ವಿಷಯಕ್ಕೆ ಹೋಗಿ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು.

"ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ.

ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ್ಟಿಕೊಳ್ಳುವ ಬದುಕಿನ ನೆಲೆಗಳು ಮತ್ತು ಅವನ್ನು ಕೆಲವೇ ಜನರು ಗುತ್ತಿಗೆ ಪಡೆದುಕೊಳ್ಳುವ ಹುನಾರುಗಳು... ಇವೆಲ್ಲದರ ನಡುವೆ ತಾವೂ ಸಮಾಜದ ಮುಖ್ಯಪ್ರವಾಹಕ್ಕೆ ಸೇರಿಕೊಳ್ಳಬೇಕೆಂಬ ಮಣೆಗಾರರ ಹಂಬಲ,.ಉಮೇದಿಯೇ ಇಲ್ಲಿ ಪ್ರಮುಖ ಕಾಳಜಿಯಾಗಿ ಕಾಣಿಸುತ್ತದೆ.

ಕೇರಿಯ ಬದುಕಿನಿಂದ ದೂರವಾಗಿ ನಗರ, ಮೇನ್ ರೋಡ್, ಲೇಔಟ್, ಅಡ್ಡರಸ್ತೆ, ಮುಖ್ಯರಸ್ತೆ, ಸೆಕೆಂಡ್ ಸ್ಟೇಜ್, ಅಪಾರ್ಟಮೆಂಟ್, ಕ್ವಾರ್ಟರ್ಸ್, ಮೊದಲ ಮಹಡಿ, ನಾಲ್ಕನೇ ಅಂತಸ್ತು, ಶ್ರೀನಿಲಯ, ಶಾರದಾಕುಂಜ, ಡೋರ್ ನಂಬರ್... ಹೀಗೆ ಸೋಗಲಾಡಿ ಸುಬ್ಬಣ್ಣರ ಬದುಕಿಗೆ ಒಗ್ಗಿಕೊಂಡಿರುವ, ಅಕ್ಷರ ಮಾತ್ರದಿಂದ ಬದುಕು ಕಟ್ಟಿಕೊಂಡಂತೆ ಕಾಣುವ ಕಂಫರ್ಟ್ ಝೋನಿನಲ್ಲಿ ಹಾಯಾಗಿರುವ ದಲಿತರೇ ಈ ಪ್ರಯೋಗದ (ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 1, 2010 ರಂದು ನಡೆದ ಪ್ರಯೋಗ) ಬಹುತೇಕ ಪ್ರೇಕ್ಷಕರಾಗಿದ್ದರು. ಇನ್ನು ಕೆಲವರು ತಮ್ಮ ಕಾವ್ಯ, ಕಾದಂಬರಿ, ಆತ್ಮಕಥನಗಳು ಹೀಗೆ ರಂಗದ ಮೇಲೆ ಬಂದರೆ ಹೇಗಿರಬಹುದು!? ಎಂದು ಕನಸು ಕಾಣುತ್ತ, ಆಗಾಗ ಮೊಬೈಲ್ ಮಿಸ್ ಕಾಲ್ ಗಳನ್ನು ನೋಡುತ್ತ, ಮೂಲೆಗೆ ಸರಿದು 'ನಾನು ಫಂಕ್ಷನ್ ನಲ್ಲಿದಿನಿ, ಕಾಲ್ ಯು ಲೇಟರ್', ಎಂದು ಉಸುರುತ್ತ ಎದ್ದು ಹೋಗಿ ಬರುವ 'ಸೋ ಕಾಲ್ಡ್'  ಜನರೂ ಸಾಕಷ್ಟು ಸೇರಿದ್ದರು. ಹೀಗಾಗಿ ಎಷ್ಟೋ ದೃಶ್ಯಗಳು ಇವರಲ್ಲಿ ನಗು ಹುಟ್ಟಿಸುವುದಕ್ಕೆ ಮಾತ್ರ ಸಾಧ್ಯವಾಯಿತು! ರಂಗದ ಮೇಲಿನ ನೋವು ಹಬ್ಬಿದಾಗೆಲ್ಲ ಪ್ರೇಕ್ಷಕರ ನಡುವೆ ಚಪ್ಪಾಳೆಗಳ ಸದ್ದು!! ತಮ್ಮದೇ ನೋವುಗಳನ್ನು ಕಾಮಿಡಿ, ಕ್ಲಾಸಿಕ್ ಕೃತಿಯಾಗಿ ಕಾಣುತ್ತಿದ್ದರೇನೋ!?

ಶ್ರಮಕ್ಕೆ 'ಚರ್ಮ'ದಿಂದ ಹೊರಬಂದ ಬೆವರು, ಮತ್ತದರ ಹದ ಇವೆರಡನ್ನೇ ನಂಬಿಕೊಂಡ ಈ ನಾಟಕದ ಮಣೆಗಾರರು ಹಸಿವು, ಅವಮಾನ, ನೋವುಗಳಿಂದ ಬಿಡುಗಡೆಗೆ ಅಕ್ಷರವೊಂದೇ ಮಾರ್ಗ ಎಂದು ಬಲವಾಗಿ ಅಂದುಕೊಂಡುಬಿಡುತ್ತಾರೆ. ಅಕ್ಷರಕ್ಕಾಗಿ ಅವರು ಪಟ್ಟ ಪಾಡು ಅವರನ್ನು ಹತಾಶೆಗೆ ತಳ್ಳಿಬಿಟ್ಟಿರುತ್ತದೆ. ನಾಟಕ ಜೀವದ್ರವ್ಯವೇ ಇದು.

 ಮತ್ತೆ ವಾಸ್ತವದಲ್ಲಿ ಬ್ರಾಹ್ಮಣರು ಹೇಗೆ ಕೇವಲ ಅಕ್ಷರವಿದ್ಯೆ ಮತ್ತು 'ಚಮ'ತ್ಕಾರಗಳ ಮೂಲಕ ಹಾಯಾಗಿ ಬದುಕು ಸಾಗಿಸುತ್ತಾರೋ, ನಾವೂ ಅವರ ಹಾಗಾಗಬೇಕು ಎನ್ನುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೊ ಎನ್ನುವಂತೆ ಕೆಲವು ಬ್ರಾಹ್ಮಣೇತರರು, ದಲಿತರು ವರ್ತಿಸುವುದನ್ನು ಆಗಾಗ ಕಂಡಿದ್ದೇನೆ. ಕ್ರಾಂತಿಕಾರಕ ಪ್ರಜ್ಞೆಯಿಲ್ಲದ ಇಂಥದೊಂದು ಶಿಕ್ಷಣ ಕ್ರಾಂತಿ ಈ ವರ್ಗದಲ್ಲಿ ನಡೆದುಹೋಗಿದೆಯೇನೋ ಎನ್ನುವಂತೆ ವರ್ತಿಸುವವರನ್ನು ಕಂಡು ದಿಗಿಲುಗೊಂಡಿದ್ದೇನೆ.

ದಲಿತ ಸಂಘರ್ಷ ಸಮಿತಿ ನಡೆಸಿದ ಸ್ವಾಭಿಮಾನಿ ಹೋರಾಟಕ್ಕೆ ಹಲವಾರು ಆಯಾಮಗಳಿದ್ದವು. ಅದು ಒಟ್ಟು ದಮನಿತರ, ಶೋಷಿತರ ಮನೋಸ್ಥೈರ್ಯವನ್ನು ಬಡಿದೆಬ್ಬಿಸಿ ಸ್ವಾಭಿಮಾನಿ ಬದುಕಿನತ್ತ ಕೊಂಡೊಯ್ಯುವ ಬಹುಮುಖ್ಯವಾದ ಆಶಯ ಹೊಂದಿತ್ತು. ನೀರು, ಆಹಾರ, ವಿದ್ಯೆ (ಅಕ್ಷರ) ಇವುಗಳ ಡಿಸ್ಟ್ರಿಬ್ಯೂಷನ್ ಸಮನಾಗಿ ನಡೆಯಬೇಕು ಎನ್ನುವ ಸರಳ, ಸತ್ಯ ಪ್ರತಿಪಾದನೆ ಅದಾಗಿತ್ತು. ಜಾತಿ ತಾರತಮ್ಯದಂಥ ಒಂದು ಹೀನಾಯ ಸ್ಥಿತಿಯನ್ನು ಬುಡಸಮೇತ ಕಿತ್ತೆಸೆಯುವ ಛಲಹೊಂದಿದ ಹೋರಾಟವದು.

ಫುಡ್ ಡಿಸ್ಟ್ರಿಬ್ಯೂಷನ್ ಸಿಸ್ಟಂ ಸಮರ್ಪಕವಾಗಿ ನಿರ್ವಹಣೆ ಆಗದೇ ಹಸಿವಿನ ಹಾಹಾಕಾರ ಭುಗಿಲೇಳುವುದನ್ನು ಇತಿಹಾಸ ಕಾಣುತ್ತಲೇ ಬಂದಿದೆ. ಅದು ಸೋಮಾಲಿಯಾ, ಆಫ್ರಿಕಾ, ಇಂಡಿಯಾದ ಬಡಜನರು ಮತ್ತು ಇಡೀ ವಿಶ್ವದ ಕಡುಬಡವರ ನಿತ್ಯ ನರಕ. ಈ ಭೂಮಿ, ಮಣ್ಣು, ನೀರು, ಗಾಳಿ, ಬೆಳಕು ಸಕಲ ಜೀವಗಳ ಲೇಸಿಗೆಂದೇ ಇರುವುದಲ್ಲವೇ? ಯಾರೋ ದೊಣ್ಣೆನಾಯಕರು ಇದೆಲ್ಲ ತಮಗೇ ಸೇರಿದ್ದು ಎಂದು ಬಡಗಿ ಹಿಡಕೊಂಡು ಕೂತಿದ್ದನ್ನು ಎಲ್ಲೆಡೆ ಪ್ರಶ್ನಿಸುತ್ತಲೇ ಬರಲಾಗಿದೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಬಾಬಾ ಸಾಹೇಬ ಅಂಬೇಡ್ಕರ್ ಅವರಂಥ ನಾಯಕರು ಆಯಾ ಕಾಲದ ದೊಣ್ಣೆನಾಯಕರ ಕುಂಡೆ ಮೇಲೆ ಬಾರಿಸಲು ಅವರ ದೊಣ್ಣೆಗಳನ್ನೇ ಬಳಸಿದ್ದಕ್ಕೆ ದೊಡ್ಡ ಚರಿತ್ರೆ ಇದೆ.

ಈಗಿದು ಬುಲ್ಡೋಜರ್ ಜಮಾನಾ! ಊಳುವುದಕ್ಕೆ ಭೂಮಿಯ ಮೇಲೆ ಹುಕೂಮತ್ ಸಾಧಿಸುವ ಒಂದು ಕಾಲದ ಸಂಘರ್ಷ ಮುಗಿದುಹೋಗಿ, ಅದೇ ಭೂಮಿಯ ಒಡಲಾಳವನ್ನು ಬಗೆದು, ಅದಿರು, ಖನಿಜ ಸಂಪತ್ತುಗಳ ಲೂಟಿಗೆ ನಿಲ್ಲುವ ಕಾಲ ಇದು. ಈ ಲೂಟಿಕೋರರು ಶ್ರೀಮಂತಿಕೆ ಮತ್ತು ಬಡತನದ ನಡುವಿನ ಅಂತರವನ್ನು ಬಹುದೊಡ್ಡ ಕಂದರಗಳನ್ನಾಗಿಸಿಟ್ಟಿದ್ದಾರೆ. ಗಣಿಗಾಗಿ ಅಗೆದ ನೆಲದ ಬೃಹತ್ ಗುಂಡಿಗಳು, ಹಸಿವಿನಿಂದ ಅದರಷ್ಟೇ ಅಗಲ ಬಾಯ್ತೆರೆದುಕೊಂಡ ಬಡಜನರ ಬದುಕಿನ ಭೀಕರತೆಯನ್ನೇ ನೆನಪಿಸುತ್ತಿವೆ!

ಹಮ್ ಮೆಹನತ್ ಕಶ್ ಜಗವಾಲೋಂಸೆ, ಜಬ್ ಅಪನಾ ಹಿಸ್ಸಾ ಮಾಂಗೆಗೆ, ಏಕ್ ಖೇತ ನಹೀ, ಏಕ್ ದೇಶ ನಹೀ ಹಮ್ ಸಾರಿ ದುನಿಯಾ ಮಾಂಗೆಂಗೆ... (ನಾವು ಬೆವರನು ಸುರಿಸಿ ದುಡಿಯುವ ಜನ, ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿಯಲ್ಲ, ಒಂದು ದೇಶವಲ್ಲ, ಇಡೀ ಭೂಗೋಲವನೇ ಕೇಳುವೆವು...) ಎನ್ನುವ ಫಯಾಜ್ ಅಹ್ಮದ್ ಫಯಾಜ್ ಕ್ರಾಂತಿಗೀತೆಯಂಥ ಹೋರಾಟ ಈ ನೆಲದ ಮೇಲೇಕೆ ನಡೆಯುತ್ತಿಲ್ಲವೋ?

ಆಹಾರ, ಅಕ್ಷರ, ನೀರು... ಇವುಗಳ ಸಮಾನ ಹಂಚಿಕೆಗೆ ಹೋರಾಟದ ಕೆಚ್ಚು ತುಂಬಿಕೊಂಡು ಕ್ರಾಂತಿಗಿಳಿದಿದ್ದರೆ ಈ ಇಂಡಿಯಾದ ನೆಲದ ಬಣ್ಣ ಕೆಂಪೇರುತ್ತಿತ್ತು. ದಮನಿತರ, ದಲಿತರ ಒಟ್ಟು ಬಡಜನರ ಹಸಿವಿನ ಆಕ್ರೋಶ ದೊಡ್ಡ ಹೋರಾಟ, ಕ್ರಾಂತಿಯ ಸ್ವರೂಪ ಪಡಕೊಳ್ಳುವುದನ್ನು ತಡೆಯಲೆಂದೋ ಮೀಸಲಾತಿ ಕಾನ್ಸೆಪ್ಟ್ ಒಂದು ತಡೆಗೋಡೆಯಂತೆ ಹುಟ್ಟಿಕೊಂಡಿತೇನೋ?! ಅಂಬೇಡ್ಕರ್ ಮಂಡಿಸಿದ ಹಕ್ಕಿನ ವಾದವನ್ನು ಸರ್ಕಾರ ಸವಲತ್ತಿನ ಬೇಡಿಕೆ ಎಂದಷ್ಟೇ ಪರಿಗಣಿಸಿತೇನೋ ಅಥವಾ ಇಡೀ ಇಂಡಿಯಾ 'ದಲಿತರ ಮೇಲೆ ಕರುಣೆ ತೋರಿ' ಎನ್ನುವಂಥ ದಯಾಮಯ ಭಾವನೆಯನ್ನಷ್ಟೇ ತಾಳಿತೇನೋ? ಅದಕ್ಕೆಂದೇ ಮೀಸಲಾತಿ ಎನ್ನುವ ಸವಲತ್ತಿನಿಂದ ಕೆಲವೇ ಜನಕ್ಕೆ ಹಿತದ ರುಚಿ ತೋರಿಸಿ ಬಹುಸಂಖ್ಯೆಯ ದಲಿತರನ್ನು ಸುಖವಂಚಿತರನ್ನಾಗಿಸುವ ವಿಧಾನವೊಂದು ಶುರುವಾಯಿತೇನೋ?...  ಎನ್ನುವ ಅನುಮಾನ ಕಾಡುತ್ತಿದೆ...

ಕೇರಿಗಳಲ್ಲಿ ಈಗ ಚುಮುಣಿ ಮಾಯವಾಗಿ, ರಸ್ತೆ ದೀಪ ಬಂದಿದೆ. ಅವರಿವರ ಬಾವಿ, ನಲ್ಲಿಯ ಮುಂದೆ ನೀರಿಗಾಗಿ ಅಂಗಲಾಚುವ ಬದಲಿಗೆ ಹಟ್ಟಿಗಳಲ್ಲೇ ನಲ್ಲಿಗಳು ತೊಟ್ಟಿಕ್ಕುತ್ತಿವೆ. ಕೆಲವರಿಗೆ ದಕ್ಕುವ ಸ್ಕಾಲರಶಿಪ್ ಗಳು ಢಣ ಢಣ ಗಂಟೆಯನ್ನು ಶಂಖ-ಘಂಟೆ-ಜಾಗಟೆ ನಿನಾದವಾಗಿಸಿದೆ. ಈ ಬದಲಾವಣೆ ಅನಿವಾರ್ಯವಾಗಿ ಬಂದಿದ್ದು. ಆದರೆ, ಹಸಿವಿನ, ತಾರತಮ್ಯದ ಸ್ಥಿತಿ ಮಾತ್ರ ಕೊಂಚ ಹೆಚ್ಚೂ ಕಮ್ಮಿ ಹಾಗೇ ಇದೆ!

ಶ್ರೀಮಂತರ ಹಸಿವೂ ಎಷ್ಟು ಕಲರ್ ಫುಲ್! ಯಾವೊಂದು ಆಹಾರದ ಪೊಟ್ಟಣಗಳನ್ನು ನೋಡಿ.. ಏಟೊಂದು ಬಣ್ಣ, ಎಂಥ ಸೊಗಸಾದ ಪ್ಯಾಕಿಂಗ್! ರುಚಿಗೆ ಚಪಲಕ್ಕೆ ಹೊಟ್ಟೆ ತುಂಬಿದರೂ ತುರುಕುವುದೇ ಕೆಲಸವನ್ನಾಗಿಸಿಕೊಂಡ ಶ್ರೀಮಂತ ವರ್ಗ ಒಂದೆಡೆ, ಮತ್ತೊಂದೆಡೆ ಹಿಡಿ ಅನ್ನಕ್ಕಾಗಿ ಚಪ್ಪಲಿ ನೆಕ್ಕುವ, ರಕ್ತ, ಕಿಡ್ನಿ ಮತ್ತು ಸೆಕ್ಸ್ ದಾಹಿಗಳಿಗೆ ದೇಹ ಮಾರಿಕೊಳ್ಳುವ ದಮನಿತರ ಸ್ಥಿತಿ ಇನ್ನೊಂದೆಡೆ... ಹಸಿವಿಗಾಗಿ ಸ್ವಾಭಿಮಾನ ಮಾರಿಕೊಳ್ಳುವ, ಅದಕ್ಕೆ ಮೂಲ ಕಾರಣವಾಗಿರುವ ಜಾತೀಯತೆಯ ಭೂತಕ್ಕೆ ಹೆದರಿ ಪ್ರಾಣ ಕಳಕೊಂಡ 'ಮಣೆಗಾರ' ನಾಟಕದ ಕಥಾನಾಯಕ ಕ್ಯಾತನ ಮಗ.... ಮಾನವ ಸಮಾಜದ ಎಂಥ ಭಯಾನಕ ದೌರ್ಜನ್ಯ!

ನಮ್ಮಿಡೀ ಯತ್ನ, ಕನಸು ಯಾರೋ ಒಬ್ಬರನ್ನು ನಾಯಕರನ್ನಾಗಿಸಲು, ಐಕನ್ ಆಗಿಸಿಕೊಳ್ಳುವುದಕ್ಕೆ ಸೀಮಿತಗೊಂಡಿದೆ. ಕ್ರಿಕೆಟ್ ನಿಂದ ನಮಗಾಗಬೇಕಾದ್ದೇನಿಲ್ಲ. ಆದರೆ ಇಲ್ಲಿನ ಒಂದು ವರ್ಗಕ್ಕೆ ಸಚಿನ್ ತೆಂಡೂಲ್ಕರ್ ನನ್ನು ಐಕನ್ ಮಾಡುವುದು ಮುಖ್ಯ. ಆತನ ಹೀರೋ ಮಾಡಲು ಒಂದಿಡೀ 11 ಜನರ ತಂಡ ಅಂಗಳದ ಮೇಲೆ ಬಿದ್ದು, ಓಡಿ ಮುಖ ಮೂತಿ ಕೆತ್ತಿಕೊಳ್ಳಬೇಕು. ತಂಡದ ಗೆಲುವಿಗಿಂತ ಸಚಿನ್ ಸೆಂಚೂರಿ ಮಹತ್ವದ್ದೆನ್ನುವಂತೆ ಮಾಧ್ಯಮಲೋಕ ವರ್ತಿಸುತ್ತದೆ. ಜನ ಅದನ್ನೇ ಶ್ರೇಷ್ಠ ಎಂದು ಭ್ರಮಿಸತೊಡಗುತ್ತದೆ! ಬಡತನ ನಿರ್ಮೂಲನೆಗೆ ನಡೆಸಬೇಕಾದ ಸಾಂಘಿಕ ಶಕ್ತಿ, ಅಭಿಮಾನ ಹೀಗೆ ಕ್ರಿಕೆಟ್ ಎಂಬ ಜೂಜಾಟದಲ್ಲಿ ಪೋಲಾಗುತ್ತಿರುವುದನ್ನು ನೋಡಿದರೆ ಈ ನೆಲದಲ್ಲಿ ಅದ್ಯಾವಾಗ ಸಮತಾ ಸಮಾಜ ನಿರ್ಮಾಣ ಸಾಧ್ಯವಾದೀತು?

ಒಬ್ಬ ಶಾರೂಕ್ ಖಾನ್, ರಜನೀಕಾಂತ್, ಮಮ್ಮೂಟಿ, ಶಿವರಾಜ್ ಕುಮಾರ್ ಹೀರೋ ಆಗಿಸುವುದಕ್ಕೆ ಅದೆಷ್ಟು ಜೋಪಡಿಪಟ್ಟಿ ಬಡವರು, ಹೊಟೇಲ್ ಮಾಣಿಗಳು ತಮ್ಮ ಕನಸಲ್ಲಾದರೂ ಸುಖ ಕಾಣುವ ಹಂಬಲದಿಂದ ದುಡಿದ ಹಣ ಸುರಿಯುತ್ತಾರೆ! ಇವರೆಲ್ಲ ಸಿನಿಮಾ ನೋಡಿದ ಒಣಖುಷಿಯಲ್ಲಿ ಒಂದರ್ಧ ಹಳಸಿದ ದೋಸೆಗೂ ಗತಿ ಇಲ್ಲದಂತೆ ರಾತ್ರಿಗಳನ್ನು ಕಳೆಯಬೇಕು... ಎಂಥ ವ್ಯಂಗ್ಯ?

ಇವರೆಲ್ಲ ಗಳಿಸುವ ಕೋಟಿ ಕೋಟಿಗಳಲ್ಲಿ ಈ ಬಡವರ ರಕ್ತದ ಹನಿಗಳ ಪಾಲೆಷ್ಟು ಎನ್ನುವುದನ್ನು ಯಾರು ಬಿಡಿಸಿ ಹೇಳಬೇಕು? ಒಬ್ಬ ಮಂತ್ರಿ, ಗಣಿ ಲೂಟಿಕೋರರು ಕೋಟಿ ಬಾಚಿಕೊಳ್ಳುವುದರ ಹಿಂದೆ ಅದೆಷ್ಟು ದಲಿತರ ಬೆವರು, ರಕ್ತ ಹರಿದಾಡುತ್ತದೆ? ಯಾರಿಗಾದರೂ ಅಂದಾಜಿಲ್ಲವೇನು? ಜೆಸಿಬಿ ಯಂತ್ರಕ್ಕೆ ತೋರುವ ಕಾಳಜಿ, ಮನುಷ್ಯ ರಟ್ಟೆಗಳು, ಬೆವರಿಗೆ ದಕ್ಕುತ್ತಾ? ಜೆಸಿಬಿ ಮೂಲಕ ಖನಿಜ ಸಂಪತ್ತು, ಅದಿರು ಲೂಟಿಯಿಂದ ಒಂದಿಡೀ ದೇಶ, ಪ್ರದೇಶದ ನಾಗರಿಕತೆಯನ್ನು ಸಮೃದ್ಧಗೊಳಿಸಲು ಸಾಧ್ಯವೋ? ಆದರೂ ಎಷ್ಟು ಕಾಲ ಆ ಸಮೃದ್ಧಿ?

ಮಣೆಗಾರ ನಾಟಕದಲ್ಲಿ ಬರುವ ಬಡತನ, ಶೋಷಣೆ, ಹಸಿವು ಕಂಡಾಗ ನನ್ನೊಳಗಿನ ಇಂಡಿಯಾದ ವಾಸ್ತವ ಲೋಕ ಎಲ್ಲವನ್ನೂ ಹೀಗೆ ನೆನಪಿಸಿತು. ತುಂಬಾಡಿ ರಾಮಯ್ಯನವರ ನೋವು ಇಡೀ ಮನುಷ್ಯ ಕುಲದ ಅದರಲ್ಲೂ ಹಸಿವಿನಿಂದ ನರಳುವ ಬಡವರ ನೋವು. ಅವರ ಹೋರಾಟದ ಆಶಯಗಳು ಸಮಾಜದ ಆಶಯಗಳಾಗಬೇಕು. ಹಾಲ್ಕುರಿಕೆ ಕಡೆಯ ದೃಶ್ಯದಲ್ಲಿ ತೋರಿಸಿದ ದಾರದ ತುಂಡುಗಳ ಹಿಡಿದು ನಿಲ್ಲಿಸುವ ದೃಶ್ಯ  ಈ ದೇಶದ ಒಡಕಲು ಬಿಂಬಕ್ಕೊಂದು ರೂಪಕ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ