ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು.
ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್ ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ. ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗೆಯ ಮುಂಚೆ ಆಕೆ ಎದುರಿಸಿದ ಆತಂಕದ ಕ್ಷಣಗಳನ್ನು ಕಂಡವನು ನಾನು. ಹೆರಿಗೆಯ ನಂತರ ಆಕೆ ಅತ್ಯಂತ ಕೇರ್ ಯುನಿಟ್ ನಲ್ಲಿ ನಿರಾಳವಾಗಿ, ಹೊಸ ಜೀವವೊಂದಕ್ಕೆ ಜನ್ಮವಿತ್ತ ಖುಷಿ ಅನುಭವಿಸುತ್ತ, ಹೆಮ್ಮೆಪಡುತ್ತ ಮಲಗಿದ್ದಾಳೆ ಎಂದು ಆಕೆಯ ಗಂಡ ಖಾನ್ ಸಾಹೇಬರು ಹೇಳಿದರು. ಜೀ ಹುಜೂರ್ ಎಂದು ತಲೆಯಲ್ಲಾಡಿಸಿ ನಿಂತುಬಿಟ್ಟೆ. ಅವಳ ಬಳಿಗೆ ನಾವೆಲ್ಲ ಹೋಗುವುದಕ್ಕೆ ಅನುಮತಿಯೇ ಇಲ್ಲ. ಆದರೆ ಆಗಷ್ಟೇ ಕಣ್ತೆರೆದ ಮಗುವನ್ನು ಅದರಪ್ಪ ಟ್ರಾಲಿಯಲ್ಲಿ ತಂದು ನನಗೂ ದರ್ಶನ ಮಾಡಿಸಿದರು. ಕಣ್ಣುಗಳ ಜತೆ ಮನಸೂ ತುಂಬಿಬಂತು. ಅದರಮ್ಮನ ಕಂಡು ಒಂದು ದಿಲ್ ಪೂರ್ವಕ ಸೆಲ್ಯುಟ್, ವಿಶ್ ಮಾಡಬೇಕು, ಒಂದು ಹಗ್ ಮಾಡಬೇಕೆಂದುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ಆಕೆ ಇನ್ನು ಮನೆ ಸೇರುವುದು ನಾಲ್ಕು ದಿನಗಳ ನಂತರವೇ.
ನಾನಿಲ್ಲಿಗೆ ಬಂದ ಸಮಯ ಸಾರ್ಥಕವಾಯ್ತು. ಮತ್ತೆ ಮರಳಿ ನಮ್ಮ ನೆಲ ತುಳಿಯುವ ಸಮಯವೂ ಬಂದೇಬಿಟ್ಟಿತು. ದೇಶ ನಮ್ಮಪ್ಪಂದಲ್ಲವಲ್ಲ. ಒಂದು ವಾರ ಮರುಪ್ರಯಾಣದ ಟಿಕೆಟ್ ಪೋಸ್ಟಪೋನ್ ಮಾಡಬಹುದಿತ್ತು. ಆಗಲಿಲ್ಲ. ಇಲ್ಲಿ ಕಂಡ ಮೋಹಕ ಜಗತ್ತು, ಪಡೆದ ಅನುಭವ ಮಹತ್ತದ್ದೇ. ನನಗೆ ಇದನ್ನು ಮಿಸ್ ಮಾಡಿಕೋತಿದಿನಿ ಅನಿಸೋದೇ ಇಲ್ಲ. ಆದರೆ, ತಂಗಿಗೊಂದು ತಾಯ್ತನದ ಸಂಭ್ರಮಕ್ಕೆ ಅಭಿನಂದನೆ ಸಲ್ಲಿಸಿ ಹಗ್ ಮಾಡಲಾಗಲಿಲ್ಲ, ಸೆಲ್ಯೂಟ್, ವಿಶ್ ಮಾಡಲಾಗಲಿಲ್ಲ. ಫೋನಲ್ಲಿ ಅದೆಲ್ಲ ಮಾಡಿದೆ. ಮನಸು ತುಂಬಲಿಲ್ಲ. ಆ ತಾಯಿಯ ಸ್ಪರ್ಶ ನನಗೆ ಈ ಸಂದರ್ಭದಲ್ಲಿ ಸಿಕ್ಕಲಿಲ್ಲ ಆ ನೋವು ನನ್ನ ಕಾಡುತ್ತಲೇ ಇರುತ್ತದೆ. ಹೊಕ್ಕಳುಬಳ್ಳಿ ಕತ್ತರಿಸುವುದಕ್ಕೆ ಮುಂದಾದ ವೈದ್ಯರ ಕತ್ತರಿಯನ್ನೇ ಹಿಡಿದೆಳೆದನಲ್ಲ ಈ ಧೀರ, ಎಂಥ ದೊಡ್ಡ ಸಂದೇಶ ಕೊಟ್ಟುಬಿಟ್ಟ ಈ ಜೀವಜಗತ್ತಿಗೆ! ಇವ ನನ್ನ ದಿಲ್ ಗಿಳಿದುಬಿಟ್ಟ. ಆ ಕೈಗಳನ್ನೊಮ್ಮೆ ಮುಟ್ಟಿದೆ. ಹಣೆಗಿಟ್ಟುಕೊಂಡೆ, ತುಟಿಗಳಿಂದ ಮುದ್ದಿಸಿದೆ. ಅವನ ಕಿವಿಯಲ್ಲಿ ಹೇಳಿದೆ, ಏಯ್ ಧೀರ, ನಾ ಹೋಗಿ ಬರುವೆ, ಈ ಹೆಮ್ಮೆಯ ಕೈಗಳಿಂದ ಒಮ್ಮೆ ನನ್ನ ಪರವಾಗಿ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ...
ಕಾಮೆಂಟ್ಗಳು