ವಿಷಯಕ್ಕೆ ಹೋಗಿ

ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!


ಅಮೆರಿಕದ ಬೂಟು, ಬಂದೂಕು ಬಂದ ಹಾಗೆ ಬ್ರೆಡ್, ಬಿಸ್ಕತ್ ಕೂಡ ಇಲ್ಲಿ ಬಂದಾಗಿದೆ. ಶ್ರೀಮಂತ ರಾಷ್ಟ್ರ, ಸೂಪರ್ ಪಾವರ್ ಧಿಮಾಕಿನಿಂದ ಕೊಂಚ ಕೆಳಕ್ಕಿಳಿಯುವಂಥ ಆರ್ಥಿಕ ಹೊಡೆತವನ್ನೂ ಅದು ಎದುರಿಸುತ್ತಿದೆ. ಇನ್ನದು ರಸ್ತೆ ವ್ಯಾಪಾರಕ್ಕೂ ಇಳಿಯುವ ದಿನಗಳು ದೂರವಿಲ್ಲ. ಆದರೂ ವ್ಯಾಪಾರದಲ್ಲಿ ನಮ್ಮ ಮಾರ್ವಾಡಿಗಳ ಮಾವನಂತಿರುವ ಅಮೆರಿಕನ್ನರು ಕಷ್ಟ ಬಂದಾಗ ಕತ್ತೆ ಕಾಲೂ ಹಿಡಿಯುವುದಕ್ಕೆ ಹೇಸುವುದಿಲ್ಲ. ಆ ಮಾತು ಹಾಗಿರಲಿ.
 ನಮ್ಮ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸ್ಪೆನ್ಸರ್ ಸೂಪರ್ ಮಾರ್ಕೆಟ್ ನಲ್ಲಿ ಅಮೆರಿಕ ಕಂಪೆನಿಯೊಂದು ಹೊಟೆಲ್ ಆರಂಭಿಸಿದೆ. ಔ ಬಾನ್ ಪೇನ್ ಎನ್ನುವುದು ಹೊಟೇಲ್ ಹೆಸರು. ಇದೊಂದು ಥರ 'ಅಮ್ಯಾರಿಕನ್ ದರ್ಶಿನಿ'!  ಕಾಫಿ, ಟೀ, ಬ್ರೆಡ್ ಜತೆ ಒಂದು ಸಿಂಪಲ್ ಊಟ ಕೂಡ ಅದರ ಮೆನುವಿನಲ್ಲಿದೆ. ಪಾಶ್  ಎನಿಸುವ ಗಾಜಿನ  ಮನೆಯಲ್ಲಿ  ನಮ್ಮ ನ್ನು  ಕೂರಿಸುವ  ನೈಸ್  ಆಗಿ ಬೆಣ್ಣೆ ಹಚ್ಚಿದ ಬ್ರೆಡ್ ಟೇಬಲ್ಲಿಗಿಟ್ಟು ಅಷ್ಟೇ ನೈಸ್ ಆಗಿ ಜೇಬಿಗೆ ಕೈ ಹಾಕುವ ಈ ಹೊಟೇಲು ಅಷ್ಟು ದುಬಾರಿ ಏನಲ್ಲ.  ಆದರೆ,  ಇದರ ಡೌನ್ ಟು ಅರ್ತ್ ಮನೋಧರ್ಮ ನೋಡಿದರೆ ಇನ್ನಿದು ಬೆಂಗಳೂರಿನ ಎಲ್ಲೆಡೆ ದರ್ಶಿನಿಗಳಂತೆ ತನ್ನ ಬ್ರಾಂಚ್ ತೆರೆಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಕಾ ಅಮೆರಿಕ, ಇಟ್ಯಾಲಿಯನ್, ಫ್ರೆಂಚ್ ಕುವರಿಯಂತೆ ಕಂಗೊಳಿಸುವ ಇದರ ವಿನ್ಯಾಸ, ಟೇಬಲ್ಲಿಗಿಡುವ ಕಾಫಿ ಕಪ್ ಗೆ  ಟೀನೇಜ್ ಹುಡುಗಿಯ ವೈಯ್ಯಾರವಿದೆ. ಇದೆಲ್ಲ  ನೋಡಿದರೆ ನಮ್ಮೂರ  ಹೊಟೇಲುಗಳಿಗೆ  ಗತಿ ಕಾದಿದೆ ಅನಿಸುತ್ತದೆ.  ಇದರ ಬಿಸಿ ಬಿಸಿ ಕಾಫಿ ನಮ್ಮ ಕೆಫೆ ಕಾಫೀ ಡೇ ಕಾಫಿಯನ್ನು ಮೀರಿಸುವಂಥದಿದ್ದೆ (ಸದ್ಯಕ್ಕೆ). ರೇಟು ಕೂಡ ಅಂಥ ದುಬಾರಿ ಏನಲ್ಲ (ಅದೂ ಸದ್ಯಕ್ಕೆ)... ಇದಿಷ್ಟು ಸಾಕಲ್ಲ ನಮ್ಮ ಉಡುಪಿ ದರ್ಶಿನಿಗಳ ಇಡ್ಲಿ, ವಡೆ, ದೋಸೆ... ಮತ್ತದೇ ಕುಂಬಳಕಾಯಿ, ತುರಿದ ಕೊಬ್ಬರಿ, ಒಂದಷ್ಟು ಎಂಟಿಆರ್ ಮಸಾಲೆ ಹಾಕಿ ಮಾಡುವ ಸಾಂಬಾರಿನ ರುಚಿಗೆ ಸಖತ್ ಪೈಪೋಟಿ ನೀಡಲು?
 ಯಾವಾಗ ಅಮೆರಿಕದ ಪೆಪ್ಸಿ, ಕೋಲಾ ಭಾರತಕ್ಕೆ ಬಂತೊ ಆಗಿನಿಂದ ನಮ್ಮ ಪಾನೀಯಗಳು, ಎಳೆನೀರು ಚಮಕ್ ಕಳಕೊಂಡವು. ಅಮೆರಿಕದ ಬಿಸ್ಕತ್ತುಗಳು ಬಂದ ಮೇಲೆ ನಮ್ಮ ಪಾರ್ಲೆ ಜಿ ರುಚಿ ಕಳಕೊಂಡಿತು. ಹೀಗೆ ಒಂದೊಂದಾಗಿ ಕಳಕೊಳ್ಳುತ್ತಾ ಇಡ್ಲಿ, ವಡೆ, ಲೋಟ ಕಾಫಿಯನ್ನೂ ಕಳಕೊಳ್ಳುತ್ತೇವೋ ಏನೋ?....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...