ವಿಷಯಕ್ಕೆ ಹೋಗಿ

ವಾಚ್ ಕೊಟ್ಟ ಮಾಮನ ಸಮಯ ನಿಂತುಹೋದ ಹೊತ್ತು...

ನಾನಿನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದೆ. ಕೈಗೆ ಇಂಪೋರ್ಟೆಡ್ ಕ್ಯಾಸಿಯೊ ವಾಚ್ ಕಟ್ಟುತ್ತಿದ್ದೆ. ಅದರಲ್ಲಿ ಏಳು ಬಗೆಯ ಮ್ಯುಜಿಕಲ್ ಅಲಾರಾಂ ಇತ್ತು. ನನ್ನ ಜನ್ಮದಿನದಂದು ಅದು ಹ್ಯಾಪಿ ಬರ್ತಡೇ ಸಂಗೀತ ಹೇಳುತ್ತಿತ್ತು. ಬರ್ತಡೇ ದಿನ ತಾಸಿಗೊಂದು ಬಾರಿ ಇಡೀ ದಿನ ಅಲಾರಾಂ ಮೊಳಗುವಂತೆ ಮಾಡಬಲ್ಲ ವ್ಯವಸ್ಥೆ ಅದರಲ್ಲಿತ್ತು. ನನ್ನ ಓರಿಗೆಯ ಹುಡುಗರಲ್ಲಿ ಅದು ಮೂಡಿಸಿದ ಕುತೂಹಲ ಅಷ್ಟಿಷ್ಟಲ್ಲ. ಓದುತ್ತಿದ್ದ ಸ್ಕೂಲಿನಿಂದ ಹಿಡಿದು ಇಡೀ ಸುತ್ತಮುತ್ತಲಿನ ಜನಕ್ಕೂ ನಾನೊಂದು ಸ್ಪೆಶಲ್ ಪರ್ಸನ್ ಆಗಿಬಿಟ್ಟಿದ್ದೆ. ಬಟನ್ ಒತ್ತಿದರೆ ಒಂದು ಸಣ್ಣ ಟಾರ್ಚಿನಷ್ಟು ಬೆಳಕು ಮೂಡುತ್ತಿತ್ತು. ರಾತ್ರಿ ಕರೆಂಟ್ ಹೋದಾಗ ಒಳ್ಳೆ ಓದುವ ಧಿಮಾಕು ತೋರಿಸುವಂತೆ ವಾಚ್ ಹಿಡಿದುಕೊಂಡು ಓದುವ ಸಾಹಸ ಮಾಡುತ್ತಿದ್ದೆ.
  ಆ ವಾಚು ನನ್ನ ಕಾಲೇಜು ದಿನಗಳವರೆಗೂ ಇತ್ತು. ಕೆಲ ಗೆಳೆಯರು ಎಲ್ಲಾದರೂ ಊರಿಗೆ ಹೋಗುವುದಿದ್ದರೆ ನನ್ನ ವಾಚ್ ಕಟ್ಟಿಕೊಂಡೇ ಹೋಗುತ್ತಿದ್ದರು. ಅದೆಷ್ಟು ಜನರ ಮುಂದೆ ಮ್ಯುಜಿಕಲ್ ಖುಷಿ ಮೂಡಿಸಿತೋ! ಅದರ ಸೆಲ್ ಒಮ್ಮೆ ಖಾಲಿಯಾಯ್ತು. ಅದಕ್ಕಾಗಿ ನಾನು ಪರಿದಾಡಿದ್ದು ಅಷ್ಟಿಷ್ಟಲ್ಲ. ಆಗಷ್ಟೇ ಕ್ವಾರ್ಟ್ಜ ವಾಚುಗಳು ದೇಶಕ್ಕೆ ದಾಂಗುಡಿ ಇಡುತ್ತಿದ್ದವು. ಕಡೆಗೆ ಅದರ ಸೆಲ್ ಬೆಳಗಾವಿಯಲ್ಲಿ ಸಿಕ್ಕಿತು. ಆಗ ಅದು ದುಬಾರಿಯಾಗಿತ್ತು. ಆರಂಭದ ಕೆಲ ವರ್ಷಗಳತನಕ ಸೆಲ್ ಡೌನ್ ಆಗೇ ಇರಲಿಲ್ಲ. ಆನಂತರದಲ್ಲಿ ಹತ್ತಾರು ಬಾರಿ ಸೆಲ್ ಚೇಂಜ್ ಮಾಡಿದೆ. ಮ್ಯುಜಿಕ್ ಬಟನ್, ಡೇಟ್ ಬಟನ್, ಲೈಟ್ ಬಟನ್ ಎಷ್ಟು ಬಳಸಿದೆನೆಂದರೆ ಕಡೆ ಕಡೆಗೆ ಅದರ ಎಲ್ಲಾ ಬಟನ್ ಗಳು ಲೂಜ್ ಆಗಿ ಕಳಚಿಬಿಟ್ಟವು. ಆದರೂ ಅದರ ನಾದ ಬಿಡಲಿಲ್ಲ. ಕಡ್ಡಿ ಒತ್ತಿಯಾದರೂ ಅದರ ಮ್ಯೂಜಿಕ್ ಸವಿಯುತ್ತಿದ್ದೆ. ಅದರ ಬಾಡಿ ಸಿಂಥೆಟಿಕ್ ಮಟೀರಿಯಲ್ ನಿಂದ ಮಾಡಿದ್ದು ಸೊಗಸಾಗಿತ್ತು. ಮೇಲಿನ ಗ್ಲಾಸ್ ಒಂದಷ್ಟೂ ಹೊಳಪು ಕಳಕೊಂಡಿರಲಿಲ್ಲ. ಕಡ್ಡಿ ಬಳಸಿದ್ದರಿಂದ ಅದರ ಸೆನ್ಸರಿಯೇ ಡ್ಯಾಮೇಜ್ ಆಗಿ ಹೋಗಿತ್ತು. ಆ ಮೇಲೆ ಅದನ್ನು ರಿಪೇರಿ ಮಾಡದಷ್ಟು ಕೆಡಿಸಿಬಿಟ್ಟೆ.
  ನನ್ನ ಕೈಗೆ ಮತ್ತೊಂದು ವಾಚ್ ಬಂತು. ಅದು ಸ್ವಿಸ್ ಮೇಡ್. ಬಂಗಾರಬಣ್ಣದ ಆ ರಿಸ್ಟ್ ವಾಚ್ ನೋಡುಗರೆಲ್ಲರ ಗಮನಸೆಳೆಯುವಂತಿತ್ತು. ಅದು ನನ್ನ ಕೈಯಿಂದ ಒಂದಷ್ಟು ಬಾರಿ ಕಳಚಿಬಿದ್ದು ಅದರ ಲಿವ್ಹರ್ ಹೊರಟು ಹೋಗಿತ್ತು. ಇಂಪೋರ್ಟೆಡ್ ವಾಚ್ ಆದ್ದರಿಂದ ಅದರ ಲಿವ್ಹರ್ ಸಿಕ್ಕಲೇ ಇಲ್ಲ. ಅದೂ ಮೂಲೆಗುಂಪಾಯಿತು.
ನಾನು ಪಿಜಿ ಸೇರುವಷ್ಟೊತ್ತಿಗೆ ಮತ್ತೊಂದು ವಾಚ್ ಕೈಸೇರಿತು. ಮತ್ತೆ ಕ್ಯಾಸಿಯೊ ವಾಚ್! ಅದೀಗ ಸ್ಟೀಲ್ ಕೇಸ್ ಹೊಂದಿತ್ತು. ಅದರಲ್ಲೂ ಅಲರಾಂ ಇತ್ತು. ಜತೆಗೆ ಕ್ಯಾಲ್ಕುಲೇಟರ್! ಸಣ್ಣ ಸಣ್ಣ ಲೆಕ್ಕಕ್ಕೆಲ್ಲ ಆ ಕ್ಯಾಲ್ಕುಲೇಟರ್ ಬಳಸುವುದು ಚಟವೇ ಆದಂತಾಗಿತ್ತು. ಅದರಲ್ಲೂ ಮ್ಯೂಜಿಕ್, ಲೈಟ್, ಅಲರಾಂ ಎಲ್ಲವೂ ಇತ್ತು. ಆ ವಾಚು ತುಂಬ ಜತನದಿಂದ ಕಾಯ್ದುಕೊಂಡು ಬಂದಿದ್ದೆ. ಬೆಂಗಳೂರಿಗೆ ಬಂದಾಗಲೂ ನನ್ನ ಕೈಯಲ್ಲಿದ್ದದ್ದು ಅದೇ ವಾಚು. ಬೆಂಗಳೂರಿನಲ್ಲಿ ಆರಂಭದ ಸಮಯ ಚೆನ್ನಾಗೇ ಇತ್ತು. ಗಾಡಿ ತಗೊಂಡೆ. ಅದರ ಹಿಂದೆ ಸೀಟು ಯಾವತ್ತೂ ಖಾಲಿ ಇರತಾನೇ ಇರಲಿಲ್ಲ! ತುಂಬ ಹಾಯಾಗಿದ್ದೆ. ಜಾಲಿಯಾಗಿದ್ದೆ. ಗಾಡಿ ಹಿಂದಿನ ಸೀಟು ಖಾಲಿ ಮಾಡಿ ಮನೆ ಸೇರುತ್ತಿದ್ದಾಗ ಅದಾವ ವಕ್ರದೃಷ್ಟಿ ನನ್ನ ಮೇಲಿತ್ತೋ... ಒಂದು ಕಾರು ನನ್ನೆದುರಿಗೆ ಇದ್ದಕ್ಕಿದ್ದಂತೆ ಹೆಡ್ ಲೈಟ್ ಆನ್ ಮಾಡಿಕೊಂಡಿತು. ನೋಡ ನೋಡುತ್ತಿದ್ದಂತೆ ಅದು ನನ್ನ ಮೇಲೆ ಎಗರಿ ಬಂತು. ಯೋಚಿಸುವದಕ್ಕೂ ಸಮಯ ಕೊಡದೇ ನನ್ನನ್ನು ಗುದ್ದಿಕೊಂಡು ಹೋಯಿತು. ಆಯತಪ್ಪಿ ನೆಲಕ್ಕೊರಗಿದೆ. ಆಸ್ಪತ್ರೆ ಸೇರಿದಾಗ ನನ್ನ ಕಾಲು ತುಂಬ ಡ್ಯಾಮೇಜ್ ಆಗಿತ್ತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಕಾಲು ರಿಪೇರಿಯಾಯ್ತು. ಗಾಡಿ, ಅದರ ಹಿಂದಿನ ಸೀಟೂ ಖಾಲಿ! ನೋವು ಹಾಗೇ ಉಳಿದುಕೊಂಡಿತು. ಕ್ಯಾಸಿಯೊ ವಾಚು ಉಜ್ಜಿಹೋಗಿ ಅಪ್ಪಚ್ಚಿಯಾಗಿತ್ತು. ನನಗೆ ಪ್ರಜ್ಞೆ ಬಂದಾಗ ವಾಚನ್ನು ನನ್ನ ಕೈಗಿತ್ತರು. ಕಣ್ಣಲ್ಲಿ ನೀರಾಡಿತ್ತು. ಆ ನಜ್ಜುಗುಜ್ಜಾದ ವಾಚು ನನ್ನ ಗುಜರಿಯಲ್ಲಿನ್ನೂ ಇದೆ.
  ಈ ಮೂರೂ ವಾಚುಗಳನ್ನು ನನಗೆ ಕೊಟ್ಟಿದ್ದು ನನ್ನ ಚಿಕ್ಕ ಮಾಮ ಅಜೀಜ್ ಮುದ್ನಾಳ್. ತಾಯಿಯ ಅಣ್ಣ. ಅವರು 35 ವರ್ಷಗಳ ಕಾಲ ಕುವೈತ್ ನಲ್ಲಿದ್ದವರು. ಪ್ರತಿಬಾರಿ ಬಂದಾಗೆಲ್ಲ ನನಗೆ ಇಂಪೋರ್ಟೆಡ್ ವಾಚ್, ಬಟ್ಟೆ ಕೊಡುತ್ತಿದ್ದ ಮಾಮನ ಸಮಯ ಕೆಲ ದಿನಗಳಿಂದ ಚೆನ್ನಾಗಿರಲಿಲ್ಲ. ಅವರು ನನಗೆ ಕೊಟ್ಟ ವಾಚ್ ಗಳ ಕಡ್ಡಿ ಅಲುಗದೇ ಹಾಗೇ ನಿಂತುಕೊಂಡಂತೆ ಇವತ್ತು ಅವರ ಹಾರ್ಟ್ ಬೀಟ್ ಕೂಡ ನಿಂತುಹೋಯ್ತು. ಈ ಬೆಳಗ್ಗೆ (ಮಂಗಳವಾರ, 24, ಜುಲೈ 2012) ಅವರ ಬದುಕಿನ ಸಮಯ ಮುಗಿದ ಸುದ್ದಿ ನನ್ನ ಕಿವಿಗಪ್ಪಳಿಸಿತು. ಸಮಯದ ಕಡ್ಡಿ ಅಲುಗಾಡದ ವಾಚ್, ಮ್ಯೂಜಿಕ್ ನಿಂತು ಹೋದ ವಾಚ್, ಲೆಕ್ಕ ಮಾಡಲಾಗದ ಆ ವಾಚ್... ಎಲ್ಲ ನನ್ನ ಜತೆಗೇ ಇವೆ. ಅವರೇ ಇಲ್ಲ. ತುಂಬ ಅವರ ನೆನಪಾಗುತ್ತಿದೆ. ನನ್ನ ದಿಲ್ ಬೀಟ್ ನಿಲ್ಲುವವರೆಗೆ ನಾನೂ ಹೀಗೆ ಸಮಯದ ಸಹಜ ನಡಿಗೆಯ ಜತೆಗೇ ಇರುತ್ತೇನೆ. ನನ್ನ ಮಾಮನಿಗೆ ನನ್ನದೊಂದು ಆಖರೀ ಸಲಾಂ. ದಿಲ್ ಸೇ...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...