ವಿಷಯಕ್ಕೆ ಹೋಗಿ

ಗೂಡು ಕಳಕೊಂಡ ಗುಬ್ಬಚ್ಚಿಗಳು...!

ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು  ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು.
ಈ ಕಟ್ಟಡ ನಮ್ಮ ಬೆಂಗಳೂರು
ಇಂಟರ್ ನ್ಯಾಷನಲ್  ಏರ್ ಪೋರ್ಟ್...  ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ...  ಕೇಳಿಸುತ್ತಿತ್ತು...!  


                                                                                                                                                                                                                  
ಅದೆಷ್ಟು ಸ್ವಚ್ಚಂದವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳ ಗೂಡುಗಳಿಲ್ಲಿ ಮುರುಟಿಹೋಗಿವೆಯೋ? ನೂರಾರು ಎಕರೆ ಜಮೀನಿನಲ್ಲಿ  ಹೀಗೆ ಕಾಂಕ್ರೀಟ್ ಕಾಡೊಂದನ್ನು ಕಟ್ಟಿ ಅಲ್ಲಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಜಾಗ ಮಾಡಿಕೊಡಲು ಅದೆಷ್ಟು ಮರಗಳು ಉರುಳಿದವೋ.. ಅಲ್ಲೆಲ್ಲ ಗೂಡು ಕಟ್ಟಿ ಪ್ರೀತಿ, ಪ್ರಣಯ, ಮೈಥುನ, ಮರಿಗಳ ಆರೈಕೆಯಲ್ಲಿ ತೊಡಗಿದ್ದ  ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಕಳಕೊಂಡ ನೆಲೆಯಿಂದ ಅದೆಷ್ಟು  ಕಂಗಾಲಾದವೋ...

ಬಹುಶಃ ಈ ಗುಬ್ಬಚ್ಚಿಗಳು ತಾವು ಕಳಕೊಂಡ ಬದುಕನ್ನಿಲ್ಲೇ ಮತ್ತೆ ಹುಡುಕಿಕೊಳ್ಳಲು ಅಲೆಯುತ್ತಿರಬಹುದೇ? ಅಥವಾ ಕಟ್ಟುವ, ಕೆಡವುವ ಪ್ರಕ್ರಿಯೆಯಲ್ಲಿ ಪ್ರಾಣ ಕಳಕೊಂಡ ತಮ್ಮವರ, ಪೂರ್ವಜರ ಮರೆಯಲಾಗದೇ  ಇಲ್ಲೇ ಅವರಾತ್ಮಗಳ ಸ್ಮರಣೆಯಲ್ಲೇ ಕಾಲ ಕಳೆಯ ಬಂದಿರಬಹುದೇ... ತಮ್ಮ ಗೂಡುಗಳ ನೆನಪುಗಳಿಂದ ಜೀವ ತಡೆಯಲಾಗದೇ ಇಲ್ಲೇ ಬಿಕ್ಕಳಿಸುತ್ತ ಅಲೆಯುತ್ತಿರಬಹುದೇ.... ನಮ್ಮ ನೆಲೆ, ಅನ್ನದ ಮೂಲವನ್ನೇ ಕಿತ್ತುಕೊಂಡು ನಿಮ್ಮ ಲೋಹದ ಹಕ್ಕಿಗಳ ಹಾರಾಟ ನೋಡುತ್ತ ಮೋಜು ಮಾಡುತ್ತಿರುವ ಮನುಜರೇ ನಿಮ್ಮ ಬದುಕು ಇನ್ನಷ್ಟು ಸುಂದರವಾಗಿರಲಿ ಎಂದು ಉಲಿಯುತ್ತಿವೆಯೋ?... ನಮ್ಮ ಜಾಗೆ ನಮಗೆ ಕೊಟ್ಟುಬಿಡಿ ಎಂದೇನೂ ನಾವು ಕೇಳಲ್ಲ... ನಿಮ್ಮ ಹಾಗೆ ಪರಿಹಾರವನ್ನೂ ಕೇಳಲ್ಲ...? ಕೇಳುವುದಾದರೂ ಯಾರನ್ನ?... ಎಂದು ಚುಚ್ಚುತ್ತಿವೆಯೋ...!

 ನಾವೂ ನಿಮ್ಮ ಒಡನಾಡಿಯಾಗೇ ಅನಾದಿ ಕಾಲದಿಂದಲೂ ನಿಮ್ಮ ಜತೆಗೇ ಇದ್ದವರು. ನಾಡಲ್ಲಿ ನೀವು ಮರಗಳನ್ನೆಲ್ಲ ಕಡಿದು ಮನೆ ಕಟ್ಟಿಕೊಂಡಿರಿ...  ಕೆಲವು ಪುಣ್ಯವಂತರು ನೆಟ್ಟ ಪುಟ್ಟ ಮರಗಳಲ್ಲೇ ನಾವು ಹ್ಯಾಗೊ ಬದುಕ ಕಟ್ಟಿಕೊಂಡಿದ್ದೆವು. ನಿಮ್ಮ ಕಿವಿಗಳಿಗೆ ಚಿಂವ್ ಚಿಂವ್ ಸುಪ್ರಭಾತ ಹೇಳುತ್ತ ಮುಂಜಾವಿನ ಶುಭ ಸಂದೇಶ ಹೊತ್ತು ನಿಮ್ಮ ದಿನದ ಬದುಕಿಗೆ ಹಾರೈಸುತ್ತ ಇದ್ದೆವು... ಆದರೆ, ಮೆಟ್ರೊ, ರಸ್ತೆ ಅಗಲೀಕರಣ, ಬಹುಮಹಡಿ ಕಟ್ಟಡ, ಶಾಪಿಂಗ್ ಮಾಲ್ ಎಂದೆಲ್ಲ ನಮ್ಮನ್ನು ನಿಮ್ಮ ಬದುಕಿನಿಂದಲೇ ಕಿತ್ತು ಬಿಸಾಕಿದಿರಿ... ಈಗ ಊರಾಚೆ ಇಲ್ಲಾದರೂ ರೈತರ ಜತೆ ಒಡನಾಡಿಯಾಗಿರೋಣ ಎಂದರೆ ಲೋಹದ ಹಕ್ಕಿಗಳ ಸಾಕಿಕೊಂಡ ನೀವುಗಳು ಅವುಗಳ ಹಾರಾಟಕ್ಕೆ ಕೊನೆಗೆ ನಮ್ಮ ಗೂಡುಗಳನ್ನೇ ಕಿತ್ತುಕೊಂಡಿರಿ...  ಅಷ್ಟಾದರೂ ನಾವು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಲಿಲ್ಲ... ನಿಮ್ಮನ್ನೆಲ್ಲ ಆ ಗ್ಲೋಬಲ್ ವಾರ್ಮಿಂಗ್ ಭೂತ ಎದ್ದಿದೆಯಲ್ಲ ಅದೇ ಬುದ್ಧಿ ಕಲಿಸುತ್ತದೆ...

ಆದರೂ ಸ್ವಾಮೀ... ಇಲ್ಲಿ ರೈತ ಬೆಳೆದ ಕಾಳುಗಳಲ್ಲಿ ನಾವೂ ಒಂದಷ್ಟು ಹೊಟ್ಟೆಗಿಳಿಸಿಕೊಂಡು ಸಂತೋಷದಿಂದ ಹಾರಾಡಿಕೊಂಡದ್ದೆವು. ಈಗೆಲ್ಲಿ?  ಆ ಭೂಮಿ ಮೇಲೆ ನಿಮ್ಮ ಮಹಲು ನಿಂತಿದೆ. ವಿದೇಶಿಯರು ವಾ ವಾ ಎನ್ನುವಂಥ ಮಹಲು ಕಟ್ಟಿಕೊಂಡವರು ನೀವು.... ನಿಮ್ಮಲ್ಲೊಂದೇ ಮನವಿ. ನಿಮ್ಮ ಹಲ್ಲುಗಳ ಸಂದಿಯಷ್ಟೇ ಅಗಲವಾಗಿರುವ ನಮ್ಮ ಹೊಟ್ಟೆಗೆ ನೀವು ತಿಂದು ಎಸೆದ ಒಂದಗುಳ ಅನ್ನವಾದರೂ  ಕೊಡಿ ಸ್ವಾಮಿ.. ಎಂದು ಗುಬ್ಬಚ್ಚಿಗಳು ಚಿಂವ್ ಚಿಂವ್ ಗುಟ್ಟುತ್ತಿವೆಯೋ...  ಅಷ್ಟಕ್ಕೂ ಮನುಷ್ಯರ ಹಾಗೆ ಅವರದೂ ಒಂದು ಬದುಕಿದೆಯಲ್ಲವೇ..?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ