ವಿಷಯಕ್ಕೆ ಹೋಗಿ

‘ಡಿಗ್ರೇಡ್‌’: ಒಂದು ಅದ್ಭುತ ರಾಜಕೀಯ ಲೇವಡಿ

ಚಿತ್ರ: ಡಿಗ್ರೇಡ್‌
Directed by- Arab and Tarzan
ಚಿತ್ರದ ನಿರ್ದೇಶಕರು ಅವಳಿ ಸಹೋದರರು.


ಸಮಾಜ ಅಥವಾ ಸಮುದಾಯಗಳೊಳಗಿನ ಸೊಕ್ಕು, ಸಹಜತೆ ಮತ್ತು ಆಸಕ್ತಿಗಳೇ ದೇಶದ್ದೂ ಆಗಿರುತ್ತದೆ. ಹಾಗೆಯೇ ದೇಶವೊಂದರ ಹಿಂಸೆ, ಅತಿರೇಕಗಳು ಅಲ್ಲಿನ ಸಮಾಜದ ಒಳಗಿನ ಹಿಂಸೆಯ ಲಕ್ಷಣಗಳನ್ನೇ ಹೋಲುತ್ತವೆ. ಇಂಥ ಲಾಕ್ಷಣಿಕ ಚಿತ್ರಣವನ್ನು ಅತ್ಯಂತ ಕಾಮಿಡಿಯಾಗಿ ಕಟ್ಟಿಕೊಡುವ ಚಿತ್ರ ‘ಡಿಗ್ರೇಡ್‌’. ದೇಶ, ಧರ್ಮ ಭಕ್ತಿಗಳ ಅತಿರೇಕ ಮತ್ತು ಪುಂಡುಗಾರಿಕೆಯನ್ನು ಮೆಲುದನಿಯಲ್ಲೇ ಲೇವಡಿಗೊಳಪಡಿಸುತ್ತದೆ.
ನಿರೂಪಣೆ ಚಿತ್ರದ ಹೈಲೈಟ್‌. ಸಹಜ ಚಿತ್ರಣಗಳಿಂದ ತೆರಕೊಳ್ಳುವ ‘ಡಿಗ್ರೇಡ್‌’ ಕ್ರಮೇಣ ಒಂದು ಪ್ರದೇಶದ ಸಮಾಜೋ-ರಾಜಕೀಯ ಕಾರ್ಟೂನ್‌ ಕಟ್ಟಿಕೊಡುತ್ತದೆ.
ಫಲಿಸ್ತಾನದ (ಪೆಲಿಸ್ಟೀನ್‌) ಗಾಝಾ ಪಟ್ಟಿಯಲ್ಲಿ ಅದೊಂದು ಬೇಸಿಗೆ ಕಾಲ, ಬ್ಯೂಟಿ ಪಾರ್ಲರ್‌ನಲ್ಲಿ ಹದಿಮೂರು ಹೆಣ್ಣು ಮಕ್ಕಳು ಸಿಂಗಾರಕ್ಕೆಂದು ಸೇರಿಕೊಂಡ ಸಂದರ್ಭವನ್ನಿಟ್ಟುಕೊಂಡು ಚಿತ್ರ ಶುರುವಾಗುತ್ತದೆ. ಮಧುಮಗಳಿಗೆ ಮೇಕ್‌ಅಪ್‌, ಆಂಟೀಗೆ ಬ್ಯೂಟಿ ಟಚ್‌ ಅಪ್‌, ಮಧ್ಯವಯಸ್ಸಿನ ಹೆಂಗಸಿಗೆ ಫೇಸಿಯಲ್‌.. ಇಲ್ಲಿ ಒಬ್ಬೊಬ್ಬರದು ಒಂದೊಂದು ಬ್ಯೂಟಿ ಕಾನ್ಸಿಯಸ್‌. ಈ ಗಿರಾಕಿಗಳನ್ನು ನಿಭಾಯಿಸಲು ಹೆಣಗುವ ಸಲೂನಿನ ಒಡತಿ ರಷ್ಯನ್‌ ಹೆಂಗಸು ವಿಕ್ಟೋರಿಯಾಗೆ ಬೇಗ ಸಲೂನ್‌ ಮುಚ್ಚಿ ಗಂಡನ ತೆಕ್ಕೆ ಸೇರುವ ಕಾತರ. ಮಂದಗತಿಯ ಅವಳ ಸಹಾಯಕಿ ಕ್ರಿಸ್ಟಿನಾಗೆ ಕೆಲಸದ ಮೇಲೆ ಗಮನವಿಲ್ಲ. ಸದಾ ತನ್ನ ಹುಚ್ಚುತನದ ಪ್ರಿಯಕರ ಏನಾದರೂ ಎಡವಟ್ಟು ಮಾಡಿಕೊಂಡಾನೆಂಬ ಭಯದಲ್ಲಿರುವಾಕೆ. ಅವನೋ ಸಿಂಹದ ಮರಿಯೊಂದನ್ನು ಎಗರಿಸಿ ಪಾರ್ಲರ್‌ ಮುಂದೆಯೇ ಕಟ್ಟಿ ಹಾಕಿದ್ದಾನೆ. ಈ ಸಿಂಹದ ಮರಿಯ ಹುಡುಕಾಟದಲ್ಲಿ ಗಾಝಾ ಸರ್ಕಾರ ಅರ್ಥಾತ್‌ ಹಮಾಸ್‌ (ಒಂದು ತೀವ್ರವಾದಿ ಗುಂಪು) ಇದೆ. ಯಾವುದೇ ಪರಿಸ್ಥಿತಿಯಲ್ಲಿ ಸಿಂಹದ ಮರಿ ಪತ್ತೇ ಹಚ್ಚುವುದು ಅದರ ಉದ್ದೇಶ. ಇದು ಸಿನಿಮಾದ ಅಸಲಿ ಪ್ಲಾಟ್‌.
ಸಿಂಹದ ಮರಿ ಪತ್ತೆಗಾಗಿ ನಡೆವ ಸೇನಾ ಕಾರ್ಯಾಚರಣೆಯಿಂದಾಗಿ ಸೃಷ್ಟಿಯಾಗುವ ಬಿಗುವಿನ ವಾತಾವರಣ, ಭೀಕರ ಗುಂಡಿನ ಕಾಳಗ, ಯುದ್ಧದಂಥ ಪರಿಸ್ಥಿತಿಯಿಂದಾಗಿ ಪಾರ್ಲರ್‌ ಒಳಗಿನ ಹೆಣ್ಣು ಮಕ್ಕಳು ಟ್ರ್ಯಾಪ್‌ ಆಗುತ್ತಾರೆ. ಇದು ಚಿತ್ರದಲ್ಲಿ ಕುತೂಹಲ ಹುಟ್ಟಿಸುವಂಥ ಮಹತ್ವದ ನಾಟಕೀಯ ತಿರುವು.
ಪಾರ್ಲರ್‌ ಅಣತಿ ದೂರದಲ್ಲಿ ಗುಂಡಿನ ಸುರಿಮಳೆ. ಜಟಾಪಟಿ, ಚಕಮಕಿ ನಡೆಯುತ್ತಿದ್ದರೆ ಇತ್ತ ಹೆಂಗಸರಿಗೆ ತಮ್ಮ ಹಣ್ಣಾದ, ಸುಕ್ಕು ಗಟ್ಟಿದ ಮೂತಿಗಳ ರಿಪೇರಿ ಅಥವಾ ಪ್ಯಾಚ್‌ಅಪ್‌ ಮಾಡಿಸಿಕೊಳ್ಳುವ ತವಕ. ಅಲ್ಲೊಬ್ಬ ಬಜಾರಿ. ಹೆಣ್ಣುಗಳ ಅಂತರಂಗದ ವಾಸ್ತವಕ್ಕೆ ಹತ್ತಿರದವಳು. ಮತ್ತೊಬ್ಬಾಕೆ ಮುಸ್ಲಿಂ ಹೆಂಗಸು. ಆಕೆ ತನ್ನೆಲ್ಲ ಸಾಂಸಾರಿಕ ಜಂಜಡ ಮತ್ತು ಸಂಕೀರ್ಣತೆಗಳ ನಡುವೆ ತನ್ನ ಇಸ್ಲಾಮಿಕ್‌ ಬದುಕನ್ನು ಬಿಟ್ಟುಕೊಡದವಳು. ಇಬ್ಬರ ನಡುವೆ ನಿರಂತರ ಮಾತಿನ ಜಟಾಪಟಿ. ಹೊರಗೆ ನಡೆಯುತ್ತಿರುವ ಯುದ್ಧಕ್ಕೂ ಇವರಿಗೂ ಏನೂ ಆಗಬೇಕಾದ್ದಿಲ್ಲವಾದರೂ ತಮ್ಮ ಬದುಕಿಗೆ ಸಂಬಂಧಪಟ್ಟವರು ಅದರಲ್ಲಿ ಸಿಕ್ಕಿ ಹಾಕಿಕೊಂಡಾರು ಎನ್ನುವ ಭಯ ಅವರನ್ನಾವರಿಸಿರುತ್ತದೆ. ಮುಸ್ಲಿಂ ಹೆಂಗಸಿಗೆ ಅಲ್ಲಾಹುವಿನ ಮೇಲಷ್ಟೇ ನಂಬಿಕೆ. ಪಾರ್ಲರ್‌ನ ಹೊರಗೆ ಪರಿಸ್ಥಿತಿ ತುಂಬ ನಾಜೂಕಾಗುತ್ತ ಅದು ಪಾರ್ಲರ್‌ ಒಳಗೂ ಆತಂಕ ಹೆಚ್ಚಿಸುವಾಗಲೂ ಅವಳು ಹೊತ್ತು ಹೊತ್ತಿನ ನಮಾಜು ಮಾತ್ರ ತಪ್ಪಿಸುವವಳಲ್ಲ. ಬಜಾರಿ ಹೆಂಗಸು ಎತ್ತುವ ಪ್ರಶ್ನೆಗಳಿಗೆ ಲೈಂಗಿಕಾಸಕ್ತಿಯ ಮಾತುಗಳಿಗೆ ಉಲ್ಲಸಿತಗೊಳ್ಳುವಳಾದರೂ ಅವೆಲ್ಲಕ್ಕೂ ಇಸ್ಲಾಮಿನಲ್ಲಿ ಉತ್ತರ ಹುಡುಕುವ ಯತ್ನ ಮಾಡುವಾಕೆ. ಇಬ್ಬರ ನಡುವಿನ ಸಂಭಾಷಣೆ ಮತ್ತು ಸಂವಾದದ ದೃಶ್ಯಗಳು ಕಚಗುಳಿ ಇಡುವಂಥವು. ಗಂಡನ ಜತೆ ಕಳೆದ ರಾತ್ರಿಗಳ ರಸ ನಿಮಿಷ ನೆನೆದು ತಮಾಷೆ ಮಾಡುವ, ಅನ್ಯ ಹೆಂಗಸರ ಗಂಡಂದಿರನ್ನು ಕಂಡು ಅವನು ನನಗೂ ಒಂದ್ಸಾರಿ ಸಿಗಬೇಕಿತ್ತು ಎನ್ನುವವರೆಗಿನ ಆ ಹೆಣ್ಣುಗಳ ಹಾದರದ ಹಂಬಲ ಇಲ್ಲಿ ಕಾಮಿಡಿಯಾಗಿದೆ! ಮಧ್ಯಪ್ರಾಚ್ಯ ರಾಷ್ಟ್ರಗಳ ಧಾರ್ಮಿಕ ಹಿಂಸಾ ವಿದ್ಯಮಾನಗಳನ್ನು, ಅಲ್ಲಿನ ಸರ್ಕಾರ ತನ್ನ ಪ್ರಜೆಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯ ಮನೋಧರ್ಮವನ್ನು ಮತ್ತು ಆ ಮೂಲಕ ಸೃಷ್ಟಿಯಾಗಿರುವ ಇಡೀ ವಿಷಮ ಸ್ಥಿತಿಯನ್ನು ಪಾರ್ಲ್‌ರ್‌ ಒಳಗಿನ ಘಟನೆಗಳಿಗೆ ಸಮೀಕರಿಸುವ ಒಂದು ಸೆಟೈರಿಕ್‌ ವಿಧಾನ ಈ ಚಿತ್ರವನ್ನು ಭಿನ್ನವಾಗಿಸಿದೆ. ನಿರ್ದೇಶಕರು ಇಡೀ ಚಿತ್ರವನ್ನು ಕಾಮಿಡಿಯಾಗಿಸುತ್ತಲೇ ಗಾಢ ವಿಷಾದತೆಯನ್ನೂ ಕಟ್ಟಿಕೊಡುತ್ತಾರೆ. ಚಿತ್ರ ಆ್ಯಕ್ಷನ್‌ ಪ್ಯಾಕ್‌ ಆಗುತ್ತಿದ್ದಂತೆ ಹೆಂಗಸರ ನಡುವಿನ ಮಾತಿನ ಚಕಮಕಿ ತುಂಬ ಆಸಕ್ತಿ ಮೂಡಿಸುತ್ತ ತನ್ನ ಸಟೈರಿಕ್‌ ಉದ್ದೇಶವನ್ನು ಸುಲಭವಾಗಿ ಈಡೇರಿಸಿಕೊಳ್ಳುತ್ತದೆ.
ತುಂಬ ಮೆಲು ದನಿಯ ಇಂಥ ಸಟೈರಿಕ್‌ ವಿಧಾನ, ಗಾಝಾ ಪೆಟ್ಟಿಯಲ್ಲಿ ಹೆಂಗಸರನ್ನು ಒಳಗೇ ಉಸಿರುಗಟ್ಟಿಸುವಂತೆ ಮಾಡಿರುವ ಸಮಾಜೋ-ಧಾರ್ಮಿಕ ಪರಿಸ್ಥಿತಿಯನ್ನು ಛೇಡಿಸುತ್ತದೆ. ಅನ್ಯ ಧರ್ಮಿಯರ ಸಹಜ ಬದುಕು, ಸ್ತ್ರೀಯರ ಸೌಂದರ್ಯ ಪ್ರಜ್ಞೆ ಕೂಡ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಗಂಡು-ಹೆಣ್ಣಿನ ಸಂಬಂಧಗಳ ವಿಷಯದಲ್ಲೇ ತುಂಬ ಹೇರಿಕೆಗಳಿವೆ. ಸ್ತ್ರೀಯರಿಗೆ ಲೈಂಗಿಕ ಅಭಿಲಾಷೆಗಳನ್ನು ನೇರವಾಗಿ ವ್ಯಕ್ತಪಡಿಸುವುದಾಗಲಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಲಿ ಇಲ್ಲಿ ಅಷ್ಟು ಸುಲಭ ಸಾಧ್ಯವಿಲ್ಲ. ತಮ್ಮ ಪಾಲಿಗೆ ಬಂದ ಗಂಡಸರನ್ನು ಅವರ ಅಗಾಧ ಮಿತಿಗಳೊಳಗೂ ಒಪ್ಪಿಕೊಂಡು ‘ಆದರ್ಶ‘ ಬದುಕು ಮುನ್ನಡೆಸಲೇಬೇಕಾದ ಅನಿವಾರ್ಯತೆಯಲ್ಲಿ ಇಲ್ಲಿನ ಹೆಂಗಸರಿದ್ದಾರೆ. ಕರ್ಮಠಿಗಳ ಇಂಥ ಹಲವು ಹುಸಿ ಆದರ್ಶಗಳನ್ನು ಗೇಲಿ ಮಾಡುವಲ್ಲಿ ಚಿತ್ರ ಅತ್ಯಂತ ಧೈರ್ಯ ಪ್ರದರ್ಶಿಸಿದೆ.
ಡೀಗ್ರೇಡ್‌ ಎನ್ನುವುದರರ್ಥ ಪಾರ್ಲರ್‌ ಅಥವಾ ಸಲೂನಿಗೆ ಸಂಬಂಧಿಸಿ ಹೇಳುವುದಾದರೆ ದಟ್ಟವಾದ ಕೂದಲುಗಳನ್ನು ಹಗುರಾಗಿಸುವುದು. ಕೂದಲು ಕಗ್ಗಂಟಾಗಿದ್ದನ್ನು ಸಡಿಸಲಗೊಳಿಸಿ ಒಪ್ಪವಾಗಿ ಕಾಣುವಂತೆ ಮಾಡುವುದು. ಇದನ್ನೇ ಮೆಟಾಫರ್‌ ಆಗಿಟ್ಟುಕೊಂಡು ಗಾಝಾದಲ್ಲಿ ನಡೆಯುತ್ತಿರುವ ಹಿಂಸೆ, ಅಂತಃಕಲಹ ಮತ್ತು ಯುದ್ಧಕ್ಕೆ ಸಣ್ಣ ಪರಿಹಾರ ಸೂಚಿಸಲು ‘ಡಿಗ್ರೇಡ್‌’ ಚಿತ್ರ ಯತ್ನಿಸುತ್ತದೆ.
ಚಿತ್ರದ ಕೊನೆಯಲ್ಲಿ ಗಿರಾಕಿಗಳ ಪೈಕಿ ಓರ್ವ ಗರ್ಭಿಣಿ ಹೆರಿಗೆ ನೋವಿನಿಂದ ನರಳುತ್ತಿದ್ದರೆ ಅದೇ ಸಮಯಕ್ಕೆ ಪಾರ್ಲರ್‌ನಿಂದ ಆಚೆಗಿನ ಹೊರಗಿನ ವಾತಾವರಣ ಸಂಕೀರ್ಣವಾಗತೊಡಗುತ್ತದೆ. ಒಂದಡೆ ಹೊಸ ಜೀವ ಹುಟ್ಟಿಗೆ ಚಡಪಡಿಸುತ್ತಿದ್ದರೆ ಮತ್ತೊಂದೆಡೆ ಈಗಾಗಲೇ ಹುಟ್ಟಿ ಬೆಳೆದವರು ವಿನಾಶಕ್ಕಾಗಿ ನಿರ್ಣಾಯಕ ಕಚ್ಚಾಟದಲ್ಲಿರುತ್ತಾರೆ. ಒಂದೆಡೆ ಮನುಷ್ಯ ಸಹಜ ಸೌಂದರ್ಯ ಪ್ರಜ್ಞೆ ತನ್ನ ಓರೆಕೋರೆಗಳನ್ನು ತಿದ್ದಿಕೊಂಡು ಒಪ್ಪವಾಗಲು ಹೆಣಗುತ್ತಿದ್ದರೆ ಮತ್ತೊಂದೆಡೆ ಧರ್ಮ ಮತ್ತು ಪ್ರತಿಷ್ಠೆಗಳು ಜನರ ಇರುವ ನೆಮ್ಮದಿಯನ್ನು ಕಡೆಗಣಿಸಿ ಪರಸ್ಪರ ಕಚ್ಚಾಟಕ್ಕೆಳೆಯುತ್ತಿವೆ. ಈ ಅಸಂಗತ ಸ್ಥಿತಿಯನ್ನು ಬಿಚ್ಚಿಡುವ ‘ಡಿಗ್ರೇಡ್‌’ ಚಿತ್ರ ಒಂದು ಅದ್ಭುತ ರಾಜಕೀಯ ಲೇವಡಿಯೂ ಹೌದು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...