ವಿಷಯಕ್ಕೆ ಹೋಗಿ

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.

















 ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇದನೆಯ ಹಾದಿ ತುಳಿದವರೆಷ್ಟೋ, ವಿಮುಖರಾಗಿ ಜನಪ್ರಿಯ ಧಾಟಿಯಲ್ಲಿ ವ್ಯವಸ್ಥೆ ಪರ ಸೋಗುಡುತ್ತಿರುವವರೆಷ್ಟೊ.. ಆದರೆ ಪ್ರತಿಭೆಗಳನ್ನು ರಂಗದತ್ತ ಸೆಳೆದ ಅವರ ಪರಿಯೇ ಅನನ್ಯವಾಗಿತ್ತು. ಅಂಥ ಮಹಾ ರಂಗಚೇತನದ ಸ್ಮರಣಾರ್ಥ ಅವರದೇ ಹೆಸರಿನಲ್ಲಿ ರಾಷ್ಟ್ರೀಯ ರಂಗೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಅವರಿಗೆ ಸಲ್ಲಿಸಬಹುದಾದ ಅರ್ಥಪೂರ್ಣ ಶ್ರದ್ಧಾಂಜಲಿ. ಅವರ ‘ರಂಗನಿರಂತರ’ ಸಂಸ್ಥೆಯಡಿ ಶಶಿಧರ ಅಡಪ, ಅಪ್ಪಯ್ಯ, ಸರ್ವೇಶ, ಗೋವಿಂದ ಸ್ವಾಮಿ, ರಷ್ಮಿ, ರಾಮಕೃಷ್ಣ ಬೆಳ್ತೂರ್‌, ಜಿಪಿಒ ಚಂದ್ರು, ಎಂ. ರವಿ, ಶಶಿಕಾಂತ ಯಡಹಳ್ಳಿ ಮತ್ತಿತರರು ಸೇರಿ ಪ್ರತಿ ವರ್ಷ ಸಿಜಿಕೆ ಹೆಸರಲ್ಲಿ ರಾಷ್ಟ್ರೀಯ ರಂಗೋತ್ಸವ ನಡೆಸುತ್ತಿದ್ದಾರೆ. ಪರ, ವಿರೋಧದ ಟೀಕೆಗಳ ನಡುವೆ ಸೃಜನಾತ್ಮಕವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
 ಈ ಸಲದ ರಂಗೋತ್ಸವದಲ್ಲಿ (ಡಾ. ವಿಜಯಾ ನಿರ್ದೇಶನದಲ್ಲಿ) ಪ್ರಯೋಗಗೊಂಡ ನಾಟಕಗಳು ಭಿನ್ನ ಎನಿಸಿದರೂ ಕೆಲವು ಮತ್ತದೇ ರಾಮಾಯಣ, ಮಹಾಭಾರತದ ಗುಂಗಿನಿಂದ ಹೊರಬಂದಂತೆನಿಸಲಿಲ್ಲ. ಏಕದಶಾನನ, ವಾಲಿವಧೆ, ಅಶ್ವತ್ಥಾಮ ವಾರ್‌ ಮಷೀನ್‌ ನಾಟಕಗಳ ವಸ್ತು ಹೆಚ್ಚೂ ಕಮ್ಮಿ ಎರಡು ಮಹಾಕಾವ್ಯಗಳನ್ನು ಆಧರಿಸಿದ್ದವು. ಭಾಷಾ ವೈವಿಧ್ಯತೆ ನೆಲೆಯಲ್ಲಿ ಮಲೆಯಾಳಿಯ ‘ಚಿಲ್ಲರೆ ಸಮರಂ’ ಹಿಂದಿ ಭಾಷೆಯ ‘ವೆಲ್‌ಕಂ ಜಿಂದಗೀ’ ಮತ್ತು ‘ದೋಹರಿ ಜಿಂದಗೀ’ ನಾಟಕಗಳು ಮಧ್ಯಮವರ್ಗವನ್ನು ಆವರಿಸಿರುವ ತಲ್ಲಣಗಳನ್ನು ಚರ್ಚಿಸಿ ಗಮನ ಸೆಳೆದವು.
 ಅಶ್ವತ್ಥಾಮ–ವಾರ್‌ ಮಶೀನ್‌ ಹೊಸ ಬಗೆಯ ವಿಶ್ಲೇಷಣೆಯಿಂದ ಮಹಾಭಾರತ ಕಾವ್ಯದಲ್ಲಿನ ಪಾತ್ರಗಳ ಹಿಂಸೆಯನ್ನು ಸಮಕಾಲೀನ ಸಂದರ್ಭಕ್ಕೆ ಸಂವಾದಿಯಾಗಿಸಲು ಯತ್ನಿಸಿತು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂಸೆ, ಅದು ಇಂಡಿಯಾಕ್ಕೂ ತಳಕು ಹಾಕಿಕೊಂಡ ಪರಿ, ತಮ್ಮದೇ ಕುಡಿಗಳನ್ನು ಕತ್ತರಿಸಿ ಹಾಕುವ ಭಯೋತ್ಪಾದನಾ ಕೃತ್ಯದ ರಕ್ಕಸೀ ಪ್ರವೃತ್ತಿಯನ್ನು ವಿಶ್ಲೇಷಿಸುತ್ತ ಹಿಂಸೆ ಎನ್ನುವುದು ಯಾವುದೇ ಧರ್ಮ, ಕಾಲ, ದೇಶ ಮತ್ತು ಗಡಿಗಳಿಗೆ ಸೀಮಿತವಲ್ಲ ಎನ್ನುವ ಸೂಕ್ಷ್ಮ ಪ್ರತಿಪಾದಿಸಿತು. ದೃಶ್ಯಸಂಯೋಜನಾ ಕೌಶಲ, ಇಂಟರ್‌ಪ್ರಿಟೇಷನ್‌ನಿಂದ ಬಹುಕಾಲ ನೆನಪಲ್ಲುಳಿಯುವಂತೆ ಪ್ರಯೋಗ ಮೂಡಿಬಂದಿತು.
 ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಧರಿಸಿದ ‘ವಾಲಿವಧೆ’ ಪ್ರಯೋಗ ಕೃತಿಯ ಆಶಯದಿಂದ ಹೊರಕ್ಕೇ ನಿಂತಂತೆನಿಸಿತು. ಪಾಪ್ಯುಲಿಸ್ಟಿಕ್‌ ನೆಲೆಯಲ್ಲಿ ಮಹಾಕಾವ್ಯದ ಎರಡು ವಾನರ ಪಾತ್ರಗಳಾದ ವಾಲಿ ಮತ್ತು ಸುಗ್ರೀವ ಎನ್ನುವ ಅಣ್ಣ–ತಮ್ಮರ ಕಲಹವನ್ನು ಮ್ಯಾಜಿಕಲ್‌ ರಿಯಲಿಸಂ ತಂತ್ರಗಳಲ್ಲಿ ವೈಭವೀಕರಿಸಿ ಕರುಣಾ ರಸ ಉಕ್ಕಿಸುವ ಏಕಮಾತ್ರ ಉದ್ದೇಶ ಹೊಂದಿದಂತಿತ್ತು. ಪರಿಣಾಮದಲ್ಲಿ ರಾಮನ ನ್ಯಾಯದ ಬಾಣ ಅನ್ಯಾಯವಾಗಿ ವಾಲಿಯನ್ನು ಹೆಣವಾಗಿಸಿದ್ದರ ನ್ಯಾಯಪ್ರಶ್ನೆಯನ್ನೇ ನುಂಗಿ ಹಾಕಿತು. ದೃಶ್ಯ ಸಂಯೋಜನೆ, ಬೆಳಕಿನ ಮಾಯಾಲೋಕದಲ್ಲಿ ವಸ್ತುವಿನ ಅಸಲಿ ಬೆಳಕು ಮಾಯವಾಗಿ ಹಿಂಸೆಯೇ ವಿಜೃಂಭಿಸಿ ಬರಿಯ ಆತ್ಮಮರುಕ ಸೃಷ್ಟಿಸಲಷ್ಟೇ ಸಾಧ್ಯವಾಯಿತು.
 ಸಮಕಾಲೀನ ಸಂದರ್ಭದ ತಳಮಳ, ತಲ್ಲಣಗಳ ಮೇಲೆ ಗಮನ ಹರಿಸದ ಇಂಥ ಎರಡು ಮೂರು ನಾಟಕಗಳು ಮಹಾಕಾವ್ಯಗಳ ಆಶ್ರಯ ಹೋಗಿ ಅಭಿಜಾತ ಪ್ರಜ್ಞೆಯನ್ನಷ್ಟೇ ಸೂಸಲು ಸಾಧ್ಯವಾಯಿತು. ಸಿಜಿಕೆ ಸಮಕಾಲೀನ ತವಕ, ತಲ್ಲಣಗಳನ್ನು ರಂಗದ ಮೇಲೆ ತರುವುದನ್ನೇ ತಮ್ಮ ರಂಗಪ್ರಜ್ಞೆಯಾಗಿಸಿಕೊಂಡಿದ್ದು ನೆನಪಾಗಿ ಕಾಡಿತು.
 ‘ಚಿಲ್ಲರೆ ಸಮರಂ’ ಮಲೆಯಾಳಿ ನಾಟಕ ವರ್ತಮಾನದ ಆರ್ಥಿಕ ಚಿಂತನೆಗಳನ್ನು ಮಾನವೀಯ ನೆಲೆಯಲ್ಲಿ ಪ್ರಶ್ನಿಸುತ್ತ ಬಂಡವಾಳಷಾಹಿಗಳ ತರಾಟೆಗೆ ತೆಗೆದುಕೊಂಡು ಚಕಿತಗೊಳಿಸಿತು. ಸರಳ ದೃಶ್ಯ ಸಂಯೋಜನೆಗಳು, ನಟರ ಸಮಯಪ್ರಜ್ಞೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಬಳಸಿಕೊಂಡು ವಸ್ತುವನ್ನು ಅಚ್ಚುಕಟ್ಟಾಗಿ ನಿರೂಪಿಸಿತು.
 ತಂದೆ–ಮಗನ ಅಂತಃಸಂಬಂಧ ಮತ್ತು ಮಧ್ಯಮ ವರ್ಗದ ಕೌಟುಂಬಿಕ ನಾಜೂಕು ನಡೆಗಳ ಬಗ್ಗೆ ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಂಡ ‘ವೆಲ್‌ಕಂ ಜಿಂದಗೀ’ ಹಿಂದೀ ನಾಟಕ ಪ್ರೇಕ್ಷಕರ ಕಣ್ಣಾಲಿಗಳ ಹಸಿಗೊಳಿಸಿತು. ತನ್ನದೇ ಕನಸಿನ ಹಿಂದೆ ಎಡತಾಕುವ ವಯಸ್ಸಿಗೆ ಬಂದ ಮಗ, ಆತನೊಳಿತಿಗೆ ಒಳಗೇ ಸೂಕ್ಷ್ಮವಾಗಿ ತಳಮಳಿಸುವ ತಂದೆ, ಇಬ್ಬರ ನಡುವೆ ಜೀವ ಸೇತುವಾಗಿ ನಿಲ್ಲುವ ತಾಯಿ ಮತ್ತು ಹೆಂಡತಿ ಭೂಮಿಕೆ ನಿಭಾಯಿಸುವ ಹೆಣ್ಣು ಈ ಮೂರೂ ಪಾತ್ರಗಳ ನಡುವಿನ ಅಂತಃಸಂಬಂಧವನ್ನು ನವಿರಾಗಿ ಬಿಚ್ಚಿಟ್ಟ ನಾಟಕ ಆರಂಭದಲ್ಲಿ ಬೋರು ಹೊಡೆಸಿದರೂ ಕೊನೆಯ ದೃಶ್ಯದ ಭಾವನಾತ್ಮಕ ಸ್ಪರ್ಶದಿಂದ ಮನ ಕಲಕಿತು. ಸಂಭಾಷಣೆ ಮತ್ತು ನಟನೆಯ ಕೆಲ ಸೂಕ್ಷ್ಮಗಳನ್ನಷ್ಟೇ ಇಟ್ಟುಕೊಂಡು ಇಂಥ ರಿಯಲಿಸ್ಟಿಕ್‌ ನಾಟಕ ಕಟ್ಟಿಕೊಟ್ಟ ನಿರ್ದೇಶಕನಿಗೊಂದು ಸಲಾಂ.
ಜೊತೆಗೆ ಏಕವ್ಯಕ್ತಿ ಪ್ರದರ್ಶನಗಳು, ಬೀದಿ ನಾಟಕಗಳು, ರಂಗಗೌರವ ಮತ್ತು ಸಂವಾದ ಕಾರ್ಯಕ್ರಮಗಳು ವಿಶೇಷ ರಂಗಾನುಭವ ನೀಡಿದವು.ವಾತಾವರಣ ನಿರ್ಮಾಣದ ಭಾಗವಾಗಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಅಗಲಿದ ರಂಗಕರ್ಮಿಗಳ ಭಾವಚಿತ್ರಗಳ ಮುಂದೆ ದೀಪ ಹಚ್ಚಿ ಯುರೋಪ್‌ನಲ್ಲಿ ಸಮಾಧಿಗಳ ಅಲಂಕಾರ ಮಾಡುವ ಪದ್ಧತಿ ನೆನಪಿಸುವಂಥ ವಿನ್ಯಾಸ ರೂಪಿಸಿದ್ದು ಅಲ್ಲಿ ಸಿಜಿಕೆ ಮತ್ತಿತರರ ಅಣಕದಂಥ ಪ್ರಯೋಗ ನೀಡಿದ್ದು ಕೊಂಚ ಅತಿ ಎನಿಸಿತು.
 ಸಂಸ ಬಯಲು ರಂಗದಲ್ಲಿ ನಡೆದ ಉತ್ಸವದ ಕೊನೆಯ ಪ್ರಯೋಗ ‘ದೋಹರಿ ಜಿಂದಗೀ’ ಹೊಸ ಮತ್ತು ದಿಟ್ಟ ಪ್ರಯತ್ನ. ಇಬ್ಬರು ಹೆಣ್ಣುಗಳ ಸಲಿಂಗ ಸಂಬಂಧದ ವಸ್ತುವನ್ನು ರಾಜಸ್ಥಾನೀ ಜನಪದ ಕಥೆಯನ್ನಾಧರಿಸಿ ನಿರೂಪಿಸಿದ್ದು ಬೋಲ್ಡ್‌ ಎನ್ನಬಹುದಾದ ಪ್ರಯೋಗ. ಅರೆನಗ್ನವಾಗಿ  ಬೆನ್ನು ಮತ್ತು ಮೊಲೆತೊಟ್ಟುಗಳು ಕಾಣುವ ಹಾಗೆ ಬಟ್ಟೆ ಬದಲಾಯಿಸುವ ಮತ್ತು ಗಂಡು–ಹೆಣ್ಣು ಸಂಭೋಗ, ಹಸ್ತಮೈಥುನ ನಡೆಸುವಂಥ ಭ್ರಮೆ ಹುಟ್ಟಿಸುವ ದೃಶ್ಯ ಸಂಯೋಜನೆಗಳು ವಿಕೃತಿ ಎನಿಸದಂತೆ ಕಲಾತ್ಮಕವಾಗಿ ಮೂಡಿಬಂದವು. ನಾಟಕದ ವಸ್ತು ಬಯಸುವ ಈ ದೃಶ್ಯಗಳು ಒಟ್ಟು ನಿರೂಪಣೆಯಲ್ಲಿ ಅಶ್ಲೀಲದಂತೇನಿಸದೇ ವಸ್ತುವಿಗೆ ಪೂರಕ ಮತ್ತು ಅಗತ್ಯದಂತೆ ಧ್ವನಿಸಿದವು. ಬೋಲ್ಡ್‌ ವಸ್ತುವನ್ನು ನಿಭಾಯಿಸಿದ ಎರಡು ಹೆಣ್ಣು ಪಾತ್ರಗಳ ಕಲಾವಿದರ ದಿಟ್ಟತನಕ್ಕೆ ಪ್ರೇಕ್ಷಕರು ಮೂಕವಿಸ್ಮಿತ. ಪ್ರಯೋಗ ತಾರಕಕ್ಕೇರುವ ಹೊತ್ತಲ್ಲಿ ಮಳೆ ಸುರಿದು ಕಡೆಯ ಕೆಲವು ನಿಮಿಷಗಳ ಮುಂಚೆಯೇ ನಾಟಕ  ಮೊಟಕುಗೊಂಡಿದ್ದು ನಿರಾಶೆ ಮೂಡಿಸಿತು. ರಂಗಭೂಮಿಗೆ ಹೊಸದೇ ಎನ್ನಿಸುವ ಲೆಸ್ಬಿಯನಿಸಂ ವಸ್ತು ಮತ್ತು ಅಭಿನೇತ್ರಿಯರ ಬೋಲ್ಡ್‌ ಅಭಿನಯದ ‘ದೋಹರಿ ಜಿಂದಗೀ’ ಮುಂಚೆಯೇ ತೀವ್ರ ಕುತೂಹಲ ಕೆರಳಿಸಿತ್ತು. ವಿಶಿಷ್ಟ ರಂಗವಿನ್ಯಾಸ, ವಿನೂತನ ನಿರೂಪಣಾ ಶೈಲಿಯಿಂದ ಹಾಗೂ ಕೆಲವು ಬೋಲ್ಡ್‌ ಸನ್ನಿವೇಶಗಳಿಂದ  ಬೆರಗುಗೊಳಿಸಿತು. ಇಂಥ ಭಿನ್ನ ರಂಗಾನುಭವ ನೀಡಿದ ರಂಗೋತ್ಸವ ಸಂಘಟನೆಗೊಂದು ಥ್ಯಾಂಕ್ಸ್‌.
 ದೇಶವಷ್ಟೇ ಏಕೆ ಎಲ್ಲೆಡೆ ಭುಗಿಲೆದ್ದ ವಿಪರೀತ ದೇಶಭಕ್ತಿ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಲ್ಬಣಿಸುತ್ತಿರುವ ವಿಪರೀತ ಧರ್ಮ ಮೋಹದಂಥ ವಿದ್ಯಮಾನಗಳಿಂದ ಪ್ರಸಕ್ತ ಸಮಾಜದಲ್ಲಿ ವಿಷಮ ಗಾಳಿಯೇ ಬೀಸುತ್ತಿದೆ. ಅಮೆರಿಕ ಸೇರಿದಂತೆ ಎಲ್ಲೆಲ್ಲೂ ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಒಂದು ದಂಧೆಯಾಗುತ್ತಿರುವ ಕಾಲಘಟ್ಟದಲ್ಲಿ ರಂಗಭೂಮಿ ಸೇರಿದಂತೆ ಎಲ್ಲ ಸಾಂಸ್ಕೃತಿಕ ಚಳವಳಿಗಳು ಎಚ್ಚೆತ್ತುಕೊಳ್ಳಬೇಕಾಗಿರುವ ತುರ್ತು ಇದೆ. ಈ ಹಿನ್ನೆಲೆಯಲ್ಲಿ ಸಿಜಿಕೆಯವರಂಥ ಸಾಮಾಜಿಕ/ರಾಜಕೀಯ ಬದ್ಧತೆಯ ರಂಗ ಚಟುವಟಿಕೆ ಮತ್ತೆ ಕಳೆಕಟ್ಟಬೇಕಿದೆ. ಮುಂದಿನ ರಂಗೋತ್ಸವ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಸಿಜಿಕೆ ಸ್ಮರಿಸಿಕೊಳ್ಳುವಂತಾಗಲಿ.

Pics: Thai Lokesh

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...