ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ ಉಸಿರೇ ಆಗಿ ಹೋಗಿತ್ತು. ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು.
'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.
'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.
ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು.
ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತು. ಆದರೂ ಆ ಬಗ್ಗೆ ಯಾರೂ ಯಾರ ಬಳಿಯೂ ಪ್ರಸ್ತಾಪಿಸುತ್ತಿರಲಿಲ್ಲ. ಯಾಕೆಂದರೆ ಅಮ್ಮಾ ಇದನ್ನು ಸಹಿಸುತ್ತಿರಲಿಲ್ಲ. ಈ ನಿಜ ಸಂಗತಿಯನ್ನು ಹೊರಜಗತ್ತಿನಿಂದ ಆದಷ್ಟು ಮುಚ್ಚಿಡುವುದಕ್ಕೇ ಎಲ್ಲ ಯತ್ನಿಸುತ್ತಿದ್ದರು. ಯಾರಾದರೂ ಅಕಸ್ಮಾತ್ ಈ ಬಗ್ಗೆ ಪ್ರಸ್ತಾಪಿಸಿದರೆ ಅಮ್ಮಾ (ಅತ್ತೆ) ಮತ್ತು ಜಹೀರ್ ಮಾಮು ಮಾತು ಮರೆಸಿ, ಅದೊಂದು ನಿರಾಧಾರವಾದ ಊಹಾಪೋಹ ಅಷ್ಟೇ ಎಂದು ಸಾವರಿಸಲೆತ್ನಿಸುತ್ತಿದ್ದರು.
ಈ ಗೌಪ್ಯವನ್ನು ಕಾಪಾಡುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವೇನಿತ್ತು ಎನ್ನುವುದೇ ನನಗರ್ಥವಾಗದ ಪ್ರಶ್ನೆಯಾಗಿತ್ತು. ಸಯೀದ್ ಭಾಯಿಜಾನ್ ಅವರು ನಾಲ್ಕು ವರ್ಷದವರಿದ್ದಾಗಲೇ ಅವರನ್ನು ಮುಂಬೈಗೆ ಕರೆತರಲಾಗಿತ್ತು. 1961ರಲ್ಲಿ ಅವರನ್ನು ಲಂಡನ್ ಗೆ ಕಳುಹಿಸಿಕೊಡುವವರೆಗೆ ಅಮ್ಮಾ ಮತ್ತು ಅಬ್ಬಾ ಜತೆಗೇ ಅವರು ಬೆಳೆದಿದ್ದರು. ಕೊನೆಗೆ ಲಂಡನ್ ನಲ್ಲೇ ನೆಲೆಯೂರಿದರು.
ರಫೀ ಹಾಡುಗಳು ರೇಡಿಯೋ ಲಾಹೋರಿನಲ್ಲಿ ಬಿತ್ತರಗೊಳ್ಳತೊಡಗಿದ್ದವು. ಸಮುದಾಯದ ಜನ ಅಭಿಮಾನದಿಂದ ಹಾಡುಗಳನ್ನು ಆಲಿಸಲರಾಂಭಿಸಿದರು. ತುಂಬ ಹೆಮ್ಮೆಯಿಂದ ಗಾಯನ ಸವಿಯುತ್ತಿದ್ದರು. ಆಗಿನ ಹೆಸರಾಂತ ಸಂಗೀತ ನಿರ್ದೇಶಕ ಶ್ಯಾಂ ಸುಂದರ ಕೂಡ ರೇಡಿಯೋ ಲಾಹೋರ್ ಮೂಲಕ ಇವರ ಹಾಡುಗಳನ್ನು ಆಲಿಸುತ್ತಿದ್ದರು. ಪಂಜಾಬಿ ಚಿತ್ರವೊಂದರಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ಪ್ರಥಮ ಬಾರಿಗೆ ಅದರಲ್ಲೂ ಪಂಜಾಬಿ ಚಿತ್ರಕ್ಕೆ (ಚಿತ್ರದ ಹೆಸರು ಗುಲ್ ಬಲೋಚ್) ರಫೀ ದನಿ ನೀಡಿದರು. 1941, ಫೆಬ್ರುವರಿ 28ರಂದು ಈ ಹಾಡಿನ ಧ್ವನಿಮುದ್ರಣ ಕಾರ್ಯ ನಡೆದಿತ್ತು. ’ಸೋನಿಯೇ ನಿ ಹೀರಿಯೇ ನಿ, ತೇರಿ ಯಾದ್ ಸತಾಯಾ’ ಎನ್ನುವುದು ಹಾಡಿನ ಸಾಹಿತ್ಯ. ಹಾಡು ತುಂಬ ಜನಪ್ರಿಯಗೊಂಡಿತು. ರಫೀ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಹಾಡುಗಾರಿಕೆಯ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರತೊಡಗಿದವು. ಹೆಸರಾಂತ ನಟ, ನಿರ್ಮಾಪಕ ನಾಸಿರ್ ಖಾನ್ ಕೂಡ ಈ ಹಾಡನ್ನು ಕೇಳಿ ತುಂಬ ಮೆಚ್ಚಿಕೊಂಡಿದ್ದರು. ತನ್ನೊಂದಿಗೆ ಮುಂಬೈಗೆ ಬರುವಂತೆ ಅಬ್ಬಾಗೆ ಸೂಚಿಸಿದರು.
ಅಬ್ಬಾ ಮುಂಬೈಗೆ ಹೊರಡಲು ನಿರ್ಧರಿಸಿಬಿಟ್ಟರು. ಅವರಿಗೆ ಕುಟುಂಬದ ಅನುಮತಿ ಬೇಕಿತ್ತಷ್ಟೇ. ತುಂಬ ಕಷ್ಟಪಟ್ಟು ಅನುಮತಿ ಗಿಟ್ಟಿಸಿಕೊಂಡರು ಕೂಡ. ಮೊಹಮ್ಮದ್ ದೀನ್ ಅವರಿಗೊಬ್ಬ ಸ್ನೇಹಿತನಿದ್ದ. ಹೆಸರು ಹಮೀದ್. ಅಬ್ಬಾಗಿಂತ ತುಂಬ ಹಿರಿಯ. ಅಬ್ಬಾ ಪ್ರತಿಭೆಯ ಬಗ್ಗೆ ಹಮೀದ್ ಗೆ ತುಂಬ ಗೌರವಾದರ. ಈ ಯುವ ಹಾಡುಗಾರನ ಬಗ್ಗೆ ಹಮೀದ್ ತುಂಬ ಮುತುವರ್ಜಿ ವಹಿಸುತ್ತಿದ್ದರು. ಈಗ ಒಂದೇ ಪ್ರಶ್ನೆ. ಈ ಸಂಭಾವಿತ ಮತ್ತು ಮುಜುಗರದ ಯುವಕನನ್ನು ಒಂಟಿಯಾಗಿ ಮುಂಬೈಗೆ ಹೇಗೆ ಕಳುಹಿಸಿಕೊಡುವುದು? ಹಮೀದ್ ಭಾಯ್ ಬುದ್ಧಿವಂತ ಮತ್ತು ಅಷ್ಟೇ ಚುರುಕಾದ ವ್ಯಕ್ತಿ. ಅವನೊಟ್ಟಿಗೆ ಕಳುಹಿಸುವುದು ಸೂಕ್ತವೆಂದುಕೊಂಡ ಮೊಹಮ್ಮದ್ ದೀನ್, ಹಾಗೇ ಮಾಡಿದರು. ಅಬ್ಬಾನನ್ನು ಹೀಗೆ ಬೀಳ್ಕೊಡುವುದಕ್ಕೆ ಇಷ್ಟವಿರಲಿಲ್ಲವಾದರೂ ಭಾರದ ಮನಸಿನೊಂದಿಗೆ ಅವರ ತಂದೆ ಅಂತೂ ಬೀಳ್ಕೊಡಲು ಲಾಹೋರ್ ರೈಲ್ವೆ ಸ್ಟೇಷನ್ ವರೆಗೂ ಬಂದರು. ಅವರು ಆ ಸಂದರ್ಭದಲ್ಲಿ ಮುಲಾಜೇ ಇಲ್ಲದೆ ಹೇಳಿದ್ದು ಒಂದೇ ಒಂದು ಮಾತು- "ಸಾಧನೆ ಮಾಡದೇ ಹೋದರೆ ಇಲ್ಲಿಗೆ ವಾಪಸ್ ಬರಲೇಬೇಡ. ನನಗೊಬ್ಬ ರಫೀ ಎನ್ನುವ ಮಗನಿದ್ದ ಅನ್ನೋದನ್ನೇ ಮರೆತು ಬಿಡುತ್ತೇನೆ".
1942ರಲ್ಲಿ ಅಬ್ಬಾ ಮುಂಬೈ ಸೇರಿದರು. ಅವರ ಬದುಕಿನ ಎರಡನೇ ಮಜಲು ಆರಂಭಗೊಂಡಿತು. ತುಂಬ ನಿರೀಕ್ಷೆಗಳನ್ನಿಟ್ಟುಕೊಂಡು ಅವರು ಮುಂಬೈಗೆ ಬಂದಿದ್ದರು. ಅವರ ಸಮಕಾಲೀನರು ಆಗಲೇ ದೊಡ್ಡ ಗಾಯಕರಾಗಿ ಹೆಸರಾಗಿದ್ದರು. ಕೆ.ಎಲ್. ಸೈಗಲ್, ಪಂಕಜ್ ಮಲಿಕ್, ಖಾನ್ ಮಸ್ತಾನಾ ಮತ್ತು ಜಿ.ಎಂ. ದುರಾನಿಯಂಥ ಘಟಾನುಘಟಿಗಳಿದ್ದರು. ಇವರೊಂದಿಗೆ ಮುಖೇಶ್ ಜೀ, ತಲತ್ ಮೆಹಮೂದ್ ಸಾಹೇಬ್, ಮನ್ನಾಡೇ ಮತ್ತು ಕೆಲವೇ ಅವಧಿಯ ನಂತರದಲ್ಲಿ ಕಿಶೋರ್ ಕುಮಾರ್ ಮತ್ತಿತರರು ಕೂಡ ಹಿನ್ನೆಲೆ ಗಾಯನ ರಂಗಕ್ಕೆ ದಾಪುಗಾಲಿಟ್ಟಿದ್ದರು. ಅಬ್ಬಾ ಸಂಗೀತಾಭ್ಯಾಸದ ಹಿನ್ನೆಲೆ ಇರುವವರು. ಗಾಯನದಲ್ಲಿ ಅವರಿಗೆ ತುಂಬ ಹಿಡಿತವಿತ್ತು. ಆದರೂ ಸಿನಿಮಾ ಹಿನ್ನೆಲೆ ಗಾಯನಕ್ಕೆ ಬರುವ ನಿರೀಕ್ಷೆಗಳು ಅವರಿಗಿರಲಿಲ್ಲ. ಉಸ್ತಾದ ರಿಂದ ಕಲಿತ ರಾಗಗಳ ಅಪಾರವಾದ ಜ್ಞಾನ ಅವರಲ್ಲಿತ್ತು. ದರ್ಬಾರಿ, ಮಾಲಕಂಸ, ಪಹಾಡಿ ಮತ್ತಿತರ ರಾಗಗಳ ಬಗ್ಗೆ ಆಳವಾದ ಆಸಕ್ತಿ ಮತ್ತು ಅಧ್ಯಯನ ಹೊಂದಿದ್ದರು. ಠುಮ್ರಿ, ಗಜಲ್ ಮತ್ತು ವೆಸ್ಟರ್ನ್ ಸಂಗೀತದ ಬಗ್ಗೆಯೂ ಪ್ರಾವಿಣ್ಯ ಹೊಂದಿದ್ದರು.
ಕೆ.ಎಲ್. ಸೈಗಲ್ ಅವರಂಥ ದಿಗ್ಗಜರಿರುವ ಗಾಯನಲೋಕದಲ್ಲಿ ತಮ್ಮ ಗುರಿ ಮುಟ್ಟುವುದಕ್ಕೆ ಅಬ್ಬಾಗೆ ದೊಡ್ಡ ಸವಾಲೇ ಎದುರಿಗಿತ್ತು. ಚಿತ್ರರಂಗದಲ್ಲಿ ಆಗ ಸೈಗಲ್ ಅವರ ಗಾಯನ ಶೈಲಿ ತುಂಬ ಪ್ರಭಾವಿಯಾಗಿತ್ತು. ಪ್ರತಿಯೊಬ್ಬ ಹಾಡುಗಾರ ಅವರ ಶೈಲಿಯನ್ನು ಅನುಕರಿಸಲು ಹೆಣಗುತ್ತಿದ್ದ. ಸಂಗೀತ ನಿರ್ದೇಶಕರೂ ಕೂಡ, ಹೊಸಬರು ಸೈಗಲ್ ಶೈಲಿಯನ್ನೇ ಅನುಸರಿಸಲಿ ಎಂದು ಬಯಸುತ್ತಿದ್ದರು. ಸೈಗಲ್ ದನಿ ಹೊರತುಪಡಿಸಿದ ಯಾವ ಹೊಸ ದನಿಯನ್ನು ಕಲ್ಪಿಸಿಕೊಳ್ಳಲಾರದಷ್ಟು ಅವರ ಅಭಿಮಾನಿಗಳು ಪ್ರಭಾವಿತರಾಗಿದ್ದರು.
* * *
ನನ್ನ ಆ ಬಾಲ್ಯದ ದಿನಗಳ ನೆನಪು ಇನ್ನೂ ಹಚ್ಚ ಹಸಿರಾಗೇ ಇದೆ. ರೆಡಿಯೋ ಸಿಲೋನ್ ಬೆಳಿಗ್ಗೆ 9ರಿಂದ ಬಿತ್ತರಿಸುತ್ತಿದ್ದ ಹಳೆಯ ಹಿಂದಿ ಹಾಡುಗಳು ಜನಪ್ರಿಯವಾಗಿದ್ದ ದಿನಗಳವು. ಬಹುತೇಕ ಹಾಡುಗಳು ಕೆ.ಎಲ್. ಸೈಗಲ್ ಮತ್ತು ಪಂಕಜ್ ಮಲಿಕ್ ಅವರದ್ದೇ ಆಗಿರುತ್ತಿದ್ದವು. 'ಜಬ್ ದಿಲ್ ಹೀ ಟೂಟ್ ಗಯಾ, ಹಮ್ ಜೀಕರ್ ಕ್ಯಾ ಕರೇಂಗೆ... ಎನ್ನುವ ಸೈಗಲ್ ಹಾಡು, 'ಬಾಬುಲ್ ಮೋರಾ...’, 'ದುನಿಯಾ ರಂಗ್ ರಂಗೀಲಿ ಬಾಬಾ', 'ಕರೂ ಕ್ಯಾ ಆಸ್ ನಿರಾಸ್ ಭಾಯಿ' ಮತ್ತು ’ಚಲೇ ಪವನ ಕೀ ಚಾಲ್...' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಶ್ರೋತೃಗಳು ಮತ್ತೆ ಮತ್ತೆ ಕೇಳಬೆಕೆನಿಸುವ ಹಾಡುಗಳು ಇವಾಗಿದ್ದವು. ಆದರೆ ನನಗೆ ಈ ಹಾಡುಗಳಲ್ಲಿ ಅಂಥ ಆಸಕ್ತಿ ಇರಲಿಲ್ಲ. ಈ ಗಾಯಕರ ಧ್ವನಿ ಮತ್ತು ಶೈಲಿ ತುಂಬ ಏಕತಾನತೆಯಿಂದ ಕೂಡಿರುತ್ತಿತ್ತು.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
ನಿರೂಪಣೆ ಕೂಡ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆ ಇರುವುದರಿಂದ ಮತ್ತು ಇದು ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ನಿರೂಪಣಾ ಶೈಲಿಗೊಳಪಡಿಸುವುದು ಬೇಡ ಅನಿಸಿತು.
ಕಾಮೆಂಟ್ಗಳು