ವಿಷಯಕ್ಕೆ ಹೋಗಿ

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ


ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.
 ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ.
ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನನ್ನೊಳಗಿನ ಮನುಷ್ಯ ಅಂತಃಕರಣವನ್ನು ತಾಕಿದವು. ಚಿತ್ರ ಒಂದು ಮಟ್ಟಿಗೆ ಮಾನವೀಯ ನೆಲೆಯಲ್ಲಿಯೇ ಇದೆ.
 ಸಾಮೂಹಿಕ ಅತ್ಯಾಚಾರ ಪ್ರಕರಣದಂಥ ಎಳೆಯನ್ನಿಟ್ಟುಕೊಂಡು ನಿರ್ದೇಶಕರು ಲೀಲಾಜಾಲವಾಗಿ ಭಾವನಾತ್ಮಕ ಸಂಘರ್ಷವನ್ನು ಪರದೆಯ ಮೇಲೆ ಹರಡುತ್ತಾರೆ. ಹಲವು ದೃಶ್ಯಗಳಲ್ಲಿ ಅಂತಃಕರಣವಿದೆ. ಹದಗೆಡುತ್ತಿರುವ ಸಮಾಜದ ಬಗ್ಗೆ ವಿಷಾದವಿದೆ, ಆಕ್ರೋಶವಿದೆ.  ಮಾನವ ಸಹಜ ಎಡವಟ್ಟುಗಳು ಅತ್ಯಾಚಾರದಂಥ ಪೈಶಾಚಿಕ ಕೃತ್ಯಕ್ಕಿಳಿದಾಗ ಏನು ಮಾಡುವುದು? ಎನ್ನುವ ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರ ಮಾತ್ರ ಪ್ರತಿಹಿಂಸೆ! ಇದು ಚಿತ್ರದ ಬಹುದೊಡ್ಡ ಮಿತಿ.
 ಅಪರಾಧ ಕೃತ್ಯಗಳನ್ನು ತಡೆಯುವುದಕ್ಕೆ, ನಿಗ್ರಹಿಸುವುದಕ್ಕೆ ಪೊಲೀಸ್‌, ಕಾನೂನು  ವ್ಯವಸ್ಥೆ ಏನೋ ಇದೆ. ಅವೆಲ್ಲ ಅಸಹಾಯಕ ಅಥವಾ ಜಡಗೊಂಡು ಸೋತಿವೆ. ಹೀಗಾಗಿ ಮನುಷ್ಯ ಅನಿವಾರ್ಯವಾಗಿ ಸೇಡಿನ ಮನೋಭಾವಕ್ಕಿಳಿದುಬಿಡುತ್ತಾನೆ ಎನ್ನುವ ಸಹಜ ನಡಾವಳಿಯತ್ತಲೇ ನಿರೂಪಣೆ ಜಾರಿದ್ದರಿಂದ ಚಿತ್ರ ಮಾನವೀಯ ಪರಿಶೋಧಕ್ಕಿಂತ ವ್ಯವಸ್ಥೆಯ ವೈಫಲ್ಯಗಳ ನೆಪವಿಟ್ಟುಕೊಂಡು ಬೇರೆಯದೇ ಹಿಂಸೆಯತ್ತ ಫೋಕಸ್‌ ಮಾಡಿದೆ.
 ಮಲತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳು ಮತ್ತೊಂದು ಹೆಣ್ಣು ಜೀವದ ಮೇಲೆ ನಡೆದ ದೌರ್ಜನ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸೋಲುತ್ತಾಳೆ. ಹತಾಶಳಾಗುತ್ತಾಳೆ. ಅನ್ಯಾಯಕ್ಕೆ ಸಿಡಿದು ಕಾನೂನು ಕೈಗೆತ್ತಿಕೊಳ್ಳುತ್ತಾಳೆ. ಮಗಳ ಅತ್ಯಾಚಾರ ಮಾಡಿದ ಒಬ್ಬೊಬ್ಬರನ್ನು ಹುಡುಕಿ ಸೇಡು ತೀರಿಸಿಕೊಳ್ಳುತ್ತಾಳೆ. ಇದಿಷ್ಟೇ ಚಿತ್ರದುದ್ದಕ್ಕೂ ಮಿಂಚುತ್ತದೆ.
ದೃಶ್ಯ ಸಂಯೋಜನೆಯಲ್ಲಿ, ವಸ್ತುವಿನ ನಿರೂಪಣಾ ವಿಧಾನದಲ್ಲಿ ಕೊಂಚ ಹೊಸತನವಿದೆ. ಆದರೆ ತಾರ್ಕಿಕ ಅಂತ್ಯ ಕೊಡುವಾಗ ನಿರ್ದೇಶಕ ಮತ್ತದೇ ಪ್ರತೀಕಾರ, ಪ್ರತಿಹಿಂಸೆಯ ಮಾಮೂಲು ಜಾಡಿಗೆ ಸರಿದಿದ್ದಾರೆ.
 ಅತ್ಯಂತ ನಾಜೂಕಾಗಿ ಜನಪ್ರಿಯ ಧಾಟಿಯ ದೇಶಭಕ್ತಿ  ನೆಲೆಯಲ್ಲಿ ಅತ್ಯಾಚಾರದಂಥ ಕೃತ್ಯಗಳಿಗೆ ಪರಸಂಸ್ಕೃತಿಯಂಥ ಬಾಹ್ಯ ಪ್ರಚೋದನೆಗಳೇ ಕಾರಣ ಎಂದು ಜಾಣ್ಮೆಯೊಂದಿಗೆ ಆರೋಪಿಸುವುದು ಪ್ರಬುದ್ಧತೆಯೇ? ಚಿತ್ರದ ಕೇಂದ್ರ ವಸ್ತು ಅತ್ಯಾಚಾರ ಕೃತ್ಯ. ಅದಕ್ಕೆ ಪ್ರಚೋದನೆ ಅಥವಾ ಕಾರಣವಾಗುವುದು  ‘ವ್ಯಾಲೆಂಟೈನ್ಸ್‌ ಡೇ’ ಪಾರ್ಟಿ! ‘ವೆಸ್ಟರ್ನ್‌ ಕಲ್ಚರ್‌’ ಎನ್ನುವರ್ಥದಲ್ಲಿ ಧ್ವನಿಸುವ ಲವ್‌, ಪ್ರೇಮ ನಿವೇದನೆ! ತಿರಸ್ಕೃತಗೊಂಡ ಪರಿಣಾಮ ಹಿಂಸೆ. ಅದಕ್ಕೊಂದು ಪ್ರತಿ ಹಿಂಸೆ. ಇದಷ್ಟೇ ಸಮಸ್ಯೆ ಮತ್ತು ಪರಿಹಾರ ಎಂದುಕೊಂಡ ನಿರ್ದೇಶಕ ಮನುಷ್ಯನ ರಾಗ ದ್ವೇಷಗಳು, ಆಂತರಿಕ ಪ್ರಚೋದನೆಗಳಂಥ ಮಾನವೀಕ ವಿಜ್ಞಾನದ ಸೂಕ್ಷ್ಮಗಳಿಂದ ಹೊರಗೇ ನಿಂತು ಯೋಚಿಸಿದಂತಿದೆ.
 ಚಿತ್ರದ ಒಂದು ಹಂತದಲ್ಲಿ ಹುಡುಗಿ(ಆರ್ಯಾ)ಯನ್ನು ಕೆಣಕುವ ಮೋಹಿತ ಎನ್ನುವ ಹುಡುಗ ಪ್ರೇಮ ನಿವೇದನೆಯಲ್ಲಿ ಕಂಡ ಸೋಲನ್ನು ‘ಚಾರ್ಲ್ಸ್‌’ ಎನ್ನುವ ಗೆಳೆಯನೊಟ್ಟಿಗೆ ಹೇಳುತ್ತಾನೆ. ಅವನಿಗೆ ಮತ್ತೊಬ್ಬ ಸಾಥೀ ಡ್ರಗಿಸ್ಟ್‌ ಜಗನ್‌. ‘ಚಾರ್ಲ್ಸ್‌’ ಹೆಸರಿನ ಧ್ವನಿ, ಡ್ರಗಿಸ್ಟ್‌.. ಇದೆಲ್ಲ ಏನನ್ನು ಸೂಚಿಸುತ್ತದೆ?
  ತಿರಸ್ಕಾರಕ್ಕೊಳಗಾದ ಅವಮಾನಕ್ಕೆ ಇವರೆಲ್ಲ ಹುಡುಗಿಯನ್ನೇ ಅಪಹರಿಸುತ್ತಾರೆ. ಅದಕ್ಕೆ ವಾಚ್‌ಮನ್‌ ನೆರವಾಗುತ್ತಾನೆ. ಈ ಎಲ್ಲರ ಜೊತೆ ಆ ಪ್ರೇಮಿ ಸಾಗುವ ಕಾರಿನಲ್ಲಿ ತನ್ನ ಪ್ರಿಯತಮೆಯನ್ನೇ ಎಲ್ಲರೊಟ್ಟಿಗೆ ಹಂಚಿಕೊಳ್ಳುತ್ತಾನೆ. ಅತ್ಯಾಚರ ನಡೆಸಿ ಚರಂಡಿಗೆಸೆಯುತ್ತಾರೆ. ಅತ್ಯಾಚಾರಿಗಳ ಪೈಕಿ ಚಾರ್ಲ್ಸ್‌, ವಾಚಮನ್‌ ಮತ್ತು ಜಗನ್‌ರನ್ನು ನಿರ್ದೇಶಕರು ಡಿಕೆ ಎನ್ನುವ ದೇಸಿ ಡಿಟೆಕ್ಟಿವ್‌ ಒಬ್ಬನ ನೆರವಿನಿಂದ ಹುಡುಗಿ ತಾಯಿಯ (ದೇವಿಕಾ) ಆಕ್ರೋಶ ಮುಂದುಮಾಡಿ ಮುಗಿಸುತ್ತಾರೆ. ವಾಚಮನ್‌ ಮೇಲೆ ಸೇಡು ತೀರಿಸಿಕೊಳ್ಳಲು ಆರ್ಯಳ ತಾಯಿ ಒಂದಿಬ್ಬರು ಮಂಗಳಮುಖಿಯರ ನೆರವು ಪಡೆಯುತ್ತಾಳೆ. ಅವರಿಗೆ ಸುಪಾರಿ ಕೊಡುವ ದೃಶ್ಯವನ್ನು ನಿರ್ದೇಶಕರು ಸಂಯೋಜಿಸಿದ ರೀತಿ ಅವರ ಅಂತರಂಗದ ಕಿಚ್ಚನ್ನು ಅನಾವರಣಗೊಳಿಸುತ್ತದೆ.
 ಎಲ್ಲ ತಾಯಂದಿರು ತಮ್ಮ ಹೆಣ್ಣು ಮಕ್ಕಳು ಬಾಹ್ಯ ಪ್ರಚೋದನೆಗೊಳಗಾಗುವುದನ್ನು ತಡೆಯಲು ಮತ್ತವರ ಮೇಲೆ ನಡೆವ ಹಲ್ಲೆಗಳನ್ನು ನಿಗ್ರಹಿಸಲು ಚಂಡಿ, ದುರ್ಗೆಯ ಅವತಾರ ತಾಳಬೇಕು ಎನ್ನುವ ಹಾಗೆ ದೇವಿಕಾ ಆ ಇಬ್ಬರು ಮಂಗಳಮುಖಿಯರನ್ನು ಕಾಣಲು ಹೊರಡುತ್ತಾಳೆ. ಕ್ಯಾಮೆರಾ ಪ್ಯಾನ್‌ ಆಗುತ್ತಾ ಆಕಾಶದಿಂದಲೇ ಭಾರಿ ಉದ್ದಕ್ಕೆ ಇಳಿಬಿಟ್ಟಂತೆನಿಸುವ ಅರಿಷಿಣ ಮತ್ತು ಕುಂಕುಮ ಬಣ್ಣದ ಅಸಂಖ್ಯ ಬಟ್ಟೆಗಳ ಮೇಲೆ ಸಾಗುತ್ತದೆ. ಜೊತೆಗೆ ರಣೋತ್ಸಾಹದ ಮೂಡ್‌ ಸೃಷ್ಟಿಸುವ ರೆಹಮಾನ್‌ ಹಿನ್ನೆಲೆ ಸಂಗೀತ. ಇದರ ನಡುವಿಂದ ಆ ಇಬ್ಬರು ಮಂಗಳಮುಖಿಯರು ಎದ್ದು ಬರುತ್ತಾರೆ. ಕೊಲೆಗೆ ಸುಪಾರಿ ಪಡೆಯುತ್ತಾರೆ. ವಾಚಮನ್‌  ಕುಡಿತದಂಥ ಬಾಹ್ಯ ಪ್ರಚೋದನೆಗಳಲ್ಲಿ  ಲೀನವಾಗಿದ್ದ ಸಂದರ್ಭವನ್ನು ಬಳಸಿಕೊಳ್ಳುವ ಮಂಗಳಮುಖಿಯರು ಆತನ ರಾಸಲೀಲೆಯತ್ತ ಸೆಳೆದು ಮರ್ಮಾಂಗವನ್ನೇ ಕತ್ತರಿಸಿಹಾಕುತ್ತಾರೆ. ಈತನಕ ಸಮಾಜದಲ್ಲಿ ಇದ್ದ ಮೌನ ಅಥವಾ ನ್ಯೂಟ್ರಲ್‌ ಮನೋಭಾವನೆಯನ್ನು ಬಡಿದೆಬ್ಬಿಸಿ ಸಂಘರ್ಷಕ್ಕೆ ಅಣಿಗೊಳಿಸುವ ಚಿತ್ರಣ ಕಟ್ಟಿಕೊಡುವ ಯತ್ನವಿದು.
 ಇಷ್ಟೆಲ್ಲ ಅವಾಂತರಗಳಿಗೆ ಮೂಲ ಕಾರಣಕರ್ತ ಅತ್ಯಾಚಾರಿ ಮೋಹಿತ್‌ನನ್ನು ನಿರ್ದೇಶಕ ಬರಿ ಜೈಲಿಗಟ್ಟುತ್ತಾರೆ. ಅಂದರೆ ಮೋಹಿತ ಅಮಾಯಕ. ಆತನ ಪ್ರೇಮ ನಿವೇದನೆ ಸಹಜ. ಅವನು ನಮ್ಮ ನಡುವಿನ ಹುಡುಗ. ಆದರೆ ಆತನ ಸುತ್ತ ಇರುವವರು ಚಾರ್ಲ್ಸ್‌, ಡ್ರಗಿಸ್ಟ್‌ ಜಗನ್‌ನಂಥ ಲಂಪಟರು. ಇವರೆಲ್ಲ ಸೇರುವ ಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ ಪಾರ್ಟಿಯಂಥವು ಬಾಹ್ಯ ಪ್ರಚೋದನಾ ಎಲಿಮೆಂಟ್‌ಗಳು. ಮೋಹಿತ ಇಂಥವುಗಳ ಮೋಹಕ್ಕೊಳಗಾದವ. ಸಹವಾಸ ದೋಷದಲ್ಲಿ ದಾರಿ ತಪ್ಪಿದವ ಅಷ್ಟೇ. ವಿಚಾರಣೆ, ಕೌನ್ಸಿಲಿಂಗ್‌ ಮೂಲಕ ಅವನ ಸರಿ ದಾರಿಗೆ ತರಬಹುದು ಎಂದರ್ಥವೋ... ಹೇಯ ಕೃತ್ಯದ ಮೂಲ ಪುರುಷ ಮೋಹಿತ. ಮಾಡಿದ್ದು ಅತ್ಯಾಚಾರದಂಥ ಪರಮ ತಪ್ಪು. ಆದರೆ ಅದನ್ನು ಸರಿಪಡಿಸಬಹುದಾದ ಜುಜುಬಿ ತಪ್ಪು ಅಂದುಕೊಂಡರಾ ನಿರ್ದೇಶಕರು!
ಮನುಷ್ಯನೊಳಗಿನ ರಾಗ ದ್ವೇಷಗಳು ಪೈಶಾಚಿಕ ಸ್ವರೂಪ ಪಡಕೊಂಡರೆ ನಡೆಯುವ ಅನಾಹುತಗಳು ಇಡೀ ಮನುಷ್ಯ ಕುಲ ತಲೆ ತಗ್ಗಿಸುವಂತಾಗುತ್ತವೆ ಎನ್ನುವ ಎಚ್ಚರ ಮುಖ್ಯ. ಆದರೆ ಚಿತ್ರದ ಉದ್ದೇಶ ಪರಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ, ಡ್ರಗ್ಸ್‌ ಮತ್ತಿತರ ಬಾಹ್ಯ ಪ್ರಚೋದನೆಗಳನ್ನು ದೂಷಿಸಿ ದುಷ್ಕೃತ್ಯ ನಡೆಸಿದವರ ಸಂಹರಿಸುವ ನೆಪದಲ್ಲಿ ಪ್ರತೀಕಾರದ ತೋರುಬೆರಳನ್ನು ಇನ್ನೆತ್ತಲೋ ತಿರುಗಿಸಿದಂತೆನಿಸುತ್ತದೆ. ಹೀಗೆ ಅಂತರಂಗವನ್ನು ಕತ್ತಲಲ್ಲಿಟ್ಟುಕೊಂಡು ಬಾಹ್ಯವನ್ನಷ್ಟೇ ದೂಷಿಸುವ ಪ್ರತೀಕಾರದ ಧ್ವನಿಯೇ ಇಡೀ ಚಿತ್ರದ ಜೀವಾಳವಾಗಿದ್ದು ಅತ್ಯಾಚಾರದಷ್ಟೇ ಅಮಾನುಷ.
 ತುಂಬ ವರ್ಷಗಳ ನಂತರ ನಟನೆಗೆ ಮರಳಿದ ಶ್ರೀದೇವಿ ಅಭಿನಯ ಅತ್ಯಂತ ಪರಿಣಾಮಕಾರಿ. ನವಾಜುದ್ದೀನ್‌ ಸಿದ್ದಿಕಿ ಎಂದಿನಂತೆ ಅದ್ಭುತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...