ವಿಷಯಕ್ಕೆ ಹೋಗಿ

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ


ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.
 ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ.
ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನನ್ನೊಳಗಿನ ಮನುಷ್ಯ ಅಂತಃಕರಣವನ್ನು ತಾಕಿದವು. ಚಿತ್ರ ಒಂದು ಮಟ್ಟಿಗೆ ಮಾನವೀಯ ನೆಲೆಯಲ್ಲಿಯೇ ಇದೆ.
 ಸಾಮೂಹಿಕ ಅತ್ಯಾಚಾರ ಪ್ರಕರಣದಂಥ ಎಳೆಯನ್ನಿಟ್ಟುಕೊಂಡು ನಿರ್ದೇಶಕರು ಲೀಲಾಜಾಲವಾಗಿ ಭಾವನಾತ್ಮಕ ಸಂಘರ್ಷವನ್ನು ಪರದೆಯ ಮೇಲೆ ಹರಡುತ್ತಾರೆ. ಹಲವು ದೃಶ್ಯಗಳಲ್ಲಿ ಅಂತಃಕರಣವಿದೆ. ಹದಗೆಡುತ್ತಿರುವ ಸಮಾಜದ ಬಗ್ಗೆ ವಿಷಾದವಿದೆ, ಆಕ್ರೋಶವಿದೆ.  ಮಾನವ ಸಹಜ ಎಡವಟ್ಟುಗಳು ಅತ್ಯಾಚಾರದಂಥ ಪೈಶಾಚಿಕ ಕೃತ್ಯಕ್ಕಿಳಿದಾಗ ಏನು ಮಾಡುವುದು? ಎನ್ನುವ ಪ್ರಶ್ನೆಗೆ ಅವರು ಕಂಡುಕೊಂಡ ಉತ್ತರ ಮಾತ್ರ ಪ್ರತಿಹಿಂಸೆ! ಇದು ಚಿತ್ರದ ಬಹುದೊಡ್ಡ ಮಿತಿ.
 ಅಪರಾಧ ಕೃತ್ಯಗಳನ್ನು ತಡೆಯುವುದಕ್ಕೆ, ನಿಗ್ರಹಿಸುವುದಕ್ಕೆ ಪೊಲೀಸ್‌, ಕಾನೂನು  ವ್ಯವಸ್ಥೆ ಏನೋ ಇದೆ. ಅವೆಲ್ಲ ಅಸಹಾಯಕ ಅಥವಾ ಜಡಗೊಂಡು ಸೋತಿವೆ. ಹೀಗಾಗಿ ಮನುಷ್ಯ ಅನಿವಾರ್ಯವಾಗಿ ಸೇಡಿನ ಮನೋಭಾವಕ್ಕಿಳಿದುಬಿಡುತ್ತಾನೆ ಎನ್ನುವ ಸಹಜ ನಡಾವಳಿಯತ್ತಲೇ ನಿರೂಪಣೆ ಜಾರಿದ್ದರಿಂದ ಚಿತ್ರ ಮಾನವೀಯ ಪರಿಶೋಧಕ್ಕಿಂತ ವ್ಯವಸ್ಥೆಯ ವೈಫಲ್ಯಗಳ ನೆಪವಿಟ್ಟುಕೊಂಡು ಬೇರೆಯದೇ ಹಿಂಸೆಯತ್ತ ಫೋಕಸ್‌ ಮಾಡಿದೆ.
 ಮಲತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳು ಮತ್ತೊಂದು ಹೆಣ್ಣು ಜೀವದ ಮೇಲೆ ನಡೆದ ದೌರ್ಜನ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸೋಲುತ್ತಾಳೆ. ಹತಾಶಳಾಗುತ್ತಾಳೆ. ಅನ್ಯಾಯಕ್ಕೆ ಸಿಡಿದು ಕಾನೂನು ಕೈಗೆತ್ತಿಕೊಳ್ಳುತ್ತಾಳೆ. ಮಗಳ ಅತ್ಯಾಚಾರ ಮಾಡಿದ ಒಬ್ಬೊಬ್ಬರನ್ನು ಹುಡುಕಿ ಸೇಡು ತೀರಿಸಿಕೊಳ್ಳುತ್ತಾಳೆ. ಇದಿಷ್ಟೇ ಚಿತ್ರದುದ್ದಕ್ಕೂ ಮಿಂಚುತ್ತದೆ.
ದೃಶ್ಯ ಸಂಯೋಜನೆಯಲ್ಲಿ, ವಸ್ತುವಿನ ನಿರೂಪಣಾ ವಿಧಾನದಲ್ಲಿ ಕೊಂಚ ಹೊಸತನವಿದೆ. ಆದರೆ ತಾರ್ಕಿಕ ಅಂತ್ಯ ಕೊಡುವಾಗ ನಿರ್ದೇಶಕ ಮತ್ತದೇ ಪ್ರತೀಕಾರ, ಪ್ರತಿಹಿಂಸೆಯ ಮಾಮೂಲು ಜಾಡಿಗೆ ಸರಿದಿದ್ದಾರೆ.
 ಅತ್ಯಂತ ನಾಜೂಕಾಗಿ ಜನಪ್ರಿಯ ಧಾಟಿಯ ದೇಶಭಕ್ತಿ  ನೆಲೆಯಲ್ಲಿ ಅತ್ಯಾಚಾರದಂಥ ಕೃತ್ಯಗಳಿಗೆ ಪರಸಂಸ್ಕೃತಿಯಂಥ ಬಾಹ್ಯ ಪ್ರಚೋದನೆಗಳೇ ಕಾರಣ ಎಂದು ಜಾಣ್ಮೆಯೊಂದಿಗೆ ಆರೋಪಿಸುವುದು ಪ್ರಬುದ್ಧತೆಯೇ? ಚಿತ್ರದ ಕೇಂದ್ರ ವಸ್ತು ಅತ್ಯಾಚಾರ ಕೃತ್ಯ. ಅದಕ್ಕೆ ಪ್ರಚೋದನೆ ಅಥವಾ ಕಾರಣವಾಗುವುದು  ‘ವ್ಯಾಲೆಂಟೈನ್ಸ್‌ ಡೇ’ ಪಾರ್ಟಿ! ‘ವೆಸ್ಟರ್ನ್‌ ಕಲ್ಚರ್‌’ ಎನ್ನುವರ್ಥದಲ್ಲಿ ಧ್ವನಿಸುವ ಲವ್‌, ಪ್ರೇಮ ನಿವೇದನೆ! ತಿರಸ್ಕೃತಗೊಂಡ ಪರಿಣಾಮ ಹಿಂಸೆ. ಅದಕ್ಕೊಂದು ಪ್ರತಿ ಹಿಂಸೆ. ಇದಷ್ಟೇ ಸಮಸ್ಯೆ ಮತ್ತು ಪರಿಹಾರ ಎಂದುಕೊಂಡ ನಿರ್ದೇಶಕ ಮನುಷ್ಯನ ರಾಗ ದ್ವೇಷಗಳು, ಆಂತರಿಕ ಪ್ರಚೋದನೆಗಳಂಥ ಮಾನವೀಕ ವಿಜ್ಞಾನದ ಸೂಕ್ಷ್ಮಗಳಿಂದ ಹೊರಗೇ ನಿಂತು ಯೋಚಿಸಿದಂತಿದೆ.
 ಚಿತ್ರದ ಒಂದು ಹಂತದಲ್ಲಿ ಹುಡುಗಿ(ಆರ್ಯಾ)ಯನ್ನು ಕೆಣಕುವ ಮೋಹಿತ ಎನ್ನುವ ಹುಡುಗ ಪ್ರೇಮ ನಿವೇದನೆಯಲ್ಲಿ ಕಂಡ ಸೋಲನ್ನು ‘ಚಾರ್ಲ್ಸ್‌’ ಎನ್ನುವ ಗೆಳೆಯನೊಟ್ಟಿಗೆ ಹೇಳುತ್ತಾನೆ. ಅವನಿಗೆ ಮತ್ತೊಬ್ಬ ಸಾಥೀ ಡ್ರಗಿಸ್ಟ್‌ ಜಗನ್‌. ‘ಚಾರ್ಲ್ಸ್‌’ ಹೆಸರಿನ ಧ್ವನಿ, ಡ್ರಗಿಸ್ಟ್‌.. ಇದೆಲ್ಲ ಏನನ್ನು ಸೂಚಿಸುತ್ತದೆ?
  ತಿರಸ್ಕಾರಕ್ಕೊಳಗಾದ ಅವಮಾನಕ್ಕೆ ಇವರೆಲ್ಲ ಹುಡುಗಿಯನ್ನೇ ಅಪಹರಿಸುತ್ತಾರೆ. ಅದಕ್ಕೆ ವಾಚ್‌ಮನ್‌ ನೆರವಾಗುತ್ತಾನೆ. ಈ ಎಲ್ಲರ ಜೊತೆ ಆ ಪ್ರೇಮಿ ಸಾಗುವ ಕಾರಿನಲ್ಲಿ ತನ್ನ ಪ್ರಿಯತಮೆಯನ್ನೇ ಎಲ್ಲರೊಟ್ಟಿಗೆ ಹಂಚಿಕೊಳ್ಳುತ್ತಾನೆ. ಅತ್ಯಾಚರ ನಡೆಸಿ ಚರಂಡಿಗೆಸೆಯುತ್ತಾರೆ. ಅತ್ಯಾಚಾರಿಗಳ ಪೈಕಿ ಚಾರ್ಲ್ಸ್‌, ವಾಚಮನ್‌ ಮತ್ತು ಜಗನ್‌ರನ್ನು ನಿರ್ದೇಶಕರು ಡಿಕೆ ಎನ್ನುವ ದೇಸಿ ಡಿಟೆಕ್ಟಿವ್‌ ಒಬ್ಬನ ನೆರವಿನಿಂದ ಹುಡುಗಿ ತಾಯಿಯ (ದೇವಿಕಾ) ಆಕ್ರೋಶ ಮುಂದುಮಾಡಿ ಮುಗಿಸುತ್ತಾರೆ. ವಾಚಮನ್‌ ಮೇಲೆ ಸೇಡು ತೀರಿಸಿಕೊಳ್ಳಲು ಆರ್ಯಳ ತಾಯಿ ಒಂದಿಬ್ಬರು ಮಂಗಳಮುಖಿಯರ ನೆರವು ಪಡೆಯುತ್ತಾಳೆ. ಅವರಿಗೆ ಸುಪಾರಿ ಕೊಡುವ ದೃಶ್ಯವನ್ನು ನಿರ್ದೇಶಕರು ಸಂಯೋಜಿಸಿದ ರೀತಿ ಅವರ ಅಂತರಂಗದ ಕಿಚ್ಚನ್ನು ಅನಾವರಣಗೊಳಿಸುತ್ತದೆ.
 ಎಲ್ಲ ತಾಯಂದಿರು ತಮ್ಮ ಹೆಣ್ಣು ಮಕ್ಕಳು ಬಾಹ್ಯ ಪ್ರಚೋದನೆಗೊಳಗಾಗುವುದನ್ನು ತಡೆಯಲು ಮತ್ತವರ ಮೇಲೆ ನಡೆವ ಹಲ್ಲೆಗಳನ್ನು ನಿಗ್ರಹಿಸಲು ಚಂಡಿ, ದುರ್ಗೆಯ ಅವತಾರ ತಾಳಬೇಕು ಎನ್ನುವ ಹಾಗೆ ದೇವಿಕಾ ಆ ಇಬ್ಬರು ಮಂಗಳಮುಖಿಯರನ್ನು ಕಾಣಲು ಹೊರಡುತ್ತಾಳೆ. ಕ್ಯಾಮೆರಾ ಪ್ಯಾನ್‌ ಆಗುತ್ತಾ ಆಕಾಶದಿಂದಲೇ ಭಾರಿ ಉದ್ದಕ್ಕೆ ಇಳಿಬಿಟ್ಟಂತೆನಿಸುವ ಅರಿಷಿಣ ಮತ್ತು ಕುಂಕುಮ ಬಣ್ಣದ ಅಸಂಖ್ಯ ಬಟ್ಟೆಗಳ ಮೇಲೆ ಸಾಗುತ್ತದೆ. ಜೊತೆಗೆ ರಣೋತ್ಸಾಹದ ಮೂಡ್‌ ಸೃಷ್ಟಿಸುವ ರೆಹಮಾನ್‌ ಹಿನ್ನೆಲೆ ಸಂಗೀತ. ಇದರ ನಡುವಿಂದ ಆ ಇಬ್ಬರು ಮಂಗಳಮುಖಿಯರು ಎದ್ದು ಬರುತ್ತಾರೆ. ಕೊಲೆಗೆ ಸುಪಾರಿ ಪಡೆಯುತ್ತಾರೆ. ವಾಚಮನ್‌  ಕುಡಿತದಂಥ ಬಾಹ್ಯ ಪ್ರಚೋದನೆಗಳಲ್ಲಿ  ಲೀನವಾಗಿದ್ದ ಸಂದರ್ಭವನ್ನು ಬಳಸಿಕೊಳ್ಳುವ ಮಂಗಳಮುಖಿಯರು ಆತನ ರಾಸಲೀಲೆಯತ್ತ ಸೆಳೆದು ಮರ್ಮಾಂಗವನ್ನೇ ಕತ್ತರಿಸಿಹಾಕುತ್ತಾರೆ. ಈತನಕ ಸಮಾಜದಲ್ಲಿ ಇದ್ದ ಮೌನ ಅಥವಾ ನ್ಯೂಟ್ರಲ್‌ ಮನೋಭಾವನೆಯನ್ನು ಬಡಿದೆಬ್ಬಿಸಿ ಸಂಘರ್ಷಕ್ಕೆ ಅಣಿಗೊಳಿಸುವ ಚಿತ್ರಣ ಕಟ್ಟಿಕೊಡುವ ಯತ್ನವಿದು.
 ಇಷ್ಟೆಲ್ಲ ಅವಾಂತರಗಳಿಗೆ ಮೂಲ ಕಾರಣಕರ್ತ ಅತ್ಯಾಚಾರಿ ಮೋಹಿತ್‌ನನ್ನು ನಿರ್ದೇಶಕ ಬರಿ ಜೈಲಿಗಟ್ಟುತ್ತಾರೆ. ಅಂದರೆ ಮೋಹಿತ ಅಮಾಯಕ. ಆತನ ಪ್ರೇಮ ನಿವೇದನೆ ಸಹಜ. ಅವನು ನಮ್ಮ ನಡುವಿನ ಹುಡುಗ. ಆದರೆ ಆತನ ಸುತ್ತ ಇರುವವರು ಚಾರ್ಲ್ಸ್‌, ಡ್ರಗಿಸ್ಟ್‌ ಜಗನ್‌ನಂಥ ಲಂಪಟರು. ಇವರೆಲ್ಲ ಸೇರುವ ಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ ಪಾರ್ಟಿಯಂಥವು ಬಾಹ್ಯ ಪ್ರಚೋದನಾ ಎಲಿಮೆಂಟ್‌ಗಳು. ಮೋಹಿತ ಇಂಥವುಗಳ ಮೋಹಕ್ಕೊಳಗಾದವ. ಸಹವಾಸ ದೋಷದಲ್ಲಿ ದಾರಿ ತಪ್ಪಿದವ ಅಷ್ಟೇ. ವಿಚಾರಣೆ, ಕೌನ್ಸಿಲಿಂಗ್‌ ಮೂಲಕ ಅವನ ಸರಿ ದಾರಿಗೆ ತರಬಹುದು ಎಂದರ್ಥವೋ... ಹೇಯ ಕೃತ್ಯದ ಮೂಲ ಪುರುಷ ಮೋಹಿತ. ಮಾಡಿದ್ದು ಅತ್ಯಾಚಾರದಂಥ ಪರಮ ತಪ್ಪು. ಆದರೆ ಅದನ್ನು ಸರಿಪಡಿಸಬಹುದಾದ ಜುಜುಬಿ ತಪ್ಪು ಅಂದುಕೊಂಡರಾ ನಿರ್ದೇಶಕರು!
ಮನುಷ್ಯನೊಳಗಿನ ರಾಗ ದ್ವೇಷಗಳು ಪೈಶಾಚಿಕ ಸ್ವರೂಪ ಪಡಕೊಂಡರೆ ನಡೆಯುವ ಅನಾಹುತಗಳು ಇಡೀ ಮನುಷ್ಯ ಕುಲ ತಲೆ ತಗ್ಗಿಸುವಂತಾಗುತ್ತವೆ ಎನ್ನುವ ಎಚ್ಚರ ಮುಖ್ಯ. ಆದರೆ ಚಿತ್ರದ ಉದ್ದೇಶ ಪರಸಂಸ್ಕೃತಿಯ ವ್ಯಾಲೆಂಟೈನ್ಸ್‌ ಡೇ, ಡ್ರಗ್ಸ್‌ ಮತ್ತಿತರ ಬಾಹ್ಯ ಪ್ರಚೋದನೆಗಳನ್ನು ದೂಷಿಸಿ ದುಷ್ಕೃತ್ಯ ನಡೆಸಿದವರ ಸಂಹರಿಸುವ ನೆಪದಲ್ಲಿ ಪ್ರತೀಕಾರದ ತೋರುಬೆರಳನ್ನು ಇನ್ನೆತ್ತಲೋ ತಿರುಗಿಸಿದಂತೆನಿಸುತ್ತದೆ. ಹೀಗೆ ಅಂತರಂಗವನ್ನು ಕತ್ತಲಲ್ಲಿಟ್ಟುಕೊಂಡು ಬಾಹ್ಯವನ್ನಷ್ಟೇ ದೂಷಿಸುವ ಪ್ರತೀಕಾರದ ಧ್ವನಿಯೇ ಇಡೀ ಚಿತ್ರದ ಜೀವಾಳವಾಗಿದ್ದು ಅತ್ಯಾಚಾರದಷ್ಟೇ ಅಮಾನುಷ.
 ತುಂಬ ವರ್ಷಗಳ ನಂತರ ನಟನೆಗೆ ಮರಳಿದ ಶ್ರೀದೇವಿ ಅಭಿನಯ ಅತ್ಯಂತ ಪರಿಣಾಮಕಾರಿ. ನವಾಜುದ್ದೀನ್‌ ಸಿದ್ದಿಕಿ ಎಂದಿನಂತೆ ಅದ್ಭುತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ