ವಿಷಯಕ್ಕೆ ಹೋಗಿ

ಹ್ಯಾಪಿ ಮೇರಿ ಕ್ರಿಸ್ಮಸ್..

ಕ್ರಿಸ್ ಮಸ್ ಅಂದರೆ ಪಶ್ಚಿಮದ ದೇಶಗಳಲ್ಲಿ ಕ್ರೈಸ್ತ ಜಗತ್ತು. ಇಂಡಿಯಾದಲ್ಲಿ ಅದೊಂದು ಧಾರ್ಮಿಕ ಆಚರಣೆ ಅಲ್ಲ. ಪ್ರೀತಿ, ಸ್ನೇಹ, ಸೌಹಾರ್ದತೆಯ ಸಂಭ್ರಮ. ಡಿಸೆಂಬರ್ 24ರಿಂದಲೇ ಕೇಕ್ ಸುಗ್ಗಿ ಶುರುವಾಗಿಬಿಡುತ್ತದೆ. ಬೆಂಗಳೂರಿನ ನೀಲಗಿರಿಸ್ ಕೇಕ್, ಕೇಕ್ ಶೋ.. ಕ್ರೈಸ್ತೇತರರೇ ಜಾಸ್ತಿ ಇರುವ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ, ಬ್ರಿಗೇಡ್ ರೋಡ್, ಪ್ರತಿ ಶಾಪಿಂಗ್ ಮಾಲುಗಳಲ್ಲಿ ಕ್ರಿಸ್ ಮಸ್ ಕಳೆಕಟ್ಟುತ್ತದೆ. ಬೆಳಕಿನ ಭವ್ಯತೆ, ಬಣ್ಣ ಬಣ್ಣದ ಸ್ಟಾರ್, ಅಬ್ಬರದ ಸಂಗೀತ... ಥೇಟು ಗಣಪನ ಹಬ್ಬದಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಹೌದು ಅಷ್ಟಕ್ಕೂ ಇಂಡಿಯಾ ತುಂಬ ಕ್ರೈಸ್ತರೇ ತುಂಬಿಕೊಂಡಿದ್ದಾರಾ! ಎಂದು ಪಶ್ಚಿಮದ ಕ್ರೈಸ್ತರೂ ನಾಚುವಂಥ ಕ್ರಿಸ್ ಮಸ್ ಇಲ್ಲಿ ವಿಜೃಂಭಿಸುತ್ತದೆ.
ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜಿನಲ್ಲಿ ನಾನು ಪದವಿ ಓದುತ್ತಿದ್ದಾಗ ಕ್ರಿಸ್ ಮಸ್ ಬಂತೆಂದರೆ ನಮಗೆಲ್ಲ ಈವೆಂಟು, ರಜಾಕಾಲ. ನಾನೂ ಕಾಲೇಜಿನ ಗ್ರೂಪ್ ಸಾಂಗ್ ಟೀಂನಲ್ಲಿ ಹಾಡುಗಾರನಾಗುತ್ತಿದ್ದೆ. ಎಲ್ಲ ಚರ್ಚ್ ಸಂಗೀತದ ಧುನ್ ಗಳೇ. ಕೆಲ ಕ್ರೈಸ್ತ ಹುಡುಗರು ನನ್ನನ್ನು ಅದೆಷ್ಟು ಬಾರಿ ಪಿಯಾನೊ, ವಯೊಲಿನ್, ಗಿಟಾರ್ ಕಲಿಸ್ತೀನಿ ಬಾ ಎಂದು ಗೋಗರೆಯುತ್ತಿದ್ದರು. ಅದರಲ್ಲಿನ ಕೆಲ ಗೆಳೆಯರು ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಪಾದ್ರಿಗಳಾಗಿದ್ದಾರೆ. ಮ್ಯಾಡ್ಸ್ MADS ಎನ್ನುವ ನಮ್ಮ ಗೆಳೆಯರ ಗುಂಪಿನ ಮೊದಲ  ಅಕ್ಷರ M ಅಂದರೆ ಮ್ಯಾಥ್ಯು ನಮ್ಮ ಅಕ್ಕರೆಯ ಮಿತ್ರ. ಆತ ಬಹುಶಃ ಎಲ್ಲಾ ಇನಸ್ಟ್ರುಮೆಂಟ್ಸ್ ನುಡಿಸಬಲ್ಲ ನಿಪುಣನಾಗಿದ್ದ. ಒಳ್ಳೆಯ ಮಾತುಗಾರ, ಪೇಂಟರ್ ಕೂಡ. ಅವನಿಂದ ಕ್ರೈಸ್ತರ ಹಲವು ವಿಷಯಗಳು ನಮಗೆ ಪರಿಚಯವಾಗಿದ್ದವು. ಕ್ರಿಸ್ ಮಸ್ ಬಂದಾಗೆಲ್ಲ ಅವನ ಜತೆ ನಾವೆಲ್ಲ ಕೇಕ್ ಹಂಚಿಕೊಂಡ ನೆನಪು ಈಗಲೂ ಹಸಿರಾಗಿದೆ. ಈ ಸಲವೂ ತುಂಬ ಸ್ಪೇಶಲ್ ಫ್ರೆಂಡ್ ಜತೆ ತುಂಬ ವಿಶಿಷ್ಠವಾಗಿ ಕೇಕ್ ಕತ್ತರಿಸಿ ಕ್ರಿಸ್ ಮಸ್ ಸವಿದೆ. ಪ್ರೀತಿ ಹಂಚಿಕೊಂಡೆ.
ಜೀಸಸ್ ನಲ್ಲಿ ನನದೊಂದು ಮನವಿ:
ಜೀಸಸ್ ನೀನೊಬ್ಬ ಪ್ರವಾದಿ. ಕ್ರೈಸ್ತರಷ್ಟೇ ಅಲ್ಲ, ಮುಸಲ್ಮಾನರೂ ನಿನ್ನ ಈಸಾ ಅಲೆ ಸಲಾಂ ಎಂದು ಒಪ್ಪಿಕೊಳ್ಳುತ್ತಾರೆ. ಮತ್ತೆ ಇಡೀ ಜಗತ್ತೇ ಒಪ್ಪಿಕೊಂಡಿದೆ ನಿನ್ನ. ಇಂಡಿಯಾ ಕೂಡ. ನಿನ್ನ ಜತೆ ನನಗೇನೂ ತಕರಾರಿಲ್ಲ. ಸಿಕ್ಕಾಪಟ್ಟೆ ಡಿಮ್ಯಾಂಡುಗಳಿವೆ. ಅವನ್ನೆಲಾ ಕಿವಿಬಿಚ್ಚಿ ಕೇಳಿಸಿಕೊಳ್ಳೋದಾದರೆ ಹೇಳ್ತಿನಪ್ಪಾ... (ಕಳೆದ ರಂಜಾನ್ ನಲ್ಲಿ ಅಲ್ಲಾಗೂ ಇಂಥದೇ ದುವಾ ಮಾಡಿದ್ದೆ)
ಈ ಸಲ ಜಗತ್ತಿಗೆ ನಿನ್ನ ಗಿಫ್ಟ್ ಏನು? ಎಂದು ಪ್ರೀತಿಯಿಂದ ಕೇಳೋಣ ಅನಿಸುತ್ತಿದೆ.
ನಿನ್ನ ಅನುಯಾಯಿಗಳು ಜಗತ್ತಿನ ತುಂಬ ಬಾಂಬು, ಯುದ್ಧಗಳನ್ನು ಶಾಂತಿ ಹೆಸರಲ್ಲೇ ಪ್ರತಿಪಾದಿಸುತ್ತಿದ್ದಾರೆ. ನಿನ್ನ ಬಹುವಾಗಿ ಅಪ್ಪಿಕೊಂಡ ಅಮೆರಿಕನ್ನರು ಜಗತ್ತಿನ ಶಾಂತಿ, ಸಂಪತ್ತಿಗೆ ಕನ್ನ ಹಾಕುವ ಕೆಲಸವನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಈ ಯುದ್ಧಕೋರರಿಗೆ ಸದ್ಬುದ್ಧಿ ಕೊಡುವಿಯಾ..
ಇಂಡಿಯಾದಲ್ಲಿ ಮುಗ್ಧ ಮಗುವನ್ನೇ ಬಲಿಕೊಡುವಂಥ ಅನಿಷ್ಠರು ಈಗಲೂ ಇದ್ದಾರೆ. ಅವರಿಗೆ ಸದ್ಗತಿ ತೋರಿಸುತ್ತಿಯಾ... ಯೋಚಿಸು.
ಹೆಣ್ಣು-ಗಂಡು ದೇವರ ಸನ್ನಿಧಾನದಲ್ಲಿ ಸಮಾನರು ಎನ್ನುವ ನಿನ್ನ ಬೋಧನೆಯನ್ನು ಪುನರುಚ್ಛರಿಸುತ್ತಲೇ ಅವರಿಬ್ಬರನ್ನು ಪ್ರತ್ಯೇಕ ದ್ವೀಪವನ್ನಾಗಿಸಿ ವಸ್ತುಗಳ ಮೋಹ ಅಂಟಿಸುತ್ತಿರುವ ಮಾರುಕಟ್ಟೆ ಬುದ್ಧಿಗೆ ತಕ್ಕ ಶಾಸ್ತಿ ಮಾಡಿಸ್ತಿಯಾ ನೋಡು...
ಹಬ್ಬ ಎಂದರೆ ಬರಿಯ ವ್ಯಾಪಾರ, ದೇವರೆಂದರೆ ಭಯ ಹುಟ್ಟಿಸುವ ಮಂದಿಗೆ ನೀನೇ ದಾರಿ ತೋರಿಸ್ತಿಯಾ..
ಅನ್ಯ ಧರ್ಮದ ಬಗ್ಗೆ ನಿನ್ನ ಹೆಸರಲ್ಲಿ ಪ್ರತ್ಯೇಕ ಜಗತ್ತನ್ನೇ ರೂಪಿಸಿಕೊಂಡಂತಿರುವ ಮತಾಂಧ ಅನುಯಾಯಿಗಳು ವೆಬ್, ಬ್ಲಾಗುಗಳು, ಮೀಡಿಯಾ ಮೂಲಕ ದ್ವೇಷ ಹರಡುತ್ತಿರುವುದರ ಬಗ್ಗೆ ಏನಾದರೂ ಮಾಡುತ್ತಿಯಾ...
ಈಗಲೂ ಹಿಡಿ ಅನ್ನಕ್ಕಾಗಿ ದೇಹ ಮಾರಿಕೊಳ್ಳುವವರಿದ್ದಾರೆ. ದೇಹದ ಬಂಡವಾಳದಲ್ಲೇ ಬದುಕು ಸಾಗಿಸುವವರೂ ಇದ್ದಾರೆ. ಇವರಿಗೆಲ್ಲ ಸದ್ಬುದ್ಧಿ ಕೊಡು ಎಂದು ಪ್ರಾರ್ಥಿಸುತ್ತಿಯಾ...
 ಮಾರುದ್ದ ಬಟ್ಟೆಯಿಲ್ಲದೇ ಬೀದಿಗೆ ಬೀಳುವ ಅಸಂಖ್ಯರಿಗೆ ನೀನು ಮೈತುಂಬಾ ಹೊದ್ದುಕೊಂಡ ಅಷ್ಟೊಂದು ದೊಡ್ಡ ಬಟ್ಟೆಯಲ್ಲಿನ ಒಂದು ತುಂಡನ್ನಾದರೂ ಕೊಡಬಹುದಾ ನೋಡು...
ಇವೆಲ್ಲ ನಿಂಗೆ ಗೊತ್ತು. ನಿನಗೆ ಗೊತ್ತಿಲ್ಲದ್ದೇನಿದ್ದೀತು... ಕ್ರಿಸ್ ಮಸ್ ದಿನ ನಿನ್ನ ಮುಂದೆ ಕತ್ತರಿಸುವ ಅಸಂಖ್ಯ ಕೇಕ್ ಗಳಲ್ಲಿ ಅದೆಷ್ಟೊ ಬಡವರ ಹಸಿವಿಗೆ ಅನ್ನವಿದೆ! ನಿತ್ಯ ನಿನ್ನ ಮುಂದೆ ಸುಡುವ ಕ್ಯಾಂಡೆಲ್ ಗಳಲ್ಲಿ ಎಷ್ಟೊಂದು ಕತ್ತಲಿದೆ!.. ಬಡವರ ಮನೆಯಲ್ಲಿ ಬುಡ್ಡಿ ದೀಪಕ್ಕಿಂತ ಹೆಚ್ಚಾಗಿ ಅವರ ಹೊಟ್ಟೆ ಉರಿಯುತ್ತದೆ!! ಗೊತ್ತಲ್ಲ. ನಿನ್ನ ಅನುಯಾಯಿಗಳ ಹುಲಿಲೊಯ್ ಹುಲಿಲೊಯ್ ಎನ್ನುವ ನಿನಾದದಲ್ಲಿ ದೀನ ದಲಿತರ ಆರ್ತನಾದವೂ ಇದೆ...
ಇದೆಲ್ಲ ನಿನಗೆ ಗೊತ್ತಿದ್ದದ್ದೇ. ಆದರೂ ನಿನ್ನ ಕರ್ತನ ಬಳಿ ಮತ್ತೆ ಪ್ರೇಯರ್ ಮಾಡು ಪ್ಲೀಸ್.
ಐ ವಿಶ್ ಯು ಅಂಡ ಆಲ್ ಎ ಹ್ಯಾಪಿ ಮೇರಿ ಕ್ರಿಸ್ಮಸ್.
ಆಮೆನ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...