ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ-2

ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ  ಉಸಿರೇ ಆಗಿ ಹೋಗಿತ್ತು.  ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು.
'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.

 ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು.
ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತು. ಆದರೂ ಆ ಬಗ್ಗೆ ಯಾರೂ ಯಾರ ಬಳಿಯೂ ಪ್ರಸ್ತಾಪಿಸುತ್ತಿರಲಿಲ್ಲ. ಯಾಕೆಂದರೆ ಅಮ್ಮಾ ಇದನ್ನು ಸಹಿಸುತ್ತಿರಲಿಲ್ಲ.  ಈ ನಿಜ ಸಂಗತಿಯನ್ನು ಹೊರಜಗತ್ತಿನಿಂದ ಆದಷ್ಟು ಮುಚ್ಚಿಡುವುದಕ್ಕೇ ಎಲ್ಲ ಯತ್ನಿಸುತ್ತಿದ್ದರು. ಯಾರಾದರೂ ಅಕಸ್ಮಾತ್ ಈ ಬಗ್ಗೆ ಪ್ರಸ್ತಾಪಿಸಿದರೆ ಅಮ್ಮಾ (ಅತ್ತೆ) ಮತ್ತು ಜಹೀರ್ ಮಾಮು ಮಾತು ಮರೆಸಿ, ಅದೊಂದು ನಿರಾಧಾರವಾದ ಊಹಾಪೋಹ ಅಷ್ಟೇ ಎಂದು ಸಾವರಿಸಲೆತ್ನಿಸುತ್ತಿದ್ದರು.
ಈ ಗೌಪ್ಯವನ್ನು ಕಾಪಾಡುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡುವ ಅಗತ್ಯವೇನಿತ್ತು ಎನ್ನುವುದೇ ನನಗರ್ಥವಾಗದ ಪ್ರಶ್ನೆಯಾಗಿತ್ತು. ಸಯೀದ್ ಭಾಯಿಜಾನ್ ಅವರು ನಾಲ್ಕು ವರ್ಷದವರಿದ್ದಾಗಲೇ ಅವರನ್ನು ಮುಂಬೈಗೆ ಕರೆತರಲಾಗಿತ್ತು. 1961ರಲ್ಲಿ ಅವರನ್ನು ಲಂಡನ್ ಗೆ ಕಳುಹಿಸಿಕೊಡುವವರೆಗೆ ಅಮ್ಮಾ ಮತ್ತು ಅಬ್ಬಾ ಜತೆಗೇ ಅವರು ಬೆಳೆದಿದ್ದರು. ಕೊನೆಗೆ ಲಂಡನ್ ನಲ್ಲೇ ನೆಲೆಯೂರಿದರು.

 ರಫೀ ಹಾಡುಗಳು ರೇಡಿಯೋ ಲಾಹೋರಿನಲ್ಲಿ ಬಿತ್ತರಗೊಳ್ಳತೊಡಗಿದ್ದವು. ಸಮುದಾಯದ ಜನ ಅಭಿಮಾನದಿಂದ ಹಾಡುಗಳನ್ನು ಆಲಿಸಲರಾಂಭಿಸಿದರು. ತುಂಬ ಹೆಮ್ಮೆಯಿಂದ ಗಾಯನ ಸವಿಯುತ್ತಿದ್ದರು. ಆಗಿನ ಹೆಸರಾಂತ ಸಂಗೀತ ನಿರ್ದೇಶಕ ಶ್ಯಾಂ ಸುಂದರ ಕೂಡ ರೇಡಿಯೋ ಲಾಹೋರ್ ಮೂಲಕ ಇವರ ಹಾಡುಗಳನ್ನು ಆಲಿಸುತ್ತಿದ್ದರು. ಪಂಜಾಬಿ ಚಿತ್ರವೊಂದರಲ್ಲಿ ಹಾಡುವ ಅವಕಾಶವನ್ನೂ ನೀಡಿದರು. ಪ್ರಥಮ ಬಾರಿಗೆ ಅದರಲ್ಲೂ ಪಂಜಾಬಿ ಚಿತ್ರಕ್ಕೆ (ಚಿತ್ರದ ಹೆಸರು ಗುಲ್ ಬಲೋಚ್) ರಫೀ ದನಿ ನೀಡಿದರು. 1941, ಫೆಬ್ರುವರಿ 28ರಂದು ಈ ಹಾಡಿನ ಧ್ವನಿಮುದ್ರಣ ಕಾರ್ಯ ನಡೆದಿತ್ತು. ’ಸೋನಿಯೇ ನಿ ಹೀರಿಯೇ ನಿ, ತೇರಿ ಯಾದ್ ಸತಾಯಾ’ ಎನ್ನುವುದು ಹಾಡಿನ ಸಾಹಿತ್ಯ. ಹಾಡು ತುಂಬ ಜನಪ್ರಿಯಗೊಂಡಿತು. ರಫೀ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಹಾಡುಗಾರಿಕೆಯ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರತೊಡಗಿದವು. ಹೆಸರಾಂತ ನಟ, ನಿರ್ಮಾಪಕ ನಾಸಿರ್ ಖಾನ್ ಕೂಡ ಈ ಹಾಡನ್ನು ಕೇಳಿ ತುಂಬ ಮೆಚ್ಚಿಕೊಂಡಿದ್ದರು. ತನ್ನೊಂದಿಗೆ ಮುಂಬೈಗೆ ಬರುವಂತೆ ಅಬ್ಬಾಗೆ ಸೂಚಿಸಿದರು.
ಅಬ್ಬಾ ಮುಂಬೈಗೆ ಹೊರಡಲು ನಿರ್ಧರಿಸಿಬಿಟ್ಟರು. ಅವರಿಗೆ ಕುಟುಂಬದ ಅನುಮತಿ ಬೇಕಿತ್ತಷ್ಟೇ. ತುಂಬ ಕಷ್ಟಪಟ್ಟು ಅನುಮತಿ ಗಿಟ್ಟಿಸಿಕೊಂಡರು ಕೂಡ. ಮೊಹಮ್ಮದ್ ದೀನ್ ಅವರಿಗೊಬ್ಬ ಸ್ನೇಹಿತನಿದ್ದ. ಹೆಸರು ಹಮೀದ್. ಅಬ್ಬಾಗಿಂತ ತುಂಬ ಹಿರಿಯ. ಅಬ್ಬಾ ಪ್ರತಿಭೆಯ ಬಗ್ಗೆ ಹಮೀದ್ ಗೆ ತುಂಬ ಗೌರವಾದರ. ಈ ಯುವ ಹಾಡುಗಾರನ ಬಗ್ಗೆ ಹಮೀದ್ ತುಂಬ ಮುತುವರ್ಜಿ ವಹಿಸುತ್ತಿದ್ದರು. ಈಗ ಒಂದೇ ಪ್ರಶ್ನೆ. ಈ ಸಂಭಾವಿತ ಮತ್ತು ಮುಜುಗರದ ಯುವಕನನ್ನು ಒಂಟಿಯಾಗಿ ಮುಂಬೈಗೆ ಹೇಗೆ ಕಳುಹಿಸಿಕೊಡುವುದು? ಹಮೀದ್ ಭಾಯ್ ಬುದ್ಧಿವಂತ ಮತ್ತು ಅಷ್ಟೇ ಚುರುಕಾದ ವ್ಯಕ್ತಿ. ಅವನೊಟ್ಟಿಗೆ ಕಳುಹಿಸುವುದು ಸೂಕ್ತವೆಂದುಕೊಂಡ ಮೊಹಮ್ಮದ್ ದೀನ್, ಹಾಗೇ ಮಾಡಿದರು. ಅಬ್ಬಾನನ್ನು ಹೀಗೆ ಬೀಳ್ಕೊಡುವುದಕ್ಕೆ ಇಷ್ಟವಿರಲಿಲ್ಲವಾದರೂ ಭಾರದ ಮನಸಿನೊಂದಿಗೆ ಅವರ ತಂದೆ ಅಂತೂ ಬೀಳ್ಕೊಡಲು ಲಾಹೋರ್ ರೈಲ್ವೆ ಸ್ಟೇಷನ್ ವರೆಗೂ ಬಂದರು. ಅವರು ಆ ಸಂದರ್ಭದಲ್ಲಿ ಮುಲಾಜೇ ಇಲ್ಲದೆ ಹೇಳಿದ್ದು ಒಂದೇ ಒಂದು ಮಾತು- "ಸಾಧನೆ ಮಾಡದೇ ಹೋದರೆ ಇಲ್ಲಿಗೆ ವಾಪಸ್ ಬರಲೇಬೇಡ. ನನಗೊಬ್ಬ ರಫೀ ಎನ್ನುವ ಮಗನಿದ್ದ ಅನ್ನೋದನ್ನೇ ಮರೆತು ಬಿಡುತ್ತೇನೆ".
 1942ರಲ್ಲಿ ಅಬ್ಬಾ ಮುಂಬೈ ಸೇರಿದರು. ಅವರ ಬದುಕಿನ ಎರಡನೇ ಮಜಲು ಆರಂಭಗೊಂಡಿತು. ತುಂಬ ನಿರೀಕ್ಷೆಗಳನ್ನಿಟ್ಟುಕೊಂಡು ಅವರು ಮುಂಬೈಗೆ ಬಂದಿದ್ದರು. ಅವರ ಸಮಕಾಲೀನರು ಆಗಲೇ ದೊಡ್ಡ ಗಾಯಕರಾಗಿ ಹೆಸರಾಗಿದ್ದರು. ಕೆ.ಎಲ್. ಸೈಗಲ್, ಪಂಕಜ್ ಮಲಿಕ್, ಖಾನ್ ಮಸ್ತಾನಾ ಮತ್ತು ಜಿ.ಎಂ. ದುರಾನಿಯಂಥ ಘಟಾನುಘಟಿಗಳಿದ್ದರು. ಇವರೊಂದಿಗೆ ಮುಖೇಶ್ ಜೀ, ತಲತ್ ಮೆಹಮೂದ್ ಸಾಹೇಬ್, ಮನ್ನಾಡೇ ಮತ್ತು ಕೆಲವೇ ಅವಧಿಯ ನಂತರದಲ್ಲಿ ಕಿಶೋರ್ ಕುಮಾರ್ ಮತ್ತಿತರರು ಕೂಡ ಹಿನ್ನೆಲೆ ಗಾಯನ ರಂಗಕ್ಕೆ ದಾಪುಗಾಲಿಟ್ಟಿದ್ದರು. ಅಬ್ಬಾ ಸಂಗೀತಾಭ್ಯಾಸದ ಹಿನ್ನೆಲೆ ಇರುವವರು. ಗಾಯನದಲ್ಲಿ ಅವರಿಗೆ ತುಂಬ ಹಿಡಿತವಿತ್ತು. ಆದರೂ ಸಿನಿಮಾ ಹಿನ್ನೆಲೆ ಗಾಯನಕ್ಕೆ ಬರುವ ನಿರೀಕ್ಷೆಗಳು ಅವರಿಗಿರಲಿಲ್ಲ. ಉಸ್ತಾದ ರಿಂದ ಕಲಿತ ರಾಗಗಳ ಅಪಾರವಾದ ಜ್ಞಾನ ಅವರಲ್ಲಿತ್ತು. ದರ್ಬಾರಿ, ಮಾಲಕಂಸ, ಪಹಾಡಿ ಮತ್ತಿತರ ರಾಗಗಳ ಬಗ್ಗೆ ಆಳವಾದ ಆಸಕ್ತಿ ಮತ್ತು ಅಧ್ಯಯನ ಹೊಂದಿದ್ದರು. ಠುಮ್ರಿ, ಗಜಲ್ ಮತ್ತು ವೆಸ್ಟರ್ನ್ ಸಂಗೀತದ ಬಗ್ಗೆಯೂ ಪ್ರಾವಿಣ್ಯ ಹೊಂದಿದ್ದರು.
ಕೆ.ಎಲ್. ಸೈಗಲ್ ಅವರಂಥ ದಿಗ್ಗಜರಿರುವ ಗಾಯನಲೋಕದಲ್ಲಿ ತಮ್ಮ ಗುರಿ ಮುಟ್ಟುವುದಕ್ಕೆ ಅಬ್ಬಾಗೆ ದೊಡ್ಡ ಸವಾಲೇ ಎದುರಿಗಿತ್ತು. ಚಿತ್ರರಂಗದಲ್ಲಿ ಆಗ ಸೈಗಲ್ ಅವರ ಗಾಯನ ಶೈಲಿ ತುಂಬ ಪ್ರಭಾವಿಯಾಗಿತ್ತು. ಪ್ರತಿಯೊಬ್ಬ ಹಾಡುಗಾರ ಅವರ ಶೈಲಿಯನ್ನು ಅನುಕರಿಸಲು ಹೆಣಗುತ್ತಿದ್ದ. ಸಂಗೀತ ನಿರ್ದೇಶಕರೂ ಕೂಡ, ಹೊಸಬರು ಸೈಗಲ್ ಶೈಲಿಯನ್ನೇ  ಅನುಸರಿಸಲಿ ಎಂದು ಬಯಸುತ್ತಿದ್ದರು. ಸೈಗಲ್ ದನಿ ಹೊರತುಪಡಿಸಿದ ಯಾವ ಹೊಸ ದನಿಯನ್ನು ಕಲ್ಪಿಸಿಕೊಳ್ಳಲಾರದಷ್ಟು ಅವರ ಅಭಿಮಾನಿಗಳು ಪ್ರಭಾವಿತರಾಗಿದ್ದರು.
* * *
ನನ್ನ ಆ ಬಾಲ್ಯದ ದಿನಗಳ ನೆನಪು ಇನ್ನೂ ಹಚ್ಚ ಹಸಿರಾಗೇ ಇದೆ. ರೆಡಿಯೋ ಸಿಲೋನ್ ಬೆಳಿಗ್ಗೆ 9ರಿಂದ ಬಿತ್ತರಿಸುತ್ತಿದ್ದ ಹಳೆಯ ಹಿಂದಿ ಹಾಡುಗಳು ಜನಪ್ರಿಯವಾಗಿದ್ದ ದಿನಗಳವು. ಬಹುತೇಕ ಹಾಡುಗಳು ಕೆ.ಎಲ್. ಸೈಗಲ್ ಮತ್ತು ಪಂಕಜ್ ಮಲಿಕ್ ಅವರದ್ದೇ ಆಗಿರುತ್ತಿದ್ದವು. 'ಜಬ್ ದಿಲ್ ಹೀ ಟೂಟ್ ಗಯಾ, ಹಮ್ ಜೀಕರ್ ಕ್ಯಾ ಕರೇಂಗೆ... ಎನ್ನುವ ಸೈಗಲ್ ಹಾಡು, 'ಬಾಬುಲ್ ಮೋರಾ...’, 'ದುನಿಯಾ ರಂಗ್ ರಂಗೀಲಿ ಬಾಬಾ', 'ಕರೂ ಕ್ಯಾ ಆಸ್ ನಿರಾಸ್ ಭಾಯಿ' ಮತ್ತು ’ಚಲೇ ಪವನ ಕೀ ಚಾಲ್...' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಶ್ರೋತೃಗಳು ಮತ್ತೆ ಮತ್ತೆ ಕೇಳಬೆಕೆನಿಸುವ ಹಾಡುಗಳು ಇವಾಗಿದ್ದವು. ಆದರೆ ನನಗೆ ಈ ಹಾಡುಗಳಲ್ಲಿ ಅಂಥ ಆಸಕ್ತಿ ಇರಲಿಲ್ಲ. ಈ ಗಾಯಕರ ಧ್ವನಿ ಮತ್ತು ಶೈಲಿ ತುಂಬ ಏಕತಾನತೆಯಿಂದ ಕೂಡಿರುತ್ತಿತ್ತು.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ಕೂಡ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆ ಇರುವುದರಿಂದ ಮತ್ತು ಇದು ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ನಿರೂಪಣಾ ಶೈಲಿಗೊಳಪಡಿಸುವುದು ಬೇಡ ಅನಿಸಿತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ