ವಿಷಯಕ್ಕೆ ಹೋಗಿ

‘ಇಜಾಜತ್‘ ಒಂದು ಅದ್ಭುತ ಪ್ರೇಮ ಕಾವ್ಯ ಗುಲ್ಜಾರ್ ಗೆ ನನ್ನದೊಂದು ದಿಲ್ ಸೇ ಬಧಾಯೀ

ಅವನು ರೈಲಿನಿಂದ ಇಳಿದ. ಮಳೆ ಸುರಿಯುತ್ತಿದ್ದುದರಿಂದ ಸ್ಟೇಷನ್ ನ ವೇಟಿಂಗ್ ರೂಂ ಪ್ರವೇಶಿಸಿದ. ಆಕೆ ಅಲ್ಲಿ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕೂತಿದ್ದಾಳೆ. ಅನಿರೀಕ್ಷಿತ ಭೇಟಿಯಿಂದ ಇಬ್ಬರಿಗೂ ಶಾಕ್. ಅರೇ ನೀನಿಲ್ಲಿ!, ಅಂತೂ ಸಿಕ್ಕೆಯಲ್ಲಾ, ಥ್ಯಾಂಕ್ ಗಾಡ್ ಎಟ್ ಲಾಸ್ಟ್ ವಿ ಆರ್ ಮೀಟಿಂಗ್ ನೌ... ಎನ್ನುವ ಭಾವಗಳು ಪೈಪೋಟಿಯಂತೆ ಮನದೊಳಗೆ ಪುಟಿದೇಳುತ್ತಿವೆ. ಇಬ್ಬರಲ್ಲೂ. ಆಕೆ ಮುಖ ಮುಚ್ಚಿಕೊಳ್ಳಲು ಯತ್ನಿಸಿ ಸೋಲುತ್ತಾಳೆ. ಅವನದು ಮತ್ತದೇ ಬ್ರಾಡ್ ಸೆನ್ಸ್. ಹೊರಗೆ ಮಳೆ, ಮಿಂಚು. ಇಬ್ಬರ ನಡುವೆ ಬಾಳಿ ಬದುಕಿದ ಪ್ರೇಮಕಾವ್ಯವೊಂದು ಬಿಚ್ಚಿಕೊಳ್ಳತೊಡಗುತ್ತದೆ.
* * *
ಇವನಿಗೆ ಫೊಟೊಗ್ರಫಿಯಲ್ಲಿ ಎಂಥದೋ ಒಂದು ಬಿಸಿನೆಸ್. ಅವನ ಪ್ರೀತಿಯ ತಾತ ಒಂದು ಹುಡುಗಿಯನ್ನು ಇವನಿಗೆಂದೇ ಗೊತ್ತು ಮಾಡಿ ಮದುವೆಗೂ ಸಿದ್ಧಗೊಳಿಸುತ್ತಾನೆ. ಇಂದು ನಾಳೆ ಎನ್ನುತ್ತ ಹೇಗೂ ಸಾಗಹಾಕಲೆತ್ನಿಸಿ ಸೋಲುವ ಇವನು ತಾನೊಂದು ಹುಡುಗಿಯನ್ನು ಪ್ರೀತಿಸಿದ ವಿಷಯ ಪ್ರಸ್ತಾಪಿಸಿಬಿಡುತ್ತಾನೆ. ಆಕೆ ಆಧುನಿಕ ಸ್ತ್ರೀ ಸಂವೇದನೆಯ ಹುಡುಗಿ. ಅಂಥದೇ ಹೆಣ್ಣೊಂದರ ಹಂಬಲದಲ್ಲಿದ್ದ ತನಗೆ ಅವಳೇ ತಕ್ಕವಳು ಎಂದೆಲ್ಲ ಹೇಳಿಬಿಡುತ್ತಾನೆ. ಅವಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾನೆ. ಆದರೆ ಅವಳೀಗ ನಾಪತ್ತೆ. ಪ್ರೇಮ ಕಾವ್ಯವೊಂದನ್ನು ಬರೆದಿಟ್ಟು ಮಾಯವಾಗಿದ್ದಾಳೆ.

 ಕಡೆಗೆ ಅವನು ತಾತ ನೋಡಿದ ಹೆಣ್ಣನ್ನೇ ಮದುವೆಯಾಗುತ್ತಾನೆ. ಒಂದು ಸರಳ, ಸಹಜ ಮತ್ತು ಸುಂದರ ಕುಟುಂಬ ಬದುಕು ಶುರುವಾಗುತ್ತದೆ.
  ಮುಂಚಿನ ಆಕೆ ಮತ್ತೆ ಇವನ ಬದುಕಿಗೆ ಬಂದು ನಿಲ್ಲುತ್ತಾಳೆ. ಬಿಟ್ಟರೂ ಬಿಡದೀ ಮಾಯೆ ಎನ್ನುವವಳಂತೆ. ಅವಳ ಉತ್ಕಟತೆಯನ್ನು ಹೇಗೋ ನಿಭಾಯಿಸಲು ನೋಡುತ್ತಾನೆ. ಇದ್ಯಾಕೋ ಹೆಂಡತಿಗೂ ಸರಿ ಹೋಗುವುದಿಲ್ಲ. ದೂರವಾಣಿಯಲ್ಲಿ ಕೂಗಾಡಿದ ಆಕೆಯ ಪ್ರೇಮ ಪರಾಕಾಷ್ಠೆಯಂಥ ನಿಲುವನ್ನು ತಾಳುವ ಮಾತು ಕೇಳಿಸಿಕೊಳ್ಳುವ ಹೆಂಡತಿ ದೂರ ಸರಿದು ನಿಲ್ಲುವ ನಿರ್ಧಾರಕ್ಕೆ ಬರುತ್ತಾಳೆ. ಮಾಯೆಯಂತೆ ಬಂದ ಅವಳು ಮತ್ತು ಇವನ ನಡುವಿನ ಭಾವ ಸಂಘರ್ಷಗಳು ಯಾವುದೇ ತಾರ್ಕಿಕ ಅಂತ್ಯಕ್ಕೆ ಬರುವ ಮುನ್ನವೇ ಆಕೆ ಮತ್ತೆ ಇವನ ತೊರೆದು ನಿಲ್ಲುತ್ತಾಳೆ. ಇವನು ತನ್ನ ಹೆಂಡತಿಯೊಂದಿಗಿನ ಮಧುರ ಸಂಬಂಧವನ್ನು ಕಳಕೊಂಡೆನಲ್ಲ ಎಂದು ಪರಿತಪಿಸುವವನಂತೆ ಅವಳಿಗೆ ಕಾಣಿಸತೊಡಗುತ್ತಾನೆ. ಇಂಥದೊಂದು ಸಣ್ಣ ಕಾರಣ ಸಾಕಲ್ಲವೇ ಉತ್ಕಟ ಪ್ರೇಮಿಗೆ! ವಿಹ್ವಲಗೊಳ್ಳುವ ಆಕೆ ತನ್ನಿಂದಲೇ ಇಷ್ಟೆಲ್ಲ ಆಯ್ತಲ್ಲ ಎಂದುಕೊಂಡು ತನ್ನ ವಾಹನದಲ್ಲಿ ವೇಗವಾಗಿ ಹೊರಟವಳು ಜಗತ್ತಿನಿಂದಲೇ ನಿರ್ಗಮಿಸುತ್ತಾಳೆ. ಅವಳನ್ನು ತಡೆಯುವ ಇವನ ಯತ್ನ ವಿಫಲವಾಗುತ್ತದೆ. ಅಷ್ಟರಲ್ಲಿ ಹೆಂಡತಿ ವಿಚ್ಛೇದನಕ್ಕೆ ನಿರ್ಧರಿಸಿ ತನ್ನಿಂದ ಇವನನ್ನು ಮುಕ್ತಗೊಳಿಸುತ್ತಾಳೆ.

* * *
ಇಷ್ಟೆಲ್ಲ ನಡೆದ ಘಟನೆಗಳು ಇಬ್ಬರ ನಡುವೆ ನೆನಪುಗಳ ಮಳೆಯಂತೆ ಸುರಿಯುತ್ತವೆ. ನೋಡುವ ನಮ್ಮೊಳಗೂ ನೆನಪುಗಳ ಜಡಿ ಮಳೆ... ಆಕೆಯ ಕಣ್ಣಾಲಿಗಳಲ್ಲಿ ನೀರು. ಇವನಿಗೆ ಮತ್ತೆ ಈಕೆ ಸಿಕ್ಕಳೆಂಬ ಸಂಭ್ರಮದಂಥ ನಿರೀಕ್ಷೆ. ಅಷ್ಟರಲ್ಲಿ ಅವಳ ಗಂಡ ತನ್ನಾಕೆಯನ್ನು ಕರೆದೊಯ್ಯಲು ವೇಟಿಂಗ್ ರೂಂಗೆ ಬರುತ್ತಾನೆ. ಅವಳ ಕಣ್ಣಾಲಿಗಳು ಹಸಿಗೊಂಡಿದ್ದನ್ನು ಕಾಣುತ್ತಾನೆ. ಅವಳ ಮುಖದಲ್ಲಿ ಮಡುಗಟ್ಟಿದ ದುಃಖವನ್ನು ಗಮನಿಸುತ್ತಾನೆ. ಓಹ್ ಇವನೇ ಇವಳ ಮೊದಲ ಗಂಡ ಎನ್ನುವ ಸತ್ಯಕ್ಕೆ ಆ ಕಣ್ಣ ಹನಿಗಳೇ ಸಾಕ್ಷಿಯೊದಗಿಸುತ್ತವೆ. ಆಕೆ ಹೊರಡುವಾಗ ಇವನ ಕಾಲಿಗೆರಗಿ ಕಡೆಯ ಸಲ ದೂರವಾಗಲು ಅಪ್ಪಣೆ ಕೊಡು, ಜತೆಗೆ ಕ್ಷಮಿಸಿಬಿಡು ಎನ್ನುವಂಥ ಭಾವದಲ್ಲಿ ಕೋರಿಕೆಯನ್ನಿಡುತ್ತಾಳೆ. ಅದೊಂದು ಗುಡ್ ಬೈ ಕೋರಿಕೆ. ಯಾವುದಕ್ಕೂ ನಿನ್ನ ಅಪ್ಪಣೆ ಇರಲಿ ಎನ್ನುವ ನೋವಿನ ಕೋರಿಕೆ ಅದು.
  ಗಂಡ-ಹೆಂಡತಿ ಸ್ಟೇಷನ್ ಹೊರ ನಡೆಯಲು ಹೆಜ್ಜೆ ಹಾಕುತ್ತಾರೆ. ದೂರಕ್ಕೆ ಸಾಗುತ್ತಲೇ ಆಕೆ ವಾಪಸ್ ನೋಡುತ್ತ ನಿಲ್ಲುತ್ತಾಳೆ. ಚಣ ಕಾಲ. ನಾನು ನಿನ್ನ ಬಿಟ್ಟು ಬದುಕುವ ಶಕ್ತಿಯನ್ನೇ ಹೊಂದಿದ್ದವಳಲ್ಲ. ಆದರೂ ನಿನ್ನ ಕಳಕೊಂಡ ಹಳವಂಡ ನನ್ನ ಜತೆಗೆ ಶಾಶ್ವತ ಎನ್ನುವಂಥ ಅರ್ಥದಲ್ಲಿ. ಈ ಬದಿಯಲ್ಲಿ ಇವನು ನಿಂತಿದ್ದಾನೆ. ಒಳಗಿನ ಒತ್ತಾಸೆಗಳೇ ಬತ್ತಿ ಹೋದವನಂತೆ. ಹಿಂಡನ್ನಗಲಿದ ಕೋಳಿ ಮರಿಯೊಂದು ತಾಯಿಯಿಲ್ಲದೇ ಚಡಪಡಿಸಿ ಚಿಂವ್ ಚಿಂವ್ ಎನ್ನುವಂತೆ.

* * *
ಪ್ರೀತಿ ಯಾರ ಅಪ್ಪಣೆಯನ್ನು ಕೇಳುವುದಿಲ್ಲ. ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಒಮ್ಮೆ ಅದರೊಳಕ್ಕೆ ಬಂದವರು ಅದರ ಅಪ್ಪಣೆಯನ್ನಷ್ಟೇ ಪಾಲಿಸುತ್ತ ನಡೆಯಬೇಕು. ಪ್ರೀತಿಯ ಅಲಿಖಿತ ಸಂವಿಧಾನದಲ್ಲಿ ನಿರಪರಾಧಿಗೆ ಸಾಕ್ಷಿಗಳಿಲ್ಲದೆಯೂ ಶಿಕ್ಷೆ ಜಾರಿಯಾಗಬಹುದು. ಬಾರಾ ಖೂನ್ ಮಾಫ್ ಕೂಡ ಆಗಬಹುದು.

1987ರಲ್ಲಿ ಬಂದ ‘ಇಜಾಜತ್‘ ಚಿತ್ರವನ್ನು ಕವಿ, ಚಿತ್ರ ನಿರ್ದೇಶಕ ಗುಲ್ಜಾರ್ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಗುಲ್ಜಾರ್ ಬರೆದ ಒಂದು ಹಾಡು ಇಡೀ ಚಿತ್ರದ ಮನೋಧರ್ಮವನ್ನೇ ಹೇಳಿಬಿಡುವಂಥದು. ಅದರ ಚಿತ್ರೀಕರಣವೂ ಅಷ್ಟೇ ಟಚೀ.
ಅನುರಾಧ ಪಟೇಲ್ ಡೋವ್ ಐಸ್, ಅದರಂಚಿನಲ್ಲಿ ಜಿನುಗುತ್ತಲೇ ಇರುವ ನೋವಿನ ಹನಿಗಳು... ಬ್ಯಾಕ್ ಆರ್ಕ್ ಲೈಟ್ ನಲ್ಲಿ ಹರವಿಕೊಂಡ ಆಕೆಯ ತಲಲೆಗೂದಲಿನ ಮಿಂಚು, ಡಾರ್ಕ್ ಅಂಡ್ ಲೈಟ್ ಶೇಡ ನಲ್ಲಿ ಒಂದು ಪ್ರೊಫೈಲ್ ...
ಹಿನ್ನೆಲೆಯಲ್ಲಿ-
‘ಮೇರಾ ಕುಛ್ ಸಾಮಾನ್, ತುಮ್ಹಾರೆ ಪಾಸ್ ಪಡಾ ಹೈ, 

ಸಾವನ್ ಕೆ ಕುಛ್ ಭೀಗೇ ಭೀಗೇ ದಿನ್ ರಖಾ ಹೈ 
ಔರ್ ಮೇರಿ ಏಕ್ ಖತ್ ಮೇ ಲಿಪಟೀ ರಾತ್ ಪಡೀ ಹೈ 
ವೋ ರಾತ್ ಭುಜಾ ದೋ, ಮೇರಾ ವೋ ಸಾಮಾನ್ ಲೌಟಾ ದೋ...‘ 
ಎನ್ನುವ ಹಾಡು...
ಹಾಯ್.. ಪ್ರೇಮ ಬದುಕನ್ನು ಕಳಕೊಂಡ ಪರಿಗೆ ಇದೆಂಥ ಹಳವಂಡದ ಭಾಷ್ಯ! ಮಡುಗಟ್ಟುವ ನೋವು ಸಿಟ್ಟಾಗಿ, ನೋವಾಗಿ, ಆಕ್ರೋಶವಾಗಿ ಪ್ರೀತಿಯಿಂದಲೇ ಸುರಿವ ಈ ಪರಿಗೆ ಎಂಥವನ ದಿಲ್ ಕೂಡ ತೊಯ್ದು ಹೋಗದೇನು!

ಏಕ್ ಅಕೇಲಿ ಛತ್ರಿ ಮೇ ಜಬ್ ಆಧೇ ಆಧೇ ಭೀಗ್ ರಹೆ ಥೆ, 

ಆಧೇ ಸುಖೇ ಆಧೇ ಗಿಲೇ, ಸುಖಾ ತೋ ಮೇ ಲೇ ಆಯೀ ಥೀ, 
ಗೀಲಾ ಮನ್ ಶಾಯದ್ ಬಿಸ್ತರ್ ಕೆ ಪಾಸ್ ಪಡಾ ಹೋ, 
ವೋ ಭಿಜವಾದೋ, ಮೇರಾ ವೋ ಸಾಮಾನ್ ಲೌಟಾ ದೋ...

ಒಂದೇ ಕೊಡೆಯಡಿ ಎರಡೂ ದೇಹಗಳು, ಅರ್ಧ ಮಳೆಗೆ ತಪ್ತ ಇನ್ನರ್ಧ ಬೆಚ್ಚಗೆ. ಆ ಬೆಚ್ಚನೆಯ ಭಾವನೆಯನ್ನು ನಾನ್ಹೊತ್ತು ತಂದಿದ್ದೇನೆ. ತಪ್ತ ಹೃದಯ ಮಾತ್ರ ಆ ಹಾಸಿಗೆಯ ದಿಂಬಿನ ಬಳಿ ಬಿದ್ದುಕೊಂಡಿದೆಯೇನೋ ನೋಡು. ಅದನ್ನೂ ಕಳಿಸಿಕೊಟ್ಟುಬಿಡೋ... ಸಾಕು ನಿನ್ನದೊಂದು ಅಪ್ಪಣೆ ಬೇಕಷ್ಟೇ ಕಣೋ... ಇವೆಲ್ಲ ಎಲ್ಲ ಎಲ್ಲ ನೆನಪುಗಳ ಒಮ್ಮೆ ಹೂತುಬಿಡುವೆ ಮತ್ತೆ ನಾನಲ್ಲೇ ಶಾಶ್ವತ ಒರಗಿ ಬಿಡುವೆ...
ಎನ್ನುವ ಅವಳ ಎದೆಯಾಳದಲ್ಲಿ ಪ್ರೇಮ ಅದೆಷ್ಟು ಆಳಕ್ಕೆ ಕೊರೆದುಕೊಂಡಿತ್ತೋ ತಾವಿಗಾಗಿ!

ಅದೆಷ್ಟು ತೊಯ್ದ ರಾತ್ರಿಗಳು ಇಬ್ಬರ ನಡುವೆ! ಆಗೆಲ್ಲ ಅದೆಷ್ಟು ಶರತ್ಕಾಲದ ಎಲೆಗಳು ಉದುರಿಹೋದವೋ... ಒಣಗಿದ ಪ್ರತಿ ಎಲೆಗಳು ಗಾಳಿಗುದುರುವಾಗ ಎದೆಯಲ್ಲಿ ಸರ ಸರನೇ ಹರಿದ ಆ ನೋವಿನ ಝರಿಗಳು ಅದೆಷ್ಟು ಸದ್ದು ಮಾಡಿದವೋ...
ದಿಲ್ ಟೂಟನೇಕಿ ಆವಾಜ್ ನಹೀ ಆತೀ, 

ಲೇಕಿನ ಉಸ್ ಸೇ ಖಯಾಮತ್ ಆ ಜಾತೀ ಹೈ...’ 
ಎನ್ನುವುದು ತಮಾಷೆಗಲ್ಲ. ಅಲ್ಲವೇ?

ಇಡೀ ಚಿತ್ರದ ಈ ಪ್ರೇಮ ಕಾವ್ಯವನ್ನು ಅಕ್ಷರಶಃ ಬದುಕಿದ ನಸೀರುದ್ದೀನ್ ಶಾ, ರೇಖಾ ಮತ್ತು ಅನುರಾಧ ಪಟೇಲ್ ಅಭಿನಯದ ಭಾವೋತ್ಕಟತೆ ಮರೆತೇನಂದರೂ ಮರೆಯಲಿ ಹ್ಯಾಂಗ? ಎಸ್.ಡಿ. ಬರ್ಮನ್ ಸಂಗೀತ, ಗುಲ್ಜಾರ್ ಹೃದಯದ ಪ್ರೇಮ ಕಾವ್ಯ ಹಾಯ್... ನಿಜಕ್ಕೂ ‘ಇಜಾಜತ್‘ ಚಿತ್ರ ಒಂದು ಅದ್ಭುತ ಪ್ರೇಮ ಕಾವ್ಯ. ಮತ್ತೆ ನೋಡಬೇಕೆನಿಸುತ್ತಿದೆ.
ಅಂದ ಹಾಗೆ ಗುಲ್ಜಾರ್ ಗೆ (12 ಏಪ್ರಿಲ್ 2014) ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಒಲಿದು ಬಂದಿದೆ. ದಿಲ್ ಸೇ ಬಧಾಯೀ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...