ವಿಷಯಕ್ಕೆ ಹೋಗಿ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.... ಭಾಗ 4

1944. ಆಗ ಅಬ್ಬಾಗೆ ಇಪ್ಪತ್ತರ ಹರೆಯ. ಸಿರಾಜುದ್ದೀನ್ ಅಹ್ಮದ್ ಸಾಹೇಬ್ ಮತ್ತು ತಾಲೀಮುನ್ನೀಸಾ ಅವರ ಮಗಳು ಬಿಲ್ಖೀಸ್ ಅವರನ್ನು ಅಬ್ಬಾ (ಮೊಹಮ್ಮದ್ ರಫೀ) ವಿವಾಹವಾದರು. ನನಗಿದ್ದ ಮಾಹಿತಿಯಂತೆ ಸಿರಾಜುದ್ದೀನ್ ಅವರಿಗೆ ನಾಲ್ವರು ಹೆಂಡತಿಯರು ಮತ್ತು ಒಂಭತ್ತು ಮಕ್ಕಳು. ಹೆಂಡತಿಯರ ಪೈಕಿ ಮೂವರು ಒಬ್ಬರ ನಂತರ ಒಬ್ಬರಂತೆ ಅತ್ಯಂತ ಕಡಿಮೆ ಅಂತರದ ಅವಧಿಯಲ್ಲೇ ನಿಧನರಾಗಿದ್ದರು. ನಾಲ್ಕನೇ ಹೆಂಡತಿಯೇ ತಾಲೀಮುನ್ನೀಸಾ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳು. ಅವರಲ್ಲಿ ಬಿಲ್ಖೀಸ್ ಕೂಡ ಒಬ್ಬರು.
ಅಮ್ಮಾಗೆ (ಬಿಲ್ಖೀಸ್) ಆಗ ಕೇವಲ ಹದಿಮೂರರ ವಯಸ್ಸು. ಮದುವೆ ಬಗ್ಗೆ ಏನೂ ತಿಳಿಯದ ವಯಸ್ಸು. 'ಒಂದು ದಿನ ನಾನು ಶಾಲೆಯಿಂದ ವಾಪಸ್ ಬಂದೆ. ಅದೇ ದಿನ ನನಗೆ ಮದುವೆ ಅಂತ ಹೇಳಿದರು. ಮದುವೆ ಗಂಡು ಈ ನಿನ್ನ ಅಬ್ಬಾ. ನಾನಾಗ ನಿನ್ನ ಅಬ್ಬಾನನ್ನು ಭಾಯ್ ಎಂದು ಕರೆಯುತ್ತಿದ್ದೆ' ಎಂದು ಅವರು ಆಗಾಗ ನನ್ನ ಬಳಿ ನೆನಪಿಸಿಕೊಳ್ಳುತ್ತಿದ್ದರು..
ಹಮೀದ್ ಭಾಯ್ ಅಬ್ಬಾ ಅವರ  ಎಲ್ಲಾ ವೃತ್ತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಮೀದ್ ಭಾಯ್ ಕೂಡ ಸಿರಾಜುದ್ದೀನರ ಮಗಳು ಮೆಹರುನ್ನೀಸಾಳನ್ನು ಮದುವೆಯಾದರು. ಈಕೆ ಸಿರಾಜುದ್ದೀನ್ ಅವರ ಮೊದಲ ಪತ್ನಿಯ ಮಗಳು. ಹಮೀದ್ ಭಾಯ್ ಅಬ್ಬಾ ಜತೆ 1950ರವರೆಗೂ ಇದ್ದರು. ಆನಂತರದಲ್ಲಿ ಅವರು ತಮ್ಮ ಪರಿವಾರ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆಗ ಅಬ್ಬಾ ವ್ಯವಹಾರಗಳನ್ನೆಲ್ಲಾ ಅಮ್ಮಾ ಸಹೋದರ ಜಹೀರ್ ಬಾರಿ ನೋಡಿಕೊಳ್ಳತೊಡಗಿದರು.
* * *
ಮೂರ್ನಾಲ್ಕು ವರ್ಷ ಕಳೆದಿರಬೇಕು. ಅಬ್ಬಾಗೆ ಕೆ.ಎಲ್. ಸೈಗಲ್ ಅವರ ಜತೆ ಹಾಡುವ ಅವಕಾಶವೊಂದು ತಾನಾಗೇ ಒಲಿದು ಬಂದಿತು. ಈ ಅವಕಾಶಕ್ಕಾಗಿ ಅಬ್ಬಾ ಅದೆಷ್ಟು ವರ್ಷದಿಂದ ಕಾದು ಕೂತಿದ್ದರು. ನೌಶಾದ್ ಅವರು ಅದಾಗಲೇ ’ಷಹಜಹಾನ್’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರು. ’ಮೇರೆ ಸಪನೋಂಕೀ ರಾಣೀ ರೂಹೀ ರೂಹೀ..’ ಎನ್ನುವ ಹಾಡಿಗೆ ಅಬ್ಬಾ ದನಿ ಬಳಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದರು. ಹತ್ತು ವರ್ಷ ವಯಸ್ಸಿನ ಹುಡುಗನಾಗಿದ್ದಾಗ ಇದೇ ಸೈಗಲ್ ಮುಂದೆ ಹಾಡಿ ಷಹಬ್ಬಾಸ್ ಅನ್ನಿಸಿಕೊಂಡಿದ್ದ ಅಬ್ಬಾ ಈಗ ಅದೇ ದಿಗ್ಗಜನೊಂದಿಗೆ ಹಾಡಿದರು. ಈಗಲೂ ಅದೇ ಷಹಬ್ಬಾಸ್ ಗಿರಿ ಸೈಗಲ್ ಅವರಿಂದ ಸಿಕ್ಕಿತ್ತು. ಈ ಹಾಡಿನ ದೃಶ್ಯದಲ್ಲಿ ಅಬ್ಬಾ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು ಕೂಡ.
 ಸಮಕಾಲೀನ ಹಾಡುಗಾರರ ಪಡಿನೆರಳಲ್ಲಿ ಸಾಗುವುದಕ್ಕೆ ಅಬ್ಬಾಗೆ ಒಂದಿನಿತೂ ಇಷ್ಟವಿರಲಿಲ್ಲ. ಅಗ್ರ ಗಾಯಕರ ಶೈಲಿಯಲ್ಲೇ ಹಾಡಬೇಕೆನ್ನುವ ನಿರೀಕ್ಷೆಗಳು ಅಬ್ಬಾಗೆ ಸರಿ ಕಾಣುತ್ತಿರಲಿಲ್ಲ.  ಇದು ಅವರ ಅತ್ಯಂತ ಪೇಚಿನ ಸಮಯವಾಗಿತ್ತು. ಅವರು ತಮ್ಮದೇ ಶೈಲಿಯಲ್ಲಿ ಹಾಡಬಲ್ಲ ಸೋಪಜ್ಞ ಗಾಯಕರಾಗಿದ್ದರು. ಮುಂಚಿನಿಂದಲೂ ತಮ್ಮದೇ ಶೈಲಿಯಲ್ಲಿ ಹಾಡುತ್ತಿದ್ದರು. ಇಡೀ ಚಿತ್ರೋದ್ಯಮದಲ್ಲಿ ತಮ್ಮದೇ ಶೈಲಿ ಹೊಂದಿದ ಏಕಮಾತ್ರ ಗಾಯಕ ಇವರಾಗಿದ್ದರು. ಚಲನಚಿತ್ರ ಹಿನ್ನೆಲೆಗಾಯನಕ್ಕೆ ಅಬ್ಬಾ ಕಾಲಿಟ್ಟ ಸಂದರ್ಭದಲ್ಲಿ ಒಂದೇ ಸಪ್ತಕದ ಸ್ಕೇಲ್ ನಲ್ಲಿ ಹಾಡುವುದು ಚಿತ್ರಸಂಗೀತ ಕ್ಷೇತ್ರದ ವಾಡಿಕೆಯಂತಾಗಿತ್ತು. ಅಬ್ಬಾ ಒಂದೂವರೆ ಸಪ್ತಕದ ಸ್ಕೇಲ್ ನಲ್ಲಿ ಹಾಡುವ ಮೂಲಕ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದರು. ಇದು ಇಡೀ ಚಿತ್ರ ಸಂಗೀತ ಜಗತ್ತಿನಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ ತಂದಿತು.

* * *
ನೂರಜಹಾನ್ ಮತ್ತು ದಿಲೀಪಕುಮಾರ್ ಜೋಡಿಯ 'ಜುಗ್ನು' ಚಿತ್ರ ನಿರ್ಮಾಣದ ಹಂತದಲ್ಲಿತ್ತು. ಫಿರೋಜ್ ನಿಜಾಮಿ ಇದರ ಸಂಗೀತ ನಿರ್ದೇಶಕರಾಗಿದ್ದರು. ನಿಜಾಮಿ ಪರಿಚಯ ಮುಂಚಿನಿಂದಲೂ ಅಬ್ಬಾಗಿತ್ತು. ಈ ಹಿಂದೆ ಅವರ ಚಿತ್ರಗಳಲ್ಲಿ ಹಾಡಿದ್ದರು ಕೂಡ. ಆದರೀಗ ನೂರಜಹಾನ್ ಜತೆ ಯುಗಳ ಗೀತೆ ಹಾಡಿಸುವುದಕ್ಕೆ ಅವರು ಹಿಂದೇಟು ಹಾಕತೊಡಗಿದ್ದರು.  ನಿಜಾಮಿ ಕೂಡ ಉಸ್ತಾದ್ ಅಬ್ದುಲ್ ವಾಹೀದ್ ಖಾನ್ ಅವರ ಶಿಷ್ಯರಾಗಿದ್ದವರು. ಇಂಡಿಯಾದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಇವರೂ ಒಬ್ಬರಾಗಿದ್ದರು. ದೆಹಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಅಬ್ಬಾ ದೆಹಲಿಯಲ್ಲಿ ಹಲವು ತಿಂಗಳುಗಳ ಕಾಲ ಫಿರೋಜ್ ನಿಜಾಮಿ ಅವರ ಜತೆ ತಂಗಿದ್ದರು. ಅವರಿಂದ ಕ್ಲಾಸಿಕಲ್ ಸಂಗೀತದ ಪಾಠವನ್ನೂ ಹೇಳಿಸಿಕೊಂಡಿದ್ದರು.
ನೂರಜಹಾನ್ ಆ ಕಾಲದ ಅದ್ಭುತ ನಟಿ ಮತ್ತು ಹಾಡುಗಾರ್ತಿ. ಆಕೆ ನಿಜಾಮಿ ಬಳಿ ಅಬ್ಬಾ ಪರವಾಗಿ ಪ್ರೋತ್ಸಾಹದ ಮಾತುಗಳನ್ನಾಡಿ ತುಂಬ ಕಾಳಜಿ ವ್ಯಕ್ತಪಡಿಸಿದರು. ’ಈ ಹೊಸ ಪ್ರತಿಭೆಯ ಜತೆ ಹಾಡಲು ನಾನು ಹಲವು ಸಲ ರಿಹರ್ಸಲ್ ಮಾಡಬೇಕಾಗಿ ಬಂದರೂ ತೊಂದರೆ ಇಲ್ಲ. ನಾನದನ್ನು ಸಂತೋಷದಿಂದ ನಿಭಾಯಿಸುತ್ತೇನೆ’ ಎಂದು ಅಬ್ಬಾ ಜತೆ ಹಾಡುವ ವಿಷಯದಲ್ಲಿ ತಮಗಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಬ್ಬಾ ತಮ್ಮ ಉತ್ತಮ ಗಾಯನ ಸಾಮರ್ಥ್ಯವನ್ನು ಸಾಬೀತುಪಡಿಸಲು ಇಂಥದೇ ಒಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ನೂರಜಹಾನ್‌ಳ ಈ ಕಾಳಜಿಯನ್ನು ಅಬ್ಬಾ ತುಂಬ ಗೌರವದಿಂದ ಆಗಾಗ ಸ್ಮರಿಸಿಕೊಳ್ಳುತ್ತಿದ್ದರು.
 ’ಹಾಡುವಾಗ ಯಾವತ್ತೂ ಮುಖ ಕಿವುಚಿಕೊಂಡು ಹಾಡಬೇಡ’- ಇದು ಅಬ್ಬಾಗೆ ನೂರಜಹಾನ್ ಹೇಳಿದ ಕಿವಿ ಮಾತು. ’ಹೌದು ನೂರಜಹಾನ್ ಅವರು ಹೇಳಿದ್ದು ಸೂಕ್ತವಾಗಿದೆ ಎಂದು ನಾನೀಗ ದೈರ್ಯದಿಂದ ಹೇಳಬಲ್ಲೆ. ನನ್ನ ಅಭಿಪ್ರಾಯದಲ್ಲಿ ಯಾವುದೇ ಹಾಡುಗಾರ ಹಾಡುವಾಗ ಮುಖದ ಸ್ನಾಯುಗಳನ್ನು ಹುರಿಗೊಳಿಸಿ ಹಾಡುವುದು ಒಳ್ಳೆಯದಲ್ಲ’ ಎಂದು ಅಬ್ಬಾ ನೂರಜಹಾನ್ ರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದರು.
ನೂರಜಹಾನ್ ಲಂಡನ್ ಟಿವಿಯ ಏಷ್ಯ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ’ರಫೀ ಯಾವತ್ತಿನಿಂದ ಹಾಡಲು ಶುರುಮಾಡಿದರೋ ಅದ್ಭುತವನ್ನೇ ಸೃಷ್ಟಿಸತೊಡಗಿದರು’ (ರಫೀ ನೆ ಜಬ್ ಸೇ ಗಾನಾ ಶುರೂ ಕಿಯಾ, ಪತ್ತಿಯ್ಞಾ ತೋಡ್ ದೀ) ಎಂದು ಉದ್ಗರಿಸಿದ್ದರು.
* * *
’ಜುಗ್ನು’ ಚಿತ್ರ 1947ರಲ್ಲಿ ರಿಲೀಜ್ ಆಯ್ತು. ನೂರಜಹಾನ್ ಮತ್ತು ರಫೀ ಹಾಡಿದ ಯುಗಳ ಗೀತೆ ಜನಪ್ರಿಯಗೊಂಡಿತು. ’ಯಹ್ಞಾಂ ಬದ್ಲಾ ವಫಾ ಕಾ, ಬೇವಫಾ ಕೆ ಸಿವಾ ಕ್ಯಾ ಹೈ...’  ಎನ್ನುವ ’ಜುಗ್ನು’ ಚಿತ್ರದ ಈ ಹಾಡು ಅಬ್ಬಾ ಇಲ್ಲಿಯವರೆಗೆ ಹಾಡಿದ ಎಲ್ಲ ಹಾಡುಗಳಿಗಿಂತ ಅತ್ಯಂತ ಯಶಸ್ವಿ ಹಾಡಾಗಿತ್ತು. ಇದೇ ಚಿತ್ರದ ಮತ್ತೊಂದು ಹಾಡಿನ ದೃಶ್ಯವೊಂದರಲ್ಲಿ ಅಬ್ಬಾ, ದಿಲೀಪಕುಮಾರ್ ಜತೆ ತೆರೆಯ ಮೇಲೆ ಕಾಣಿಸಿಕೊಂಡರು.  ಅಬ್ಬಾ ತೆರೆಯ ಮೇಲೆ ಕಾಣಿಸಿಕೊಂಡ ಕಡೆಯ ಚಿತ್ರ ಇದಾಗಿತ್ತು. ’ವೋ ಅಪ್ನೀ ಯಾದ್ ದಿಲಾನೇ ಕೋ, ಏಕ್ ಇಷ್ಕ್ ಕಿ ದುನಿಯಾ ಛೋಡ್ ಗಯೇ...’ ಎನ್ನುವ ಈ ಸಾಲುಗಳಿಗೆ ಅಬ್ಬಾ ಅಭಿನಯಿಸಿದ್ದರು.  ಈ ಹಾಡು ಅತಿಹೆಚ್ಚು ಪ್ರಶಂಸೆಗೊಳಪಟ್ಟಿತು. ಅಬ್ಬಾಗೆ ದೊಡ್ಡ ಗೌರವ ತಂದುಕೊಟ್ಟಿತು. ಗಾಯಕನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಿತು.
ಅಬ್ಬಾಗೆ ಅಭಿನಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಅಭಿನಯವನ್ನು ಅವರೆಂದೂ ಖುಷಿಯಿಂದ ನಿರ್ವಹಿಸಲಿಲ್ಲ. ಅಭಿನಯಕ್ಕೆ ಒಪ್ಪಿಕೊಂಡದ್ದೆಲ್ಲ ಆ ಸಂದರ್ಭದ ಅನಿವಾರ್ಯತೆಗಷ್ಟೇ. ಜುಗ್ನು ನಂತರ ಅಭಿನಯದ ಮತ್ತಾವ ಅವಕಾಶವನ್ನು ಅವರು ಒಪ್ಪಿಕೊಳ್ಳಲಿಲ್ಲ.
 1947. ಅಬ್ಬಾ ಬದುಕಿನಲ್ಲಿ ಮತ್ತೊಂದು ಸಂಭ್ರಮ ದಾಖಲಾಯಿತು. ಅವರ ಮೊದಲ ಮಗಳು ಪರ್ವೀನ್ ಹುಟ್ಟಿದ್ದು ಇದೇ ವರ್ಷದಲ್ಲಿ.
(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
 ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ  ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ