ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...- ಭಾಗ 3

ಅಬ್ಬಾಗೆ ಒಂದು ಕಡೆ ತಾನು ಹುಟ್ಟಿ ಬೆಳೆದ ನಾಡು ಮತ್ತು ಬಂಧು ಬಳಗವನ್ನೆಲ್ಲ ತೊರೆದು ಬಂದ ಹಳವಂಡ. ಮತ್ತೊಂದೆಡೆ ಅಂದುಕೊಂಡಂತೆ ಮುಂಬೈ ಎಂಬ ಮಾಯಾನಗರಿಗೆ ಬಂದ ಖುಷಿ. ಮುಂಬೈ ಒಂಥರ ತುಂಬ ಕುತೂಹಲಕರವಾದ ನಗರ. ಅಬ್ಬಾ ಮತ್ತು ಹಮೀದ್ ಭಾಯ್ ಗೆ ಹೊಸ ವಾತಾವರಣಕ್ಕೆ ತೆರಕೊಳ್ಳುವ ಮತ್ತು ಇರುವುದಕ್ಕೊಂದು ಸೂರು ಹುಡುಕಿಕೊಳ್ಳುವ ಧಾವಂತ. ಅದರಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವ ಅನಿವಾರ್ಯತೆ. ಅಬ್ಬಾಗೆ ಅದೃಷ್ಭದ ಮೇಲೆ ನಂಬಿಕೆ ಇತ್ತು. ಏನಾದರೊಂದು ವ್ಯವಸ್ಥೆ ಆದೀತೆಂಬ ವಿಶ್ವಾಸ ಬಲವಾಗಿತ್ತು. ಅಂತೂ ಮೊಹಮ್ಮದ್ ಅಲಿ ರಸ್ತೆಯ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಇರುವುದಕ್ಕೆ ಒಂದು ನೆಲೆ ದಕ್ಕಿತು. ಸಿರಾಜುದ್ದೀನ್ ಅಹಮದ್ ಬಾರಿ ಎನ್ನುವವರು ಈ ಬಿಲ್ಡಿಂಗ್ ಒಡೆಯ. ಮೇಲ್ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅಬ್ಬಾ ಅಂದುಕೊಂಡಂತೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಯ ಕೋಣೆಯ ವ್ಯವಸ್ಥೆ ಆಯ್ತು.
 ರಫೀ ಎದುರಿಸುತ್ತಿದ್ದ ಬಲು ಕಷ್ಟದ ಸಮಯ ಇದಾಗಿತ್ತು. ಅಪರಿಚಿತ ನಗರ, ಮೇಲೆ ಜೇಬಿನಲ್ಲಿ ಕಿಲುಬು ಕಾಸಿಲ್ಲ.. ಸ್ಟುಡಿಯೋ ಮತ್ತು ಮನೆಗೆ ಮೈಲುಗಟ್ಟಲೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ. ರೆಕಾರ್ಡಿಂಗ್, ಪೈಲಟ್ ಸಿಂಗಿಂಗ್, ರಿಹರ್ಸಲ್ ಹೀಗೆ ಎಲ್ಲದಕ್ಕೂ ದೂರದ ಸ್ಟೂಡಿಯೋಗೆ ನಡೆದುಕೊಂಡೇ ಹೋಗಬೇಕಿತ್ತು. ವಾಪಸ್ ನಡೆದೇ ಮನೆ ಸೇರಬೇಕಿತ್ತು. ಎಷ್ಟೋ ಸಾರಿ ನಡೆದು ಸುಸ್ತಾಗಿ ಸ್ಟುಡಿಯೋ ತಲುಪಿ, ಒಳಕ್ಕೆ ಕಾಲಿಡುತ್ತಿದ್ದಂತೆ ’ನಾಳೆ ಬನ್ನಿ’ ಎಂದು ಸಾಗಹಾಕಲಾಗುತ್ತಿತ್ತು.  ಇಂಥ ಸಂದರ್ಭದಲ್ಲೆಲ್ಲಾ ಮನೆಗೆ ವಾಪಸ್ ಬರಲು ಕಾಸಿಲ್ಲದೇ ಹತ್ತಿರದ ರೈಲ್ವೆ ಸ್ಟೇಷನ್ ನಲ್ಲಿ ಮಲಗಿ ರಾತ್ರಿ ಕಳೆದಿದ್ದಿದೆ. ಹೀಗೆ ಅದೆಷ್ಟೊ ಬಾರಿ ಆಗಿದ್ದಿದೆ. ನಿರ್ದೇಶಕ ಶ್ಯಾಂ ಸುಂದರ್ ಅವರು ತಮ್ಮ 'ಗಾಂವ್ ಕೀ ಗೋರಿ' ಚಿತ್ರದಲ್ಲಿ ಹಾಡುವ ಅವಕಾಶ ನೀಡುವವರೆಗೆ ರಫೀ ಸಾಹೇಬರಿಗೆ ಇದೇ ಸ್ಥಿತಿ ಇತ್ತು. 'ಅಜೀ ದಿಲ್ ಹೋ ಕಾಬು ಮೇ ತೊ ದಿಲ್ ದಾರ್ ಕೀ ಐಸಿ ತೈಸಿ'... ಇದು ಮೊಹಮ್ಮದ್ ರಫೀ ಹಾಡಿದ ಮೊತ್ತ ಮೊದಲ ಹಿಂದಿ ಚಿತ್ರಗೀತೆ. ಅದೂ ಜಿ.ಎಂ. ದುರಾನಿ ಮತ್ತಿತರರ ಜತೆ ಹಾಡಿದ್ದು.
ಒಂದಷ್ಟು ಕಾಲ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಅಬ್ಬಾ ಬದುಕು ಹೀಗೇ ಸಾಗಿತ್ತು. ಹಮೀದ್ ಭಾಯ್ ಬಿಲ್ಡಿಂಗ್ ಒಡೆಯ ಸಿರಾಜುದ್ದೀನ್ ಹಿರಿಯ ಮಗನೊಟ್ಟಿಗೆ ಉತ್ತಮ ಸ್ನೇಹ ಸಂಪಾದಿಸಿದ್ದರು. ಒಮ್ಮೆ ಕುಶಲೋಪರಿಯಲ್ಲಿ ತೊಡಗಿದ್ದಾಗ ಮಾತು ಅಬ್ಬಾ ವಿಷಯದತ್ತ ವಾಲಿತು. ಆ ಕುಶಲೋಪರಿ ಒಂದು ಉತ್ತಮ ಕಾಂಟ್ರ್ಯಾಕ್ಟ್ ಗೆ ದಾರಿ ಮಾಡಿಕೊಟ್ಟಿತು. ಅಬ್ಬಾ ಬದುಕಿನಲ್ಲಿ ಅತ್ಯಂತ ಮಹತ್ವದ ತಿರುವಿಗೆ ಅದು ಕಾರಣವಾಯ್ತು.
 * * *
 ಸಿರಾಜುದ್ದೀನ್ ತಮ್ಮ ಮೊದಲ ಪತ್ನಿಯ ಮಗಳು ಖಮಾರ್ ಳನ್ನು ಲಖನೌ ನಗರದ ಅಹ್ಮದ್ ಹಸನ್ ಸಾಹೇಬ್ ಎನ್ನುವವರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ಹಸನ್ ಸಾಹೇಬ್ ಕುಟುಂಬಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ನೌಶಾದ್ ತಂದೆ ವಾಹಿದ್ ಅಲೀ ಆಪ್ತ ನೆರೆಹೊರೆ. ಗಳಸ್ಯ ಕಂಠಸ್ಯ ಎನ್ನುವಂಥ ಸ್ನೇಹ ಸಲುಗೆ ಎರಡೂ ಕುಟುಂಬಗಳ ನಡುವಿತ್ತು. ರಫೀ ಸಾಹೇಬರಿಗೆ ಇದೊಂದು ಒಲಿದು ಬಂದ ಭಾಗ್ಯ. ಇದೇ ಮುಂದೆ ನೌಶಾದ್ ಅವರನ್ನು ತಲುಪುವುದಕ್ಕೆ ಸೇತು ಬಂಧವೊಂದರ ವ್ಯವಸ್ಥೆಗೆ ದಾರಿಯಾಯ್ತು.

 ವಾಹೀದ್ ಅಲೀ ಅವರು ತಮ್ಮ ಪುತ್ರ ನೌಶಾದ್ ಅಲೀಯವರಿಗೆ ಒಂದು ಪತ್ರ ಬರೆದು, ರಫೀ ಸಾಹೇಬರಿಗೆ ನೆರವಾಗುವಂತೆ ಶಿಫಾರಸ್ಸು ಮಾಡಿದರು. ’ಈ ಹುಡುಗನ ಹಾಡು ಕೇಳಿದ್ದೇನೆ. ಅದ್ಭುತವಾಗಿ ಹಾಡುತ್ತಾನೆ. ನಿನ್ನ ಚಿತ್ರಕ್ಕೆ ಹಾಡಬಲ್ಲ ಸಾಮರ್ಥ್ಯ  ಈತನಲ್ಲಿದೆ’ ಎಂದು ಪತ್ರದಲ್ಲಿ ರಫೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅದಾಗಲೇ ನೌಶಾದ್ ಅಲೀ ಚಿತ್ರಜಗತ್ತಿನಲ್ಲಿ ತುಂಬ ಹೆಸರು ಮಾಡಿದ ಸಂಗೀತ ನಿರ್ದೇಶಕರಾಗಿದ್ದರು. ಪತ್ರ ಹಿಡಿದುಕೊಂಡು ಅಬ್ಬಾ ಮತ್ತು ಹಮೀದ್ ಭಾಯ್ ಸಂಗೀತ ನಿರ್ದೇಶಕ ನೌಶಾದ್ ರನ್ನು ಕಾಣಲು ಕಿರ್ದಾರ್ ಸ್ಟುಡಿಯೋ ಮುಂದೆ ಹಾಜರಾದರು. ಶಿಫಾರಸು ಪತ್ರ ನೀಡಿದ್ದು ತಮ್ಮ ತಂದೆಯಾದ್ದರಿಂದ ನೌಶಾದ್ ಅಲೀ ಅವರು ಸಂದರ್ಶನಕ್ಕೆ ಅನುಮತಿ ನೀಡಿದರು. ಅಂತೂ ಭೇಟಿಯ ಏರ್ಪಾಡಾಯಿತು. ಭೇಟಿಯ ಸಂದರ್ಭದಲ್ಲಿ ರಫೀ ಸಾಹೇಬರು ಒಂದು ಗಜಲ್ ಹಾಡಿದರು. ಗಾಯನಕ್ಕೆ ತಲೆದೂಗಿದ ನೌಶಾದ್,  ಕೋರಸ್ ನಲ್ಲಿ ಹಾಡುವ ಅವಕಾಶವೊಂದನ್ನು ನೀಡಿದರು. 'ಪಹಲೆ ಆಪ್' ಚಿತ್ರದ 'ಹಿಂದೂಸ್ತಾನ್ ಕೇ ಹಮ್ ಹೈ, ಹಿಂದೂಸ್ತಾನ್ ಹಮ್ಹಾರಾ' ಎನ್ನುವ ಆ ಹಾಡಿನ ಕೋರಸ್ ನಲ್ಲಿ ಅಬ್ಬಾ ದನಿಯೂ ಸೇರಿತ್ತು. ನೌಶಾದ್ ನೀಡಿದ ಮೊದಲ ಅವಕಾಶ ರಫೀ ಸಾಹೇಬರಿಗೆ ಮುಂದೆ ದೊಡ್ಡ ರಹದಾರಿಯನ್ನೇ ಸೃಷ್ಟಿಸಿತು.
 ಇದು ಅಬ್ಬಾಗೆ ದಕ್ಕಿದ ಮಹತ್ವದ ಮೊದಲ ಬ್ರೇಕ್. ಕ್ರಮೇಣ ಚಿತ್ರೋದ್ಯಮ ರಫೀ ಸಾಹೇಬರನ್ನು ಹಿನ್ನೆಲೆಗಾಯಕ ಎಂದು ಪರಿಗಣಿಸಲಾರಂಭಿಸಿತು. ಇನ್ನಿತರ ಸಂಗೀತ ನಿರ್ದೇಶಕರಿಂದ ಆಹ್ವಾನಗಳು ಬರತೊಡಗಿದ್ದವು.  ಆದರೂ ಅಬ್ಬಾಗೆ ಸಮಾಧಾನವಿರಲಿಲ್ಲ. ಅಂದುಕೊಂಡ ಗುರಿ ಮುಟ್ಟುವೆನೋ ಇಲ್ಲವೋ ಎನ್ನುವ ಭೀತಿ ಅವರನ್ನು ಆವರಿಸಿಕೊಳ್ಳತೊಡಗಿತ್ತು.

(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ  ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...