ವಿಷಯಕ್ಕೆ ಹೋಗಿ

ನೊಬೆಲ್ ಅಂಗಳದಲ್ಲಿ ನಾನು ಹಾಕಿ ಬಂದ ಕಪ್ಪು ರಂಗೋಲಿ...

ನಾರ್ವೆ ದೇಶದ ಒಸ್ಲೊ ಶಹರಿನಲ್ಲಿರುವ ನನ್ನ ತಂಗಿ ಮತ್ತು ಭಾವನ ಮನೆಗೆ ಸಮೀಪದಲ್ಲೇ ಇಬ್ಸನ್ ನ್ಯಾಷನಲ್ ಥಿಯೇಟರ್ ಇದೆ. ಸಮೀಪದಲ್ಲೇ ಅಕೇರ್ ಬ್ರಿಗೇ ಎನ್ನುವ ದೋಣಿಗಳ ತಂಗುದಾಣ. ಅದಕ್ಕೆ ಹೊಂದಿಕೊಂಡೇ ನೊಬೆಲ್ ಶಾಂತಿ ಧಾಮವಿದೆ. ‘ನೊಬೆಲ್ ಶಾಂತಿ’ ಪುರಸ್ಕೃತರ ದರ್ಶನ ಮಾಡಿಸುವ ಈ ಶಾಂತಿ ಧಾಮದಲ್ಲಿ ವಿಶ್ವಮಹಾಮಹಿಮರ ಬಗ್ಗೆ ಸಮಗ್ರ ವಿವರಗಳಿವೆ. ಅವರ ಪುಸ್ತಕಗಳಿವೆ. ಅವರ ಸಾಧನೆಯ ಹಾದಿ, ಹೆಜ್ಜೆಗಳು ಇಲ್ಲಿ ಸ್ಪಷ್ಟವಾಗೇ ಮೂಡಿವೆ. ಅದಕ್ಕೆ ಕೂಗಳತೆ ದೂರದಲ್ಲಿ ಸಿಟಿ ಹಾಲ್ ಇದೆ. ಇಲ್ಲಿಯೇ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ.








 
ನಿತ್ಯದ ನನ್ನ ಸುತ್ತಾಟ ಮುಗಿಯುತ್ತಿದ್ದುದೇ ನೊಬೆಲ್ ಶಾಂತಿಧಾಮದ ಭೇಟಿಯೊಂದಿಗೆ. ಪ್ರಶಸ್ತಿ ಪ್ರದಾನ ಮಾಡುವ ಸಿಟಿ ಹಾಲ್ ಸಭಾಂಗಣಕ್ಕೂ ಭೇಟಿ ಇದ್ದೇ ಇರುತ್ತಿತ್ತು. ಸಭಾಂಗಣದ ಕಟ್ಟೆ ಮತ್ತು ವಿಶ್ವ ಗಣ್ಯರು ಆಸೀನರಾಗುವ ಜಾಗದಲ್ಲಿ ಸುಮ್ಮನೇ ಕೂತು ಬರುವುದು ನನಗೆ ತುಂಬ ಖುಷಿ ಮೂಡಿಸುತ್ತಿತ್ತು.
 ನೊಬೆಲ್ ಶಾಂತಿಧಾಮಕ್ಕೆ ಭೇಟಿ ಕೊಟ್ಟವರೆಲ್ಲ ತಮ್ಮ ದೇಶದ ಮಹಾನ್ ವ್ಯಕ್ತಿಗಳನ್ನು ವೇದಿಕೆಯ ಮೇಲೆ ಕಲ್ಪಿಸಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಇಲ್ಲಿ ಬಂದಾಗೆಲ್ಲ. ’ದಿಲ್ ಸೇ’ ಹೇಳುತ್ತೇನೆ. ನೊಬೆಲ್ ಶಾಂತಿ ಪ್ರಶಸ್ತಿ ನೆನಪಿಸಿಕೊಂಡಾಗೆಲ್ಲ ನನಗೆ ನೆನಪಾಗುತ್ತಿದ್ದ ಒಂದೇ ಒಂದು ಹೆಸರು. ಮಹಾದೇವ.
 ಪ್ರಶಸ್ತಿಗೆ ನಿಮ್ಮ ನೆಚ್ಚಿನ ಹೆಸರು ಎನ್ನುವ ಫಲಕದ ಮೇಲೆ ನಾನು ’ದೇವನೂರು ಮಹಾದೇವ’ ಅವರ ಹೆಸರನ್ನು ಅದೆಷ್ಟು ಸಾರಿ ಬರೆದಿದ್ದೇನೆ... ’ಸಂಬಂಜ ಅನ್ನೋದು ದೊಡ್ಡದು ಕಣಾ...’ ಎಂದು ಕನ್ನಡದಲ್ಲಿ ಬರೆದು, Human relations are above all...ಎಂದು ಪೆದ್ದು ಪೆದ್ದಾದ ಇಂಗ್ಲೀಷಿನಲ್ಲಿ ಅನುವಾದ ಬರೆದು ಕೆಳಗೆ ದೇವನೂರು ಮಹಾದೇವ, ಇಂಡಿಯಾ. ಎಂದು ಗೀಚಿದ ಹಲವು ಬಣ್ಣದ ಚೀಟಿಗಳನ್ನು ಫಲಕಕ್ಕೆ ಅಂಟಿಸಿ ಸಂಭ್ರಮಿಸಿದ್ದೇನೆ. 


‘ಎದೆಗೆ ಬಿದ್ದ ಅಕ್ಷರ‘ ಪುಸ್ತಕದ ಬಗ್ಗೆ ಎರಡು ಮಾತು...

ದೇವನೂರು ಮಹಾದೇವ ಅವರ ಪುಸ್ತಕದ ಒಂದೊಂದು ಅಕ್ಷರ ಹೂವಿನಷ್ಟು ಕೋಮಲ. ಪದ ಪದಗಳ ನಡುವೆ ಭಾವನೆಗಳ ಪಸೆ. ಓದಿದಷ್ಟು ದಕ್ಕುತ್ತಲೇ ಹೋಗುವ ಕಸುವಿನ ವಿಶಾಲ ಬಯಲು... ಇಲ್ಲಿನ ಭಾಷೆ ಸಾಹಿತ್ಯದ ಚಮತ್ಕಾರಿ ಭಾಷೆ ಅಲ್ಲ. ಕಲಾತ್ಮಕ. ಮಹಾದೇವನ ಮನದೊಳಗಿನ ಶಾಂತಿ ಮಾತಾಡಿದಂತಿದೆ. ಹಾಡಿದಂತಿದೆ. ಜೀವಸಂಗೀತದಂತಿದೆ. ಅವರ ಬರವಣಿಗೆ ಮತ್ತವರ ನಿಷ್ಕಲ್ಮಶ ನಗುವಿಗೆ ಎಂಥ ಅಶಾಂತ ಮನಸುಗಳೂ ಪ್ರಶಾಂತವಾಗಿಬಿಡುತ್ತವೆ. ಇದು ಸಂತನ ಹಾಗೊಂದು ತೋರಿಕೆಯ ಸಣ್ಣಗಿನ ನಗುವಲ್ಲ ಅಂತ ನನಗೆ ಮತ್ತೆ ಮತ್ತೆ ಅನಿಸುತ್ತದೆ. ಮನುಷ್ಯ ಅಂತಃಕರಣದ ಅಪ್ಪಟ ಜೀವಸೆಲೆ. ಭರವಸೆಯ ಮಿಂಚು... ಇಡೀ ಸಂಕಲನದ ಒಟ್ಟು ಜೀವದ್ರವ್ಯವೇ ಇಂಥ ಮನೋಧರ್ಮ.


ಈ ಬರಹಗಳಿಗೆ ಕಾಲದ ಹಂಗಿಲ್ಲ. ಕಣ್ಮುಂದೆ ನಡೆದ ವಿದ್ಯಮಾನಗಳ ಬಗ್ಗೆ ನೀಡಿದ ತಕ್ಷಣದ ಪ್ರತಿಕ್ರಿಯೆಗಳಂತೆ ಕೆಲವು ಅನಿಸಿದರೂ, ಕಾವ್ಯಗುಣದಿಂದಾಗಿ ಸೀಮಿತ ಪರಿಧಿಯಾಚೆಗೂ ಸಾಗಿ ಯಾವ ಕಾಲದಲ್ಲೂ ಅನುರಣಿಸಬಲ್ಲ ಶಕ್ತಿ ಇಲ್ಲಿನ ಚಿಂತನೆಗಳಿಗಿದೆ.
ಮಾತುಗಳೆಲ್ಲ ಸೋಲುತ್ತಿರುವ ಈ ಸಂದರ್ಭದಲ್ಲಿ ಮಾತಿನ ತೂಕದ ಅಗತ್ಯವೊಂದನ್ನು ಸೂಚ್ಯವಾಗೇ ಅವರು ಪುಟ್ಟ ಭಾಷಣಗಳ ಮೂಲಕ ಹೇಳುತ್ತಾರೆ.  ಅದು ಅವರದೇ ಆದೊಂದು ವಿಶೇಷತೆ. ಹೇಳಬೇಕಾದ್ದನ್ನು ಅವರು ಟಿಪ್ಪಣಿ ಮಾಡಿಕೊಂಡಿರುತ್ತಾರೆ. ಅದನ್ನೇ ಕಾವ್ಯದಂತೆ ವಾಚಿಸುತ್ತಾರೆ. ಅದು ಭಾಷಣವಾಗದೇ ವಿಚಾರಧಾರೆಯಂತೆ ಕಾವ್ಯಾತ್ಮಕವಾಗಿ, ಕಲಾತ್ಮಕವಾಗಿ ಮತ್ತು ಸಹಜ ಸುಂದರ ಮಾತಾಗಿ ಕೇಳುಗನ ಎದೆಗಿಳಿಯುತ್ತದೆ.  ನನ್ನೊಳಕ್ಕೂ ಇಳಿದಿದೆ. ಮಾತಿನ ಲಹರಿಗೆ ಬಿದ್ದು ವಾಚಾಳಿ ಆಗುವ ಗುಣ ಅವರದ್ದಲ್ಲ. ಈ ಮನೋಧರ್ಮ ಅವರ ಬರವಣಿಗೆಯಲ್ಲೂ ಸಹಜವಾಗಿಯೇ ಬಂದಿದೆ. ಅವರು ಬಳಸುವ ಭಾಷೆ, ಪದ ಕೂಡ ತೂಕ ಮಾಡಿಟ್ಟಂತಿದೆ. ಅಲ್ಲಿ ಯಾವ ಉತ್ಪ್ರೇಕ್ಷೆಗಳಿಗೆ ಆಸ್ಪದವೇ ಇಲ್ಲ. ಜೀವರಸದಿಂದ ಯಾವ ಸಾಲೂ ವಂಚಿತಗೊಂಡಿಲ್ಲ. ಓದುವ ಖಯಾಲಿ ಬೆಳೆಸುವ ಇಲ್ಲವೇ ಓದನ್ನು ರಂಜನೀಯಗೊಳಿಸುವ ಏಕಮಾತ್ರ ಉದ್ದೇಶದ ಹಿಕ್ಮತ್ತು ಇಲ್ಲಿಲ್ಲ. ಮನಸ್ಸನ್ನು ನಿರ್ಮಲಗೊಳಿಸುವ ಮತ್ತು ಚಿಂತನೆಯ ಕಾಲುವೆಗಳನ್ನು ಹೃನ್ಮನಕ್ಕಿಳಿಸುವ ಕಾಳಜಿ ಇದೆ. ಸಂಕಲನದ ಪ್ರತಿಯೊಂದು ಲೇಖನ ಈಗಾಗಲೇ ನಾವು ಕೇಳಿಸಿಕೊಂಡ ಅವರ ಮಾತುಗಳ, ಚಿಂತನೆಗಳ ಲೇಖನ ರೂಪ.
ಗಾಂಧೀಜಿ ಅವರನ್ನು ತುಸು ಜಾಸ್ತಿಯೇ ಹಚ್ಚಿಕೊಂಡಂತಿರುವ ಮಹಾದೇವ, ಯಾರಿಗೂ ಕೇಡು ಬಗೆಯದ ವ್ಯಕ್ತಿತ್ವವನ್ನು ಗಾಂಧೀಜಿ ಹಟದಂತೆಯೇ ಪಾಲಿಸಿಕೊಂಡು ಬಂದಿದ್ದಾರೆ ಅನ್ನಿಸುತ್ತಿದೆ. ಈ ಮನೋಧರ್ಮ ಅವರ ಬಹುತೇಕ ಲೇಖನಗಳಲ್ಲಿ ನಿಚ್ಚಳವಾಗಿದೆ. ಅವರ ಸಾತ್ವಿಕ ಆಕ್ರೋಶವೂ ಫಿಲಾಸಫಿಕಲ್ ಆಗಿದೆ. ಸ್ಪಿರಿಚ್ಯುವಲ್ ಆಗಿದೆ. ಹೀಗಾಗಿ ಯಾರಲ್ಲೂ ಯಾವ ಕಾರಣಕ್ಕೂ ಬೇಸರ ಮೂಡದು.
 ಗಾಂಧೀಜಿ ಆಗುವುದು ತುಂಬ ಸುಲಭ. ಯಾರಾದರೂ ಮನಸು ಕಠಿಣಗೊಳಿಸಿಕೊಂಡರೆ, ಹಟಕ್ಕೆ ಬಿದ್ದರೆ ಆಗಬಹುದೇನೋ?.. ಆದರೆ, ಅಂಬೇಡ್ಕರ್ ಅವರ ಹಾಗೆ ಖಚಿತ ಮತ್ತು ನಿಷ್ಠುರ ಮನೋಭಾವನೆ ಹೊಂದುವುದು ಕಷ್ಟಕರ. ಈ ದೇಶದಲ್ಲಿ ಗಾಂಧೀಜಿಯಂತೆ ವರ್ತಿಸಿ ಬದುಕಬಹುದು. ಆದರೆ ಅಂಬೇಡ್ಕರ್ ಅವರಂತೆ ನಿಷ್ಠುರ ಮನೋಭಾವನೆ ಹೊಂದಿದಲ್ಲಿ ಲುಕ್ಸಾನೇ ಜಾಸ್ತಿ. ಹೀಗಾಗಿ  to be at safer side ಗಾಂಧಿವಾದಿ ಆಗುವುದು ಅತ್ಯಂತ ಸುಲಭದ ಮಾರ್ಗ.
ಮಹಾದೇವ ಅವರನ್ನು ಇತ್ತೀಚೆಗೆ ಹೊಗಳುವವರೇ ಜಾಸ್ತಿಯಾಗಿದ್ದಾರೆ. ಇದೊಂದು ಹುನ್ನಾರ ಎಂದು ನನಗನ್ನಿಸುತ್ತಿರುತ್ತದೆ. ಹಾಗೆ ಅನಿಸಿದಾಗೆಲ್ಲ ಬಸವನ ವಚನ ನೆನಪಾಗುತ್ತದೆ. ’ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೆ ಏರಿಸದಿರಯ್ಯಾ...’. ಬಸವಣ್ಣ ಹೀಗೆ ಹಲುಬಿದ್ದು ಅರ್ಥಪೂರ್ಣವಾಗಿದೆ. ಮಹಾದೇವ ಪ್ರಶಂಸೆಗೆ ಬಗ್ಗದ ಜೀವ ಅನ್ನೋದು ಗೊತ್ತಿದ್ದರೂ ಅಥವಾ ನಂಬಿಕೆ ಬಲವಾಗಿದ್ದರೂ, ಯಾಕೋ ಅಳುಕು.
ಅವತ್ತು ಒಂದು ದಿನ ಗಾಂಧಿ ಸ್ಮಾರಕ ಭವನದಲ್ಲಿ ಇದೇ (ಎದೆಗೆ ಬಿದ್ದ ಅಕ್ಷರ) ಪುಸ್ತಕದ ಬಿಡುಗಡೆ ಇತ್ತು. ಸಮಾರಂಭದಲ್ಲಿದ್ದ ಗೆಳೆಯರ ಬಳಿ ನಾನು ಮಾತನಾಡಿಕೊಂಡಿದ್ದು ಈ ಕೆಳಗಿನ ಹಾಗಿತ್ತು-
ಕಡುಕಪ್ಪಾದ ಪೊಗದಸ್ತ ಕುದುರೆಯೊಂದು ಗಾಂಧಿ ಸ್ಮಾರಕ ಭವನದ ಆವರಣದಲ್ಲಿ ಮಿರಿ ಮಿರಿ ಮಿಂಚುತ್ತ ಸಾಗಿತ್ತು. ಅದನ್ನು ಕಟ್ಟಿಹಾಕುವ ಯತ್ನದಲ್ಲಿ ಕೆಲವರಿದ್ದರು. ತುಂಬ ದಿನಗಳಿಂದ ಇಂಥದೊಂದು ಕುದುರೆ ನಿರೀಕ್ಷೆಯಲ್ಲಿ ಹಲವರಿದ್ದರು. ಅದರ ಹೊಟ್ಟೆಗೆ ಯಾರೋ ಹೆಂಡ ತುಂಬಿಸಿಬಿಟ್ಟರು. ಮೊದಲೇ ಕಡುಕಪ್ಪು ಕಾಡುಕುದುರೆ. ಇನ್ನು ಹೆಂಡ ಹೊಟ್ಟೆಗಿಳಿಸಿಕೊಂಡರೆ ಕೇಳಬೇಕೆ. ಬುಸುಗುಡುತ್ತಲೇ ಇತ್ತು.
ದೂರದಿಂದ ಕೇಳಿಸುತ್ತಿದ್ದ ತಮಟೆಯ ಸದ್ದು ಹತ್ತಿರಕ್ಕೆ, ಎದೆಯ ಮುಂದೆ ರಿಂಗಣಿಸಿದಂತೆನಿಸತೊಡಗಿತು. ಈ ನಡುವೆ ಕುದುರೆಯಂಥ ಕಪ್ಪು ಮುಖವೊಂದು ಮಿರಿ ಮಿರಿ ಮಿಂಚುತ್ತ ಮೆಲ್ಲ ಮೆಲ್ಲ ಹೆಜ್ಜೆ ಹಾಕುತ್ತ ಸಾಗಿ ಬಂತು. ಜನ ಸಾಲುನಿಂತು ಹಾಡಿ ಹೊಗಳುತ್ತಿದ್ದರು. ಹೊಗಳಿಕೆಗೆ ಅಷ್ಟೇನು ಉಬ್ಬಿಕೊಳ್ಳದ ಮುಖವಿದೆನ್ನುವುದು ದಿಟವೇ. ಆದರೂ ಪ್ರಸನ್ನವದನವಾಗಿದ್ದನ್ನು ಕಂಡೆ. ಸುತ್ತ ನೆರೆದ ಭಕ್ತರ ದಂಡು ನೋಡಿ, ದೇವನೂರಿಗೆ ಈಗ ಅದೆಷ್ಟು ಭಕ್ತರು ಮಹಾದೇವ!. ಕೊಂಚ ಗಾಬರಿಗೊಂಡೆ. ಹಾಗೇ ಅವರನ್ನು ಕಡುಕಪ್ಪು ಕುದುರೆಯ ಬಳಿ ಕರೆತಂದರು. ಮೇಲೆ ಕೂರಿಸಿದರು. ’ಕೀರ್ತಿಶನಿ’ ಯಾರಿಗೂ ಕಾಣದಂತೆ ಕುದುರೆಯ ಕುಂಡೆಗೆ ಗುಂಡು ಸೂಜಿ ಚುಚ್ಚಿದವನೇ ಅದರ ತಿಕದ ಬಳಿಯ ಬಾಲವನ್ನು ಜೋರಾಗಿ ತಿವಿದನೇನೋ... ಕುದುರೆ ಹ್ಞೂಂಕರಿಸಿದ್ದೆ ಮುಂಗಾಲುಗಳನ್ನು ಎತ್ತೆತ್ತಿ ಹಾರಿಸುತ್ತ ಮಿಂಚಿನ ವೇಗದಲ್ಲಿ ಓಡುತ್ತ ಕತ್ತಲದಾರಿಯಲ್ಲಿ ಕರಗಿ ಹೋಯ್ತು... ಕೆಲವರೆದೆಯಿಂದ ಕೇಳಿಬಂದ ದನಿಯೊಂದೇ ಮಹಾದೇವ.. ಮಹಾದೇವ... 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ