಲ್ಕಂ ಆಗೋರು ಯಾರು? ಆ 'ಜಗದೀಶ'ನೇ ಬಲ್ಲ।

ಕಾಮೆಂಟ್‌ಗಳು

ಚಂದಿನ | Chandrashekar ಹೇಳಿದ್ದಾರೆ…
ಪರಿಣಾಮಕಾರಿ ಲೇಖನ....ಅಭಿನಂದನೆಗಳು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ