ವಿಷಯಕ್ಕೆ ಹೋಗಿ

‘ಇಲ್ಲ.. ಅಂದರೆ.. ಇದೆ!’.. ಉತ್ತಮ ಪ್ರಯೋಗ


ಜೀನ್‌ ಬ್ಯಾಪ್ಟಿಸ್ಟ್‌ ಪೊಕ್ವೆಲಿನ್‌ ಅಲಿಯಾಸ್‌ ಮೊಲಿಯರ್‌ 18ನೇ ಶತಮಾನದ ಹೆಸರಾಂತ ಫ್ರೆಂಚ್‌ ನಾಟಕಕಾರ.  ಮೊಲಿಯರ್‌ ಎನ್ನುವುದು ಆತನ ರಂಗನಾಮ. ಕಾಮಿಡಿ ನಾಟಕಗಳಿಂದ ಹೆಸರಾದ ಈತ ಬದುಕಿನ ಸಣ್ಣ ಪುಟ್ಟ ಖುಷಿ ಕ್ಷಣಗಳು ಮತ್ತು ಹಾಸ್ಯದ ಪ್ರಸಂಗಗಳನ್ನೇ ಎತ್ತಿಕೊಂಡು ಇತರ ನಾಟಕೀಯ ಅಂಶಗಳೊಂದಿಗೆ  ಬದುಕಿನ ಬಹುದೊಡ್ಡ ವಿಷಣ್ಣತೆ. ವಿಷಾದವನ್ನು ನಾಟಕವಾಗಿ ಕಟ್ಟಿಕೊಟ್ಟಿದ್ದಾನೆ. ಆ ಮೂಲಕ ಬದುಕಿನ ಬಗ್ಗೆ ಚಿಂತನೆಗೆ ಹಚ್ಚಿದ್ದಾನೆ. ಪರಿಣಾಮಕಾರಿಯಾದ ಪ್ರಹಸನಗಳಿಂದಲೇ ಮೊಲಿಯರ್‌ ತುಂಬ ಖ್ಯಾತಿ ಗಳಿಸಿದ. ತಾರ್ತೂಫ್‌, ಬೂರ್ಜ್ವಾ ಜಂಟಲ್‌ಮನ್‌ ಮತ್ತಿತರ ನಾಟಕಗಳ ಮೂಲಕ ಅನನ್ಯ ರಂಗಾನುಭವಗಳನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟ ಮೊಲಿಯರ್‌, ನಮ್ಮ ನಡುವೆ ಮತ್ತು ಸಮಾಜದಲ್ಲಿ ಅಸಂಖ್ಯ ಪ್ರಹಸನಗಳು ನಡೆದಾಗೆಲ್ಲ ನೆನಪಾಗುತ್ತಾನೆ. 
ಕಳೆದ ಶನಿವಾರ ಸಂಜೆ, ಕೆ.ಎಚ್‌. ಕಲಾಸೌಧದಲ್ಲಿ ‘ಸೈಡ್‌ ವಿಂಗ್‌’ ತಂಡ ಏರ್ಪಡಿಸಿದ್ದ ‘ಇಲ್ಲ.. ಅಂದರೆ.. ಇದೆ!’  ಎನ್ನುವ ಕಾಮಿಡಿ ನಾಟಕದ ಪ್ರಯೋಗಕ್ಕೆ ಜಿ.ಎನ್‌. ಮೋಹನ್‌ ಅವರ ಜೊತೆ ನಾನೂ ಸಾಕ್ಷಿಯಾದೆ. ಮೊಲಿಯೊರ್‌ ಯಾಕೋ ನೆನಪಾದ.
ನಾವು ನಮ್ಮದೇ ಬದುಕಿನ ನಿಜದ ನೆಲೆಗಳ ಹುಡುಕಾಟಕ್ಕೆ ಇಳಿದಾಗ ವಾಸ್ತವಾಂಶಗಳು ಅನಾವರಣಗೊಳ್ಳುತ್ತವೆ. ಮನುಷ್ಯ ಸಂಬಂಧಗಳಲ್ಲಿ ಅಂದರೆ ಗಂಡು–ಹೆಣ್ಣು, ಸಮಾಜದ ಜೊತೆಗಿನ ಮನುಷ್ಯನ ಸಂಬಂಧಗಳು ಅಂದರೆ ಸಾಮಾಜಿಕ ಸಂಬಂಧ ಇದೆಲ್ಲದರ ಜೊತೆ ನಮ್ಮ ಸ್ಪಂದನೆ ಏನು? ಕಂಡುಕೊಂಡ ಸತ್ಯಗಳ ನೆಲೆಯಲ್ಲಿ ಆತ್ಮವಿಮರ್ಶೆಗಿಳಿದಾಗ ಆಗುವ ದರ್ಶನವನ್ನು ಎದುರಿಸುವುದು ಹೇಗೆ?  ನಗುವಲ್ಲಿ ಬದುಕಿನ ದೊಡ್ಡ ವಿಷಾದ ಮರೆಮಾಚುವುದು ಪಾಸಿಟಿವ್‌ ಸೈಡ್‌ ಆಫ್‌ ದಿ ಲೈಫ್‌. ಮತ್ತೊಂದೆಡೆ ತರತಮದ ಕ್ಷುಲ್ಲಕ ಕಾರಣಗಳಿಗೆ ಬದುಕನ್ನೇ ನರಕವಾಗಿಸಿಕೊಳ್ಳುವುದು ಇಗೋಯಿಸಂ ಅನ್ನಿಸಬಹುದು. ಇದೆಲ್ಲ ಬದುಕಲ್ಲಿ ಕಾಣುವ ಸ್ಥಿತಿ. ಅದನ್ನು ಫೇಟಲಿಸಂಗೆ ಸಮೀಕರಿಸಿ ನೋಡುವುದಲ್ಲ. ಒಂದು ಸ್ಥಿತಿಯಿಂದ ಮತ್ತೊಂದು ಉತ್ತಮ ಸ್ಥಿತಿಗೆ ಮಾನಸಿಕವಾಗಿ, ವೈಚಾರಿಕವಾಗಿ ಪರಿವರ್ತನೆಯಾಗುವುದು ಮುಖ್ಯ. ಹೀಗೆ ಬದಲಾಗುವಾಗ ಹಿಂದಿನದನ್ನು ಖಂಡಿಸುವ ಮತ್ತು ಧಿಕ್ಕರಿಸುವ ಆತ್ಮಸ್ಥೈರ್ಯ ಮೆರೆಯಲೇಬೇಕು. ಆ ಆತ್ಮಸ್ಥೈರ್ಯ ನಿರ್ಭಯಾ, ದಾನವ್ವ... ಅಂಥವರ ಸ್ಥಿತಿಗೆ ಕಾರಣರಾದವರ ಸದ್ದಡಗಿಸಿ ಅವರನ್ನು ಶಾಶ್ವತ ಷಂಡರನ್ನಾಗಿಸಲು ಸಾಧ್ಯ ಎನ್ನುವ ಬಹುದೊಡ್ಡ ಒಡಲುರಿಯ ಮೂಸೆಯಿಂದ ಬಂದ ಆಕ್ರೋಶವನ್ನು ಒಂದೇ ಒಂದು ಪರಿಣಾಮಕಾರಿ ದೃಶ್ಯದಲ್ಲಿ ನಿರೂಪಿಸಿದ ನಾಟಕಕಾರ/ನಿರ್ದೇಶಕ ಶೈಲೇಶಕುಮಾರ್‌ ನಿಜಕ್ಕೂ ದಿಟ್ಟ ಮನೋಧರ್ಮವನ್ನೇ ಮೆರೆದರು. ಪೊಸಿಟಿವಿಟಿ ಕಡೆ ಹೇಗೆ ಮುಖ ಮಾಡಬಹುದೆನ್ನುವುದನ್ನೂ ಕಕ್ಕುಲಾತಿಯಿಂದ ಕಟ್ಟಿಕೊಟ್ಟರು.
ಎರಡೇ ಎರಡು ಪಾತ್ರಗಳ ಮೂಲಕ ಹಲವು ಪಾತ್ರಗಳನ್ನು ಸೃಷ್ಟಿಸಿ ಇಬ್ಬರು ಹೆಣ್ಣು ಮಕ್ಕಳ ಬದುಕಿನ ಕೇಸ್‌ ಸ್ಟಡಿಯನ್ನು ಹೈಪಥೀಸಿಸ್‌ನಂತೆ ಎತ್ತಿಕೊಂಡು ಅದನ್ನು ಒಟ್ಟು ಮನುಷ್ಯ ಸಂಬಂಧಗಳಿಗೆ ಪ್ರಯೋತ್ಮಕವಾಗಿ ಸಮೀಕರಿಸಿ, ನಿಕಷಕ್ಕೊಡ್ಡಿ ಅಂತಿಮ ಫಲಿತಾಂಶವನ್ನು ಒಂದು ಪರಿಹಾರದಂತೆ ನಿರೂಪಿಸುವ ವೈಜ್ಞಾನಿಕ ವಿಧಾನ ಅನುಸರಿಸಿದ ನಾಟಕಕಾರ ಶೈಲೇಶಕುಮಾರ್‌ ಮೆಚ್ಚುಗೆಯಾದರು. ಸಂಭಾಷಣೆಗಳು ತುಂಬ ಕ್ರಿಸ್ಪ್‌ ಮತ್ತು ಸಟೈರಿಕ್‌ ಆಗಿವೆ. ಸಭ್ಯ, ದುಷ್ಟ, ವಂಚಕ, ಕಿರಾತಕ, ರೋಮ್ಯಾಂಟಿಕ್‌, ಫ್ಲರ್ಟ್‌.. ಎಲ್ಲವೂ ನಮ್ಮೊಳಗಿನ ಭಿನ್ನ ಶೇಡ್‌ಗಳೇ ಎನ್ನುವ ರೀತಿಯಲ್ಲಿ ಲೀಲಾಜಾಲವಾಗಿ ಅವನ್ನೆಲ್ಲ ನಿರೂಪಿಸಿದ ಆ ಇಬ್ಬರು ಹೆಣ್ಣು ಮಕ್ಕಳ ಅಭಿನಯ ಸಿಂಪ್ಲೀ ಸುಪರ್ಬ್‌. ರಂಗವಿನ್ಯಾಸ ಮತ್ತು ದೃಶ್ಯ ಜೋಡಣಾ ಶೈಲಿಯನ್ನು ಕೊಂಚ ಪಾಲಿಶ್‌ ಮಾಡಿಕೊಂಡರೆ ಪ್ರಯೋಗವನ್ನು ಮತ್ತಷ್ಟು ಹದಗೊಳಿಸಬಹುದು. ಈಗಿನ ಸ್ಥಿತಿಯಲ್ಲಿಯೂ ಇದೊಂದು ಉತ್ತಮ ಪ್ರಯೋಗ.
(ಅವತ್ತು ಸಂಜೆ ರಂಗದ ಮೇಲೆ ಮಾತನಾಡಿದ್ದರ ವಿಸ್ತೃತ ರೂಪವಿದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ